ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಸುರೇಂದ್ರನಗರ್ ಜಿಲ್ಲೆಯ ಛೋಟಿಲಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದರು. ರಾಜಕೋಟ್ ಹಸಿರು ಕ್ಷೇತ್ರ ವಿಮಾನ ನಿಲ್ದಾಣ; ಆರು ಪಥದ ಅಹ್ಮದಾಬಾದ್ – ರಾಜಕೋಟ್ ರಾಷ್ಟ್ರೀಯ ಹೆದ್ದಾರಿ; ರಾಜಕೋಟ್ – ಮೋರ್ಬಿ ರಾಜ್ಯ ಹೆದ್ದಾರಿಯ ನಾಲ್ಕು ಪಥದ ರಸ್ತೆಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅವರು ಸಂಪೂರ್ಣ ಸ್ವಯಂ ಚಾಲಿತ ಹಾಲು ಸಂಸ್ಕರಣಾ ಮತ್ತು ಪ್ಯಾಕಿಂಗ್ ಘಟಕ; ಮತ್ತು ಸುರೇಂದ್ರನಗರ್ ನ ಜೋರಾವರ್ ನಗರ್ ಮತ್ತು ರತ್ನಪುರ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆ ಮಾರ್ಗವನ್ನು ಸಮರ್ಪಿಸಿದರು. ಸುರೇಂದ್ರನಗರ್ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿತ್ತು ಎಂದು ಪ್ರಧಾನಿ ಹೇಳಿದರು. ಇಂಥ ಅಭಿವೃದ್ಧಿ ಕಾರ್ಯಗಳು ಜನರನ್ನು ಸಬಲೀಕರಿಸುತ್ತವೆ ಎಂದು ಹೇಳಿದರು.
ವಾಯುಯಾನ ಕೇವಲ ಶ್ರೀಮಂತರಿಗೆ ಮಾತ್ರವೇ ಅಲ್ಲ ಎಂದರು. ನಾವು ವಾಯುಯಾನವನ್ನು ಕೈಗೆಟಕುವಂತೆ ಮಾಡಿದ್ದೇವೆ ಮತ್ತು ಅದು ದುರ್ಬಲರಿಗೂ ತಲುಪುವಂತೆ ಮಾಡಿದ್ದೇವೆ ಎಂದರು.
ಅಭಿವೃದ್ಧಿಯ ವ್ಯಾಖ್ಯೆ ಈಗ ಬದಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೈಪಂಪುಗಳೇ ಅಭಿವೃದ್ಧಿಯ ಸಂಕೇತವಾಗಿ ಕಾಣುತ್ತಿದ್ದ ದಿನವಿತ್ತು, ಇಂದು ನರ್ಮದಾ ನದಿ ನೀರನ್ನು ಜನರ ಅನುಕೂಲಕ್ಕಾಗಿ ತರಲಾಗಿದೆ ಎಂದರು. ಸುರೇಂದ್ರನಗರ್ ಜಿಲ್ಲೆ ನರ್ಮದಾ ನದಿ ನೀರಿನಿಂದ ತುಂಬಾ ಲಾಭ ಪಡೆಯಲಿದೆ ಎಂದರು. ಜವಾಬ್ದಾರಿಯಿಂದ ನೀರು ಬಳಸುವಂತೆ ಮತ್ತು ಪ್ರತಿ ಹನಿ ನೀರು ಸಂರಕ್ಷಿಸುವಂತೆ ಜನತೆಗೆ ಮನವಿ ಮಾಡಿದರು. ಸುರ್ ಸಾಗರ್ ಡೈರಿಯು ಜನತೆಗೆ ಭಾರೀ ಲಾಭ ತರಲಿದೆ ಎಂದು ಪ್ರಧಾನಿ ಹೇಳಿದರು. ಮಾಜಿ ಮುಖ್ಯಮಂತ್ರಿ ಕೇಶೂಭಾಯ್ ಪಟೇಲ್ ಅವರು ಉತ್ತಮ ಮತ್ತು ಸುರಕ್ಷಿತ ರಸ್ತೆ ಮಾಡುವ ನಿಟ್ಟಿನಲ್ಲಿ ಮಾಡಿದ ಕಾರ್ಯವನ್ನು ಸ್ಮರಿಸಿದರು.
***