ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಿರ್ಗಿಜ್ ಗಣರಾಜ್ಯದ ಬಿಷ್ಕೆಕ್ನಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 01, 2026 ರವರೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 26ನೇ ಸಭೆಯಲ್ಲಿ ಇಂದು ಭಾಗವಹಿಸಿದರು.
ಈ ವರ್ಷವು ಎಸ್ಸಿಒ ಸಂಸ್ಥೆಯ 25ನೇ ವಾರ್ಷಿಕೋತ್ಸವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ನಾಯಕರು ಪ್ರಗತಿಯನ್ನು ಪರಾಮರ್ಶಿಸಿದರು ಮತ್ತು ಈ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಹಾಗೂ ಸಮೃದ್ಧಿಗಾಗಿ ಎಸ್ಸಿಒ ಪಾತ್ರವನ್ನು ಉತ್ತೇಜಿಸುವ ಕುರಿತು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ಪ್ರಧಾನಮಂತ್ರಿಯವರು ಕಿರ್ಗಿಜ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸದ್ಯಿರ್ ಝಪರೋವ್ ಅವರ ಆತ್ಮೀಯತೆ ಮತ್ತು ಆತಿಥ್ಯಕ್ಕೆ ಧನ್ಯವಾದ ಅರ್ಪಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಎಸ್ಸಿಒ ಅಭಿವೃದ್ಧಿಪಡಿಸಿದ ಸಂವಾದ ಮತ್ತು ಸಹಕಾರದ ಬಲವಾದ ಪರಂಪರೆಯನ್ನು ಆಧರಿಸಿ, ಶೃಂಗಸಭೆಯ 25 ನೇ ವಾರ್ಷಿಕೋತ್ಸವವು ಮುಂದಿನ 25 ವರ್ಷಗಳ ಕಾಲದ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಸೂಕ್ತವಾದ ಸಮಯ ಎಂದು ಅವರು ಉಲ್ಲೇಖಿಸಿದರು. ಕಳೆದ ಶೃಂಗಸಭೆಯಲ್ಲಿ ಭಾರತವು ಭದ್ರತೆ, ಸಂಪರ್ಕ ಮತ್ತು ಅವಕಾಶದ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿತ್ತು ಮತ್ತು ಈಗ ಈ ಗುಂಪು ಜಂಟಿ ಕೆಲಸದ ಈ ಮೂರು ಮೂಲಸ್ತಂಭಗಳಲ್ಲಿ ಕಾಂಕ್ರೀಟ್ ಫಲಿತಾಂಶಗಳನ್ನು ಸಾಧಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು. ಯುದ್ಧಭೂಮಿಯಲ್ಲಿ ಸಂಘರ್ಷಗಳನ್ನು ಪರಿಹರಿಸಲು ಸಾಧ್ಯವಿಲ್ಲ ಮತ್ತು ಸಂವಾದ ಹಾಗೂ ರಾಜತಾಂತ್ರಿಕತೆ ಮಾತ್ರ ಮುನ್ನಡೆಯುವ ಏಕೈಕ ಮಾರ್ಗ ಎಂಬ ಭಾರತದ ನಿಲುವನ್ನು ಅವರು ಪುನರುಚ್ಚರಿಸಿದರು. ಭಯೋತ್ಪಾದನೆಯು ಮಾನವಕುಲಕ್ಕೆ ತೀವ್ರ ಬೆದರಿಕೆಯಾಗಿದೆ ಎಂಬುದನ್ನು ಎತ್ತಿ ತೋರಿದ ಅವರು, ಭಯೋತ್ಪಾದನಾ ಪರಿಸರ ವ್ಯವಸ್ಥೆಯನ್ನು ಕೆಡವಲು ಬದ್ಧತೆಯ ಕ್ರಮಕ್ಕೆ ಕರೆ ನೀಡಿದರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ದ್ವಿಗುಣ ಮಾನದಂಡಗಳು ಇರಬಾರದು ಎಂದು ಅವರು ವಿಶೇಷವಾಗಿ ಒತ್ತಿಹೇಳಿದರು. ಯುರೇಷಿಯಾ ಪ್ರದೇಶದ ಭದ್ರತೆಯು ಅಫ್ಘಾನಿಸ್ತಾನದ ಶಾಂತಿ ಮತ್ತು ಸ್ಥಿರತೆಗೆ ನಿಕಟವಾಗಿ ಬೆಸೆದುಕೊಂಡಿದೆ ಎಂದು ಉಲ್ಲೇಖಿಸಿದ ಅವರು, ಆ ದೇಶಕ್ಕೆ ಭಾರತ ನೀಡುತ್ತಿರುವ ಅಭಿವೃದ್ಧಿ ಮತ್ತು ಮಾನವೀಯ ನೆರವನ್ನು ಅವರು ಒತ್ತಿ ಹೇಳಿದರು.
ಈ ತಂಡದ ಹಂಚಿಕೆಯ ಪ್ರಗತಿ ಮತ್ತು ಸಮೃದ್ಧಿಗೆ ಬಲವಾದ ಮತ್ತು ವಿಶ್ವಾಸಾರ್ಹ ಸಂಪರ್ಕ ಉಪಕ್ರಮಗಳು ಪ್ರಮುಖವಾಗಿವೆ ಎಂದೂ ಸಹ ಪ್ರಧಾನಮಂತ್ರಿಯವರು ತಿಳಿಸಿದರು. ಮಾರುಕಟ್ಟೆಗಳನ್ನು ಸಂಪರ್ಕಿಸುವ, ವ್ಯಾಪಾರವನ್ನು ಹೆಚ್ಚಿಸುವ ಮತ್ತು ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆಯುವ ಸಂಪರ್ಕ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಒತ್ತಿಹೇಳಿದ ಅವರು, ಇಂತಹ ಪ್ರಯತ್ನಗಳು ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಅವರು ಪುನರುಚ್ಚರಿಸಿದರು. ತಂತ್ರಜ್ಞಾನ, ಉದ್ಯಮಶೀಲತೆ, ನಾವೀನ್ಯತೆ, ಸ್ಟಾರ್ಟ್ಅಪ್ಗಳು ಮತ್ತು ಜನರ ನಡುವಿನ ಉಪಕ್ರಮಗಳು ಎಸ್ಸಿಒ ದೇಶಗಳ ಜನರಿಗೆ ಅಪಾರ ಅವಕಾಶಗಳನ್ನು ತೆರೆಯುತ್ತವೆ ಎಂದು ಅವರು ವಿವರವಾಗಿ ತಿಳಿಸಿದರು. ಈ ನಿಟ್ಟಿನಲ್ಲಿ, ಕಿರ್ಗಿಜ್ಸ್ತಾನ್ನ ಅಧ್ಯಕ್ಷತೆಯಲ್ಲಿ ಯುವಜನರ ತೊಡಗಿಸಿಕೊಳ್ಳುವಿಕೆಗೆ ನೀಡಿದ ಗಮನವನ್ನು ಅವರು ಪ್ರಶಂಸಿಸಿದರು. ಈ ವರ್ಷದ ಕೊನೆಯಲ್ಲಿ ಎಸ್ಸಿಒ ನಾಗರಿಕತೆಯ ಸಂವಾದ ವೇದಿಕೆಯ ಮೊದಲ ಆವೃತ್ತಿಯನ್ನು ಆಯೋಜಿಸಲು ಭಾರತವು ಸಂತೋಷಪಡುತ್ತದೆ ಎಂದು ಪ್ರಧಾನಮಂತ್ರಿ ಒತ್ತಿಹೇಳಿದರು. ಇದು ಸದಸ್ಯ ರಾಷ್ಟ್ರಗಳ ನಡುವೆ ನಾಗರಿಕತೆಯ ವಿನಿಮಯವನ್ನು ರೂಪಿಸಲು ಶ್ರಮಿಸುವ ಭಾರತದ ಪ್ರಮುಖ ಉಪಕ್ರಮವಾಗಿದೆ.
ಬಿಷ್ಕೆಕ್ ಘೋಷಣೆಯ ಹೊರತಾಗಿ, ಹವಾಮಾನ, ಪರಮಾಣು ಭದ್ರತೆ, ಇಂಧನ ಸಂರಕ್ಷಣೆ ಮತ್ತು ಮಾದಕದ್ರವ್ಯ ವ್ಯಸನದ ವಿರುದ್ಧದ ಹೋರಾಟ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಾಲ್ಕು ತಿಳುವಳಿಕಾ ಒಪ್ಪಂದಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ನಿರ್ಧಾರಗಳು ಹಾಗೂ ಹೇಳಿಕೆಗಳನ್ನು ಶೃಂಗಸಭೆಯಲ್ಲಿ ಅಂಗೀಕರಿಸಲಾಯಿತು.
ಬಿಷ್ಕೆಕ್ ಘೋಷಣೆಯಲ್ಲಿ ಸ್ಥಾನ ಪಡೆದಿರುವ ಹಲವು ಉಪಕ್ರಮಗಳನ್ನು ಭಾರತ ಮುನ್ನಡೆಸಿದೆ ಮತ್ತು ಬೆಂಬಲಿಸಿದೆ, ಉದಾಹರಣೆಗೆ ಎಸ್ಸಿಒ ಚಾರ್ಟರ್ನಲ್ಲಿ ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಸೇರಿಸುವುದು; ನಾಗರಿಕತೆಯ ಸಂವಾದ ವೇದಿಕೆ; ಯುವ ವಿಜ್ಞಾನಿಗಳ ವೇದಿಕೆ; ಮತ್ತು ಯುವ ಲೇಖಕರ ಸಮಾವೇಶ.
ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷ ಘನತೆವೆತ್ತ ಸದ್ಯಿರ್ ಝಪರೋವ್ ಅವರಿಗೆ ಧನ್ಯವಾದ ಅರ್ಪಿಸಿದರು. ಹಂಚಿಕೆಯ ಪ್ರಗತಿ ಮತ್ತು ಸಮೃದ್ಧಿಗಾಗಿ ಎಸ್ಸಿಒ ಕುಟುಂಬದೊಂದಿಗೆ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು.
*****
Addressed the SCO Summit in Bishkek.
— Narendra Modi (@narendramodi) September 1, 2026
This Summit is special because we are marking 25 years since the start of SCO.
Here are the points I’ve raised in the Summit pic.twitter.com/oYZLLFvztf
It’s time to look at the SCO agenda for the next 25 years.
— Narendra Modi (@narendramodi) September 1, 2026
India’s position is clear…We must transform our shared geography into shared opportunities.
We must work on the three pillars of Security, Connectivity and Opportunity.
From the SCO Summit in Bishkek. pic.twitter.com/GDlPpVkSLR
— Narendra Modi (@narendramodi) September 1, 2026