Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದ್ವಾರಕಾದಲ್ಲಿ ಓಖಾ ಮತ್ತು ಬೆಟ್ ದ್ವಾರಕಾ ನಡುವೆ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪ್ರಾಥಮಿಕ ಪಠ್ಯ.


ಅತ್ಯಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿರುವ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ,

ನಾನಿಂದು ದ್ವಾರಕೆಯ ಮತ್ತೊಂದು ಚಿತ್ರಣವನ್ನು ಕಂಡೆ, ನಾಲ್ಕೂ ದಿಕ್ಕಿನಲ್ಲಿ ಉತ್ಸಾಹ, ಉಲ್ಲಾಸದ ಒಂದು ಹೊಸ ಚೈತನ್ಯವನ್ನು ನಾನಿಂದು ದ್ವಾರಕೆಯಲ್ಲಿ ಅನುಭವಿಸುತ್ತಿದ್ದೇನೆ. ದ್ವಾರಕಾ ನಿವಾಸಿಗಳಿಗೆ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ದ್ವಾರಕೆಯಲ್ಲಿ ಆರಂಭವಾಗುತ್ತಿರುವ ಕಾರ್ಯ ಬೆಟ್ ದ್ವಾರಕೆಯನ್ನು ತಲುಪಲು ನಿರ್ಮಿಸಲಾಗುತ್ತಿರುವ ಸೇತುವೆ ಮಾತ್ರವಲ್ಲ. ಇದು ಇಟ್ಟಿಗೆ, ಕಲ್ಲು, ಕಬ್ಬಿಣಗಳಿಂದ ನಿರ್ಮಾಣವಾಗುತ್ತಿರುವ ಕೇವಲ ಒಂದು ರಚನೆಯಲ್ಲ. ಈ ಸೇತುವೆ ಬೆಟ್ ದ್ವಾರಕೆಯ ಸಾಂಸ್ಕೃತಿಕ ಪರಂಪರೆಯ ಜತೆಗೆ ಸಾವಿರಾರು ವರ್ಷಗಳ ಸಂಬಂಧಗಳನ್ನು ಕೂಡಿಸುವ ಕ್ರಮದ ರೂಪದಲ್ಲಿ ಇಂದು ಕಾರ್ಯ ನಿರ್ವಹಿಸುತ್ತಿದೆ.

ನಾನು ಯಾವಾಗಲಾದರೂ ಬೆಟ್ ಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಸೇತುವೆಯನ್ನು ನೋಡುತ್ತಿದ್ದೆ, ಇಲ್ಲಿನ ನಿರ್ಮಲ ಜಲವನ್ನು ಕಾಣುತ್ತಿದ್ದೆ. ಪ್ರವಾಸೋದ್ಯಮಕ್ಕೆ ಇಲ್ಲಿ ಇರಬಹುದಾದ ಹೆಚ್ಚಿನ ಸಾಧ್ಯತೆಗಳನ್ನು ಕಾಣುತ್ತಿದ್ದೆ. ಹಿಂದಿನ ಭಾರತ ಸರ್ಕಾರಕ್ಕೆ ಗುಜರಾತ್ ಬಗ್ಗೆ ಇದ್ದ ಪ್ರೀತಿಯನ್ನು ತಾವು ಬಲ್ಲಿರಿ. ಎಂತಹ ಕಠಿಣ ಪರಿಸ್ಥಿತಿಗಳಲ್ಲಿ ನಾವು ದಿನವನ್ನು ದೂಡುತ್ತಿದ್ದೆವು ಎಂಬುದು ನನಗೆ ಸರಿಯಾಗಿ ನೆನಪಿದೆ. ನಾನು ಬೆಟ್ ನಾಗರಿಕರ ಪರಿಸ್ಥಿಯನ್ನು ಗಮನಿಸುತ್ತಿದ್ದೆ. ಸೂರ್ಯಾಸ್ತಕ್ಕೆ ಮೊದಲು ತಮ್ಮೆಲ್ಲ ಕಾರ್ಯಗಳನ್ನು ಅವರು ಮಾಡಿಕೊಳ್ಳಬೇಕಾಗುತ್ತಿತ್ತು. ರಾತ್ರಿಯ ಸಮಯದಲ್ಲಿ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಅದೂ ಕೇವಲ ಜಲಮಾರ್ಗದ ಮೂಲಕವಷ್ಟೆ ಓಡಾಡಬೇಕಾಗಿತ್ತು. ಅನಿವಾರ್ಯವಾಗಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಅವರನ್ನು ಆಸ್ಪತ್ರೆಗಳಿಗೆ ಸಾಗಿಸಬೇಕಾಗುತ್ತಿತ್ತು, ಅದೂ ರಾತ್ರಿಯ ಸಮಯದಲ್ಲಾದರೆ ಎಷ್ಟು ತೊಂದರೆಗಳಾಗುತ್ತಿತ್ತು ಎಂಬುದನ್ನು ಬೆಟ್ ನ ನನ್ನ ಪ್ರೀತಿಯ ಸಹೋದರ ಸಹೋದರಿಯರು ಚೆನ್ನಾಗಿ ಅರಿತಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಯಾತ್ರಾರ್ಥಿಗಳಿಗೆ ಇದು ಒಂದು ಕೊಡುಗೆಯಾಗಿ ಪರಿಣಮಿಸಲಿದೆ.

ಇದು ಬೆಟ್ ನಾಗರಿಕರ ಸಾಮಾನ್ಯ ಆವಶ್ಯಕತೆಗಳನ್ನು ಪೂರ್ಣ ಮಾಡುವ ಒಂದು ವ್ಯವಸ್ಥೆಯಾಗಿದೆ. ಇದು ಬೆಟ್ ಗೆ ಹೊಂದಿಕೊಂಡಂತಿರುವ ಸಮುದ್ರ ತೀರಕ್ಕೆ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗುತ್ತಿರುವ ಅಭಿವೃದ್ಧಿ ಕಾರ್ಯಕ್ಕೆ ಬಲ ನೀಡುವ ವ್ಯವಸ್ಥೆಯಾಗಲಿದೆ. ಒಂದು ಬಾರಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಠಾಕೂರ್ ಜೀ ಅವರ ಚರಣಕಮಲಗಳಿಗೆ ಶಿರಬಾಗಿ ನಮಿಸಿ ಹೊರಟು ಹೋಗುವಂತಾದರೆ ದ್ವಾರಕೆಯ ಆರ್ಥಿಕ ಪರಿಸ್ಥಿತಿಗೆ ಹೆಚ್ಚಿನ ಲಾಭವಾಗುವುದಿಲ್ಲ. ಆದರೆ ಅವರು ರಾತ್ರಿಯ ಸಮಯದಲ್ಲಿ ಇಲ್ಲಿಯೇ ಉಳಿಯುವಂತಾದರೆ, ಎರಡು ದಿನ ಉಳಿಯುವಂತಾದರೆ ಸಾವಿರ, ಎರಡು ಸಾವಿರ ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ. ಹೀಗಾದಾಗ, ದ್ವಾರಕೆಯ ಆರ್ಥಿಕ ವ್ಯವಸ್ಥೆಯಲ್ಲಿ ಬಡವರಿಂದ ಕಡು ಬಡವರಿಗೂ ಒಂದು ಉದ್ಯೋಗ ಲಭಿಸಿದಂತಾಗುತ್ತದೆ. ಭಗವಾನ್ ದ್ವಾರಕಾಧೀಶನ ಕೃಪೆಯಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ನಾವು ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿದ್ದೇ ಆದಲ್ಲಿ ಜನರು ದ್ವಾರಕೆಯಲ್ಲಿ ತಂಗುತ್ತಾರೆ. ಈ ಕಾರಣದಿಂದಾಗಿ ನಾವು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಇಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳಿದೆ ಇಲ್ಲಿ ಉಳಿಯುವಂತಹ ಮಸಸಾಗಬೇಕು. ಒಂದೆರಡು ದಿನ ಇಲ್ಲಿ ಕಳೆಯುವ ಇಚ್ಚೆ ಅವರಲ್ಲಿ ಉಂಟಾಗಬೇಕು. ಸಮುದ್ರದ ಅಲೆಗಳ ಎದುರು ಕುಳಿತು ಸಂಜೆಯ ಸಮಯವನ್ನು ಕಳೆಯುವ ಇಚ್ಚೆ ಅವರಲ್ಲಿ ಉಂಟಾಗಬೇಕು. ಅಸ್ತಮಿಸುತ್ತಿರುವ ಸೂರ್ಯನನ್ನು ಕಂಡು ಅವರ ಮನಸ್ಸು ಪ್ರಫುಲ್ಲಿತವಾಗಬೇಕು. ಈ ರೀತಿಯ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಇಂದಿಗೆ ಎಂಟು – ಹತ್ತು ವರ್ಷಗಳ ಹಿಂದಿನ ದ್ವಾರಕೆಯನ್ನು ಕಲ್ಪಿಸಿಕೊಳ್ಳಿ ಮತ್ತು ಇಂದಿನ ದ್ವಾರಕೆಯನ್ನು ಕಲ್ಪಿಸಿಕೊಳ್ಳಿ, ಎಷ್ಟು ಬದಲಾವಣೆಯಾಗಿದೆ. ಒಂದು ಮೂಲೆಯಲ್ಲಿ ಅಭಿವೃದ್ಧಿಯಾದರೆ ಪ್ರವಾಸೋದ್ಯಮ ಬಲಗೊಳ್ಳುವುದಿಲ್ಲ. ಅದಕ್ಕಾಗಿ ಸಂಪರ್ಕದ ಅವಶ್ಯಕತೆ ಇದೆ. ಒಬ್ಬರಿಂದ ಎರಡನೆಯವರಿಗೆ, ಎರಡನೆಯವರಿಂದ ಮೂರನೆಯವರಿಗೆ, ಮೂರನೆಯವರಿಂದ ನಾಲ್ಕನೆಯವರಿಗೆ ಹೀಗೆ ಕೂಡಿಕೊಂಡು ಹೋಗುವಂತಿರಬೇಕು. ಪ್ರಪಂಚದ ಮೂಲೆ ಮೂಲೆಗಳಿಂದ ಗಿರ್ ಸಿಂಹಧಾಮವನ್ನು ವೀಕ್ಷಿಸಲು ಜನರು ಬರುತ್ತಾರೆ. ಗಿರ್ ಸಿಂಹಧಾಮವನ್ನು ವೀಕ್ಷಿಸಿದ ನಂತರ ಪೋರ್ ಬಂದರ್ ಮತ್ತು ದ್ವಾರಕೆಗೆ ತೆರಳಲು ಆರು ಲೇನ್ ನ, ನಾಲ್ಕು ಲೇನ್ ನ ಅಥವಾ ಎರಡು ಲೇನ್ ನ ದೊಡ್ಡ ರಸ್ತೆ ದೊರಕಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಸ್ಥಿತಿ ನಿರ್ಮಾಣವಾಗಬೇಕು. ಇದು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಗಿರ್ ಅರಣ್ಯಧಾಮವನ್ನು ವೀಕ್ಷಿಸಲು ಬರುವವರು ದ್ವಾರಕಾಧೀಶನ ದರ್ಶನಕ್ಕೆ ಕೂಡಾ ಆಗಮಿಸುವಂತ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ದ್ವಾರಕಾಧೀಶದ ದರ್ಶನಕ್ಕೆ ಆಗಮಿಸುವವರಿಗೆ ಗಿರ್ ನ ಸಿಂಹವನ್ನು ನೋಡುವ ಮನಸಾಗಬೇಕು ಅಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ. ಆದುದರಿಂದ ಭಾರತ ಸರ್ಕಾರವು ರಾಷ್ಟ್ರೀಯ ರಾಜಮಾರ್ಗದ ನೆಟ್ ವರ್ಕ್ ಅನ್ನು ಈ ರೀತಿಯಾಗಿ ನಿರ್ಮಿಸುವ ನಿಟ್ಟಿನಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿದೆ. ರಸ್ತೆ ನಿರ್ಮಾಣವಾಗಿ, ಅನುಕೂಲತೆಗಳು ಹೆಚ್ಚಿ, ಅಭಿವೃದ್ಧಿ, ವೇಗ ಪಡೆದುಕೊಳ್ಳುವುದರ ಜತೆ ಜತೆಗೆ ಇದು ಆರ್ಥಿಕ ಚಟುವಟಿಗೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೇರ ಸಂಬಂಧಗಳನ್ನು ಹೊಂದಿರಬೇಕು. ಈ ವ್ಯವಸ್ಥೆಯಲ್ಲಿ ಆರ್ಥಿಕ ಚಟುವಟಿಗೆಗಳ ಬಲಗೊಳ್ಳಬೇಕು.

ಇನ್ನು, ರಾಷ್ಟ್ರೀಯ ರಾಜಮಾರ್ಗದ ಅಗಲೀಕರಣ ಕಾರ್ಯ. ಘಣುವಿನವರೆಗೆ ನಡೆಯಲಿದೆ, ನಾನು ಘಣುವನ್ನು ನೆನಪು ಮಾಡಿಕೊಂಡಾಗಲೆಲ್ಲ ನನ್ನ ಪುಟ್ಟ ಪುಟ್ಟ ಮಕ್ಕಳ ನೆನಪಾಗುತ್ತದೆ. ಬಹಳ ಹಿಂದಿನ ನಮ್ಮ ಪಕ್ಷದ ಕಾರ್ಯಕರ್ತರು, ರೈತರ ಮನದಲ್ಲಿ ಹೀಗೆ ಮಾಡಿದರೆ ಚೆನ್ನಾಗಿರುತ್ತದೆ, ಹಾಗೆ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಎಲ್ಲ ವಿಚಾರಗಳು ತುಂಬಿರುತ್ತಿದ್ದವು. ಈ ಬಗ್ಗೆ ಅವರು ಯಾವಾಗಲೂ ಯೋಚಿಸುತ್ತಿರುತ್ತಾರೆ. ಇಂದು ಈ ರಸ್ತೆಯನ್ನು ಘಣುವಿನ ತನಕ ಅಗಲೀಕರಣ ಮಾಡಿ, ರಾಷ್ಟ್ರೀಯ ರಾಜಮಾರ್ಗಕ್ಕಾಗಿ ಹೆಚ್ಚಿನ ಹಣವನ್ನು ನಾವು ವೆಚ್ಚ ಮಾಡುತ್ತಿದ್ದೇವೆ. ಜಾಮ್ ನಗರ್ ಜೂನಾಗಢ್ ಜಿಲ್ಲೆಯನ್ನು ಸಂಪರ್ಕಿಸುವ, ಪೋರ್ ಬಂದರ್ ಜಿಲ್ಲೆಯನ್ನು ಸಂಪರ್ಕಿಸುವ ಸುಮಾರು ಆರು ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಯ ಬಗ್ಗೆ ತಾವು ಕಲ್ಪನೆ ಮಾಡಿಕೊಳ್ಳಿ. ಮಾಧವ ಸಿಂಗ್ ಸೋಲಂಕಿ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ನೆನಪು ಮಾಡಿಕೊಳ್ಳಿ, ಅಂದಿನ ದಿನಪತ್ರಿಕೆಯ ಪ್ರಥಮ ಪುಟದಲ್ಲಿ ಒಂದು ಚಿತ್ರ ಪ್ರಕಟವಾಗಿತ್ತು. ಆ ಚಿತ್ರ ಇಂದೂ ನನಗೆ ನೆನಪಿದೆ, ಆಗ ನಾನಿನ್ನು ರಾಜಕಾರಣಕ್ಕೆ ಬಂದಿರಲಿಲ್ಲ. ಆಗ ನಾನು ಸಮಾಜ ಸೇವೆಯಲ್ಲಿ ತೊಡಗಿರುತ್ತಿದ್ದೆ. ಜಾಮ್ ನಗರ ಜಿಲ್ಲೆಯ ಒಂದು ಸ್ಥಳದಲ್ಲಿ ಒಂದು ನೀರಿನ ಟ್ಯಾಂಕ್ ಉದ್ಘಾಟನೆಗೆಂದು ಅಂದಿನ ಮುಖ್ಯಮಂತ್ರಿ ಮಾಧವ್ ಸಿಂಗ್ ಅವರು ಆಗಮಿಸಿದ್ದರು. ಇದು ಅಂದಿನ ದಿನದ ಸರ್ಕಾರದ ಕಲ್ಪನೆಯಾಗಿತ್ತು, ಇಂದಿನ ಸರ್ಕಾರದ ಕಾರ್ಯವನ್ನು ನೋಡಿ, ಯಾವ ರೀತಿಯ ಸೇತುವೆ ನಿರ್ಮಾಣವಾಗಿದೆ, ರಸ್ತೆಗಳು ಹೇಗೆ ನಿರ್ಮಾಣವಾಗಿವೆ. ಒಂದು ನೀರಿನ ಟ್ಯಾಂಕ್ ಉದ್ಟಾಟನೆ ಮಾಡಿ ಒಂದು ಪುಟದ ಜಾಹೀರಾತು ನೀಡಿ ಪ್ರಥಮ ಪುಟದಲ್ಲಿ ಚಿತ್ರ ಪ್ರಕಟಿಸಿಕೊಳ್ಳುವುದು ಅವರ ಅಭಿವೃದ್ಧಿಯ ಸಂಕೇತವಾಗಿತ್ತು.

ಜಗತ್ತು ಬದಲಾಗುತ್ತಿದೆ. ಬದಲಾದ ಜಗತ್ತಿನಲ್ಲಿ ಅಭಿವೃದ್ಧಿಯನ್ನು ಉತ್ತುಂಗಕ್ಕೆ ಕೊಂಡೊಯ್ದು’, ಪ್ರತಿಯೊಬ್ಬ ಭಾರತೀಯನು ವಿಶ್ವದ ಸಮ್ಮುಖದಲ್ಲಿ ಎದೆಯುಬ್ಬಿಸಿ ನಿಲ್ಲುವಂತಹ ಸ್ಥಿತಿ ನಿರ್ಮಾಣ ಮಾಡಬೇಕಿದೆ. ಇಂತಹ ಹಿಂದೂಸ್ತಾನವನ್ನು ನಿರ್ಮಿಸುವ ಕನಸು ಪ್ರತಿಯೊಬ್ಬ ಭಾರತೀಯನಿಗಿದೆ. ಇದು ಕೇವಲ ನರೇಂದ್ರ ಮೋದಿಯ ಕನಸಲ್ಲ. 125 ಕೋಟಿ ಭಾರತೀಯರ ಕನಸು. ನಾನು ತಮ್ಮ ಕನಸುಗಳಿಗೆ ಬಣ್ಣ ತುಂಬಲು, ತಮ್ಮ ಕನಸುಗಳನ್ನು ನನಸಾಗಿಸಲು ಪ್ರಯತ್ನ ಮಾಡುತ್ತಿದ್ದೇನೆ, ಪ್ರಯಾಸ ಪಡುತ್ತಿದ್ದೇನೆ. ನೀಲಿ ಆರ್ಥಿಕತೆ (ಬ್ಲ್ಯೂ ಎಕಾನಮಿ)ಯ ಬಗ್ಗೆ ಇದೀಗ ತಾನೆ ನಿತೀನ್ ಜೀ ಅವರು ಹೇಳುತ್ತಿದ್ದರು. ಇದೊಂದು ಸಾಗರ ಸಂಪತ್ತಾಗಿದ್ದು ದೇಶದ ಅರ್ಥವ್ಯವಸ್ಥೆಗೆ ದೊಡ್ಡ ಶಕ್ತಿ ತುಂಬುವ ಸಾಮರ್ಥ್ಯ ಇದಕ್ಕಿದೆ. ಗುಜರಾತ್ ಬಳಿ 1600 ಕಿಲೋಮೀಟರ್ ಉದ್ದದ ಸಮುದ್ರ ತೀರವಿದೆ. ನಮ್ಮ ಮೀನುಗಾರ ಸಹೋದರ ಸಹೋದರಿಯರು ಸಮುದ್ರ ತೀರದಲ್ಲಿ ವಾಸಿಸುತ್ತಾರೆ. ನೀಲಿ ಆರ್ಥಿಕತೆಯ ಎಲ್ಲ ಸಾಧ್ಯತೆಗಳು ನಮ್ಮ ಸಮುದ್ರ ತೀರದಲ್ಲಿದೆ. ನಾವು ಬಂದರುಗಳ ಅಭಿವೃದ್ಧಿಯನ್ನು ಮಾಡಲು ಬಯಸುವುದರ ಜೊತೆಗೆ ನಾವು ಬಂದರು ಆಧಾರಿತ ವಿಷಯಗಳ ಅಭಿವೃದ್ಧಿಯನ್ನು ಸಹಾ ಮಾಡಬಯಸುತ್ತೇವೆ. ಬಂದರುಗಳನ್ನು ರಸ್ತೆ, ರೈಲ್ವೆ ಮತ್ತು ವಾಯು ಯಾನಕ್ಕೆ ನೇರವಾಗಿ ಜೋಡಿಸುವ ಸಂಪನ್ಮೂಲಗಳ ಅಭಿವೃದ್ಧಿಯನ್ನು ಮಾಡಲು ಬಯಸುತ್ತೇವೆ. ಉಗ್ರಾಣಗಳು, ಶೀತಲೀಕರಣ ಕೇಂದ್ರಗಳನ್ನು ಅಭಿವೃದ್ಧಿ ಮಾಡಿ, ಭಾರತದ ರೈತರು ಬೆಳೆಯುವ ಬೆಳೆಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ವಿಶ್ವ ಮಾರುಕಟ್ಟೆಯನ್ನು ತಲುಪಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿದೆ. ದೇಶದ ರೈತರಿಗೆ ಹೆಚ್ಚಿನ ಬೆಲೆ ದೊರಕುವಂತಾಗಬೇಕು. ಆದುದರಿಂದ ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಒಂದರ ನಂತರ ಒಂದರಂತೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ನಮ್ಮ ಮೀನುಗಾರ ಸಹೋದರ ಸಹೋದರಿಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ನೀಲಿ ಆರ್ಥಿಕತೆಯಡಿ ಒಂದು ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ಯಾವ ಮೀನುಗಾರರ ಬಳಿ ಚಿಕ್ಕಪುಟ್ಟ ಬೋಟ್ ಗಳಿರುವುದೋ ಅವರು ಅವುಗಳನ್ನು ತೆಗೆದುಕೊಂಡು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುತ್ತಾರೆ. 10-12 ನಾಟಿಕಲ್ ಮೈಲುಗಳನ್ನು ದಾಟಿ ಅವರು ಮುಂದೆ ಸಾಗಲು ಆಗುವುದಿಲ್ಲ. ಇಷ್ಟು ಪ್ರದೇಶದಲ್ಲಿ ಅವರಿಗೆ ಅಗತ್ಯವಾಗಿರುವಷ್ಟು ಮೀನುಗಳು ದೊರಕುವುದಿಲ್ಲ. ಅವರುಗಳು ಗಂಟೆಗಟ್ಟಲೆ ಕಷ್ಟಪಡುತ್ತಾರೆ, ನಂತರ ಅರ್ಧದಷ್ಟು ಮೀನುಗಳನ್ನು ತುಂಬಿಕೊಂಡು ಮರಳುತ್ತಾರೆ. ನನ್ನ ಮೀನುಗಾರ ಸಹೋದರ ಸಹೋದರಿಯರು ಇಂತಹ ಜೀವನವನ್ನು ಸಾಗಿಸಲು ನಾನು ಅವಕಾಶ ಮಾಡಿಕೊಡಲೇನು? ಇದು ಅವರ ಅದೃಷ್ಟವೆಂದು ತಿಳಿದು ಸುಮ್ಮನಿರಲೇನು? ನನ್ನ ಮೀನುಗಾರ ಸಹೋದರ ಸಹೋದರಿಯರಿಗೆ ಜೀವನದಲ್ಲಿ ಮುಂದೆ ಬರಬೇಕೆಂಬ ಇಚ್ಚೆ ಇರುವುದಿಲ್ಲವೇನು? ನನ್ನ ಮೀನುಗಾರ ಸಹೋದರ ಸಹೋದರಿಯರಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂಬ ಮನಸ್ಸು ಮೂಡುವುದಿಲ್ಲವೇ? ನನ್ನ ಮೀನುಗಾರ ಸಹೋದರ ಸಹೋದರಿಯರು ಗುಡಿಸಲು ಜೀವನದಿಂದ ಒಳ್ಳೆ ಜೀವನ ಸಾಗಿಸುವಂತೆ ಮಾಡಲು ನನಗೆ ಮನಸಾಗುವುದೋ ಇಲ್ಲವೋ? ಇದೆಲ್ಲವನ್ನು ಮಾಡಬೇಕಾದರೆ, ಅವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಬೇಕು. ಅವರನ್ನು ಸಬಲೀಕರಣಗೊಳ್ಳಿಸಬೇಕು. ಅವರನ್ನು ಸಶಕ್ತರನ್ನಾಗಿಸಬೇಕು. ಆದುದರಿಂದ ನಾವು ಒಂದು ಯೋಜನೆಯನ್ನು ಸಿದ್ಧಪಡಿಸಿದ್ದು, ಇದರ ಅನ್ವಯ ಕೆಲವು ಮೀನುಗಾರ ಸಹೋದರ ಸಹೋದರಿಯನ್ನು ಒಟ್ಟುಮಾಡಬೇಕಾಗಿದೆ. ಸರ್ಕಾರ ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ.

ಇದರಿಂದ ಅವರು ಒಂದೂವರೆ ಕೋಟಿ, ಎರಡು ಕೋಟಿ ರೂಪಾಯಿ ವೆಚ್ಚ ಮಾಡಿ ದೊಡ್ಡ ಬೋಟ್ ತರಬಹುದು. ಒಂದೂವರೆ ಕೋಟಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸುವ ದೊಡ್ಡ ಬೋಟ್ ಗಳ ಸಹಾಯದಿಂದ ಅವರು ಹತ್ತು – ಹನ್ನೆರಡು ನಾಟಿಕಲ್ ಮೈಲಿಗಿಂತ ಇನ್ನೂ ಮುಂದೆ ಸಾಗಬಹುದು. ಅಲ್ಲಿ ಸಮುದ್ರದೊಳಗೊಂದು ಮತ್ಸ್ಯ ಸಮುದ್ರವಿದೆ. ಸಮುದ್ರದಾಳದಲ್ಲಿ ಅವರು ಮುಂದೆ ಸಾಗಿದರೆ, ಮೊದಲು ಎರಡು ಮೂರು ದಿನಗಳು ಹಿಡಿಯುತ್ತಿದ್ದ ಮೀನುಗಾರಿಕೆ ಕೇವಲ ಅರ್ಧ ಅಥವಾ ಒಂದು ದಿನದಲ್ಲಿ ಪೂರ್ಣಗೊಂಡು ಮೂರು ಪಟ್ಟು, ನಾಲ್ಕು ಪಟ್ಟು ಹೆಚ್ಚು ಆದಾಯ ತರುವಂತಹ ವ್ಯವಸ್ಥೆಗಳನ್ನು ಮಾಡಿಕೊಂಡು ಹಿಂದಿರುಗಬಹುದಾಗಿದೆ. ಅಲ್ಲಿ ಶೀತಲೀಕರಣ ಕೇಂದ್ರ ಸೇರಿ ಎಲ್ಲ ವ್ಯವಸ್ಥೆಗಳಿರುತ್ತವೆ. ಈ ರೀತಿಯ ವ್ಯವಸ್ಥೆಯನ್ನು ನಾವು ನಮ್ಮ ಮೀನುಗಾರರಿಗೆ ನೀಡಲು ಬಯಸಿದ್ದೇವೆ. ಇದರ ಲಾಭವನ್ನು ನನ್ನೆಲ್ಲ ಮೀನುಗಾರ ಸಹೋದರರು ಪಡೆದುಕೊಳ್ಳಬೇಕು, ಇದರಿಂದ ಅವರು ಮುಂದೆ ಬರಬಹುದಾಗಿದೆ. ಇದರಿಂದ ಮೀನುಗಾರರ ಜೀವನ ಬದಲಾಗುತ್ತದೆ. ಕಾಂಡ್ಲಾ ಬಂದರನ್ನು ನೋಡಿ, ಅದು ಹೇಗೆ ಅಭಿವೃದ್ಧಿಯಾಗಿದೆ.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕಾಲದಲ್ಲೂ ಕಾಂಡ್ಲಾ ಬಂದರಿತ್ತು. ಅಲ್ಲಿನ ಸ್ಥಿತಿ ಹೇಗಿತ್ತು ಎಂಬುದರ ಸಂಪೂರ್ಣ ಅರಿವು ನನಗಿದೆ. ಈ ಬಂದರಿಗೆ ಆದ್ಯತೆ ನೀಡುವಂತೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೆವು. ಅವರ ಆದ್ಯತೆಯಲ್ಲಿ ಕಾಂಡ್ಲಾ ಬಂದರು ಇರಲಿಲ್ಲ. ನಮಗೆ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ದೊರೆತ ನಂತರ ಗುಜರಾತ್ ರಾಜ್ಯದ ಬಂದರಿನ ಅಭಿವೃದ್ದಿಯ ಬಗೆಗೂ ಗಮನ ನೀಡತೊಡಗಿದೆವು.ಈ ಕಾರಣದಿಂದ ಕಳೆದ 25 ವರ್ಷಗಳಲ್ಲಿ ಕಾಣದಷ್ಟು ಅಭಿವೃದ್ಧಿಯನ್ನು ಕಾಂಡ್ಲಾ ಬಂದರು ಕಂಡಿದೆ. ಈ ಕಾರಣದಿಂದಾಗಿ ಇಲ್ಲಿನ ಜನತೆಗೆ ದಿನನಿತ್ಯದ ಊಟ ದೊರೆಯುತ್ತಿದೆ. ಎಷ್ಟು ವರ್ಷಗಳಿಂದ ಅಳಂಗ್ ಬಗ್ಗೆ ದೂರುಗಳು ಕೇಳಿಬರುತ್ತಿದ್ದವು. ಅಳಂಗ್ ಅಭಿವೃದ್ದಿಯ ಬಗೆಗೆ ಮಾತುಗಳು ಕೇಳಿ ಬರುತ್ತಿದ್ದವು. ಅಳಂಗ್ ನ ನೈರ್ಮಲ್ಯದ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು. ಭಾವನಗರದ ಅಳಂಗ್ ವಿಶ್ವದಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ. ಜತೆ ಜತೆಗೆ ಪರಿಸರದ ಹೆಸರಿನಲ್ಲಿ ಸಾವಿರಾರು ಸವಾಲುಗಳು ಕೂಡಾ ಇದ್ದವು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳು ಹೊಸ ಹೊಸ ಸವಾಲುಗಳನ್ನು ಒಡ್ಡುತ್ತಿದ್ದವು. ಇವುಗಳ ಬಗ್ಗೆ ಯೋಚಿಸುವುದು ಹಾಗೂ ಸಹಾಯ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿತ್ತು. ಅಳಂಗ್ ನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಜೀವನದಲ್ಲಿ ಬದಲಾವಣೆ ತರುವ ಬಗ್ಗೆ ಏನನ್ನಾದರೂ ಮಾಡಬೇಕೆನ್ನುವ ತವಕವಿತ್ತು. ಸತತ ಪ್ರಯತ್ನದ ನಂತರವು ಅಂದಿನ ಸರ್ಕಾರದ ಕಣ್ಣು ತೆರೆಸುವುದು ಸಾಧ್ಯವಾಗಿರಲಿಲ್ಲ. ಇಂದು ನಮಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ನಾವು ಜಪಾನ್ ಜೊತೆ ಅಳಂಗ್ ನ ಅಭಿವೃದ್ಧಿಯ ಬಗೆಗೆ ಒಂದು ಯೋಜನೆ ಸಿದ್ಧಪಡಿಸಿ ಕಾರ್ಯ ಪ್ರವೃತ್ತರಾಗಿದ್ದೇವೆ. ಈ ಕಾರಣದಿಂದ ಅಳಂಗ್ ನ ನನ್ನ ಕಾರ್ಮಿಕ ಸಹೋದರ ಸಹೋದರಿಯರ ಬಾಳಿನಲ್ಲಿ ಒಂದು ದೊಡ್ಡ ಬದಲಾವಣೆ ಬರಲಿದೆ.

ನಾವು ಬದಲಾವಣೆಯ ದಿಕ್ಕಿನತ್ತ ಮುಂದುವರೆದಿದ್ದೇವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಮೂಲಕ ಸಾಮಾನ್ಯ ಮನುಷ್ಯನ ಜೀವನದಲ್ಲಿ ಬದಲಾವಣೆ ತರಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ. ಮಂಗರೋಲ್ ಮತ್ತು ವೇರಾವಲ್ ಪ್ರದೇಶಗಳು ನಮ್ಮ ಮತ್ಸ್ಯೋದ್ಯಮದ ಪರಂಪರಾಗತ ಹಬ್ ಗಳಾಗಿವೆ. ನಮ್ಮ ರಾಷ್ಟ್ರಪತಿಗಳು ಇಲ್ಲಿಗೆ ಆಗಮಿಸಿದ್ದರು. ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರು ಮಂಗರೋಲ್ ನಲ್ಲಿ ಮೀನುಗಾರಿಕಾ ಕಾರ್ಯಕ್ಕೆ ವೇಗ ನೀಡಬಲ್ಲಂತ ಒಂದು ದೊಡ್ಡ ಯೋಜನೆಗೆ ಶಿಲಾನ್ಯಾಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಮೀನುಗಾರಿಕಾ ಹಬ್ ಬೆಟ್ ನ ಸಂಪೂರ್ಣ ಮತ್ಸ್ಯೋದ್ಯಮಕ್ಕೆ ಒಂದು ದೊಡ್ಡ ಶಕ್ತಿಯ ರೂಪದಲ್ಲಿ ಹೊರಹೊಮ್ಮಲಿದೆ. ನಮ್ಮ ಸಮುದ್ರತೀರವು ನೀಲಿ ಆರ್ಥಿಕತೆಯ ಮೂಲಕ, ಪ್ರವಾಸೋದ್ಯಮದ ಆರ್ಥಿಕತೆಯ ಮೂಲಕ, ಮೂಲಭೂತ ಸೌಕರ್ಯಗಳ ಮೂಲಕ ಮುನ್ನಡೆಯಲಿದೆ. ಇದರ ಜತೆ ಜತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ…

ನಾನು ಗುಜರಾತ್ ಜನತೆಗೆ ಒಂದು ಉಡುಗೊರೆಯನ್ನು ನೀಡುವ ಘೋಷಣೆ ಮಾಡಬಯಸುತ್ತೇನೆ. ಇದು ಕೇವಲ ಗುಜರಾತ್ ಮಾತ್ರವಲ್ಲದೆ ಸಂಪೂರ್ಣ ಹಿಂದೂಸ್ತಾನಕ್ಕೆ ಅನುಕೂಲವಾಗಲಿದೆ. ಇದು ಸಮುದ್ರ ತೀರದಲ್ಲಿ ಆಗಲಿದೆ ಅದೂ ದೇವ ಭೂಮಿ ದ್ವಾರಕೆಯಲ್ಲಿ ಆಗಲಿದೆ. ಸಮುದ್ರ ತೀರದ ಸುರಕ್ಷೆಗಾಗಿ ಇರುವ ಸಾಗರ ಪೋಲಿಸ್ ಪಡೆಯನ್ನು ಅತ್ಯಾಧುನಿಕ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಸಾಮಾನ್ಯ ಪೋಲೀಸರಿಗಿಂತ ಇವರ ತರಬೇತಿ ವಿಭಿನ್ನವಾಗಿರುತ್ತದೆ. ಯಾಕೆಂದರೆ, ಸಮುದ್ರದಲ್ಲಿ, ಸಮುದ್ರ ತೀರದ ಐದು ಕಿಲೋಮೀಟರ್ ಕ್ಷೇತ್ರ ವ್ಯಾಪ್ತಿಯ ಸುರಕ್ಷತೆಯಲ್ಲಿ ಅವರು ತೊಡಗಿರುತ್ತಾರೆ. ಸಂಪೂರ್ಣ ದೇಶದಲ್ಲಿ ಸಾಗರ ಪೋಲೀಸ್ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದ್ದು, ಈ ರೀತಿಯ ಪ್ರಪ್ರಥಮ ಕೇಂದ್ರ ದೇವ ಭೂಮಿ ದ್ವಾರಕೆಯ ಮೋಜಪಾ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ. ಇದು ಜಾಮ್ ನಗರ ವಿಮಾನ ನಿಲ್ದಾಣದಲ್ಲಿರುವ ತರಬೇತಿ ಕೇಂದ್ರದ ರೀತಿ ಇರಲಿದೆ. ದೇಶದ ಜನತೆಗೆ ವಾಯುಪಡೆಯ ಸೇವೆ ಇದರಿಂದ ದೊರಕುತ್ತಿದೆ. ಇದೇ ರೀತಿ ದೇವ ಭೂಮಿ ದ್ವಾರಕೆಯಲ್ಲಿ ಸ್ಥಾಪನೆಯಾಗಲಿರುವ ಸಾಗರ ಸುರಕ್ಷಾ ಪಡೆಯ ತರಬೇತಿ ಕೇಂದ್ರದಲ್ಲಿ ದೇಶದ ವಿವಿಧ ಭಾಗಗಳ ಪೋಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಇದು ಸಾವಿರಾರು ಪ್ರಶಿಕ್ಷಣಾರ್ಥಿಗಳು ಇರಬಹುದಾದ ಕೇಂದ್ರವಾಗಲಿದೆ. ಎಷ್ಟು ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಇದು ಒಳಗೊಂಡಿದೆ ಎಂಬುದನ್ನು ತಾವು ಅಂದಾಜು ಮಾಡಬಹುದಾಗಿದೆ.

ಸಹೋದರ ಸಹೋದರಿಯರೇ, ತಾವುಗಳೆಲ್ಲ ದೀಪಾವಳಿಯ ಸಿದ್ಧತೆಯಲ್ಲಿ ತೊಡಗಿದ್ದೀರಿ. ಗುಜರಾತ್ ನಲ್ಲಿ ದೀಪಾವಳಿ ಹಬ್ಬ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ವ್ಯಾಪಾರಿಗಳಿಗೆ ಮತ್ತಷ್ಟು ವಿಶೇಷವಾಗಿರಲಿದೆ. ನಾನು ಇಂದಿನ ದಿನಪತ್ರಿಕೆಗಳ ಮುಖ್ಯಾಂಶಗಳನ್ನು ಗಮನಿಸುತ್ತಿದ್ದೆ. ಅದರಲ್ಲಿ ದೀಪಾವಳಿ ಹದಿನೈದು ದಿನಗಳಿಗೂ ಮೊದಲೇ ಆಗಮಿಸಿದೆ ಎಂಬ ಹಣೆಬರಹವಿತ್ತು. ನಾಲ್ಕೂ ದಿಕ್ಕಿನಲ್ಲಿ ದೀಪಾವಳಿಯ ವಾತಾವರಣ ಮೂಡಿದೆ. ನೆನ್ನೆ ನಾವು ಜಿಎಸ್ ಟಿಯಲ್ಲಿ ಅತ್ಯಂತ ಮಹತ್ವಪೂರ್ಣ ನಿರ್ಣಯವನ್ನು ತೆಗೆದುಕೊಂಡಿದ್ದೆವು. ಜಿಎಸ್ ಟಿ ಘೋಷಣೆಯಾದ ಪ್ರಥಮ ದಿನವೇ ನಾವು ಹೇಳಿದ್ದೆವು, ಯೋಜನೆ ಘೋಷಣೆಯಾದ ಮೂರು ತಿಂಗಳು ಇದರ ಬಗ್ಗೆ ಅಧ್ಯಯನ ಮಾಡುತ್ತೇವೆ, ಮೂರು ತಿಂಗಳಲ್ಲಿ ಎಲ್ಲೆಲ್ಲಿ ತೊಂದರೆಗಳು ಕಂಡುಬರುವುದೋ, ವ್ಯವಸ್ಥೆಯಲ್ಲಿ ದೋಷ ಕಂಡುಬರುವುದೋ, ತಂತ್ರಜ್ಞಾನದಲ್ಲಿ ತಪ್ಪುಗಳು ಕಂಡುಬರಬಹುದು, ನಿಯಮಗಳಲ್ಲಿ ನ್ಯೂನತೆಗಳು ಕಾಣಬಹುದು. ದರ ನಿಗದಿಯ ಬಗ್ಗೆ ದೂರುಗಳು ಬರಬಹುದು, ವ್ಯಾಪಾರಿಗಳ ದಿನನಿತ್ಯದ ವ್ಯವಹಾರದಲ್ಲಿ ತೊಂದರೆಯಾಗಬಹುದು. ದೇಶದ ವ್ಯಾಪಾರಿಗಳು ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುವುದನ್ನು ನಾವು ಬಯಸುವುದಿಲ್ಲ. ದೇಶದಲ್ಲಿ ಯಾವುದೇ ತೊಂದರೆ ಆಗಲು ನಾನು ಬಯಸುವುದಿಲ್ಲ. ಆದುದರಿಂದ ಮೂರು ತಿಂಗಳಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ ನಿನ್ನೆ ನಮ್ಮ ಹಣಕಾಸು ಸಚಿವರು ಜಿಎಸ್ ಟಿ ಸಭೆಯಲ್ಲಿ ಎಲ್ಲರ ಮನವೊಲಿಸಿ ಒಂದು ದೊಡ್ಡ ನಿರ್ಣಯವನ್ನು ತೆಗೆದುಕೊಂಡಿದ್ದಾರೆ, ಇದರಿಂದ ನನಗೆ ಸಂತಸವಾಗಿದೆ. ದೇಶದ ಪ್ರತಿಯೊಂದು ಭಾಗದಿಂದಲೂ ಇದಕ್ಕೆ ಸ್ವಾಗತ ದೊರೆತಿದೆ, ಇದೇ ದೇಶದ ಶಕ್ತಿ. ಒಂದು ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದಾಗ, ನಿಯಮಗಳ ಹಿಂದೆ ಪ್ರಾಮಾಣಿಕತೆ ಕಂಡುಬರುತ್ತದೆ. ಆಗ ಸಂಪೂರ್ಣ ದೇಶ ತೊಂದರೆಗಳ ನಡುವೆಯೂ ಒಂದಾಗಿ ಮುನ್ನಡೆಯುತ್ತದೆ. ಇದನ್ನು ನಾನು ಇಂದು ಅನುಭವಿಸುತ್ತಿದ್ದೇನೆ. ಇದಕ್ಕಾಗಿ ನಾನು ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜಿಎಸ್ ಟಿಯನ್ನು ಇನ್ನೂ ಹೆಚ್ಚು ಸರಳ, ತೆರಿಗೆಯನ್ನು ಇನ್ನೂ ಅಧಿಕ ಸರಳ ಮಾಡುವ ಪ್ರಯತ್ನ ಮಾಡಿದ್ದೇವೆ. ಇದನ್ನು ತಾವೆಲ್ಲರೂ ಸ್ವಾಗತಿಸಿದ್ದೀರಿ. ಇದಕ್ಕಾಗಿ ನಾನು ತಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಅಭಿನಂದನೆ ಸಲ್ಲಿಸುತ್ತೇನೆ.