Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಲೋವಾಕ್ ಗಣರಾಜ್ಯದ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

ಸ್ಲೋವಾಕ್ ಗಣರಾಜ್ಯದ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ


ಐತಿಹಾಸಿಕ ಬ್ರಾಟಿಸ್ಲಾವಾ ಕೋಟೆ ಕಟ್ಟಡದಲ್ಲಿ ಇಂದು ಸ್ಲೋವಾಕ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ರಾಬರ್ಟ್ ಫಿಕೊ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪಧಾನಮಂತ್ರಿಯವರು ಆಗಮಿಸಿದಾಗ, ಅವರಿಗೆ ಸಂಭ್ರಮದ ಔಪಚಾರಿಕ ಸ್ವಾಗತ ನೀಡಲಾಯಿತು.

ಇಬ್ಬರೂ ನಾಯಕರು ಪರಸ್ಪರ ಮುಖಾಮುಖಿ (ಟೆಟ್-ಎ-ಟೆಟ್)  ಮತ್ತು ನಿಯೋಗ ಮಟ್ಟದ ಸ್ವರೂಪಗಳಲ್ಲಿ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಸಂಬಂಧವನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸುವುದನ್ನು ಅವರು ಸ್ವಾಗತಿಸಿದರು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಸಂಕೇತಿಸುತ್ತದೆ, ಇದು ಎರಡೂ ದೇಶಗಳ ನಡುವಿನ ಹಂಚಿಕೆಯ ಮೌಲ್ಯಗಳು ಮತ್ತು ಕಾಲಾನುಕ್ರಮದಲ್ಲಿ ಸಾಗಿ ಬಂದ ಸ್ನೇಹಾಚಾರವನ್ನು ಪ್ರತಿಬಿಂಬಿಸುತ್ತದೆ.

ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಬಾಹ್ಯಾಕಾಶ, ನಾಗರಿಕ ಪರಮಾಣು, ನವೀಕರಿಸಬಹುದಾದ ಇಂಧನ, ಡಿಜಿಟಲ್ ನಾವೀನ್ಯತೆ, ಶೈಕ್ಷಣಿಕ ವಿನಿಮಯ, ಸಂಸ್ಕೃತಿ ಮತ್ತು ಪ್ರತಿಭಾ ಚಲನಶೀಲತೆ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಪರಾಮರ್ಶಿಸಿದರು. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಎ.ಐ. ಮತ್ತು ಸೂಪರ್‌ಕಂಪ್ಯೂಟರ್‌ಗಳಂತಹ ಹೊಸ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ಅವರು ಅವಕಾಶ ಮಾರ್ಗಗಳನ್ನು ಅನ್ವೇಷಿಸಿದರು.

ಏಪ್ರಿಲ್ 2025ರಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಸ್ಲೋವಾಕಿಯಾ ಭಾರತಕ್ಕೆ ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಫಿಕೊ ಅವರಿಗೆ ಧನ್ಯವಾದ ಅರ್ಪಿಸಿದರು. ಇದು ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳ ಬಲವಾದ ಬದ್ಧತೆಯನ್ನು ಒತ್ತಿಹೇಳುತ್ತದೆ. ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಬಹುಪಕ್ಷೀಯತೆಗೆ ಮತ್ತು ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆಗೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಇತ್ತೀಚಿನ ಭಾರತ-ಇಯು ಶೃಂಗಸಭೆಯ ಉತ್ತೇಜಕ ಫಲಿತಾಂಶಗಳ ಬಗ್ಗೆ ನಾಯಕರು ಅತ್ಯಂತ ತೃಪ್ತಿ ವ್ಯಕ್ತಪಡಿಸಿದರು. ಬಹಳ ಮಹತ್ವದ ಭಾರತ-ಇಯು ಎಫ್.ಟಿ.ಎ. ಯಶಸ್ವಿ ಮುಕ್ತಾಯ ಮತ್ತು ಜಂಟಿ ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿಯ ಅಂಗೀಕಾರವನ್ನು ಅವರು ಸ್ವಾಗತಿಸಿದರು, ಇದು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಆಳಗೊಳಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ.

ಮಾತುಕತೆಗಳ ನಂತರ, ಡಿಜಿಟಲ್ ತಂತ್ರಜ್ಞಾನಗಳು, ಕಾರ್ಮಿಕ ವಲಸೆ, ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮತ್ತು ಆಡಿಯೋ-ವಿಶುವಲ್ ಸೃಷ್ಟಿ ಕ್ಷೇತ್ರದಲ್ಲಿ ಸಹಕಾರದ ಕುರಿತು ಎಂಒಯುಗಳನ್ನು (ತಿಳುವಳಿಕಾ ಒಡಂಬಡಿಕೆಗಳನ್ನು) ವಿನಿಮಯ ಮಾಡಿಕೊಳ್ಳಲಾಯಿತು. ರಕ್ಷಣೆಯಲ್ಲಿ ಸಹಕಾರವನ್ನು ಉತ್ತೇಜಿಸುವ ಉದ್ದೇಶ ಪತ್ರವನ್ನು ಸಹ ವಿನಿಮಯ ಮಾಡಿಕೊಳ್ಳಲಾಯಿತು. ಕೊಸಿಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭಾರತವು ಕೃತಕ ಬುದ್ಧಿಮತ್ತೆಯಲ್ಲಿ ಮೊಟ್ಟ ಮೊದಲ ಪೀಠವನ್ನು ಸ್ಥಾಪಿಸುವುದಕ್ಕೂ  ಒಪ್ಪಿಕೊಳ್ಳಲಾಯಿತು.

ಪ್ರಧಾನಮಂತ್ರಿ ಫಿಕೊ ಅವರು ಪ್ರಧಾನಮಂತ್ರಿಯವರ ಗೌರವಾರ್ಥವಾಗಿ ಭೋಜನ ಕೂಟವನ್ನು ಆಯೋಜಿಸಿದ್ದರು. ಪ್ರಧಾನಮಂತ್ರಿ ಮೋದಿ ಅವರು ತಮ್ಮ ಆತಿಥೇಯರನ್ನು ಪರಸ್ಪರ ಅನುಕೂಲಕರ ದಿನಾಂಕದಂದು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

 

*****