ಪಿಎಂಇಂಡಿಯಾ

ಕಬ್ಬು ಬೆಳೆಗೆ ಮೂಲವೆಚ್ಚದ ಶೇ.150ರಷ್ಟು ಕನಿಷ್ಠ ಬೆಂಬಲ ಬೆಲೆ ಮುಂದಿನ ವಾರ ಘೋಷಣೆ: ಪ್ರಧಾನಿ ಭರವಸೆ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಕಬ್ಬಿನ ಬಾಕಿಯ ಶೀಘ್ರ ಪಾವತಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನವದೆಹಲಿಯಲ್ಲಿರುವ ಲೋಕಕಲ್ಯಾಣ ಮಾರ್ಗದಲ್ಲಿ ಇಂದು 140ಕ್ಕೂ ಹೆಚ್ಚು ಸದಸ್ಯರಿದ್ದ ಕಬ್ಬಿನ ಬೆಳೆಗಾರರ ನಿಯೋಗವನ್ನು ಭೇಟಿ ಮಾಡಿ, ಕಬ್ಬಿನ ಬೆಳೆಗಾರರು ಎದುರಿಸುತ್ತಿರುವ ಕಷ್ಟಗಳು ಮತ್ತು ಇವುಗಳನ್ನು ಪರಿಹರಿಸಲು ಹಾಗೂ ಕಬ್ಬು ಬೆಳೆಗಾರರ ಹಿತವನ್ನು ರಕ್ಷಿಸಲು ತಮ್ಮ ಸರಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಕುರಿತು ಮಾತುಕತೆ ನಡೆಸಿದರು.
ಕಬ್ಬು ಬೆಳೆಗಾರರ ಈ ನಿಯೋಗದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳ ರೈತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಪ್ರಧಾನಮಂತ್ರಿಗಳು, ಮುಂಬರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಧಿಸೂಚಿತ ಬೆಳೆಗಳಿಗೆ 2018-19ನೇ ಸಾಲಿಗೆ ಅನ್ವಯವಾಗುವಂತೆ ಮೂಲವೆಚ್ಚದ ಶೇ.150ರಷ್ಟು ಕನಿಷ್ಠ ಬೆಂಬಲ ಬೆಲೆಯನ್ನು ಪ್ರಕಟಿಸುವುದಾಗಿ ಭರವಸೆ ನೀಡಿದರು. ಸರಕಾರದ ಈ ಕ್ರಮವು ರೈತರ ಆದಾಯವರ್ಧನೆಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಇದಲ್ಲದೆ, ಇನ್ನು ಮುಂದಿನ ಎರಡು ವಾರಗಳಲ್ಲಿ ಕಬ್ಬು ಬೆಳೆಗಾರರಿಗೆ 2018-19ನೇ ಸಾಲಿಗೆ ಅನ್ವಯವಾಗುವಂತೆ ನ್ಯಾಯಬದ್ಧ ಮತ್ತು ಲಾಭದಾಯಕ ಬೆಲೆಯನ್ನೂ ಘೋಷಿಸಲಾಗುವುದು; ಇದು 2017-18ನೇ ಸಾಲಿನ ದರಕ್ಕಿಂತ ಹೆಚ್ಚಾಗಿರಲಿದೆ. ಯಾವ ಬೆಳೆಗಾರರು ಬೆಳೆದ ಕಬ್ಬಿನಲ್ಲಿ ಶೇ 9.5ಕ್ಕಿಂತ ಹೆಚ್ಚು ಇಳುವರಿ ಇರುತ್ತದೋ ಅವರಿಗೆ ಇದರಿಂದಾಗಿ ಉತ್ತೇಜನಾ/ಪ್ರೋತ್ಸಾಹಕ ಭತ್ಯೆಯೂ ಸಿಗುತ್ತದೆ ಅವರು ನುಡಿದರು.
ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿ ಮಾಡದೆ ಉಳಿಸಿಕೊಂಡಿರುವ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರವು ಕೈಗೊಂಡಿರುವ ಹಲವು ನಿರ್ಧಾರಗಳ ಬಗ್ಗೆಯೂ ಮಾನ್ಯ ಪ್ರಧಾನಮಂತ್ರಿಗಳು ರೈತರಿಗೆ ತಿಳಿಸಿದರು. ತಮ್ಮ ಸರಕಾರವು ರೂಪಿಸಿರುವ ಹೊಸ ನೀತಿಯ ಫಲವಾಗಿ ಕೇವಲ ಕಳೆದ 8-10 ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ಬಾಬ್ತಿನ ಪೈಕಿ 4,000 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಬಿಡುಗಡೆ ಮಾಡಿವೆ. ಇದರ ಜೊತೆಗೆ, ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರಧಾನಮಂತ್ರಿಗಳು ಈ ಸಂದರ್ಭದಲ್ಲಿ ರೈತರಿಗೆ ತಿಳಿಸಿದರು.
ರೈತರು ತಮ್ಮ ಜಮೀನುಗಳಿಗೆ ನೀರುಣಿಸಲು ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಸ್ಪ್ರಿಂಕ್ಲರ್ ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಅನುಸರಿಸಬೇಕು. ಅಲ್ಲದೆ, ನೀರು ಪೂರೈಸಲು ಆಧುನಿಕ ಕೃಷಿ ತಂತ್ರಗಳು ಮತ್ತು ಸೌರಪಂಪ್ ಗಳನ್ನು ಉಪಯೋಗಿಸಬೇಕು ಎಂದು ಮಾನ್ಯ ಪ್ರಧಾನಮಂತ್ರಿಗಳು ರೈತರ ನಿಯೋಗಕ್ಕೆ ತಿಳಿಹೇಳಿದರು. ಜತೆಗೆ, ಜಮೀನುಗಳಲ್ಲಿ ಸೌರವಿದ್ಯುತ್ ಉತ್ಪಾದನಾ ಫಲಕಗಳನ್ನು ಅಳವಡಿಸುವುದರಿಂದ ರೈತರಿಗೆ ಹೆಚ್ಚುವರಿ ಆದಾಯವೂ ಬರುತ್ತದೆ. ರೈತರು ತಮ್ಮ ಬೆಳೆಗಳ ಮೌಲ್ಯವರ್ಧನೆಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಇನ್ನೊಂದೆಡೆಯಲ್ಲಿ, ಕೃಷಿತ್ಯಾಜ್ಯವನ್ನು ಪೋಷಕಾಂಶದ ಮೂಲವಾಗಿ ಪ್ರಮಾಣಬದ್ಧವಾಗಿ ಮತ್ತು ಸಂಪಾದನೆಯ ಇನ್ನೊಂದು ಮೂಲವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು. ಮಿಗಿಲಾಗಿ, ರಸಗೊಬ್ಬರದ ಬಳಕೆಯನ್ನು 2022ರ ಹೊತ್ತಿಗೆ ಶೇಕಡ 10ರಷ್ಟು ಕಡಿಮೆ ಮಾಡಲು ಗಮನ ಹರಿಸಬೇಕು ಎಂದು ಶ್ರೀ ನರೇಂದ್ರ ಮೋದಿಯವರು ನುಡಿದರು.
ಕೃಷಿ ಕ್ಷೇತ್ರದ ಮೌಲ್ಯವರ್ಧನೆ, ಉಗ್ರಾಣಗಳ ನಿರ್ಮಾಣ, ಸಂಗ್ರಹಣಾ ವ್ಯವಸ್ಥೆ, ಉತ್ತಮ ಗುಣಮಟ್ಟದ ಬೀಜಗಳು ಮತ್ತು ಮಾರುಕಟ್ಟೆ ಸಂಪರ್ಕ ಸುಧಾರಣೆಯ ಮೂಲಕ ರೈತರ ಆದಾಯದ ಪ್ರಮಾಣವನ್ನು ಸುಧಾರಿಸಲು ಖಾಸಗಿ ವಲಯದವರು ಹೆಚ್ಚು ಬಂಡವಾಳ ಹೂಡಬೇಕು ಎಂದು ಉದ್ಯಮಿಗಳೊಡನೆ ತಾವು ಇತ್ತೀಚೆಗೆ ನಡೆಸಿದ ಮಾತುಕತೆಯ ವೇಳೆ ಕರೆ ಕೊಟ್ಟಿರುವುದನ್ನು ಅವರು ರೈತ ನಿಯೋಗಕ್ಕೆ ತಿಳಿಸಿದರು.
ಕಬ್ಬು ಬೆಳೆಗಾರರ ಸಂಕಷ್ಟವನ್ನು ಆದಷ್ಟೂ ಕಡಿಮೆ ಮಾಡುವ ಸದುದ್ದೇಶದಿಂದ ಕೇಂದ್ರ ಸರಕಾರವು 2014-15 ಮತ್ತು 2015-16ನೇ ಸಾಲಿನಲ್ಲಿ ಕೂಡ ಬಹುಬೇಗನೆ ಮಧ್ಯಪ್ರವೇಶ ಮಾಡಿತ್ತು. ಆಗ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ 21,000 ಕೋಟಿ ರೂಪಾಯಿಗಳಷ್ಟು ಹಣ ಬರಬೇಕಾಗಿತ್ತು. ಇದು ಅಂತಿಮವಾಗಿ ಕಾರ್ಖಾನೆಗಳ ಕಡೆಯಿಂದ ರೈತರಿಗೆ ಸುಗಮವಾಗಿ ತಲುಪುವಂತೆ ಮಾಡಲಾಯಿತು ಎನ್ನುವುದನ್ನು ಮಾನ್ಯ ಪ್ರಧಾನಮಂತ್ರಿಗಳು ಈ ಸಂದರ್ಭದಲ್ಲಿ ನೆನಪಿಸಿದರು.
ಇತ್ತೀಚೆಗೆ ಕೇಂದ್ರ ಸರಕಾರವು ಸಕ್ಕರೆಯ ಮೇಲಿನ ಆಮದು ಸುಂಕವನ್ನು ಶೇ.50ರಿಂದ ಶೇ.100ಕ್ಕೆ ಹೆಚ್ಚಿಸಿರುವುದು ಮತ್ತು ರೈತರಿಗೆ ಪಾವತಿಸಲು ನೆರವಾಗಲು ಸಕ್ಕರೆ ಕಾರ್ಖಾನೆಗಳಿಗೆ ದಕ್ಷತೆ ಆಧರಿಸಿ ಕ್ವಿಂಟಾಲ್ಗೆ 5.50 ರೂಪಾಯಿಗಳನ್ನು(ಒಟ್ಟು 1,540 ಕೋಟಿ ರೂ.) ಕೊಡುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರಕಾರದ ತೀರ್ಮಾನಗಳನ್ನು ರೈತರು ಮೆಚ್ಚಿಕೊಂಡರಲ್ಲದೆ, ಮಾನ್ಯ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಅಲ್ಲದೆ, ಸಕ್ಕರೆ ಕಾರ್ಖಾನೆಗಳು ಸಂಗ್ರಹಿಸಿ ಇಟ್ಟುಕೊಂಡಿರುವ 30 ಲಕ್ಷ ಮೆಟ್ರಿಕ್ ಟನ್ ಕಬ್ಬು/ಸಕ್ಕರೆಗೆ ಬಡ್ಡಿ ಸಹಾಯಧನವಾಗಿ ಕೇಂದ್ರ ಸರಕಾರವು 1,175 ಕೋಟಿ ರೂ.ಗಳಷ್ಟು ಕೊಟ್ಟಿರುವ ಅಂಶವನ್ನೂ ರೈತರಿಗೆ ತಿಳಿಸಲಾಯಿತು.
ಕೇಂದ್ರ ಸರಕಾರವು ಸಕ್ಕರೆ ಉದ್ಯಮಕ್ಕೆ ದೀರ್ಘಾವಧಿ ಸ್ಥಿರತೆ ಒದಗಿಸುವ ಸಲುವಾಗಿ ವಾಹನಗಳಿಗೆ ಪೆಟ್ರೋಲ್ ಜತೆಯಲ್ಲಿ ಶೇಕಡ 10ರಷ್ಟು ಎಥೆನಾಲ್ ಬಳಸಲು ಕೈಗೊಂಡಿರುವ ಕ್ರಮದ ಬಗ್ಗೆಯೂ ರೈತರ ನಿಯೋಗಕ್ಕೆ ಸವಿಸ್ತಾರವಾಗಿ ವಿವರಿಸಿದರು.