Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೈಡ್ರೋಕಾರ್ಬನ್ (ತೈಲ ಮತ್ತು ಅನಿಲ) ಪರಿಶೋಧನೆ ಮತ್ತು ಪರವಾನಗಿ ನೀತಿ (ಹೆಲ್ಪ್)


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಪರವಾನಗಿ ನೀತಿ(ಹೆಲ್ಪ್)ಗೆ ಒಪ್ಪಿಗೆ ನೀಡಿದೆ.

ಈ ನೀತಿಯ ಅತ್ಯಂತ ಮುಖ್ಯವಾದ ನಾಲ್ಕು ಲಕ್ಷಣಗಳು ಹೀಗಿವೆ-

1. ಎಲ್ಲ ಬಗೆಯ ಹೈಡ್ರೋಕಾರ್ಬನ್ನುಗಳ ಪರಿಶೋಧನೆ ಮತ್ತು ಉತ್ಪಾದನೆಗೆ ಏಕರೂಪದ ಪರವಾನಗಿ ವ್ಯವಸ್ಥೆ.

2. ಮುಕ್ತ ಪ್ರದೇಶ ಮಂಜೂರಾತಿ ನೀತಿ.

3. ಆದಾಯ ಹಂಚಿಕೆಯ ಸುಲಭ ವಿಧಾನ.

4. ಉತ್ಪಾದನೆಯಾಗುವ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಮಾರಾಟ ಮತ್ತು ಬೆಲೆ ನಿಗದಿಗೆ ಸ್ವಾತಂತ್ರ್ಯ.

ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಸ್ಥಳೀಯ ತೈಲ ಮತ್ತು ಅನಿಲ ಉತ್ಪಾದನೆ ಹೆಚ್ಚಳವಾಗಲಿದ್ದು, ಈ ವಲಯಕ್ಕೆ ಹೆಚ್ಚಿನ ಬಂಡವಾಳ ಹರಿದುಬರುತ್ತದೆ. ಇದರ ಪರಿಣಾಮವಾಗಿ, ಈ ಕ್ಷೇತ್ರದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಉದ್ಯೋಗಸೃಷ್ಟಿಯಾಗಲಿದೆ. ಅಲ್ಲದೆ, ಈ ನೀತಿಯು ಪಾರದರ್ಶಕತೆಯನ್ನು ಇನ್ನಷ್ಟು ಹೆಚ್ಚಿಸಲಿದ್ದು, ಆಡಳಿತಾತ್ಮಕ ತಾರತಮ್ಯವನ್ನು ಮೊದಲಿಗಿಂತ ತಗ್ಗಿಸಲಿದೆ.

ಏಕರೂಪದ ಪರವಾನಗಿ ನೀತಿಯು ಸಿಬಿಎಂ, ಷೇಲ್ ಅನಿಲ/ ಎಣ್ಣೆ (ತೈಲ), ಟೈಟ್ ಗ್ಯಾಸ್ ಮತ್ತು ಗ್ಯಾಸ್ ಹೈಡ್ರೇಟ್ಸ್ ಸೇರಿದಂತೆ ಎಲ್ಲ ಬಗೆಯ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕ ವಲ್ಲದ ತೈಲ ಮತ್ತು ಅನಿಲ ಮೂಲಗಳ ಪರಿಶೋಧನೆಗೆ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಲಿದೆ. ಜತೆಗೆ, ಈ ಹೊಸ ನೀತಿಯಲ್ಲಿ `ಮುಕ್ತಪ್ರದೇಶ ಮಂಜೂರಾತಿ’ ಇರುವುದರಿಂದ ನಿಯೋಜಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಬ್ಲಾಕ್ಗಳನ್ನು ತೈಲ ಪರಿಶೋಧನೆ ಮತ್ತು ಉತ್ಪಾದಕ ಕಂಪನಿಗಳು ತಾವೇ ಆರಿಸಿಕೊಳ್ಳಬಹುದು.

ಸದ್ಯಕ್ಕೆ ಈ ಕ್ಷೇತ್ರದಲ್ಲಿರುವ ಹಣಕಾಸು ಹಂಚಿಕೆ ವ್ಯವಸ್ಥೆಯು ಹೂಡಿಕೆ ಹೆಚ್ಚಳ ಮತ್ತು ಖರ್ಚುವೆಚ್ಚದ ಲೆಕ್ಕ/ಉತ್ಪಾದನೆಯ ಪ್ರಮಾಣವನ್ನು ಆಧರಿಸಿದೆ. ಆದರೆ, ಇನ್ನುಮುಂದೆ ಇದರ ಬದಲಾಗಿ ನಿರ್ವಹಿಸಲು ಅತ್ಯಂತ ಸುಲಭವಾಗಿರುವ ಆದಾಯ ಹಂಚಿಕೆ ವಿಧಾನವು ಜಾರಿಗೆ ಬರಲಿದೆ. ಇದುವರೆಗೂ ತೈಲ ಪರಿಶೋಧನೆ ಮತ್ತು ಉತ್ಪಾದನೆಯ ಗುತ್ತಿಗೆ ನೀಡುವ ವಿಧಾನವು ಲಾಭಾಂಶ ಹಂಚಿಕೆಯ ಸೂತ್ರವನ್ನು ಆಧರಿಸಿದ್ದು, ಇದರಂತೆ ಎಲ್ಲ ಖರ್ಚುವೆಚ್ಚವನ್ನೂ ಕಳೆದ ನಂತರದ ಲಾಭವನ್ನು ಗುತ್ತಿಗೆದಾರ ಕಂಪನಿಗಳು ಮತ್ತು ಸರಕಾರ ಹಂಚಿಕೊಳ್ಳುತ್ತಿದ್ದವು. ಇದರ ಪ್ರಕಾರ, ಸರಕಾರವು ಗುತ್ತಿಗೆ ಪಡೆದುಕೊಂಡಿರುತ್ತಿದ್ದ ಖಾಸಗಿ ಕಂಪನಿಗಳು ಮಾಡುತ್ತಿದ್ದ ಖರ್ಚುವೆಚ್ಚಗಳನ್ನೆಲ್ಲ ಪರಿಶೀಲಿಸುವುದು ಅಗತ್ಯವಾಗಿತ್ತು. ಇದು ಸಹಜವಾಗಿಯೇ ವಿಳಂಬ ಗತಿಗೂ ವಿವಾದಗಳಿಗೂ ಕಾರಣವಾಗುತ್ತಿತ್ತು. ಆದರೆ, ಈಗ ರೂಪಿಸಿರುವ ಹೊಸ ನೀತಿಯಡಿ ಖಾಸಗಿ ಕಂಪನಿಗಳು ಮಾಡುವ ಖರ್ಚುವೆಚ್ಚಗಳಿಗೂ ಸರಕಾರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಬದಲಿಗೆ, ಸರಕಾರವು ತೈಲ ಮತ್ತು ಅನಿಲ ಮಾರಾಟ ಇತ್ಯಾದಿಗಳಿಂದ ಬರುವ ನಿವ್ವಳ ಲಾಭದಲ್ಲಿ ನೇರವಾಗಿ ತನ್ನ ಪಾಲನ್ನು ಪಡೆದುಕೊಳ್ಳಲಿದೆ. ಇದು, ಸರಕಾರದ `ಸುಗಮ ವ್ಯಾಪಾರ-ವಹಿವಾಟು’ ನೀತಿಗೆ ಅನುಗುಣವಾಗಿದೆ.

ದೂರಕಡಲಿನಲ್ಲಿ ತೈಲ ಮತ್ತು ಅನಿಲ ಪರಿಶೋಧನೆ ಕೆಲಸವು ತುಂಬಾ ಅಪಾಯಗಳಿಂದ ಕೂಡಿದ್ದು, ಇದು ಅಪಾರ ವೆಚ್ಚದಾಯಕವಾದ ಬಾಬತ್ತೂ ಆಗಿದೆ. ಇದನ್ನು ಸರಕಾರ ಗಮನಿಸಿದ್ದು, ಈ ಕ್ಷೇತ್ರದಲ್ಲಿ ಪರಿಶೋಧನೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅತ್ಯಂತ ಕಡಿಮೆ ರಾಯಧನವನ್ನು ನಿಗದಿಪಡಿಸಿದೆ. ಇದರಂತೆ, ಅನೇಕ ಹಂತಗಳ ರಾಯಧನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಮೇಲ್ಮೈ ಸಮುದ್ರದಿಂದ ಆಳಸಮುದ್ರ ಮತ್ತು ಅತಿಆಳ ಸಮುದ್ರ ಪ್ರದೇಶಗಳ ಕಡೆಗೆ ಪರಿಶೋಧನೆಗೆ ಹೋದಂತೆ ರಾಯಧನವು ಅದಕ್ಕೆ ತಕ್ಕಂತೆ ಕಡಿಮೆಯಾಗುತ್ತ ಹೋಗಲಿದೆ. ಆದರೆ, ಮೇಲ್ಮೈಭೂಮಿಯಲ್ಲಿ ನಡೆಸುವ ತೈಲ ಮತ್ತು ಅನಿಲ ಪರಿಶೋಧನೆಗೆ ವಿಧಿಸುವ ರಾಯಧನವನ್ನು ಸರಕಾರ ಹಾಗೆಯೇ ಮುಂದುವರಿಸಿದೆ. ಹೀಗಾಗಿ, ರಾಜ್ಯ ಸರಕಾರಗಳಿಗೆ ಹರಿದುಬರುವ ಆದಾಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಇನ್ನೊಂದೆಡೆಯಲ್ಲಿ, ಹೊಸ ನೀತಿಯಡಿ ತೈಲ ಮತ್ತು ಅನಿಲ ಪರಿಶೋಧನೆಗೆಂದು ಮಂಜೂರು ಮಾಡಿದ ಬ್ಲಾಕ್ಗಳ ಮೇಲೆ ಯಾವುದೇ ಮೇಲ್ತೆರಿಗೆ(ಸೆಸ್)ಯನ್ನಾಗಲಿ, ಆಮದು ಸುಂಕವನ್ನಾಗಲಿ ವಿಧಿಸಲಾಗುವುದಿಲ್ಲ. ಇದರಿಂದಾಗಿ, ಈ ಬ್ಲಾಕ್ ಗಳಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಮಾರಾಟ ಮಾಡುವ ಸ್ವಾತಂತ್ರ್ಯವೂ ಗುತ್ತಿಗೆದಾರ ಕಂಪನಿಗಳಿಗೆ ಇರಲಿದೆ. ಇದು, ಕೇಂದ್ರ ಸರಕಾರದ `ಕನಿಷ್ಠ ಸರಕಾರ-ಗರಿಷ್ಠ ಆಡಳಿತ’ ತತ್ತ್ವಕ್ಕೆ ಅನುಗುಣವಾಗಿದೆ.

***