Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಫ್.ಐ.ಸಿ.ಸಿ.ಐ ಯ 90ನೇ ವಾರ್ಷಿಕ ಮಹಾಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರು ಮಾಡಿದ ಭಾಷಣ


ಎಫ್.ಐ.ಸಿ.ಸಿ.ಐ.  ಅಧ್ಯಕ್ಷರಾದ ಶ್ರೀ ಪಂಕಜ್ ಆರ್. ಪಟೇಲ್ ಜಿ, ನಿಯೋಜಿತ ಅಧ್ಯಕ್ಷರಾದ ಶ್ರೀ ರಮೇಶ್ ಶಾಹ ಜೀ, ಮಹಾ ಪ್ರಧಾನ ಕಾರ್ಯದರ್ಶಿ ಡಾ. ಸಂಜಯ್ ಬರೂ ಜೀ ಮತ್ತು  ಇಲ್ಲಿ ಹಾಜರಿರುವ ಇತರ ಗೌರವಾನ್ವಿತ ಗಣ್ಯರೇ.

 

ನೀವೆಲ್ಲರೂ ಕಳೆದ ವರ್ಷದ ಕೆಲಸ ಕಾರ್ಯಗಳ ಬಗ್ಗೆ ಪರ್ಯಾಲೋಚಿಸುತ್ತಾ ಇಲ್ಲಿ ಕುಳಿತಿದ್ದೀರಿ. ಈ ವರ್ಷ ಎಫ್.ಐ.ಸಿ.ಸಿ.ಐ.ಯು 90 ವರ್ಷಗಳನ್ನು ಪೂರೈಸುತ್ತಿದೆ. ಇದು ಯಾವುದೇ ಸಂಘಟನೆಗೆ ಭಾರೀ ಹೆಮ್ಮೆಯ ವಿಷಯ. ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

 

ಸ್ನೇಹಿತರೇ,

ಅದು ಸುಮಾರು 1927 ಕ್ಕೆ ಹತ್ತಿರದ ಸಂಗತಿ, ಸೈಮನ್ ಆಯೋಗ ರಚನೆಯಾದಾಗಿನದ್ದು. ಭಾರತದ ಕೈಗಾರಿಕೋದ್ಯಮ ಆಯೋಗದ ವಿರುದ್ಧ ಒಗ್ಗೂಡಿತ್ತು. ಆ ಕಾಲಕ್ಕೆ ಇದು ಒಂದು ದೊಡ್ಡ ಪ್ರೆರೇಪಣೆ ಕೊಡುವ ಮತ್ತು ಚರಿತ್ರಾರ್ಹ ಘಟನೆಯಾಗಿತ್ತು. ಉದ್ಯಮವು ಸೈಮನ್ ಆಯೋಗದ ವಿರುದ್ಧ ಧ್ವನಿ ಎತ್ತಿತ್ತು, ಇದಕ್ಕಾಗಿ ಅದು ಸ್ವಂತ ಹಿತಾಸಕ್ತಿಯನ್ನು ಮೀರಿ ನಡೆದುಕೊಂಡಿತ್ತು. ಭಾರತೀಯ ಸಮಾಜದ ಪ್ರತಿಯೊಂದು ಅಂಗವೂ ರಾಷ್ಟ್ರೀಯ ಹಿತಾಸಕ್ತಿಗಾಗಿ ಮುಂದೆ ಬಂದಂತೆ, ಭಾರತದ ಉದ್ಯಮ ರಂಗವೂ ರಾಷ್ಟ್ರ ನಿರ್ಮಾಣಕ್ಕೆ ತನ್ನ ಶಕ್ತಿಯನ್ನು ನೀಡಿತು.

 

ಸಹೋದರರೇ ಮತ್ತು ಸಹೋದರಿಯರೇ,

ತೊಂಬತ್ತು ವರ್ಷಗಳ ಹಿಂದೆ ಜನ ಸಾಮಾನ್ಯರು ತಮ್ಮ ಸಾಮಾನ್ಯ ಜವಾಬ್ದಾರಿಗಳ ಜತೆ ರಾಷ್ಟ್ರದ ಜವಾಬ್ದಾರಿ ಹೊತ್ತುಕೊಳ್ಳಲು ಮುಂದೆ ಬಂದರು. ಅದೇ ರೀತಿ ಅದೇ ಶಕೆ ಇನ್ನೊಮ್ಮೆ ಆರಂಭಗೊಂಡಿತು. ಜನರ ನಿರೀಕ್ಷೆ, ಆಶಯಗಳ ಮಟ್ಟವನ್ನು ಇಂದಿನ ದಿನಗಳಲ್ಲಿ  ನೀವು ತಿಳಿದುಕೊಳ್ಳಬಹುದು. ಜನರು ಭ್ರಷ್ಟಾಚಾರ, ಕಪ್ಪು ಹಣ ಇತ್ಯಾದಿ ಆಂತರಿಕ ಸಮಸ್ಯೆಗಳಿಂದ ಕಂಗೆಟ್ಟಿದ್ದರು. ಮತ್ತು ಅವರು ಈ ಎಲ್ಲದರಿಂದ ಪಾರಾಗಲು ಬಯಸುತ್ತಿದ್ದರು.

ಆದ್ದರಿಂದ ಇಂದು ಯಾವುದೇ ಸಂಸ್ಥೆ, ಅದು ರಾಜಕೀಯ ಪಕ್ಷದ್ದಾಗಿರಲಿ,  ಇಲ್ಲವೇ ಎಫ್.ಐ.ಸಿ.ಸಿ.ಐ.ಯಂತಹ ಕೈಗಾರಿಕಾ ಸಂಸ್ಥೆಯಾಗಿರಲಿ, ಅವರಿಗೆ ದೇಶದ ಜನರ ಭಾವನೆ ಮತ್ತು ಅಗತ್ಯಗಳನ್ನು ಮನಗಂಡು ಭವಿಷ್ಯದ ತಂತ್ರವನ್ನು, ವ್ಯೂಹವನ್ನು ರೂಪಿಸಿಕೊಳ್ಳಲು ಇದು ಸಕಾಲ.

 

ಸ್ನೇಹಿತರೇ,

  ಸ್ವಾತಂತ್ರ್ಯದ  ಬಳಿಕ  ದೇಶದಲ್ಲಿ ಹಲವಾರು ಸಾಧನೆಗಳನ್ನು ಮಾಡಲಾಗಿದೆ. ಮತ್ತು ಈ ಎಲ್ಲಾ ವರ್ಷಗಳಲ್ಲಿ ನಮಗೆ ಹಲವಾರು ಸವಾಲುಗಳು  ಎದುರಾಗಿವೆ ಎಂಬುದೂ ಅಷ್ಟೇ ಸತ್ಯ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಬಡವರು ಒಂದಲ್ಲಾ ಒಂದು ರೀತಿಯಲ್ಲಿ ಈ ವ್ಯವಸ್ಥೆ ಎದುರು ಹೋರಾಟ ಮಾಡಬೇಕಾದಂತಹ ವ್ಯವಸ್ಥೆ ನಮ್ಮಲ್ಲಿದೆ. ಅವರು ಬಹಳ ಸಣ್ನ ಸಂಗತಿಗಳಿಗೂ ಹೋರಾಟ ಮಾಡಬೇಕಾಗಿದೆ. ಆ ಬಡ ವ್ಯಕ್ತಿ ಬ್ಯಾಂಕ್ ಖಾತೆ ಆರಂಭಿಸಬೇಕಿದ್ದರೂ ವ್ಯವಸ್ಥೆ ಅಡೆತಡೆಗಳನ್ನು ಒಡ್ಡುತ್ತದೆ. ಆತ ಅನಿಲ ಸಂಪರ್ಕ ಪಡೆಯಬೇಕೆಂದರೂ 10  ಕಡೆಗಳಲ್ಲಿ ಅಲೆದಾಡಬೇಕಾಗುತ್ತದೆ. ಆತನ ನಿವೃತ್ತಿ ವೇತನ ಪಡೆಯಬೇಕಿದ್ದರೂ ಅಥವಾ ವಿದ್ಯಾರ್ಥಿ ವೇತನ ಪಡೆಯಬೇಕಿದ್ದರೂ  ಹಲವು ಸ್ಥಳಗಳಲ್ಲಿ ಕಮಿಶನ್ ಪಾವತಿಸಬೇಕಾಗುತ್ತದೆ .

 

  ನನ್ನ ಸರಕಾರ ವ್ಯವಸ್ಥೆ ವಿರುದ್ದದ ಹೋರಾಟವನ್ನು ಕೊನೆಗಾಣಿಸುವ ಕೆಲಸವನ್ನು ಮಾಡುತ್ತಿದೆ.  ನಾವು ಪಾರದರ್ಶಕ ಮಾತ್ರವಲ್ಲ ಸೂಕ್ಷ್ಮತ್ವ ಇರುವ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಈ ವ್ಯವಸ್ಥೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

   ಅದರಿಂದಾಗಿಯೇ ಜನ್-ಧನ್ ಆರಂಭಿಸಿದಾಗ ಅದಕ್ಕೆ ಭವ್ಯವಾದ, ಅತ್ಯುತ್ತಮವಾದ ಪ್ರತಿಕ್ರಿಯೆ ಬಂದಿತು. ನಿಮಗೆ ಅಶ್ಚರ್ಯವಾಗಬಹುದು, ಸರಕಾರದ ಬಳಿ ಯಾವುದೇ ದತ್ತಾಂಶಗಳು, ಮಾಹಿತಿಗಳು  ಇಲ್ಲದಿದ್ದುದರಿಂದ  ಬಡವರಿಗೆ ಎಷ್ಟು ಜನ್-ಧನ್ ಖಾತೆಗಳನ್ನು ತೆರೆಯಬೇಕು ಎಂಬ ಬಗ್ಗೆ ಗುರಿಯನ್ನು ನಿಗದಿ ಮಾಡಿರಲಿಲ್ಲ.

 

  ಬ್ಯಾಂಕುಗಳು ಬಡಜನರನ್ನು ತಿರಸ್ಕರಿಸುತ್ತವೆ ಎಂಬ ಮಾಹಿತಿಯೊಂದು ಮಾತ್ರವೇ ನಮ್ಮ ಬಳಿ ಇತ್ತು. ಕೆಲವೊಮ್ಮೆ ಅವರನ್ನು ಹೀಯಾಳಿಸಿ ಇಲ್ಲವೇ ಇನ್ನು ಕೆಲವೊಮ್ಮೆ ಅವರ ದಾಖಲೆಗಳಲ್ಲಿ ತಪ್ಪು ಹುಡುಕಿ ಬಡವರನ್ನು ಅವು ಹೊರಗಿಡುತ್ತಿದ್ದವು. ಇವತ್ತು ನಾನು ನೋಡುತ್ತಿದ್ದೇನೆ, ಜನ-ಧನ್ ಯೋಜನೆಯ ಮೂಲಕ 30  ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆಗ ನನಗೆ ಅರ್ಥವಾಯಿತು , ಜನರ ಬಹಳ ದೊಡ್ಡ ಅಗತ್ಯವೊಂದು ಈಡೇರಿತು ಎಂಬುದಾಗಿ.  ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗಿದೆ ಮತ್ತು ಅಲ್ಲೆಲ್ಲಾ ಹಣದುಬ್ಬರ ದರ ಇಳಿಕೆಯಾಗಿರುವ  ಬಗ್ಗೆ ಅಧ್ಯಯನವೊಂದು ಗಮನ ಸೆಳೆದಿದೆ. ಇದರರ್ಥ ಈ ಯೋಜನೆ ಯಾವ ರೀತಿಯಲ್ಲಿ ಬಡವರ ಜೀವನದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ತಂದಿದೆ ಎಂಬುದಾಗಿದೆ.

 

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಸರಕಾರ ಜನರು ಎದುರಿಸುತ್ತಿದ್ದ ಸಮಸ್ಯೆಗಳು ಮತ್ತು ಅವರ ಆವಶ್ಯಕತೆಗಳನ್ನು ಪರಿಗಣನೆಗೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸುತ್ತಿದೆ. ಜೀವಿಸಲು ಉತ್ತಮವಾದ ವಾತಾವರಣವನ್ನು ಒದಗಿಸುವುದು ಮತ್ತು ಜನರ ಜೀವನವನ್ನು ಸುಲಭಗೊಳಿಸುವುದಕ್ಕೆ ಈ ದೃಷ್ಟಿಕೋನ ಆದ್ಯತೆ ನೀಡಿದೆ.

 

 ಬಡ ಜನರನ್ನು ಅಡುಗೆ ಮನೆಯ ಹೊಗೆಯಿಂದ ಮುಕ್ತ ಗೊಳಿಸುವುದಕ್ಕಾಗಿ ಉಜ್ವಲ ಯೋಜನೆಯನ್ನು ತರಲಾಯಿತು. 3 ಕೋಟಿಗೂ ಅಧಿಕ ಮಹಿಳೆಯರಿಗೆ ನಾವು ಉಚಿತ ಅನಿಲ ಸಂಪರ್ಕಗಳನ್ನು ಒದಗಿಸಿದ್ದೇವೆ. ಈ ಯೋಜನೆ ಆರಂಭದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಇಂಧನ ಉಬ್ಬರ ಕಡಿಮೆಯಾಗಿರುವುದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. ಇದರರ್ಥ ಬಡಜನರು ಇಂಧನಕ್ಕಾಗಿ ಮಾಡಬೇಕಾದ ಖರ್ಚು ಇಳಿದಿದೆ ಎಂಬುದಾಗಿ.

 

ನಾವು ಬಡವರು ಎದುರಿಸುತ್ತಿರುವ ಪ್ರತೀ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅದನ್ನು ಪರಿಹರಿಸಲು ಕಾರ್ಯಪ್ರವೃತ್ತರಾಗಿದ್ದೇವೆ. 5  ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಇದರಿಂದ ಬಡ ಮಹಿಳೆಯರು ಮುಜುಗುರದಿಂದ ಮುಕ್ತರಾಗಿದ್ದಾರೆ, ಅವರ ಆರೋಗ್ಯ ಮತ್ತು ಸುರಕ್ಷೆ ವಿಪತ್ತಿನಿಂದ ಮುಕ್ತವಾಗಿದೆ.

 

ಪ್ರಧಾನ ಮಂತ್ರಿ ಆವಾಸ್ ಯೋಜನಾ ಬಡ ಜನರು ತಮ್ಮದೇ ಆದ ಮನೆ ಹೊಂದಲು ಅನುಕೂಲ ಕಲ್ಪಿಸುವುದಕ್ಕೆ ಆರಂಭಿಸಲಾಗಿದೆ. ಬಡಜನರು ಬಾಡಿಗೆ ಪಾವತಿಸುವ ಮೊತ್ತಕ್ಕೇ ಸ್ವಂತ ಮನೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

 

ಸ್ನೇಹಿತರೇ,

  ದೂರ ಪ್ರದೇಶಗಳಲ್ಲಿ, ಹಳ್ಳಿಗಳಲ್ಲಿ  ನೀವು ಪ್ರತೇಕವಾದ ವಿಶ್ವವನ್ನು ಕಾಣುತ್ತೀರಿ. ಅದು ಈ ವಿಜ್ಞಾನ ಭವನದ ಹೊಳೆಯುವ ದೀಪಗಳಿಗಿಂತ ಭಿನ್ನ. ಈ ಅಲಂಕಾರಕ್ಕಿಂತ ಸಂಪೂರ್ಣ ಭಿನ್ನ. ಅಲ್ಲಿಯ ವಾತಾವರಣವೂ ಭಿನ್ನ.  ಆ ಬಡತನದ ವಿಶ್ವದಿಂದ ನಾನು ಬಂದಿದ್ದೇನೆ.ನಿಮ್ಮ ಜತೆಯಾಗಿದ್ದೇನೆ. ಸೀಮಿತ ಸಂಪನ್ಮೂಲಗಳು, ಸೀಮಿತ ಶಿಕ್ಷಣ, ಆದರೆ ಅನಿರ್ಬಂಧಿತ ಮತ್ತು ಮಿತಿಯಿಲ್ಲದ ಕನಸುಗಳು. ಆ ವಿಶ್ವ ನನಗೆ ಕೆಲಸ ಮಾಡುವುದನ್ನು ಕಲಿಸಿತು, ನಿರ್ಧಾರ ಕೈಗೊಳ್ಳುವುದನ್ನು ಕಲಿಸಿತು, ದೇಶದ ಅಗತ್ಯಗಳನ್ನು , ಬಡವರ ಆವಶ್ಯಕತೆಗಳನ್ನುತಿಳಿದುಕೊಂಡು , ಅರ್ಥ ಮಾಡಿಕೊಂಡು ಅದಕ್ಕೆ  ಅನುಗುಣವಾಗಿ ನಿರ್ಧಾರಗಳನ್ನು ಜಾರಿ ಮಾಡುವುದನ್ನು ಕಲಿಸಿತು.

  ಮುದ್ರಾ ಸಾಲ ಯೋಜನೆ  ಯುವಕರ ದೊಡ್ಡ ಬೇಡಿಕೆಯನ್ನು ಈಡೇರಿಸುತ್ತಿದೆ. ಅಲ್ಲಿ ಬ್ಯಾಂಕ್ ಖಾತರಿಯ ಪ್ರಶ್ನೆ ಇತ್ತು. ಯುವಕರು ಯಾರಾದರೂ ತಮ್ಮದೇ ಆದುದೇನಾದರೂ ಮಾಡಬೇಕೆಂದಿದ್ದರೆ ಆವರನ್ನು ಕಾಡುತ್ತಿದ್ದುದು ಹಣಕಾಸನ್ನು ಹೇಗೆ ಹೊಂದಿಸುವುದು ಎಂಬ ಚಿಂತೆ. ಸರಕಾರ ಈ ನಿಟ್ಟಿನಲ್ಲಿ ಮುದ್ರಾ ಯೋಜನೆಯ ಮೂಲಕ ಖಾತರಿಯನ್ನು ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ನಾವು 9.75  ಕೋಟಿ ರೂ. ಸಾಲವನ್ನು ಮಂಜೂರು ಮಾಡಿದ್ದೇವೆ. ಯಾವುದೇ ಬ್ಯಾಂಕ್ ಖಾತರಿ ಇಲ್ಲದೇ 4 ಲಕ್ಷ ಕೋಟಿ ರೂ. ಗಳಿಗೂ ಅಧಿಕ ಸಾಲವನ್ನು  ಯುವಕರಿಗೆ ವಿತರಿಸಲಾಗಿದೆ. ಭಾರತ ಸರಕಾರವು ಯುವಕರ ಅತ್ಯಂತ ದೊಡ್ಡ ಆವಶ್ಯಕತೆಯನ್ನು ಈಡೇರಿಸುವಲ್ಲಿ ಅವರ ಜತೆಗೆ ನಿಂತಿದೆ. ಅದರ ಫಲವಾಗಿ ದೇಶವು ಸುಮಾರು 3 ಕೋಟಿ ಉದ್ಯಮಿಗಳನ್ನು ಕಳೆದ ಮೂರು ವರ್ಷಗಳಲ್ಲಿ ಪಡೆದಿದೆ.

 

ಇವರೆಲ್ಲ ತಮ್ಮ ಮೊದಲ ಬ್ಯಾಂಕ್ ಸಾಲವನ್ನು ಮುದ್ರಾ ಯೋಜನೆಯಡಿ ಪಡೆದುಕೊಂಡವರು. ಈ ಮೂರು ಕೋಟಿ ಜನ ದೇಶದ ಸಣ್ಣ ಕೈಗಾರಿಕಾ ವಲಯದ , ಮಧ್ಯಮ ಮತ್ತು ಸಣ್ಣ ಕೈಗಾರಿಕಾ ವಲಯದ ಬಲಪಡಿಸುವಿಕೆಗೆ ಕಾಣಿಕೆ ನೀಡಿದ್ದಾರೆ ಮತ್ತು ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.

ಸರಕಾರ ನವೋದ್ಯಮಗಳನ್ನು ಪ್ರೋತ್ಸಾಹಿಸುತ್ತಿದೆ. ನವೋದ್ಯಮಗಳ ಅತಿ ದೊಡ್ದ ಆವಶ್ಯಕತೆ ಎಂದರೆ ವಿಪತ್ತು ಬಂಡವಾಳ. ಇದನ್ನು ಈಡೇರಿಸಲು ಸರಕಾರವು ಸಿಡ್ಬಿ (ಎಸ್.ಐ.ಡಿ.ಬಿ.ಐ.)  ಅಡಿಯಲ್ಲಿ ಹಣಕಾಸು ನಿಧಿಯ ನಿಧಿಯನ್ನು ಸ್ಥಾಪಿಸಿದೆ. ಈ ನಿರ್ಧಾರದ ಅನ್ವಯ ಸಿಡ್ಬಿ ಮಾಡಿದ ಹೂಡಿಕೆಯನ್ನು ಇತರ ಹೂಡಿಕೆದಾರರ ಸಹಾಯದೊಂದಿಗೆ ನಾಲ್ಕು ಪಟ್ಟಿಗೂ ಅಧಿಕ ಪ್ರಯೋಜನ ದೊರೆಯುವಂತೆ ಮಾಡಲಾಗಿದೆ.. ಈ ಕಾರಣದಿಂದಾಗಿ ಹೊಸ ಚಿಂತನೆಯ ನವೋದ್ಯಮಗಳಿಗೆ  ಹೆಚ್ಚು ಸುಲಭವಾಗಿದೆ.

 

ಸಹೋದರರೇ ಮತ್ತು ಸಹೋದರಿಯರೇ,

ಪರ್ಯಾಯ ಹೂಡಿಕೆ ನಿಧಿಯ ಮೂಲಕ ಮಾಡಲಾದ ಹೂಡಿಕೆ  ನವೋದ್ಯಮಗಳ ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸರಕಾರ ಕೈಗೊಂಡ ನೀತಿ ನಿರ್ಧಾರಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ  ಹೂಡಿಕೆ ಗಮನಾರ್ಹ ರೀತಿಯಲ್ಲಿ ಹೆಚ್ಚಿದೆ. ಸರಕಾರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ, ಯುವಕರ ಆವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ನೀತಿಗಳನ್ನು ರೂಪಿಸುತ್ತಿದೆ ಎಂಬುದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಹಿಂದಿನ ಸರಕಾರಕ್ಕೆ ಹೋಲಿಸಿದಾಗ ನಿಮಗೆ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ. ಅವರ ಕಾಲದಲ್ಲಿ ಬಿಲಿಯಾಂತರ ರೂಪಾಯಿಗಳ ಸಾಲವನ್ನು ಕೆಲವು ಕೈಗಾರಿಕೋದ್ಯಮಿಗಳಿಗೆ ಕೊಡಲಾಯಿತು.. ಬ್ಯಾಂಕುಗಳ ಮೇಲೆ ಒತ್ತಡ ತಂದು ಸಾಲವನ್ನು ಮಂಜೂರು ಮಾಡಿಸಲಾಯಿತು.

 

 ಸ್ನೇಹಿತರೇ,

ಎಫ್.ಐ.ಸಿ.ಸಿ.ಐ.ಯು ತನ್ನ ಬಗ್ಗೆ ತಾನೇ ಹೇಳಿಕೊಂಡಿರುವುದು ಏನೆಂದರೆ -ಅದು ತನ್ನನ್ನು ತಾನು ನೀತಿ ಬದಲಾವಣೆಗಾಗಿ ಕೈಗಾರಿಕೋದ್ಯಮದ ಧ್ವನಿ ಎಂದು  ಕರೆದುಕೊಂಡಿದೆ. ನೀವು ಸರಕಾರಕ್ಕೆ ಕೈಗಾರಿಕೋದ್ಯಮದ ದ್ವನಿಯನ್ನು ತಲುಪಿಸುತ್ತೀರಿ. ನೀವು ನಿಮ್ಮ ಸರ್ವೇಗಳನ್ನು ಪ್ರಕಟಿಸುತ್ತಲೂ , ಸಭೆ ಸಮಾರಂಭಗಳನ್ನು ಸಂಘಟಿಸುತ್ತಲೂ ಇರುತ್ತೀರಿ. ಆದಾಗ್ಯೂ ಹಿಂದಿನ ಸರಕಾರದ ನೀತಿಗಳು ಬ್ಯಾಂಕಿಂಗ್ ವಲಯದ ಮೆಲೆ ಹೇಗೆ ವ್ಯತಿರಿಕ್ತ ಪರಿಣಾಮ ಬೀರಿದವು ಎಂಬುದನ್ನು ಎಫ್.ಐ.ಸಿ.ಸಿ.ಐ. ಸರ್ವೇ ಮಾಡಿ ದೆಯೇ ಇಲ್ಲವೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಈಗಿನ ದಿನಗಳಲ್ಲಿ ಅನುತ್ಪಾದಕ ಆಸ್ತಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ದ್ವನಿ ಕೇಳಿ ಬರುತ್ತಿದೆ. ಹಿಂದಿನ ಸರಕಾರದಲ್ಲಿ ಇದ್ದ  ’ಅರ್ಥಶಾಸ್ತ್ರಜ್ಞರು” ಈ ಸರಕಾರದ ಮೇಲೆ ಹೊರಿಸಿದ ದೊಡ್ಡ ಸಾಲ ಬಾಧೆಯೇ ಈ ಅನುತ್ಪಾದಕ ಆಸ್ತಿ (ಎನ್.ಪಿ.ಎ.)ಗಳಾಗಿವೆ.

 

ಸರಕಾರದಲ್ಲಿ ಕುಳಿತ ಕೆಲವು ಮಂದಿ ಬ್ಯಾಂಕುಗಳ ಮೇಲೆ ಒತ್ತಡ ಹೇರಿ ಕೆಲವೇ ಕೆಲವು ಕೈಗಾರಿಕೋದ್ಯಮಿಗಳಿಗೆ ಸಾಲ ಸೌಲಭ್ಯ ಕೊಡುತ್ತಿರುವಾಗ ಎಫ್.ಐ.ಸಿ.ಸಿ.ಐ.ಯಂತಹ ಸಂಸ್ಥೆಗಳೂ ಏನು ಮಾಡುತ್ತಿದ್ದವು ಎಂಬುದನ್ನು ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಹಿಂದಿನ ಸರಕಾರದಲ್ಲಿ ಕುಳಿತ ಕೆಲವರಿಗೆ ಇದು ತಪ್ಪು ಎಂದು ಗೊತ್ತಿತ್ತು., ಬ್ಯಾಂಕುಗಳಿಗೂ ಗೊತ್ತಿತ್ತು. ಕೈಗಾರಿಕೋದ್ಯಮಿಗಳಿಗೂ ಗೊತ್ತಿತ್ತು. ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಸಂಸ್ಥೆಗಳಿಗೂ ಇದು ಗೊತ್ತಿತ್ತು.

 

  ಇದು ಯು.ಪಿ.ಎ. ಸರಕಾರದ ಅತಿ ದೊಡ್ಡ ಹಗರಣ. ಇದು ಕಾಮನ್ ವೆಲ್ತ್, 2 ಜಿ, ಮತ್ತು ಕಲ್ಲಿದ್ದಲು ಹಗರಣಗಳಿಗಿಂತ ದೊಡ್ದದು. ಸರಕಾರದಲ್ಲಿ ಕುಳಿತ ಜನರು ಬ್ಯಾಂಕುಗಳ ಮೂಲಕ ಜನರ ಕಠಿಣ ದುಡಿಮೆಯ ಹಣವನ್ನು ಲೂಟಿ ಮಾಡಿದರು. ಇದು ಯಾವುದಾದರೂ ಸರ್ವೇಯಲ್ಲಾಗಲೀ, ಯಾವುದಾದರೂ ಅಧ್ಯಯನದಲ್ಲಾಗಲೀ ಒಂದು ಬಾರಿಯಾದರೂ ಪ್ರಸ್ತಾಪಿಸಲ್ಪಟಿದೆಯೇ ?. ಮೌನವಾಗಿ ಕುಳಿತು ಎಲ್ಲವನ್ನು ನೋಡುತ್ತಿರುವ ಜನರನ್ನು ಎಚ್ಚರಿಸಲು ಯಾವುದಾದರೊಂದು ಸಂಸ್ಥೆ  ಏನಾದರು ಪ್ರಯತ್ನ  ಕೈಗೊಂಡಿದೆಯೇ.?

ಸ್ನೇಹಿತರೇ,

ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ದಯನೀಯ ಸ್ಥಿತಿಯನ್ನು ಸರ್ಪಡಿಸಲು ಸರಕಾರ ನಿಯಮಿತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಅದು ಮುಂದಾಗಿದೆ. ಬ್ಯಾಂಕಿನ ಹಿತಾಸಕ್ತಿಗಳು ಕಾಪಾಡಲ್ಪಟ್ಟಾಗ, ಗ್ರಾಹಕರ ಹಿತಾಸಕ್ತಿಗಳು ಕಾಪಾಡಲ್ಪಟ್ಟಾಗ  – ಆಗ ಮಾತ್ರ ದೇಶದ ಹಿತಾಸಕ್ತಿಗಳು ಸುರಕ್ಷಿತವಾಗಿರುತ್ತವೆ.

 

ಇಂತಹ ಸ್ಥಿತಿಯಲ್ಲಿ , ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ , ಜನರಿಗೆ ಮತ್ತು ಉದ್ಯಮಕ್ಕೆ ಸರಿಯಾದ ಮಾಹಿತಿ ಒದಗಿಸುವಲ್ಲಿ ಎಫ್.ಐ.ಸಿ.ಸಿ.ಐ.ಯಂತಹ ಸಂಸ್ಥೆಗಳಿಗೆ ಪ್ರಮುಖ ಪಾತ್ರವಿದೆ. ಉದಾಹರಣೆಗೆ ಕೆಲ ದಿನಗಳಿಂದ   ಹಣಕಾಸು ಮತ್ತು ಠೇವಣಿ ವಿಮಾ ವಿಧೇಯಕ –ಎಪ್.ಆರ್.ಡಿ.ಐ. ಬಿಲ್ ಕುರಿತಂತೆ ಹರಡುತ್ತಿರುವ ಗಾಳಿ ಸುದ್ದಿಗಳು..

 

  ಸರಕಾರವು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು, ಬ್ಯಾಂಕುಗಳಲ್ಲಿ ಅವರಿಟ್ಟ ಹಣವನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಆದರ ಹೊರತಾಗಿಯೂ ಸಂಪೂರ್ಣ ವ್ಯತಿರಿಕ್ತವಾದ  ಮಾಹಿತಿಯನ್ನು ಹರಡಲಾಗುತ್ತಿದೆ.ಕೈಗಾರಿಕೋದ್ಯಮ ಮತ್ತು ಜನ ಸಾಮಾನ್ಯರನ್ನು ತಪ್ಪು ದಾರಿಗೆಳೆಯುವ  ಇಂತಹ  ತಪ್ಪು ಮಾಹಿತಿಯನ್ನು ಹರಡುವುದನ್ನು ತಡೆಯಲು ಎಫ್.ಐ.ಸಿ.ಸಿ.ಐ.ಯಂತಹ ಸಂಸ್ಥೆಗಳ ಅಗತ್ಯ ಇದೆ.

 

 ಸರಕಾರದ ದ್ವನಿ ಮತ್ತು ಕೈಗಾರಿಕೋದ್ಯಮದ ದ್ವನಿ ಮತ್ತು ಸಾರ್ವಜನಿಕರ ಧ್ವನಿಯ ನಡುವೆ ಸಮತೋಲನ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ನೀವು ಚಿಂತಿಸಬೇಕು.ಈ ಸಮನ್ವಯ ಯಾಕೆ ಅಗತ್ಯ ಎಂಬುದಕ್ಕೆ ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ.

 

ಸ್ನೇಹಿತರೇ,

 

ಜಿ.ಎಸ್.ಟಿ.ಯನ್ನು ಅಂಗೀಕರಿಸಬೇಕು ಎಂಬುದು ಕೈಗಾರಿಕೋದ್ಯಮದ ಹಳೆಯ ಬೇಡಿಕೆಯಾಗಿತ್ತು. ಅದನ್ನು ಜಾರಿಗೆ ತರಬೇಕು ಎಂಬುದು ಅದರ ಆಗ್ರಹವಾಗಿತ್ತು. ಯಾವಾಗ ಅದನ್ನು ಜಾರಿಗೆ ತರಲಾಯಿತೋ, ಅದನ್ನು ಹೆಚ್ಚು ಕ್ರಿಯಾಶೀಲವಾಗಿಸುವಲ್ಲಿ ನಿಮ್ಮ ಸಂಸ್ಥೆ ಯಾವ ಪಾತ್ರವನ್ನು ನಿರ್ವಹಿಸಿತು ?. ಹಲವು ದಿನಗಳ ಕಾಲ ಬಳಕೆದಾರರು/ಗ್ರಾಹಕರು ರೆಸ್ಟೋರೆಂಟ್ ಗಳಲ್ಲಿ ತಮಗೆ ನೀಡಲಾದ ಬಿಲ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ  ತೆರಿಗೆ ಕಡಿಮೆಯಾದರೂ ಕೆಲ ರೆಸ್ಟೊರೆಂಟ್ ಗಳು ಮೂಲ ಬೆಲೆಯನ್ನೇ ಏರಿಸಿ , ದರ ಕಡಿತದ ಲಾಭ ಜನರಿಗೆ ಸಿಗದಂತೆ ಮಾಡಿರುವ ಬಗ್ಗೆ ಗಮನ ಸೆಳೆದಿದ್ದರು. ಸಾಮಾಜಿಕ ಮಾಧ್ಯಮದಲ್ಲಿರುವ  ನಿಮ್ಮ ಜನರು ಮೊದಲು ಇದನ್ನು ಗಮನಿಸಬೇಕಿತ್ತು. ಇದರ ಅರ್ಥ ನಿರ್ಧಾರಗಳ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂಬುದಾಗಿದೆ.

 

  ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ತನ್ನದೇ ಪ್ರಯತ್ನಗಳನ್ನು ನಡೆಸುತ್ತಿದೆ. ಆದಾಗ್ಯೂ ಎಫ್.ಐ.ಸಿ.ಸಿ.ಐ.ಯು ವ್ಯಾಪಾರೋದ್ಯಮಿಗಳಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯಾವುದಾದರು ಪ್ರಯತ್ನಗಳನ್ನು ಮಾಡಿದೆಯೇ ?.

 

ಸಹೋದರರೇ ಮತ್ತು ಸಹೋದರಿಯರೇ,

  ಜಿ.ಎಸ್.ಟಿ.ಯಂತಹ ವ್ಯವ್ಸ್ಥೆಯನ್ನು ರಾತ್ರಿ ಬೆಳಗಾಗುವುದರೊಳಗೆ ರೂಪಿಸುವುದು ಸಾಧ್ಯವಿಲ್ಲ. ನಾವು ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ. ಮತ್ತು ಗರಿಷ್ಟ ಸಂಖ್ಯೆಯಲ್ಲಿ ಉದ್ಯಮಗಳನ್ನು ಅದರ ಜತೆ ಜೋಡಿಸುವುದು ನಮ್ಮ ಗುರಿಯಾಗಿದೆ.

 

ಅದರ ವಹಿವಾಟು ಒಂದು ಲಕ್ಷ ಇರಲಿ 10  ಲಕ್ಷ ಇರಲಿ, ನಾವು ಸಣ್ಣ ವ್ಯಾಪಾರಿಗಳನ್ನು ಕೂಡಾ ವ್ಯವಸ್ಥೆಯೊಳಗೆ ತರಲು ಪ್ರಯತ್ನಿಸುತ್ತಿದ್ದೇವೆ. ಇದು ಸರಕಾರ ಆದಾಯ ಸಂಗ್ರಹಿಸಲು ಇಚ್ಚಿಸುತ್ತದೆ ಎಂಬ ಕಾರಣಕ್ಕಲ್ಲ, ಅಥವಾ ಸ್ವಲ್ಪ ಹಣ ಸಂಗ್ರಹಿಸಬಹುದು ಎಂಬ ಕಾರಣಕ್ಕೂ ಅಲ್ಲ. ಸರಕಾರ ಈ ಎಲ್ಲ ಕೆಲಸಗಳನ್ನು ಮಾಡುತ್ತಿರುವುದು ಬಡವರಿಗೂ ಲಾಭ ಸಿಗಬೇಕು ಎಂಬ ಕಾರಣಕ್ಕಾಗಿ,  ಹೆಚ್ಚು ಪಾರದರ್ಶಕ ವ್ಯವಸ್ಥೆ ಇರಬೇಕು ಎಂಬ ಕಾರಣಕ್ಕಾಗಿ. ಇದರ ಜತೆಗೆ , ಈ ಔಪಚಾರಿಕ ವ್ಯವಸ್ಥೆಯಿಂದಾಗಿ  ಅವರಿಗೆ ಬ್ಯಾಂಕುಗಳಿಂದ ಸುಲಭದಲ್ಲಿ ಸಾಲ ಸೌಲಭ್ಯ ಸಿಗುತ್ತದೆ, ಕಚ್ಚಾ  ಸಾಮಗ್ರಿಯ ಗುಣಮಟ್ಟ ವರ್ಧಿಸುತ್ತದೆ ಮತ್ತು ಸಾಗಾಟ ಖರ್ಚು ಕಡಿಮೆಯಾಗುತ್ತದೆ . ಇದರರ್ಥ ಸಣ್ನ ವ್ಯಾಪಾರೋದ್ಯಮಿಗಳು ಕೂಡಾ ಜಾಗತಿಕ ವ್ಯಾಪಾರೋದ್ಯಮದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿರಲು ಸಾಧ್ಯವಾಗುತ್ತದೆ. ಸಣ್ಣ ವ್ಯಾಪಾರೋದ್ಯಮಗಳಿಗೆ ಮಾರ್ಗದರ್ಶನ ಮಾಡಲು  ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಎಫ್.ಐ.ಸಿ.ಸಿ.ಐ. ಹಾಕಿಕೊಂಡಿರುವುದಾಗಿ ನಾನು ಭಾವಿಸುತ್ತೇನೆ.

 

ಸಹೋದರರೇ ಮತ್ತು ಸಹೋದರಿಯರೇ,

ಎಫ್.ಐ.ಸಿ.ಸಿ.ಐ.ಯ ಎಂ.ಎಸ್.ಎಂ.ಇ.ಯನ್ನು 2013 ರಲ್ಲಿ ರಚಿಸಲಾಯಿತು ಎಂದು ನನಗೆ ತಿಳಿಸಲಾಗಿದೆ. ಇದನ್ನು ಬರೇ 4 ವರ್ಷಗಳ ಹಿಂದೆ ರಚಿಸಲಾಯಿತೇ !. ನಾನಿದರ ಬಗ್ಗೆ ಮುಂದೇನೂ ಮಾತನಾಡುವುದಿಲ್ಲ. ಆದರೆ ನಾನು ಈ ನಿಟ್ಟಿನಲ್ಲಿ ನಿರ್ದಿಷ್ಟವಾಗಿ ಮುದ್ರಾ ಯೋಜನೆ, ನವೋದ್ಯಮ ಯೋಜನೆ, ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತೇನೆ. ನಮ್ಮ ಸಣ್ಣ ಕೈಗಾರಿಕೆಗಳು ಹೆಚ್ಚು ಶಕ್ತಿಯೊಂದಿಗೆ ಕೆಲಸ ಮಾಡಲು ಇಂತಹ ಅನುಭವಿ ಸಂಸ್ಥೆಯು ಅವರ ಕೈ ಹಿಡಿದಾಗ ಸಾಧ್ಯವಾಗಬಹುದು.

 

ಸರಕಾರಿ  ಇ ಮಾರುಕಟ್ಟೆ ಸ್ಥಳ-ಜಿ.ಇ.ಎಂ. ಎಂಬ ಹೆಸರಿನಲ್ಲಿ ಸರಕಾರ ರೂಪಿಸಿದ ವ್ಯವಸ್ಥೆ ಹೆಚ್ಚು ಜನರಿಗೆ ತಲುಪುವಂತಾಗಲು , ಸಣ್ಣ ಕೈಗಾರಿಕೆಗಳನ್ನು ಈ ವ್ಯವಸ್ಥೆಯಡಿ ಬೆಸೆಯಲು ನೀವು ಹೆಚ್ಚು ಪ್ರಯತ್ನಗಳನ್ನು ಮಾಡಬೇಕು. ಈಗ ಸಣ್ಣ ಉತ್ಪಾದಕರು ಕೂಡಾ ಜಿಇಎಂ ಮೂಲಕ ತನ್ನ ಉತ್ಪನ್ನಗಳನ್ನು ಸರಕಾರಕ್ಕೆ ಮಾರಬಹುದು.

 

ನಾನು ನಿಮ್ಮಿಂದ ಇನ್ನೊಂದು ನಿರೀಕ್ಷೆಯನ್ನಿರಿಕೊಂಡಿದ್ದೇನೆ. ಸಣ್ಣ ಕಂಪೆನಿಗಳ ಬಾಕಿ ಇರಿಸಿಕೊಂಡ ಹಣವನ್ನು ದೊಡ್ಡ ಕಂಪೆನಿಗಳು ಆದಷ್ಟು ಬೇಗ ಪಾವತಿ ಮಾಡುವಂತಾಗಬೇಕು. ಅದಕ್ಕೆ ಸಂಬಂಧಿಸಿ ಕಾನೂನುಗಳು ಇವೆ , ಆದಾಗ್ಯೂ ಸಣ್ಣ ವಹಿವಾಟುದಾರರ ಹಣ ದೊಡ್ಡ ಕಂಪೆನಿಗಳಲ್ಲಿ ಪಾವತಿಗೆ ಬಾಕಿ ಇರುವುದೂ ಅಷ್ಟೇ ಸತ್ಯ. ಅವರ ಬಾಕಿಯನ್ನು 3-4 ತಿಂಗಳ ಬಳಿಕ ಪಾವತಿ ಮಾಡಲಾಗುತ್ತದೆ. ವ್ಯಾಪಾರ ಬಾಂಧವ್ಯ ಹದಗೆಡುತ್ತದೆ ಎಂಬ ಕಾರಣಕ್ಕೆ ಆತ ಹಣ ಪಾವತಿಗೆ ಆಗ್ರಹಿಸಲು ಹಿಂಜರಿಯುತ್ತಾನೆ. ಆತನ ಈ ರೀತಿಯ ತೊಂದರೆ/ಸಮಸ್ಯೆಗಳನ್ನು ನಿವಾರಿಸಲು ನೀವು ಕೆಲವಾರು ಪ್ರಯತ್ನಗಳನ್ನು ಮಾಡಬೇಕು

 

ಸ್ನೇಹಿತರೇ

ಕಳೆದ ಶತಮಾನದ ಕೈಗಾರಿಕಾ ಕ್ರಾಂತಿಯ ಪೂರ್ಣ ಲಾಭವನ್ನು ನಮ್ಮ ದೇಶ ಪಡೆದುಕೊಳ್ಳಲು ಅಸಮರ್ಥವಾಗಿರುವುದಕ್ಕೆ ಹಲವು ಕಾರಣಗಳಿವೆ. ಮತ್ತು ಇಂದು ಹಲವು ವಿಷಯಗಳಿವೆ, ಅದರಿಂದಾಗಿ ಭಾರತೀಯರು ಹೊಸ ಕ್ರಾಂತಿಯನ್ನು ಆರಂಭಿಸಬಹುದು.

 

ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸರಕಾರ ಹೊಸ ನೀತಿಗಳನ್ನು ರೂಪಿಸುತ್ತಿದೆ. ಹಳೆಯ ಕಾಯ್ದೆಗಳನ್ನು ತೆಗೆದು ಹಾಕುತ್ತಿದೆ.ಮತ್ತು ಹೊಸ ಕಾನೂನುಗಳನ್ನು ತರುತ್ತಿದೆ.

 

ಇತ್ತೀಚೆಗೆ ನಾವು ಸಣಬಿಗೆ ಸಂಬಂಧಿಸಿ ಬಹಳ ಪ್ರಮುಖವಾದ ನಿರ್ಧಾರ ಕೈಗೊಡಿದ್ದೇವೆ. ಸಣಬು ಒಂದು ಮರ ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸಲು ನಮ್ಮ ದೇಶದಲ್ಲಿ ಎರಡು ಕಾನೂನುಗಳು ಇದ್ದವು. ಈಗ ಸರಕಾರ ಈ ವಿಷಯವನ್ನು ಇತ್ಯರ್ಥಪಡಿಸಿದೆ. ಅರಣ್ಯದ ಹೊರಗಡೆ ಬೆಳೆಯುವ ಸಣಬನ್ನು ಮರ ಅಲ್ಲ ಎಂದು ಅದು ಹೇಳಿದೆ. ಈ ನಿರ್ಧಾರದಿಂದ ಸಣಬು ಮತ್ತು ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಮಿಲಿಯಾಂತರ ಸಣ್ಣ ಉದ್ಯಮಿಗಳಿಗೆ ಲಾಭವಾಗಲಿದೆ.

 

ಸ್ನೇಹಿತರೇ,

ಬಹುಸಂಖ್ಯೆಯ ಎಫ್.ಐ.ಸಿ.ಸಿ.ಐ. ಸದಸ್ಯರು ಉತ್ಪಾದನಾ ವಲಯಕ್ಕೆ ಸೇರಿದವರು ಎಂದು ನನಗೆ ತಿಳಿಸಲಾಗಿದೆ. ಇಂಜಿನಿಯರಿಂಗ್ ಸರಕುಗಳು, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಮತ್ತು ನಿರ್ಮಾಣ ಸರಕು ವಲಯಗಳಿಗೆ ಸಂಬಂಧಪಟ್ಟ ಕಂಪನಿಗಳು  ಎಫ್.ಐ.ಸಿ.ಸಿ.ಐ. ಕುಟುಂಬದ ನಾಲ್ಕನೇ ಒಂದರಷ್ಟು ಇವೆ.

 

ಸಹೋದರ ಮತ್ತು ಸಹೋದರಿಯರೇ,

ಹಾಗಿದ್ದರೆ ಯಾಕೆ ಬಿಲ್ಡರ್ ಗಳ  ಸ್ವೇಚ್ಚಾಚಾರ     ಹಿಂದಿನ ಸರಕಾರವನ್ನು ತಲುಪಲಿಲ್ಲ.?.ಮಧ್ಯಮ ವರ್ಗದವರು ತೊಂದರೆ ಅನುಭವಿಸುತ್ತಿದ್ದರು. ತಮ್ಮ ಜೀವಿತಾವಧಿಯ ಆದಾಯವನ್ನು ಬಿಲ್ಡರುಗಳಿಗೆ ಪಾವತಿ ಮಾಡಿದರೂ ಅವರಿಗೆ ಮನೆ ಸಿಗುತ್ತಿರಲಿಲ್ಲ.?. ಮತ್ತು ಯಾಕೆ ಯಾವುದೇ ದಿಟ್ಟ ಕ್ರಮ ಕೈಗೊಳ್ಳಲಿಲ್ಲ.? ಯಾಕೆ ಹೀಗೆ?.  ರೇರಾ ದಂತಹ ಕಾನೂನುಗಳನ್ನು ಈ ಮೊದಲೂ ಅಂಗೀಕರಿಸಬಹುದಿತ್ತು. ಆದರೆ ಅವರು ಅದನ್ನು ಜಾರಿಗೆ ತರಲಿಲ್ಲ. ಈ ಸರಕಾರ ಮಾತ್ರ ಮಧ್ಯಮವರ್ಗದ ಜನತೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿತು ಮತ್ತು ಅದು ಕಾನೂನು ಜಾರಿಗೆ ತರುವ ಮೂಲಕ ಬಿಲ್ಡರ್ ಗಳ    ಸ್ವೇಚ್ಚಾನುಸಾರ ವರ್ತನೆಗೆ  ಕೊನೆ ಹಾಡಿತು.

 

ಸಹೋದರ ಮತ್ತು ಸಹೋದರಿಯರೇ,

ಮಾರ್ಚಿನಲ್ಲಿ ಬಜೆಟ್ ಮಂಡನೆಯಾದ ಬಳಿಕ ಸರಕಾರಿ ಕಾರ್ಯಕ್ರಮಗಳಿಗೆ ಒಂದು ವರ್ಷದ ಅವಧಿ ಪೂರ್ಣವಾಗಿ ದೊರೆಯುವುದಿಲ್ಲ ಎಂಬುದನ್ನು ನಾವು ಮಾತ್ರವೇ ಅರ್ಥ ಮಾಡಿಕೊಂಡೆವು. 3-4 ತಿಂಗಳು ಮಾನ್ಸೂನ್ ನಿಂದಾಗಿ ವ್ಯರ್ಥವಾಗುತ್ತವೆ. ಅದರಿಂದಾಗಿ ಈ ವರ್ಷ ಬಜೆಟ್ ದಿನಾಂಕವನ್ನು ಒಂದು ತಿಂಗಳು ಮೊದಲು ಹಾಕಲಾಯಿತು. ಮತ್ತು ಅದರ ಫಲಿತಾಂಶವಾಗಿ ಇಲಾಖೆಗಳಿಗೆ ಹಣಕಾಸು ಸಕಾಲದಲ್ಲಿ ದೊರೆಯುವಂತಾಯಿತು, ಮತ್ತು ಅವುಗಳಿಗೆ ಯೋಜನೆಗಳಿಗೆ ಸಂಬಂಧಿಸಿ ಕೆಲಸ ಮಾಡಲು ಒಂದು ಒಂದು ವರ್ಷದ ಪೂರ್ಣ ಅವಕಾಶ ದೊರೆಯಿತು.

 

ಸ್ನೇಹಿತರೇ,

ಯೂರಿಯಾ, ಜವಳಿ ಕ್ಷೇತ್ರ, ವಾಯು ಯಾನ ಕ್ಷೇತ್ರ,ಗಳಿಗೆ ಸಂಬಂಧಿಸಿ ಹೊಸ ನೀತಿಗಳನ್ನು ಸರಕಾರ ರೂಪಿಸಿತು. ಸಾರಿಗೆ ವಲಯದ ಸಮಗ್ರತೆಗೆ ಸಂಬಂಧಿಸಿ ಹೊಸ ನೀತಿ ಜತೆಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಇನ್ನೊಂದು ಹೊಸ ನೀತಿಯನ್ನು ಸರಕಾರ ತಂದಿತು. ಮತ್ತು ಈ ನೀತಿಗಳನ್ನು ಬರೇ ನೀತಿಗಳನ್ನು ರೂಪಿಸಬೇಕೆಂಬ ಕಾರಣಕ್ಕೆ ರೂಪಿಸಿದ್ದಲ್ಲ.

 

ಯೂರಿಯಾಕ್ಕೆ ಸಂಬಂಧಿಸಿ ನಮ್ಮ ನೀತಿಗಳನ್ನು ಬದಲಾಯಿಸಿದಾಗ ದೇಶದಲ್ಲಿ ಹೊಸ ಯೂರಿಯಾ ಉತ್ಪಾದನಾ ಘಟಕಗಳು ಬಂದವು. ಮತ್ತು ದೇಶದಲ್ಲಿ ಯೂರಿಯಾ ಉತ್ಪಾದನೆ 18-20  ಲಕ್ಷ ಟನ್ ಹೆಚ್ಚಿತು. ಜವಳಿ ಕ್ಷೇತ್ರದಲ್ಲಿಯ ಹೊಸ ನೀತಿಯಿಂದಾಗಿ 1 ಕೋಟಿ (10 ಮಿಲಿಯನ್) ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ವಾಯು ಯಾನ ಕ್ಷೇತ್ರದಲ್ಲಿ ನೀತಿ ಬದಲಾವಣೆ ಚಪ್ಪಲಿ ಧರಿಸುವ ಜನತೆಯೆಡೆಗೆ ವಿಮಾನ ಸೌಲಭ್ಯವನ್ನು ಕೊಂಡೊಯ್ಯಲಿದೆ. ಸಾರಿಗೆ ವಲಯದ ಸಮಗ್ರೀಕರಣ ವಿವಿಧ ಮಾದರಿಯ ಸಾರಿಗೆ ವ್ಯವಸ್ಥೆಯ ಮೇಲಣ ಹೊರೆಯನ್ನು ಕಡಿಮೆ ಮಾಡಲಿದೆ.

 

ಕಳೆದ ಮೂರು ವರ್ಷಗಳಲ್ಲಿ  21 ಕ್ಷೇತ್ರಗಳಲ್ಲಿ  87 ಕ್ಕೂ ಅಧಿಕ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ.  ರಕ್ಷಣಾ ವಲಯದಲ್ಲಿ , ನಿರ್ಮಾಣ ಕ್ಷೇತ್ರದಲ್ಲಿ , ಹಣಕಾಸು ಸೇವೆಗಳ ವಲಯದಲ್ಲಿ , ಆಹಾರ ಸಂಸ್ಕರಣೆ, ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಆರ್ಥಿಕತೆಯ ಮೇಲೆ ಅದರ ವಿವಿಧ ಪರಿಣಾಮಗಳನ್ನು ನೀವು ನೋಡಬಹುದಾಗಿದೆ.

 

  ಬರೇ ಮೂರು ವರ್ಷಗಳಲ್ಲಿ ಭಾರತ 142 ನೇ ಸ್ಥಾನದಿಂದ 100  ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ. ಭಾರತದ ವಿದೇಶೀ ವಿನಿಮಯ ಮೀಸಲು 30,000  ಕೋಟಿ  ಡಾಲರುಗಳಿಂದ  40,000 ಕೋಟಿ ಡಾಲರುಗಳಿಗೇರಿದೆ. ಜಾಗತಿಕ ಸಾಮರ್ಥ್ಯಶೀಲತೆಯ ಸೂಚ್ಯಂಕದಲ್ಲಿ ಭಾರತದ ಸ್ಥಾನ 32  ಅಂಶಗಳಷ್ಟು ಏರಿಕೆ ಕಂಡಿದೆ. ಜಾಗತಿಕ ಅನ್ವೇಷಣಾ ಸೂಚ್ಯಂಕದಲ್ಲಿ ಭಾರತದ ಸ್ಥಾನ 21 ಅಂಶಗಳಷ್ಟು ಏರಿಕೆ ಕಂಡಿದೆ. ಸಾಗಾಟ ಸಾಧನೆ ಸೂಚ್ಯಂಕದಲ್ಲಿ 19 ಅಂಶಗಳ ಏರಿಕೆಯಾಗಿದೆ. ನಾವು ವಿದೇಶೀ ಹೂಡಿಕೆಯ ಬಗ್ಗೆ ಮಾತನಾಡುವುದಾದರೆ  ಕಳೆದ ಮೂರು ವರ್ಷಗಳಲ್ಲಿ ಭಾರತದ ವಿದೇಶೀ ನೇರ ಹೂಡಿಕೆ ಸುಮಾರು 70 % ಏರಿಕೆಯಾಗಿದೆ.

 

ಸಹೋದರರೇ ಮತ್ತು ಸಹೋದರಿಯರೇ,

ಎಫ್.ಐ.ಸಿ.ಸಿ.ಐ. ಸದಸ್ಯ್ರರಲ್ಲಿ ನಿರ್ಮಾಣ ರಂಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಮಗೆ ಗೊತ್ತಿರಬಹುದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿಯ 75 % ಹೂಡಿಕೆ ಆಗಿರುವುದು ನಿರ್ಮಾಣ ರಂಗದಲ್ಲಿ.

ಅದೇ ರೀತಿ ಸಾರಿಗೆ ವಲಯ, ಗಣಿಗಾರಿಕಾ ವಲಯ, ಕಂಪ್ಯೂಟರ್  ತಂತ್ರಾಂಶ ಮತ್ತು ಹಾರ್ಡ್ ವೇರ್ ಕ್ಷೇತ್ರ ಅಥವಾ ವಿದ್ಯುತ್ ಉಪಕರಣಗಳ ಕ್ಷೇತ್ರ ಗಳಲ್ಲಿಯ ವಿದೇಶೀ ನೇರ ಹೂಡಿಕೆಯ ಅರ್ಧದಷ್ಟು ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಬಂದಿದೆ.

ದೇಶದ ಆರ್ಥಿಕತೆ ಬಲಗೊಳ್ಳುತ್ತಿರುವುದಕ್ಕೆ ನಾನು ಕೆಲವು ಅಂಶಗಳನ್ನು ನಿಮ್ಮ ಮುಂದಿಡುತ್ತೇನೆ. ಕಳೆದ ಎರಡೂ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾದ  ಈ ಅಂಕಿ ಅಂಶಗಳ ಬಗ್ಗೆ  ನಿಮಗೆ ಗೊತ್ತಿದೆ ಎಂದು ನಾನು ನಂಬುತ್ತೇನೆ. ಆದರೂ ನಾನು ಅವುಗಳತ್ತ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ.

ಸ್ನೇಹಿತರೇ,

 ನವೆಂಬರ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟ 14 % ಹೆಚ್ಚಿದೆ. ದೇಶದ ಆರ್ಥಿಕ ಚಟುವಟಿಕೆಯನ್ನು ಪ್ರತಿನಿಧಿಸುವ ವಾಣಿಜ್ಯಿಕ ವಾಹನಗಳ ಮಾರಾಟದಲ್ಲಿ 50 % ಹೆಚ್ಚಳವಾಗಿದೆ. ಉದ್ಯೋಗದ ಪ್ರಮಾಣವನ್ನು ಸೂಚಿಸುವ ತ್ರಿಚಕ್ರ ವಾಹನಗಳ ಮಾರಾಟದಲ್ಲಿ  ನವೆಂಬರ್ ತಿಂಗಳಲ್ಲಿ 80  % ಹೆಚ್ಚಳವಾಗಿದೆ. ಮಧ್ಯಮ ವರ್ಗದ ಆದಾಯ ಹೆಚ್ಚಳವನ್ನು ಸೂಚಿಸುವ, ಗ್ರಾಮೀಣ ಜನರ ಆದಾಯ ಹೆಚ್ಚಳವನ್ನು ಸೂಚಿಸುವ  ದ್ವಿಚಕ್ರ ವಾಹನಗಳ ಮಾರಾಟದಲ್ಲಿ 23 % ಪ್ರಗತಿಯಾಗಿದೆ.

ಸ್ನೇಹಿತರೇ,

  ನಿಮಗೆ ಗೊತ್ತಿರಬಹುದು, ಈ ರೀತಿಯ ದೊಡ್ಡ ಬದಲಾವಣೆ ಸಾಮಾನ್ಯ ಜನರಿಗೆ ಆರ್ಥಿಕತೆ ಬೆಳೆಯುವ ಬಗ್ಗೆ ನಂಬಿಕೆ ಇದ್ದಾಗ ಮಾತ್ರವೇ ಸಾಧ್ಯವಾಗುತ್ತದೆ. ಸರಕಾರ ತಳಮಟ್ಟದಲ್ಲಿ ಆಡಳಿತಾತ್ಮಕ, ಹಣಕಾಸು, ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ  ಈ ಸುಧಾರಣೆಗಳು ಸಾಕ್ಷಿಯಾಗುತ್ತವೆ. ಈ ಸುಧಾರಣೆಗಳು ಸರಕಾರ ಕೈಗೊಂಡ ಸಾಮಾಜಿಕ ಸುಧಾರಣೆಗಳಿಗೂ , ಆ ಮೂಲಕ ಸಾಧಿತವಾದ ಆರ್ಥಿಕ ಸುಧಾರಣೆಗಳಿಗೂ  ದೃಷ್ಟಾಂತದಂತಿವೆ.  ಇವು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

  ಉದಾಹರಣೆಗೆ ನಾನು ಪ್ರಧಾನ ಮಂತ್ರಿ ಆವಾಸ್ ಯೋಜನಾ (ಪಿ.ಎಂ. ಎ.ವೈ.) ಕುರಿತಂತೆ ಮಾತನಾಡುವುದಾದರೆ ಆಗ ಈ ಸರಕಾರ 2022 ರ ವೇಳೆಗೆ ದೇಶದ ಪ್ರತಿಯೊಬ್ಬ ಬಡವನಿಗೂ ಮನೆ ಒದಗಿಸುವ ಗುರಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ. ಈ ಉದ್ದೇಶಕ್ಕಾಗಿ ನಗರಗಳಲ್ಲಿ ಮತ್ತು ಗ್ರಾಮಗಳಲ್ಲಿ ಮಿಲಿಯಾಂತರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮತ್ತು ಈ ಮನೆಗಳ ನಿರ್ಮಾಣದಲ್ಲಿ ಸ್ಥಳೀಯ ಮಾನವ ಸಂಪನ್ಮೂಲ ಬಳಕೆಯಾಗುತ್ತಿದೆ. ಈ ಮನೆಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿರುವ ನಿರ್ಮಾಣ ಸಾಮಗ್ರಿ ಕೂಡಾ ಸ್ಥಳೀಯ ಮಾರುಕಟ್ಟೆಯಿಂದ ಬರುತ್ತದೆ. ಅದೇ ರೀತಿ ಅನಿಲ ಕೊಳವೆ ಮಾರ್ಗ ಹಾಕುವ ಕೆಲಸದಿಂದ ದೇಶದಲ್ಲಿ ಹಲವು ನಗರಗಳಲ್ಲಿ ನಗರ ಅನಿಲ ವಿತರಣೆ ಜಾಲ ಅಭಿವೃದ್ಧಿಯಾಗುತ್ತಿದೆ  ಮತ್ತು ಸಿ.ಎನ್.ಜಿ. ಪೂರೈಕೆಯಾಗುವ ಈ ನಗರಗಳಲ್ಲಿ  ಉದ್ಯೋಗ ಮಾರುಕಟ್ಟೆಯ ಹೊಸ ಪರಿಸರ ವ್ಯವಸ್ಥೆ ನಿರ್ಮಾಣಗೊಳ್ಳಲಿದೆ.

 

ಸಹೋದರರೇ ಮತ್ತು ಸಹೋದರಿಯರೇ,

ದೇಶದ ಆವಶ್ಯಕತೆಗಳನ್ನು ತಿಳಿದುಕೊಂಡು ನಾವೆಲ್ಲರೂ ಕಾರ್ಯಪ್ರವೃತ್ತರಾದರೆ ಆಗ ಮಾತ್ರ ಸಾರ್ವಜನಿಕರ ಆವಶ್ಯಕತೆಗಳು ಮತ್ತು ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಎಫ್.ಐ.ಸಿ.ಸಿ.ಐ. ಜತೆಗೂಡಿರುವ ಕಂಪೆನಿಗಳು  ಭಾರತ ಹೊರದೇಶದಿಂದ ಆಮದು ಮಾಡಿಕೊಳ್ಳಬೇಕಾಗಿರುವ ವಸ್ತುಗಳನ್ನು ತಯಾರು ಮಾಡುವತ್ತ ಗಮನ ಹರಿಸಬೇಕು. ಹಲವು ಕ್ಷೇತ್ರಗಳಲ್ಲಿ  ನಮ್ಮಿಂದ ಪಡೆದ ಕಚ್ಚಾ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಅಂತಿಮ ಉತ್ಪನ್ನಗಳನ್ನು  ನಮಗೆ ಮಾರಲಾಗುತ್ತಿದೆ. ಈ ಪರಿಸ್ಥಿತಿಯಿಂದ ನಾವು ದೇಶವನ್ನು ಹೊರತರಬೇಕಾಗಿದೆ..

 

ಸ್ನೇಹಿತರೇ,

ನಮ್ಮ ದೇಶವು 2022 ರಲ್ಲಿ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲಿದೆ. ನಾವೆಲ್ಲರೂ ಹೊಸ ಭಾರತವನ್ನು ಕಟ್ಟುವ ಪ್ರತಿಜ್ಞೆ ಕೈಗೊಂಡಿದ್ದೇವೆ. ಎಫ್.ಐ.ಸಿ.ಸಿ.ಐ.ಯಂತಹ ಸಂಸ್ಥೆಗಳ ಕಾರ್ಯ ವ್ಯಾಪ್ತಿ ಬಹಳ ದೊಡ್ಡದು. ಅದರ ಜವಾಬ್ದಾರಿಯೂ ದೊಡ್ಡದು. ಅದು ನವ ಭಾರತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೊಸ ಸಂಕಲ್ಪಗಳನ್ನು ಮಾಡಲು ಮುಂದೆ ಬರಬಹುದೆಂಬ ನಿರೀಕ್ಷೆ ಇದೆ. ದೇಶದ ಭವಿಷ್ಯದ ಆವಶ್ಯಕತೆಗಳನ್ನು ಅನುಲಕ್ಷಿಸಿ ಯಾವ ಹೊಸ ಸಂಕಲ್ಪಗಳನ್ನು ಕೈಗೊಳ್ಳಬೇಕು ಎಂಬುದನ್ನು ಎಫ್.ಐ.ಸಿ.ಸಿ.ಐ.ಯು ಪರಿಗಣಿಸಬಹುದು. ಏನಾದರೂ ಮಾಡಲು ಸಾಧ್ಯತೆ ಇರುವ ಹಲವು ವಲಯಗಳು ನಿಮ್ಮಲ್ಲಿವೆ. ಆಹಾರ ಸಂಸ್ಕರಣೆ ವಲಯ, ಕೃತಕ ಬುದ್ಧಿ ಮತ್ತೆ, ಸೌರ ವಿದ್ಯುತ್, ಆರೋಗ್ಯ ರಕ್ಷಣೆ, ಮೊದಲಾದ ಕ್ಷೇತ್ರಗಳು ಎಫ್.ಐ.ಸಿ.ಸಿ.ಐ.ಯ ಅನುಭವದ ಪ್ರಯೋಜನ ಲಾಭ ಪಡೆಯಲು ಸಾಧ್ಯವಿದೆ. ನಿಮ್ಮ ಸಂಸ್ಥೆಯು ದೇಶದ ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿ ಚಿಂತಕರ ಚಾವಡಿಯಂತೆ ಕೆಲಸ ಮಾಡಬಲ್ಲುದೇ ?.

 

ಸಹೋದರರೇ ಮತ್ತು ಸಹೋದರಿಯರೇ,

ನಮಗೆ ಮಾಡಲು ಬಹಳಷ್ಟು ಕೆಲಸಗಳಿವೆ. ನಾವು ಆ ನಿಟ್ಟಿನಲ್ಲಿ ಸಂಕಲ್ಪಗಳನ್ನು ಮಾಡಿ ಅವುಗಳನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಡಿ ಇಡಬೇಕು. ನಮ್ಮ ಸಂಕಲ್ಪಗಳು ಈಡೇರಿದಾಗ  ದೇಶವು ಯಶಸ್ಸು ಸಾಧಿಸುತ್ತದೆ. ಆದರೆ ನಾವು ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಕ್ರಿಕೆಟ್ ಆಟದಲ್ಲಿ ಏನಾಗುತ್ತದೆ, ಕೆಲವು ಆಟಗಾರರು 90  ರನ್ ಗಳಿಸಿದಾಗ ಶತಕ ಹೊಡೆಯುವ ನಿರೀಕ್ಷೆಯಲ್ಲಿ ನಿಧಾನವಾಗಿ ಆಡುತ್ತಾರೆ. ಎಫ್.ಐ.ಸಿ.ಸಿ.ಐ.ಯು ಅವರನ್ನು ಅನುಸರಿಸಬಾರದು. ನೀವು ಎದ್ದೇಳಿ ಮತ್ತು ನಾಲ್ಕು ಅಥವಾ 6 ರನ್ ಗಳನ್ನು ಬಾರಿಸಿ ಮತ್ತು 100 ರ ಗಡಿಯನ್ನು ದಾಟಿ.

 

ನಾನು ಎಫ್.ಐ.ಸಿ.ಸಿ.ಐ. ಮತ್ತು ಅದರ ಸದಸ್ಯರಿಗೆ ಮತ್ತೊಮ್ಮೆ ಶುಭ ಹಾರೈಕೆಗಳನ್ನು ಸಲ್ಲಿಸಿ ನನ್ನ ಭಾಷಣವನ್ನು ಮುಗಿಸುತ್ತೇನೆ.

 

ನಿಮ್ಮೆಲ್ಲರಿಗೂ ತುಂಬಾ- ತುಂಬಾ ಧನ್ಯವಾದ.

****