ಪಿಎಂಇಂಡಿಯಾ
ಆರ್ಬಿಐ ಗವರ್ನರ್ ಶ್ರೀ ಸಂಜಯ್ ಮಲ್ಹೋತ್ರಾ ಜೀ, ಗ್ಲೋಬಲ್ ಫಿನ್ಟೆಕ್ ಫೆಸ್ಟ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಜೀ, ಫಿನ್ಟೆಕ್ ಜಗತ್ತಿನ ಎಲ್ಲಾ ನಾವೀನ್ಯಕಾರರು, ನಾಯಕರು ಮತ್ತು ಹೂಡಿಕೆದಾರರು, ಮಹಿಳೆಯರೇ ಮತ್ತು ಮಹನೀಯರೇ.
ಭಾರತ ಮತ್ತು ವಿದೇಶಗಳಿಂದ ಜಾಗತಿಕ ಫಿನ್ಟೆಕ್ ಫೆಸ್ಟ್ ಗೆ ಬಂದಿರುವ ಎಲ್ಲಾ ಅತಿಥಿಗಳು ಮತ್ತು ಪ್ರತಿನಿಧಿಗಳನ್ನು ನಾನು ಸ್ವಾಗತಿಸುತ್ತೇನೆ. ಇಂದು ಮತ್ತೊಂದು ಹ್ಯಾಟ್ರಿಕ್ ಸಾಧಿಸಲಾಗಿದೆ ಎಂದು ನನಗೆ ಸಂತೋಷವಾಗಿದೆ. 2024 ರಲ್ಲಿ ಸರ್ಕಾರ ಮೂರನೇ ಬಾರಿಗೆ ರಚನೆಯಾದಾಗ ಒಂದು ಹ್ಯಾಟ್ರಿಕ್ ಆಗಿತ್ತು, ಮತ್ತು ಇನ್ನೊಂದು ಹ್ಯಾಟ್ರಿಕ್ ನಿಮ್ಮೊಂದಿಗೆ ನನ್ನ ಉಪಸ್ಥಿತಿಯಾಗಿದೆ. ಗ್ಲೋಬಲ್ ಫಿನ್ಟೆಕ್ ಫೆಸ್ಟ್ ನಲ್ಲಿ ಇದು ನನ್ನ ಸತತ ಮೂರನೇ ವರ್ಷ. ಈ ಹ್ಯಾಟ್ರಿಕ್ ಅಭಿವೃದ್ಧಿ ಹೊಂದಿದ ಭಾರತಕ್ಕೆ ನೀವು ಎಷ್ಟು ಮುಖ್ಯ, ನಿಮ್ಮ ಕೆಲಸ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ.
ಸ್ನೇಹಿತರೇ,
ನಾನು ಇಲ್ಲಿಗೆ ಬಂದಾಗಲೆಲ್ಲಾ, ನಾನು ಹೆಚ್ಚು ಯುವಜನರನ್ನು ನೋಡುತ್ತೇನೆ, ನನಗೆ ಹೆಚ್ಚಿನ ಶಕ್ತಿ ಅನಿಸುತ್ತದೆ. ಸಾಧ್ಯತೆಗಳ ವ್ಯಾಪ್ತಿ ವಿಸ್ತರಿಸುತ್ತಿರುವುದನ್ನು ನಾನು ನೋಡುತ್ತೇನೆ. ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ, ಕನಸುಗಳು ಧೈರ್ಯಶಾಲಿಯಾಗುತ್ತಿವೆ ಎಂಬುದು ಸ್ಪಷ್ಟವಾಗಿದೆ. ಮತ್ತು ಆದ್ದರಿಂದ, ಅಭಿವೃದ್ಧಿ ಹೊಂದಿದ ಭಾರತದ ಭವಿಷ್ಯದ ಬಗ್ಗೆ ನನ್ನ ವಿಶ್ವಾಸ ಬಲಗೊಳ್ಳುತ್ತಿದೆ.
ಸ್ನೇಹಿತರೇ,
ಫಿನ್ಟೆಕ್ನ ಈ ಶಕ್ತಿಯ ನಡುವೆ, ಮುಂಬೈ ಕೂಡ ಈ ದಿನಗಳಲ್ಲಿ ಸಾಂಸ್ಕೃತಿಕ ಶಕ್ತಿಯನ್ನು ತನ್ನ ಉತ್ತುಂಗದಲ್ಲಿ ಅನುಭವಿಸುತ್ತಿದೆ. ಕೆಲವೇ ದಿನಗಳಲ್ಲಿ, ಮಹಾರಾಷ್ಟ್ರ ಮತ್ತು ದೇಶಾದ್ಯಂತ ಗಣೇಶೋತ್ಸವ ಪ್ರಾರಂಭವಾಗಲಿದೆ. ನಮ್ಮ ಸಂಪ್ರದಾಯದಲ್ಲಿ, ಪ್ರತಿಯೊಂದು ಶುಭ ಕಾರ್ಯಕ್ಕೂ ಮೊದಲು ಗಣೇಶನನ್ನು ಸ್ಮರಿಸಲಾಗುತ್ತದೆ. ಗಣಪತಿ ಬಪ್ಪಾಗೆ ನಮಸ್ಕರಿಸುತ್ತಾ, ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2026 ಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೇ,
ಜಾಗತಿಕ ಪರಿಸ್ಥಿತಿ ಏನೆಂದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಜಗತ್ತು ಸಂಘರ್ಷಗಳು ಮತ್ತು ಅನಿಶ್ಚಿತತೆಯ ಅವಧಿಯಲ್ಲಿ ಸಾಗುತ್ತಿದೆ. ಇಂಧನ ಮತ್ತು ಸರಕು ಪೂರೈಕೆ ಸರಪಳಿಗಳು ಒತ್ತಡದಲ್ಲಿವೆ, ವ್ಯಾಪಾರದಲ್ಲಿ ಉದ್ವಿಗ್ನತೆಗಳಿವೆ. ಈ ಪರಿಸ್ಥಿತಿಗಳು ಹಲವು ತಿಂಗಳುಗಳಿಂದ ಮುಂದುವರೆದಿವೆ. ಏಪ್ರಿಲ್ ನಿಂದ ಜೂನ್ ವರೆಗಿನ ತ್ರೈಮಾಸಿಕವು ಅತ್ಯಂತ ಸವಾಲಿನದ್ದಾಗಿತ್ತು. ಮತ್ತು ಅಂತಹ ಪರಿಸ್ಥಿತಿಯಲ್ಲಿಯೂ ಸಹ, ಭಾರತವು ಶೇಕಡಾ 7.8 ರಷ್ಟು ಬೆಳೆದಾಗ, ಜಗತ್ತು ಹೊಸ ವಿಶ್ವಾಸವನ್ನು ಪಡೆಯುತ್ತಿದೆ. ಮತ್ತು ಈ ವಿಶ್ವಾಸವನ್ನು ನಾನು ನಿಮ್ಮ ಮುಖಗಳಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.
ಸ್ನೇಹಿತರೇ,
ಭಾರತದ ಮೇಲಿನ ಈ ಬೆಳೆಯುತ್ತಿರುವ ವಿಶ್ವಾಸದ ಮತ್ತೊಂದು ಉದಾಹರಣೆ ನಮ್ಮ ಸಾರ್ವಭೌಮ ರೇಟಿಂಗ್ಗಳು. ಇತ್ತೀಚೆಗೆ, ಜಪಾನಿನ ಕ್ರೆಡಿಟ್ ರೇಟಿಂಗ್ ಏಜೆನ್ಸಿಯೊಂದು ಭಾರತದ ಸಾರ್ವಭೌಮ ರೇಟಿಂಗ್ಗಳನ್ನು ಎ ವರ್ಗಕ್ಕೆ ಅಪ್ಗ್ರೇಡ್ ಮಾಡಿದೆ. ಅಪ್ಗ್ರೇಡ್ ಮಾಡುವುದು ಸಂತೋಷದ ವಿಷಯ, ಆದರೆ ಈ ಅದೃಷ್ಟ ಮೂರು ದಶಕಗಳ ನಂತರ – ಮೂವತ್ತು ವರ್ಷಗಳ ನಂತರ ಬಂದಿದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಭಾರತದ ಬೆಳವಣಿಗೆಯ ವೇಗ, ನಮ್ಮ ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಕೈಗೊಳ್ಳಲಾದ ರಚನಾತ್ಮಕ ಸುಧಾರಣೆಗಳ ಬಗ್ಗೆ ಜಗತ್ತು ಎಷ್ಟು ಖಚಿತವಾಗಿ ಭರವಸೆಯನ್ನು ಇಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ. ಮತ್ತು ನಾನು ಪುನರಾವರ್ತಿಸುತ್ತೇನೆ, ಭಾರತದ ಸುಧಾರಣಾ ಎಕ್ಸ್ ಪ್ರೆಸ್ ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತದೆ.
ಸ್ನೇಹಿತರೇ,
ಭಾರತದ ಫಿನ್ಟೆಕ್ ಕಥೆ ಅಸಾಧಾರಣವಾದುದಾಗಿದೆ. ಮತ್ತು ಅದರ ಅತಿದೊಡ್ಡ ಚಾಂಪಿಯನ್ಗಳಲ್ಲಿ ಒಬ್ಬರು ನಮ್ಮ ಯುಪಿಐ. ಕಳೆದ ವರ್ಷವೂ ನಾನು ಇದರ ಬಗ್ಗೆ ಮಾತನಾಡಿದ್ದೆ. ಆದರೆ ಈ ರೂಪಾಂತರವು ತುಂಬಾ ದೊಡ್ಡದಾಗಿದ್ದು, ಫಿನ್ಟೆಕ್ ಬಗ್ಗೆ ಚರ್ಚಿಸಿದಾಗಲೆಲ್ಲಾ ಅದು ಯುಪಿಐ ಇಲ್ಲದೆ ಇದ್ದರೆ ಅಪೂರ್ಣವಾಗಿರುತ್ತದೆ.
ಸ್ನೇಹಿತರೇ,
ಕೆಲವೇ ದಿನಗಳ ಹಿಂದೆ, ಆಗಸ್ಟ್ 25 ರಂದು, ಯು.ಪಿ.ಐ. 10 ವರ್ಷಗಳನ್ನು ಪೂರೈಸಿತು. ಹತ್ತು ವರ್ಷಗಳ ಹಿಂದೆ, ನಿಮ್ಮ ಬ್ಯಾಂಕ್ ನಿಮ್ಮ ಬೆರಳ ತುದಿಯಲ್ಲಿ ಇರುತ್ತದೆ ಎಂದು ನಾನು ಹೇಳಿದಾಗ, ಕೆಲವರು ಅದು ಅಸಾಧ್ಯವೆಂದು ಭಾವಿಸಿದ್ದರು – ಮತ್ತು ನಾನು ಚೆನ್ನಾಗಿ ತಿಳಿದುಕೊಂಡ ಜನರ ಬಗ್ಗೆ ಮಾತನಾಡುತ್ತಿದ್ದೇನೆ, ಅವರ ಮುಖಗಳನ್ನು ನೆನಪಿಡಿ. ಆಗ ಹೊಸದಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲಾದ ಲಕ್ಷಾಂತರ ಭಾರತೀಯರ ಬಗ್ಗೆ ನಾನು ಮಾತನಾಡುತ್ತಿಲ್ಲ. ಅವರ ತಲೆಮಾರುಗಳು ಬ್ಯಾಂಕಿನ ಬಾಗಿಲನ್ನು ಸಹ ನೋಡಿರಲಿಲ್ಲ. ಆದರೆ ಇಂದು, ಹತ್ತು ವರ್ಷಗಳ ನಂತರ, ನೋಡಿ – ತಲೆಮಾರುಗಳಿಂದ ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ ಇದ್ದ ಅದೇ ಲಕ್ಷಾಂತರ ಜನರು ಭಾರತದಲ್ಲಿ ಫಿನ್ಟೆಕ್ ಬೆಳವಣಿಗೆಯ ದೊಡ್ಡ ಚಾಲಕರಾಗಿದ್ದಾರೆ.
ಸ್ನೇಹಿತರೇ,
ಇಂದು, ಆಗಸ್ಟ್ ತಿಂಗಳಲ್ಲಿ ಮಾತ್ರವೇ, ಯು.ಪಿ.ಐ. ಮೂಲಕ 2,400 ಕೋಟಿಗೂ ಹೆಚ್ಚು ವಹಿವಾಟುಗಳನ್ನು ಮಾಡಲಾಗಿದೆ. ಅಂದರೆ, ನಾವು ಇಲ್ಲಿ ಕುಳಿತಿರುವ ಸಮಯದಲ್ಲಿ, ಕೇವಲ 10 ನಿಮಿಷಗಳಲ್ಲಿ, ದೇಶಾದ್ಯಂತ ಸರಾಸರಿ 5 ಮಿಲಿಯನ್ಗಿಂತಲೂ ಹೆಚ್ಚು ಯು.ಪಿ.ಐ. ವಹಿವಾಟುಗಳು ನಡೆದಿವೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಹೇಳಿದ್ದರ ಪರಿಣಾಮ ಇದು – ಯು.ಪಿ.ಐ ಕೇವಲ ತಂತ್ರಜ್ಞಾನದ ಕಥೆಯಲ್ಲ, ಇದು ನಾಗರಿಕತೆಯ ಕಥೆ ಎಂದು ಅವರು ಹೇಳಿದರು.
ಮತ್ತು ಸ್ನೇಹಿತರೇ,
ಯು.ಪಿ.ಐ.ಇನ್ನು ಮುಂದೆ ಭಾರತಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಕೆಲವು ವರ್ಷಗಳ ಹಿಂದೆ, ಭಾರತೀಯ ಬ್ಯಾಂಕ್ ಖಾತೆಯಿಂದ ನೇರವಾಗಿ ವಿದೇಶಗಳಲ್ಲಿ ಪಾವತಿಗಳನ್ನು ಮಾಡಬಹುದು ಎಂದು ಯಾರಾದರೂ ಹೇಳಿದ್ದರೆ, ಯಾರೂ ಅದನ್ನು ನಂಬುತ್ತಿರಲಿಲ್ಲ. ಆದರೆ ಇಂದು ಅದು ವಾಸ್ತವವಾಗಿದೆ. ಭಾರತದ ಯು.ಪಿ.ಐ.ಈಗ 11 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವು ಅಸಾಧಾರಣ ಅಂಕಿಅಂಶಗಳಾಗಿದ್ದು, ನಾವು ಎಷ್ಟು ದೀರ್ಘ ಪ್ರಯಾಣವನ್ನು ಪ್ರಯಾಣಿಸಿದ್ದೇವೆ ಎಂಬುದನ್ನು ತೋರಿಸುತ್ತವೆ. ಆದರೆ ಈಗ ಪ್ರಶ್ನೆಯೆಂದರೆ – ಈ ಪ್ರಯಾಣದಿಂದ ನಾವು ತೃಪ್ತರಾಗಿರಬೇಕೇ? ಭಾರತದಲ್ಲಿ ಫಿನ್ಟೆಕ್ನ ಯಶಸ್ಸನ್ನು ನಾವು ಅಂತಿಮವೆಂದು ಪರಿಗಣಿಸಬೇಕೇ?
ಸ್ನೇಹಿತರೇ,
ನಾನು ನೀತಿ ಮತ್ತು ಆಡಳಿತದ ಪರಿಸರ ವ್ಯವಸ್ಥೆಯಲ್ಲಿ 25 ವರ್ಷಗಳನ್ನು ಪೂರೈಸುತ್ತಿದ್ದೇನೆ. ಮತ್ತು ಈ ವರ್ಷಗಳಲ್ಲಿ ನನ್ನನ್ನು ನೋಡಿದವರಿಗೆ ತಿಳಿದಿದೆ – ಮೋದಿ ಒಂದು ಮೈಲಿಗಲ್ಲು ತಲುಪಿ, ಆಚರಿಸಿ, ತೃಪ್ತರಾಗುವವರಲ್ಲ. ಒಂದು ಗುರಿ ಸಾಧಿಸಿದಾಗ, ನಾನು ತಕ್ಷಣ ಇನ್ನೂ ದೊಡ್ಡ ಗುರಿಗಾಗಿ ತಯಾರಿ ಪ್ರಾರಂಭಿಸುತ್ತೇನೆ.
ಸ್ನೇಹಿತರೇ,
ಇಂದು ನಮ್ಮ ಯು.ಪಿ.ಐ. ಅನೇಕ ದೇಶಗಳನ್ನು ತಲುಪಿದೆ. ಆದರೆ ಇದು ಕೇವಲ ಮೊದಲ ಹೆಜ್ಜೆ. ನಮ್ಮ ಮುಂದಿನ ಗುರಿ ಆ ದೇಶಗಳ ಪಾವತಿ ವ್ಯವಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವುದು. ನಾವು ಇದನ್ನು ಈಗಾಗಲೇ ಸಿಂಗಾಪುರದೊಂದಿಗೆ ಮಾಡಿದ್ದೇವೆ. ಇದರಿಂದಾಗಿ, ಭಾರತ ಮತ್ತು ಸಿಂಗಾಪುರ ನಡುವಿನ ವಹಿವಾಟುಗಳು ಒಂದೇ ನಗರದ ಎರಡು ನೆರೆಹೊರೆಗಳ ನಡುವೆ ನಡೆದಂತೆ ಸಂಭವಿಸುತ್ತವೆ. ಇದೇ ಸಂಪರ್ಕವನ್ನು ನಾವು ಇತರ ದೇಶಗಳೊಂದಿಗೆ, ಇತರ ಮಾರುಕಟ್ಟೆಗಳೊಂದಿಗೆ ನಿರ್ಮಿಸಬೇಕು. ಈ ಗುರಿಯೊಂದಿಗೆ ನಾವು ಮುಂದುವರಿಯಬೇಕು. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವಲ್ಲೆಲ್ಲಾ, ಭಾರತ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವಲ್ಲೆಲ್ಲಾ, ಯಾವೆಲ್ಲ ದೇಶಗಳು ನಮ್ಮೊಂದಿಗೆ ನಡೆಯಲು ಸಿದ್ಧವಾಗಿದೆಯೋ – ನಾವು ಅವರೆಲ್ಲರನ್ನೂ ಸಂಪರ್ಕಿಸಲು ಕೆಲಸ ಮಾಡಬೇಕು.
ಸ್ನೇಹಿತರೇ,
ವಿದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಕೆಲಸ ಮಾಡುವುದರಿಂದ ಇದು ಸಹ ಅಗತ್ಯವಾಗಿದೆ. ಮತ್ತು ಭಾರತೀಯರು ಮನೆಗೆ ಹಣವನ್ನು ಕಳುಹಿಸುವಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಗುಂಪಿನವರು. ಆದರೆ ಇಂದು, ಆ ಹಣದ ಒಂದು ಭಾಗವು ವಹಿವಾಟು ವೆಚ್ಚದಲ್ಲಿ ಕಳೆದುಹೋಗುತ್ತದೆ. ಯು.ಪಿ.ಐ.ಇದರಲ್ಲಿಯೂ ಭಾರತೀಯರನ್ನು ಉಳಿಸಬಹುದು ಮತ್ತು ಹಣವು ಭಾರತೀಯ ಕುಟುಂಬಗಳನ್ನು ಹೆಚ್ಚು ವೇಗವಾಗಿ ತಲುಪಬಹುದು.
ಸ್ನೇಹಿತರೇ,
ಇಂದು, ನೀವು ಭಾರತದಲ್ಲಿ ಕಾರ್ಡ್ಗಳೊಂದಿಗೆ ಪಾವತಿಗಳನ್ನು ಹೇಗೆ ಮಾಡುತ್ತೀರಿ? ಈ ವ್ಯವಸ್ಥೆಯು ಬೇರೆಡೆ ವಿನ್ಯಾಸಗೊಳಿಸಲಾದ ಮಾನದಂಡಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಇತರರು ರಚಿಸಿದ ಆ ಮಾನದಂಡಗಳು ಮತ್ತು ನಿಯಮಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಆ ಸಮಯದಲ್ಲಿ, ನಮಗೆ ನಮ್ಮದೇ ಆದ ಆಯ್ಕೆ ಇರಲಿಲ್ಲ. ಆದರೆ ಈಗ ನಮಗೆ ನಮ್ಮದೇ ಆದ ಆಯ್ಕೆ ಇದೆ. ಈಗ ನಾವು ನಮ್ಮದೇ ಆದ ನಿಯಮಗಳು ಮತ್ತು ಮಾನದಂಡಗಳನ್ನು ರಚಿಸಬಹುದು ಮತ್ತು ಅವುಗಳನ್ನು ಪ್ರಪಂಚದೊಂದಿಗೆ ಜೋಡಿಸಬಹುದು. ನೀವು ಇದನ್ನು ಮಾಡಬಹುದು ಎಂದು ನಿಮ್ಮೆಲ್ಲರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.
ಸ್ನೇಹಿತರೇ,
ತಂತ್ರಜ್ಞಾನವು ಸೇರ್ಪಡೆಗೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಮತ್ತು ಯು.ಪಿ.ಐ. ಇದನ್ನು ಪ್ರದರ್ಶಿಸಿದೆ. ಫಿನ್ಟೆಕ್ ವಿಷಯಕ್ಕೆ ಬಂದಾಗ, ಅದರ ವಿಶಿಷ್ಟ ವೈಶಿಷ್ಟ್ಯವೆಂದರೆ ಸಾಂಪ್ರದಾಯಿಕ ಮಾದರಿಗಳು ತಲುಪಲು ಸಾಧ್ಯವಾಗದ ಸ್ಥಳವನ್ನು ತಲುಪುವುದು. ಸಾಂಪ್ರದಾಯಿಕ ಬ್ಯಾಂಕುಗಳು ತಲುಪಲು ಸಾಧ್ಯವಾಗದ, ಬ್ಯಾಂಕ್ ಶಾಖೆಗಳು ತಲುಪಲು ಸಾಧ್ಯವಾಗದ ಸ್ಥಳಕ್ಕೆ, ಯು.ಪಿ.ಐ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಲ್ಲಿಯ ವ್ಯಕ್ತಿಗೆ ಕೊಂಡೊಯ್ದಿದೆ.
ಸ್ನೇಹಿತರೇ,
ಇಂದು, ಫಿನ್ಟೆಕ್ ಮಾರುಕಟ್ಟೆಯ ಹೆಚ್ಚಿನ ಭಾಗವು ಪಾವತಿಗಳು ಮಾತ್ರ. ಆದರೆ ಈಗ ನಾವು ಮುಂದಿನ ಹಂತಕ್ಕೆ ಹೋಗಬೇಕು ಮತ್ತು ತ್ವರಿತವಾಗಿ ಚಲಿಸಬೇಕು. ಫಿನ್ಟೆಕ್ ಮಾರುಕಟ್ಟೆಯಲ್ಲಿ, ಪಾವತಿಗಳ ಜೊತೆಗೆ, ಕ್ರೆಡಿಟ್ ವಹಿವಾಟುಗಳ ಪಾಲು ಹೆಚ್ಚಾಗಬೇಕು, ವಿಮೆಯ ಪಾಲು ಹೆಚ್ಚಾಗಬೇಕು, ಉಳಿತಾಯ, ಹೂಡಿಕೆಗಳು ಮತ್ತು ಪಿಂಚಣಿಗಳ ಪಾಲು ಹೆಚ್ಚಾಗಬೇಕು.
ಸ್ನೇಹಿತರೇ,
ಸಾಂಪ್ರದಾಯಿಕ ಹಣಕಾಸು ಮಾದರಿಗಳ ವ್ಯಾಪ್ತಿಯಿಂದ ಹೊರಗಿರುವ ಅಥವಾ ಸರಿಯಾಗಿ ಬಳಸಲ್ಪಡದೇ ಇರುವ ದೇಶದ ಶಕ್ತಿಯನ್ನು ಫಿನ್ಟೆಕ್ ಹೊರತರುತ್ತದೆ ಎಂದು ನಾನು ನಂಬುತ್ತೇನೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ, ಈ ಶಕ್ತಿಯನ್ನು ಹೊರತರುವುದು ಬಹಳ ಅವಶ್ಯಕ.
ಸ್ನೇಹಿತರೇ,
ಪ್ರಧಾನ ಮಂತ್ರಿ ಸ್ವನಿಧಿಯ ಯಶಸ್ಸಿನಲ್ಲಿ ಇದರ ಪರಿಣಾಮವನ್ನು ನಾವು ಈಗಾಗಲೇ ನೋಡಬಹುದು. ನಮ್ಮ ಬೀದಿ ವ್ಯಾಪಾರಿಗಳು ನಗರಗಳ ಬೆನ್ನೆಲುಬು. ಆದರೆ ಅವರು ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ, ಔಪಚಾರಿಕ ಸಾಲ ವ್ಯವಸ್ಥೆಯ ಹೊರಗೆ ಇದ್ದರು. ಪಿಎಂ ಸ್ವನಿಧಿ ಲಕ್ಷಾಂತರ ಬೀದಿ ವ್ಯಾಪಾರಿಗಳನ್ನು ಔಪಚಾರಿಕ ವ್ಯವಸ್ಥೆಗೆ ಸಂಪರ್ಕಿಸಿತು. ಮತ್ತು ಈಗ ಈ ಸಹಚರರು ಸ್ವನಿಧಿ ಕ್ರೆಡಿಟ್ ಕಾರ್ಡ್ ಅನ್ನು ಸಹ ಹೊಂದಿದ್ದಾರೆ – ಅಂದರೆ ಅವರು ಔಪಚಾರಿಕ ಸಾಲ ಪ್ರವೇಶದ ಸಾಧನವನ್ನು ಹೊಂದಿದ್ದಾರೆ. ಮತ್ತು ಈ ಫಲಾನುಭವಿಗಳ ಸರಾಸರಿ ವಾರ್ಷಿಕ ಆದಾಯವು ಶೇಕಡಾ 20 ಕ್ಕಿಂತ ಹೆಚ್ಚು ಹೆಚ್ಚಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಮಾತ್ರವಲ್ಲದೆ, ಅವರ ಕುಟುಂಬಗಳು ವಸತಿ, ಪೋಷಣೆ, ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಶಿಕ್ಷಣದಲ್ಲಿ ಸುಧಾರಣೆಗಳನ್ನು ಕಂಡಿವೆ. ಅದಕ್ಕಾಗಿಯೇ ಸರ್ಕಾರವು ಈ ಯೋಜನೆಯನ್ನು 2030 ರವರೆಗೆ ವಿಸ್ತರಿಸಲು ನಿರ್ಧರಿಸಿದೆ.
ಸ್ನೇಹಿತರೇ,
ಯು.ಪಿ.ಐ. ಅಸ್ತಿತ್ವದಲ್ಲಿಲ್ಲದಿದ್ದರೆ ಪ್ರಧಾನಿ ಸ್ವನಿಧಿ ಈ ಯಶಸ್ಸನ್ನು ಸಾಧಿಸುತ್ತಿರಲಿಲ್ಲ. ಈ ಯೋಜನೆಯ ಯಶಸ್ಸಿನಲ್ಲಿ ಯು.ಪಿ.ಐ. ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ಈ ಅನುಭವದಿಂದ ಕಲಿಯುತ್ತಾ, ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ನಾವು ಫಿನ್ಟೆಕ್ನ ಶಕ್ತಿಯನ್ನು ಬಳಸಬೇಕು. ಬಂಡವಾಳ ಮತ್ತು ಸಾಲದ ಪ್ರಪಂಚದಿಂದ ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಸಣ್ಣ ಅಂಗಡಿಯನ್ನು ನಡೆಸುವ ಒಬ್ಬ ಸಹೋದರಿ ಇದ್ದಾಳೆ. ಅವಳು ಪ್ರತಿದಿನ ಡಿಜಿಟಲ್ ಪಾವತಿಗಳನ್ನು ಪಡೆಯುತ್ತಾಳೆ. ಈಗ ಅವಳ ಆದಾಯ ಮತ್ತು ವೆಚ್ಚಗಳು ಸ್ಪಷ್ಟವಾದ ಮಾದರಿಯನ್ನು ತೋರಿಸುತ್ತವೆ. ಅವಳ ವ್ಯವಹಾರವು ಉತ್ತಮವಾಗಿ ನಡೆಯುತ್ತಿದೆ. ಸಣ್ಣ ಬಂಡವಾಳ ಸಾಕಾಗುವ ಮಟ್ಟವನ್ನು ಮೀರಿ ಅವಳು ಸಾಗಿದ್ದಾಳೆ. ಈಗ ಅವಳ ವ್ಯವಹಾರವನ್ನು ಹೆಚ್ಚಿಸಲು ಅವಳಿಗೆ ಸರಕುಗಳು, ಉಪಕರಣಗಳು ಬೇಕಾಗುತ್ತವೆ ಮತ್ತು ಇದಕ್ಕಾಗಿ ಅವಳಿಗೆ ಸ್ವಲ್ಪ ಹೆಚ್ಚು ಹಣ ಬೇಕು. ಇದು ತುಂಬಾ ದೊಡ್ಡ ಕ್ರೆಡಿಟ್ ಅಲ್ಲ. ಮತ್ತು ಅವಳ ವ್ಯವಹಾರವು ಇನ್ನೂ ತುಂಬಾ ಚಿಕ್ಕದಾಗಿದ್ದು, ಸಾಂಪ್ರದಾಯಿಕ ಕ್ರೆಡಿಟ್ ಮಾದರಿಗಳು ಅವಳ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಸಾಧ್ಯವಿಲ್ಲ. ಫಿನ್ಟೆಕ್ ಇಂತಹ ಅಗತ್ಯಗಳನ್ನು ವಿಶ್ಲೇಷಿಸಬಹುದಾದ, ನಿರೀಕ್ಷಿಸಬಹುದಾದ ಮತ್ತು ಪರಿಹರಿಸಬಹುದಾದ ಅನೇಕ ವ್ಯವಹಾರಗಳಿವೆ. ಮತ್ತು ಅಂತಹ ವ್ಯವಹಾರಗಳ ಸಂಖ್ಯೆ ತುಂಬಾ ದೊಡ್ಡದಾಗಿದೆ.
ಸ್ನೇಹಿತರೇ,
ತಂತ್ರಜ್ಞಾನವು ಅಂತಹ ವ್ಯವಹಾರಗಳ ಆರ್ಥಿಕ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳಿಗೆ ಕ್ಯುರೇಟೆಡ್ ಮಾದರಿಗಳನ್ನು ವಿನ್ಯಾಸಗೊಳಿಸಲು ನಮಗೆ ಸಹಾಯ ಮಾಡುತ್ತದೆ. ಫಿನ್ಟೆಕ್ನ ಮುಂದಿನ ಅಧ್ಯಾಯವನ್ನು ಇಲ್ಲಿ ಬರೆಯಲಾಗುವುದು ಎಂದು ನಾನು ನಂಬುತ್ತೇನೆ. ನಾವು ಪಾವತಿಗಳಲ್ಲಿ ವೇಗ ಮತ್ತು ಪ್ರಮಾಣವನ್ನು ತೋರಿಸಿದ್ದೇವೆ. ಈಗ ನಾವು ಪಾವತಿಯೇತರ ವಹಿವಾಟುಗಳ ಪಾಲನ್ನು ಹೆಚ್ಚಿಸಲು ಸಹಾಯ ಮಾಡಬೇಕು. ಉದಾಹರಣೆಗೆ, ವಿತರಣಾ ಪಾಲುದಾರ, ಅಥವಾ ಕೆಲವು ಸಣ್ಣ ಕೆಲಸಗಳನ್ನು ಮಾಡುವ ವ್ಯಕ್ತಿ – ಅವರು ಪ್ರತಿ ತಿಂಗಳು ಸಂಪಾದಿಸುತ್ತಾರೆ, ಆದರೆ ಅವರಿಗೆ ಉಳಿತಾಯ ಮತ್ತು ಪಿಂಚಣಿ ಉತ್ಪನ್ನಗಳಂತಹ ಸೇವೆಗಳಿಗೆ ಪ್ರವೇಶದ ಅಗತ್ಯವಿದೆ. ಫಿನ್ಟೆಕ್ ಅಂತಹ ಜನರ ಅಗತ್ಯಗಳನ್ನು ಪೂರೈಸಬಹುದು. ಅದೇ ರೀತಿ, ಫಿನ್ಟೆಕ್ ವಿಮಾ ಉತ್ಪನ್ನಗಳು ಮತ್ತು ಇತರ ಹಣಕಾಸು ಸೇವೆಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ. ಇವೆಲ್ಲವನ್ನೂ ಇಂದು ಕ್ಯೂ.ಆರ್.(QR) ಕೋಡ್ನೊಂದಿಗೆ ಪಾವತಿ ಮಾಡುವಷ್ಟೇ ಸರಳ, ಸುಲಭ ಮತ್ತು ಎಲ್ಲರೂ ಪ್ರವೇಶಿಸಬಹುದಾಗಿದೆ.
ಸ್ನೇಹಿತರೇ,
21ನೇ ಶತಮಾನದ ಮೊದಲ ಕಾಲು ಭಾಗ ಮುಗಿದಿದೆ. ಈಗ ನಾವು 2026 ರ ವರ್ಷದಲ್ಲಿದ್ದೇವೆ. ಎರಡನೇ ಕಾಲು ಭಾಗವು ನಮಗೆ ಇನ್ನೂ ಹೊಸ ಸಾಧ್ಯತೆಗಳನ್ನು ತಂದಿದೆ. ಏಜೆಂಟಿಕ್ ಎಐ, ಟೋಕನೈಸೇಶನ್, ಕ್ವಾಂಟಮ್ – ಅಂತಹ ತಂತ್ರಜ್ಞಾನಗಳು ಹಣಕಾಸು ವಲಯದಲ್ಲಿ ಸಾಧ್ಯತೆಗಳ ಹೊಸ ಬಾಗಿಲುಗಳನ್ನು ತೆರೆಯುತ್ತಿವೆ. ಈಗ ನಮ್ಮ ಮುಂದಿರುವ ಸವಾಲು ಈ ಸಾಧ್ಯತೆಗಳನ್ನು ನಿಜವಾದ ವಾಸ್ತವಿಕವಾದ ಪರಿಣಾಮವಾಗಿ ಪರಿವರ್ತಿಸುವುದು ಹೇಗೆ ಎಂಬುದು. ಮತ್ತು ಇದಕ್ಕಾಗಿ, ನಮ್ಮ ಫಿನ್ಟೆಕ್ ಕಂಪನಿಗಳು ಅವರಿಗಾಗಿ ಕೆಲವು ಕಾರ್ಯಗಳನ್ನು ನಿಗದಿ ಮಾಡಿ ಹೊಂದಿಸಬೇಕೆಂದು ನಾನು ಬಯಸುತ್ತೇನೆ. ಮತ್ತು ನಾನು ನಿಮ್ಮ ಮುಂದೆ ಕೆಲವು ಸಲಹೆಗಳನ್ನು ಇಡಲು ಬಯಸುತ್ತೇನೆ. ಮೊದಲನೆಯದಾಗಿ – ನಾವು ಭಾರತದಲ್ಲಿ ಸೈಬರ್ ಭದ್ರತೆಯನ್ನು ಉನ್ನತ ದರ್ಜೆಯದನ್ನಾಗಿ ಮಾಡಬೇಕು. ಎರಡನೆಯದಾಗಿ – ನಮ್ಮ ಉದ್ಯಮವು ತನ್ನದೇ ಆದ ನೈತಿಕ ದತ್ತಾಂಶ ಸಂರಕ್ಷಣಾ ಮಾನದಂಡಗಳನ್ನು ಹೊಂದಿರಬೇಕು. ಮೂರನೆಯದಾಗಿ – ನಾವು ಬಲವಾದ ಫಿನ್ಟೆಕ್ ನಿಯಂತ್ರಕ ಉದ್ಯಮ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಬೇಕು. ಮತ್ತು ನಾಲ್ಕನೆಯದಾಗಿ – ನಾವು ಫಿನ್ಟೆಕ್ ಗ್ರಾಹಕ ಸಂರಕ್ಷಣಾ ಸೂಚ್ಯಂಕವನ್ನು ಹೊಂದಿರಬೇಕು, ಅದರ ಆಧಾರದ ಮೇಲೆ ಪ್ರತಿ ಕಂಪನಿಯು ಪಾರದರ್ಶಕ ರೇಟಿಂಗ್ ಅನ್ನು ಹೊಂದಬಹುದು. ಈ ನಿಯತಾಂಕಗಳ ಮೇಲೆ ನಾವು ನಮ್ಮನ್ನು ಪರೀಕ್ಷಿಸಿಕೊಂಡರೆ, ಭಾರತದ ಫಿನ್ಟೆಕ್ ವಲಯವು ಲೆಕ್ಕವಿಲ್ಲದಷ್ಟು ಸಾಧ್ಯತೆಗಳ ಹೆಬ್ಬಾಗಿಲು ಆಗಬಹುದು. ನಮಗೆ ಅನುಭವವಿದೆ ಮತ್ತು ಅದನ್ನು ವಾಸ್ತವಿಕತೆಯ ಮೇಲೆ ಕಾರ್ಯಗತಗೊಳಿಸಲು ನಮಗೆ ಮಾರ್ಗವಿದೆ. ಆದ್ದರಿಂದ, ನಾವು ತ್ವರಿತವಾಗಿ ಕೆಲಸ ಮಾಡಬೇಕು.
ಸ್ನೇಹಿತರೇ,
ಡಿಜಿಟಲ್ ಇಂಡಿಯಾದ ಯಶೋಗಾಥೆ ಈಗ ಹೊಸ ಅಧ್ಯಾಯಕ್ಕೆ ಸಿದ್ಧವಾಗಿದೆ. ಇದುವರೆಗಿನ ನಮ್ಮ ಫಿನ್ಟೆಕ್ ಕಥೆಯ ಯಶಸ್ಸು ಪ್ರಮಾಣ, ವ್ಯಾಪ್ತಿ, ಸುರಕ್ಷಿತ ವ್ಯವಸ್ಥೆಗಳು, ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ ಮತ್ತು ಸಾರ್ವಜನಿಕ ನಂಬಿಕೆಯಿಂದ ಲಭಿಸಿದುದಾಗಿದೆ. ಈ ಪ್ರಮುಖ ಮೌಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಫಿನ್ಟೆಕ್ ವಲಯವು ಮುಂದಿನ ಪೀಳಿಗೆಯ ನಾವೀನ್ಯತೆಯತ್ತ ಗಮನಹರಿಸಬೇಕು. ಈ ಮನವಿಯೊಂದಿಗೆ, ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ತುಂಬಾ ಧನ್ಯವಾದಗಳು.
*****
India is taking its fintech journey to new heights, with innovation and inclusion at its core. Addressing the Global Fintech Fest 2026 in Mumbai. https://t.co/pMhokoCBjG
— Narendra Modi (@narendramodi) September 8, 2026
India's growth gives the world renewed confidence. pic.twitter.com/lPYEwHMPzW
— PMO India (@PMOIndia) September 8, 2026
UPI is a major champion of India's FinTech story. pic.twitter.com/2ppzcyb7ZF
— PMO India (@PMOIndia) September 8, 2026
Technologies like Agentic AI, tokenisation and quantum are opening new possibilities in the financial sector. pic.twitter.com/BDIKrCivZK
— PMO India (@PMOIndia) September 8, 2026
FinTech companies should work together on a few key goals... pic.twitter.com/0iifCfffdS
— PMO India (@PMOIndia) September 8, 2026