ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಾಲಿ ಇರುವ ಖಾದ್ಯ ತೈಲ ಮತ್ತು ಖಾದ್ಯ ಎಣ್ಣೆ ಕಾಳಿಗೆ ಸಂಬಂಧಿಸಿದಂತೆ ದಿನಾಂಕ 28.09.2015ರ ಕೇಂದ್ರೀಯ ಆದೇಶ ಮತ್ತು ಬೇಳೆಕಾಳುಗಳಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಆದೇಶ ಸಂಖ್ಯೆ ಎಸ್.ಓ. ನಂ. 2857(ಇ) ದಿನಾಂಕ 18.10.2015ರ ಅವಧಿಯನ್ನು 01.10.2016ರಿಂದ 30.09.2017ರವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ.
ಈ ನಿರ್ಧಾರದ ಮುಖ್ಯ ಉದ್ದೇಶ, ಯಾವಾಗ ಅಗತ್ಯ ಎನಿಸುತ್ತದೆಯೋ ಆವಾಗ ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಎಣ್ಣೆ ಕಾಳುಗಳ ಮೇಲೆ ದಾಸ್ತಾನು ಮಿತಿ/ಪರವಾನಗಿ ನಿಗದಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ನಿಯಂತ್ರಣ ಆದೇಶಗಳನ್ನು ಹೊರಡಿಸಲು ಅನುವು ಮಾಡಿಕೊಡುವುದಾಗಿದೆ. ಈ ಪ್ರಯತ್ನವು ದಾಸ್ತಾನು ಮತ್ತು ಲಾಭಗಳಿಕೆ ಪ್ರವೃತ್ತಿ ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ಅದರಲ್ಲೂ ದುರ್ಬಲ ವರ್ಗದವರಿಗೆ ಈ ಸರಕುಗಳು ದೊರಕುವುದನ್ನು ಸುಧಾರಣೆ ಮಾಡಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿನ್ನೆಲೆ:
ದಿನಾಂಕ 15.2.2002ರ ಕೇಂದ್ರ ಸರ್ಕಾರದ ಆದೇಶದಲ್ಲಿ ಕೆಲವು ವರ್ಗದ ಆಹಾರವಸ್ತುಗಳ ಮೇಲಿನ ಪರವಾನಗಿ, ದಾಸ್ತಾನು ಮಿತಿ ಮತ್ತು ಸಾಗಾಟದ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಾಗಿತ್ತು. ಆನಂತರ, ಯಾವಾಗ ಈ ನಿರ್ಧರಿತ ಆಹಾರ ಸಾಮಗ್ರಿಗಳ ದರದಲ್ಲಿ ಅತಿಯಾದ ಏರಿಕೆ ಆಗುತ್ತದೋ ಆಗ ನಿರ್ದಿಷ್ಟ ಅವಧಿಗೆ ಸರ್ಕಾರ ಸಂಪುಟದ ಅನುಮೋದನೆಯೊಂದಿಗೆ 2002ರ ಆದೇಶಕ್ಕೆ ತಿದ್ದುಪಡಿ/ಆದೇಶದ ಕಾರ್ಯಾಚರಣೆಗೆ ತಡೆ ಕುರಿತ ಅಧಿಸೂಚನೆಯನ್ನು ಕಾಲಕಾಲಕ್ಕೆ ತಕ್ಕಂತೆ ಹೊರಡಿಸುತ್ತಿತ್ತು. ಬೇಳೆಕಾಳುಗಳ ಮೇಲೆ ನಿಯಂತ್ರಣವನ್ನು ಮೊದಲಿಗೆ 2006ರ ಆಗಸ್ಟ್ ನಲ್ಲಿ ಹೇರಲಾಯಿತು ಮತ್ತು ಅದನ್ನು ಕಾಲ ಕಾಲಕ್ಕೆ ವಿಸ್ತರಿಸಲಾಯಿತು. ಖಾದ್ಯ ತೈಲ ಮತ್ತು ಎಣ್ಣೆ ಕಾಳುಗಳನ್ನು 2008ರ ಏಪ್ರಿಲ್ ನಲ್ಲಿ ಸೇರಿಸಲಾಯಿತು ಮತ್ತು ಅದನ್ನು ಕಾಲಾನುಕ್ರಮದಲ್ಲಿ ವಿಸ್ತರಿಸಲಾಗುತ್ತಿದೆ. ಈಗ ಜಾರಿಯಲ್ಲಿರುವ ಆದೇಶದ ಅವಧಿ 30.9.2016ಕ್ಕೆ ಕೊನೆಗೊಳ್ಳುತ್ತಿದ್ದು, ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ಅದನ್ನು ವಿಸ್ತರಿಸಲಾಗಿದೆ.
AKT/VBA/SH