ಪಿಎಂಇಂಡಿಯಾ
ನನ್ನ ಜೊತೆ ಜೋರಾಗಿ ಜಯ ಜಯ ಕೇದಾರ್ ಎಂದು ಹೇಳಿ.
ದೇವಭೂಮಿ ಉತ್ತರಾಖಂಡದ ಎಲ್ಲ ಸೋದರ ಸೋದರಿಯರಿಗೆ ನನ್ನ ಸಾದರ ಪ್ರಣಾಮಗಳು. ಬಾಬಾ ಕೇದಾರ್ ನ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಇಚ್ಛಿಸುತ್ತೇನೆ.
ನಿನ್ನೆ ತಾನೇ ದೇಶದಲ್ಲಿ ದೀಪಾವಳಿಯ ಪವಿತ್ರ ಹಬ್ಬವನ್ನು ಆಚರಿಸಲಾಯಿತು. ಪವಿತ್ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶ-ವಿದೇಶಗಳಲ್ಲಿ ನೆಲೆಸಿರುವ ನಮ್ಮ ಎಲ್ಲ ಸೋದರ ಸೋದರಿಯರಿಗೆ ಕೇದಾರನಾಥನ ಈ ಪವಿತ್ರ ನೆಲದಿಂದ ಅನೇಕಾನೇಕ ಶುಭಾಶಯಗಳನ್ನು ಕೋರುತ್ತೇನೆ.
ಗುಜರಾತ್ ನಂತಹ ಕೆಲವು ರಾಜ್ಯಗಳಲ್ಲಿ ಇಂದು ಹೊಸ ವರ್ಷ ಆರಂಭವಾಗುತ್ತದೆ. ಹೊಸ ವರ್ಷದ ಶುಭಾಶಯಗಳು. ಇಂದು ಹೊಸ ವರ್ಷವನ್ನು ಆರಂಭಿಸುವ ವಿಶ್ವಾದ್ಯಂತ ನೆಲೆಸಿರುವ ಎಲ್ಲ ಕುಟುಂಬಗಳಿಗೂ ನನ್ನ ಕಡೆಯಿಂದ ಹೊಸ ವರ್ಷದ ಬಹಳ ಬಹಳ ಶುಭಾಶಯಗಳು. ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮತ್ತೊಮ್ಮೆ ಕೇದಾರ್ ಬಾಬಾ ನನ್ನನ್ನು ಕರೆಸಿಕೊಂಡಿದ್ದಾನೆ. ಮತ್ತೊಮ್ಮೆ ತನ್ನ ಚರಣಗಳ ಬಳಿ ನನ್ನನ್ನು ಎಳೆದು ತಂದಿದ್ದಾನೆ. ಇಂದು ಪುನಃ ಹಳೆಯ ಪರಿಚಿತ ಜನರು ನನಗೆ ಸಿಕ್ಕರು. ಅವರು ನನ್ನ ವಿಷಯವಾಗಿ ಏನನ್ನು ಕೇಳಿದ್ದರೊ ಅದನ್ನು ಅವರು ಇಂದು ಮತ್ತೆ ನೆನಪಿಸಿದರು.
ಈ ‘ಗರುಡ ಚಟ್ಟೀ’ ಸ್ಥಳದಲ್ಲಿ ಹಿಂದೆ ನನ್ನ ಜೀವನದ ಕೆಲವು ಮಹತ್ವಪೂರ್ಣ ವರ್ಷಗಳನ್ನು ಕಳೆಯುವ ಸೌಭಾಗ್ಯ ನನಗೆ ದೊರಕಿತ್ತು. ಈ ಮಣ್ಣಿನಲ್ಲಿ ನಾನು ಆನಂದದ ಕ್ಷಣಗಳನ್ನು ಕಳೆದಿದ್ದೇನೆ. ಬಹುಶಃ ಕೇದಾರನಾಥನಿಗೆ ತನ್ನ ಚರಣಗಳಲ್ಲಿ ನನ್ನ ಜೀವನ ಕಳೆಯುವುದು ಇಷ್ಟವಿರಲಿಲ್ಲವೇನೊ, ಹಾಗಾಗಿ ನನ್ನನ್ನು ಇಲ್ಲಿಂದ ಹಿಂತಿರುಗಿ ಕಳುಹಿಸಿದ. ಬಹುಶಃ ಒಬ್ಬ ಬಾಬಾನ ಸೇವೆ ಏನು, ನೂರಾ ಇಪ್ಪತ್ತೈದು ಕೋಟಿ ಬಾಬಾಗಳು ದೇಶದಲ್ಲಿದ್ದಾರೆ, ಅವರ ಸೇವೆ ಮಾಡಲಿ ಎಂದು ಆಗಲೇ ಕೇದಾರನಾಥ ನಿರ್ಧರಿಸಿರಬೇಕು. ನಮ್ಮಲ್ಲಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ಹೇಳಲಾಗುತ್ತದೆ. ಆದ್ದರಿಂದ ನಾನೀಗ ನೂರಾ ಇಪ್ಪತ್ತೈದು ಕೋಟಿ ದೇಶವಾಸಿಗಳ ಸೇವೆಯನ್ನೇ ಬಾಬಾನ ಸೇವೆ, ಬದರಿ ವಿಶಾಲ್ ನ ಸೇವೆ, ಮಂದಾಕಿನಿಯ ಸೇವೆ, ತಾಯಿ ಗಂಗೆಯ ಸೇವೆ ಎಂದು ಭಾವಿಸಿದ್ದೇನೆ. ಆದ್ದರಿಂದ ನಾನು ಈ ದಿನ ಮತ್ತೊಮ್ಮೆ ಇಲ್ಲಿಗೆ ಬಂದು ಸಂಕಲ್ಪಬದ್ಧನಾಗಿ ಇಲ್ಲಿಂದ ಹೊಸ ಶಕ್ತಿ ಪಡೆದು ಭೋಲೆ ಬಾಬಾನ ಆಶೀರ್ವಾದ ಪಡೆದುಕೊಂಡು ಸಂಪೂರ್ಣವಾಗಿ ಪವಿತ್ರ ಮನಸ್ಸಿನಿಂದ, ದೃಢ ಸಂಕಲ್ಪದಿಂದ ಮುನ್ನಡೆಯುತ್ತೇನೆ. 2022ಕ್ಕೆ ಭಾರತವು ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾಗುತ್ತದೆ. ಭಾರತವನ್ನು ವಿಶ್ವದಲ್ಲಿ ಉನ್ನತ ಸ್ಥಾನಕ್ಕೇರಿಸುವ ಸಂಕಲ್ಪವು, ಆ ಚೇತನವು ಬಾಬಾನ ಆಶೀರ್ವಾದದಿಂದ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಜಾಗೃತಗೊಳ್ಳುವುದು. ಪ್ರತಿಯೊಬ್ಬ ಭಾರತೀಯನೂ ಆ ಸಂಕಲ್ಪವನ್ನು ನೆರವೇರಿಸಲು ಏಕಾಗ್ರತೆಯಿಂದ ಕಾರ್ಯತತ್ಪರನಾಗುತ್ತಾನೆ.
ಈ ಪವಿತ್ರ ನೆಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಹಲವು ಜೀವಿಗಳು ಬಲಿಯಾದವು. ದೇಶದ ಪ್ರತಿಯೊಂದು ರಾಜ್ಯದಿಂದ ಇಲ್ಲಿಗೆ ಬಂದವರು ಇಲ್ಲಿಯೇ ದೇಹತ್ಯಾಗ ಮಾಡಿ ಕೇದಾರನಾಥನ ಮಣ್ಣಿನಲ್ಲಿ ಲೀನರಾದರು. ಆ ಎಲ್ಲ ಆತ್ಮಗಳಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರು ದೇಶದ ಎಲ್ಲ ರಾಜ್ಯಗಳ ಜನರಾಗಿದ್ದರು. ಆ ಸಮಯದಲ್ಲಿ ನಾನು ಸಂವೇದನಾಶೀಲನಾದದ್ದು ಸಹಜವಾಗಿತ್ತು. ನಾನಾಗ ಬೇರೊಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ, ಬೇರೊಂದು ರಾಜ್ಯದಲ್ಲಿ ತಲೆ ಹಾಕುವ ಹಕ್ಕು ನನಗಿರಲಿಲ್ಲ, ನಾನು ಆ ರೀತಿ ಎಂದಿಗೂ ಯೋಚಿಸುವುದಿಲ್ಲ. ಆದರೆ ನನಗೆ ತಡೆಯಲಾಗಲಿಲ್ಲ. ಒಳ್ಳೆಯದು ಮಾಡಿದೆನೊ, ಕೆಟ್ಟದ್ದನ್ನು ಮಾಡಿದೆನೊ ಎಂಬುದನ್ನು ಇತಿಹಾಸ ನಿರ್ಧರಿಸುತ್ತದೆ. ಆದರೆ ಸಂತ್ರಸ್ತರನ್ನು ತಲುಪುವುದನ್ನು ನನ್ನಿಂದ ತಡೆಯಲು ಆಗದೆ ನಾನು ಇಲ್ಲಿಗೆ ಬಂದಿದ್ದೆ.
ಗುಜರಾತ್ ಸರ್ಕಾರಕ್ಕೆ ಕೇದಾರನಾಥ ಕ್ಷೇತ್ರದ ಪುನರ್ ನಿರ್ಮಾಣದ ಕಾರ್ಯವನ್ನು ವಹಿಸಿ, ದೇಶವಾಸಿಗಳ ಕನಸನ್ನು ನಾನು ಪೂರ್ಣ ಮಾಡುತ್ತೇನೆ ಎಂದು ಆ ಸಂದರ್ಭದಲ್ಲಿ ಅಂದಿನ ಉತ್ತರಾಖಂಡ ಸರ್ಕಾರವನ್ನು ಕೋರಿದ್ದೆ. ಕೊಠಡಿಯಲ್ಲಿ ಕುಳಿತು ಮಾತನಾಡುವಾಗ ಅಂದಿನ ಮುಖ್ಯಮಂತ್ರಿ, ಎಲ್ಲ ಅಧಿಕಾರಿಗಳು ಮೋದಿ ಅವರ ಗುಜರಾತ್ ಸರ್ಕಾರವು ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದು ಒಳ್ಳೆಯದೇ ಆಗಿದೆ ಎಂದು ಇದಕ್ಕೆ ಒಪ್ಪಿಕೊಂಡರು. ನಾನು
ಸಂತೋಷದಿಂದ ಹೊರಗೆ ಬಂದು ಮಾಧ್ಯಮದವರ ಮುಂದೆಯೂ ನನ್ನ ಸಂಕಲ್ಪವನ್ನು ವ್ಯಕ್ತಪಡಿಸಿದೆ. ಟಿವಿಯಲ್ಲಿ ಮೋದಿ ಈಗ ಕೇದಾರನಾಥ ಕ್ಷೇತ್ರದ ಪುನರ್ ನಿರ್ಮಾಣದ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಪ್ರಸಾರವಾಯಿತು. ದೆಹಲಿಯಲ್ಲಿ ಬಿರುಗಾಳಿಯೇ ಎದ್ದಿತು. ಗುಜರಾತ್ ನ ಮುಖ್ಯಮಂತ್ರಿ ಕೇದಾರನಾಥ ನ್ನು ಸಹ ತಲುಪಿದ್ದಾನೆ ಎಂದು ಅವರಿಗೆ ಅನಿಸತೊಡಗಿತು. ಒಂದೇ ಗಂಟೆಯೊಳಗೆ ಎದ್ದ ಬಿರುಗಾಳಿಯು ಉತ್ತರಾಖಂಡ ಸರ್ಕಾರದ ಮೇಲೆ ಒತ್ತಡ ಹೇರಿತು. ಅಲ್ಲಿನ ಸರ್ಕಾರವು ನಮಗೆ ಗುಜರಾತ್ ನ ನೆರವು ಬೇಡ, ನಾವೇ ಈ ಕೆಲಸ ಮಾಡುತ್ತೇವೆ ಎಂದು ಅಧಿಕೃತವಾಗಿ ಘೋಷಣೆ ಹೊರಡಿಸಬೇಕಾಯಿತು. ಸರಿ, ದೆಹಲಿಯಲ್ಲಿ ಕುಳಿತ ಜನರಿಗೆ ಚಿಂತೆಯಾಗುತ್ತಿದೆ, ನಾನೇಕೆ ಅವರನ್ನು ಚಿಂತೆಗೊಳಿಸಲಿ ಎಂದು ಇದರಿಂದ ಹಿಂದೆ ಸರಿದೆ. ಆದರೆ ಈ ಕೆಲಸವು ಈ ಮಗನ ಕೈಯಿಂದಲೇ ಆಗಬೇಕು ಎಂದು ಬಹುಶಃ ಕೇದಾರನಾಥ ಬಾಬಾ ನಿರ್ಧರಿಸಿದ್ದ.
ನಂತರ ಉತ್ತರಾಖಂಡದ ಜನರು ಭಾರತೀಯ ಜನತಾ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರಿಂದ ಇಲ್ಲಿ ಸರ್ಕಾರ ರಚನೆಯಾಯಿತು. ಆಗ ಈ ಕೆಲಸ ನನ್ನಿಂದಲೇ ಆಗಬೇಕು ಎಂದು ಬಾಬಾ ನಿರ್ಧರಿಸಿದ್ದಾನೆ ಎಂಬ ವಿಶ್ವಾಸ ದೃಢವಾಯಿತು. ಆದ್ದರಿಂದ ಇಲ್ಲಿನ ಪ್ರವೇಶ ದ್ವಾರ ತೆರೆಯುವ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿ ಹೋಗಿದ್ದೆ. ಈಗ ಪ್ರವೇಶ ದ್ವಾರ ಮುಚ್ಚುವುದಕ್ಕೆ ಮೊದಲು ಇಲ್ಲಿಗೆ ತಲುಪಿದ್ದೇನೆ. ಕೇದಾರನಾಥ ಭೂಮಿಗೆ ಅನುಕೂಲವಾಗುವಂತೆ ಭವ್ಯವಾದ ರೀತಿಯಲ್ಲಿ ಪುನರ್ ನಿರ್ಮಾಣ ಮಾಡಲು ಇಂದು ಶಂಕುಸ್ಥಾಪನೆ ನೆರವೇರುತ್ತಿದೆ ಎಂದು ನಾನು ಮತ್ತೊಮ್ಮೆ ಬಾಬಾನ ಪಾದಾರವಿಂದಗಳಿಗೆ ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ಈ ತೀರ್ಥಕ್ಷೇತ್ರ ಹೇಗಿರಬೇಕು, ಇಲ್ಲಿಯ ಪುರೋಹಿತರಿಗೆ ಯಾವ ವ್ಯವಸ್ಥೆ ಇರಬೇಕು, ಪಂಡಿತರ ಎಲ್ಲ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಹೇಗೆ, ಅವರು ಯಾವ ಸಂಕಟಗಳನ್ನು ಅನುಭವಿಸಿದ್ದಾರೆ, ಈಗ ಅವರಿಗೆ ಉತ್ತಮ ಜೀವನ ದೊರಕಬೇಕಾದರೆ ಯಾವ ರೀತಿ ವ್ಯವಸ್ಥೆ ಆಗಬೇಕು ಎಂಬುದನ್ನೆಲ್ಲ ಕೇಂದ್ರಬಿಂದುವಾಗಿಟ್ಟುಕೊಂಡು ಈ ಕ್ಷೇತ್ರದ ಪ್ರಗತಿ, ಪುನರ್ ನಿರ್ಮಾಣದ ಯೋಜನೆಯ ನೀಲನಕ್ಷೆ ತಯಾರಾಗಿದೆ. ಸ್ವತಃ ನಾನು ಸತತವಾಗಿ ಸಭೆಗಳನ್ನು ನಡೆಸಿ ಪ್ರತಿಯೊಂದನ್ನೂ ಗಮನಿಸುತ್ತಿದ್ದೆ. ವಿನ್ಯಾಸ ಹೇಗಿರಬೇಕು, ವಾಸ್ತುಶಿಲ್ಪ ಹೇಗಿರಬೇಕು? ನಮ್ಮ ಧಾರ್ಮಿಕ ವಾಸ್ತುಶಿಲ್ಪ, ದೇವಾಲಯದ ವಾಸ್ತುಶಿಲ್ಪನಲ್ಲಿ ಇರುವ ಎಲ್ಲ ವಿಧಿವಿಧಾನಗಳನ್ನು ಪಾಲಿಸುತ್ತಾ ಪುನರ್ ನಿರ್ಮಾಣ ಹೇಗೆ ಮಾಡಬೇಕು? ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇದರ ಪ್ರಗತಿಯ ನೀಲನಕ್ಷೆ ತಯಾರಿಸಲಾಗಿದೆ.
ಪುರೋಹಿತರಿಗೆ ಕೊಡುವ ಮನೆಗಳು ಒಂದು ರೀತಿಯಲ್ಲಿ ತ್ರೀ ಇನ್ ಒನ್ ಆಗಿರುತ್ತವೆ. ಕೆಳ ಅಂತಸ್ತಿನಲ್ಲಿ ಪ್ರವಾಸಿಗರಿಗೆ ಸೇವೆ ಒದಗಿಸಲು ಬೇಕಾದ ಎಲ್ಲ ಸೌಕರ್ಯಗಳಿರುತ್ತವೆ. ಮೇಲಿನ ಮಹಡಿಯಲ್ಲಿ ಪುರೋಹಿತರು ವಾಸಿಸುತ್ತಾರೆ. ಅದಕ್ಕೂ ಮೇಲಿನ ಮಹಡಿ ಪುರೋಹಿತರ ಕಡೆಯಿಂದ ಇಲ್ಲಿಗೆ ಬರುವ ಅತಿಥಿಗಳಿಗೆ ಮೀಸಲಾಗಿದ್ದು ಅವರಿಗೂ ಎಲ್ಲ ಸೌಕರ್ಯಗಳು ಇರುತ್ತವೆ. 24 ಗಂಟೆ ನೀರು, ವಿದ್ಯುತ್ ಇರುತ್ತದೆ. ಸಂಪೂರ್ಣವಾಗಿ ಸ್ವಚ್ಛತೆಯ ವ್ಯವಸ್ಥೆ ಇರುತ್ತದೆ. ಈ ರಸ್ತೆಯನ್ನು ಬಹಳ ಅಗಲಗೊಳಿಸಲಾಗುವುದು, ಅದಾದ ನಂತರ ಪುರೋಹಿತರಿಗೆ ಬೇರೆ ವ್ಯವಸ್ಥೆ ಮಾಡಲಾಗುವುದು.
ಬಹಳ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಗಳು ಬಂದಾಗ ಅವರಿಗೆ ಪೂಜೆ, ಪ್ರಸಾದಗಳ ವ್ಯವಸ್ಥೆ ಮಾಡಬೇಕಾಗುತ್ತದೆ. ಇಲ್ಲಿಂದ ತೀರ್ಥ ತೆಗೆದುಕೊಂಡು ಹೋಗುವವರಿಗೆ ಅದರ ವ್ಯವಸ್ಥೆ ಮಾಡಲಾಗುವುದು. ಪೋಸ್ಟ್ ಆಫೀಸ್, ಬ್ಯಾಂಕ್, ಟೆಲಿಫೋನ್ ವ್ಯವಸ್ಥೆಯಾಗಲಿ, ಕಂಪ್ಯೂಟರ್ ಉಪಯೋಗಿಸುವುದಕ್ಕೆ ಬೇಕಾದ ವ್ಯವಸ್ಥೆಯಾಗಲಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು.
ಇಂದು ಇಲ್ಲಿ ಒಂದು ರೀತಿಯಲ್ಲಿ ಐದು ಯೋಜನೆಗಳು ಆರಂಭವಾಗುತ್ತಿವೆ. ಒಂದನೆಯದು ನಾನಾಗಲೇ ಹೇಳಿದಂತೆ ಈ ಸಂಪೂರ್ಣ ರಸ್ತೆಯ ಅಗಲೀಕರಣ ಮಾಡಲಾಗುವುದು. ಈ ರಸ್ತೆಯನ್ನು ಸಿಮೆಂಟ್ ನಿಂದ ನಿರ್ಮಿಸಲಾಗುವುದು ಮತ್ತು ಎಲ್ಲ ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು.
ಯಾತ್ರಿಗಳು ಇಲ್ಲಿ ಸಂಚರಿಸುತ್ತಾ ಯಾವ ಸಮಯದಲ್ಲಿ ಬರುತ್ತಾರೋ ಮಂದಾಕಿನಿ ತೀರದಿಂದ ಅದೇ ಸಮಯದ ಮಧುರ ಸ್ವರ ಸಂಗೀತವನ್ನು ಕೇಳುತ್ತಾ, ಭಕ್ತಿ ಪರವಶರಾಗಿ ಈ ಕಡೆ ಹೋಗುತ್ತಾರೆ.
ಮಂದಾಕಿನಿ ಘಾಟ್ ನ ತಡೆಗೋಡೆಯ ನಿರ್ಮಾಣ ಕಾರ್ಯ ಸಹ ನಡೆಯುತ್ತದೆ. ಇಲ್ಲಿಗೆ ಬಂದು ಕುಳಿತುಕೊಳ್ಳುವ ಪ್ರವಾಸಿಗರಿಗೆ ಕಲಕಲನೆ ಹರಿಯುತ್ತಿರುವ ನದಿಯ ಸ್ವರವೂ ಕೇಳುವಂತಹ ವ್ಯವಸ್ಥೆ ಮಾಡಲಾಗುವುದು. ನಾನಾಗಲೇ ಹೇಳಿದಂತೆ ಭವ್ಯ-ದಿವ್ಯವಾದ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುವುದು. ಮಂದಾಕಿನಿಯ ಬಳಿ ತಡೆಗೋಡೆ ಮತ್ತು ಒಂದು ಘಾಟ್ ನ ನಿರ್ಮಾಣ ಮಾಡಿ ಅದಕ್ಕೆ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗುವುದು. ಎರಡೂ ಕಡೆ ಜಲಶಕ್ತಿಯ, ನೀರು ಹರಿಯುವ ಅನುಭವವಾಗುತ್ತದೆ. ಮತ್ತೊಂದು ಕಡೆ ತಾಯಿ ಸರಸ್ವತಿಗೂ ತಡೆಗೋಡೆ ಮತ್ತು ಅದಕ್ಕೂ ಘಾಟ್ ನ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಲಾಗುವುದು.
ಇದೊಂದು ಶ್ರದ್ಧೆಯ ವಿಷಯವಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಜನಿಸಿದ ಒಬ್ಬ ಬಾಲಕ ತನ್ನ ಏಳನೆಯ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗುತ್ತಾನೆ. ಹಿಮಾಚಲ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಾಯಿ ಭಾರತಿಯನ್ನು ದರ್ಶಿಸುತ್ತಾನೆ. ಪ್ರತಿಯೊಂದು ಪ್ರದೇಶದ ಮಣ್ಣನ್ನು ತನ್ನ ಹಣೆಗೆ ತಿಲಕದಂತೆ ಹಚ್ಚಿಕೊಂಡು ಈ ಕೇದಾರಕ್ಕೆ ಬರುತ್ತಾನೆ. ತನ್ನ ಅಂತಿಮ ಜೀವನವನ್ನು ಇಲ್ಲಿಯೇ ಕಳೆಯುತ್ತಾನೆ. ಭಾರತದಲ್ಲಿ ಆದಿಶಂಕರಾಚಾರ್ಯ ಅವರ ವಿಚಾರಧಾರೆಗಳು ನೂರಾರು ವರ್ಷಗಳಿಂದ ಪ್ರೇರಣೆ ನೀಡುತ್ತಿವೆ, ಪ್ರಭಾವ ಬೀರುತ್ತಿವೆ. ಅವರ ಸಮಾಧಿ ಸ್ಥಳವು ಸಹ ಈ ವಿಪತ್ತಿನಿಂದಾಗಿ ನಾಶವಾಗಿದೆ. ಇದರ ವಿನ್ಯಾಸದ ಕೆಲಸ ಇನ್ನೂ ನಡೆಯುತ್ತಿದೆ. ಆದಿಶಂಕರಾಚಾರ್ಯ ಅವರ ಸಮಾಧಿ ಸ್ಥಳದ ಪುನರ್ ನಿರ್ಮಾಣ ಹೇಗಿರಬೇಕೆಂದರೆ ಆದಿಶಂಕರ ಅವರ ಸಮಾಧಿ ಸ್ಥಳ ಕೇದಾರದಿಂದ ಸ್ವಲ್ಪವೂ ದೂರವಾಗಿಲ್ಲ ಎಂಬ ಅನುಭವ ಬರುವ ರೀತಿಯಲ್ಲಿ ಅವರ ಭವ್ಯ ದಿವ್ಯ ಸಮಾಧಿ ಸ್ಥಳದ ನಿರ್ಮಾಣವಾಗುವಂತೆ ಅದರ ವಿನ್ಯಾಸ ಇರಬೇಕು ಎಂಬ ಆಹ್ವಾನವನ್ನು ನಾನು ನೀಡುತ್ತೇನೆ. ಯಾತ್ರಿಕರಿಗೆ ಆದಿಶಂಕರ ಅವರ ಸಮಾಧಿ ಬಳಿ ಹೋಗುತ್ತಿದ್ದಂತೆಯೇ ಆ ಮಹಾನ್ ತಪಸ್ಸಿನ ಪರಂಪರೆಯ ಜೊತೆಗೆ ಆಧ್ಯಾತ್ಮಕ ಚೇತನದ ಅನುಭೂತಿ ದೊರಕುವಂತೆ ಅವರ ಸಮಾಧಿ ಸ್ಥಳದ ರಚನೆಯಾಗಿರಬೇಕೆಂಬ ದಿಸೆಯಲ್ಲಿ ಕೆಲಸ ನಡೆಯುತ್ತಿದೆ. ಇಂದು ಅದರ ಶಂಕುಸ್ಥಾಪನೆಯೂ ನೆರವೇರುತ್ತಿದೆ.
ಇದಕ್ಕೆ ಹಣ ಖರ್ಚಾಗುತ್ತದೆಂದು ನನಗೆ ಗೊತ್ತು. ಆದರೆ ನನಗೆ ನಂಬಿಕೆಯಿದೆ. ಒಂದು ಸಲ ಭಾರತದ ಯಾತ್ರಿಕರು ಶ್ರದ್ಧೆಯ ಭಾವದಿಂದ ಯಾವ ರೀತಿ ಪುನರ್ ನಿರ್ಮಾಣ ಆಗಬೇಕು ಎಂದು ಬಯಸುತ್ತಾರೋ ಅದೇ ರೀತಿಯಲ್ಲಿ ಪುನರ್ ನಿರ್ಮಾಣ ಮಾಡಲು ನಮ್ಮ ದೇಶದಲ್ಲಿ ಹಣದ ಕೊರತೆಯಿಲ್ಲ, ಇದೇ ನನ್ನ ಶ್ರದ್ಧೆಯಾಗಿದೆ. ನಮ್ಮ ದೇಶದ ರಾಜ್ಯ ಸರ್ಕಾರಗಳೂ ಇದರಲ್ಲಿ ಸಹಭಾಗಿಗಳಾಗಬೇಕೆಂದು ನಾನು ಆಹ್ವಾನ ನೀಡುತ್ತೇನೆ. ನಾನು ಕಾರ್ಪೊರೇಟ್ ಜಗತ್ತಿನ ಸಾಮಾಜಿಕ ಹೊಣೆಗಾರಿಕೆಯಡಿಯೂ, ಉದ್ಯಮ ಲೋಕದ ಜನರಿಗೂ, ವ್ಯಾಪಾರೀ ಜಗತ್ತಿನ ಜನರಿಗೂ ಈ ಕಾರ್ಯದಲ್ಲಿ ನೆರವಿನ ಹಸ್ತ ಚಾಚಬೇಕೆಂದು ನಾನು ಆಹ್ವಾನ ನೀಡುತ್ತೇನೆ.
ಪ್ರಾರಂಭಿಕ ಕೆಲಸಗಳ ಜವಾಬ್ದಾರಿಯನ್ನು ತೆಗೆದುಕೊಂಡ JSWಗೆ ನಾನು ಆಭಾರಿಯಾಗಿದ್ದೇನೆ. ಆದರೆ ನನ್ನ ಮನಸ್ಸಿನಲ್ಲಿ ಮೂಡುವ ಕನಸುಗಳು ಹೊಸ ಹೊಸದನ್ನು ಜೋಡಿಸುತ್ತಿವೆ. ಇದಕ್ಕಾಗಿ ನಾನು CSR (Corporate Social Responsibility) ಜನರಿಗೆ ಮನವಿ ಮಾಡುತ್ತಿದ್ದೇನೆ.
ಇಷ್ಟೆಲ್ಲ ಹಣವನ್ನು ಇಲ್ಲಿ ತೊಡಗಿಸುವಾಗ, ಇಷ್ಟೆಲ್ಲ ಮೂಲಭೂತ ಸೌಕರ್ಯಗಳ ಕೆಲಸಗಳಾಗುತ್ತಿರುವಾಗ ಪರಿಸರದ ನಿಯಮಗಳನ್ನು ಪಾಲಿಸಲಾಗುವುದು. ಇಲ್ಲಿನ ಅಭಿರುಚಿ, ಪ್ರಕೃತಿ, ಪ್ರವೃತ್ತಿಗಳಿಗೆ ಅನುಸಾರವಾಗಿ ಇದರ ಪುನರ್ ನಿರ್ಮಾಣ ಮಾಡಲಾಗುವುದು. ಅದರಲ್ಲಿ ಆಧುನಿಕತೆ ಅಳವಡಿಸಿದರೂ ಅದರ ಆತ್ಮವು ಮಾತ್ರ ಶತಮಾನಗಳಿಂದ ಕೇದಾರದ ನೆಲವು ತನ್ನೊಳಗೆ ಅಡಗಿಸಿಕೊಂಡಿರುವ ರೀತಿಯಲ್ಲೇ ಇರುವಂತೆ ಪುನರ್ ನಿರ್ಮಾಣ ಕಾರ್ಯವು ನಡೆಯುತ್ತದೆ.
ಕೇದಾರನಾಥ ದೇಗುಲದ ಪ್ರವೇಶ ದ್ವಾರ ತೆರೆಯುವ ಸಮಯದಲ್ಲಿ ಬಂದಿದ್ದಾಗ ಪ್ರವಾಹದ ಹಾನಿಯ ನೆರಳಿನಿಂದ ನಾವು ಹೊರಗೆ ಬರುವ ಒಂದು ಸಂದೇಶವನ್ನು ದೇಶದ ಜನರಿಗೆ ನೀಡಬೇಕೆಂಬ ಯೋಚನೆ ನನ್ನ ಮನಸ್ಸಿನಲ್ಲಿ ಮೂಡಿತು. ಕೆಲವೊಮ್ಮೆ ಜನರು ಅಲ್ಲಿ ಈಗ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆಯೊ, ಇಲ್ಲವೊ, ಅಲ್ಲಿಗೆ ಹೋಗುವುದೊ ಬೇಡವೊ ಎಂದು ಯೋಚಿಸುತ್ತಾರೆ. ಹೀಗಾಗಿ ಯಾತ್ರಿಕರ ಸಂಖ್ಯೆ ಇಳಿಮುಖವಾಗಿತ್ತು. ಆದರೆ ಈ ಸಲ ಸುಮಾರು ನಾಲ್ಕೂವರೆ ಲಕ್ಷಕ್ಕಿಂತ ಹೆಚ್ಚು ಯಾತ್ರಿಕರು ಇಷ್ಟು ಕಡಿಮೆ ಅವಧಿಯಲ್ಲಿ ಬಾಬಾನ ದರ್ಶನ ಪಡೆದಿರುವುದರಿಂದ ನನಗೆ ಸಂತೋಷವಾಗಿದೆ. ಮತ್ತೊಮ್ಮೆ ಇಲ್ಲಿನ ಯಾತ್ರೆಗೆ ಜೀವ ಬಂದಿದೆ. ಮುಂದಿನ ಸಲ ಹತ್ತು ಲಕ್ಷಕ್ಕಿಂತ ಕಡಿಮೆ ಯಾತ್ರಿಕರು ಇರುವುದಿಲ್ಲ ಎಂಬುದನ್ನು ಬರೆದಿಟ್ಟುಕೊಳ್ಳಿ. ಏಕೆಂದರೆ ಜನರಲ್ಲಿ ನಂಬಿಕೆ ಮೂಡಿಸಲಾಯಿತು, ಸಂದೇಶ ನೀಡಲಾಯಿತು, ಟಿವಿಯಲ್ಲಿ ಎಲ್ಲ ದೇಶಗಳು ನೋಡಿದವು. ಇಂದಿನ ಈ ಕಾರ್ಯಕ್ರಮದಿಂದಾಗಿ ಮುಂದಿನ ಸಲ ಇಲ್ಲಿನ ಪ್ರವೇಶ ದ್ವಾರ ತೆರೆದಾಗ ಯಾತ್ರಿಕರು ಅಧಿಕ ಸಂಖ್ಯೆಯಲ್ಲಿ ಉತ್ಸಾಹದಿಂದ ಬರುತ್ತಾರೆ ಎಂಬ ಸಂದೇಶ ತಲುಪುತ್ತದೆ. ನನ್ನ ವೀರ ಮಾತೆಯರು ಭಕ್ತಿ ತೋರಿಸುವುದಕ್ಕೆ ನಮ್ಮ ದೇವಭೂಮಿಯಾದ, ವೀರಭೂಮಿಯಾದ ಉತ್ತರಾಖಂಡಕ್ಕಿಂತ ಮತ್ತೊಂದು ಉತ್ತಮ ಸ್ಥಳ ಸಿಗಲಾರದು.
ನಮ್ಮ ದೇಶದ ಹಿಮಾಲಯದಲ್ಲಿ ದೊಡ್ಡ ವಿಶೇಷತೆಗಳಿವೆ. ಪ್ರಗತಿಯ ಇಷ್ಟೊಂದು ಸಾಧ್ಯತೆಗಳು ಮತ್ತು ಹಿಮಾಲಯದ ಪ್ರತಿಯೊಂದು ಭೂಭಾಗದಲ್ಲಿ ಅದರ ಚೇತನವು ಪ್ರತ್ಯೇಕವಾಗಿದೆ. ಶ್ರೀನಗರಕ್ಕೆ ಹೋದರೆ ಅಲ್ಲಿನ ಹಿಮಾಲಯದಲ್ಲಿ ಸಿಗುವ ಅನುಭವ ಭಿನ್ನವಾಗಿರುತ್ತದೆ. ಮಾತಾ ವೈಷ್ಣೋದೇವಿ ಮತ್ತು ಅಮರನಾಥ ಯಾತ್ರೆಗೆ ಹೋದರೆ ಅಲ್ಲಿನ ಅನುಭವ ಬೇರೆಯದಾಗಿರುತ್ತದೆ. ಹಿಮಾಚಲ ಪ್ರದೇಶದ ಶಿಮ್ಲಾ, ಕುಲು, ಮನಾಲಿಗೆ ಹೋದರೆ ಅಲ್ಲಿ ದೊರಕುವ ಅನುಭವವೇ ಬೇರೆಯಾಗಿರುತ್ತದೆ. ಆದರೆ ಅದೇ ಹಿಮಾಲಯದ ಮಡಿಲಿನಲ್ಲಿ ಉತ್ತರಾಖಂಡ ನೆಲಕ್ಕೆ ಬಂದರೆ ಒಂದು ದಿವ್ಯ ಚೇತನದ ಅನುಭವವಾಗುತ್ತದೆ. ಹಿಮಾಲಯದ ಡಾರ್ಜಿಲಿಂಗ್ ಗೆ ಹೋದರೆ ಒಂದು ರೀತಿಯ, ಸಿಕ್ಕಿಂಗೆ ಹೋದರೆ ಮತ್ತೊಂದು ರೀತಿಯ ಅನುಭವವಾಗುತ್ತದೆ. ಒಂದೇ ಹಿಮಾಲಯ, ಅದೇ ಹವಾಗುಣ, ಅದೇ ಬೆಟ್ಟಗಳು, ಅದೇ ಮಂಜುಗಡ್ಡೆ, ಆದರ ಬೇರೆಬೇರೆ ಭೂಭಾಗದಲ್ಲಿ ಬೇರೆಬೇರೆ ಚೈತನ್ಯದ ಅನುಭವವಾಗುತ್ತದೆ.
ಹಿಮಾಲಯದ ಮಡಿಲಿನಲ್ಲಿ ನಾನು ಬಹಳಷ್ಟು ಸಂಚರಿಸಿದ್ದೇನೆ. ಪ್ರತಿಯೊಂದು ಪ್ರದೇಶದ ಚೇತನವನ್ನು ಪ್ರತ್ಯೇಕವಾಗಿ ಅನುಭವಿಸಿರುವುದರಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಇದನ್ನು ವಿಜ್ಞಾನದ ಪ್ರಯೋಗಾಲಯಗಳಲ್ಲಿ ಯಾವ ತಕ್ಕಡಿಯಿಂದ ಅಳೆಯಲಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಪಡೆದಿರುವ ಹಿಮಾಲಯದ ಅನುಭವದ ಪ್ರಕಾರ ಯಾರಿಗಾದರೂ ಇಲ್ಲಿಯ ವನಸಂಪತ್ತಿನಲ್ಲಿ ಅಭಿರುಚಿ ಇದ್ದರೆ ಅವರು ಜೀವನಪರ್ಯಂತ ಸಂಶೋಧನೆ ಮಾಡಬಹುದಾದಂತಹ ವಿಶಾಲ ಕ್ಷೇತ್ರ ಇಲ್ಲಿ ತೆರೆದಿದೆ. ಯಾರಿಗಾದರೂ ಇಲ್ಲಿನ ಜಲಮೂಲಗಳಲ್ಲಿ ಅಭಿರುಚಿ ಇದ್ದರೆ ಹಿಮಾಲಯವು ಅವರಿಗೆ ಆಹ್ವಾನ ನೀಡುತ್ತದೆ. ಗಿಡಮೂಲಿಕೆಗಳಲ್ಲಿ, ಮೂಲಿಕಾ ವೈದ್ಯದಲ್ಲಿ ಯಾರಿಗಾದರೂ ಆಸಕ್ತಿ ಇದ್ದರೆ ಹಿಮಾಲಯದ ಮಡಿಲಿನಲ್ಲಿ ಇಂತಹ ಪ್ರಕೃತಿ ಇದೆ. ಇದರಿಂದ ಅವರು ಹೊಸ ಚೇತನದ ಅನುಭವ ಪಡೆಯಬಹುದು. ಗಿಡಮೂಲಿಕೆಗಳಲ್ಲಿ ಇರುವ ಔಷಧೀಯ ಗುಣಗಳನ್ನು ಇಲ್ಲಿಯ ಹಳ್ಳಿಗಳ ಜನರು ಚೆನ್ನಾಗಿ ಅರಿತಿದ್ದಾರೆ. ಚೇಳು ಕಡಿತಕ್ಕೆ ಬೇಕಾದ ಗಿಡಮೂಲಿಕೆಯನ್ನು ಕೀಳುವಾಗ ತಪ್ಪಾದರೆ ಹಳ್ಳಿಯ ವ್ಯಕ್ತಿ ತಕ್ಷಣ ಇದಲ್ಲ, ಈ ಗಿಡಮೂಲಿಕೆ ಕಿತ್ತುಕೊಳ್ಳಿ. ಇದರಿಂದ ಸರಿ ಹೋಗುತ್ತದೆ ಎಂದು ಹೇಳುವುದನ್ನು ನಾನು ನೋಡಿದ್ದೇನೆ. ಚೇಳು ಕಡಿದ ಜಾಗಕ್ಕೆ ಎಲೆಯ ರಸ ಹಚ್ಚಿದರೆ ಸರಿಹೋಗುತ್ತದೆ. ದೇವರು ಏನೆಲ್ಲ ವ್ಯವಸ್ಥೆ ಮಾಡಿಟ್ಟಿದ್ದಾನೆ. ಆದ್ದರಿಂದ ಡೆಹರಾಡೂನ್ ನಲ್ಲಿ ಪ್ರಾಕೃತಿಕ ಸಂಪತ್ತು, ಹಿಮಾಲಯದ ಸಂಪತ್ತಿನ ಸಂಶೋಧನೆ ಮಾಡುವ ಬಹು ದೊಡ್ಡ ಕೆಲಸವನ್ನು ಭಾರತ ಸರ್ಕಾರವು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಇದರ ಬಹು ದೊಡ್ಡ ಪ್ರಯೋಜನ ದೊರಕಲಿದೆ.
ನಮ್ಮ ಹಿಮಾಲಯವು ಇಡೀ ವಿಶ್ವದಲ್ಲಿ ಸಾವಯವ ಕೃಷಿಯ ಸಾಧ್ಯತೆ ಇರುವ ಒಂದು ಪ್ರದೇಶವಾಗಿದೆ. ಸಿಕ್ಕಿಂ ಒಂದು ಸಣ್ಣ ರಾಜ್ಯ. ಇಲ್ಲಿನ ಜನಸಂಖ್ಯೆ ಆರೇಳು ಲಕ್ಷ ಮಾತ್ರ. ಆದರೆ 12ರಿಂದ 15 ಲಕ್ಷ ಪ್ರವಾಸಿಗರು ಬರುತ್ತಾರೆ. ಅಲ್ಲಿಗೆ ಹೋಗಿ ಬರಲು ರಸ್ತೆಗಳು ದುರ್ಗಮವಾಗಿವೆ, ವಿಮಾನ ನಿಲ್ದಾಣವೂ ಇಲ್ಲ. ಈಗ ನಾನು ನಿರ್ಮಿಸುತ್ತಿದ್ದೇನೆ, ಅಲ್ಪ ಕಾಲದಲ್ಲೇ ನಿರ್ಮಿಸಲಾಗುವುದು. ಇಷ್ಟಾದರೂ ಇಲ್ಲಿಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಡೀ ಸಿಕ್ಕಿಂ ರಾಜ್ಯದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ನಡೆಯುತ್ತಿದೆ.
10ರಿಂದ 12 ವರ್ಷಗಳವರೆಗೆ ಸತತವಾಗಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಈ ಸಾಧನೆ ಆಗಿದೆ. ಇಡೀ ಹಿಮಾಲಯದ ಮಡಿಲಿನಲ್ಲಿ ರಸಗೊಬ್ಬರಗಳಿಂದ ಮುಕ್ತಿ, ಎಲ್ಲ ಹಿಮಾಲಯದ ರಾಜ್ಯಗಳಲ್ಲಿ ಔಷಧಿಗಳಿಂದ ಮುಕ್ತಿ ದೊರಕಿಸಿ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳನ್ನು ಬಳಸಲಾಗುತ್ತಿದೆ. ಹೊಲಗಳಲ್ಲಿ ಕೀಟನಾಶಕ ಸಿಂಪಡಣೆಯಿಂದ ಮುಕ್ತಿ ನೀಡಲಾಗಿದೆ. 10-12 ವರ್ಷ ಧೈರ್ಯದಿಂದ ಸಾವಯವ ಕೃಷಿಯಲ್ಲಿ ತೊಡಗಿದರೆ ನಮಗೆ ದೊರಕಬೇಕಾದ ಒಂದು ರೂಪಾಯಿಗೆ ಬದಲಾಗಿ ವಿಶ್ವವು ಒಂದು ಡಾಲರ್ ಕೊಟ್ಟು ಖರೀದಿಸಲು ತಯಾರಾಗುತ್ತದೆ. ಇದು ಸಾವಯವ ಕೃಷಿಯ ಶಕ್ತಿಯಾಗಿದೆ.
ಉತ್ತರಾಖಂಡದ ಸರ್ಕಾರಕ್ಕೆ, ಇಲ್ಲಿನ ಅಧಿಕಾರಿಗಳಿಗೆ ಈ ಅಭಿಯಾನ ಕೈಗೊಳ್ಳಿ ಎಂದು ನಾನು ಆಹ್ವಾನ ನೀಡುತ್ತೇನೆ. ಉತ್ತರಾಖಂಡವನ್ನು ಸಾವಯವ ರಾಜ್ಯವಾಗಿ ಪರಿವರ್ತಿಸುವ ಕನಸಿನೊಂದಿಗೆ ಮುಂದೆ ಸಾಗಿ. 2022ರೊಳಗೆ ಗುರಿ ಸಾಧಿಸುವಂತೆ ಈಗಿನಿಂದಲೇ ಕೆಲಸ ಆರಂಭಿಸಿರಿ. Certify ಮಾಡುವುದಕ್ಕೆ ಬಹುಶಃ ಕೆಲವು ವರ್ಷಗಳು ಹಿಡಿಯಬಹುದು, ಅದಕ್ಕೆ ನಿಯಮಗಳಿರುತ್ತವೆ. ಆದರೆ ಒಂದು ಸಲ ನಿರ್ಧರಿಸಿ ಜನರಲ್ಲಿ ಜಾಗೃತಿ ಮೂಡಿಸಿದರೆ ಬದಲಾವಣೆ ಸಾಧ್ಯ. ಇಡೀ ವಿಶ್ವವು ಈಗ holistic health careನತ್ತ ಧಾವಿಸುತ್ತಿರುವುದನ್ನು ನೀವು ಊಹಿಸಬಹುದು. ರಾಸಾಯನಿಕ ಜಗತ್ತಿನಿಂದ ಮುಕ್ತವಾದ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋದರೆ ನಮ್ಮ ಮಾನವ ಜಾತಿಗೆ ಅದೆಷ್ಟು ದೊಡ್ಡ ಸೇವೆ ಮಾಡಿದಂತೆ ಆಗುತ್ತದೆ. ಹಿಮಾಲಯದ ಈ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ.
ಹಿಮಾಲಯದಲ್ಲಿ ಪ್ರವಾಸೋದ್ಯಮದ ಸಾಧ್ಯತೆಗಳು ಹೆಚ್ಚಾಗಿವೆ. ಇದರ ಆಧ್ಯಾತ್ಮಿಕ ಸಾಮರ್ಥ್ಯಕ್ಕೆ ಸ್ವಲ್ಪವೂ ಗಾಯವಾಗಬಾರದು. ಅದರ ಜೊತೆಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಹೊಸ ಹೊಸ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಬಹುದು. ಪ್ರಕೃತಿಯ ಸಂರಕ್ಷಣೆಯಾಗಬೇಕು, ಪರಿಸರದ ಸಂರಕ್ಷಣೆಯೂ ಆಗಬೇಕು ಮತ್ತು ದೇವರಲ್ಲಿ ಭಕ್ತಿಯ ಭಾವವೂ ಉಳಿಯಬೇಕು.
ಇಲ್ಲಿನ ನಮ್ಮ ಬೆಟ್ಟಗಳಲ್ಲಿ ಬಹಳ ಹಳೆಯ ಗಾದೆಯಿದೆ. ಇಲ್ಲಿನ ಬೆಟ್ಟಗಳ ತರುಣರು ಮತ್ತು ಬೆಟ್ಟಗಳ ನೀರು ಎಂದಿಗೂ ಕೆಲಸಕ್ಕೆ ಬರುವುದಿಲ್ಲ. ಈ ಗಾದೆಯನ್ನು ಬದಲಿಸಬೇಕೆಂದು ನಾವು ಅಭಿಯಾನ ಕೈಗೊಂಡಿದ್ದೇವೆ. ಬೆಟ್ಟಗಳ ತರುಣರು ಕೆಲಸಕ್ಕೆ ಬರಬೇಕು ಮತ್ತು ಬೆಟ್ಟಗಳ ನೀರು ಸಹ ಕೆಲಸಕ್ಕೆ ಬರಬೇಕು. ಅದೇ ನೀರಿನಿಂದ ವಿದ್ಯುತ್ ಉತ್ಪಾದಿಸಬೇಕು. ಅದೇ ನೀರಿನಲ್ಲಿ ಸಾಹಸ ಪ್ರವಾಸೋದ್ಯಮ ನಡೆಯಬೇಕು. ಅದೇ ನೀರಿನಲ್ಲಿ ಜಲಕ್ರೀಡೆಗಳು ನಡೆಯಬೇಕು. ಅದೇ ನೀರಿನಿಂದ ಪ್ರವಾಸೋದ್ಯಮದ ಹೊಸಹೊಸ ಕ್ಷೇತ್ರಗಳು ಅಭಿವೃದ್ಧಿಗೊಳ್ಳಬೇಕು. ಇಡೀ ವಿಶ್ವದ ಯುವಜನತೆಗೆ ಆಹ್ವಾನ ನೀಡುವ ಸಾಮರ್ಥ್ಯ ನೀರಿನಲ್ಲಿರಬೇಕು. ಬೆಟ್ಟಗಳಲ್ಲಿ ಎಂದಿಗೂ ಕೆಲಸಕ್ಕೆ ಬಾರದ ನೀರು ಕೆಲಸಕ್ಕೆ ಬರಬೇಕು. ಇಲ್ಲಿನ ತರುಣರು ಬೆಟ್ಟಗಳಿಂದ ಇಳಿದು ಕೆಳಗಿನ ಮೈದಾನ ಪ್ರದೇಶಗಳಿಗೆ ತೆರಳುತ್ತಾರೆ. ನಮ್ಮ ಬೆಟ್ಟಗಳಲ್ಲೇ ಅವರಿಗೆ ದಿನನಿತ್ಯದ ಸಂಪಾದನೆ ಆಗುವ ರೀತಿಯಲ್ಲಿ ಬೆಟ್ಟಗಳ ಶಕ್ತಿ ಹೆಚ್ಚಿಸಿದರೆ ನಮ್ಮ ತರುಣರು ಬೆಟ್ಟಗಳನ್ನು ತೊರೆದು ಹೋಗುವಂತಹ ಪರಿಸ್ಥಿತಿ ಬರುವುದಿಲ್ಲ. ಬೆಟ್ಟಗಳ ತರುಣರು ಬೆಟ್ಟಗಳ ಕೆಲಸಗಳಿಗೆ ಆಗುವ ದಿಸೆಯಲ್ಲಿ ಭಾರತ ಸರ್ಕಾರವು ಹೆಜ್ಜೆ ಇಡುತ್ತಿದೆ.
ಉತ್ತರಾಖಂಡ ಸರ್ಕಾರವು ಸಹ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೆಲ್ಲ ಮಹತ್ವಪೂರ್ಣ ನಿರ್ಧಾರಗಳನ್ನು ಮತ್ತು ಮಹತ್ವಪೂರ್ಣ ಕಾರ್ಯಗಳನ್ನು ಆರಂಭಿಸಿದೆ. ಅದರ ಪರಿಣಾಮವಾಗಿ ಈ ದಿನ ಪ್ರಗತಿಯ ಹೊಸ ಎತ್ತರಕ್ಕೇರುವತ್ತ ಮುನ್ನಡೆಯುತ್ತಿದೆ. ಒಂದು ಹೊಸ ಆತ್ಮವಿಶ್ವಾಸ ಮೂಡುತ್ತಿದೆ.
ಉತ್ತರಾಖಂಡದ ಬಳಿ ಬಹಳ ಸಾಮರ್ಥ್ಯವಿದೆ. ಶಿಸ್ತು ಎಂಬುದು ಇಲ್ಲಿನವರ ನರನಾಡಿಗಳಲ್ಲಿದೆ. ಸೈನಿಕನಿಲ್ಲದ ಕುಟುಂಬವೇ ಇಲ್ಲಿಲ್ಲ ಎಂದು ಹೇಳಬಹುದು. 250ರಿಂದ 300 ನಿವೃತ್ತ ಯೋಧರು ಇಲ್ಲಿಯ ಪ್ರತಿ ಹಳ್ಳಿಯಲ್ಲಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯೋಧರಿರುವ ಈ ನಾಡಿನಲ್ಲಿ ಶಿಸ್ತು ಎಂಬುದು ಇದ್ದೇ ಇರುತ್ತದೆ. ಯಾತ್ರಿಗಳಿಗೆ ಇವರ ಈ ಶಿಸ್ತು ಬಹಳ ಅನುಕೂಲವಾಗಿ ಪರಿಣಮಿಸುತ್ತದೆ. ಪ್ರವಾಸಿಗಳಿಗೆ ಇವರ ಈ ಶಿಸ್ತು ಒಂದು ದೊಡ್ಡ ಶಕ್ತಿಯಾಗುತ್ತದೆ. ಇದನ್ನು ನಾವು ಪರಿಚಯಿಸಬೇಕಿದೆ. ಇದಕ್ಕಾಗಿ ನಾವು ಯೋಜನೆಗಳನ್ನು ಹಾಕಿಕೊಳ್ಳಬೇಕು. ನಮ್ಮ ನಿವೃತ್ತ ಸೈನಿಕರ ಅನುಭವಗಳನ್ನು ಬಳಸಿಕೊಂಡು ಪ್ರವಾಸಿಗಳಲ್ಲಿ ಒಂದು ಹೊಸ ವಿಶ್ವಾಸ ಮೂಡಿಸುವ ವ್ಯವಸ್ಥೆಯಾಗಬೇಕು. ಇಂತಹ ಬಹಳ ದೊಡ್ಡ ಸಾಧ್ಯತೆಗಳಿವೆ. ಈ ಸಾಧ್ಯತೆಗಳ ಮೂಲಕ ಉತ್ತರಾಖಂಡದ ಪ್ರಗತಿ, ಉತ್ತರಾಖಂಡವು ದೇಶದಲ್ಲಿ ಎಲ್ಲಕ್ಕಿಂತ ದೊಡ್ಡ ಆಕರ್ಷಣೆಯ ಕೇಂದ್ರವಾಗುವಂತೆ, ಎಲ್ಲಕ್ಕಿಂತ ಉತ್ತಮ ಪ್ರವಾಸೀ ತಾಣವಾಗುವಂತೆ ಮಾಡಬೇಕು. ಪ್ರವಾಸಕ್ಕೆ ಉತ್ತರಾಖಂಡ, ತೀರ್ಥಯಾತ್ರೆಗೆ ಉತ್ತರಾಖಂಡ, ಉತ್ತಮ ಪ್ರಕೃತಿಗೆ ಉತ್ತರಾಖಂಡ, ಪ್ರಕೃತಿಯ ಮಡಿಲಿನಲ್ಲಿ ಇರಲು ಬಯಸುವವರಿಗೆ ಉತ್ತರಾಖಂಡ, ಸಂಶೋಧನೆ, ಹೊಸ ಆವಿಷ್ಕಾರಗಳಿಗೆ ಉತ್ತರಾಖಂಡ ಎಂದಾಗಬೇಕು.
ಇಂತಹ ಶಕ್ತಿ ಈ ಮಣ್ಣಿನಲ್ಲಿದೆ. ದೀಪಾವಳಿಯ ಈ ಸಂದರ್ಭದಲ್ಲಿ, ಒಂದು ರೀತಿಯಲ್ಲಿ ಹೊಸ ವರ್ಷದ ಆರಂಭದಲ್ಲಿ, ನಮ್ಮ ಇಡೀ ಭಾರತದಲ್ಲಿ ದೀಪಾವಳಿಯಂದು ಹಳೆಯ ಲೆಕ್ಕಗಳನ್ನು ಚುಕ್ತಾ ಮಾಡುತ್ತಾರೆ ಮತ್ತು ಹೊಸ ಲೆಕ್ಕವನ್ನು ಆರಂಭಿಸುತ್ತಾರೆ. ಈ ದಿನ ಪ್ರಗತಿಯ ಒಂದು ಹೊಸ ಲೆಕ್ಕ ಆರಂಭವಾಗುತ್ತದೆ. ಈ ಹೊಸ ಲೆಕ್ಕದಿಂದ ನಮ್ಮ ಪ್ರಗತಿಯ ಗಾಥೆ ಪ್ರಾರಂಭವಾಗುತ್ತಿದೆ. ಹೊಸ ಎತ್ತರಕ್ಕೆ ಕೊಂಡೊಯ್ಯಲು ಮುಂದೆ ಸಾಗೋಣ. ಇಂದು ಸಹ ನಾನು ಕೆಲವು ಸಲಹೆಗಳನ್ನು ನೀಡಿದ್ದೇನೆ. ರಾಜ್ಯ ಸರ್ಕಾರವು ಇದನ್ನು ಮತ್ತೊಮ್ಮೆ ಪರಿಶೀಲಿಸುತ್ತದೆ. ಒಂದೆರಡು ತಿಂಗಳಲ್ಲಿ ನಾನು ಪುನಃ ಬರುತ್ತೇನೆ. ಈ ಪ್ರದೇಶದಲ್ಲಿ ಇನ್ನೂ ಬೇರೆಬೇರೆ ಏನನ್ನು ಮಾಡಬೇಕೆಂಬ ಉದ್ದೇಶ ನನ್ನ ಮನಸ್ಸಿನಲ್ಲಿದೆಯೊ ಅದಕ್ಕೂ ನಾನು ಬಲ ತುಂಬುತ್ತೇನೆ. ಆದರೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರಕೃತಿಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುವುದು ಎಂಬ ಖಾತ್ರಿ ನೀಡುತ್ತೇನೆ. ಪ್ರಕೃತಿಯ ರಕ್ಷಣೆ ನಾವು ಮಾಡಿದರೆ ಪ್ರಕೃತಿಯು ನಮ್ಮ ರಕ್ಷಣೆ ಮಾಡುವುದು ಎಂಬ ವಿಶ್ವಾಸವನ್ನು ನಾನು ನೀಡುತ್ತೇನೆ.
ಪ್ರಕೃತಿಯ ಸಂರಕ್ಷಣೆ ಮಾಡಿದಾಗೆಲ್ಲ, ಎಲ್ಲೆಲ್ಲಿ ಪ್ರಕೃತಿಯ ರಕ್ಷಣೆ ಮಾಡಲಾಗಿದೆಯೊ ಅಲ್ಲೆಲ್ಲ ಪ್ರಕೃತಿಯಿಂದ ನಮಗೆ ಸಮಸ್ಯೆಗಳು ಉಂಟಾಗಿಲ್ಲ. ಪರಿಸರದ ರಕ್ಷಣೆಯಾಗಿರುವ ಕಡೆಯೆಲ್ಲ, ಪರಿಸರಕ್ಕೂ ಯಾವುದೇ ತೊಂದರೆ ಆಗಿಲ್ಲ. ಈ ಮಣ್ಣು ನಮಗೆ ಶಕ್ತಿ ನೀಡಬಲ್ಲದು.
ಸೌದೆಯ ಒಲೆಗಳಿಂದ ಜನರಿಗೆ ಮುಕ್ತಿ ದೊರಕಿಸಿಕೊಡಲು, ಕಾಡುಗಳನ್ನು ಕಡಿಯುವುದನ್ನು ನಿಲ್ಲಿಸಲು ‘ಪ್ರಧಾನ ಮಂತ್ರಿ ಉಜ್ವಲಾ’ ಯೋಜನೆಯನ್ನು ಆರಂಭಿಸಿದ್ದೇನೆ. ಈ ಅಭಿಯಾನದಲ್ಲಿ ಕಡು ಬಡವರಿಗೆ ಗ್ಯಾಸ್ ಒಲೆ ಮತ್ತು ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ. ಇದು ಪರಿಸರ ಸಂರಕ್ಷಣೆಯ ಬಹು ದೊಡ್ಡ ಅಭಿಯಾನವಾಗಿತ್ತು. ಉತ್ತರಾಖಂಡ ಮತ್ತು ಭಾರತ ಸರ್ಕಾರ ಸೇರಿ ಈ ರಾಜ್ಯದಲ್ಲಿ ಬಹು ದೊಡ್ಡ ಸಂಖ್ಯೆಯ ಕುಟುಂಬಗಳಿಗೆ ಇವುಗಳನ್ನು ಒದಗಿಸಲಾಗಿದೆ.
ಈಗ ಮತ್ತೊಂದು ಅಭಿಯಾನ ಕೈಗೊಳ್ಳಲಾಗಿದೆ. ಭಾರತದಲ್ಲಿ ನಾಲ್ಕು ಕೋಟಿ ಕುಟುಂಬಗಳ ಮನೆಗಳಲ್ಲಿ ವಿದ್ಯುತ್ ಬೆಳಕಿಲ್ಲ. ಇಂದಿಗೂ ಅವರು 18ನೆಯ, 19ನೆಯ ಶತಮಾನಗಳಲ್ಲಿ ಇದ್ದಂತೆ ಜೀವಿಸಬೇಕಾದ ಪರಿಸ್ಥಿತಿಯಿದೆ. ಇದು 21ನೆಯ ಶತಮಾನ. ಕಡು ಬಡವರ ಮನೆಗಳಿಗೂ ವಿದ್ಯುತ್ ಸಿಗಬೇಕೊ ಬೇಡವೊ? ಬಡವರು ಹಿಟ್ಟು ಬೀಸಲು, ಗೋಧಿ ಬೀಸಲು 10 ಕಿಲೋಮೀಟರ್ ದೂರ ಹೋಗಬೇಕಾಗಿದೆ. ಇದರ ಬದಲು ಹಳ್ಳಿಯಲ್ಲೇ ಧಾನ್ಯಗಳನ್ನು ಬೀಸುವ ಗಿರಣಿಗಳಿದ್ದರೆ ಅವರ ಹಿಟ್ಟು ಬೀಸುವ ಕೆಲಸ, ಧಾನ್ಯ ಬೀಸುವ ಕೆಲಸ ಆಗುತ್ತದೊ ಇಲ್ಲವೊ? ಬಡವರ ಜೀವನವನ್ನು ಬದಲಿಸಲು ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯ ಮೂಲಕ ನಾಲ್ಕು ಕೋಟಿ ಕುಟುಂಬಗಳಿಗೆ ಮನೆಯೊಳಗೆ ವಿದ್ಯುತ್ ಸಂಪರ್ಕ ನೀಡುವ ಅಭಿಯಾನವನ್ನು ನಾನು ಕೈಗೆತ್ತಿಕೊಂಡಿದ್ದೇನೆ. ಉತ್ತರಾಖಂಡದಲ್ಲಿ ಇಂದಿಗೂ ವಿದ್ಯುತ್ ಸಂಪರ್ಕ ನೀಡಬೇಕಾದ ಸಾವಿರಾರು ಕುಟುಂಬಗಳಿವೆ.
ಭಾರತ ಸರ್ಕಾರದ ಈ ಅಭಿಯಾನವನ್ನು ನೀವು ಕೈಗೆತ್ತಿಕೊಳ್ಳಿ ಎಂದು ನಾನು ಉತ್ತರಾಖಂಡ ಸರ್ಕಾರಕ್ಕೆ ಆಹ್ವಾನ ನೀಡುತ್ತೇನೆ. ರಾಜ್ಯ ರಾಜ್ಯಗಳ ನಡುವೆ ಸ್ಪರ್ಧೆ ಇರಲಿ. ಎಲ್ಲಕ್ಕಿಂತ ಮೊದಲು ಯಾವ ರಾಜ್ಯವು ಈ ಸೌಭಾಗ್ಯ ಯೋಜನೆಯನ್ನು ಮೊದಲು ಸಂಪೂರ್ಣವಾಗಿ ಕಾರ್ಯಗತಗೊಳಿಸುತ್ತದೆ? ಎಲ್ಲಕ್ಕಿಂತ ಮೊದಲು ಯಾವ ರಾಜ್ಯವು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಗುರಿ ತಲುಪುತ್ತದೆ? ಎಲ್ಲಕ್ಕಿಂತ ಮೊದಲು ಯಾವ ರಾಜ್ಯವು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತದೆ? ಮುಂದಿನ ದಿನಗಳಲ್ಲಿ ಪ್ರಗತಿಯ ಕ್ಷೇತ್ರಗಳಲ್ಲಿ ರಾಜ್ಯ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಲಿ. ಹಿಮಾಲಯದ ರಾಜ್ಯಗಳಿಗೆ ನಾನು ಆಹ್ವಾನ ನೀಡುತ್ತೇನೆ. ದೇಶದ ಎಲ್ಲ ರಾಜ್ಯಗಳಿಗೆ ಆಹ್ವಾನ ನೀಡುತ್ತೇನೆ. ಬನ್ನಿ, ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಆರೋಗ್ಯಕರ ಸ್ಪರ್ಧೆ ನಡೆಸಲಿ. ಆರೋಗ್ಯಕರ ಸ್ಪರ್ಧೆಯ ಮೂಲಕ ದೇಶವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯೋಣ.
ಬಯಲು ಶೌಚಾಲಯದಿಂದ ಮುಕ್ತಿ ಹೊಂದಿದ್ದಕ್ಕಾಗಿ ನಾನು ಉತ್ತರಾಖಂಡ ಸರ್ಕಾರವನ್ನು ಅಭಿನಂದಿಸುತ್ತೇನೆ. ಉತ್ತರಾಖಂಡವು ಗ್ರಾಮೀಣ ಕ್ಷೇತ್ರದಲ್ಲಿ ಶೌಚಾಲಯ ನಿರ್ಮಾಣದ ಕೆಲಸವನ್ನು ಪೂರೈಸಿದೆ ಎಂದು ಕೆಲವು ದಿನಗಳ ಹಿಂದೆ ನನಗೆ ತಿಳಿಸಲಾಗಿದೆ. ಈಗ ಹಳ್ಳಿಯಲ್ಲಿ ಯಾರೂ ಬಯಲಿನಲ್ಲಿ ಶೌಚಕ್ಕೆ ಹೋಗಬೇಕಾಗಿಲ್ಲ. ಪಟ್ಟಣಗಳಲ್ಲಿ ಕೆಲಸ ನಡೆಯುತ್ತಿದೆ. ಕೆಲವೇ ಸಮಯದಲ್ಲಿ ಪಟ್ಟಣಗಳ ಸಮೇತ ಇಡೀ ಉತ್ತರಾಖಂಡವು ಬಯಲು ಶೌಚಾಲಯದಿಂದ ಮುಕ್ತಿ ಹೊಂದುವುದಕ್ಕೆ ಸಿದ್ಧತೆಗಳು ನಡೆಯುತ್ತಿದೆ.
ಇದುವರೆಗಿನ ಕೆಲಸಗಳಿಗೆ ವೇಗ ನೀಡಿರುವುದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಆದರೆ ಇದನ್ನು ಒಂದು ಮಿಷನ್ ಮೋಡ್ ನಲ್ಲಿ ತೆಗೆದುಕೊಂಡು ಹೋಗಿ ಎಂದು ನಾನು ಮನವಿ ಮಾಡುತ್ತೇನೆ. ನಗರಗಳಲ್ಲಿ ಸಹ ಯಾರಿಗೂ ಬಯಲಿನಲ್ಲಿ ಶೌಚಕ್ಕೆ ಹೋಗುವಂತಹ ಪರಿಸ್ಥಿತಿ ಇರಬಾರದು.
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶಕ್ಕೆ ಹೋಗಿದ್ದೆ, ಯೋಗಿ ಅವರ ಸರ್ಕಾರವು ಉತ್ತರ ಪ್ರದೇಶದಲ್ಲಿ ಬಹು ದೊಡ್ಡ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಅವರು ಈಗ ಶೌಚಾಲಯದ ಹೆಸರನ್ನೇ ಬದಲಿಸಿದ್ದಾರೆ. ಈಗ ಅಲ್ಲಿ ಶೌಚಾಲಯವು ಶೌಚಾಲಯವಾಗಿ ಉಳಿದಿಲ್ಲ. ಶೌಚಾಲಯವನ್ನು ಸಂಡಾಸ್ ಎಂದು ಕರೆಯುವುದಿಲ್ಲ. ಅವರು ಶೌಚಾಲಯಕ್ಕೆ “ಇಜ್ಜತ್ ಘರ್” ಎಂಬ ಹೆಸರು ನೀಡಿದ್ದಾರೆ.
ಬಯಲಿನಲ್ಲಿ ಶೌಚಕ್ಕೆ ಹೋಗುವ ಎಲ್ಲ ಸೋದರ ಸೋದರಿಯರಿಗೆ ಇಜ್ಜತ್ ನ ಅರ್ಥವೇನೆಂದು ಬಹಳ ಚೆನ್ನಾಗಿ ಗೊತ್ತಿರುತ್ತದೆ. ನಾವು ಸಹ ಈ ಇಜ್ಜತ್ ಘರ್ ನ ಅಭಿಯಾನವನ್ನು ನಡೆಸೋಣ. ತಾಯಂದಿರು, ಸೋದರಿಯರಿಗೆ ಮರ್ಯಾದೆ ಕೊಡಲು ಶೌಚಾಲಯವನ್ನು ನಿರ್ಮಿಸಿದರೆ ಒಂದು ದೊಡ್ಡ ಸೌಕರ್ಯ ನೀಡಿದಂತಾಗುತ್ತದೆ. ಇದರಿಂದ ಅವರ ಆರೋಗ್ಯಕ್ಕೂ ಬಹಳ ಅನುಕೂಲವಾಗುತ್ತದೆ. ಇತ್ತೀಚೆಗಷ್ಟೆ ಯೂನಿಸೆಫ್ ಒಂದು ಸಮೀಕ್ಷೆ ನಡೆಸಿತು. ಭಾರತದ ಹತ್ತು ಸಾವಿರ ಹಳ್ಳಿಗಳಲ್ಲಿ ಅದು ಸಮೀಕ್ಷೆ ನಡೆಸಿತು. ಶೌಚಾಲಯಗಳನ್ನು ಹೊಂದಿರುವ ಮತ್ತು ಹೊಂದಿಲ್ಲದ ಮನೆಗಳ ಸಮೀಕ್ಷೆ ನಡೆಸಿತು. ಶೌಚಾಲಯಕ್ಕೆ ಸಂಬಂಧಿಸಿದಂತೆ ಜಾಗೃತಿ ಹೊಂದಿದ ಹಳ್ಳಿಗಳು ಮತ್ತು ಜಾಗೃತಿ ಹೊಂದಿಲ್ಲದ ಹಳ್ಳಿಗಳು ಎಲ್ಲವನ್ನೂ ಸೇರಿಸಿ ಯೂನಿಸೆಫ್ ಅಧ್ಯಯನ ನಡೆಸಿತು. ಇದು ವಿಶ್ವಸಂಸ್ಥೆಯ ಒಂದು ಅಂಗ ಸಂಸ್ಥೆಯಾಗಿದೆ. ಶೌಚಾಲಯ ಇಲ್ಲದ ಕಾರಣಕ್ಕೆ ಮನೆಯಲ್ಲಿ ವಿಭಿನ್ನ ರೋಗಗಳು ದಾಳಿ ಇಡುತ್ತವೆ. ಮಗುವಿಗೆ ಖಾಯಿಲೆಯಾದರೆ ತಂದೆತಾಯಿ ಅದರ ಆರೈಕೆಯಲ್ಲಿ ಮಗ್ನರಾಗುತ್ತಾರೆ. ಮಗು ಶಾಲೆಗೆ ಹೋಗುವುದಿಲ್ಲ. ತಂದೆಗೆ ಹೊರಗೆ ಹೋಗಿ ದುಡಿಯಲು ಆಗುವುದಿಲ್ಲ. ತಾಯಿ ಖಾಯಿಲೆ ಬಿದ್ದರೆ ಇಡೀ ಮನೆ ಖಾಯಿಲೆ ಬಿದ್ದಂತಾಗುತ್ತದೆ. ಮನೆಯಲ್ಲಿ ಸಂಪಾದಿಸುವ ವ್ಯಕ್ತಿಗೆ ರೋಗ ಬಂದರೆ ಆದಾಯ ನಿಂತುಹೋಗುತ್ತದೆ, ಇಡೀ ಕುಟುಂಬ ಹಸಿವಿನಿಂದ ನರಳುತ್ತದೆ. ಶೌಚಾಲಯ ಇಲ್ಲದಿದ್ದರೆ ರೋಗಕ್ಕೆ ಖರ್ಚಾಗುತ್ತದೆ. ಅದೇ ಶೌಚಾಲಯ ನಿರ್ಮಿಸಿದರೆ ಪ್ರತಿ ಬಡ ಕುಟುಂಬಕ್ಕೆ 50 ಸಾವಿರ ರೂಪಾಯಿಗಳ ಖರ್ಚು ಉಳಿಯುತ್ತದೆ ಎಂದು ಅದು ಸಮೀಕ್ಷೆಯಲ್ಲಿ ಕಂಡುಕೊಳ್ಳುತ್ತದೆ. ಒಂದು ಕುಟುಂಬವು 50 ಸಾವಿರ ಉಳಿಸಿಕೊಂಡರೆ ಆ ಕುಟುಂಬದ ಜೀವನದಲ್ಲಿ ಅದೆಂತಹ ಶಕ್ತಿ ಬರುತ್ತದೆ ಎಂದು ಈಗ ನೀವೇ ಯೋಚಿಸಿ.
ಒಂದು ಶೌಚಾಲಯವು ಜೀವನವನ್ನು ಬದಲಿಸಬಲ್ಲದು. ಬಾಬಾ ಕೇದಾರನಾಥನ ಧಾಮವನ್ನು ಶ್ರದ್ಧೆಯಿಂದ ನಿರ್ಮಿಸುವ ರೀತಿಯಲ್ಲೇ ಇಡೀ ದೇಶದಲ್ಲಿ ಭಾರತದ ಬಡವರಿಗೆ ಶೌಚಾಲಯ ನಿರ್ಮಿಸಿಕೊಡುವ ಅಭಿಯಾನವನ್ನು ನಡೆಸಬೇಕಾಗಿದೆ. ಆಗ ನನ್ನ ದೇಶ ಇನ್ನೂ ಮುಂದಕ್ಕೆ ಬರುತ್ತದೆ. ಈ ಭಾವದೊಂದಿಗೆ ನಾವು ಮುಂದೆ ಸಾಗೋಣ.
ಉತ್ತರಾಖಂಡ ಸರ್ಕಾರವನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ, ಧನ್ಯವಾದ ಸಲ್ಲಿಸುತ್ತೇನೆ. ದೇಶಾದ್ಯಂತ ಚಾರ್ ಧಾಮ ಯಾತ್ರೆಗೆ ಬರುವ ಜನರಿಗಾಗಿ ನಾವು 12 ಸಾವಿರ ಕೋಟಿ ವೆಚ್ಚದಲ್ಲಿ ಈ ಎಲ್ಲ ನಾಲ್ಕೂ ಧಾಮಗಳನ್ನು ಸೇರಿಸುವ ರಸ್ತೆ ನಿರ್ಮಾಣದ ಕಾರ್ಯವನ್ನು ಆರಂಭಿಸಿದ್ದೇವೆ. ಆಧುನಿಕ ಸಂಪರ್ಕದ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಈಗ ಈ ಕೇದಾರನಾಥ ಧಾಮವು ಭವ್ಯ, ದಿವ್ಯವಾಗಿ ಇರುವಂತೆ ನಿರ್ಮಿಸಲಾಗುವುದು. ಪ್ರೇರಣೆಯ ಉತ್ತಮ ಸ್ಥಳವಾಗುವುದು. ನೂರಾ ಇಪ್ಪತ್ತೈದು ಕೋಟಿ ದೇಶವಾಸಿಗಳ ಶ್ರದ್ಧೆಯ ಕೇಂದ್ರವಾಗುತ್ತಿದೆ. ವಯಸ್ಸಾದ ತಂದೆ ತಾಯಿಯನ್ನು ಒಂದು ಸಾರಿಯಾದರೂ ಚಾರ್ ಧಾಮ ಯಾತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಪ್ರತಿಯೊಬ್ಬ ಮಕ್ಕಳಿಗೆ ಆಸೆ ಇರುತ್ತದೆ.
ನೂರಾ ಇಪ್ಪತ್ತೈದು ಕೋಟಿ ದೇಶವಾಸಿಗಳ ಕನಸನ್ನು ಸಾಕಾರ ಮಾಡಲು ಇಂದು ಈ ಸರ್ಕಾರವು ಕೆಲಸ ಮಾಡುತ್ತಿದೆ. ಕೆಲಸವು ಉತ್ತರಾಖಂಡ ನೆಲದಲ್ಲಿ ಆಗುತ್ತಿದ್ದರೂ ಅದು ಭಾರತದ ಎಲ್ಲ ಜನರಿಗಾಗಿ ಆಗುತ್ತಿದೆ. ಆ ಕೆಲಸವನ್ನು ನಿಮ್ಮ ಮುಂದೆ ಆರಂಭಿಸುತ್ತಾ ಜೀವನದಲ್ಲಿ ಒಂದು ದೈವಿಕ ತೃಪ್ತಿಯನ್ನು ಅನುಭವಿಸುತ್ತಿದ್ದೇನೆ.
ನನ್ನ ಕಡೆಯಿಂದ ನಿಮ್ಮಲ್ಲರಿಗೆ ಶುಭ ಹಾರೈಕೆಗಳು. ಮತ್ತೊಮ್ಮೆ ಭೋಲೆ ಬಾಬಾಗೆ ವಂದಿಸುತ್ತೇನೆ. ಮತ್ತೊಮ್ಮೆ ನನ್ನ ಜೊತೆ ಎರಡೂ ಮುಷ್ಠಿ ಬಿಗಿ ಹಿಡಿದು ಜೋರಾಗಿ ಹೇಳಿ –
ಜಯ ಜಯ ಬಾಬಾ ಭೋಲೆ, ಜಯ ಜಯ ಬಾಬಾ ಭೋಲೆ,
ಜಯ ಜಯ ಬಾಬಾ ಭೋಲೆ, ಜಯ ಜಯ ಬಾಬಾ ಭೋಲೆ
ಬಹಳ ಧನ್ಯವಾದಗಳು.
I am happy to be in Kedarnath, a day after Diwali. Today, Gujaratis are celebrating the start of a New Year. I convey my greetings to everyone around the world who mark the start of Nutan Varsh: PM @narendramodi in Kedarnath
— PMO India (@PMOIndia) October 20, 2017
Jan Seva is Prabhu Seva. From this holy land of Kedarnath, I seek the blessings of Bhole Baba and pledge to devote myself fully to realising the dream of a developed India by the time we mark 75 years of freedom in 2022: PM @narendramodi
— PMO India (@PMOIndia) October 20, 2017
The floods of 2013 had made all of us extremely sad. That time I was not the Prime Minister, I was the Chief Minister of Gujarat. I came here to do all that I could for victims: PM @narendramodi
— PMO India (@PMOIndia) October 20, 2017
Through the work we are doing in Kedarnath, we want to show how an ideal 'Tirth Kshetra' should be, how it should be pilgrim friendly and the wellbeing of the priests should be given importance: PM @narendramodi
— PMO India (@PMOIndia) October 20, 2017
We are building quality infrastructure in Kedarnath. It will be modern but the traditional ethos will be preserved. We will ensure the environment is not damaged: PM @narendramodi
— PMO India (@PMOIndia) October 20, 2017
The Himalayas have so much to offer- for spiritual pursuits, for the nature lover, for those interested in adventure, water sports. I invite everyone to come and explore the Himalayas: PM @narendramodi
— PMO India (@PMOIndia) October 20, 2017
PM @narendramodi prayed at the Kedarnath Temple and addressed a gathering. pic.twitter.com/exHEARNDRP
— PMO India (@PMOIndia) October 20, 2017
Felt blessed after praying at Kedarnath. pic.twitter.com/n5NqMqDrzY
— Narendra Modi (@narendramodi) October 20, 2017
Projects whose foundation stones were laid will give a much needed boost to Kedarnath’s infrastructure. https://t.co/qdFSVq3OH2 pic.twitter.com/lQxGyToyBt
— Narendra Modi (@narendramodi) October 20, 2017
Kedarnath will become a model ‘Teertha Kshetra.’ We are creating proper facilities for pilgrims and ensuring welfare of the priests. pic.twitter.com/F9zYO2SFjm
— Narendra Modi (@narendramodi) October 20, 2017
Majestic, diverse and enchanting…the Himalayas are waiting for you. Come, experience the incredible Himalayas in #IncredibleIndia. pic.twitter.com/jmqnPVSHF3
— Narendra Modi (@narendramodi) October 20, 2017