Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ ವರ್ಷಾಚರಣೆ ಸಂದರ್ಭದಲ್ಲಿ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯ ವೇಳೆ ಪ್ರಧಾನಮಂತ್ರಿಯವರ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ ವರ್ಷಾಚರಣೆ ಸಂದರ್ಭದಲ್ಲಿ ಲೋಕಸಭೆಯಲ್ಲಿ ಭಾಷಣ ಮಾಡಿದರು.

ಭಾರತ ಬಿಟ್ಟು ತೊಲಗಿ ಚಳವಳಿಯಂಥ ಚಳವಳಿಗಳನ್ನು ಸ್ಮರಿಸುವುದು ಸ್ಫೂರ್ತಿಯ ಸೆಲೆಯಾಗುತ್ತದೆ ಎಂದ ಅವರು, ಇಂತಹ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿಯನ್ನು ಇಂದಿನ ಜನಾಂಗ ಹೊಂದಿದೆ ಎಂದರು.

ಮಹಾತ್ಮಾ ಗಾಂಧಿಯವರಂಥ ಹಲವು ಹಿರಿಯ ನಾಯಕರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸೆರೆವಾಸ ಅನುಭವಿಸಿದ್ದರು ಎಂದು ಸ್ಮರಿಸಿದ ಪ್ರಧಾನಿ, ನವ ಪೀಳಿಗೆಯ ನಾಯಕರು ಈ ಕಂದಕ ಮುಚ್ಚಲು ಹೊರಹೊಮ್ಮಿ, ಚಳವಳಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದರು.

ಸ್ವಾತಂತ್ರ್ಯ ಚಳವಳಿ ಹಲವು ಹಂತಗಳಲ್ಲಿ ನಡೆಯಿತು, 1857ರಿಂದ ಚಳವಳಿಯ ವಿವಿಧ ಹಂತಗಳಲ್ಲಿ ಹಲವು ನಾಯಕರು ಹೊರಹೊಮ್ಮಿದರು ಎಂದು ಪ್ರಧಾನಿ ಸ್ಮರಿಸಿದರು. 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾಯಿತು, ಮತ್ತು ಅದು ನಿರ್ಣಾಯಕ ಚಳವಳಿಯಾಯಿತು ಎಂದರು. ಮಹಾತ್ಮಾ ಗಾಂಧೀಜಿ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, “ಮಾಡು ಇಲ್ಲವೇ ಮಡಿ’ ಎಂಬ ಗಾಂಧಿಯವರ ಕರೆಗೆ ಎಲ್ಲ ವರ್ಗದ ಜನರು ಸ್ಪಂದಿಸಿದರು, ಒಗ್ಗೂಡಿದರು ಎಂದರು. ರಾಜಕೀಯ ನಾಯಕರಿಂದ ಶ್ರೀಸಾಮಾನ್ಯನವರೆಗೆ ಪ್ರತಿಯೊಬ್ಬರೂ ಈ ಸ್ಪೂರ್ತಿಯನ್ನು ತುಂಬಿಕೊಂಡಿದ್ದರು, ಇಡೀ ದೇಶ ಈ ಸಮಾನ ಸಂಕಲ್ಪವನ್ನು ಹಂಚಿಕೊಂಡ ಬಳಿಕ ಐದು ವರ್ಷಗಳಲ್ಲಿ ಸ್ವಾತಂತ್ರ್ಯದ ಗುರಿ ಸಾಧಿಸಲಾಯಿತು ಎಂದು ಪ್ರಧಾನಿ ಹೇಳಿದರು.

ಅಂದಿನ ಸನ್ನಿವೇಶ, ಮನೋಸ್ಥಿತಿಯನ್ನು ವಿವರಿಸಲು ಪ್ರಧಾನಿಯವರು, ಲೇಖಕ ರಾಮವೃಕ್ಷ ಬೇಣಿಪುರಿ ಮತ್ತು ಕವಿ ಸೋಹನ್ ಲಾಲ್ ದ್ವಿವೇದಿ ಅವರನ್ನು ಉಲ್ಲೇಖಿಸಿದರು.

ಭ್ರಷ್ಟಾಚಾರ, ಬಡತನ, ಅನಕ್ಷರತೆ ಮತ್ತು ಅಪೌಷ್ಟಿಕತೆಗಳ ಸವಾಲಿನಿಂದ ಭಾರತ ಹೊರಬರಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ಧನಾತ್ಮಕವಾದ ಪರಿವರ್ತನೆ ಮತ್ತು ಸಮಾನ ಸಂಕಲ್ಪ ಇದಕ್ಕೆ ಅಗತ್ಯವಿದೆ ಎಂದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರ ಪಾತ್ರವನ್ನು ಅವರು ಪ್ರಸ್ತಾಪಿಸಿದರು ಮತ್ತು ಇಂದಿಗೂ ನಮ್ಮ ಸಮಾನ ಉದ್ದೇಶಗಳಿಗೆ ಮಹಿಳೆಯರು ದೊಡ್ಡ ಶಕ್ತಿ ತುಂಬಬಲ್ಲರು ಎಂದರು.

ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನಮಗೆ ನಮ್ಮ ಹಕ್ಕುಗಳ ಬಗ್ಗೆ ಚನ್ನಾಗಿ ತಿಳಿದಿದೆ, ಆದರೆ ನಾವು ನಮ್ಮ ಕರ್ತವ್ಯಗಳನ್ನು ಮರೆಯಬಾರದು, ಈ ಎರಡೂ ನಮ್ಮ ಬದುಕಿನ ಅವಿಭಾಜ್ಯ ಅಂಗ ಆಗಬೇಕು ಎಂದರು.

ಭಾರತದಲ್ಲಿ ವಸಾಹತುಶಾಹಿ ಆರಂಭವಾಯಿತು ಮತ್ತು ಇಲ್ಲೇ ಅವಸಾನ ಕಂಡಿತು, ಭಾರತದ ಸ್ವಾತಂತ್ರ್ಯದೊಂದಿಗೆ ಏಷ್ಯಾ ಮತ್ತು ಆಫ್ರಿಕಾದಲ್ಲಿ ವಸಾಹತುಶಾಹಿ ಕುಸಿಯಿತು ಎಂದು ಪ್ರಧಾನಿ ಹೇಳಿದರು.

ಭಾರತ ಸ್ವಾತಂತ್ರ್ಯ ಪಡೆಯಲು 1942ರಲ್ಲಿ ಸನ್ನಿವೇಶಗಳು ಅಂತಾರಾಷ್ಟ್ರೀಯವಾಗಿ ಭಾರತದ ಪರವಾಗಿದ್ದವು ಎಂದ ಪ್ರಧಾನಿ, ಇಂದಿಗೂ ಜಾಗತಿಕ ಸನ್ನಿವೇಶ ಭಾರತದ ಪರವಾಗಿಯೇ ಇದೆ ಎಂದರು. 1857ರಿಂದ 1942ರವರೆಗೆ ಸ್ವಾತಂತ್ರ್ಯದ ನಡೆ ಏರುಮುಖವಾಗಿತ್ತು. ಆದರೆ 1942ರಿಂದ 1947ರ ನಡುವಿನ ಅವಧಿಯಲ್ಲಿ ಅದು ಪರಿವರ್ತನಾತ್ಮಕವಾಯಿತು ಮತ್ತು ಗುರಿ ಸಾಧಿಸಿತು ಎಂದರು. ಭೇದಗಳನ್ನು ಮೀರಿ ಬೆಳೆಯುವಂತೆ ಸಂಸತ್ ಸದಸ್ಯರಿಗೆ ಮನವಿ ಮಾಡಿದ ಪ್ರಧಾನಿಯವರು, ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಂದರೆ 2017ರಿಂದ 2022ರವರೆಗೆ ಸ್ವಾತಂತ್ರ್ಯ ಯೋಧರ ಕನಸಿನ ಭಾರತ ನಿರ್ಮಾಣದ ಸಮಾನ ಪ್ರಯತ್ನದಲ್ಲಿ ಕೈಜೋಡಿಸುವಂತೆ ಕೋರಿದರು.

1942ರಲ್ಲಿ ‘ಮಾಡು ಇಲ್ಲವೇ ಮಡಿ’ ಕರೆ ನೀಡಲಾಯಿತು, ಇಂದು ಆ ಕರೆಯು ‘ಮಾಡುತ್ತೇವೆ ಮತ್ತು ಮಾಡಿಯೇ ತೀರುತ್ತೇವೆ’ ಎಂಬುದಾಗಬೇಕು ಎಂದರು. ಮುಂದಿನ ಐದು ವರ್ಷಗಳಲ್ಲಿ ‘ಸಂಕಲ್ಪದಿಂದ ಸಿದ್ಧಿ’ ಯಾಗಬೇಕು ಅದು ನಮ್ಮನ್ನು ಸಾಧನೆಯತ್ತ ಕರೆದೊಯ್ಯಬೇಕು ಎಂದರು.

ಭ್ರಷ್ಟಾಚಾರದಿಂದ ಹೊರಬರಲು, ಬಡವರಿಗೆ ಅವರ ಹಕ್ಕು ಕೊಡಿಸಲು, ಯುವಕರಿಗೆ ಸ್ವಯಂ ಉದ್ಯೋಗ ದೊರಕಿಸಲು, ಅಪೌಷ್ಟಿಕತೆ ನಿವಾರಿಸಲು, ಮಹಿಳಾ ಸಬಲೀಕರಣಕ್ಕೆ ಇರುವ ತಡೆ ನಿವಾರಿಸಲು ಮತ್ತು ಅನಕ್ಷರತೆ ಹೋಗಲಾಡಿಸಲು ಈ ಕೆಳಗಿನ ಸಾಲುಗಳೊಂದಿಗೆ ತಮ್ಮ ಮಾತು ಮುಗಿಸಿದರು.:

· ನಾವೆಲ್ಲರೂ ಸೇರಿ ದೇಶದಿಂದ ಭ್ರಷ್ಟಾಚಾರವನ್ನು ದೂರ ಮಾಡೋಣ, ತೊಲಗಿಸೋಣ.

· ನಾವೆಲ್ಲರೂ ಸೇರಿ ಬಡವರಿಗೆ ಅವರ ಹಕ್ಕು ಕೊಡಿಸೋಣ ಮತ್ತು ಕೊಡಿಸಿಯೇ ತೀರೋಣ

· ನಾವೆಲ್ಲರೂ ಸೇರಿ ಯುವಜನರಿಗೆ ಸ್ವಯಂ ಉದ್ಯೋಗದ ಅವಕಾಶ ಕೊಡಿಸೋಣ, ಕೊಡಿಸಿಯೇ ತೀರೋಣ.

· ನಾವೆಲ್ಲರೂ ಸೇರಿ ದೇಶದಲ್ಲಿನ ಅಪೌಷ್ಟಿಕತೆಯನ್ನು ಸಮಾಪ್ತಿ ಮಾಡೋಣ.

· ನಾವೆಲ್ಲರೂ ಸೇರಿ ಮಹಿಳೆಯರು ಮುಂದೆ ಬರಲು ಇರುವ ತಡೆಗಳನ್ನು ದೂರ ಮಾಡೋಣ, ಮಾಡಿಯೇ ತೀರೋಣ.

· ನಾವೆಲ್ಲರೂ ಸೇರಿ ದೇಶದಿಂದ ಅನಕ್ಷರತೆಯನ್ನು ತೊಲಗಿಸೋಣ, ತೊಲಗಿಸಿಯೇ ತೀರೋಣ.

******

AKT/AK/NT