Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಖೋಲೋ ಇಂಡಿಯಾ ಶಾಲಾ ಕ್ರೀಡಾಕೂಟದ ಪ್ರಥಮ ಆವೃತ್ತಿಗೆ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಂದು ಚಾಲನೆ ನೀಡಿದರು. ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ನಮ್ಮ ಯುವಕರ ಬದುಕಿನಲ್ಲಿ ಕ್ರೀಡೆ ಕೇಂದ್ರ ಸ್ಥಾನ ಪಡೆಯಬೇಕು ಎಂದು ಹೇಳಿದರು. ವ್ಯಕ್ತಿತ್ವ ವಿಕಾಸಕ್ಕೆ ಕ್ರೀಡೆ ಮಹತ್ವದ ಸಾಧನ ಎಂದೂ ಅವರು ಹೇಳಿದರು.

ಯುವಜನರು ತಮ್ಮ ಬಿಡುವಿಲ್ಲದ ಕಾರ್ಯಭಾರದ ನಡುವೆಯೂ ಕ್ರೀಡೆಗೆ ಸಮಯ ಮೀಸಲಿಡುವಂತೆ ಅವರು ಆಗ್ರಹಿಸಿದರು. ಸಮಾರಂಭದಲ್ಲಿ ಹಾಜರಿದ್ದ ಪ್ರಮುಖ ಕ್ರೀಡಾಪಟುಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಅವರುಗಳು ಕೂಡ ಹಲವು ಅಡೆತಡೆಗಳನ್ನು ಎದುರಿಸಿದರು, ಆದರೆ, ಅವರು ಹತಾಶರಾಗಲಿಲ್ಲ ಮತ್ತು ಸಾಧನೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರೆಂದರು. ಭಾರತದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂದು ಪ್ರಧಾನಿ ಹೇಳಿದರು. ನಮ್ಮದು ಯುವಜನರಿಂದ ತುಂಬಿದ ರಾಷ್ಟ್ರವಾಗಿದ್ದು, ನಾವು ಹಿಂದೆಂದಿಗಿಂತ ಕ್ರೀಡೆಯಲ್ಲಿ ಉತ್ತಮವಾದ್ದನ್ನು ಸಾಧಿಸಬಹುದು ಎಂದರು.

ವಿಶ್ವ ವೇದಿಕೆಗಳಲ್ಲಿ ಭಾರತದ ಪ್ರಗತಿಯ ಮಹತ್ವವನ್ನು ವಿವರಿಸಿದ ಅವರು, ಇದು ಬಲಿಷ್ಠ ಆರ್ಥಿಕತೆ ಮತ್ತು ಬಲವಾದ ಸೇನೆಗೆ ಮಾತ್ರ ಸೀಮಿತವಲ್ಲ ಎಂದರು. ಇದರಲ್ಲಿ ಭಾರತೀಯರು ತಮ್ಮನ್ನು ತಾವು ವಿಜ್ಞಾನಿಗಳಾಗಿ, ಕಲಾವಿದರಾಗಿ, ಕ್ರೀಡಾಪಟುಗಳು ಇತ್ಯಾದಿಯಲ್ಲಿ ಗುರುತಿಸಿಕೊಂಡಿರುವುದೂ ಸೇರುತ್ತದೆ ಎಂದರು. ತಮಗೆ ಭಾರತದ ಯುವಜನರ ಬಗ್ಗೆ ನಂಬಿಕೆಯಿದ್ದು, ಭಾರತ ಈ ಎತ್ತರವನ್ನು ಎರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಖೇಲೋ ಇಂಡಿಯಾ ಪದಕ ಗೆಲ್ಲುವುದಕ್ಕೆ ಮಾತ್ರವೇ ಅಲ್ಲ ಎಂದೂ ಅವರು ಹೇಳಿದರು. ಇದು ಹೆಚ್ಚು ಆಡುವುದಕ್ಕೆ ಬಲ ನೀಡುವ ಸಾಮೂಹಿಕ ಚಳವಳಿ ಎಂದೂ ಅವರು ಹೇಳಿದರು. ದೇಶದಾದ್ಯಂತ ಕ್ರೀಡೆಯನ್ನು ಜನಪ್ರಿಯಗೊಳಿಸಲು ನಾವು ಪ್ರತಿಯೊಂದು ಅಂಶದ ಬಗ್ಗೆಯೂ ಗಮನ ಹರಿಸಬೇಕು ಎಂದರು. ಗ್ರಾಮೀಣ ಭಾರತದಿಂದ ಮತ್ತು ಸಣ್ಣ ನಗರಗಳಿಂದ ಬಂದಿರುವ ಯುವಜನರು ಕ್ರೀಡಾ ಪಟುಗಳಾಗಿ ಸಾಧನೆ ಮಾಡುತ್ತಿರುವುದನ್ನು ನೋಡಲು ಸಂತಸವಾಗುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಈ ಯುವಜನರಿಗೆ ಬೆಂಬಲದ ಅಗತ್ಯವಿದ್ದು, ಸರ್ಕಾರ ಅದನ್ನು ಒದಗಿಸಲು ಬಯಸುತ್ತದೆ ಎಂದರು.

ಯಾರು ಕ್ರೀಡೆಯನ್ನು ಪ್ರೀತಿಸುತ್ತಾರೋ ಅವರು ಉತ್ಸಾಹದಿಂದ ಆಡುತ್ತಾರೆ, ಅವರು ಹಣ ಅಥವಾ ಪ್ರಶಸ್ತಿಗೆ ಆಡುವುದಿಲ್ಲಎಂದು ಪ್ರಧಾನಿ ಹೇಳಿದರು. ಹೀಗಾಗಿಯೇ ಅಥ್ಲೆಟಿಕ್ಸ್ ವಿಶೇಷವೆನಿಸಿದೆ ಎಂದರು. ಭಾರತೀಯ ಕ್ರೀಡಾಪಟು ಜಯ ಸಾಧಿಸಿ, ಆಕೆ ಅಥವಾ ಆತ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಾಗ, ಅದು ವಿಶೇಷ ಅನುಭವ ನೀಡುತ್ತದೆ ಮತ್ತು ಅದು ಇಡೀ ದೇಶವನ್ನೇ ಉತ್ತೇಜಿಸುತ್ತದೆ ಎಂದು ಪ್ರಧಾನಿ ಹೇಳಿದರು.