Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಡಿಯೋ ಸಂವಾದದ ಮೂಲಕ ಐಐಎಂ ಕೋಜಿಕೋಡ್ ನಲ್ಲಿ ಪ್ರಧಾನಮಂತ್ರಿಯವರ ಭಾಷಣ


 ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ, ಸ್ನೇಹಿತರೆ,  ನಾನು ಐಐಎಂ ಕೋಜಿಕೋಡ್ ನಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ  ಭಾರತೀಯ ಚಿಂತನೆಯನ್ನು ಜಾಗತೀಕರಣಗೊಳಿಸುವ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಇಂತಹ ಪ್ರಸಿದ್ಧ ಕಲಿಕಾ ಕೇಂದ್ರಗಳು ಇಂಥ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಸ್ವಾಮಿ ವಿವೇಕಾನಂದರ ಆಳೆತ್ತರದ ಪ್ರತಿಮೆಯು ಈ ಆವರಣದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವ ಸಮಯದಲ್ಲಿ ನಾವು ಭಾರತೀಯ ಚಿಂತನೆಗಳನ್ನು ಜಾಗತೀಕರಣಗೊಳಿಸುವ ಬಗ್ಗೆ ಮಾತನಾಡುತ್ತಿರುವುದು ಕಾಕತಾಳೀಯವೇನಲ್ಲ. ಭಾರತೀಯ ಚಿಂತನೆಗಳನ್ನು ಜಾಗತೀಕರಣಗೊಳಿಸುವಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆಯನ್ನು ಯಾರು ಮರೆಯಲು ಸಾಧ್ಯ. ಹಲವು ವರ್ಷಗಳ ಹಿಂದೆ, ಅಂದರೆ 1893ರ ಸೆಪ್ಟೆಂಬರ್ 11ರಂದು, ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಮಾಡಿದ ತಮ್ಮ ಅಪ್ರತಿಮ ಭಾಷಣದಲ್ಲಿ ಭಾರತದ ತತ್ವಗಳ ಒಂದು ನೋಟವನ್ನು ಬೀರಿದರು. ನಮಗೆಲ್ಲರಿಗೂ ತಿಳಿದಿರುವಂತೆ, ಅವರು “ಅಮೆರಿಕದ ನನ್ನ ಸಹೋದರ ಸಹೋದರಿಯರೇ” ಎಂದು ಭಾಷಣ ಪ್ರಾರಂಭಿಸಿದಾಗ, ಜೋರಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅದು ಮಾಂತ್ರಿಕಶಕ್ತಿಯಿಂದ ಕೂಡಿತ್ತು. ಮಾಂತ್ರಿಕತೆ ಎಂಬುದು ಪದಗಳಲ್ಲಿ ಇರಲಿಲ್ಲ. ಅಲ್ಲಿದ್ದದ್ದು, ಜಾಗತಿಕ ಭ್ರಾತೃತ್ವಕ್ಕೆ ಭಾರತದ ನಿಶ್ಚಯ ಮತ್ತು ಬದ್ಧತೆಯ ಅಭಿವ್ಯಕ್ತಿಯಾಗಿತ್ತು.

ಸ್ನೇಹಿತರೆ, ಭಾರತದ ಚಿಂತನೆಗಳು ಚಲನಶೀಲ ಮತ್ತು ವೈವಿಧ್ಯಮಯ. ಅದು ನಿರಂತರ ಮತ್ತು ವಿಕಸನವಾಗುತ್ತಲೇ ಇರುತ್ತದೆ.  ಉಪನ್ಯಾಸ ಅಥವಾ ವಿಚಾರಸಂಕಿರಣ ಅಥವಾ ಪುಸ್ತಕಗಳಲ್ಲಿ ಹಿಡಿದಿಡಲಾಗದಷ್ಟು ಇದು ವಿಶಾಲವಾಗಿದೆ. ಆದರೂ, ವಿಸ್ತೃತವಾಗಿ, ಭಾರತೀಯ ಮೌಲ್ಯಗಳಿಗೆ ಕೇಂದ್ರವಾಗಿ ಉಳಿದಿರುವ ಕೆಲವು ಆದರ್ಶಗಳಿವೆ. ಅವುಗಳೆಂದರೆ- ಸಹಾನುಭೂತಿ, ಸಾಮರಸ್ಯ, ನ್ಯಾಯ, ಸೇವೆ ಮತ್ತು ಮುಕ್ತಮನಸ್ಸು.

ಸ್ನೇಹಿತರೆ, ಜಗತ್ತನ್ನು ಭಾರತದತ್ತ ಸೆಳೆದದ್ದು ಏನು ಎಂಬ ಬಗ್ಗೆ ಮಾತನಾಡುತ್ತೇನೆ. ಮೊಟ್ಟ ಮೊದಲನೆಯದಾಗಿ, ಮನಸ್ಸಿಗೆ ಬರುವುದು- ಶಾಂತಿ, ಏಕತೆ ಮತ್ತು ಸಹೋದರತ್ವದ ಮೌಲ್ಯಗಳು. ಹಲವಾರು ರಾಜ್ಯಗಳು, ಹಲವಾರು ಭಾಷೆಗಳು, ಹಲವು ಉಪ ಭಾಷೆಗಳು, ಹಲವು ನಂಬಿಕೆಗಳು, ಹಲವಾರು ಸಂಪ್ರದಾಯಗಳು, ನಾನಾ ಬಗೆಯ ಆಹಾರ ಪದ್ಧತಿ, ಹಲವಾರು ಬಗೆಯ ಜೀವನಶೈಲಿ, ನಾನಾ ಬಗೆಯ ವೇಷ ಭೂಷಣ. ಆದಾಗ್ಯೂ ನಾವು ಶತ ಶತಮಾನಗಳಿಂದ ಶಾಂತಿಯಿಂದ ಬದುಕುತ್ತಿದ್ದೇವೆ. ಶತಮಾನಗಳಿಂದ ನಾವು ಇಡೀ ವಿಶ್ವವನ್ನು ನಮ್ಮ ನೆಲಕ್ಕೆ ಸ್ವಾಗತಿಸಿದ್ದೇವೆ. ಹಲವು ನಾಗರಿಕತೆಗಳಿಗೆ ಸಾಧ್ಯವಾಗದಿದ್ದರೂ ನಮ್ಮ ನಾಗರಿಕತೆ ಪ್ರಗತಿ ಸಾಧಿಸಿದ್ದಾದರೂ ಹೇಗೆ? ಏಕೆಂದರೆ ನಮ್ಮಲ್ಲಿ ಶಾಂತಿ ಮತ್ತು ಸೌಹಾರ್ಧತೆ ನೆಲೆಸಿತ್ತು.

ಸ್ನೇಹಿತರೆ, ನಮ್ಮ ಚಿಂತನೆಗಳು ಸರಳೀಕೃತ ಮತ್ತು ಸಾಪೇಕ್ಷ ರೂಢಿಗಳಿಂದ ಮಾರ್ಗದರ್ಶಿತವಾದ ಜೀವನದ ಸಂಪ್ರದಾಯಗಳಾಗಿ ಮಾರ್ಪಟ್ಟಿರುವುದು ನಮ್ಮ ಶಕ್ತಿಯಾಗಿದೆ. ಈ ರೂಢಿಗಳು ಜಿಗುಟುತನದಿಂದ ಕೂಡಿರುವುದಿಲ್ಲ ಅಥವಾ… .. ಒಂದೇ ಆಯಾಮದ್ದಾಗಿರುವುದಿಲ್ಲ. ಅವುಗಳನ್ನು ವಿಭಿನ್ನವಾಗಿ ಅಭ್ಯಾಸ ಮಾಡಬಹುದು ಎಂಬುದೇ ಅದರ ವೈಶಿಷ್ಟ್ಯ.

ಸ್ನೇಹಿತರೆ, ನಮ್ಮ ನೆಲ ಹಲವು ಚಲನಶೀಲ ನಂಬಿಕೆಗಳನ್ನು ಅಂದರೆ ಬೌದ್ಧಧರ್ಮ, ಹಿಂದೂಧರ್ಮ, ಜೈನಧರ್ಮ ಮತ್ತು ಸಿಖ್ ಧರ್ಮವನ್ನು ಜಗತ್ತಿಗೆ ನೀಡಿದ್ದಾಗಿದೆ. ಈ ನೆಲದಲ್ಲಿ ಸೂಫಿ ಸಂಪ್ರದಾಯ ಅರಳಿದೆ. ಈ ಎಲ್ಲದರ ಮೂಲವೂ ಅಹಿಂಸೆಯೇ ಆಗಿದೆ. 20ನೇ ಶತಮಾನದಲ್ಲಿ, ಮಹಾತ್ಮಾಗಾಂಧಿ ಅವರು ಈ ಆದರ್ಶಗಳನ್ನು ಸಾಧಿಸಿ ತೋರಿದರು, ಅದುವೇ ನಮ್ಮ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿತು. ಅದೇ ವೇಳೆ, ಅವುಗಳು ದೇಶದ ಹೊರಗೂ ಲಕ್ಷಾಂತರ ಜನರಿಗೆ ಚೈತನ್ಯ ನೀಡಿವೆ. ಅದು ಡಾಕ್ಟರ್ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಇರಲಿ ಅಥವಾ ನೆಲ್ಸನ್ ಮಂಡೇಲಾ ಅವರೇ ಇರಲಿ, ಅಥವಾ ಹಲವು ಆಫ್ರಿಕಾ ದೇಶಗಳ ಸ್ವಾತಂತ್ರ್ಯ ಹೋರಾಟವೇ ಇರಲಿ, ಅವರೆಲ್ಲರೂ ಗಾಂಧೀಜಿ ಅವರಿಂದ ಸ್ಫೂರ್ತಿ ಪಡೆದರು. ಹಲವು ಭಾರತೀಯ ಯೋಧರು ಎರಡು ವಿಶ್ವಯುದ್ಧಗಳಲ್ಲೂ ತಮ್ಮ ಪ್ರಾಣ ಕಳೆದುಕೊಂಡರು. ಈ ಯುದ್ಧಗಳಲ್ಲಿ ಭಾರತಕ್ಕೆ ಯಾವುದೇ ಬಾಧ್ಯತೆ ಇಲ್ಲದಿದ್ದರೂ ಅವರು ಶೌರ್ಯದಿಂದ ಹೋರಾಡಿದರು. ನಾವು ಎಂದಿಗೂ ಯಾರೊಬ್ಬರ ಸಂಪನ್ಮೂಲ ಅಥವಾ ಭೂಮಿ ಬಯಸಿದವರಲ್ಲ. ಆದರೆ, ನಮ್ಮ ಯೋಧರು ಶಾಂತಿಗಾಗಿ ಹೋರಾಡುತ್ತಿದ್ದಾರೆ. ಹಲವು ದಶಕಗಳಿಂದ ಭಾರತವು ವಿಶ್ವಸಂಸ್ಥೆಯ ಜಾಗತಿಕ ಶಾಂತಿ ಪಾಲನಾ ಕಾರ್ಯಾಚರಣೆಗೆ ಅತಿ ದೊಡ್ಡ ಕೊಡುಗೆ ನೀಡಿದೆ. ಕೆಲವು ಹಿಂಸಾ ಪೀಡಿತ ವಲಯಗಳು ಶಾಂತಿಯ ಗಾಳಿಯೊಂದಿಗೆ ಉಸಿರಾಡಲು ಸಾಧ್ಯವಾಗಿದ್ದರೆ, ಅದರಲ್ಲಿ ನಮ್ಮ ಸೈನಿಕರ ಪಾತ್ರವಿದೆ.  ಬುದ್ದಿಹೀನ ದ್ವೇಷ, ಹಿಂಸೆ, ಸಂಘರ್ಷ ಮತ್ತು ಭಯೋತ್ಪಾದನೆಯಿಂದ ಮುಕ್ತವಾಗಲು ಬಯಸುವ ಜಗತ್ತಿನಲ್ಲಿ, ಭಾರತೀಯ ಜೀವನ ಶೈಲಿ ಆಶಾಕಿರಣವಾಗಿದೆ. ಸಂಘರ್ಷವನ್ನು ತಡೆಯಲು ಭಾರತದ ವಿಧಾನ ಶಕ್ತಿ ಪ್ರಯೋಗವಲ್ಲ ಬದಲಾಗಿ ಮಾತಿನ ಶಕ್ತಿಯಾಗಿದೆ.

ಸ್ನೇಹಿತರೆ, ಭಾರತ ಶಾಂತಿ ಮತ್ತು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟಿರುವುದನ್ನು ನಾನು ನೋಡುವಾಗ, ಇದರಲ್ಲಿ ಪ್ರಕೃತಿ ದೇವಿ ಮತ್ತು ನಮ್ಮ ಪರಿಸರದೊಂದಿಗಿನ ಸೌಹಾರ್ದತೆಯನ್ನೂ ಕಾಣುತ್ತೇನೆ.

ವೇದಗಳು ಹೀಗೆ ಹೇಳುತ್ತವೆ:

 यां रक्षन्त्यस्वप्ना विश्वदानीं देवा भूमिं पृथिवीमप्रमादम्

ತಪಸ್ಸು ಆಚರಿಸಿದ ಸಂತರು ಭೂ ತಾಯಿಯನ್ನು ಎಲ್ಲವನ್ನು ಕೊಡುವವಳು ಎಂದು ಕರೆದಿದ್ದಾರೆ, ಅವಳ ಮೇಲೆ ಎಲ್ಲಾ ಜೀವ ರಾಶಿಗಳು ಅವಲಂಬಿತವಾಗಿರುತ್ತವೆ.

ನಮ್ಮ ಸಂಪ್ರದಾಯ ನಮ್ಮ ಭೂಮಿಯನ್ನು ತಾಯಿ ಎಂದು ಪರಿಗಣಿಸುತ್ತದೆ. ಭಾರತದಲ್ಲಿ ಹಲವು ಪ್ರಾಣಿಗಳಲ್ಲಿ ನಾವು ದೈವತ್ವ ಕಾಣುತ್ತವೆ. ಕೌಟಿಲ್ಯ ಜೀವಸಂಕುಲ ಮತ್ತು ಸಸ್ಯ ಸಂಕುಲ ರಕ್ಷಣೆಯ ಬಗ್ಗೆ ವ್ಯಾಪಕವಾಗಿ ಬರೆದಿದ್ದಾನೆ. ನಾವು ಇಂದು ಕೈಗೊಳ್ಳುವ ಹಲವು ಪ್ರಯತ್ನಗಳಲ್ಲಿ ಈ ಸ್ಫೂರ್ತಿಯನ್ನು ಕಾಣಬಹುದಾಗಿದೆ. ಭಾರತವು ಭವಿಷ್ಯದ ಪರಿಶುದ್ಧ ನಾಳೆಗಾಗಿ ಸೌರಶಕ್ತಿಯ ಶೋಧನೆಗೆ ಅಂತಾರಾಷ್ಟ್ರೀಯ ಸೌರ ಸಹಯೋಗ ಕೈಗೊಳ್ಳಲು ಮುಂದಾಳತ್ವ ವಹಿಸಿದೆ. ಎಲ್.ಇ.ಡಿ. ಬಲ್ಬ್ ಗಳ ಅಳವಡಿಕೆಯ ಭಾರತದ ಜನಾಂದೋಲನವು ಗಣನೀಯ ಪ್ರಮಾಣದ ವಿದ್ಯುತ್ ಉಳಿತಾಯಕ್ಕೆ ಕಾರಣವಾಗಿದೆ. 36 ಕೋಟಿ ಎಲ್.ಇ.ಡಿ. ಬಲ್ಬ್ ಗಳನ್ನು ವಿತರಿಸಲಾಗಿದೆ. 1 ಕೋಟಿ ಬೀದಿ ದೀಪಗಳನ್ನು ಎಲ್.ಇ.ಡಿ.ಗೆ ಪರಿವರ್ತಿಸಲಾಗಿದೆ.  ಇದರಿಂದಾಗಿ 25 ಸಾವಿರ ಕೋಟಿ ರೂಪಾಯಿ ವೆಚ್ಚ ಉಳಿಸಿದೆ. 4 ಕೋಟಿ ಟನ್ ಗೂ ಹೆಚ್ಚು ಇಂಗಾಲ ಡೈಆಕ್ಸೈಡ್ ತ್ಯಾಜ್ಯ ಹೊರಸೂಸುವಿಕೆ ತಗ್ಗಿದೆ. ಇಂಧನ ಉಳಿತಾಯ ಬೃಹತ್ ಆಗಿದೆ.

2006ರಲ್ಲಿ ಭಾರತದಲ್ಲಿ ಹುಲಿಗಳ ಸಂಸತಿ ದ್ವಿಗುಣವಾಗಿದೆ. ಇಂದು ಭಾರತ 2970 ಹುಲಿಗಳ ತವರಾಗಿದೆ. ವಿಶ್ವದ ಮೂರನೇ ಒಂದು ಭಾಗದಷ್ಟು ಹುಲಿಗಳು ಭಾರತದಲ್ಲಿವೆ. ನಮ್ಮಲ್ಲಿ ಹುಲಿ ಸಂರಕ್ಷಿತ ಕಾಡುಗಳಿವೆ. 2010ಕ್ಕೂ ಮುನ್ನ 2022ರ ಹೊತ್ತಿಗೆ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ವಿಶ್ವ  ನಿರ್ಧರಿಸಿತ್ತು. ನಾವು ಅದನ್ನು ಮುಂಚಿತವಾಗಿಯೇ ಸಾಧಿಸಿದೆವು!

ಅದೇ ರೀತಿ 2010ರಿಂದ 2015ರ ಅವಧಿಯಲ್ಲಿ ಸಿಂಹಗಳ ಸಂಖ್ಯೆಯೂ ಭಾರತದಲ್ಲಿ ಬಹುತೇಕ ಶೇ.30ರಷ್ಟು ಹೆಚ್ಚಳವಾಗಿದೆ. ಈ ಸಂಖ್ಯೆ 411 ಆಗಿತ್ತು. ಇಂದು ನನಗೆ ಆ ಸಂಖ್ಯೆ 600ಕ್ಕೂ ಅಧಿಕವಾಗಿದೆ ಎಂಬ ಮಾಹಿತಿ ನೀಡಲಾಗಿದೆ.

ಸ್ನೇಹಿತರೆ, ಭಾರತದ ಅರಣ್ಯ ವ್ಯಾಪ್ತಿ ಹೆಚ್ಚಳವಾಗುತ್ತಿದೆ. 2014ರಲ್ಲಿ ಸಂರಕ್ಷಿತ ಪ್ರದೇಶ 692 ಆಗಿತ್ತು. 2019ರಲ್ಲಿ ಇದು 860ಕ್ಕೆ ಹೆಚ್ಚಳವಾಗಿದೆ. 2014ರಲ್ಲಿ 43 ಸಮುದಾಯ ಮೀಸಲು ಅರಣ್ಯವಿದ್ದವು. ಈಗ ಅದು 100 ಆಗಿದೆ. ಇದು ಹಲವು ಪರಿಸರ ಮತ್ತು ವನ್ಯಜೀವಿ ಪ್ರೇಮಿಗಳನ್ನು ಭಾರತದತ್ತ ಸೆಳೆಯುತ್ತಿದೆ. ನೀವು ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ವೀಕ್ಷಿಸಿರಬಹುದು. ಅದು ಭಾರತದ ಬಗ್ಗೆ ದೊಡ್ಡ ಆಸಕ್ತಿ ಬೆಳೆಯಲು ಕಾರಣವಾಗಿದೆ.

ಸ್ನೇಹಿತರೆ, ಇಂದು ಅರ್ಥಪೂರ್ಣ ಜೀವನ, ಆರೋಗ್ಯ ಪ್ರಜ್ಞೆಯ ಆಹಾರ ಸೇವನೆ,  ವಿವಿಧ ರೀತಿಯ ಸದೃಢತೆ ರೂಢಿಗಳು ಬಹಳ ಜನಪ್ರಿಯವಾಗುತ್ತಿವೆ. ವಿಶ್ವಾದ್ಯಂತ ಜನಪ್ರಿಯವಾಗಿರುವ ಈ ಅನೇಕ ಆರೋಗ್ಯ ರಕ್ಷಣೆ ರೂಢಿಗಳ ಬೇರು ಭಾರತದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ. ಶತಮಾನಗಳ ಹಿಂದೆ, ಭಾರತದ ಋಷಿಮುನಿಗಳು ಯೋಗವನ್ನು ಅಭ್ಯಾಸ ಮಾಡಿದರು ಮತ್ತು ಜಗತ್ತಿಗೆ ಆಯುರ್ವೇದವನ್ನು ನೀಡಿದರು. ಯೋಗ ಕೇವಲ ಕೆಲವು ವ್ಯಾಯಾಮದ ಆಸನಗಳಲ್ಲ. ಅದಕ್ಕಿಂತ ಹೆಚ್ಚಿನದು ಯೋಗದಲ್ಲಿದೆ. ಯೋಗ ಯೋಗಕ್ಷೇಮ ಮತ್ತು ಸದೃಢತೆ ಎರಡಕ್ಕೂ ಸಾಧನವಾಗಿದೆ. ಇದು ಸದೃಢ ದೇಹ ಮತ್ತು ಆರೋಗ್ಯಪೂರ್ಣ ಮನಸ್ಸಿಗೆ ಕಾರಣವಾಗುತ್ತದೆ. ಐಐಎಂ ಸಮುದಾಯ ಅತ್ಯಂತ ಪ್ರಕಾಶಮಾನ ಮತ್ತು ಅಷ್ಟೇ ಕಾರ್ಯಶೀಲವಾಗಿರುವ ಜನರ ಗುಂಪಾಗಿದೆ. ಅತ್ಯುತ್ತಮ ಕೆಲಸದ ನಿರೀಕ್ಷೆಗಳು ಕಾರ್ಯಶೀಲ ದಿನಚರಿಯನ್ನು ರೂಪಿಸುತ್ತವೆ. ಯೋಗಕ್ಕಾಗಿ ಸಮಯವನ್ನು ಮೀಸಲಿಡುವಂತೆ ನಾನು ನಿಮ್ಮೆಲ್ಲರನ್ನೂ ಆಗ್ರಹಿಸುತ್ತೇನೆ. ಅದು ತರುವ ಸಕಾರಾತ್ಮಕ ಬದಲಾವಣೆಯನ್ನು ನೀವೇ ಕಾಣಬಹುದು.

ಸ್ನೇಹಿತರೆ, ಈ ನೆಲದ ಮತ್ತೊಂದು ಮಹತ್ವದ ಅಂಶವೆಂದರೆ, ಮಹಿಳೆಯರಿಗೆ ನೀಡಿರುವ ಗೌರವ ಮತ್ತು ಘನತೆ. नारी तू नारायणी  . ಮಹಿಳೆಯರು ದೈವತ್ವದ ಅಭಿವ್ಯಕ್ತಿ. ಮಹಿಳೆಯರ ಸಬಲೀಕರಣಕ್ಕಾಗಿ ಚಿಂತಕರು ನೀಡುವ ಕರೆ ಶತ ಶತಮಾನಗಳಿಂದ ಹೆಚ್ಚಾಗುತ್ತಿದೆ. ಭಾರತದ ಭಕ್ತಿ ಪಂಥವನ್ನು ಯಾರು ತಾನೆ ಮರೆಯಲು ಸಾಧ್ಯ. ಯಾರು ತಾನೆ ರಾಜಾ ರಾಮ್ ಮೋಹನ್ ರಾಯ್ ಮತ್ತು ಈಶ್ವರ ಚಂದ್ರ ವಿದ್ಯಾಸಾಗರ ಅವರನ್ನು ಮರೆಯಲು ಸಾಧ್ಯ? ಮಹಾತ್ಮಾ ಪುಲೆ ಮತ್ತು ಸಾವಿತ್ರಿ ಭಾಯ್ ಪುಲೆ ಅವರ ಪ್ರಯತ್ನಗಳನ್ನು ಯಾರು ತಾನೆ ಮರೆಯಲು ಸಾಧ್ಯ?

ಪಾಶ್ಚಿಮಾತ್ಯ ರಾಷ್ಟ್ರಗಳು ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ದಶಕಗಳನ್ನೇ ತೆಗೆದುಕೊಂಡವು, ಆದರೆ ನಮ್ಮ ಸಂವಿಧಾನ ನಿರ್ಮಾತೃಗಳು ಪ್ರಥಮ ದಿನದಿಂದಲೇ ನಮ್ಮ ಮಹಿಳೆಯರಿಗೆ ಮತದಾನದ ಹಕ್ಕು ಖಾತ್ರಿಪಡಿಸಿದ್ದರು.!

ಇಂದು, ಮುದ್ರಾ ಸಾಲದ ಫಲಾನುಭವಿಗಳ ಪೈಕಿ ಶೇ.70ರಷ್ಟು ಮಹಿಳೆಯರು. ಮಹಿಳೆಯರು ನಮ್ಮ ಸಶಸ್ತ್ರ ಪಡೆಗಳಿಗೆ ಸಕ್ರಿಯ ಕೊಡುಗೆ ನೀಡುತ್ತಿದ್ದಾರೆ. ನೌಕಾ ಪಡೆಯ ಮಹಿಳಾ ಅಧಿಕಾರಿಗಳ ತಂಡ ಸಾಗರದ ಮೂಲಕ ಇಡೀ ವಿಶ್ವವನ್ನೇ ಸುತ್ತಿ ಬಂದಿದೆ. ಅದು ಐತಿಹಾಸಿಕ.

ಭಾರತ ಇಂದು ಅತಿ ಹೆಚ್ಚು ಸಂಖ್ಯೆಯ ಮಹಿಳಾ ಸಂಸತ್ ಸದಸ್ಯರನ್ನು ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರ ಮತದಾನ ಪ್ರಮಾಣ ಅತ್ಯಧಿಕವಾಗಿತ್ತು.

ಸ್ನೇಹಿತರೆ, ಭಾರತವು ಮುಕ್ತತೆಯನ್ನು ಆಚರಿಸುತ್ತದೆ.

ಮಹಾತ್ಮಾ ಗಾಂಧೀ ಅವರು ಇದನ್ನು ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳುತ್ತಾರೆ:

“ನನ್ನ ಮನೆಯ ನಾಲ್ಕು ಕಡೆಗಳಲ್ಲಿ ಗೋಡೆಗಳನ್ನು ನಿರ್ಮಿಸಲು ಮನೆಯೊಳಗೆ ಗಾಳಿ ಬಾರದಂತೆ ಕಿಟಕಿಗಳನ್ನು ಮುಚ್ಚಲು ನಾನು ಬಯಸುವುದಿಲ್ಲ. ಎಲ್ಲಾ ನೆಲದ ಸಂಸ್ಕೃತಿಯೂ ನನ್ನ ಮನೆಯೊಳಗೆ ಸಾಧ್ಯವಾದಷ್ಟು ಮುಕ್ತವಾಗಿ ಹರಿಯಬೇಕೆಂದು ನಾನು ಬಯಸುತ್ತೇನೆ. ಆದರೆ ನಾನು ಯಾರಿಂದಿಗೋ ಹಾರಲು ನಿರಾಕರಿಸುತ್ತೇನೆ.”

ಗಾಂಧೀಜಿ ಇತರರ ಸಂಸ್ಕೃತಿಯೊಂದಿಗೆ ಸೌಹಾರ್ದತೆಯಿಂದ ಇರುವುದರೊಂದಿಗೆ ನಮ್ಮ ಸಂಸ್ಕೃತಿಯಲ್ಲಿ ಹೆಮ್ಮೆ ಪಡಲು ಸಾಧ್ಯ ಎಂಬುದನ್ನು ತೋರಿಸಿದ್ದಾರೆ.

ಈ ಕಾರ್ಯದಲ್ಲಿ ಭಾರತ್ ತೀರ್ಥ, ಗುರುದೇವ್ ಠಾಗೋರ್ ಭಾರತದ ಬಗ್ಗೆ ಹೀಗೆ ಬರೆಯುತ್ತಾರೆ.:

“ಪ್ರತಿಯೊಬ್ಬರೂ ಕೊಟ್ಟು ತೆಗೆದುಕೊಳ್ಳಬೇಕು,

ಬೆರೆತು ಮತ್ತು ಬೆರೆಯಬೇಕು,

ಯಾರೊಬ್ಬರೂ ವಿಚಲಿತರಾಗಬಾರದು,

ಭಾರತದ ವಿಶಾಲ ಮಾನವತೆಯ ಈ ಸಾಗರದ ತಟದಿಂದ..”.

ಸ್ನೇಹಿತರೆ, ಎಲ್ಲಿ ಮುಕ್ತತೆ ಇರುತ್ತದೆಯೋ, ಅಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ಬೆಲೆ ಇರುತ್ತದೆ, ನಾವಿನ್ಯತೆ ಸ್ವಾಭಾವಿಕ. ಭಾರತದ ನಾವಿನ್ಯತೆಯ ಉತ್ಸಾಹ ವಿಶ್ವವನ್ನು ಭಾರತದತ್ತ ಆಕರ್ಷಿಸುತ್ತಿದೆ. ಸೊನ್ನೆಯ ಕಲ್ಪನೆ ಹುಟ್ಟಿದ್ದೆ ಭಾರತದಲ್ಲಿ, ಇದು ಈಗ ಸಾರ್ವತ್ರಿಕವಾಗಿದೆ ಮತ್ತು ಮೌಲಿಕ ಕಲ್ಪನೆಯಾಗಿದೆ. ಇದು ಗಣಿತದ ಅಧ್ಯಯನವನ್ನೇ ಪರಿವರ್ತಿಸಿದೆ. ಚಲನಶೀಲ ಯುವಜನರನ್ನು ಒಳಗೊಂಡ ದೇಶ ನಮ್ಮದಾಗಿದೆ. ನಮ್ಮ ದೇಶದಲ್ಲಿನ ಜನಸಂಪನ್ಮೂಲ ಹೂಡಿಕೆಯ ಆಕರ್ಷಣೆ ಕೇಂದ್ರ ಮಾಡಿದೆ. ಪ್ರತಿಯೊಬ್ಬರೂ ಇಂದು ಭಾರತದಲ್ಲಿರಲು ಬಯಸುತ್ತಾರೆ. ನಮ್ಮ ತಂತ್ರಾಂಶ ಕೈಗಾರಿಕೆ ಎರಡು ದಶಕಗಳ ಹಿಂದೆ ಮತ್ತು ಇಂದಿನ ನಮ್ಮ ನವೋದ್ಯಮಗಳ ಪರಿಸರ ವ್ಯವಸ್ಥೆ ಭಾರತದ ಯುವ ಶಕ್ತಿಯನ್ನು ತೋರಿಸಿದೆ.

ಸ್ನೇಹಿತರೆ, ನಾವು ಜಾಗತೀಕರಣದ ಬಗ್ಗೆ ಮಾತನಾಡುವಾಗ, ಭಾರತೀಯ ಚಿಂತನೆಗಳು, ಅದರ ಆನ್ವಯಿಕಗಳ ಬಗ್ಗೆ ಮಾತನಾಡುವುದೂ ಅಷ್ಟೇ ಮುಖ್ಯ. ಭಾರತೀಯ ವ್ಯವಸ್ಥೆಗಳು ಮತ್ತು ಸಂಪ್ರದಾಯಗಳಲ್ಲಿ ಬೇರೂರಿರುವ ಭಾರತವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂಬುದು ಎಲ್ಲರಿಗೂ ಹೆಮ್ಮೆ ತರುತ್ತದೆ. ಭಾರತವು ಹಣಕಾಸು ಪೂರಣದಲ್ಲಿ ಮಾಡಿದ ಗಣನೀಯ ಸಾಧನೆಯ ರೀತಿಯನ್ನು. ಅಥವಾ ವಿಶ್ವದಲ್ಲಿಯೇ ಅತಿ ಬೃಹತ್ತಾದ ಆರೋಗ್ಯ ಆರೈಕೆ ಕಾರ್ಯಕ್ರವನ್ನು ನಾವು ಹೇಗೆ ಜಾರಿ ಮಾಡಿದೆವು ಅಥವಾ ಲಕ್ಷಾಂತರ ಜನರಿಗೆ ಹೊಗೆ ಮುಕ್ತ ಕೋಟ್ಯಂತರ ಅಡುಗೆ ಮನೆಗಳನ್ನು ಹೇಗೆ ನೀಡಿತು ಎಂಬುದನ್ನು ನೀವು ಕಾಣಬಹುದಾಗಿದೆ. ಬಡವರಲ್ಲೇ ಕಡು ಬಡವರಿಗಾಗಿ ಕೋಟ್ಯಂತರ ಮನೆಗಳನ್ನು ನಿರ್ಮಿಸಲಾಗಿದೆ.

ನಮ್ಮ ಚುನಾವಣೆ ಪ್ರಕ್ರಿಯೆಯನ್ನು ನೋಡಿ. ಕೋಟ್ಯಂತರ ಮತಗಳು ಶಾಂತಿಯುತವಾಗಿ ಚಲಾವಣೆ ಆಗುತ್ತವೆ. ಕೇವಲ ಒಬ್ಬ ಮತದಾರ ಇರುವ ದೂರದ ಪ್ರದೇಶದಲ್ಲೂ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ವಿಶ್ವದಲ್ಲಿ ಭಾರತದ ಸ್ಥಾನ ಹೆಚ್ಚುತ್ತಿದೆ ಎಂಬುದು ಅತಿಶಯೋಕ್ತಿಯೇನಲ್ಲ.

ಸ್ನೇಹಿತರೆ, ಭಾರತೀಯ ಚಿಂತನೆಗಳು ವಿಶ್ವಕ್ಕೆ ಅಪಾರವಾದ ಕೊಡುಗೆ ನೀಡಿವೆ ಮತ್ತು ಇನ್ನೂ ಹೆಚ್ಚಿನದನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಭೂ ಗ್ರಹವು ಎದುರಿಸುತ್ತಿರುವ ಕೆಲವು ಪ್ರಮುಖ ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ನಮಗೆ ಚಿಕ್ಕಂದಿನಿಂದಲೂ ಹೇಳಿಕೊಟ್ಟಿದ್ದು:

सर्वे भवन्तु सुखिनः सर्वे सन्तु निरामयाः ।

सर्वे भद्राणि पश्यन्तु मा कश्चिद्दुःखभाग्भवेत् ।

ಎಲ್ಲರೂ ಸುಖವಾಗಿರಲಿ ಎಲ್ಲರೂ ಅನಾರೋಗ್ಯದಿಂದ ಮುಕ್ತವಾಗಿರಲಿ
ಎಲ್ಲರೂ ಒಳ್ಳೆಯದನ್ನೇ ನೋಡುವಂತಾಗಲಿ
ಯಾರಿಗೂ ದುಖಃ ಬಾರದಿರಲಿ. ಇಲ್ಲಿ ಎಲ್ಲರೂ ಎನ್ನುವುದು ಭಾರತ ಮತ್ತು ಭಾರತೀಯರಿಗೆ ಮಾತ್ರವಲ್ಲ. ಇದು ವಿಶ್ವಕ್ಕೇ ಅನ್ವಯಿಸುತ್ತದೆ.

ಭಾರತ ಪ್ರಗತಿ ಸಾಧಿಸಿದರೆ, ವಿಶ್ವವೇ ಅಭಿವೃದ್ಧಿ ಹೊಂದುತ್ತದೆ ಎಂದು ಭಾರತ ಭಾವಿಸುತ್ತದೆ. ಯಾವಾಗ ವಿಶ್ವ ಪ್ರಗತಿ ಕಾಣುತ್ತದೋ ಆಗ ಅದರ ಲಾಭ ಭಾರತಕ್ಕೂ ಆಗುತ್ತದೆ. ಇಂಥ ವಿಚಾರ ಸಂಕಿರಣಗಳು ಭಾರತೀಯ ಚಿಂತನೆಗಳ ನಿಲುವನ್ನು ಜನರ ನಡುವೆ ಹೆಚ್ಚು ಜನಪ್ರಿಯಗೊಳಿಸುತ್ತವೆ ಎಂದು ನಾನು ಭಾವಿಸುತ್ತೇನೆ.  

ಇದರೊಂದಿಗೆ, ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ, ಐಐಎ ಕೋಜಿಕೋಡ್ ನನ್ನ ಶುಭ ಹಾರೈಕೆಗಳು.

ನಿಮಗೆ ಧನ್ಯವಾದಗಳು!

ತುಂಬಾ ತುಂಬಾ ಧನ್ಯವಾದಗಳು!