Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

26ನೇ ಎಸ್.ಸಿ.ಒ. ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ

26ನೇ ಎಸ್.ಸಿ.ಒ. ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ


ಕಿರ್ಗಿಸ್ತಾನ್ ಅಧ್ಯಕ್ಷರೇ,

ಗೌರವಾನ್ವಿತರೇ,

ನಮಸ್ಕಾರ!

ಎಸ್.ಸಿ.ಒ.ನ  25ನೇ ವಾರ್ಷಿಕೋತ್ಸವದ ಈ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರ ನಡುವೆ ಇರುವುದು ನನಗೆ ತುಂಬಾ ಸಂತೋಷದ ವಿಷಯ.

ಬಿಷ್ಕೆಕ್‌ನಲ್ಲಿ ನಮಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಉದಾತ್ತ ಆತಿಥ್ಯಕ್ಕಾಗಿ ಅಧ್ಯಕ್ಷ ಜಪರೋವ್ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.

ನಿನ್ನೆ, ಕಿರ್ಗಿಸ್ತಾನ್‌ನ ಸ್ವಾತಂತ್ರ್ಯ ದಿನಾಚರಣೆಯಂದು ಇಲ್ಲಿಗೆ ಬರುವ ಸೌಭಾಗ್ಯ ನಮಗೆ ದೊರಕಿತ್ತು. ಮತ್ತೊಮ್ಮೆ ಕಿರ್ಗಿಸ್ತಾನ್ ಅಧ್ಯಕ್ಷರು ಮತ್ತು ಜನರಿಗೆ ನನ್ನ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮತ್ತು ಇಂದು, ಉಜ್ಬೇಕಿಸ್ತಾನ್‌ನ ಸ್ವಾತಂತ್ರ್ಯ ದಿನಾಚರಣೆಯಂದು, ಅಧ್ಯಕ್ಷರು ಮತ್ತು ಉಜ್ಬೇಕಿಸ್ತಾನ್ ಜನರಿಗೆ ನನ್ನ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ವಿಶ್ವ ಅಲೆಮಾರಿ ಕ್ರೀಡಾಕೂಟದ ಅದ್ಭುತ ಉದ್ಘಾಟನಾ ಸಮಾರಂಭದಲ್ಲಿ, ನಾವೆಲ್ಲರೂ ಕಿರ್ಗಿಸ್ತಾನ್‌ನ ಶ್ರೀಮಂತ ಸಂಸ್ಕೃತಿ ಮತ್ತು ನಮ್ಮ ಹಂಚಿಕೆಯ ಪರಂಪರೆಯ ಒಂದು ನೋಟವನ್ನು ಪಡೆದುಕೊಂಡೆವು. ಈ ಹಂಚಿಕೆಯ ಪರಂಪರೆ ಮತ್ತು ನಮ್ಮ ಆಳವಾದ ಜನತೆ ಮತ್ತು ಜನತೆಯ ಸಂಪರ್ಕಗಳು ಎಸ್.ಸಿ.ಒ. ಕುಟುಂಬದ ದೊಡ್ಡ ಶಕ್ತಿಗಳಲ್ಲಿ ಒಂದಾಗಿ ಸೇರಿವೆ.

ಸ್ನೇಹಿತರೇ,

ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಎಸ್.ಸಿ.ಒ. ಯುರೇಷಿಯಾದ ವಿಶಾಲ ವಿಸ್ತಾರದಲ್ಲಿ ಸಂವಾದ ಮತ್ತು ಸಹಕಾರದ ಬಲವಾದ ಸಂಪ್ರದಾಯವನ್ನು ಅಭಿವೃದ್ಧಿಪಡಿಸಿದೆ. ಒಟ್ಟಾಗಿ, ನಾವು ನಮ್ಮ ಜನರ ಯೋಗಕ್ಷೇಮಕ್ಕೆ ಮಾತ್ರವಲ್ಲದೆ ಮಾನವೀಯತೆಯ ಪ್ರಗತಿಗೂ ಅಮೂಲ್ಯ ಕೊಡುಗೆಗಳನ್ನು ನೀಡಿದ್ದೇವೆ. ಈ ಇಪ್ಪತ್ತೈದು ವರ್ಷಗಳಲ್ಲಿ, ನಾವು ಸಹಕಾರಕ್ಕಾಗಿ ಬಲವಾದ ಅಡಿಪಾಯವನ್ನು ಹಾಕಿದ್ದೇವೆ. ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ, ಈ ಸಹಕಾರವನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವುದು ನಮ್ಮ ಗುರಿಯಾಗಿರಬೇಕು.

ಜಗತ್ತು ಅನಿಶ್ಚಿತತೆ ಮತ್ತು ಅಸ್ಥಿರತೆಯ ನಡುವೆ ಸಾಗುತಿರುವ ಈ ಸಮಯದಲ್ಲಿ, ನಾವು ನಮ್ಮ ಹಂಚಿಕೆಯ ಭೌಗೋಳಿಕತೆಯನ್ನು ಹಂಚಿಕೆಯ ಅವಕಾಶಗಳಾಗಿ ಪರಿವರ್ತಿಸಬೇಕು. ಮತ್ತು ನಮ್ಮ ಪ್ರಯತ್ನಗಳ ಮೂಲಕ, ನಮ್ಮ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬೇಕು.

ಸ್ನೇಹಿತರೇ,

ಹಿಂದಿನ ಸಭೆಯಲ್ಲಿ, ನಾನು ಎಸ್.ಸಿ.ಒ. ಗಾಗಿ ಭಾರತದ ದೃಷ್ಟಿಕೋನದ ಮೂರು ಪ್ರಮುಖ ಸ್ತಂಭಗಳನ್ನು ವಿವರಿಸಿದ್ದೆ:

ಎಸ್ – ಅಂದರೆ ಸೆಕ್ಯುರಿಟಿ- ಭದ್ರತೆ,

ಸಿ – ಅಂದರೆ ಕನೆಕ್ಟಿವಿಟಿ ಸಂಪರ್ಕ ಮತ್ತು

ಓ – ಅಂದರೆ ಅಪರ್ಚುನಿಟಿ – ಅವಕಾಶ

ಈ ಮೂರು ಸ್ತಂಭಗಳನ್ನು ಚಿಂತನಾ ದೃಷ್ಟಿಕೋನದಿಂದ ಹೊರಗೆ ಕೊಂಡೊಯ್ದು ಅವುಗಳನ್ನು ಬಲಿಷ್ಟ ಕಾಂಕ್ರೀಟ್ ಫಲಿತಾಂಶಗಳಾಗಿ ಪರಿವರ್ತಿಸುವ ಸಮಯ ಬಂದಿದೆ. ಇದಕ್ಕೆ ಮೊದಲ ಮತ್ತು ಪ್ರಮುಖ ಅವಶ್ಯಕತೆ ಶಾಂತಿ ಮತ್ತು ಭದ್ರತೆ. ಭಯೋತ್ಪಾದನೆಯು ಒಟ್ಟಾರೆಯಾಗಿ ಮಾನವೀಯತೆಗೆ ಗಂಭೀರ ಸವಾಲನ್ನು ಒಡ್ಡುತ್ತಲೇ ಇದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ, ನಾವು ಕ್ರಿಯೆ-ಪ್ರತಿಕ್ರಿಯೆ ವಿಧಾನಕ್ಕೆ ಸೀಮಿತವಾಗಿರಲು ಸಾಧ್ಯವಿಲ್ಲ.

ಭಯೋತ್ಪಾದನಾ ಹಣಕಾಸು, ನೇಮಕಾತಿ, ಕ್ರಾಂತಿಯ ಮನೋಭಾವ ಮತ್ತು ಸುರಕ್ಷಿತ ತಾಣಗಳ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾವು ಕೆಡವಬೇಕು. ಈ ಗಂಭೀರ ವಿಷಯದ ಬಗ್ಗೆ ದ್ವಿಮುಖ ನೀತಿಗಳಿಗೆ ಅವಕಾಶವಿಲ್ಲ ಹಾಗು ನಾವು ಒಂದೇ ಧ್ವನಿಯಲ್ಲಿ ಮಾತನಾಡಬೇಕು ಮತ್ತು ದ್ವಿಮುಖ ನೀತಿಗೆ ಅವಕಾಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು.

ಭಯೋತ್ಪಾದನೆಯನ್ನು ನೀತಿಯ ಸಾಧನವಾಗಿ ಬಳಸುವ ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ತಾಣ ಹಾಗು ಬೆಂಬಲವನ್ನು ಒದಗಿಸುವ ದೇಶಗಳಿಗೆ ಭಯೋತ್ಪಾದನೆ ಎಂದಿಗೂ ಯಾರಿಗೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ನಾವು ಕಳುಹಿಸಬೇಕು.

ಶಾಂತಿಯುತ ಮತ್ತು ಸುರಕ್ಷಿತ ಯುರೇಷಿಯಾಕ್ಕಾಗಿ ನಮ್ಮ ಹಂಚಿಕೆಯ ಆಕಾಂಕ್ಷೆಯು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯ ಜೊತೆಗೆ ನಿಕಟ ಸಂಬಂಧ ಹೊಂದಿದೆ. ಭಾರತವು ಅಫ್ಘಾನಿಸ್ತಾನದ ಜನರಿಗೆ ಅಭಿವೃದ್ಧಿ ಮತ್ತು ಮಾನವೀಯ ನೆರವು ಒದಗಿಸುವಲ್ಲಿ ಕೊಡುಗೆ ನೀಡುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ.

ಇಂದಿನ ಅಂತರ್ಸಂಪರ್ಕಿತ ಜಗತ್ತಿನಲ್ಲಿ, ಭದ್ರತೆಯ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಒಂದು ಪ್ರದೇಶದಲ್ಲಿನ ಸಂಘರ್ಷವು ಆ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂಬುದನ್ನು ತೋರಿಸಿದೆ. ಇದರ ಪರಿಣಾಮವು ಪ್ರಪಂಚದಾದ್ಯಂತ ಕಂಡುಬರುತ್ತಿದ್ದು, ಇಂಧನ ಭದ್ರತೆ, ಕಡಲ ವ್ಯಾಪಾರ ಮತ್ತು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುತ್ತಿದೆ. ಜಾಗತಿಕ ದಕ್ಷಿಣದ ದೇಶಗಳು ಇಂತಹ ಅಡಚಣೆಗಳ ದೊಡ್ಡ ಹೊರೆಯನ್ನು ಹೊರುತ್ತಿವೆ. ಆದ್ದರಿಂದ, ಭಾರತವು ಎಲ್ಲಾ ಉದ್ವಿಗ್ನತೆಗಳು ಮತ್ತು ಸಂಘರ್ಷಗಳನ್ನು ಯುದ್ಧಭೂಮಿಯಲ್ಲಿ ಅಲ್ಲ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ನಿರಂತರವಾಗಿ ಕರೆ ನೀಡಿದೆ.

ಮಾದಕ ವಸ್ತುಗಳ ಕಳ್ಳಸಾಗಣೆ ಕೇವಲ ಅಪರಾಧವಲ್ಲ; ಇದು ನಮ್ಮ ಯುವ ಪೀಳಿಗೆ ಮತ್ತು ಪ್ರಾದೇಶಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ಭದ್ರತಾ ಬೆದರಿಕೆಗಳು, ಸಂಘಟಿತ ಅಪರಾಧ, ಮಾಹಿತಿ ಭದ್ರತೆ ಮತ್ತು ಮಾದಕವಸ್ತುಗಳಂತಹ ಸವಾಲುಗಳನ್ನು ಎದುರಿಸಲು ಎಸ್.ಸಿ.ಒ. ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಕೇಂದ್ರಗಳು ಸಕಾರಾತ್ಮಕ ಹೆಜ್ಜೆಯಾಗಿದೆ. ನಾವು ಈ ಕೇಂದ್ರಗಳನ್ನು ಪ್ರಾಯೋಗಿಕ ಸಮನ್ವಯ ಮತ್ತು ಸಕಾಲಿಕ ಕ್ರಮಕ್ಕಾಗಿ ಪರಿಣಾಮಕಾರಿ ಸಾಧನವನ್ನಾಗಿ ಮಾಡಬೇಕು.

ಸ್ನೇಹಿತರೇ

ನಮ್ಮ ಹಂಚಿಕೆಯ ಅಭಿವೃದ್ಧಿಯ ಎರಡನೇ ಸ್ತಂಭ ಬಲವಾದ ಮತ್ತು ವಿಶ್ವಾಸಾರ್ಹ ಸಂಪರ್ಕ. ಮಾರುಕಟ್ಟೆಗಳನ್ನು ಸಂಪರ್ಕಿಸುವ, ವ್ಯಾಪಾರವನ್ನು ಸುಗಮಗೊಳಿಸುವ ಮತ್ತು ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಆದಾಗ್ಯೂ, ಅಂತಹ ಪ್ರಯತ್ನಗಳು ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅಷ್ಟೇ ಅವಶ್ಯಕ. ಇದು ಎಸ್.ಸಿ.ಒ. ಚಾರ್ಟರ್‌ನ ಮೂಲಭೂತ ಮನೋಭಾವವೂ ಆಗಿದೆ.

ಮುಂದೆ ಸಾಗಿದಂತೆ, ಸಂಪರ್ಕದ ವ್ಯಾಪ್ತಿಯು ಇನ್ನಷ್ಟು ವಿಸ್ತಾರವಾಗಲಿದೆ. ರಸ್ತೆಗಳು, ರೈಲ್ವೆಗಳು ಮತ್ತು ವಾಯು ಕಾರಿಡಾರ್‌ಗಳ ಜೊತೆಗೆ, ನಾವು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು, ಡಿಜಿಟಲ್ ದಾಖಲಾತಿಯನ್ನು ಉತ್ತೇಜಿಸಬೇಕು ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ಗಳನ್ನು ಹೆಚ್ಚು ದಕ್ಷತಾಯುಕ್ತವನ್ನಾಗಿಸಿ ಪರಿಣಾಮಕಾರಿಯಾಗಿ ಮಾಡಬೇಕು.

ಸ್ನೇಹಿತರೇ,

ಮೂರನೇ ಸ್ತಂಭ – ಅವಕಾಶ.

ಎಸ್.ಸಿ.ಒ. ಸಹಕಾರದ ಪ್ರಯೋಜನಗಳು ನಮ್ಮ ಜನರನ್ನು ನೇರವಾಗಿ ತಲುಪಬೇಕು ಎಂದರ್ಥ. ನಮ್ಮ ಜನರ ನಡುವಿನ ಸಂಪರ್ಕಗಳು ನಮ್ಮ ದೊಡ್ಡ ಶಕ್ತಿ. ಭಾರತಕ್ಕೆ, ಎಸ್.ಸಿ.ಒ. ಶ್ರೇಷ್ಠ ನಾಗರಿಕತೆಗಳು, ಸಂಸ್ಕೃತಿಗಳು ಮತ್ತು ವಿಚಾರಗಳ ಸಂಗಮವಾಗಿದೆ. ಎಸ್.ಸಿ.ಒ. ನ ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ, ಜನರಿಂದ ಜನರಿಗೆ ಸಂಬಂಧಗಳು ನಮ್ಮ ಸಹಕಾರದ ಹೃದಯಭಾಗದಲ್ಲಿ ಉಳಿಯಬೇಕು.

ನಮ್ಮ ಯಶಸ್ಸಿನ ನಿಜವಾದ ಅಳತಗೋಲು ನಮ್ಮ ಪ್ರಯತ್ನಗಳು ಯುವಜನರಿಗೆ ಎಷ್ಟು ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ, ನಮ್ಮ ಉದ್ಯಮಿಗಳಿಗೆ ಎಷ್ಟು ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತವೆ, ನಮ್ಮ ರೈತರು ತಂತ್ರಜ್ಞಾನದಿಂದ ಎಷ್ಟು ಪ್ರಯೋಜನ ಪಡೆಯುತ್ತಾರೆ ಮತ್ತು ನಮ್ಮ ನಾಗರಿಕರ ಜೀವನ ಎಷ್ಟು ಉತ್ತಮಗೊಳ್ಳುತ್ತದೆ ಎಂಬುದರಲ್ಲಿದೆ

ಇದು “ಭದ್ರತೆ, ಸಂಪರ್ಕ ಮತ್ತು ಅವಕಾಶ”ದ ನಿಜವಾದ ಅರ್ಥ.

ಎಸ್.ಸಿ.ಒ.ದಲ್ಲಿ ನಮ್ಮ ಸಹಕಾರವು ಕೇವಲ ಸರ್ಕಾರದಿಂದ ನಡೆಸಲ್ಪಡುವಂತಿರಬಾರದು; ಅದು ಜನರಿಂದ ಕೂಡಿರಬೇಕು. ಕಿರ್ಗಿಸ್ತಾನ್ ಅಧ್ಯಕ್ಷತೆಯಲ್ಲಿ, ಎಸ್.ಸಿ.ಒ. ಯೊಳಗೆ ಯುವಜನರ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ನನಗೆ ಸಂತೋಷವಾಗಿದೆ. ಭಾರತ ಎಸ್.ಸಿ.ಒ. ಸ್ಟಾರ್ಟ್-ಅಪ್ ಫೋರಂ, ಯುವ ಲೇಖಕರ ಸಮಾವೇಶ ಮತ್ತು ಯುವ ವಿಜ್ಞಾನಿಗಳ ವೇದಿಕೆಯಂತಹ ಉಪಕ್ರಮಗಳನ್ನು ತೆಗೆದುಕೊಂಡಿದೆ.

ಕಳೆದ ವರ್ಷ, ಭಾರತ ಎಸ್.ಸಿ.ಒ ನಾಗರಿಕತಾ ಸಂವಾದ ವೇದಿಕೆಯನ್ನು ಪ್ರಸ್ತಾಪಿಸಿತು. ಈ ವರ್ಷ ಅದರ ಮೊದಲ ಅಧಿವೇಶನ ಭಾರತದಲ್ಲಿ ನಡೆಯಲಿದೆ ಎಂದು ನನಗೆ ಸಂತೋಷವಾಗಿದೆ. ನಿಮ್ಮೆಲ್ಲರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಈ ವೇದಿಕೆ ಎಸ್.ಸಿ.ಒ ಯೊಳಗಿನ ರೋಮಾಂಚಕ ಸಂವಾದಕ್ಕೆ ಬಲವಾದ ವೇದಿಕೆಯಾಗಲಿದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕಿರ್ಗಿಸ್ತಾನ್‌ನ ಮಹಾನ್ ಸಾಹಿತಿ ಚಿಂಗಿಜ್ ಐತ್ಮಾಟೋವ್, ಜಗತ್ತಿಗೆ ಸುಂದರವಾದ ಮತ್ತು ಆಳವಾದ ಚಿಂತನೆಯನ್ನು ನೀಡಿದರು. ನಾವು ಹೆಚ್ಚಾಗಿ ನಮ್ಮನ್ನು ವಿಭಜಿಸುವ ವಿಷಯಗಳ ಮೇಲೆ ಹೆಚ್ಚು ಗಮನಹರಿಸುತ್ತೇವೆ ಮತ್ತು ನಮ್ಮನ್ನು ಒಂದುಗೂಡಿಸುವ ವಿಷಯಗಳ ಮೇಲೆ ಕಡಿಮೆ ಗಮನಹರಿಸುತ್ತೇವೆ ಎಂದು ಅವರು ಹೇಳಿದ್ದರು

ಈ ಸಂದೇಶವು ಇಂದು ಎಸ್.ಸಿ.ಒ. ಗೂ ಅಷ್ಟೇ ಪ್ರಸ್ತುತವಾಗಿದೆ. ನಮ್ಮ ವೈವಿಧ್ಯತೆಯು ನಮ್ಮ ಗುರುತು, ಹಾಗು ನಮ್ಮ ಹಂಚಿಕೆಯ ಉದ್ದೇಶವು ನಮ್ಮ ಶಕ್ತಿ. ಬಿಷ್ಕೆಕ್‌ನಿಂದ, ನಾವು ಈ ಸಂಕಲ್ಪದೊಂದಿಗೆ ಮುಂದುವರಿಯಬೇಕು:

ಹಂಚಿಕೆಯ ಭೌಗೋಳಿಕತೆಯಿಂದ ಹಂಚಿಕೆಯ ಅವಕಾಶಗಳತ್ತ,

ದೃಷ್ಟಿಕೋನದಿಂದ ಫಲಿತಾಂಶಗಳತ್ತ,

ಮತ್ತು ಸರ್ಕಾರ-ಚಾಲಿತ ಸಹಕಾರದಿಂದ ಜನ-ಚಾಲಿತ ಪಾಲುದಾರಿಕೆಯತ್ತ.

ಇದೇ ನಂಬಿಕೆ ಮತ್ತು ಬದ್ಧತೆಯೊಂದಿಗೆ, ಭಾರತವು ಎಸ್.ಸಿ.ಒ. ಕುಟುಂಬದ ಹಂಚಿಕೆಯ ಪ್ರಯಾಣಕ್ಕೆ ಕೊಡುಗೆ ನೀಡಲು ಸಿದ್ಧವಾಗಿದೆ.

ಹೃತ್ಪೂರ್ವಕ ಧನ್ಯವಾದಗಳು.

ಘೋಷಣೆ ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****