Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 28.06.2026 ರಂದು ಮಾಡಿದ ‘ಮನ್ ಕಿ ಬಾತ್’ – 135ನೇ ಸಂಚಿಕೆಯ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ!

‘ಮನದ ಮಾತು’ ಮೂಲಕ ನಿಮ್ಮೆಲ್ಲರೊಂದಿಗೆ ಮತ್ತೆ ಮಾತನಾಡಲು ಅವಕಾಶ ಸಿಕ್ಕಿರುವುದು ನನಗೆ ಅಪಾರ ಸಂತೋಷವಾಗುತ್ತಿದೆ. 2026 ನೇ ವರ್ಷದ ಅರ್ಧ ಭಾಗವು ಮುಗಿಯಲಿದೆ. ಈ ಆರು ತಿಂಗಳುಗಳಲ್ಲಿ, ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ನಾಗರಿಕರ ಹಲವಾರು ಸಾಧನೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಜೂನ್‌ನಲ್ಲಿಯೂ ಸಹ, ಪ್ರತಿಯೊಬ್ಬ ನಾಗರಿಕನು ಹೆಮ್ಮೆ ಪಡುವಂತಹ ಸಾಧನೆಗಳನ್ನು ರಾಷ್ಟ್ರವು ಸಾಧಿಸಿದೆ. ಈ ಯಶಸ್ಸು ದೇಶದ ಭದ್ರತೆ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದ್ದಾಗಿವೆ. ಇತ್ತೀಚೆಗೆ ನನಗೆ ಕೋಲ್ಕತ್ತಾದಲ್ಲಿ ನೌಕಾಪಡೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಅಲ್ಲಿ, ಐಎನ್ಎಸ್ ದೂನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರಯಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ವಿನ್ಯಾಸದಿಂದ ಹಿಡಿದು ಈ ಹಡಗುಗಳ ತಯಾರಿಕೆಯವರೆಗೆ ಎಲ್ಲವೂ ಸ್ವದೇಶದಲ್ಲೇ ಸಿದ್ಧಪಡಿಸಲಾಗಿದೆ.

ಸ್ನೇಹಿತರೇ,

ಜೂನ್ ತಿಂಗಳಲ್ಲೇ ವಿಮಾನಯಾನ ಕ್ಷೇತ್ರದಲ್ಲಿಯೂ ದೇಶವು ಒಂದು ಮಹತ್ವದ ಸಾಧನೆಯನ್ನು ದಾಖಲಿಸಿದೆ. ಸಿ-295 ವಿಮಾನವು ಭಾರತದಲ್ಲೇ ನಿರ್ಮಾಣಗೊಂಡಿದ್ದು, ತನ್ನ ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಲ್ಲದೆ ಇಂತಹ 40 ಸಿ-295 ವಿಮಾನಗಳನ್ನು ಭಾರತದಲ್ಲೇ ನಿರ್ಮಿಸಲಾಗುತ್ತಿದೆ. ಇದರಿಂದ MSME ಹಾಗೂ ಏರೋಸ್ಪೇಸ್ ಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆಯುತ್ತಿದೆ. ಜೊತೆಗೆ, ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಮತ್ತು ಸ್ವಾವಲಂಬಿ ಭಾರತದ ಸಂಕಲ್ಪವೂ ಮತ್ತಷ್ಟು ಬಲಗೊಳ್ಳುತ್ತಿದೆ. ಇದೇ ತಿಂಗಳಲ್ಲಿ, DRDO ಸ್ಥಳೀಯವಾಗಿ ‘Long Range Land Attack Cruise Missile’ ನ ಯಶಸ್ವಿ ಪರೀಕ್ಷೆಯನ್ನೂ ನಡೆಸಿದೆ. ಈ ಕ್ಷಿಪಣಿಯನ್ನು DRDO ಪ್ರಯೋಗಾಲಯಗಳು ಮತ್ತು ಭಾರತೀಯ ಕೈಗಾರಿಕಾ ಪಾಲುದಾರರು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದಾರೆ.ಅಂದರೆ ಇಂದು ಸಮುದ್ರದಿಂದ ಹಿಡಿದು ಆಕಾಶದವರೆಗೆ ನಮ್ಮ ಭಾರತ ಅಧಿಕ ಸುರಕ್ಷಿತ ಮತ್ತು ಆತ್ಮನಿರ್ಭರವಾಗುತ್ತಿದೆ.

ಸ್ನೇಹಿತರೇ,

ಜೂನ್ ತಿಂಗಳಲ್ಲಿ ಭಾರತದ ಪ್ರಯತ್ನದಿಂದ ಇಡೀ ವಿಶ್ವವನ್ನು ಒಗ್ಗೂಡಿಸಿದ ಮತ್ತೊಂದು ಮಹತ್ವದ ಕಾರ್ಯಕ್ರಮವೂ ನಡೆಯಿತು. ಅದೇ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’. ಈ ಬಾರಿ ವಿಶ್ವದ 2,500ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ನಮ್ಮ ದೇಶದಲ್ಲಿಯೂ ಕೋಟ್ಯಂತರ ಜನರು ವಿವಿಧ ಸ್ಥಳಗಳಲ್ಲಿ ನಡೆದ ಯೋಗ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಇದೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ಆಯೋಜಿಸಲಾದ ‘ವಿಶ್ವ ಯೋಗಾಸನ ಚಾಂಪಿಯನ್‌ಶಿಪ್’ ಕೂಡ ವ್ಯಾಪಕ ಗಮನ ಸೆಳೆಯಿತು. ಈ ಸ್ಪರ್ಧೆಯಲ್ಲಿ ಭಾರತ ಒಟ್ಟು 102 ಚಿನ್ನದ ಪದಕಗಳೂ ಸೇರಿದಂತೆ 114 ಪದಕಗಳನ್ನು ತನ್ನದಾಗಿಸಿಕೊಂಡಿದೆ.  ಈ ಚಾಂಪಿಯನ್‌ಶಿಪ್‌ನ ಪದಕ ಪಟ್ಟಿಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಈ ಅದ್ಭುತ ಸಾಧನೆ ಮಾಡಿದ ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಯಾವುದೇ ರಾಷ್ಟ್ರದ ನಿಜವಾದ ಶಕ್ತಿ ಅದರ ಜನತೆಯಲ್ಲಡಗಿದೆ. ಒಂದು ದೇಶದ ಜನರು ಒಗ್ಗಟ್ಟಿನಿಂದ ಯಾವುದಾದರೂ ಸಂಕಲ್ಪಗೈಯ್ದಾಗ, ಅವರನ್ನು ತಮ್ಮ ಗುರಿಯಿಂದ ವಿಚಲಿತರನ್ನಾಗಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ. ರಾಷ್ಟ್ರ ನಿರ್ಮಾಣದಲ್ಲಿ ಜನರ ಸಹಭಾಗಿತ್ವದ ಶಕ್ತಿಯೇ ಭಾರತದ ಅತ್ಯಂತ ಅಮೂಲ್ಯ ಸಂಪತ್ತು. ಈ ಜನರ ಸಹಭಾಗಿತ್ವದ ಸಾಮರ್ಥ್ಯ ಎಂಥದ್ದು ಎಂಬುದು ಪದೇ ಪದೇ ನಮಗೆ ಅನುಭವಕ್ಕೆ ಬರುತ್ತಿದೆ.

ಸ್ನೇಹಿತರೆ,

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾನು ದೇಶದ ಜನತೆಗೆ ಕೆಲ ಮನವಿಗಳನ್ನು ಮಾಡಿದ್ದೆ. ಸಾಧ್ಯವಾದಷ್ಟು ಸ್ವಲ್ಪ ಕಾಲದದವರೆಗೆ ಚಿನ್ನ ಖರೀದಿಸದಿರುವಂತೆ ಕೇಳಿಕೊಂಡಿದ್ದೆ. ಹಾಗೆಯೇ, ವಿದೇಶ ಪ್ರವಾಸಗಳಿಂದ ದೂರವಿರುವಂತೆ ವಿನಂತಿಸಿದ್ದೆ,  ಕಾರ್ ಪೂಲಿಂಗ್‌ಗೆ ಮುಂದಾಗುವಂತೆ ಆಗ್ರಹಿಸಿದ್ದೆ ಮತ್ತು ರೈತರಿಗೆ ರಾಸಾಯನಿಕ ಮುಕ್ತ ಕೃಷಿಯನ್ನು ಅಳವಡಿಸಿಕೊಳ್ಳಲು, ಭೂಮಿಯ ಫಲವತ್ತತೆಯನ್ನು ಕಾಪಾಡಲು ಹಾಗೂ ಸಾಧ್ಯವಾದಷ್ಟು ನೈಸರ್ಗಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಮನವಿ ಮಾಡಿದ್ದೆ. ಸ್ನೇಹಿತರೆ, ನನ್ನ ಈ ಮನವಿಗೆ ದೇಶದ ಪ್ರತಿಯೊಬ್ಬ ನಾಗರಿಕರೂ ಬೆಂಬಲಿಸುವುದು ಮಾತ್ರವಲ್ಲ, ಅವುಗಳನ್ನು ಅನುಷ್ಠಾನಗೊಳಿಸಲು ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡುತ್ತಿರುವುದಕ್ಕಾಗಿ ನಾನು ಅನಂತ ಕೃತಜ್ಞತೆ ಸಲ್ಲಿಸುತ್ತೇನೆ. ಹಲವಾರು ಕುಟುಂಬಗಳು ತಮ್ಮ ಅನುಭವಗಳನ್ನು ಸಂದೇಶಗಳ ಮೂಲಕ ನನ್ನೊಂದಿಗೆ ಹಂಚಿಕೊಂಡಿವೆ. ಈ ಬಾರಿ ಮನೆಯ ಮದುವೆ ಸಮಾರಂಭಗಳಿಗೆ ಚಿನ್ನವನ್ನು ಖರೀದಿಸದಿರುವಂತೆ ಅನೇಕ ಕುಟುಂಬಗಳು ನಿರ್ಧರಿಸಿವೆ. ಅಗತ್ಯವಿದ್ದಲ್ಲಿ, ಈಗಾಗಲೇ ಇರುವ ಹಳೆಯ ಚಿನ್ನವನ್ನು ಮರುಬಳಕೆ ಮಾಡಿ ಹೊಸ ಆಭರಣಗಳನ್ನು ತಯಾರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದೇ ರೀತಿ, ಈ ಬಾರಿ ತಮ್ಮ ವಿದೇಶ ಪ್ರವಾಸವನ್ನು ಹೇಗೆ ಮುಂದೂಡಲಾಯಿತು ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಸ್ನೇಹಿತರೆ,

car pooling ಗೆ ಸಂಬಂಧಿಸಿದಂತೆಯೂ ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪ್ರತಿದಿನ ಒಂದೇ ದಿಕ್ಕಿನಲ್ಲಿ ತಮ್ಮ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಈಗ ಒಗ್ಗೂಡಿ ಪ್ರಯಾಣಿಸಲಾರಂಭಿಸಿದ್ದಾರೆ. ಅದೇ ರೀತಿ, ಸಾಧ್ಯವಾದಷ್ಟು ಜನರು ಹೆಚ್ಚು  ಬಸ್ ಮತ್ತು ಮೆಟ್ರೋ ಸೇವೆಗಳನ್ನು ಬಳಸುತ್ತಿದ್ದಾರೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್‌ನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದೇ ರೀತಿ, ದೇಶದ ವಿವಿಧ ಭಾಗಗಳಿಂದ ನೈಸರ್ಗಿಕ ಗೊಬ್ಬರಗಳ ಬಳಕೆ ಹೆಚ್ಚುತ್ತಿರುವ ವರದಿಗಳೂ ಕೇಳಿ ಬರುತ್ತಿವೆ. ಸ್ನೇಹಿತರೆ, ಈ ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ಸವಾಲನ್ನು ಎದುರಿಸುತ್ತಿರುವುದು ನನಗೆ ಸಂತೋಷದಾಯಕ ವಿಷಯವಾಗಿದೆ. ಜನರ ಸಹಭಾಗಿತ್ವದ ಇದೇ ಶಕ್ತಿಯು ನಮ್ಮನ್ನು ಸಬಲಗೊಳಿಸಲಿದೆ  ಮತ್ತು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನನಗಿದೆ.

ನನ್ನ ಪ್ರಿಯ ದೇಶವಾಸಿಗಳೇ,

ನಮ್ಮ ದೇಶದಲ್ಲಿ ಜನ್ಮದಿನ, ಮದುವೆ ಹಾಗೂ ಇತರ ಕುಟುಂಬದ ಕಾರ್ಯಕ್ರಮಗಳು ಕೇವಲ ಒಂದು ಕುಟುಂಬದ ಸಂಭ್ರಮವಾಗಿರುವುದಿಲ್ಲ; ಅವು ಇಡೀ ಸಮಾಜದ ಸಂಭ್ರಮವಾಗಿರುತ್ತವೆ. ಪ್ರತಿಯೊಂದು ಕುಟುಂಬವೂ ತನ್ನ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ಈ ಸಂದರ್ಭದಲ್ಲಿ ಅತಿಥಿಗಳಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ. ಸ್ನೇಹಿತರೆ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಒಂದು ಕುಟುಂಬವು ತಮ್ಮ ಸಂತೋಷವನ್ನು ಹಂಚಿಕೊಳ್ಳಲು ಕೈಗೊಂಡಿರುವ ಒಂದು ವಿಶಿಷ್ಟ ಕಾರ್ಯ ಎಲ್ಲರ ಗಮನ ಸೆಳೆದಿದೆ. ನಾಂದೇಡ್‌ನ ಬಹಾದುರ್‌ಪುರಾ ಗ್ರಾಮದಲ್ಲಿ ವಾಸಿಸುವ ಪೇಠ್ಕರ್ ಕುಟುಂಬ ಸಂತೋಷವನ್ನು ಹಂಚಿಕೊಳ್ಳುವುದೇ ಆದರೆ, ಅದು ಸಂಕಷ್ಟದ ಸಮಯದಲ್ಲಿ ಮತ್ತೊಂದು ಕುಟುಂಬಕ್ಕೆ ನೆರವಾಗುವಂತಹದ್ದಾಗಿರಬೇಕು ಎಂದು ಯೋಚಿಸಿತು. ಅದರಂತೆ, ತಮ್ಮ ಮನೆಯ ಮದುವೆ ಸಮಾರಂಭದ ಸಂದರ್ಭದಲ್ಲಿ, ಈ ಕುಟುಂಬವು ಗ್ರಾಮದ ಸುಮಾರು ಮೂರುವರೆ ಸಾವಿರ ಜನರಿಗೆ ಅಪಘಾತ ವಿಮೆಯ ವ್ಯವಸ್ಥೆ ಮಾಡಿತು. ಪ್ರತಿಯೊಬ್ಬರಿಗೂ ಒಂದು ಲಕ್ಷ ರೂಪಾಯಿಯ ವಿಮಾ ರಕ್ಷಣೆ ಒದಗಿಸಲಾಯಿತು. ಇಂತಹ ಉಪಕ್ರಮದಲ್ಲಿ ಅಡಗಿರುವ ಕಾಳಜಿಯ ಭಾವನೆ ನಿಜಕ್ಕೂ ಮನಮುಟ್ಟುವಂತದ್ದು. ಅಪಘಾತ ಸಂಭವಿಸಿದಾಗ ಅನೇಕ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಕುಟುಂಬವು ಗಮನಿಸಿತ್ತು. ಇಂತಹ ಸಂದರ್ಭಗಳಲ್ಲಿ ಸಣ್ಣದೊಂದು ಸಹಾಯವೂ ದೊಡ್ಡ ಆಸರೆಯಾಗುತ್ತದೆ. 

ಸ್ನೇಹಿತರೆ,

ಸರ್ಕಾರವು ದೇಶದ ಕೋಟ್ಯಂತರ ಕುಟುಂಬಗಳಿಗೆ ಸುರಕ್ಷತೆಯ ಕವಚವನ್ನು ಒದಗಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತಿದೆ. ‘ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ’ ಅಡಿಯಲ್ಲಿ ವರ್ಷಕ್ಕೆ ಕೇವಲ 20 ರೂಪಾಯಿ ಪ್ರೀಮಿಯಂ ಪಾವತಿಸಿದರೆ, 2 ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮಾ ರಕ್ಷಣೆ ದೊರೆಯುತ್ತದೆ. ಇಲ್ಲಿಯವರೆಗೆ 58 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಅವರಲ್ಲಿ ಸುಮಾರು 28 ಕೋಟಿ ಮಂದಿ ನಮ್ಮ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳಿದ್ದಾರೆ. ಈ ಯೋಜನೆಯ ಮೂಲಕ ಅಪಘಾತದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಇದುವರೆಗೆ 3,700 ಕೋಟಿಗೂ ಅಧಿಕ ರೂಪಾಯಿಗಳ ಆರ್ಥಿಕ ನೆರವು ಒದಗಿಸಲಾಗಿದೆ.

ಸ್ನೇಹಿತರೆ,

ಇದೇ ರೀತಿ ‘ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ’ ಕೂಡ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯಡಿ, ವ್ಯಕ್ತಿಯ ಅಕಾಲಿಕ ಮರಣವಾದಲ್ಲಿ, ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ಜೀವ ವಿಮಾ ರಕ್ಷಣೆ ಲಭಿಸುತ್ತದೆ. ಇದರ ವಾರ್ಷಿಕ ಪ್ರೀಮಿಯಂ ಕೇವಲ 436 ರೂಪಾಯಿಗಳು, ಅಂದರೆ ದಿನಕ್ಕೆ ಸರಾಸರಿ ಒಂದೂವರೆ ರೂಪಾಯಿಗಿಂತಲೂ ಕಡಿಮೆ. ಇಲ್ಲಿಯವರೆಗೆ 27 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಇದರಡಿ ದೇಶದ ಸುಮಾರು 11 ಲಕ್ಷ ಕುಟುಂಬಗಳಿಗೆ ಒಟ್ಟು 22 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಆರ್ಥಿಕ ನೆರವು ಲಭಿಸಿದೆ. ಈ ಅಂಕಿಅಂಶಗಳು ನಿಜಕ್ಕೂ ಬಹಳ ದೊಡ್ಡವು. ಆದರೆ, ಈ ಅಂಕಿಅಂಶಗಳ ಹಿಂದೆ ಲಕ್ಷಾಂತರ ಕುಟುಂಬಗಳ ಬದುಕಿನ ನೈಜ ಕಥೆಗಳು ಅಡಗಿವೆ. ಎಲ್ಲೋ ಒಬ್ಬ ತಾಯಿಗೆ ತನ್ನ ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಈ ನೆರವು ಆಸರೆಯಾದರೆ. ಮತ್ತೊಂದೆಡೆ, ಒಬ್ಬ ಪತ್ನಿಗೆ ತನ್ನ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಲು ಆರ್ಥಿಕ ಬೆಂಬಲವಾಗಿದೆ. ಸ್ನೇಹಿತರೆ, ಅದೆಷ್ಟೋ ಬಾರಿ ಅತ್ಯಂತ ದೊಡ್ಡ ಭದ್ರತೆಯ ಆರಂಭ ಅತ್ಯಂತ ಸಣ್ಣ ಮೊತ್ತದಿಂದ ಮತ್ತು ಒಂದು ಸಣ್ಣ ಹೆಜ್ಜೆಯಿಂದಲೇ ಆಗಬಹುದು. ಸಣ್ಣದೊಂದು ನಿರ್ಧಾರವೂ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು. ಆದ್ದರಿಂದ, ನಿಮ್ಮ ಕುಟುಂಬದವರಿಗೆ ತಪ್ಪದೇ ಈ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಎಲ್ಲರಲ್ಲಿ ಮನವಿ ಮಾಡುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ,

‘ಮನದ ಮಾತು’ ಕಾರ್ಯಕ್ರಮದಲ್ಲಿ ಈಗ ಸಾವಿರಾರು ವರ್ಷಗಳಿಂದ ಮಾನವ ಸಮಾಜದಲ್ಲಿ ಬೇರುಬಿಟ್ಟಿರುವ ಒಂದು ವಿಷಯದ ಕುರಿತು ಮಾತನಾಡೋಣ. ಆ ವಿಷಯವೇ ಮೂಢನಂಬಿಕೆ. ಮೂಢನಂಬಿಕೆ ಎನ್ನುವುದು ಅನೇಕ ಬಾರಿ ಕೇವಲ ಒಂದು ತಪ್ಪು ಕಲ್ಪನೆ ಮಾತ್ರ ಆಗಿರದೆ ಅದು ಭಯವನ್ನು ಹುಟ್ಟುಹಾಕುತ್ತದೆ. ಭಯವು ಮನಸ್ಸಿನ ಮೇಲೆ ಹಿಡಿತ ಸಾಧಿಸಿದಾಗ, ಮನುಷ್ಯನು ಸತ್ಯವನ್ನು ನೋಡುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಾನೆ. ಮೂಢನಂಬಿಕೆಯಲ್ಲಿ ಮುಳುಗಿರುವವರು, ತರ್ಕವಿಲ್ಲದೆ, ಸತ್ಯವನ್ನು ಅರಿಯದೆ, ಅನೇಕ ಬಾರಿ ಗಂಭೀರವಾದ ಹಾನಿ ಉಂಟಾಗುವಂತಹ  ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದೇ ಸಮಾಜದಲ್ಲಿ ವಿಜ್ಞಾನ, ಅನುಭವ ಮತ್ತು ತಾರ್ಕಿಕ ಚಿಂತನೆಯ ಆಧಾರದ ಮೇಲೆ ಇಂತಹ ಮೂಢನಂಬಿಕೆಗಳಿಗೆ ಸವಾಲೊಡ್ಡುವವರೂ ಇದ್ದಾರೆ. ಮೂಢನಂಬಿಕೆಯಿಂದ ವಿಶ್ವಾಸದೆಡೆಗೆ ಸಾಗುವ ಈ ಪಯಣ ಸುಲಭವಲ್ಲ. ಇಂದು ಅಂತಹ ಯಶಸ್ವಿ ಪರಿವರ್ತನೆಯ ಒಂದು ಪ್ರೇರಣಾದಾಯಕ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಸ್ನೇಹಿತರೇ,

ಅಸ್ಸಾಂನಲ್ಲಿ ಕಂಡುಬರುವ ಒಂದು ವಿಶಿಷ್ಟ ಪಕ್ಷಿಯಿದೆ. ಆ ಪಕ್ಷಿಯ ಹೆಸರು ಹರ್ಗಿಲಾ. ಹರ್ಗಿಲಾ ಅತ್ಯಂತ ಅಪರೂಪದ ಪಕ್ಷಿಯಾಗಿದ್ದು, ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಅಸ್ಸಾಂನ ಕೆಲವು ಪ್ರದೇಶಗಳಲ್ಲಿ ದೀರ್ಘಕಾಲದವರೆಗೆ ಈ ಪಕ್ಷಿಯನ್ನು ಅಶುಭ ಸಂಕೇತ ಎಂದು ಭಾವಿಸಲಾಗುತ್ತಿತ್ತು. ಜನರು ತಮ್ಮ ಸುತ್ತಮುತ್ತ ಈ ಪಕ್ಷಿ ಕಾಣಿಸಿಕೊಳ್ಳುವುದನ್ನು ಇಷ್ಟಪಡುತ್ತಿರಲಿಲ್ಲ. ಅನೇಕ ಬಾರಿ, ಹರ್ಗಿಲಾ ಪಕ್ಷಿಗಳು ಗೂಡು ಕಟ್ಟಿದ್ದ ಮರಗಳನ್ನು ಕೂಡಾ ಕಡಿದು ಹಾಕಲಾಗುತ್ತಿತ್ತು. ಯೋಚಿಸಿ ಯಾವ ಪಕ್ಷಿ ಪರಿಸರವನ್ನು ಸ್ವಚ್ಛವಾಗಿಡಲು ನೆರವಾಗುವುದೋ, ಅದೇ  ಜನರ ಮೂಢನಂಬಿಕೆ ಮತ್ತು ಭಯಕ್ಕೆ ತುತ್ತಾಗಿತ್ತು. ಇಂತಹ ಸಂದರ್ಭದಲ್ಲಿ, ಜೀವಶಾಸ್ತ್ರಜ್ಞೆ ಪೂರ್ಣಿಮಾ ದೇವಿ ಬರ್ಮನ್ ಈ ಪರಿಸ್ಥಿತಿಯನ್ನು ಗಮನಿಸಿದರು. ಜನರ ಮನಸ್ಸಿನಲ್ಲಿ ಬೇರೂರಿದ್ದ ಈ ತಪ್ಪು ಕಲ್ಪನೆಯನ್ನು ಬದಲಾಯಿಸುವ ಸಂಕಲ್ಪಗೈದರು. ಅವರು ಮಹಿಳೆಯರೊಂದಿಗೆ ಮಾತನಾಡಿದರು. ವೈಜ್ಞಾನಿಕ ಆಧಾರಗಳ ಮೂಲಕ ಜನರಿಗೆ ಹರ್ಗಿಲಾ ಪಕ್ಷಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಕ್ರಮೇಣ ಮಹಿಳೆಯರು ಈ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಆರಂಭಿಸಿದರು. ತದನಂತರ ಒಂದು ದೊಡ್ಡ ಬದಲಾವಣೆ ಆರಂಭವಾಯಿತು. ಒಂದೊಮ್ಮೆ ಅಶುಭವೆಂದು ಭಾವಿಸಲಾಗುತ್ತಿದ್ದ ಅದೇ ಹರ್ಗಿಲಾ ಪಕ್ಷಿ, ಕ್ರಮೇಣ ಗ್ರಾಮಗಳ ಹೆಮ್ಮೆಯ ಪ್ರತೀಕವಾಗಿ ಮಾರ್ಪಟ್ಟಿತು. ಸಾವಿರಾರು ಗ್ರಾಮೀಣ ಮಹಿಳೆಯರು ಹರ್ಗಿಲಾ ಸಂರಕ್ಷಣೆಗೆ ಮುಂದಾದರು. ಇಂದು ಅವರನ್ನು ಹರ್ಗಿಲಾ ಆರ್ಮಿ’ ಎಂದು ಗುರುತಿಸಲಾಗುತ್ತದೆ. ಈ ಮಹಿಳೆಯರು ಸಮಾಜದ ಪ್ರತಿರೋಧವನ್ನು ಎದುರಿಸಿದರು. ಜನರಲ್ಲಿ ಜಾಗೃತಿ ಮೂಡಿಸಲು ಹಗಲಿರುಳು ಶ್ರಮಿಸಿದರು. ಅಂತಿಮವಾಗಿ, ಮೂಢನಂಬಿಕೆಯಿಂದ ಹೊರಬಂದರು. ಸರಿಯಾದ ಮಾಹಿತಿ ಜನರಿಗೆ ತಲುಪಿದರೆ, ವರ್ಷಗಳಿಂದ ಬೇರೂರಿರುವ ನಂಬಿಕೆಗಳೂ ಬದಲಾಗಬಹುದು ಎಂಬುದನ್ನು ಅವರು ತಮ್ಮ ಸಾಬೀತುಪಡಿಸಿದ್ದರು.

ಸ್ನೇಹಿತರೆ,

“ಆಟ ಆಡುವವನು ಸಾಧಿಸುತ್ತಾನೆ.” ಎಂದು ನಾನು ಆಗಾಗ ಹೇಳುತ್ತಲೇ ಇರುತ್ತೇನೆ. ಇಂದು ದೇಶದಲ್ಲಿ ಆಟವಾಡುವುದರ ಜೊತೆಗೆ ತಮ್ಮ ಪ್ರತಿಭೆಯನ್ನು ಬೆಳಕಿಗೆ ತರುತ್ತಿರುವ ಯುವಕರ ಸಂಖ್ಯೆ ವೇಗವಾಗಿ ವೃಧ್ಧಿಸುತ್ತಿದೆ. ಅಂದಿನ ದಿನಗಳಿಗೆ ಹೋಲಿಸಿದಲ್ಲಿ ಈಗ ಬಹಳಷ್ಟು ಯುವಕರು ಕ್ರೀಡೆಯನ್ನೇ ತಮ್ಮ ವೃತ್ತಿಜೀವನವಾಗಿ ಆಯ್ಕೆ ಮಾಡುತ್ತಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ನಡೆಯುತ್ತಿರುವ ಎರಡು ಅತ್ಯಂತ ಆಸಕ್ತಿದಾಯಕ ಪ್ರಯತ್ನಗಳ ಬಗ್ಗೆ ನನಗೆ ಮಾಹಿತಿ ದೊರೆತಿದೆ.  ಮೊದಲ ಪ್ರಯತ್ನ ‘ನಾಗಾಲ್ಯಾಂಡ್ ಬೇಬಿ ಲೀಗ್’. ಈ ಹೆಸರನ್ನು ಕೇಳಿದಾಗ, ಇದು ಪುಟ್ಟ ಮಕ್ಕಳಿಗಾಗಿ ನಡೆಸುವ ಸಾಮಾನ್ಯ ಕ್ರೀಡಾಕೂಟ ಎಂದು ನಿಮಗೆ ಅನಿಸಬಹುದು. ಆದರೆ ಅದು ಹಾಗಲ್ಲ. ಬದಲಾಗಿ 5 ರಿಂದ 12 ವರ್ಷದೊಳಗಿನ ಪುಟ್ಟ ಮಕ್ಕಳಿಗಾಗಿ ಆಯೋಜಿಸಲಾದ ಒಂದು ಅಸಾಧಾರಣ ಮತ್ತು ವಿಶಿಷ್ಟ ಫುಟ್‌ಬಾಲ್ ಪಂದ್ಯಾವಳಿಯಾಗಿದೆ. ಈ ಪುಟಾಣಿಗಳ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ, ಅವರ ವೇಗ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಮತ್ತಷ್ಟು ವೃಧ್ಧಿಸುವ ಉದ್ದೇಶದಿಂದ ಈ ಪಂದ್ಯಾವಳಿ ರೂಪಿಸಲಾಗಿದೆ. ನಾಗಾಲ್ಯಾಂಡ್‌ನ ಹೆಚ್ಚೆಚ್ಚು ಮಕ್ಕಳನ್ನು ಫುಟ್‌ಬಾಲ್ ಕ್ರೀಡೆಗೆ ಆಕರ್ಷಿಸುವ ಉದ್ದೇಶದಿಂದ ಈ ಲೀಗ್ ಆರಂಭವಾಗಿತ್ತು. 5 ರಿಂದ 12 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು ಇದರಲ್ಲಿ ಭಾಗವಹಿಸಬಹುದು. ಈ ಲೀಗ್ ಈಗಾಗಲೇ ತನ್ನ ಮೂರನೇ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕ್ರೀಡಾಕೂಟವು ಮಕ್ಕಳ ಮನಸ್ಸಿನ ಅಪಾರ ಪ್ರಭಾವ ಬೀರಿದೆ.

ಸ್ನೇಹಿತರೆ,

ನಾಗಾಲ್ಯಾಂಡ್‌ನಲ್ಲಿ ಮತ್ತೊಂದು ಅತ್ಯುತ್ತಮ ಉಪಕ್ರಮ ನಡೆಯುತ್ತಿದೆ. ಅದರ ಹೆಸರು ‘ನಾಗಾಲ್ಯಾಂಡ್ ಮಹಿಳಾ ಫುಟ್ಸಲ್ ಲೀಗ್’. ‘ಫುಟ್ಸಲ್’ ಎಂಬುದು ನಿಮ್ಮಲ್ಲಿ ಅನೇಕರಿಗೆ ಹೊಸದಾಗಿರಬಹುದು. ಫುಟ್ಸಲ್ ಅನ್ನು ಒಳಾಂಗಣ ಫುಟ್‌ಬಾಲ್ ಎಂದೂ ಕರೆಯಲಾಗುತ್ತದೆ. ಈ ಆಟದಲ್ಲಿ ಒಂದು ತಂಡದಲ್ಲಿ ಕೇವಲ ಐದು ಆಟಗಾರರು ಮಾತ್ರ ಇರುತ್ತಾರೆ. ಅಲ್ಲದೆ, ಇದರ ಆಟದ ಮೈದಾನವೂ ಸಾಮಾನ್ಯ ಫುಟ್‌ಬಾಲ್ ಮೈದಾನಕ್ಕಿಂತ ಗಾತ್ರದಲ್ಲಿ ಬಹಳ ಚಿಕ್ಕದಾಗಿರುತ್ತದೆ. ಹೀಗಾಗಿ, ಆಟಗಾರರು ಅತ್ಯಂತ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ತಮ್ಮ ತಾಂತ್ರಿಕ ಕೌಶಲ್ಯ ಮತ್ತು ಪ್ರತಿಭೆಯನ್ನು ಅತ್ಯುತ್ತಮ ರೀತಿಯಲ್ಲಿ ಬಳಸಬೇಕಾಗುತ್ತದೆ. ನಾಗಾಲ್ಯಾಂಡ್ ಮಹಿಳಾ ಫುಟ್ಸಲ್ ಲೀಗ್ ನಮ್ಮ ಹೆಣ್ಣುಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತಿದೆ. ಇಂತಹ ಪ್ರೇರಣಾದಾಯಕ ಉಪಕ್ರಮಗಳಿಗೆ ಮುಂದಾದ ನಾಗಾಲ್ಯಾಂಡ್‌ನ ಜನರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂತಹ ಪ್ರಯತ್ನಗಳು ದೇಶದ ಇತರ ಭಾಗಗಳಿಗೂ ಸ್ಫೂರ್ತಿಯಾಗುತ್ತವೆ.

ಸ್ನೇಹಿತರೇ,

ಇದು ತಂತ್ರಜ್ಞಾನದ ಯುಗವಾಗಿದೆ. ಪ್ರತಿ ದಿನವೂ ಹೊಸದೊಂದು ಸಂಶೋಧನೆ ನಡೆಯುತ್ತಿದೆ. ಹೊಸ ಹೊಸ ಕೃತಕ ಬುದ್ಧಿಮತ್ತೆ ಆವಿಷ್ಕಾರಗಳು ಹೊರಹೊಮ್ಮಿ ನಮ್ಮ ಮುಂದೆ ಬರುತ್ತಿವೆ. ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಬಹಳ ಮಹತ್ವದ್ದಾಗಿದೆ – ಜನರ ಸೃಜನಾತ್ಮಕತೆಯನ್ನು ಯಾವ ರೀತಿ ಸಂರಕ್ಷಿಸಬಹುದು? ಹೊಸ ತಂತ್ರಜ್ಞಾನದೊಂದಿಗೆ ಮುಂದೆ ಸಾಗುತ್ತಾ, ನಾವು ನಮ್ಮ ಬೇರುಗಳೊಂದಿಗೆ ಯಾವರೀತಿ ಸಂಪರ್ಕದಲ್ಲಿರಬಹುದು? ಇಂತಹ ಪ್ರಶ್ನೆಗಳಿಗೆ ಉತ್ತರ ಅನ್ವೇಷಿಸಿ ಕಂಡುಕೊಂಡಿದೆ ನಳಂದಾ ವಿಶ್ವವಿದ್ಯಾಲಯ. ಸಾವಿರಾರು ವರ್ಷಗಳಷ್ಟು ಹಳೆಯದಾದ ನಮ್ಮ ನಳಂದಾ ವಿಶ್ವವಿದ್ಯಾಲಯವು ಈಗ ಹೊಸದೊಂದು ರೂಪದಲ್ಲಿ ಭಾರತದಲ್ಲಿ ಭವಿಷ್ಯವನ್ನು ರೂಪಿಸುತ್ತಿದೆ. ಎರಡು ವರ್ಷಗಳ ಕೆಳಗೆ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಲೋಕಾರ್ಪಣೆ ಮಾಡುವ ಅವಕಾಶ ನನಗೆ ದೊರೆತಿತ್ತು. ನಳಂದಾ ವಿಶ್ವವಿದ್ಯಾಲಯವು ಪ್ರಾಚೀನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದೆ. ಚರ್ಚೆ ಎಂದರೆ ಶಾಸ್ತ್ರಗಳ ಆಧಾರದಲ್ಲಿ ನಡೆಯುವ ತರ್ಕಬದ್ಧ ಚರ್ಚೆಯಲ್ಲ, ಕೇವಲ ಒಬ್ಬರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮಾಧ್ಯಮವಲ್ಲ. ಇದು ಚರ್ಚೆ ಮತ್ತು ವಿವೇಚನೆಯ ಶಿಸ್ತುಬದ್ಧ ಪ್ರಕ್ರಿಯೆಯಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯಗಳನ್ನು ತರ್ಕ ಮತ್ತು ಸತ್ಯಗಳೊಂದಿಗೆ ಪ್ರಸ್ತುತಪಡಿಸುವ ಅಗತ್ಯವಿದೆ ಮತ್ತು ನೀವು ಅದರಲ್ಲಿ ಪರಿಣತಿ ಹೊಂದಿರಬೇಕು. ಇತರರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳುವುದನ್ನು ಈ ಪ್ರಕ್ರಿಯೆ ನಮಗೆ ಕಲಿಸುತ್ತದೆ. ನಳಂದ ವಿಶ್ವವಿದ್ಯಾಲಯವು ತನ್ನ ಘಟಿಕೋತ್ಸವದ ಭಾಗವಾಗಿ ಇದನ್ನು ಸೇರಿಸಿಕೊಂಡಿರುವುದು ನನಗೆ ಸಂತೋಷ ತಂದಿದೆ. ಇದರಲ್ಲಿ ಭಾಗವಹಿಸುವ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಇತರ ದೇಶಗಳಿಂದ ಬಂದವರಾಗಿದ್ದಾರೆ. ಪ್ರಾಚೀನ ಸಂಪ್ರದಾಯವನ್ನು ಆಧುನಿಕ ಕಾಲದೊಂದಿಗೆ ಸಂಪರ್ಕಿಸುವ ಈ ಪ್ರಯತ್ನವು ತುಂಬಾ ಶ್ಲಾಘನೀಯ. ಇದಕ್ಕಾಗಿ ನಾನು ನಳಂದ ವಿಶ್ವವಿದ್ಯಾಲಯವನ್ನು ಅಭಿನಂದಿಸುತ್ತೇನೆ. ಇಂತಹ ಉಪಕ್ರಮಗಳನ್ನು ಆರಂಭಿಸುವ ಕುರಿತಂತೆ ಚಿಂತನೆ ನಡೆಸುವುದನ್ನು ಪರಿಗಣಿಸಬೇಕೆಂದು ನಾನು ಇತರ ವಿಶ್ವವಿದ್ಯಾಲಯಗಳಲ್ಲಿ ಮನವಿ ಮಾಡುತ್ತೇನೆ.

ಸ್ನೇಹಿತರೇ,

ಯುವಜನತೆಯನ್ನು ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿಟ್ಟುಕೊಂಡು ಹೊಸ ತಂತ್ರಜ್ಞಾನಗಳಿಗೆ ಸಿದ್ಧಪಡಿಸಲು ಮತ್ತೊಂದು ಉತ್ತಮ ಪ್ರಯತ್ನ ನಡೆಯುತ್ತಿದೆ. ದೆಹಲಿಯಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಲ್ಲಿ ಬಿ.ಟೆಕ್ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ.ಇದು ಆಧುನಿಕ ತಂತ್ರಜ್ಞಾನವನ್ನು ಭಾರತದ ಸಾಂಪ್ರದಾಯಿಕ ಜ್ಞಾನದೊಂದಿಗೆ ಸಂಯೋಜಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.  ಇದರಿಂದ ಭಾರತೀಯ ಭಾಷೆಗಳಿಗಾಗಿ ಹೊಸ ಕೃತಕ ಬುದ್ಧಿಮತ್ತೆ ಸಾಧನಗಳನ್ನು ತಯಾರಿಸುವುದಕ್ಕೆ ನೆರವು ದೊರೆಯುತ್ತದೆ. ನಮ್ಮ ಪುರಾತನ ಗ್ರಂಥಗಳು ಮತ್ತು ಹಸ್ತಪ್ರತಿಗಳ ಡಿಜಿಟಲ್ ಸಂರಕ್ಷಣೆಯ ಕಾರ್ಯಕ್ಕೆ ಕೂಡಾ ಹೊಸ ವೇಗ ದೊರೆಯುತ್ತದೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವನ್ನು ಈ ರೀತಿಯ ಪ್ರಯತ್ನಗಳಿಗಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ಭಾರತೀಯ ಸಂಸ್ಕೃತಿ ವಿಶ್ವದ ಬೇರೆ ಬೇರೆ ಭಾಗಗಳವರೆಗೂ ತಲುಪುತ್ತಿದೆ. ನಮ್ಮ ಹಾಡುಗಳು, ಸಂಗೀತ ಮತ್ತು ಆಧ್ಯಾತ್ಮಿಕತೆಯನ್ನು ಪ್ರಪಂಚಾದಾದ್ಯಂತ ಜನರು ಅರಿಯುತ್ತಿದ್ದಾರೆ ಮತ್ತು ಕಲಿಯುತ್ತಿದ್ದಾರೆ.  ಭಾರತದಿಂದ ಸಾವಿರಾರು ಕೀಲೋಮೀಟರ್ ದೂರದಲ್ಲಿರುವ ಕ್ಯಾರಿಬೀಯನ್ ಸಾಗರದಲ್ಲಿ ಡೊಮಿನಿಕನ್ ರಿಪಬ್ಲಿಕ್ ಎಂಬ ಹೆಸರಿನ ದೇಶವೊಂದಿದೆ. ಅಲ್ಲಿ ಭಾರತೀಯರ ಜನಸಂಖ್ಯೆ ಸುಮಾರು 100 ಇರಬಹುದು ಅಥವಾ ಅದಕ್ಕಿಂತ ಕಡಿಮೆಯೂ ಇರಬಹುದು. ಆದಾಗ್ಯೂ, ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದಂತೆ ಉತ್ತಮ ಪ್ರಯತ್ನವೊಂದು  ಅಲ್ಲಿ ನಡೆಯುತ್ತಿದೆ. ಅಲ್ಲಿ ಸ್ಪಾನಿಷ್ ಭಾಷೆ ಮಾತನಾಡುವ ಕೆಲವರು ಒಂದು ತಂಡ ರಚಿಸಿದ್ದಾರೆ. ಈ ತಂಡದ ಹೆಸರು ‘ಬ್ರಹ್ಮಕಮಲ್ ಡೊಮಿನಿಕಾನಾ’ ಎಂಬುದಾಗಿದೆ.  ತಂಡದ ಸದಸ್ಯರು ಒಗ್ಗಟ್ಟಾಗಿ ವೈದಿಕ ಸಾಹಿತ್ಯದ ಅಧ್ಯಯನ ಮಾಡುತ್ತಾರೆ. ಅವರು ವೈದಿಕ ಮಂತ್ರಗಳ ಉಚ್ಛಾರಣೆ ಕೂಡಾ ಕಲಿಯುತ್ತಿದ್ದಾರೆ. ಅವರಿಗೆ ಈ ಕುರಿತಂತೆ ಯಾವುದೇ ವಿದ್ಯುಕ್ತ ತರಬೇತಿ ಕೂಡಾ ದೊರೆತಿಲ್ಲ. ಆದರೆ ಅವರು ಆಡಿಯೋ ರೆಕಾರ್ಡಿಂಗ್ ಗಳನ್ನು ಕೇಳಿಸಿಕೊಂಡು, ವೈದಿಕ ಮಂತ್ರಗಳ ಸರಿಯಾದ ಉಚ್ಛಾರಣೆಯನ್ನು ಕಲಿತಿದ್ದಾರೆ. ಅವರು ಇಂದು ಅನೇಕ ಮಂತ್ರಗಳನ್ನು ಪಠಿಸಲು ಕಲಿತಿದ್ದಾರೆ. ಇದರಲ್ಲಿ ಪುರುಷ ಸೂಕ್ತಂ, ಶ್ರೀ ಸೂಕ್ತಂ, ಶ್ರೀ ರುದ್ರಂ, ದುರ್ಗಾ ಸೂಕ್ತಂ ಮತ್ತು ದೇವಿ ಮಹಾತ್ಮೆ ಕೂಡಾ ಸೇರಿವೆ. ಭಾರತದಿಂದ ಇಷ್ಟು ದೂರದಲ್ಲಿ ವಾಸಿಸುತ್ತಿದ್ದರೂ, ನಮ್ಮ ಸಂಪ್ರದಾಯವನ್ನು  ಕಲಿಯಬೇಕೆನ್ನುವ ಅವರ ಪ್ರಯತ್ನ ಬಹಳ ಸ್ಫೂರ್ತಿದಾಯಕವಾಗಿದೆ. ನಾನು ‘ಬ್ರಹ್ಮಕಮಲ್ ಡೊಮಿನಿಕಾನ’ ಅಲ್ಲಿನ ಎಲ್ಲಾ ಸದಸ್ಯರಿಗೂ ಅವರ ಈ ಪ್ರಯತ್ನಗಳಿಗೆ ಅಭಿನಂದಿಸುತ್ತೇನೆ. ಭಾರತದ ಸಂಸ್ಕೃತಿಯನ್ನು ವಿಶ್ವಾದ್ಯಂತ ಜನಪ್ರಿಯಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಎಲ್ಲರನ್ನೂ ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಮೇಘಾಲಯವು ಮೋಡಗಳು ಮತ್ತು ಸುಂದರವಾದ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ಮೇಘಾಲಯಕ್ಕೆ ಭೇಟಿ ನೀಡುವ ಯಾರೇ ಆದರೂ ಅಲ್ಲಿನ ಜನರ ಆತ್ಮೀಯತೆ ಮತ್ತು ಸ್ನೇಹಶೀಲ ಮನಸ್ಸನ್ನು ದೀರ್ಘಕಾಲದವರೆಗೆ ನೆನಪಿಸಿಕೊಳ್ಳುತ್ತಾರೆ. ಆದಾಗ್ಯೂ, ಮೇಘಾಲಯವು ಮತ್ತೊಂದು ವಿಶೇಷ ಗುಣವನ್ನು ಹೊಂದಿದ್ದು, ಅದರ ಬಗ್ಗೆ ನಾನು ಇಂದು ‘ಮನ್ ಕಿ ಬಾತ್’ ನಲ್ಲಿ ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ. ಅದೆಂದರೆ – ಮೇಘಾಲಯದ ರೂಟ್ ಬ್ರಿಜ್ ಅಂದರೆ ಬೇರು ಸೇತುವೆ. ರೂಟ್ ಎಂದರೆ ರಸ್ತೆಯಲ್ಲ, ಬೇರು ಎಂದರ್ಥ. ಈ ಬೇರು ಸೇತವೆಗಳ ಕತೆ ಬಹಳ ಆಕರ್ಷಣೀಯವಾಗಿದೆ. ಈ ಸೇತುವೆ ಕೆಲವು ದಿನಗಳಲ್ಲಿ ಅಥವಾ ಕೆಲವು ವರ್ಷಗಳಲ್ಲಿ ಸಿದ್ಧವಾಗುವುದಿಲ್ಲ. ಇವುಗಳು ಸಿದ್ಧವಾಗಲು ಹಲವು ದೇಶಕಗಳೇ ಹಿಡಿಯುತ್ತವೆ. ರಬ್ಬರ್ ಮರಗಳ ಬೇರುಗಳಿಗೆ ಕ್ರಮೇಣ ಒಂದು ಮಾರ್ಗ ನೀಡಲಾಗುತ್ತದೆ. ಈ ಬೇರುಗಳನ್ನು ನೀರಿನ ಹೊಳೆಗಳ ಮೂಲಕ ದಾಟಿಸಲಾಗುತ್ತದೆ. ಕಾಲಕ್ರಮೇಣ ಇವೇ ಬೇರುಗಳು ಒಂದು ಬಲಿಷ್ಠ ಸೇತುವೆಯ ರೂಪ ತಾಳುತ್ತವೆ. ಈ ಸೇತುವೆಗಳ ಮತ್ತೊಂದು ವಿಶೇಷತೆಯೂ ಇದೆ. ಇದು ಜೀವಂತ ಸೇತುವೆಯಾಗಿದೆ. ಕಾಲ ಕಳೆದಂತೆ ಇವು ಬಲವಾಗುತ್ತಾ ಹೋಗುತ್ತವೆ. ಇದರಲ್ಲಿ ಮೇಘಾಲಯದ ಜನತೆಯ ಸೃಜನಶೀಲತೆ ಕಂಡುಬರುತ್ತದೆ. ಇದರ ಹಿಂದೆ ವರ್ಷಗಳ ಧೈರ್ಯ ಮತ್ತು ಪ್ರಕೃತಿಗೆ ಅವರು ನೀಡುವ ಆಳವಾದ ಗೌರವ ಅಡಗಿದೆ. ಮನುಷ್ಯ ಪ್ರಕೃತಿಯೊಂದಿಗೆ ಕೈಜೋಡಿಸಿದರೆ ಎಂತಹ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬುದನ್ನು ಈ ಸೇತುವೆ ಹೇಳುತ್ತದೆ. ಇದು ನಮ್ಮ ದೇಶದ, ಈ ನೆಲದ ಪರಂಪರೆ. ಈಗ ಭಾರತವು ಮೇಘಾಲಯದ ಬೇರು ಸೇತುವೆಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ನೆಟ್ವರ್ಕ್ ನಲ್ಲಿ ಸೇರಿಸಲು ಅರ್ಜಿ ಸಲ್ಲಿಸಿದೆ.

ಸ್ನೇಹಿತರೇ,

ಹವಾಮಾನ ಬದಲಾವಣೆಯ ಕಾರಣದಿಂದಾಗಿ ಈ ಬೇರಿನ ಸೇತುವೆಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ, ಮೇಘಾಲಯದ ಜನರು ಈ ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಿಂದೆ, ಅಂತಹ ಸೇತುವೆಗಳ ಸಂಖ್ಯೆಯನ್ನು ನಿರ್ಧರಿಸುವುದು ಕಷ್ಟಕರವಾಗಿತ್ತು. ಸ್ಥಳೀಯರು ಅವುಗಳನ್ನು ಸ್ವತಃ ಎಣಿಸಲು ಪ್ರಾರಂಭಿಸಿದರು. ನಂತರ ಸಮುದಾಯಗಳು ಈ ಸೇತುವೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡವು. ಇಂದು, ಸ್ಥಳೀಯ ಜನರು 120 ಕ್ಕೂ ಹೆಚ್ಚು ಬೇರು ಸೇತುವೆಗಳನ್ನು ನಿರ್ವಹಿಸುತ್ತಿದ್ದಾರೆ. ತಂಡಗಳು ವಾರ್ಷಿಕವಾಗಿ ಈ ಸೇತುವೆಗಳ ಸ್ಥಿತಿಯನ್ನು ಪರಿಶೀಲಿಸುತ್ತವೆ. ಕೆಲವರು ಸುತ್ತಮುತ್ತಲಿನ ಪ್ರದೇಶವನ್ನು ಬಲಪಡಿಸಲು ನರ್ಸರಿಗಳನ್ನು ಸಹ ರಚಿಸಿದ್ದಾರೆ. ಈ ರೀತಿಯಾಗಿ, ಅವುಗಳ ಸಂರಕ್ಷಣೆಗಾಗಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ರಚಿಸಲಾಗಿದೆ.  ಈ ವರ್ಷ ಹ್ಯಾಲಿ ವಾರ್ ಜೀ ಅವರಿಗೆ ಪದ್ಮ ಪ್ರಶಸ್ತಿ ಬಂದಿರುವುದನ್ನು ನೀವು ನೋಡಿರಬೇಕು. ಅವರು ತಮ್ಮ ಜೀವನದ 50 ಕ್ಕೂ ಅಧಿಕ ವರ್ಷಗಳ ಕಾಲ ಈ ಬೇರು ಸೇತುವೆಗಳ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಈ ಸಮರ್ಪಣಾ ಭಾವ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಸ್ನೇಹಿತರೇ, ನೀವು ಎಂದಾದರೂ ಈ ಬೇರು ಸೇತುವೆಗಳಿರುವ ಪ್ರದೇಶಕ್ಕೆ ಹೋಗಿದ್ದರೆ, ಅವುಗಳ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಖಂಡಿತವಾಗಿಯೂ ಹಂಚಿಕೊಳ್ಳಿ. ನಿಮ್ಮ ಚಿತ್ರವು ಮೇಘಾಲಯದ ಈ ವಿಶಿಷ್ಠ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಪ್ರೇರಣೆ ನೀಡುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಗ್ರಾಮ ಸ್ವಚ್ಛವಾಗಿರಬೇಕೆಂದು, ನಮ್ಮ ನಗರ ಸುಂದರವಾಗಿ ಕಾಣಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ನಮ್ಮ ಸುತ್ತ ಮುತ್ತ ಸಂಗ್ರಹವಾಗುವ ತ್ಯಾಜ್ಯವನ್ನು ಯಾರು ಸ್ವಚ್ಛಗೊಳಿಸುತ್ತಾರೆ ಎಂಬುದರ ಬಗ್ಗೆ ನಾವು ನಿಜವಾಗಿಯೂ ಯೋಚಿಸುತ್ತೇವೆಯೇ? ಹೆಚ್ಚಿನ ಜನರು ಅದು ಬೇರೆಯವರ ಜವಾಬ್ದಾರಿ ಎಂದು ಭಾವಿಸುತ್ತಾರೆ ಮತ್ತು ಅವರು ಸ್ವಚ್ಛಗೊಳಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ ತಮ್ಮ ಆಲೋಚನೆಗಳಿಂದ ನಮಗೆ ಬಹಳ ಪ್ರೇರಣೆ ನೀಡುವ ಬಹಳಷ್ಟು ಜನರು ನಮ್ಮ ನಡುವೆಯೇ ಇದ್ದಾರೆ. ಮಧ್ಯಪ್ರದೇಶದ ರಾಜಗಢ್ ಜಿಲ್ಲೆಯ ಬ್ಯಾವರಾದ ಕೆಲವು ಸೋದರಿಯರ ಬಗ್ಗೆ ತಿಳಿದುಕೊಳ್ಳುವ ಅವಕಾಶ ದೊರೆತಿತ್ತು. ಇವರು ತಮ್ಮ ಸುತ್ತ ಮುತ್ತ ಹರಡಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತೊಲಗಿಸುವ ಸಂಕಲ್ಪ ತೊಟ್ಟರು. ಬೇರೆ ಯಾರೋ ಬಂದು ಬದಲಾವಣೆ ತರುತ್ತಾರೆಂದು ಅವರು ಯೋಚಿಸಲಿಲ್ಲ. ಅವರು ಸ್ವತಃ ನಗರದ ಎಲ್ಲ ಕಡೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಖಾಲಿ ಬಾಟಲಿಗಳನ್ನು ಸಂಗ್ರಹಿಸಲು ತೊಡಗಿದರು. ಕ್ರಮೇಣ, ಈ ಪ್ರಯತ್ನ ಮುಂದುವರಿದು, ನಂತರ ಪ್ಲಾಸ್ಟಿಕ್ ಅನ್ನು ಪರಿಸರ ಸ್ನೇಹಿ ಇಟ್ಟಿಗೆಗಳಾಗಿ ಪರಿವರ್ತಿಸಲು ಪ್ರಾರಂಭಿಸಲಾಯಿತು. ಇಂದು, ಈ ಪರಿಸರ ಇಟ್ಟಿಗೆಗಳನ್ನು ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸಲು ಬಳಸಲಾಗುತ್ತಿದೆ. ರಾಜ್‌ ಗಢದಲ್ಲಿ, ಕಳೆದ ಕೆಲವು ತಿಂಗಳುಗಳಲ್ಲಿ ನೂರಾರು ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಿ ಉತ್ತಮ ರೀತಿಯಲ್ಲಿ ಉಪಯೋಗಿಸಲಾಗಿದೆ. ಅಂದರೆ, ಯಾವ ಪ್ಲಾಸ್ಟಿಕ್ ಈ ಮೊದಲು ನಗರದಲ್ಲಿ ಮಾಲಿನ್ಯವನ್ನು ಹರಡುತ್ತಿತ್ತೋ, ಇಂದು ಅವು ಈ ಸೋದರಿಯರ ಪ್ರಯತ್ನದಿಂದಾಗಿ ನಗರದ ಸೌಂದರ್ಯ ಹೆಚ್ಚಿಸಲು ಕೊಡುಗೆ ನೀಡುತ್ತಿದೆ. ಬ್ಯಾವರಾದ ಎಲ್ಲಾ ಸೋದರಿಯರನ್ನೂ ಮತ್ತು ಈ ಅಭಿಯಾನದಲ್ಲಿ ಕೈಜೋಡಿಸಿರುವ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶಬಾಂಧವರೇ,

ನನಗೆ ಹಲವರು ಪತ್ರ ಬರೆದು ಒಂದು ಪ್ರಮುಖ ವಿಷಯದ ಬಗ್ಗೆ ಮಾತನಾಡಬೇಕೆಂದು ಕೇಳಿದ್ದಾರೆ. ಅದು ಗಣೇಶೋತ್ಸವಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹಾಗೆ ನೋಡಿದರೆ ಗಣೇಶೋತ್ಸವಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಆದರೂ ಜನರು ಈ ವಿಷಯದ ಬಗ್ಗೆ ಈಗಿನಿಂದಲೇ ಮಾತನಾಡಬೇಕೆಂದು ಮನವಿ ಮಾಡಿದ್ದಾರೆ. ವಾಸ್ತವದಲ್ಲಿ, ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸ ಬಹಳ ಬೇಗನೆ ಪ್ರಾರಂಭವಾಗುತ್ತದೆ. ಮೂರ್ತಿ ತಯಾರಕರು ಮತ್ತು ಮೂರ್ತಿ ವ್ಯಾಪಾರದಲ್ಲಿ ತೊಡಗಿರುವವರು ಈಗಿನಿಂದಲೇ ಕಾರ್ಯಪ್ರವೃತ್ತರಾಗುತ್ತಾರೆ. ಆದ್ದರಿಂದ, ನಿಮ್ಮೆಲ್ಲರಲ್ಲಿ ನನ್ನ ವಿನಂತಿಯೆಂದರೆ, ದಯವಿಟ್ಟು ನಿಮ್ಮ ಮನೆ, ಸಮಾಜ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಾಪಿಸಲಾದ ಗಣೇಶ ದೇವನ ಮೂರ್ತಿಯು ನಮ್ಮ ದೇಶದ ಜೇಡಿಮಣ್ಣಿನಿಂದ ತಯಾರಿಸಲ್ಪಟ್ಟಿದೆಯೇ, ಅದನ್ನು ನಮ್ಮವರೇ ಆದ ಕುಂಬಾರರು ಮತ್ತು ಸ್ಥಳೀಯ ಕಲಾವಿದರು ರಚಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿ. ಗಣೇಶ ಮೂರ್ತಿಗಳನ್ನು ತಯಾರಿಸುವವರು ಮಣ್ಣಿನ ಮೂರ್ತಿಗಳಿಗೆ ಆದ್ಯತೆ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ. ಮೂರ್ತಿಗಳನ್ನು ಖರೀದಿಸುವವರು ಗಣಪತಿ ಮೂರ್ತಿಯನ್ನು ಯಾವ ವಸ್ತುಗಳಿಂದ ತಯಾರಿಸಲಾಗಿದೆ ಮತ್ತು ಯಾವ ದೇಶದಲ್ಲಿ ಮಾಡಲಾಗಿದೆ ಎಂಬುದನ್ನು ಸಹ ಪರಿಶೀಲಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್‌ ನಿಂದ ಮಾಡಿದ ಮೂರ್ತಿಗಳನ್ನು ಎಂದಿಗೂ ಖರೀದಿಸಬೇಡಿ. ಸ್ನೇಹಿತರೇ, ಪೂಜೆಯ ನಂತರ ಮಣ್ಣಿನ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಇದು ನಮ್ಮ ನದಿಗಳು, ಕೊಳಗಳು ಮತ್ತು ಪರಿಸರವನ್ನು ರಕ್ಷಿಸುತ್ತದೆ. ನಮ್ಮ ನಂಬಿಕೆ ಹಾಗೆಯೇ ಉಳಿಯುತ್ತದೆ ಮತ್ತು ಪ್ರಕೃತಿಯ ಬಗೆಗಿನ ನಮ್ಮ ಜವಾಬ್ದಾರಿಯೂ ಈಡೇರುತ್ತದೆ. ಸ್ಥಳೀಯ ಕುಶಲಕರ್ಮಿಗಳಿಂದ ನಾವು ಮೂರ್ತಿಗಳನ್ನು ಖರೀದಿಸಿದಾಗ, ‘ವೋಕಲ್ ಫಾರ್ ಲೋಕಲ್ ‘ ಎಂಬ ನಮ್ಮ ಸಂಕಲ್ಪವನ್ನು ಬಲಪಡಿಸುತ್ತೇವೆ. ಈ ಬಾರಿ ಗಣೇಶೋತ್ಸವ ಮತ್ತು ಅಂತಹ ಪ್ರತಿಯೊಂದು ಹಬ್ಬದ ಸಮಯದಲ್ಲಿ, ನಾವು ಅಂತಹ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ನಮ್ಮ ದೇಶದ ಅತಿ ದೊಡ್ಡ ಶಕ್ತಿಯೆಂದರೆ ಅದು ನಮ್ಮ ದೇಶದ ಜನರು. ದೇಶದಲ್ಲಿ ನಡೆಯುತ್ತಿರುವ ಸಣ್ಣ-ದೊಡ್ಡ ಪ್ರಯತ್ನಗಳು ನಮಗೆ ಬಹಳಷ್ಟನ್ನು ಕಲಿಸುತ್ತವೆ. ಮನಸ್ಸಿನಲ್ಲಿ ಸಂಕಲ್ಪವಿದ್ದರೆ ಮತ್ತು ಅದಕ್ಕೆ ಸಮಾಜ ಕೈಜೋಡಿಸಿದರೆ, ಯಾವುದೇ ದೊಡ್ಡ ಬದಲಾವಣೆಯನ್ನು ತರಬಹುದು. ನಿಮ್ಮ ಸುತ್ತ ಮುತ್ತಲಿನ ಇಂತಹ ಪ್ರಯತ್ನಗಳ ಬಗ್ಗೆ ನನಗೆ ಖಂಡಿತವಾಗಿಯೂ ಬರೆದು ತಿಳಿಸುತ್ತಿರಿ. ನಿಮ್ಮ ಚಿಂತನೆಗಳು ಮತ್ತು ಸಲಹೆ-ಸೂಚನೆಗಳನ್ನು ನನಗೆ ಕಳುಹಿಸುತ್ತಿರಿ, ನಿಮ್ಮ ಸುತ್ತಮುತ್ತಲಿನ ಯಾವುದೇ ಚಿಕ್ಕ ಉಪಕ್ರಮ ಕೂಡಾ ಇಡೀ ದೇಶಕ್ಕೆ ಸ್ಫೂರ್ತಿದಾಯಕವಾಗಬಹುದು. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ. ದೇಶಬಾಂಧವರ ಇಂತಹ ಹೊಸ ಪ್ರಯತ್ನಗಳ ಬಗ್ಗೆ ಮಾತನಾಡೋಣ. ಅಲ್ಲಿಯವರೆಗೆ ನಿಮ್ಮ ಮತ್ತು ನಿಮ್ಮ ಕುಟುಂಬದವರ ಕಾಳಜಿ ವಹಿಸಿ. ನೀರಿನ ಸಂರಕ್ಷಣೆಯನ್ನಂತೂ ಮಾಡಲೇಬೇಕು. ಮಳೆಯ ಪ್ರತಿಯೊಂದು ಹನಿಯನ್ನೂ ನಾವು ಉಳಿಸಲೇ ಬೇಕು. ‘Catch the Rain’ ಈ ಅಭಿಯಾನ ಸ್ವಲ್ಪ ಕೂಡಾ ಸಡಿಲವಾಗಲು ಬಿಡಬಾರದು. ನಿಮ್ಮಲ್ಲಿ ನನ್ನ ವಿಶೇಷ ಮನವಿಯೆಂದರೆ, ನಾವೆಲ್ಲರೂ ಸೇರಿ ಮಳೆಯ ಹನಿ ಹನಿ ನೀರನ್ನು ನಾವೆಲ್ಲರೂ ಸೇರಿ ಸಂರಕ್ಷಿಸೋಣ.

ಅನಂತಾನಂತ ಧನ್ಯವಾದ. ನಮಸ್ಕಾರ.

******