Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಟ್ನಾ ಬಿಹಾರದಲ್ಲಿ ಗುರು ಗೋವಿಂದಸಿಂಗ್ ರವರ 350 ನೇ ಜಯಂತಿಯ ಆಚರಣಾ ಮಹೋತ್ಸವದಲ್ಲಿ 05.01.2017 ರಂದು ಪ್ರಧಾನ ಮಂತ್ರಿ ಅವರ ಭಾಷಣ

ಪಟ್ನಾ ಬಿಹಾರದಲ್ಲಿ ಗುರು ಗೋವಿಂದಸಿಂಗ್ ರವರ 350 ನೇ ಜಯಂತಿಯ ಆಚರಣಾ ಮಹೋತ್ಸವದಲ್ಲಿ 05.01.2017 ರಂದು  ಪ್ರಧಾನ ಮಂತ್ರಿ  ಅವರ  ಭಾಷಣ


ಶ್ರೀ ಪಟನಾ ಸಾಹೇಬ್, ಗುರುವಿನ ನಗರಿಯಲ್ಲಿ ದೇಶಕ್ಕೇ ಪಿತಾ ಸಮಾನರಾದ ಶ್ರೀ ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಜೀಯವರ ಜನ್ಮದಿನದಂದು ಶುಭಾಶಯ ನೀಡಲು ಆಗಮಿಸಿರುವ ಸಾಧು-ಸಜ್ಜನರು,ಪ್ರಭು ನಿನ್ನ ದರ್ಶನಕ್ಕಾಗಿ ಕ್ಕಾಗಿ ನಾನು ಬಂದಿರುವೆ. ನಾನು ಈ ಪವಿತ್ರ ದಿನದಂದು ನಿಮಗೂ ಇಲ್ಲಿರುವ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಹಾರೈಸುತ್ತೇನೆ.

ನಾವು ಇಂದು ಈ ಪವಿತ್ರ ಪಟನಾ ಸಾಹೇಬ್ ಭೂಮಿಯಲ್ಲಿ ಈ ಬೆಳಕಿನ ಉತ್ಸವವನ್ನು ಆಚರಿಸುವಂತಹ ಭಾಗ್ಯಶಾಲಿಗಳಾಗಿದ್ದೇವೆ. ನಾವು ಸಂಪೂರ್ಣ ವಿಶ್ವದಲ್ಲಿ ಎಲ್ಲೆಲ್ಲಿ ಸಿಖ್ ಸಮುದಾಯ ವಾಸಿಸುತ್ತದೆಯೋ ಅಲ್ಲೆಲ್ಲಾ, ವಿಶ್ವದ ಎಲ್ಲ ದೇಶಗಳಲ್ಲೂ ಭಾರತ ಸರ್ಕಾರವು ನಮ್ಮ ಎಂಬಸಿಯ (ರಾಯಭಾರ ಕಛೇರಿಯ ) ಮಾಧ್ಯಮದಿಂದ ಈ ಬೆಳಕಿನ ಉತ್ಸವವನ್ನು ಆಚರಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.ಇದರ ಉದ್ದೇಶ್ಯ 350 ವರ್ಷಗಳ ಹಿಂದೆ ಗುರು ಗೋವಿಂದ ಸಿಂಗ್ ಎಂಬ ಒಂದು ದಿವ್ಯ ಆತ್ಮವು ಹಿಂದೂಸ್ಥಾನದಲ್ಲಿ ಜನಿಸಿ , ಮಾನವ ಸಮಾಜಕ್ಕೆ ಅತಿ ದೊಡ್ಡ ಪ್ರೇರಣೆ ನೀಡಿದರೆಂದು ಎಂದು ಇಡೀ ವಿಶ್ವಕ್ಕೆ ಗೊತ್ತಾಗಬೇಕು ಎಂಬ ನಿಟ್ಟಿನಲ್ಲಿ ಭಾರತ ಸರ್ಕಾರವು ಸಂಪೂರ್ಣ ಪ್ರಯತ್ನ ಪಟ್ಟಿದೆ.

ನಾನು ಶ್ರೀಮಾನ್ ನಿತೀಶ್ ಜೀ ಯವರಿಗೆ, ಅವರ ಸರ್ಕಾರಕ್ಕೆ, ಅವರ ಎಲ್ಲ ಸಹೋದ್ಯೋಗಿಗಳಿಗೆ, ಎಲ್ಲಕ್ಕಿಂತ ಹೆಚ್ಚಾಗಿ ವಿಶೇಷವಾಗಿ ಬಿಹಾರದ ಜನತೆಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದರೆ ಈ ಪಟನಾ ಸಾಹೇಬ್ ನಲ್ಲಿ ಈ ಬೆಳಕಿನ ಹಬ್ಬ ಅಥವಾ ಉತ್ಸವ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ಹಿಂದೂಸ್ಥಾನದ ಐಕ್ಯತೆ,ಅಖಂಡತೆ, ಸೋದರ ಬಾಂಧವ್ಯ , ಸಾಮಾಜಿಕ ಸಾಮರಸ್ಯ, ಜಾತ್ಯತೀತತೆಯು ಒಂದು ಬಲವಾದ ಸಂದೇಶವನ್ನು ನೀಡುವ ಸಾಮರ್ಥ್ಯ ಪಟನಾ ಸಾಹೇಬ್ ನಲ್ಲಿ ನಡೆಯುತ್ತಿರುವ ಈ ಬೆಳಕಿನ ಹಬ್ಬದ ಆಚರಣೆಗಿದೆ. ನನಗೆ ತಿಳಿದುಬಂದಿರುವಂತೆ ಈ ಕಾರಣಕ್ಕಾಗಿಯೇ ನಿತೀಶ್ ಜೀ ಯವರು ತಾವೇ ಸ್ವತ: ಗಾಂಧೀ ಮೈದಾನಕ್ಕೆ ಬಂದು ಪ್ರತಿಯೊಂದು ತಯಾರಿಯನ್ನೂ ಸೂಕ್ಷ್ಮವಾಗಿ ಅವಲೋಕಿಸಿ ತಾವೇ ಪರಿಶ್ರಮದಿಂದ ಈ ಭವ್ಯ ಸಮಾರಂಭವನ್ನು ಆಯೋಜಿಸಿದ್ದಾರೆ.

ಕಾರ್ಯಕ್ರಮ ಪಟನಾ ಸಾಹೇಬ್ ನಲ್ಲಿ ನಡೆಯುತ್ತಿರಬಹುದು. ಆದರೆ ಪ್ರೇರೇಪಣೆ ಸಂಪೂರ್ಣ ಹಿಂದೂಸ್ಥಾನಕ್ಕೆ ದೊರೆತಿದೆ,ಸಂಪೂರ್ಣ ವಿಶ್ವಕ್ಕೆ ದೊರೆತಿದೆ. ಹೀಗಾಗಿ ಈ ಬೆಳಕಿನ ಹಬ್ಬವು ನಮ್ಮನ್ನೂ ಮಾನವತೆಗಾಗಿ ಯಾವ ದಾರಿಯಲ್ಲಿ ನಡೆಯಬೇಕು, ನಮ್ಮ ಸಂಸ್ಕಾರ ಯುವುದು, ನಾವು ಮಾನವ ಜಾತಿಗೆ ಏನು ನೀಡಬಲ್ಲೆವು, ಎಂದು ಮತ್ತೊಮ್ಮೆ ಯೋಚಿಸುತ್ತಾ ಹೊಸ ಉಲ್ಲಾಸ, ಉತ್ಸಾಹ ಹಾಗೂ ತೇಜಸ್ಸಿನಿಂದ ಮುಂದುವರೆಯಲು ಇದೊಂದು ಒಳ್ಳೆಯ ಅವಕಾಶ ನೀಡುತ್ತಿದೆ.

ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಒಬ್ಬ ತ್ಯಾಗದ ಪ್ರತಿರೂಪವಾಗಿದ್ದರು. ಅವರು ಅವರ ತಂದೆಯ ಬಲಿದಾನವನ್ನು, ತ್ಯಾಗವನ್ನು ಕಣ್ಣಾರೆ ಕಂಡರು, ತಮ್ಮ ಕಣ್ಣೆದುರೇ ತಮ್ಮ ಮಕ್ಕಳು ಆದರ್ಶಕ್ಕಾಗಿ, ಮೌಲ್ಯಕ್ಕಾಗಿ, ಮಾನವತೆಗಾಗಿ ಬಲಿಯಾದುದನ್ನು ಕಂಡರು. ಇಷ್ಟೆಲ್ಲಾ ಆದನಂತರದ ಅವರ ತ್ಯಾಗದ ಪರಾಕಾಷ್ಟತೆಯನ್ನು ನೋಡಿ; ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ರವರು ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬಹುದಿತ್ತು. ಆದರೆ ಅವರು ತಮ್ಮ ದೂರದೃಷ್ಟಿಯಿಂದ ಜ್ಞಾನವನ್ನು ಕೇಂದ್ರಬಿಂದುವನ್ನಾಗಿಟ್ಟುಕೊಂಡು ಗುರು ಗ್ರಂಥ ಸಾಹೇಬದ ಪ್ರತಿ ಪದವನ್ನೂ ಜೀವನಮಂತ್ರವೆಂದುಕೊಳ್ಳುತ್ತಾ, ನಮಗೆಲ್ಲಾ ಕೊನೆಯಲ್ಲಿ ಹೀಗೆ ಹೇಳಿದ್ದಾರೆ :

ಈ ಗುರು ಗ್ರಂಥ ಸಾಹೇಬವೇ ಅದರ ಪ್ರತಿ ಪದವೂ, ಅದರ ಪ್ರತಿ ಪುಟವೂ ನಮಗೆ ಮುಂಬರುವ ಯುಗಗಳಲ್ಲಿ ಪ್ರೇರಣೆ ನೀಡುತ್ತಿರುತ್ತದೆ. ಇದೂ, ಸಹ ಅವರ ತ್ಯಾಗಕ್ಕೊಂದು ಸಾಕ್ಷಿಯೆನ್ನಬಹುದು; ಅವರು ಮುಂದುವರೆದು ಪಂಚ-ಪ್ಯಾರೆ , ಮತ್ತು ಖಾಲ್ಸಾ ಪಂತದ ರಚನೆ ಮಾಡಿದರು, ಅದರಲ್ಲಿ ಕೂಡ ಅವರು ಸಂಪೂರ್ಣ ಭಾರತವನ್ನು ಜೋಡಿಸುವ ಪ್ರಯತ್ನ ಮಾಡಿದರು.

ಆದಿ ಶಂಕರಾಚಾರ್ಯರ ಬಗ್ಗೆ ಮಾತನಾಡುವಾಗ ಜನರು ಅವರು ಹಿಂದೂಸ್ಥಾನದ ನಾಲ್ಕೂ ಮೂಲೆಗಳಲ್ಲಿ ಶಂಕರಮಠಗಳನ್ನು ಸ್ಥಾಪಿಸಿ ಭಾರತದ ಏಕತೆಯನ್ನು ಜೋಡಿಸಿ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರೆಂದು ಮಾತನಾಡುತ್ತಾರೆ. ಗುರು ಗೋವಿಂದ ಸಿಂಗ್ ಮಹಾರಾಜ್ ಸಾಹೇಬ್ ರವರೂ ಸಹ ಹಿಂದೂಸ್ಥಾನದ ವಿಭಿನ್ನ ಮೂಲೆಗಳಲ್ಲು ಆ ಪಂಚ-ಪ್ಯಾರೆ ಗಳನ್ನು ತಯಾರು ಮಾಡಿ ಸಮಗ್ರ ಹಿಂದೂಸ್ಥಾನಕ್ಕೆ ಖಾಲ್ಸಾ ಪರಂಪರೆಯ ಮೂಲಕ ಏಕತೆಯ ಸೂತ್ರದಲ್ಲಿ ಕಟ್ಟಲು ಆ ಕಾಲದಲ್ಲಿ ಮಾಡಿದ ಅದ್ಭುತ ಪ್ರಯತ್ನ ನಮ್ಮ ಆಸ್ತಿ. ಇದರ ಅನುಭವ ಹೃದಯಪೂರ್ವಕವಾಗಿ ನನಗೆ ಆಗಿದೆ. ನನಗೆ ಅದು ರಕ್ತಸಂಬಂಧವೇನೋ ಅನ್ನಿಸುತ್ತೆ ಕೂಡ. ಏಕೆಂದರೆ ಮೊದಲ ಪಂಚ-ಪ್ಯಾರೆ ಗಳಿಗೆ ಅವರು ನಿಮಗೆ ಅದು ಸಿಗುತ್ತೆ , ಇದು ಸಿಗುತ್ತೆ , ನಿಮಗೆ ಈ ಪದವಿ ಸಿಗುತ್ತೆ ಅನ್ನುವ ಆಸೆ ಅಮಿಷಗಳನ್ನೇನೂ ತೋರಿಸಿರಲಿಲ್ಲ. ಇಷ್ಟೇ ಅಲ್ಲ ಗುರು ಗೋವಿಂದ ಸಿಂಗ್ ಮಹಾರಾಜ್ ಸಾಹೇಬ್ ರವರ ಅಳತೆಗೋಲು ಕೂಡ ಉತ್ಕೃಷ್ಟಮಟ್ಟದ್ದಾಗಿತ್ತು. ಅವರು ತಲೆ ದಂಡಕ್ಕೆ ಆಹ್ವಾನ ನೀಡಿದ್ದರು. ಬನ್ನಿ, ಒಂದುವೇಳೆ ನಿಮ್ಮ ತಲೆಯನ್ನು ಕತ್ತರಿಸಿದರೆ ಆ ತ್ಯಾಗದ ಆಧಾರದ ಮೇಲೆ ಮುಂದೆ ಹೇಗೆ ಮುಂದುವರಿಯುವುದೆನ್ನುವುದನ್ನು ತೀರ್ಮಾನಿಸಲಾಗುವುದು. ತಂತಮ್ಮ ತಲೆದಂಡ ನೀಡಲು ದೇಶದ ಬೇರೆ-ಬೇರೆ ಮೂಲೆಗಳಿಂದ ಜನರು ಮುಂದೆ ಬಂದರು, ಅವರಲ್ಲೊಬ್ಬ ಗುಜರಾತಿನ ದ್ವಾರಕಾದ ದರ್ಜಿಯ ಮಗನೂ ಮುಂದೆ ಬಂದ, ಹಾಗೂ ಪಂಚ-ಪ್ಯಾರೆ ಯಲ್ಲಿ ಅವನಿಗೂ ಸ್ಥಾನ ದೊರೆಯಿತು. ಗುರು ಗೋವಿಂದ ಸಿಂಗ್ ಮಹಾರಾಜ್ ಸಾಹೇಬ್ ರವರು ಅವನನ್ನು ಆಲಂಗಿಸಿಕೊಂಡರು. ಪಂಚ-ಪ್ಯಾರೆಯ ನಿರ್ಮಾಣವನ್ನೇನೋ ಮಾಡಿದ್ದರು ಗುರು ಗೋವಿಂದ ಸಿಂಗ್ ಮಹಾರಾಜ್ ಸಾಹೇಬ್. ಅವರಿಗೆ ಅವರು ಅದನ್ನು ಸ್ಥಾಪಿಸಿದ ದಿಕ್ಕಿನಲ್ಲೇ ಈ ಪರಂಪರೆ ಹಿಗೇ ನಡೆಯಬೇಕು ಎಂಬ ಆಸೆಯಿತ್ತು. ಆದರೆ ಅವರ ತ್ಯಾಗ, ಅವರ ಎತ್ತರ ಎಷ್ಟಿತ್ತೆಂದರೆ ಗುರು ಗೋವಿಂದ ಸಿಂಗ್ ಮಹಾರಾಜ್ ಸಾಹೇಬ್ ರವರೇ ಸ್ವತ : ತಮ್ಮನ್ನೂ ಸಹ ಆ ಬಂಧನದೊಳಗೆ ಕಟ್ಟಿಕೊಂಡುಬಿಟ್ಟಿದ್ದರು. ಇವರು ಪಂಚ-ಪ್ಯಾರೆಗಳು, ಈ ಖಾಲ್ಸಾ ಪರಂಪರೆ
ಏನು ರಚನೆಯಾಗಿದೆ ; ಇವರಿಗೆ ಏನು ಮಾಡಬೇಕು, ಏನು ಮಾಡಬಾರದು, ಯಾವಾಗ ಮಾಡಬೇಕು ಇತ್ಯಾದಿ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ , ಇವರು ತೆಗೆದುಕೊಳ್ಳುವ ನಿರ್ಣಯಗಳಿಗೆ ನಾನೂ ಬದ್ಧ, ನಾನು ಅವರುಗಳು ಹೇಳಿದಂತೆ ಕೇಳುತ್ತೇನೆ ಎಂದಿದ್ದರು.

ಗುರು ಗೋವಿಂದ ಸಿಂಗ್ ಮಹಾರಾಜ್ ಸಾಹೇಬ್ ರವರು ಮಾಡಿದ ತ್ಯಾಗದ ಕಲ್ಪನೆಯೂ ಕೂಡ ಯಾರಿಂದಲೂ ಸಾಧ್ಯವಿಲ್ಲ ಎಂದು ನನಗನ್ನಿಸುತ್ತದೆ. ಯಾವ ವ್ಯವಸ್ಥೆಯನ್ನು ಅವರು ಸ್ವತ: ನಿರ್ಮಾಣಮಾಡಿದರೋ, ಯಾವ ವ್ಯವಸ್ಥೆಯು ಇವರ ಪ್ರೇರಣೆಯಿಂದ ಎದ್ದು ನಿಂತಿತೋ, ಆ ವ್ಯವಸ್ಥೆಯನ್ನು ಅವರು ತಲೆಯಮೇಲಿಟ್ಟುಕೊಂಡರು, ತಮ್ಮನ್ನು ಆ ವ್ಯವಸ್ಥೆಯ ಭಾಗವನ್ನಾಗಿ ಮಾಡಿಕೊಂಡು ಸಮರ್ಪಿಸಿಕೊಂಡರು, ಇಂದು ಮುನ್ನೂರೈವತ್ತು (350) ವರ್ಷಗಳ ಬೆಳಕಿನ ಹಬ್ಬವನ್ನು ನಾವು ಆಚರಿಸಲು ಸಾಧ್ಯವಾಗುತ್ತಿರುವುದು ಆ ತ್ಯಾಗ ಹಾಗೂ ಬಲಿದಾನದ ಕಾರಣದಿಂದಲೇ. ಸಿಖ್ ಸಮುದಾಯಕ್ಕೆ ಸಂಬಂಧಿಸಿದ ವ್ಯಕ್ತಿ ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಇವರಿಗೆ ತಲೆ ಬಾಗುತ್ತಾನೆ. ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಸಾಹೇಬ್ ರವರು ಆರಂಭಿಸಿದ ಪರಂಪರೆಯನ್ನು ಶಿರಸಾ ಪಾಲಿಸುತ್ತಾನೆ.

ಇಂತಹ ಮಹಾನ್ ಪ್ರೇರಣೆಯಾದ ಗುರು ಗೋವಿಂದ ಸಿಂಗ್ ಮಹಾರಾಜ್ ರವರನ್ನು ನೆನಪಿಸಿಕೊಳ್ಳುವಾಗ ಕೆಲವು ಇತಿಹಾಸಕಾರರು ಶೌರ್ಯ ಮತ್ತು ವೀರತೆಯ ಭಾವನೆಯನ್ನು ಪ್ರಕಟಿಸಿದ್ದಾರೆ. ಆದರೆ ಅವರಲ್ಲಿ ವೀರತೆಯೊಡನೆ ಧೀರತೆಯೂ ಇತ್ತು, ಧೈರ್ಯವಿತ್ತು, ಅದು ಅದ್ಭುತವಾಗಿತ್ತು. ಅವರು ಹೋರಾಟ ಮಾಡುತ್ತಿದ್ದರು . ಆದರೆ ತ್ಯಾಗದ ಪರಾಕಾಷ್ಠತೆ ಹಿಂದೆಂದೂ ಇಲ್ಲದಷ್ಚು ಅಭೂತಪೂರ್ವವಾಗಿತ್ತು. ಅವರು ಸಮಾಜದ ಕೆಟ್ಟತನಗಳ ವಿರುದ್ಧ ಹೋರಾಡುತ್ತಿದ್ದರು. ಮೇಲು-ಕೀಳು, ಭೇದ-ಭಾವ, ಜಾತಿವಾದದ ವಿಷದೊಂದಿಗೆ ಹೋರಾಡಿ ಸಮಾಜವನ್ನು ಒಂದೇ ಸೂತ್ರದಲ್ಲಿ ಕಟ್ಟುವುದು, ಎಲ್ಲರಲ್ಲಿ ಸಮಾನತೆ ಮೂಡಿಸುವುದು, ಎಲ್ಲೂ ಮೇಲು-ಕೀಳೆನ್ನುವ ಭಾವನೆ ಇಲ್ಲದಿರಲಿ ಎಂಬುದಕ್ಕಾಗಿ ಜೀವನ ಪರ್ಯಂತ ತಮ್ಮವರ ನಡುವೆ ಬಲವಂತಪೂರ್ವಕವಾಗಿ ತಮ್ಮ ಧೋರಣೆಯನ್ನೊ ಪ್ಪಿಕೊಳ್ಳುವಂತೆ ಮಾಡುವುದರಲ್ಲಿ ತಮ್ಮ ಜೀವನ ಸವೆಸಿದರು.

ಸಮಾಜ ಸುಧಾರಕನಾಗಲೀ,ವೀರತೆಯ ಪ್ರೇರಣೆಯಾಗಲೀ, ತ್ಯಾಗ ಮತ್ತು ಬಲಿದಾನದ ತಪೋಭೂಮಿಯಲ್ಲಿ ತನ್ನನ್ನು ತಾನು ಸುಟ್ಟುಕೊಳ್ಳಬಲ್ಲ ವ್ಯಕ್ತಿತ್ವ ಇದ್ದ ಮೇಲೆ, ಸರ್ವಗುಣಸಂಪನ್ನ ಗುರು ಗೋವಿಂದ ಸಿಂಗ್ ಮಹಾರಾಜ್ ಸಾಹೇಬ್ ರವರ ಜೀವನ ಭವಿಷ್ಯದ ಪೀಳಿಗೆಗೆ / ಮುಂದಿನ ಜನಾಂಗಕ್ಕೆ ಪ್ರೇರೇಪಣೆ ನೀಡುತ್ತಿರುತ್ತದೆ. ನಾವೂ ಸಹ ನಾವೆಲ್ಲರೂ ಒಂದೇ ಎಂಬ ಸಮಭಾವದೊಡನೆ ಸಮಾಜದ ಪ್ರತಿ ವರ್ಗವೂ ಒಂದೇಸಮ, ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಯಾರೂ ನಮ್ಮವರಲ್ಲ , ಅನ್ಯರೂ ಯಾರು ಅಲ್ಲ, ಈ ಮಹಾಮಂತ್ರಗಳನ್ನು ಇಟ್ಟುಕೊಂಡು ನಾವೂ ದೇಶವಿದೇಶಗಳಲ್ಲಿ ಆ ಆದರ್ಶಗಳನ್ನು ಸ್ಥಾಪಿಸೋಣ.

ದೇಶದ ಐಕ್ಯತೆ ಬಲಿಷ್ಠವಾಗಲಿದೆ. ದೇಶದ ಶಕ್ತಿ ಹೆಚ್ಚಾಗಲಿದೆ.ದೇಶದ ಪ್ರಗತಿ ಮೇಲೇರಲಿದೆ. ನಮಗೆ ವೀರತೆಯೂ ಬೇಕು, ಧೀರತೆಯೂ ಬೇಕು, ಶೌರ್ಯವೂ ಬೇಕು,ಪರಾಕ್ರಮವೂ ಬೇಕು; ನಮಗೆ ತ್ಯಾಗ ಹಾಗೂ ತಪಸ್ಸೂ ಬೇಕು. ಈ ಸಂತುಲಿತ ಸಮಾಜ ವ್ಯವಸ್ಥೆ, ಈ ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಸಾಹೇಬ್ ರವರ ಪ್ರತಿ ಮಾತಿನಲ್ಲಿ, ಜೀವನದ ಪ್ರತಿ ಕೆಲಸದಲ್ಲಿ ನಮಗೆ ಪ್ರೇರಣೆ ನೀಡಲಿದೆ. ಈ ಮಹಾನ್ ಪವಿತ್ರ ಆತ್ಮದ ಚರಣಕಮಲದಲ್ಲಿ ತಲೆ ಬಾಗಿ ನಮಿಸುವ ಸೌಭಾಗ್ಯ ನಮ್ಮದಾಗಿದೆ.

ಇಂದು ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಸಾಹೇಬ್ ರವರ ಸ್ಥಾನಕ್ಕೆ ಬಂದು ಗುರು ಗ್ರಂಥಸಾಹಿಬಕ್ಕೆ ನಮಿಸುವ ಸೌಭಾಗ್ಯ ನನಗೆ ದೊರೆತಿದೆ. ಇದು ನಮ್ಮೆಲ್ಲರಿಗೂ ಪ್ರೇರಣೆ ನೀಡುತ್ತಿರುತ್ತದೆ ಎಂಬ ನಂಬಿಕೆ ನನಗಿದೆ. ಇಲ್ಲಿ ನಿತೀಶ್ ಜೀ ಯವರು ಒಂದು ಮಹತ್ವಪೂರ್ಣ ಮಾತನ್ನು ಉದ್ಧರಿಸಿದರು. ಮಹಾತ್ಮ ಗಾಂಧಿಯವರ ಚಂಪಾರಣದ ಸತ್ಯಾಗ್ರಹದ ಶತಾಬ್ದಿಯ ಬಗ್ಗೆ ಮಾತಾಡಿದರು,ನಾನು ನಿತೀಶ್ ರವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಸಮಾಜ ಪರಿವರ್ತನೆಯ ಕೆಲಸ ಬಹಳ ಕಠಿಣವಾದುದು. ಅದಕ್ಕೆ ಕೈ ಹಾಕುವ ಕೆಲಸವೂ ಕಷ್ಟಕರವಾದದ್ದೇ. ಆದರೆ ಹೀಗಿದ್ದಾಗಲೂ ಅವರ ನಶಾ-ಮುಕ್ತಿಯ ಅಭಿಯಾನ, ಭವಿಷ್ಯದ ಪೀಳಿಗೆಯನ್ನು ಕಾಪಾಡಲು ಅವರು ಮಾಡಿರುವ ಪ್ರತಿಜ್ಞೆ ಗೆ ನನ್ನ ಹೃದಯಪೂರ್ವಕ ಹಾರೈಕೆಗಳು,ಹಾಗೂ ಶುಭಾಶಯಗಳು.

ನಾನೂ ಕೂಡ ಬಿಹಾರದ ಜನರಲ್ಲಿ, ಎಲ್ಲ ರಾಜಕೀಯ ಪಕ್ಷಗಳಲ್ಲಿ, ಎಲ್ಲ ಸಾಮಾಜಿಕ ಜೀವನದಲ್ಲಿ ಕೆಲಸ ಮಾಡುವವರಲ್ಲಿ ಬೇಡಿಕೊಳ್ಳುತ್ತೇನೆ, ಈ ಕೆಲಸ ಕೇವಲ ಸರ್ಕಾರದ ಕೆಲಸವಲ್ಲ, ಈ ಕೆಲಸ ಕೇವಲ ನಿತೀಶ್ ಕುಮಾರರ ಕೆಲಸವಲ್ಲ , ಈ ಕೆಲಸ ಯಾವುದೇ ರಾಜಕೀಯ ಪಕ್ಷದ ಕೆಲಸವಲ್ಲ; ಇದು ಜನರ ಕೆಲಸ. ಇದನ್ನು ಸಫಲಗೊಳಿಸಿದರೆ ಬಿಹಾರವು ದೇಶಕ್ಕೇ ಪ್ರೇರೇಪಣೆಯಾಗುತ್ತದೆ, ಆದರ್ಶವಾಗುತ್ತದೆ. ಯಾವ ಪ್ರತಿಜ್ಞೆಯನ್ನು ನಿತೀಶ್ ಕುಮಾರರು ತೆಗೆದುಕೊಂಡಿದ್ದಾರೋ ಅವರು ಅದರಲ್ಲಿ ಜಯ ಪಡೆದೇ ತೀರುತ್ತಾರೆ. ನಮ್ಮ ಮುಂದಿನ ಪೀಳಿಗೆಯನ್ನು ಕಾಪಾಡುವ ಅವರ ಈ ಕಾರ್ಯಕ್ಕೆ ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಸಾಹೇಬ್ ರವರ ಈ ಬೆಳಕಿನ ಹಬ್ಬದ ಆಶೀರ್ವಾದ ದೊರೆಯಲಿದೆ., ಈ ಕಾರ್ಯಕ್ಕೆ ಒಂದು ವಿನೂತನ ಶಕ್ತಿ ದೊರೆಯಲಿದೆ. ಬಿಹಾರವು ದೇಶದ ಒಂದು ಅಮೂಲ್ಯ ಶಕ್ತಿಯಾಗಲಿದೆಯೆಂಬ ನಂಬಿಕೆ ನನಗಿದೆ. ದೇಶವನ್ನು ಮಂಚೂಣಿಯಲ್ಲಿರಿಸಲು ಬಿಹಾರ ಬಲು ದೊಡ್ಡ ಕೊಡುಗೆಯನ್ನು ನೀಡಲಿದೆ. ಯಾಕೆಂದರೆ ಇದೇ ಬಿಹಾರದ ಮಣ್ಣು ನಮಗೆ ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಸಾಹೇಬ್ ರವರಂತಹ ಅನೇಕ ಮಹಾಪುರುಷರನ್ನು ನೀಡಿದೆ. ರಾಜೇಂದ್ರ ಬಾಬೂರವರನ್ನು ನೆನಪಿಸಿಕೊಳ್ಳಿ, ಚಂಪಾರಣ ಸತ್ಯಾಗ್ರಹ,. ಸತ್ಯಾಗ್ರಹದ ಕಲ್ಪನೆಯ ಭೂಮಿ ಇದು. ಜಯಪ್ರಕಾಶ್ ನಾರಾಯಣ್ , ಕರ್ಪೂರೀ ಠಾಕೂರ್ ರಂತಹ ಅಸಂಖ್ಯಾತ ರತ್ನಗಳನ್ನು, ಎಣಿಸಲಾರದಷ್ಟು ಮಾನವ ರತ್ನಗಳನ್ನು ತಾಯಿ ಭಾರತಿಯ ಸೇವೆಗೆ ನೀಡಿರುವ ಭೂಮಿಯಿದು. ಇಂತಹಾ ಭೂಮಿಯಲ್ಲಿನಾವು ಬೆಳಕಿನ ಹಬ್ಬವನ್ನು ಆಚರಿಸೋಣ.

ಇವರು ಯಾವ ಪ್ರೇರಣೆಯನ್ನು ನೀಡಿದ್ದರೋ ಅದು ನಮಗೆಲ್ಲರಿಗೂ ಒಂದು ಹೊಸ ಆದರ್ಶ, ಹೊಸ ಹುರುಪು,ಹೊಸ ಉತ್ಸಾಹವನ್ನು ನೀಡುತ್ತದೆ. ಈ ಅವಕಾಶವನ್ನು, ಜ್ಞಾನವೆಂಬ ಬೆಳಕನ್ನು ಜೀವನಪೂರ್ತಿ ನಮ್ಮೂಳಗೆ ಹಿಡಿದಿಟ್ಟುಕೊಳ್ಳುವೆವೆಂಬ ಸಂಕಲ್ಪದೊಡನೆ ಈ ಬೆಳಕಿನ ಹಬ್ಬವನ್ನು ಆಚರಿಸೋಣ.

ವಿಶ್ವದೆಲ್ಲೆಡೆ ಭಾರತ ಸರ್ಕಾರದ ವಿವಿಧ ಸಂಘಟನೆಗಳ ಮೂಲಕ, ರಾಯಭಾರ ಕಛೇರಿಗಳ ಮೂಲಕ ಈ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಹರಡಿರುವ ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಸಾಹೇಬ್ ರವರನ್ನು ಸ್ಮರಿಸುವವರೆಲ್ಲರಿಗೂ ನಾನು ಅಂತ:ಕರಣಪೂರ್ವಕವಾಗಿ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ. ಅವರಿಗಲ್ಲಾ ತುಂಬಾ ತುಂಬಾ ಅಭಿನಂದನೆಗಳು. ಭಾರತ ಸರ್ಕಾರವು ಈ ಬೆಳಕಿನ ಹಬ್ಬವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಹಿಂದೂಸ್ಥಾನದೊಳಗೂ, ಹಿಂದೂಸ್ಥಾನದ ಹೊರಗೂ ಆಚರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ, ಇದಕ್ಕಾಗಿ ಸಮಿತಿಗಳನ್ನು ಮಾಡಿದೆ.

ಈ ಕೆಲಸಕ್ಕಾಗಿ ನೂರು ಕೋಟಿ ರೂಪಾಯಿಗಳನ್ನು ವೆಚ್ಚಮಾಡಲಾಗುತ್ತಿದೆ. ರೈಲ್ವೆಯು ಈ ಬೆಳಕಿನ ಹಬ್ಬಕ್ಕಾಗಿ ಪ್ರತ್ಯೇಕವಾಗಿ 40 ಕೋಟಿ ರೂಪಾಯಿ ಖರ್ಚು ಮಾಡುತ್ತಾ ಈ ಕೆಲಸಕ್ಕಾಗಿ ಶಾಶ್ವತ ವ್ಯವಸ್ಥೆಯನ್ನು ಮಾಡಿದೆ. ಭಾರತ ಸರ್ಕಾರದ ಸಾಂಸ್ಕೃತಿಕ ವಿಭಾಗವೂ ಸಹ ಸುಮಾರು 40 ಕೋಟಿ ಖರ್ಚುಮಾಡಿ ಅನೇಕ ವಿದ್ವತ್ ಯೋಜನೆಗಳನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ನಾವೂ ಕೆಲಸ ಮಾಡುತ್ತಿದ್ದೇವೆ ಹಾಗೂ ಇನ್ನೂ ಮುಂದೆಯೂ ಈ ಕೆಲಸವನ್ನು ಮುಂದುವರೆಸುತ್ತಲೇ ಇರುತ್ತೇವೆ. ಈ ಪರಮ ಪಾವನ ಸಂದರ್ಭದಲ್ಲಿ ನನಗೆ ಇಲ್ಲಿ ಬಂದು ಭಾಗವಹಿಸಲು ದೊರೆತ ಅವಕಾಶಕ್ಕಾಗಿ , ಈ ಸೌಭಾಗ್ಯಕ್ಕಾಗಿ ನನ್ನ ಜೀವನ ಧನ್ಯವಾಯಿತೆಂದುಕೊಳ್ಳುತ್ತೇನೆ.

ತಮಗೆಲ್ಲರಿಗೂ ನನ್ನ ನಮಸ್ಕಾರಗಳು.

ಜೋ ಬೋಲೇ ಸೋ ನಿಹಾಲ್, ಸತ್ ಶ್ರೀ ಅಕಾಲ್.

***