ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐ.ಎಲ್.ಒ.) ಶಾಂತಿ ಮತ್ತು ಪುನರುಜ್ಜೀವನಕ್ಕಾಗಿ ಉದ್ಯೋಗ ಮತ್ತು ಉತ್ತಮ ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದ ಶಿಫಾರಸು (ಸಂಖ್ಯೆ 205 ) ನ್ನು ಸಂಸತ್ತಿನೆದುರು ಮಂಡಿಸಲು ಅಂಗೀಕಾರ ನೀಡಿತು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಒ.) ಯು 2015 ರ ಜೂನ್ ತಿಂಗಳಲ್ಲಿ ಜಿನೇವಾದಲ್ಲಿ ನಡೆದ ತನ್ನ 106 ನೇ ಅಧಿವೇಶನದಲ್ಲಿ ಈ ಶಿಫಾರಸ್ಸನ್ನು ಅಂಗೀಕರಿಸಿತ್ತು, ಮತ್ತು ಭಾರತವು ಈ ಶಿಫಾರಸು ಅಂಗೀಕಾರಕ್ಕೆ ಬಂಬಲ ನೀಡಿತ್ತು.
ಐ.ಎಲ್.ಓ. ದ ಪ್ರತೀ ಸದಸ್ಯ ರಾಷ್ಟ್ರವೂ ಇದನ್ನು ಸೂಕ್ತ ಪ್ರಾಧಿಕಾರದೆದುರು ಮಂಡಿಸುವ ಅಗತ್ಯವಿತ್ತು. (ಭಾರತದಲ್ಲಿ ಅದು ಸಂಸತ್ತಿನೆದುರು) . ಈ ಶಿಫಾರಸ್ಸನ್ನು ಮಾಹಿತಿಗಾಗಿ ಮತ್ತು ಅಂಗೀಕಾರಕ್ಕಾಗಿ ಸಂಸತ್ತಿನೆದುರು ಇಡುವುದರಿಂದ ತಕ್ಷಣಕ್ಕೆ ಯಾವುದೇ ನಿಬಂಧನೆ/ ನಿರ್ಬಂಧಗಳಾಗಲೀ ಉದ್ಭವಿಸುವುದಿಲ್ಲ. ಐ.ಎಲ್.ಓ. ಶಿಫಾರಸು ರಾಷ್ಟ್ರೀಯ ನೀತಿ ಪ್ರಕ್ರಿಯೆಯಲ್ಲಿ ಮಾರ್ಗದರ್ಶಿ ತತ್ವವೇ ಹೊರತು ಕಟ್ಟು ನಿಟ್ಟಿನ ಬದ್ದತೆಯನ್ನು ಒಳಗೊಂಡಿಲ್ಲ.
ಈ ಶಿಫಾರಸು ಸದಸ್ಯ ರಾಷ್ಟ್ರಗಳಿಗೆ ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಬಿಕ್ಕಟ್ಟು ಹಾಗು ವಿಪತ್ತುಗಳ ಸಂಧರ್ಭದಲ್ಲಿ ಅವುಗಳ ತಡೆತಟ್ಟುವಿಕೆ, ಅವುಗಳಿಂದ ಚೇತರಿಸಿಕೊಳ್ಳುವಿಕೆ, ಶಾಂತಿ ಮತ್ತು ಪುನಶ್ಚೇತನ ಉದ್ದೇಶಕ್ಕಾಗಿ ಉತ್ತಮ ಕೆಲಸ ದ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿಗಳನ್ನು ಒದಗಿಸುತ್ತವೆ.
ಇದು ಎಲ್ಲಾ ಮಾನವ ಹಕ್ಕುಗಳ ಬಗ್ಗೆ ಗೌರವ ಮತ್ತು ಕಾನೂನಿನ ಬಗ್ಗೆ ಗೌರವದ ಅಗತ್ಯವನ್ನು ಪ್ರತಿಪಾದಿಸುತ್ತದೆ, ಉತ್ತಮ ಕೆಲಸ ಮತ್ತು ಉದ್ಯೋಗದ ಸ್ಥಳದಲ್ಲಿ ಕೆಲಸದ ಮೂಲಭೂತ ಹಕ್ಕುಗಳು ಮತ್ತು ತತ್ವಗಳು ಸೇರಿದಂತೆ ಅವುಗಳಿಗೆ ಸಂಬಂಧಿಸಿದ , ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಬಗ್ಗೆಯೂ ಅದು ಗಮನ ಹರಿಸುತ್ತದೆ.
ಈ ಶಿಫಾರಸು ಬಿಕ್ಕಟ್ಟು ತಡೆಯುವ ನಿಟ್ಟಿನಲ್ಲಿಯ ಕ್ರಮವಾಗಿ ಸಾಮಾಜಿಕ ಭದ್ರತೆಯ ಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು ಉದ್ದೇಶಿಸಿದೆ. ಜತೆಗೆ ಅದರ ಪುನರುಜ್ಜೀವನ ಮತ್ತು ಪೂರ್ವದ ಪರಿಸ್ಥಿತಿಯ ಪುನರ್ಸ್ಥಾಪನೆಯೂ ಅಡಕವಾಗಿದೆ. ಶಾಂತಿ, ಬಿಕ್ಕಟ್ಟು ನಿವಾರಣೆ, ಪುನರ್ನಿರ್ಮಾಣ ಮತ್ತು ಪುನಶ್ಚೇತನಕ್ಕೆ ಸಂಬಂಧಿಸಿ ಸಮಗ್ರ ಮತ್ತು ಸೂಕ್ತ ವ್ಯೂಹಾತ್ಮಕ ಕ್ರಮಗಳನ್ನು ಬಹು ಹಂತದ ಮಾದರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸದಸ್ಯರಿಗೆ ಸೂಚಿಸುತ್ತದೆ. ಉದ್ಯೋಗಾವಕಾಶಗಳಿಗಾಗಿ ಸ್ಥಳೀಯ ಆರ್ಥಿಕ ಚೇತರಿಕ ಪ್ರೋತ್ಸಾಹ, ಉತ್ತಮ ಉದ್ಯೋಗಾವಕಾಶಗಳು ಮತ್ತು ಸಾಮಾಜಿಕ –ಆರ್ಥಿಕ ಸಮಗ್ರತೆ, ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ, ಸಹ್ಯ ಅಭಿವೃದ್ಧಿ, ಸಹ್ಯ ಉದ್ಯಮಗಳ ಸ್ಥಾಪನೆ (ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು) , ಉದ್ಯೋಗದಾತರು ಮತ್ತು ಉದ್ಯೋಗಿಗಳ ಸಂಘಟನೆಯ ಸಕ್ರಿಯ ಸಹಭಾಗಿತ್ವಕ್ಕೆ ಉತ್ತೇಜನ ಹಾಗು ಯೋಜನೆ, ಅನುಷ್ಟಾನ, ಮತ್ತು ಪುನರ್ಸ್ಥಾಪನೆ ಹಾಗು ಪುನಶ್ಚೇತನ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲುದಾರಿಕೆ ಉತ್ತೇಜನ ಖಾತ್ರಿಪಡಿಸುವುದು ಇದರಲ್ಲಿ ಒಳಗೊಂಡಿದೆ.
ಶಿಫಾರಸು ಸಂಖ್ಯೆ 205 ,ಬಿಕ್ಕಟ್ಟು ಮತ್ತು ವಿಪತ್ತುಗಳು ಸಂಭವಿಸಿದ ಸಂಧರ್ಭದಲ್ಲಿ ಆರ್ಥಿಕ ಬಿಕ್ಕಟ್ಟು ಬಾಧಿಸುವ ಎಲ್ಲಾ ವಲಯಗಳ ಎಲ್ಲಾ ಕಾರ್ಮಿಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಹಾಗು ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ತಕ್ಷಣದ ಕಾರ್ಯಾಚರಣೆಯ ಕೆಲಸಗಾರರಿಗೂ ಇದು ಅನ್ವಯವಾಗುತ್ತದೆ.