ಪಿಎಂಇಂಡಿಯಾ
ಇಂದು ಮಹಾರಾಷ್ಟ್ರದ ಸಂಸ್ಥಾಪನಾ ದಿನ. ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಗೌರವ ನಮನ ಮತ್ತು ಮಹಾರಾಷ್ಟ್ರ ದಿನದಂದು ಈ ನೆಲದ ಎಲ್ಲಾ ಸಹೋದರ ಸಹೋದರಿಯರಿಗೆ ಶುಭಾಶಯಗಳು!
ಇಂದು ಗುಜರಾತ್ ಸಂಸ್ಥಾಪನಾ ದಿನ, ಗುಜರಾತ್ ಸಂಸ್ಥಾಪನಾ ದಿನದಂದು ವಿಶ್ವದಾದ್ಯಂತದ ಎಲ್ಲ ಗುಜರಾತಿ ಸಹೋದರ ಸಹೋದರಿಯರಿಗೆ ಅನೇಕ ಅಭಿನಂದನೆಗಳು.
ವೇವ್ಸ್ ಶೃಂಗಸಭೆಯಲ್ಲಿ ಉಪಸ್ಥಿತರಿರುವ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಜೀ, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಜೀ, ಎಲ್.ಮುರುಗನ್ ಜೀ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಜೀ, ಅಜಿತ್ ಪವಾರ್ ಜೀ, ವಿಶ್ವದ ಮೂಲೆ ಮೂಲೆಯಲ್ಲಿರುವ ಸೃಜನಶೀಲ ಜಗತ್ತಿನ ಎಲ್ಲಾ ದಿಗ್ಗಜರು, ವಿವಿಧ ದೇಶಗಳ ಮಾಹಿತಿ, ಸಂವಹನ, ಕಲೆ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವರು, ವಿವಿಧ ದೇಶಗಳ ರಾಯಭಾರಿಗಳು, ವಿಶ್ವದ ಮೂಲೆ ಮೂಲೆಗಳ ಸೃಜನಶೀಲ ಪ್ರಪಂಚದ ಮುಖಗಳು, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ!
ಸ್ನೇಹಿತರೇ,
ಇಂದು, 100 ಕ್ಕೂ ಹೆಚ್ಚು ದೇಶಗಳ ಕಲಾವಿದರು, ನಾವೀನ್ಯತೆದಾರರು (ಅನ್ವೇಷಣಕಾರರು), ಹೂಡಿಕೆದಾರರು ಮತ್ತು ನೀತಿ ನಿರೂಪಕರು ಮುಂಬೈನಲ್ಲಿ ಒಂದೇ ಸೂರಿನಡಿ ಸೇರಿದ್ದಾರೆ. ಒಂದು ರೀತಿಯಲ್ಲಿ, ಜಾಗತಿಕ ಪ್ರತಿಭೆ ಮತ್ತು ಜಾಗತಿಕ ಸೃಜನಶೀಲತೆಯ ಜಾಗತಿಕ ಪರಿಸರ ವ್ಯವಸ್ಥೆಗೆ ಅಡಿಪಾಯವನ್ನು ಇಂದು ಇಲ್ಲಿ ಹಾಕಲಾಗುತ್ತಿದೆ. ವರ್ಲ್ಡ್ ಆಡಿಯೊ ವಿಶುವಲ್ ಅಂಡ್ ಎಂಟರ್ಟೈನ್ಮೆಂಟ್ ಶೃಂಗಸಭೆ, ಅಂದರೆ ವೇವ್ಸ್, ಎಂಬುದು ಕೇವಲ ಸಂಕ್ಷಿಪ್ತ ರೂಪವಲ್ಲ. ಇದು ನಿಜವಾಗಿಯೂ ಸಂಸ್ಕೃತಿ, ಸೃಜನಶೀಲತೆ ಮತ್ತು ಸಾರ್ವತ್ರಿಕ ಸಂಪರ್ಕದ ಅಲೆಯಾಗಿದೆ. ಮತ್ತು ಈ ಅಲೆಯ ಮೇಲೆ ಚಲನಚಿತ್ರಗಳು, ಸಂಗೀತ, ಗೇಮಿಂಗ್, ಅನಿಮೇಷನ್, ಕಥೆ ಹೇಳುವುದು ಮತ್ತು ಸೃಜನಶೀಲತೆಯ ವಿಶಾಲ ಜಗತ್ತು ಸವಾರಿ ಮಾಡುತ್ತ ತೇಲಾಡುತ್ತಿದೆ. ವೇವ್ ಎಂಬುದು ಅಂತಹ ಜಾಗತಿಕ ವೇದಿಕೆಯಾಗಿದ್ದು, ಅದು ಪ್ರತಿಯೊಬ್ಬ ಕಲಾವಿದನಿಗೆ, ನಿಮ್ಮಂತಹ ಪ್ರತಿಯೊಬ್ಬ ಸೃಜನಶೀಲ ವ್ಯಕ್ತಿಗೆ ಸೇರಿದೆ, ಅಲ್ಲಿ ಪ್ರತಿಯೊಬ್ಬ ಕಲಾವಿದ, ಪ್ರತಿಯೊಬ್ಬ ಯುವಜನರು ಹೊಸ ಕಲ್ಪನೆಯೊಂದಿಗೆ ಸೃಜನಶೀಲ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಈ ಐತಿಹಾಸಿಕ ಮತ್ತು ಅದ್ಭುತ ಆರಂಭಕ್ಕಾಗಿ ಭಾರತ ಮತ್ತು ವಿದೇಶಗಳಿಂದ ಇಲ್ಲಿ ನೆರೆದಿರುವ ನಿಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆ. ನಾನು ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ.
ಸ್ನೇಹಿತರೇ,
ಇಂದು ಮೇ 1, 112 ವರ್ಷಗಳ ಹಿಂದೆ, ಮೇ 3, 1913 ರಂದು, ಭಾರತದ ಮೊದಲ ಚಲನಚಿತ್ರ ರಾಜಾ ಹರಿಶ್ಚಂದ್ರ ಬಿಡುಗಡೆಯಾಯಿತು. ಇದರ ನಿರ್ಮಾಪಕರು ದಾದಾಸಾಹೇಬ್ ಫಾಲ್ಕೆ, ಮತ್ತು ನಿನ್ನೆ ಅವರ ಜನ್ಮದಿನ. ಕಳೆದ ಶತಮಾನದಲ್ಲಿ, ಭಾರತೀಯ ಚಿತ್ರರಂಗವು ಭಾರತವನ್ನು ವಿಶ್ವದ ಮೂಲೆ ಮೂಲೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ರಷ್ಯಾದಲ್ಲಿ ರಾಜ್ ಕಪೂರ್ ಅವರ ಜನಪ್ರಿಯತೆ, ಕ್ಯಾನ್ಸ್ ನಲ್ಲಿ ಸತ್ಯಜಿತ್ ರೇ ಅವರ ಜನಪ್ರಿಯತೆ ಮತ್ತು ಆಸ್ಕರ್ ನಲ್ಲಿ ಆರ್ ಆರ್ ಆರ್ ನ ಯಶಸ್ಸಿನಲ್ಲಿ ಇದು ಕಂಡುಬರುತ್ತದೆ. ಗುರುದತ್ ಅವರ ಸಿನಿಮೀಯ ಕಾವ್ಯವಾಗಿರಲಿ ಅಥವಾ ಋತ್ವಿಕ್ ಘಾಟಕ್ ಅವರ ಸಾಮಾಜಿಕ ಪ್ರತಿಬಿಂಬವಾಗಿರಲಿ, ಎ.ಆರ್.ರೆಹಮಾನ್ ಅವರ ಸಂಗೀತ ಅಥವಾ ರಾಜಮೌಳಿ ಅವರ ಮಹಾಕಾವ್ಯವಾಗಿರಲಿ, ಪ್ರತಿಯೊಂದು ಕಥೆಯೂ ಭಾರತೀಯ ಸಂಸ್ಕೃತಿಯ ಧ್ವನಿಯಾಗಿದೆ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರ ಹೃದಯವನ್ನು ತಲುಪಿದೆ. ಇಂದು ವೇವ್ಸ್ ನ ಈ ವೇದಿಕೆಯಲ್ಲಿ, ನಾವು ಅಂಚೆ ಚೀಟಿಗಳ ಮೂಲಕ ಭಾರತೀಯ ಸಿನೆಮಾದ ಅನೇಕ ದಂತಕಥೆಗಳನ್ನು ಸ್ಮರಿಸಿದ್ದೇವೆ.
ಸ್ನೇಹಿತರೇ,
ಕಳೆದ ವರ್ಷಗಳಲ್ಲಿ, ನಾನು ಗೇಮಿಂಗ್ ಪ್ರಪಂಚದ ಜನರು, ಸಂಗೀತ ಪ್ರಪಂಚದ ಜನರು, ಚಲನಚಿತ್ರ ತಯಾರಕರು ಮತ್ತು ಬೆಳ್ಳಿ ಪರದೆಯ ಮೇಲೆ ಮಿಂಚುವ ಮುಖಗಳನ್ನು ಭೇಟಿಯಾಗಿದ್ದೇನೆ. ಈ ಚರ್ಚೆಗಳಲ್ಲಿ, ಭಾರತದ ಸೃಜನಶೀಲತೆ, ಸೃಜನಶೀಲ ಸಾಮರ್ಥ್ಯ ಮತ್ತು ಜಾಗತಿಕ ಸಹಯೋಗದ ಬಗ್ಗೆ ಆಗಾಗ್ಗೆ ಚರ್ಚಿಸಲಾಗಿದೆ. ಸೃಜನಶೀಲ ಪ್ರಪಂಚದ ನಿಮ್ಮೆಲ್ಲರನ್ನೂ ನಾನು ಭೇಟಿಯಾದಾಗ, ನಿಮ್ಮಿಂದ ಆಲೋಚನೆಗಳನ್ನು ತೆಗೆದುಕೊಂಡಾಗಲೆಲ್ಲಾ, ಈ ವಿಷಯದ ಬಗ್ಗೆ ಆಳವಾಗಿ ಚಿಂತಿಸಲು ನನಗೆ ಅವಕಾಶ ಸಿಕ್ಕಿತು. ನಂತರ ನಾನು ಒಂದು ಪ್ರಯೋಗವನ್ನೂ ಮಾಡಿದೆ. 6-7 ವರ್ಷಗಳ ಹಿಂದೆ, ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭ ಬಂದಾಗ, ನಾನು 150 ದೇಶಗಳ ಗಾಯಕರಿಗೆ ಗಾಂಧೀಜಿಯವರ ನೆಚ್ಚಿನ ಹಾಡಾದ ವೈಷ್ಣವ ಜನ್ ಕೋ ತೆನೆ ಕಹಿಯೆ ಹಾಡಲು ಪ್ರೇರಣೆ ನೀಡಿದೆ. ನರಸಿ ಮೆಹ್ತಾ ಸಂಯೋಜಿಸಿದ ಈ ಹಾಡು 500-600 ವರ್ಷಗಳಷ್ಟು ಹಳೆಯದು, ಆದರೆ ‘ಗಾಂಧಿ 150’ ಸಮಯದಲ್ಲಿ, ವಿಶ್ವದಾದ್ಯಂತದ ಕಲಾವಿದರು ಇದನ್ನು ಹಾಡಿದರು ಮತ್ತು ಇದು ಭಾರಿ ಪರಿಣಾಮ ಬೀರಿತು, ಜಗತ್ತು ಒಗ್ಗೂಡಿತು. ‘ಗಾಂಧಿ 150’ ಸಮಯದಲ್ಲಿ 2-2, 3-3 ನಿಮಿಷಗಳ ತಮ್ಮದೇ ಆದ ವೀಡಿಯೊಗಳನ್ನು ಮಾಡಿ, ಗಾಂಧೀಜಿಯವರ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ದ ಅನೇಕ ಜನರು ಇಲ್ಲಿ ಕುಳಿತಿದ್ದಾರೆ. ಭಾರತ ಮತ್ತು ವಿಶ್ವದ ಸೃಜನಶೀಲ ಪ್ರಪಂಚದ ಶಕ್ತಿಯು ಒಟ್ಟಾಗಿ ಏನು ಅದ್ಭುತ ಮಾಡಬಹುದು ಎಂಬುದರ ಒಂದು ನೋಟವನ್ನು ನಾವು ನೋಡಿದ್ದೇವೆ. ಇಂದು, ಆ ಕಾಲದ ಕಲ್ಪನೆಗಳು ವಾಸ್ತವವಾಗಿವೆ ಮತ್ತು ವೇವ್ಸ್ (ಅಲೆಗಳ) ರೂಪದಲ್ಲಿ ಭೂಮಿಗೆ ಇಳಿದು ಬಂದಿವೆ.
ಸ್ನೇಹಿತರೇ,
ಸೂರ್ಯನು ಉದಯಿಸುವಾಗ ಆಕಾಶಕ್ಕೆ ಬಣ್ಣ ನೀಡುವಂತೆಯೇ, ಈ ಶೃಂಗ ಸಭೆಯು ತನ್ನ ಮೊದಲ ಕ್ಷಣದಿಂದಲೇ ಹೊಳೆಯಲು ಪ್ರಾರಂಭಿಸಿದೆ. “ಮೊದಲ ಕ್ಷಣದಿಂದಲೇ, ಶೃಂಗಸಭೆಯು ಉದ್ದೇಶಪೂರ್ವಕವಾಗಿ ಘರ್ಜಿಸುತ್ತಿದೆ.” ಅದರ ಮೊದಲ ಆವೃತ್ತಿಯಲ್ಲಿಯೇ, ವೇವ್ಸ್ ವಿಶ್ವದ ಗಮನವನ್ನು ಸೆಳೆದಿದೆ. ನಮ್ಮ ಸಲಹಾ ಮಂಡಳಿಗೆ ಸಂಬಂಧಿಸಿದ ಎಲ್ಲಾ ಸಹೋದ್ಯೋಗಿಗಳು ಮಾಡಿದ ಕಠಿಣ ಪರಿಶ್ರಮವು ಇಂದು ಇಲ್ಲಿ ಗೋಚರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ, ನೀವು ಕ್ರಿಯೇಟರ್ಸ್ ಚಾಲೆಂಜ್, ಕ್ರಿಯೇಟೋಸ್ಪಿಯರ್ ಎಂಬ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿದ್ದೀರಿ, ವಿಶ್ವದ ಸುಮಾರು 60 ದೇಶಗಳಿಂದ ಒಂದು ಲಕ್ಷ ಸೃಜನಶೀಲ ಜನರು ಇದರಲ್ಲಿ ಭಾಗವಹಿಸಿದ್ದಾರೆ. ಮತ್ತು 32 ಸವಾಲುಗಳಲ್ಲಿ 800 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ನಾನು ಎಲ್ಲಾ ಅಂತಿಮ ಸ್ಪರ್ಧಿಗಳಿಗೆ ಶುಭ ಹಾರೈಸುತ್ತೇನೆ. ನಿಮಗೆ ಒಂದು ಅವಕಾಶವಿದೆ – ಜಗತ್ತಿನಲ್ಲಿ ಪ್ರಭಾವ ಬೀರಲು, ಮತ್ತು ಏನನ್ನಾದರೂ ಮಾಡಲು/ಸಾಧಿಸಲು.
ಸ್ನೇಹಿತರೇ,
ನೀವು ಇಲ್ಲಿ ಇಂಡಿಯಾ ಪೆವಿಲಿಯನ್ ನಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ರೂಪಿಸಿದ್ದೀರಿ ಎಂದು ನನಗೆ ತಿಳಿಸಲಾಗಿದೆ. ನಾನು ಅದನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ, ನಾನು ಖಂಡಿತವಾಗಿಯೂ ಹೋಗುತ್ತೇನೆ. ವೇವ್ಸ್ ಬಜಾರ್ ನ ಉಪಕ್ರಮವೂ ಬಹಳ ಆಸಕ್ತಿದಾಯಕವಾಗಿದೆ. ಇದು ಹೊಸ ಸೃಜನಶೀಲ ಮನಸ್ಸುಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಅವರು ಹೊಸ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಕಲಾ ಕ್ಷೇತ್ರದಲ್ಲಿ, ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸುವ ಈ ಕಲ್ಪನೆ ನಿಜವಾಗಿಯೂ ತುಂಬಾ ಒಳ್ಳೆಯದು.
ಸ್ನೇಹಿತರೇ,
ಚಿಕ್ಕ ಮಗುವಿನ ಜೀವನದ ಆರಂಭದಿಂದ, ಮಗು ಜನಿಸಿದಾಗ, ಅವನ ತಾಯಿಯೊಂದಿಗಿನ ಆ ಮಗುವಿನ ಸಂಬಂಧವು ಜೋಗುಳಗಳೊಂದಿಗೆ ಪ್ರಾರಂಭವಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಆ ಮಗು ತನ್ನ ತಾಯಿಯಿಂದ ಮೊದಲ ಶಬ್ದವನ್ನು ಕೇಳುತ್ತದೆ. ಮಗು ಸಂಗೀತದ ಮೊದಲ ಸ್ವರವನ್ನು ಅರ್ಥಮಾಡಿಕೊಳ್ಳುತ್ತಾನೆ. ತಾಯಿ ಮಗುವಿನ ಕನಸುಗಳನ್ನು ಹೆಣೆಯುವಂತೆ, ಸೃಜನಶೀಲ ಪ್ರಪಂಚದ ಜನರು ಒಂದು ಯುಗದ ಕನಸುಗಳನ್ನು ಹೆಣೆಯುತ್ತಾರೆ. ಅಂತಹ ಜನರನ್ನು ಒಟ್ಟುಗೂಡಿಸುವುದು ವೇವ್ಸ್ ನ ಉದ್ದೇಶವಾಗಿದೆ.
ಸ್ನೇಹಿತರೇ,
ಕೆಂಪು ಕೋಟೆಯಿಂದ, ನಾನು ಎಲ್ಲರ ಪ್ರಯತ್ನಗಳ ಬಗ್ಗೆ ಮಾತನಾಡಿದ್ದೇನೆ. ಇಂದು, ನಿಮ್ಮೆಲ್ಲರ ಪ್ರಯತ್ನಗಳು ಮುಂಬರುವ ವರ್ಷಗಳಲ್ಲಿ ವೇವ್ಸ್ ನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬ ನನ್ನ ನಂಬಿಕೆ ಬಲಗೊಂಡಿದೆ. ಮೊದಲ ಶೃಂಗಸಭೆಯಲ್ಲಿ ನೀವು ಕೈಹಿಡಿದು ಮಾಡಿದ ಕೆಲಸವನ್ನು ಮುಂದುವರಿಸುವಂತೆ ನಾನು ಸದಾ ಉದ್ಯಮದ ನನ್ನ ಸಹೋದ್ಯೋಗಿಗಳನ್ನು ಒತ್ತಾಯಿಸುತ್ತೇನೆ. ವೇವ್ಸ್ ನಲ್ಲಿ ಇನ್ನೂ ಅನೇಕ ಸುಂದರ ಅಲೆಗಳು ಬರಬೇಕಾಗಿದೆ, ವೇವ್ಸ್ ಪ್ರಶಸ್ತಿಗಳು ಸಹ ಭವಿಷ್ಯದಲ್ಲಿ ಪ್ರಾರಂಭವಾಗಲಿವೆ. ಇವು ಕಲೆ ಮತ್ತು ಸೃಜನಶೀಲತೆಯ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾಗಲಿವೆ. ನಾವು ಬದ್ಧರಾಗಿರಬೇಕು, ನಾವು ವಿಶ್ವದ ಹೃದಯಗಳನ್ನು ಗೆಲ್ಲಬೇಕು, ನಾವು ಜನರನ್ನು ಗೆಲ್ಲಬೇಕು.
ಸ್ನೇಹಿತರೇ,
ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ಇಂದು, ಜಾಗತಿಕ ಫಿನ್ಟೆಕ್ ಅಳವಡಿಕೆ/ಸ್ವೀಕಾರ ದರದಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ ಭಾರತದಲ್ಲಿದೆ. ಅಭಿವೃದ್ಧಿ ಹೊಂದಿದ ಭಾರತದತ್ತ ನಮ್ಮ ಪ್ರಯಾಣ ಈಗಷ್ಟೇ ಆರಂಭವಾಗಿದೆ. ಭಾರತವು ಇದಕ್ಕಿಂತ ಹೆಚ್ಚಿನದನ್ನು ನೀಡಲು ಇದೆ. ಭಾರತವು ತನ್ನ ಶತಕೋಟಿಗೂ ಹೆಚ್ಚು ಜನಸಂಖ್ಯೆಯೊಂದಿಗೆ, ಶತಕೋಟಿ ಕಥೆಗಳ ದೇಶವಾಗಿದೆ. ಎರಡು ಸಾವಿರ ವರ್ಷಗಳ ಹಿಂದೆ, ಭರತ ಮುನಿಗಳು ನಾಟ್ಯಶಾಸ್ತ್ರವನ್ನು ಬರೆದಾಗ, ಅವರ ಸಂದೇಶ ಹೀಗಿತ್ತು – “ನಾಟ್ಯಂ ಭಾವಯತಿ ಲೋಕಂ” (“नाट्यं भावयति लोकम्“). ಇದರರ್ಥ, ಕಲೆಯು ಜಗತ್ತಿಗೆ ಭಾವನೆಗಳನ್ನು ನೀಡುತ್ತದೆ. ಶತಮಾನಗಳ ಹಿಂದೆ, ಕಾಳಿದಾಸರು ಅಭಿಜ್ಞಾನ-ಶಾಕುಂತಲಂ ಅನ್ನು ಬರೆದಾಗ, ಭಾರತವು ಶಾಸ್ತ್ರೀಯ ನಾಟಕಕ್ಕೆ ಹೊಸ ದಿಕ್ಕನ್ನು ನೀಡಿತು. ಭಾರತದ ಪ್ರತಿಯೊಂದು ಬೀದಿಯಲ್ಲೂ ಒಂದು ಕಥೆ ಇದೆ, ಪ್ರತಿ ಪರ್ವತಕ್ಕೂ ಒಂದು ಹಾಡು ಇದೆ, ಪ್ರತಿ ನದಿಯೂ ಒಂದಲ್ಲ ಒಂದು ಹಾಡನ್ನು ಹಾಡುತ್ತದೆ. ನೀವು ಭಾರತದ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ಹೋದರೆ, ಪ್ರತಿ ಹಳ್ಳಿಯೂ ತನ್ನದೇ ಆದ ಜಾನಪದವನ್ನು ಹೊಂದಿದೆ, ತನ್ನದೇ ಆದ ವಿಶೇಷ ಶೈಲಿಯ ಕಥೆಯನ್ನು ಅದು ಹೇಳುತ್ತದೆ. ಇಲ್ಲಿ, ವಿವಿಧ ಸಮಾಜಗಳು ತಮ್ಮ ಇತಿಹಾಸವನ್ನು ಜಾನಪದದ ಮೂಲಕ ಮುಂದಿನ ಪೀಳಿಗೆಗೆ ರವಾನಿಸಿವೆ. ಸಂಗೀತವು ನಮಗೆ ಆಧ್ಯಾತ್ಮಿಕ ಪದ್ಧತಿ/ಅಭ್ಯಾಸವಾಗಿದೆ. ಅದು ಭಜನೆಗಳು, ಗಝಲ್ ಗಳು, ಶಾಸ್ತ್ರೀಯ ಅಥವಾ ಸಮಕಾಲೀನವಾಗಿರಲಿ, ಪ್ರತಿಯೊಂದು ಸ್ವರದಲ್ಲಿಯೂ ಒಂದು ಕಥೆ ಇದೆ, ಪ್ರತಿಯೊಂದು ಲಯದಲ್ಲೂ ಒಂದು ಆತ್ಮವಿದೆ.
ಸ್ನೇಹಿತರೇ,
ನಾವು ನಾದ ಬ್ರಹ್ಮ ಅಂದರೆ ದೈವಿಕ ಶಬ್ದದ ಪರಿಕಲ್ಪನೆಯನ್ನು ಹೊಂದಿದ್ದೇವೆ. ನಮ್ಮ ದೇವರುಗಳು ಸಂಗೀತ ಮತ್ತು ನೃತ್ಯದ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುತ್ತಾರೆ. ಶಿವನ ಡಮರು ಸೃಷ್ಟಿಯ ಮೊದಲ ಶಬ್ದ, ತಾಯಿ ಸರಸ್ವತಿಯ ವೀಣೆ ಬುದ್ಧಿವಂತಿಕೆ ಮತ್ತು ಜ್ಞಾನದ ಲಯ, ಶ್ರೀ ಕೃಷ್ಣನ ಕೊಳಲು ಪ್ರೀತಿ ಮತ್ತು ಸೌಂದರ್ಯದ ಶಾಶ್ವತ ಸಂದೇಶ, ವಿಷ್ಣು ಜೀ ಅವರ ಶಂಖ, ಶಂಖದ ಶಬ್ದವು ಸಕಾರಾತ್ಮಕ ಶಕ್ತಿಯ ಕರೆಯಾಗಿದೆ, ನಮ್ಮಲ್ಲಿ ಬಹಳಷ್ಟಿದೆ, ಇದರ ಒಂದು ನೋಟವನ್ನು ಇತ್ತೀಚೆಗೆ ಇಲ್ಲಿ ನಡೆದ ಆಕರ್ಷಕ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ಕಾಣಬಹುದು. ಮತ್ತು ಅದಕ್ಕಾಗಿಯೇ ನಾನು ಹೇಳುತ್ತೇನೆ – ಇದು ಸಮಯ, ಸರಿಯಾದ ಸಮಯ. ಭಾರತದಲ್ಲಿ ಸೃಜನಶೀಲತೆಯ ನಿರ್ಮಾಣಕ್ಕೆ, ವಿಶ್ವಕ್ಕಾಗಿ ನಿರ್ಮಾಣ ಮಾಡಲು ಇದು ಸರಿಯಾದ ಸಮಯ. ಇಂದು, ಜಗತ್ತು ಕಥೆ ಹೇಳುವ ಹೊಸ ಮಾರ್ಗಗಳನ್ನು ಹುಡುಕುತ್ತಿರುವಾಗ, ಭಾರತವು ಸಾವಿರಾರು ವರ್ಷಗಳ ಹಿಂದಿನ ಕಥೆಗಳ ನಿಧಿಯನ್ನು ಹೊಂದಿದೆ. ಮತ್ತು ಈ ನಿಧಿಯು ಕಾಲಾತೀತ, ಚಿಂತನಶೀಲ ಮತ್ತು ನಿಜವಾಗಿಯೂ ಜಾಗತಿಕವಾದುದಾಗಿದೆ. ಮತ್ತು ಇದು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರವೇ ಹೊಂದಿದೆ ಎಂದಲ್ಲ, ಅದು ವಿಜ್ಞಾನ, ಕ್ರೀಡೆ, ಶೌರ್ಯದ ಕಥೆಗಳು, ತ್ಯಾಗ ಮತ್ತು ತಪಸ್ಸಿನ ಕಥೆಗಳನ್ನು ಹೊಂದಿದೆ. ನಮ್ಮ ಕಥೆಗಳು ವಿಜ್ಞಾನ, ಕಾದಂಬರಿ, ಧೈರ್ಯ, ಶೌರ್ಯವನ್ನು ಹೊಂದಿವೆ, ಭಾರತದ ಈ ನಿಧಿಯ ಬುಟ್ಟಿ ಬಹಳ ದೊಡ್ಡದಾಗಿದೆ, ಬಹಳ ವಿಶಾಲವಾಗಿದೆ. ಈ ನಿಧಿಯನ್ನು ವಿಶ್ವದ ಮೂಲೆ ಮೂಲೆಗೂ ಕೊಂಡೊಯ್ಯುವುದು ಮತ್ತು ಮುಂಬರುವ ಪೀಳಿಗೆಗೆ ಹೊಸ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಪ್ರಸ್ತುತಪಡಿಸುವುದು ವೇವ್ಸ್ ವೇದಿಕೆಯ ದೊಡ್ಡ ಜವಾಬ್ದಾರಿಯಾಗಿದೆ.
ಸ್ನೇಹಿತರೇ,
ಸ್ವಾತಂತ್ರ್ಯದ ಕೆಲವೇ ವರ್ಷಗಳ ನಂತರ ನಮ್ಮ ದೇಶದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರಾರಂಭಿಸಲಾಯಿತು ಎಂದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ಈ ಪ್ರಶಸ್ತಿಗಳನ್ನು ಅನೇಕ ವರ್ಷಗಳಿಂದ ನೀಡಲಾಗುತ್ತಿದೆ, ಆದರೆ ನಾವು ಈ ಪ್ರಶಸ್ತಿಗಳನ್ನು ಜನರ ಪದ್ಮವನ್ನಾಗಿ ಮಾಡಿದ್ದೇವೆ. ದೇಶಕ್ಕಾಗಿ ಬದುಕುತ್ತಿರುವ ಮತ್ತು ದೇಶದ ದೂರದ ಮೂಲೆಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಜನರನ್ನು ನಾವು ಗುರುತಿಸಿ, ನಾವು ಅವರಿಗೆ ಗೌರವವನ್ನು ನೀಡಿದ್ದೇವೆ, ನಂತರ ಪದ್ಮಾ ಸಂಪ್ರದಾಯದ ಸ್ವರೂಪವು ಬದಲಾಯಿತು. ಈಗ ಇಡೀ ದೇಶವು ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದೆ, ಈಗ ಇದು ಕೇವಲ ಒಂದು ಕಾರ್ಯಕ್ರಮವಲ್ಲ ಬದಲು ಇಡೀ ದೇಶದ ಹಬ್ಬವಾಗಿದೆ. ವೇವ್ಸ್ ಕೂಡಾ ಇದೇ ರೀತಿ.. ಸೃಜನಶೀಲ ಜಗತ್ತಿನಲ್ಲಿ, ಚಲನಚಿತ್ರಗಳಲ್ಲಿ, ಸಂಗೀತದಲ್ಲಿ, ಅನಿಮೇಷನ್ನಿನಲ್ಲಿ, ಗೇಮಿಂಗ್ ನಲ್ಲಿ ಭಾರತದ ಪ್ರತಿಯೊಂದು ಮೂಲೆಯಲ್ಲಿರುವ ಪ್ರತಿಭೆಗಳಿಗೆ ಅದು ಒಂದು ವೇದಿಕೆಯನ್ನು ನೀಡಿದರೆ, ಜಗತ್ತು ಖಂಡಿತವಾಗಿಯೂ ಅದನ್ನು ಮೆಚ್ಚುತ್ತದೆ.
ಸ್ನೇಹಿತರೇ,
ವಿಷಯ ರಚನೆಯಲ್ಲಿ ಭಾರತದ ಮತ್ತೊಂದು ವಿಶೇಷತೆ ನಿಮಗೆ ಸಾಕಷ್ಟು ಸಹಾಯ ಮಾಡಲಿದೆ. ನಾವು ಆನೋ ಭದ್ರಾ ಕ್ರತವೋ ಯಾಂತು ವಿಶ್ವತ್: (आ नो भद्र: क्रतवो यन्तु विश्वत🙂 ಎಂಬ ಕಲ್ಪನೆಯನ್ನು ನಂಬುತ್ತೇವೆ. ಇದರರ್ಥ, ಎಲ್ಲಾ ದಿಕ್ಕುಗಳಿಂದ ಒಳ್ಳೆಯ ಆಲೋಚನೆಗಳು ನಮಗೆ ಬರಲಿ. ಇದು ನಮ್ಮ ನಾಗರಿಕತೆಯ ಮುಕ್ತತೆಗೆ ಪುರಾವೆಯಾಗಿದೆ. ಈ ಉತ್ಸಾಹದಿಂದ ಪಾರ್ಸಿಗಳು ಇಲ್ಲಿಗೆ ಬಂದರು. ಮತ್ತು ಇಂದಿಗೂ ಪಾರ್ಸಿ ಸಮುದಾಯವು ಭಾರತದಲ್ಲಿ ಬಹಳ ಹೆಮ್ಮೆಯಿಂದ ಅಭಿವೃದ್ಧಿ ಹೊಂದುತ್ತಿದೆ. ಯಹೂದಿಗಳು ಇಲ್ಲಿಗೆ ಬಂದು ಭಾರತದ ಭಾಗವಾದರು. ವಿಶ್ವದ ಪ್ರತಿಯೊಂದು ಸಮಾಜ, ಪ್ರತಿಯೊಂದು ದೇಶವು ತನ್ನದೇ ಆದ ಸಾಧನೆಗಳನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಅನೇಕ ದೇಶಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳು ಇದ್ದಾರೆ, ಆ ದೇಶಗಳು ತಮ್ಮದೇ ಆದ ಯಶಸ್ಸನ್ನು ಹೊಂದಿವೆ, ಪ್ರಪಂಚದಾದ್ಯಂತದ ಆಲೋಚನೆಗಳು ಮತ್ತು ಕಲೆಯನ್ನು ಸ್ವಾಗತಿಸುವುದು ಮತ್ತು ಗೌರವವನ್ನು ನೀಡುವುದು-, ಇದು ನಮ್ಮ ಸಂಸ್ಕೃತಿಯ ಶಕ್ತಿಯಾಗಿದೆ. ಆದ್ದರಿಂದ, ಒಟ್ಟಾಗಿ, ನಾವು ಪ್ರತಿ ಸಂಸ್ಕೃತಿಯ ವಿವಿಧ ದೇಶಗಳ ಸಾಧನೆಗಳಿಗೆ ಸಂಬಂಧಿಸಿದ ಅತ್ಯುತ್ತಮ ವಿಷಯ ಸಾಮಗ್ರಿಯನ್ನು ನಿರ್ಮಾಣ ಮಾಡಬಹುದು. ಇದು ಜಾಗತಿಕ ಸಂಪರ್ಕದ ನಮ್ಮ ಚಿಂತನೆಯನ್ನು/ದೃಷ್ಟಿಕೋನವನ್ನು ಬಲಪಡಿಸುತ್ತದೆ.
ಸ್ನೇಹಿತರೇ,
ಇಂದು, ನಾನು ವಿಶ್ವದ ಜನರಿಗೆ, ಭಾರತದ ಹೊರಗಿನ ಸೃಜನಶೀಲ ಪ್ರಪಂಚದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ, ನೀವು ಭಾರತದೊಂದಿಗೆ ಸಂಪರ್ಕ ಸಾಧಿಸಿದಾಗ, ನೀವು ಭಾರತದ ಕಥೆಗಳನ್ನು ತಿಳಿದುಕೊಂಡಾಗ, ಅಂತಹ ಕಥೆಗಳು ನನ್ನ ದೇಶದಲ್ಲಿಯೂ ನಡೆಯುತ್ತವೆ ಎಂಬ ಭಾವನೆಯನ್ನು ನೀವು ಹೊಂದುತ್ತೀರಿ. ನೀವು ಭಾರತದೊಂದಿಗೆ ಬಹಳ ಸ್ವಾಭಾವಿಕ ಸಹಜ ಸಂಪರ್ಕವನ್ನು ಅನುಭವಿಸುತ್ತೀರಿ, ಆಗ ಭಾರತದಲ್ಲಿ ರಚಿಸುವ ನಮ್ಮ ಮಂತ್ರವು ನಿಮಗೆ ಹೆಚ್ಚು ಸ್ವಾಭಾವಿಕವಾಗಿ ತೋರುತ್ತದೆ.
ಸ್ನೇಹಿತರೇ,
ಇದು ಭಾರತದಲ್ಲಿ ಕಿತ್ತಳೆ ಆರ್ಥಿಕತೆಯ ಉದಯದ ಕಾಲಘಟ್ಟವಾಗಿದೆ. ವಿಷಯ, ಸೃಜನಶೀಲತೆ ಮತ್ತು ಸಂಸ್ಕೃತಿ – ಇವು ಕಿತ್ತಳೆ ಆರ್ಥಿಕತೆಯ ಮೂರು ಸ್ತಂಭಗಳಾಗಿವೆ. ಭಾರತೀಯ ಚಲನಚಿತ್ರಗಳು ಈಗ ವಿಶ್ವದ ಮೂಲೆ ಮೂಲೆಯನ್ನು ತಲುಪುತ್ತಿವೆ. ಇಂದು ಭಾರತೀಯ ಚಲನಚಿತ್ರಗಳು ನೂರಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗುತ್ತಿವೆ. ವಿದೇಶಿ ಪ್ರೇಕ್ಷಕರು ಈಗ ಭಾರತೀಯ ಚಲನಚಿತ್ರಗಳನ್ನು ಕೇವಲ ಮೇಲ್ನೋಟಕ್ಕೆ ನೋಡುವುದಲ್ಲ, ಬದಲು ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಇಂದು ಹೆಚ್ಚಿನ ಸಂಖ್ಯೆಯ ವಿದೇಶಿ ವೀಕ್ಷಕರು ಉಪಶೀರ್ಷಿಕೆಗಳೊಂದಿಗೆ ಭಾರತೀಯ ವಿಷಯಸಾಮಗ್ರಿಗಳನ್ನು ವೀಕ್ಷಿಸುತ್ತಿದ್ದಾರೆ. ಭಾರತದಲ್ಲಿ ಒಟಿಟಿ ಉದ್ಯಮವು ಕಳೆದ ಕೆಲವು ವರ್ಷಗಳಲ್ಲಿ 10 ಪಟ್ಟು ಬೆಳವಣಿಗೆಯನ್ನು ತೋರಿಸಿದೆ. ಪರದೆಯ ಗಾತ್ರವು ಚಿಕ್ಕದಾಗಿರಬಹುದು, ಆದರೆ ವ್ಯಾಪ್ತಿ ಅನಂತವಾಗಿದೆ. ಪರದೆಯು ಸೂಕ್ಷ್ಮವಾಗುತ್ತಿದೆ ಆದರೆ ಸಂದೇಶವು ಮೆಗಾ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ಭಾರತೀಯ ಆಹಾರವು ವಿಶ್ವದ ಆಯ್ಕೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಾರತದ ಹಾಡುಗಳು ವಿಶ್ವದ ಗುರುತಾಗುತ್ತವೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೇ,
ಭಾರತದ ಸೃಜನಶೀಲ ಆರ್ಥಿಕತೆಯು ಮುಂಬರುವ ವರ್ಷಗಳಲ್ಲಿ ಜಿಡಿಪಿಗೆ ತನ್ನ ಕೊಡುಗೆಯನ್ನು ಹೆಚ್ಚಿಸಬಹುದು. ಇಂದು ಭಾರತವು ಚಲನಚಿತ್ರ ಉತ್ಪಾದನೆ, ಡಿಜಿಟಲ್ ವಿಷಯ, ಗೇಮಿಂಗ್, ಫ್ಯಾಷನ್ ಮತ್ತು ಸಂಗೀತದ ಜಾಗತಿಕ ತಾಣವಾಗುತ್ತಿದೆ. ಲೈವ್ ಕನ್ಸರ್ಟ್ ಗಳಿಗೆ ಸಂಬಂಧಿಸಿದ ಉದ್ಯಮಕ್ಕೆ ನಮ್ಮ ಮುಂದೆ ಅನೇಕ ಸಾಧ್ಯತೆಗಳಿವೆ. ಇಂದು ಜಾಗತಿಕ ಅನಿಮೇಷನ್ ಮಾರುಕಟ್ಟೆಯ ಗಾತ್ರವು ನಾಲ್ಕು ನೂರ ಮೂವತ್ತು ಬಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ. ಮುಂದಿನ 10 ವರ್ಷಗಳಲ್ಲಿ ಇದು ದ್ವಿಗುಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಭಾರತದ ಅನಿಮೇಷನ್ ಮತ್ತು ಗ್ರಾಫಿಕ್ಸ್ ಉದ್ಯಮಕ್ಕೆ ಇದು ದೊಡ್ಡ ಅವಕಾಶವಾಗಿದೆ.
ಸ್ನೇಹಿತರೇ,
ಆರೆಂಜ್ (ಕಿತ್ತಳೆ) ಆರ್ಥಿಕತೆಯ ಈ ಉತ್ತುಂಗದಲ್ಲಿ, ವೇವ್ಸ್ ನ ಈ ವೇದಿಕೆಯಿಂದ ದೇಶದ ಪ್ರತಿಯೊಬ್ಬ ಯುವ ಸೃಜನಶೀಲ ವ್ಯಕ್ತಿಗೆ ನಾನು ಹೇಳಲು ಬಯಸುತ್ತೇನೆ ಏನೆಂದರೆ, ನೀವು ಗುವಾಹಟಿಯ ಸಂಗೀತಗಾರರಾಗಿರಲಿ, ಕೊಚ್ಚಿಯ ಪಾಡ್ ಕಾಸ್ಟರ್ ಆಗಿರಲಿ, ಬೆಂಗಳೂರಿನಲ್ಲಿ ಗೇಮ್ ಡಿಸೈನರ್ ಆಗಿರಲಿ ಅಥವಾ ಪಂಜಾಬ್ ನ ಚಲನಚಿತ್ರ ನಿರ್ಮಾಪಕರಾಗಿರಲಿ, ನೀವೆಲ್ಲರೂ ಭಾರತದ ಆರ್ಥಿಕತೆಯಲ್ಲಿ ಹೊಸ ಅಲೆಯನ್ನು ತರುತ್ತಿದ್ದೀರಿ – ಅದು ಸೃಜನಶೀಲತೆಯ ಅಲೆ, ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಉತ್ಸಾಹದಿಂದ ಪ್ರೇರೇಪಿಸಲ್ಪಡುವ ಅಲೆ. ಮತ್ತು ನಿಮ್ಮ ಪ್ರತಿಯೊಂದು ಪ್ರಯತ್ನದಲ್ಲೂ ನಮ್ಮ ಸರ್ಕಾರವೂ ನಿಮ್ಮೊಂದಿಗೆ ಇದೆ. ಸ್ಕಿಲ್ ಇಂಡಿಯಾದಿಂದ ಸ್ಟಾರ್ಟ್ ಅಪ್ ಬೆಂಬಲದವರೆಗೆ, ಎವಿಜಿಸಿ ಉದ್ಯಮ ನೀತಿಗಳಿಂದ ಹಿಡಿದು ವೇವ್ಸ್ ನಂತಹ ವೇದಿಕೆಗಳವರೆಗೆ, ನಿಮ್ಮ ಕನಸುಗಳನ್ನು ಪ್ರತಿ ಹಂತದಲ್ಲೂ ನನಸಾಗಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ಆಲೋಚನೆಗಳು ಮತ್ತು ಕಲ್ಪನೆಗೆ ಮೌಲ್ಯವಿರುವ ವಾತಾವರಣವನ್ನು ನಾವು ಸೃಷ್ಟಿಸುತ್ತಿದ್ದೇವೆ. ಇದು ಹೊಸ ಕನಸುಗಳಿಗೆ ಜನ್ಮ ನೀಡುತ್ತದೆ ಮತ್ತು ಆ ಕನಸುಗಳನ್ನು ಸಾಕಾರಗೊಳಿಸುವ ಶಕ್ತಿಯನ್ನು ನೀಡುತ್ತದೆ. ವೇವ್ಸ್ ಶೃಂಗಸಭೆಯ ಮೂಲಕ ನೀವು ದೊಡ್ಡ ವೇದಿಕೆಯನ್ನು ಸಹ ಪಡೆಯುತ್ತೀರಿ. ಅದು ಸೃಜನಶೀಲತೆ ಮತ್ತು ಕೋಡಿಂಗ್ ಜೊತೆಯಲ್ಲಿ ಸಾಗುವ ವೇದಿಕೆ, ಅಲ್ಲಿ ಸಾಫ್ಟ್ವೇರ್ ಮತ್ತು ಕಥೆ ಹೇಳುವಿಕೆ ಒಟ್ಟಿಗೆ ನಡೆಯುತ್ತದೆ, ಅಲ್ಲಿ ಕಲೆ ಮತ್ತು ವರ್ಧಿತ ರಿಯಾಲಿಟಿ ಜೊತೆಗೆ ನಡೆಯುತ್ತದೆ. ಈ ವೇದಿಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ, ದೊಡ್ಡ ಕನಸು ಕಾಣಿರಿ ಮತ್ತು ಅವುಗಳನ್ನು ಪೂರೈಸಲು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿ.
ಸ್ನೇಹಿತರೇ,
ವಿಷಯ ಸಾಮಗ್ರಿ ನಿರ್ಮಾಪಕರಾದ ನಿಮ್ಮ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಮತ್ತು ಅದಕ್ಕೆ ಒಂದು ಕಾರಣವಿದೆ. ಯುವಜನರ ಉತ್ಸಾಹದಲ್ಲಿ, ಅವರ ಕೆಲಸದ ಶೈಲಿಯಲ್ಲಿ, ಅವುಗಳಿಗೆ ಯಾವುದೇ ಮಿತಿಗಳಿಲ್ಲ, ಯಾವುದೇ ಹೊರೆ ಅಥವಾ ಗಡಿಗಳಿಲ್ಲ, ಅದರಿಂದಾಗಿಯೇ ನಿಮ್ಮ ಸೃಜನಶೀಲತೆ ಸಂಪೂರ್ಣವಾಗಿ ಮುಕ್ತವಾಗಿ ಹರಿಯುತ್ತದೆ, ಅದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ನಾನು ಇತ್ತೀಚೆಗೆ ಅನೇಕ ಯುವ ವಿಷಯ ಸಾಮಗ್ರಿ ತಯಾರಕರು, ಗೇಮರ್ಗಳು ಮತ್ತು ಅಂತಹ ಅನೇಕ ಜನರೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸಿದ್ದೇನೆ. ನಾನು ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಸೃಜನಶೀಲತೆಯನ್ನು ನೋಡುತ್ತಲೇ ಇರುತ್ತೇನೆ, ನಿಮ್ಮ ಶಕ್ತಿಯನ್ನು ನಾನು ಅನುಭವಿಸುತ್ತೇನೆ, ಇಂದು ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವಾಗ, ಅದೇ ಸಮಯದಲ್ಲಿ ನಮ್ಮ ಸೃಜನಶೀಲತೆಯ ಹೊಸ ಆಯಾಮಗಳು ಹೊರಹೊಮ್ಮುತ್ತಿರುವುದು ಕಾಕತಾಳೀಯವಲ್ಲ. ರೀಲ್ ಗಳು, ಪಾಡ್ ಕಾಸ್ಟ್ ಗಳು, ಆಟಗಳು, ಅನಿಮೇಷನ್, ನವೋದ್ಯಮ, ಎಆರ್-ವಿಆರ್ ನಂತಹ ಸ್ವರೂಪಗಳು/ಮಾದರಿಗಳಲ್ಲಿ, ನಮ್ಮ ಯುವ ಮನಸ್ಸುಗಳು- ಈ ಪ್ರತಿಯೊಂದು ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ನಿಜವಾದ ಅರ್ಥದಲ್ಲಿ, ವೇವ್ಸ್ ನಿಮ್ಮ ಪೀಳಿಗೆಗಾಗಿ, ಇದರಿಂದ ನಿಮ್ಮ ಶಕ್ತಿ ಮತ್ತು ದಕ್ಷತೆಯೊಂದಿಗೆ ಸೃಜನಶೀಲತೆಯ ಈ ಸಂಪೂರ್ಣ ಕ್ರಾಂತಿಯನ್ನು ನೀವು ಮರು ಕಲ್ಪಿಸಿಕೊಳ್ಳಬಹುದು ಮತ್ತು ಮರು ವ್ಯಾಖ್ಯಾನಿಸಬಹುದು.
ಸ್ನೇಹಿತರೇ,
ಸೃಜನಶೀಲತೆಯ ಪ್ರಪಂಚದ ದಿಗ್ಗಜರಾದ ನಿಮ್ಮ ಮುಂದೆ, ನಾನು ಮತ್ತೊಂದು ವಿಷಯವನ್ನು ಚರ್ಚಿಸಲು ಬಯಸುತ್ತೇನೆ. ಈ ವಿಷಯ – ಸೃಜನಶೀಲ ಜವಾಬ್ದಾರಿ. 21 ನೇ ಶತಮಾನವು ತಂತ್ರಜ್ಞಾನ ಚಾಲಿತ ಶತಮಾನ ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಂತ್ರಜ್ಞಾನದ ಪಾತ್ರವು ನಿರಂತರವಾಗಿ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಮಾನವ ಸಂವೇದನೆಗಳನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಪ್ರಯತ್ನಗಳು ಬೇಕಾಗುತ್ತವೆ. ಸೃಜನಶೀಲ ಜಗತ್ತು ಮಾತ್ರ ಇದನ್ನು ಮಾಡಬಹುದು. ನಾವು ಮನುಷ್ಯರನ್ನು ರೋಬೋಟ್ ಗಳಾಗಲು ಬಿಡಬೇಕಾಗಿಲ್ಲ. ನಾವು ಮಾನವರನ್ನು ಹೆಚ್ಚು ಹೆಚ್ಚು ಸಂವೇದನಾಶೀಲರನ್ನಾಗಿ ಮಾಡಬೇಕು; ನಾವು ಅವರನ್ನು ಹೆಚ್ಚು ಸಮೃದ್ಧಗೊಳಿಸಬೇಕು. ಮಾನವರ ಈ ಸಮೃದ್ಧಿ ಮಾಹಿತಿಯ ಪರ್ವತಗಳಿಂದ ಬರುವುದಿಲ್ಲ, ಇದು ತಂತ್ರಜ್ಞಾನದ ವೇಗ ಮತ್ತು ವ್ಯಾಪ್ತಿಯಿಂದ ಬರುವುದಿಲ್ಲ, ಇದಕ್ಕಾಗಿ ನಾವು ಹಾಡುಗಳು, ಸಂಗೀತ, ಕಲೆ, ನೃತ್ಯಕ್ಕೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ, ಇವು ಮಾನವ ಸಂವೇದನೆಯನ್ನು ಜೀವಂತವಾಗಿರಿಸುತ್ತಿವೆ. ನಾವು ಅದನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ನಾವು ಇನ್ನೂ ಒಂದು ಪ್ರಮುಖ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ನಮ್ಮ ಯುವ ಪೀಳಿಗೆಯನ್ನು ಕೆಲವು ಮಾನವ ವಿರೋಧಿ ಆಲೋಚನೆಗಳಿಂದ ರಕ್ಷಿಸಬೇಕಾಗಿದೆ. ವೇವ್ಸ್ ಈ ಕೆಲಸವನ್ನು ಮಾಡಬಲ್ಲ ಒಂದು ವೇದಿಕೆಯಾಗಿದೆ. ನಾವು ಈ ಜವಾಬ್ದಾರಿಯಿಂದ ಹಿಂದೆ ಸರಿದರೆ, ಅದು ಯುವ ಪೀಳಿಗೆಗೆ ತುಂಬಾ ಅಪಾಯಕಾರಿ.
ಸ್ನೇಹಿತರೇ,
ಇಂದು ತಂತ್ರಜ್ಞಾನವು ಸೃಜನಶೀಲ ಜಗತ್ತಿಗೆ ಮುಕ್ತ ಆಕಾಶವನ್ನು ಸೃಷ್ಟಿಸಿದೆ, ಆದ್ದರಿಂದ ಈಗ ಜಾಗತಿಕ ಸಮನ್ವಯವು ಅಷ್ಟೇ ಮುಖ್ಯವಾಗಿದೆ. ಈ ವೇದಿಕೆಯು ನಮ್ಮ ಸೃಜನಶೀಲ ಮನಸ್ಸುಗಳನ್ನು ಜಾಗತಿಕ ಕಥೆ ಹೇಳುವವರೊಂದಿಗೆ, ನಮ್ಮ ಆನಿಮೇಟರ್ ಗಳನ್ನು ಜಾಗತಿಕ ಚಿಂತನಶೀಲರೊಂದಿಗೆ ಸಂಪರ್ಕಿಸುತ್ತದೆ ಮತ್ತು ನಮ್ಮ ಗೇಮರ್ ಗಳನ್ನು ಜಾಗತಿಕ ಚಾಂಪಿಯನ್ ಗಳಾಗಿ ಪರಿವರ್ತಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಭಾರತವನ್ನು ನಿಮ್ಮ ವಿಷಯಸಾಮಗ್ರಿಗಳ ಆಟದ ಮೈದಾನವನ್ನಾಗಿ ಮಾಡಲು ನಾನು ಎಲ್ಲಾ ಜಾಗತಿಕ ಹೂಡಿಕೆದಾರರು, ಜಾಗತಿಕ ಸೃಜನಶೀಲರನ್ನು ಆಹ್ವಾನಿಸುತ್ತೇನೆ. ಪ್ರಪಂಚದ ಸೃಜನಶೀಲ ವ್ಯಕ್ತಿಗಳಿಗೆ – ದೊಡ್ಡ ಕನಸು ಕಾಣಿರಿ, ಮತ್ತು ನಿಮ್ಮ ಕಥೆಯನ್ನು ಹೇಳಿ. ಹೂಡಿಕೆದಾರರಿಗೆ – ಪ್ಲಾಟ್ ಫಾರ್ಮ್ ಗಳಲ್ಲಿ ಮಾತ್ರವಲ್ಲ, ಜನರಲ್ಲಿ ಹೂಡಿಕೆ ಮಾಡಿ. ಭಾರತೀಯ ಯುವಜನರಿಗೆ – ನಿಮ್ಮ ಒಂದು ಶತಕೋಟಿ; ಇದುವರೆಗೂ ಹೇಳದಿರದ ಕಥೆಗಳನ್ನು ಜಗತ್ತಿಗೆ ಹೇಳಿ!
ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೆ ಮೊದಲ ವೇವ್ಸ್ ಶೃಂಗಸಭೆಗಾಗಿ ಶುಭ ಹಾರೈಸುತ್ತೇನೆ, ತುಂಬಾ ಧನ್ಯವಾದಗಳು. ನಮಸ್ಕಾರ.
*****
Addressing the @WAVESummitIndia in Mumbai. It highlights India's creative strengths on a global platform. https://t.co/U4WQ4Ujv8q
— Narendra Modi (@narendramodi) May 1, 2025
A wave of culture, creativity and universal connect. pic.twitter.com/FpfM4THC5y
— PMO India (@PMOIndia) May 1, 2025
India, with a billion-plus population, is also a land of a billion-plus stories. pic.twitter.com/qtijqtd5Ii
— PMO India (@PMOIndia) May 1, 2025
Create in India, create for the world. pic.twitter.com/cycxbiZZo7
— PMO India (@PMOIndia) May 1, 2025
The dawn of the Orange Economy in India. pic.twitter.com/g2hEX8fjHL
— PMO India (@PMOIndia) May 1, 2025
Even though the screen size is getting smaller, the scope is becoming infinite. pic.twitter.com/n0akwUrv3C
— PMO India (@PMOIndia) May 1, 2025
Today, India is emerging as a global hub for film production, digital content, gaming, fashion, music and live concerts. pic.twitter.com/ubo3q8tx7S
— PMO India (@PMOIndia) May 1, 2025
To the creators of the world — dream big and tell your story.
— PMO India (@PMOIndia) May 1, 2025
To investors — invest not just in platforms, but in people.
To Indian youth — tell your one billion untold stories to the world: PM @narendramodi pic.twitter.com/g7rwE4urf8