Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಟಿಂಡಾದಲ್ಲಿ ಎಐಐಎಂಎಸ್ ಸ್ಥಾಪನೆಯ ಶಿಲಾನ್ಯಾಸ ನೆರವೇರಿಸಿದ ಬಳಿಕ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣ

ಭಟಿಂಡಾದಲ್ಲಿ ಎಐಐಎಂಎಸ್ ಸ್ಥಾಪನೆಯ ಶಿಲಾನ್ಯಾಸ ನೆರವೇರಿಸಿದ ಬಳಿಕ ಪ್ರಧಾನ ಮಂತ್ರಿ   ಅವರು  ಮಾಡಿದ ಭಾಷಣ

ಭಟಿಂಡಾದಲ್ಲಿ ಎಐಐಎಂಎಸ್ ಸ್ಥಾಪನೆಯ ಶಿಲಾನ್ಯಾಸ ನೆರವೇರಿಸಿದ ಬಳಿಕ ಪ್ರಧಾನ ಮಂತ್ರಿ   ಅವರು  ಮಾಡಿದ ಭಾಷಣ


ಮತ್ತೊಮ್ಮೆ ನಿಮ್ಮ ಮಧ್ಯೆ ಬರುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಕಳೆದ ತಿಂಗಳು ನಾನು ಲೂಧಿಯಾನಕ್ಕೆ ಬಂದಿದ್ದಾಗ ಸಮಯದ ಅಭಾವದಿಂದ ನನಗೆ ಭಟಿಂಡಾಗೆ ಹೋಗಲು ಆಗುತ್ತಿಲ್ಲ. ಆದರೆ ಸಾಧ್ಯವಾದಷ್ಟು ಬೇಗನೆ ಭಟಿಂಡಾಗೆ ಹೋಗುತ್ತೇನೆ ಎಂದು ಹೇಳಿದ್ದೆ. ಈ ದಿನ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ.

ದೇಶದ ಪ್ರಗತಿಯಲ್ಲಿ ರಸ್ತೆ ನಿರ್ಮಾಣ, ವಿಮಾನ ನಿಲ್ದಾಣ ನಿರ್ಮಾಣ, ರೈಲು ಸಂಚಾರಕ್ಕೆ ಇರುವಷ್ಟೇ ಮಹತ್ವ ಸಾಮಾನ್ಯ ನಾಗರಿಕರಿಗೆ ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವುದಕ್ಕೂ ಇದೆ. ಅಂದರೆ ಶಾಲೆ ಇರಬೇಕು, ಆಸ್ಪತ್ರೆ ಇರಬೇಕು. ಕಡು ಬಡವನಿಗೂ ಆಸ್ಪತ್ರೆಯಲ್ಲಿ ಸೇವೆ ದೊರಕಬೇಕು, ಕಡು ಬಡವನಿಗೂ ಶಿಕ್ಷಣ ಸಿಗಬೇಕು. ಆಗ ಸಮಾಜವು ಬಲಿಷ್ಠವಾಗಲು ಸಾಧ್ಯ. ಇಂದು ಭಾರತ ಸರ್ಕಾರ ಮತ್ತು ಪಂಜಾಬ್ ಸರ್ಕಾರ ಒಟ್ಟಿಗೆ ಸೇರಿ ಹೆಗಲಿಗೆ ಹೆಗಲು ಕೊಟ್ಟು ಹಳ್ಳಿ, ಬಡವ, ರೈತ, ದೂರದ ಮತ್ತು ಅತಿ ಕುಗ್ರಾಮಗಳಲ್ಲಿ ಸಹ ಜನಜೀವನದಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತಿವೆ. ವಿದ್ಯುತ್ ಇಲ್ಲದ ಕಡೆ ವಿದ್ಯುತ್ ಸಂಪರ್ಕ ನೀಡುವ, ನೀರಿಲ್ಲದ ಕಡೆ ನೀರು ಕೊಡುವ, ಆಸ್ಪತ್ರೆ ಇಲ್ಲದ ಕಡೆ ಆಸ್ಪತ್ರೆ ಕಟ್ಟುವ, ಶಾಲೆಗಳಿಲ್ಲದ ಕಡೆ ಶಾಲೆಗಳನ್ನು ಸ್ಥಾಪಿಸುವ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ. ಇದರ ಅಂಗವಾಗಿಯೇ ಈ ದಿನ ಭಟಿಂಡಾದಲ್ಲಿ 900 ಕೋಟಿ ರೂಪಾಯಿಗಿಂತ ಹೆಚ್ಚು, ಸುಮಾರು ಹತ್ತಿರ ಹತ್ತಿರ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎಐಐಎಂಎಸ್ ಅನ್ನು ನಿರ್ಮಿಸಲಾಗುತ್ತಿದೆ. ಈ ಎಐಐಎಂಎಸ್ ಕೇವಲ ರೋಗಿಗಳ ರೋಗವನ್ನು ವಾಸಿ ಮಾಡುವುದಷ್ಟೇ ಅಲ್ಲ, ಪ್ಯಾರಾ ಮೆಡಿಕಲ್ ಶಿಕ್ಷಣ, ನರ್ಸಿಂಗ್ ಶಿಕ್ಷಣ, ವೈದ್ಯಕೀಯ ಶಿಕ್ಷಣವನ್ನು ಸಹ ಇಲ್ಲಿ ನೀಡಲಾಗುತ್ತಿದೆ. ಈ ಎಐಐಎಂಎಸ್ ಯೋಜನೆಯು ಯುವಜನರ ಸಂಪೂರ್ಣ ಭವಿಷ್ಯವನ್ನಷ್ಟೇ ಅಲ್ಲ ಮುಂದಿನ ಪೀಳಿಗೆ ಯ ಭವಿಷ್ಯವನ್ನು ಸಹ ಬದಲಿಸುವ ಶಕ್ತಿ ಹೊಂದಿದೆ.

ಈ ಪ್ರದೇಶಕ್ಕೆ ಇದರಿಂದ ಅದೆಷ್ಟು ಒಳ್ಳೆಯದಾಗುತ್ತದೆಂದು ನನಗಿಂತ ಮೊದಲು ಮಾತನಾಡಿದವರು ಹೇಳಿದ್ದಾರೆ.

ಶ್ರೀ ಬಾದಲ್ ಅವರು ಹೇಳಿದಂತೆ ಶಿಲಾನ್ಯಾಸ ವಿಶೇಷ ಗುಣವಾಗಿದೆ. ನಾವು ಶಂಕುಸ್ಥಾಪನೆ ಮಾಡಬೇಕಾದ ಕೆಲಸವನ್ನು ನಿರ್ಧರಿಸುವಂತೆಯೇ ಅದರ ಉಧ್ಘಾಟನೆ ಸಹ ನಮ್ಮಿಂದಲೇ ಅಗುವಂತೆ ನಮ್ಮ ಕಛೇರಿಯಲ್ಲೇ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಮೊದಲೆಲ್ಲ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರಗಳು ಗಲ್ಲಿಗಲ್ಲಿಗಳಿಗೆ ಹೋಗಿ ಕೇವಲ ಕಲ್ಲುಗಳನ್ನು ನಿಲ್ಲಿಸಿ ಬರುತ್ತಿದ್ದವು . ಇದು ಆಗುತ್ತೆ, ಅದು ಆಗುತ್ತೆ ಎಂದು ಜನರನ್ನು ನಂಬಿಸಿ ನಂತರ ಮರೆಯುತ್ತಿದ್ದೆವು. ಈಗ ನಾವು ಯಾವುದೇ ಯೋಜನೆಯನ್ನು ಆರಂಭಿಸುತ್ತಿದ್ದಂತೆಯೇ ಜನರು ಇದು ಯಾವ ದಿನಾಂಕದಂದು ಪೂರ್ತಿಗೊಳ್ಳುತ್ತದೆ ಎಂದು ಕೇಳುವಷ್ಟು ನಮ್ಮ ದೇಶದಲ್ಲಿ ವೇಗದ ಬದಲಾವಣೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು ಯಾವುದೇ ಯೋಜನೆಯನ್ನು ಹಮ್ಮಿಕೊಂಡರೂ ಅದು ಪೂರ್ತಿಯಾಗಿ ಉಧ್ಘಾಟನೆಯಾಗುವ ದಿನ ಯಾವುದೆಂದು ಸಹ ನಿರ್ಧರಿಸಲಾಗುತ್ತದೆ. ಸರ್ಕಾರದಿಂದ ಇಂತಹ ಕೆಲಸಗಳನ್ನು ವಹಿಸಿಕೊಳ್ಳುತ್ತಿರುವವರಲ್ಲೂ ಸ್ಪರ್ಧಾ ಮನೋಭಾವನೆ ಬೆಳೆಯುತ್ತಿದೆ. ಕೆಲವರು ನಿಗದಿತ ಅವಧಿಗೆ ಮೊದಲೇ ಅಚ್ಚುಕಟ್ಟಾಗಿ ಕೆಲಸ ಮುಗಿಸುತ್ತಾರೆ. ಇಂತಹವರಿಗೆ ನಾನು ಪ್ರಶಸ್ತಿಯನ್ನು ಸಹ ನೀಡಿ ಗೌರವಿಸುತ್ತೇನೆ. ಇದರಿಂದ ದೇಶದಲ್ಲಿ ಬೇಗನೆ ಕೆಲಸ ಮಾಡುವ ಅಭ್ಯಾಸ ಬೆಳೆಯುತ್ತದೆ.

ಸೋದರ ಸೋದರಿಯರೆ, ಪಾಕಿಸ್ತಾನ ಇಲ್ಲಿಂದ ದೂರವಿಲ್ಲ. ಗಡಿಯಲ್ಲಿ ವಾಸಿಸುವವರು ಗಡಿಯಾಚೆಯಿಂದ ಎದುರಾಗುವ ಕಷ್ಟಗಳನ್ನು ಸಹಿಸಿಕೊಂಡಿರುತ್ತಾರೆ. ನಮ್ಮ ಸೈನಿಕರ ಎದೆಯಲ್ಲಿ ಕಿಚ್ಚು, ಕೈಗಳಲ್ಲಿ ಶಸ್ತ್ರಾಸ್ತ್ರ ಇದ್ದರೂ ಅವರಿಗೆ ತಮ್ಮ ಪರಾಕ್ರಮವನ್ನು ಮೆರೆಯಲು ಸಾಧ್ಯವಾಗದೆ ಸಹಿಸಿಕೊಂಡಿರಬೇಕಾಗುತ್ತದೆ.

ಸೋದರ ಸೋದರಿಯರೆ, ಇತ್ತೀಚಿಗಷ್ಟೇ ನಮ್ಮ ಸೇನೆಯ ತಾಕತ್ತು ಏನೆಂದು ನೋಡಿದ್ದೀರಿ. 250 ಕಿಲೋಮೀಟರ್ ಉದ್ದದವರೆಗೂ ನಮ್ಮ ವೀರ ಸೈನಿಕರು ನಡೆಸಿದ ನಿರ್ದಿಷ್ಟ ದಾಳಿಯ ಹೊಡೆತದಿಂದಾಗಿ ಗಡಿಯಲ್ಲಿ ಉಂಟಾದ ಕಂಪನಗಳನ್ನು ಇಂದಿಗೂ ಅವರನ್ನು ನಡುಗಿಸುತ್ತದೆ. ನಾನು ಪಾಕಿಸ್ತಾನದ ಪಕ್ಕದಲ್ಲಿ ಈ ದಿವಸ ನಿಂತಿದ್ದೇನೆ, ಗಡಿಯಲ್ಲಿ ನಿಂತಿದ್ದೇನೆ, ಆದರೂ ಮತ್ತೊಮ್ಮೆ ಪಾಕಿಸ್ತಾನದ ಒಳಿತಿನ ದ್ಟೃಷ್ಟಿಯಿಂದ ಮಾತನಾಡಲು ಬಯಸುತ್ತೇನೆ. ಇದು ಭಾರತ, ಇಲ್ಲಿ ನೂರಾ ಇಪ್ಪತ್ತೈದು ಕೋಟಿ ಜನರಿದ್ದಾರೆ. ಪಾಕಿಸ್ತಾನದ ಪೇಶಾವರದಲ್ಲಿ ಮಕ್ಕಳನ್ನು ಸಾಯಿಸಿದಾಗ ನೂರಾ ಇಪ್ಪತ್ತೈದು ಕೋಟಿ ಭಾರತೀಯರಲ್ಲಿ ಕಣ್ಣೀರು ಹರಿಯುತ್ತದೆ. ನಿಮ್ಮ ನೋವು ಕಂಡು ಪ್ರತಿಯೊಬ್ಬ ಭಾರತೀಯನೂ ತಮ್ಮದೇ ನೋವು ಎಂಬಂತೆ ಮರಗುತ್ತಾರೆ. ಈ ರೀತಿ ಆಜ್ಞೆ ಹೊರಡಿಸಿ ಸಾಯಿಸುವವರನ್ನು ಪಾಕಿಸ್ತಾನದ ಜನರೇ ಪ್ರಶ್ನಿಸಬೇಕು ಹೋರಾಡಬೇಕು ಎಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡಿ, ಕಪ್ಪು ಹಣದ ವಿರುದ್ಧ ಹೋರಾಡಿ, ಖೋಟಾ ನೋಟಿನ ವಿರುದ್ಧ ಹೋರಾಡಿ, ಬಡವರ ವಿರುದ್ಧ ಹೋರಾಡಿ ಎಂದು ಕೇಳಬೇಕು. ಭಾರತದ ವಿರುದ್ಧ ಹೋರಾಡುತ್ತ ನಮ್ಮನ್ನು ನಾಶ ಮಾಡುತ್ತಿದ್ದೀರಿ, ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದ್ದೀರಿ. ಪಾಕಿಸ್ತಾನದ ಜನರು ಬಡತನದಿಂದ ಮುಕ್ತಿ ಹೊಂದಲು ಬಯಸುತ್ತಾರೆ ಎಂದು ತಿಳಿಸಿ. ಇಂತಹ ಹೋರಾಟಕ್ಕೆ ಕಾರಣವೇ ಇಲ್ಲ. ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಇಂತಹ ಆತಂಕ ವಾತಾವರಣಗಳನ್ನು ಸೃಷ್ಟಿಸುತ್ತಲ್ಲೇ ಇದ್ದಾರೆ. ಭಾರತೀಯ ಸೇನೆ ಎಷ್ಟು ಬಲಶಾಲಿಯಾಗಿದೆ, ನಮ್ಮ ಸೈನಿಕರ ಶಕ್ತಿ ಎಷ್ಟಿದೆ ಎಂಬುದನ್ನು ಈಗ ಪಾಕಿಸ್ತಾನಕ್ಕೆ ಪರಿಚಯ ಮಾಡಿಸಿದ್ದೇವೆ.

ಸೋದರ ಸೋದರಿಯರೆ, ಸಿಂಧೂ ನದಿ ಜಲ ಒಪ್ಪಂದ, ಸತ್ಲೆಜ್, ಬಿಯಾಸ್, ರಾವಿ ಈ ಮೂರೂ ನದಿಗಳ ನೀರು ಭಾರತೀಯರ ಹಕ್ಕಿನ ನೀರು, ನನ್ನ ರೈತ ಸೋದರರ ಹಕ್ಕಿನ ನೀರಾಗಿದೆ. ನಿಮ್ಮ ಹೊಲಗಳಿಗೆ ಬರದೆ ಹರಿಯುತ್ತಿರುವ ನೀರನ್ನು ಪಾಕಿಸ್ತಾನದ ಮೂಲಕ ಸಮುದ್ರಕ್ಕೆ ಹರಿಸಲಾಗುತ್ತಿದೆ. ಪಾಕಿಸ್ತಾನ ಅದನ್ನು ಬಳಸುತ್ತಿಲ್ಲ, ಭಾರತದ ರೈತರ ಪಾಲಿಗೂ ಇಲ್ಲ. ನಾನು ಈ ವಿಷಯದಲ್ಲಿ ಬಹಳ ಉತ್ಸಾಹದಿಂದ ಮುನ್ನಡೆಯುತ್ತಿದ್ದೇನೆ. ಸಿಂಧೂ ಜಲ ಒಪ್ಪಂದದ ಪ್ರಕಾರ ಭಾರತದ ನೀರಿನ ಹಕ್ಕನ್ನು ಬಳಸಿಕೊಳ್ಳಲು ಅಂದರೆ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಹನಿಹನಿಯನ್ನು ತಡೆದು ಪಂಜಾಬ್, ಜಮ್ಮು-ಕಾಶ್ಮೀರ ಮತ್ತು ಭಾರತದ ರೈತರಿಗೆ ಕೊಡಬೇಕೆಂಬ ದೃಢ ಸಂಕಲ್ಪ ಮಾಡಿದ್ದೇನೆ. ಇದಕ್ಕಾಗಿ ಒಂದು ಕಾರ್ಯಪಡೆಯನ್ನು ರಚಿಸಿದ್ದೇನೆ.

ಸೋದರ ಸೋದರಿಯರೆ, ನಾವು ನಮ್ಮ ಹಕ್ಕನ್ನು ಬಳಸಿಕೊಳ್ಳದೆ ಇರುವುದಕ್ಕೆ, ನಮ್ಮ ರೈತರು ನೀರಿಗಾಗಿ ಪರಿತಪಿಸುತ್ತಿರುವುದಕ್ಕೆ ನೆಪ ಹೇಳುವಂತೆಯೇ ಇಲ್ಲ. ಸೋದರ ಸೋದರಿಯರೇ, ನಿಮ್ಮ ಹೊಲಗಳಿಗೆ ಸಮೃದ್ಧಿಯಾಗಿ ನೀರು ಹರಿಸುವ ಉದ್ದೇಶದಿಂದ ನಾನು ಮಾಡುತ್ತಿರುವ ಕಾರ್ಯಕ್ಕೆ ನಿಮ್ಮ ಆಶೀರ್ವಾದ ಬೇಕು. ನೀರಿನ ಸಮಸ್ಯೆಗೆ ಪರಿಹಾರವಿದೆ. ಎಲ್ಲರೂ ಒಟ್ಟಿಗೆ ಸೇರಿ ದಾರಿ ಹುಡಕಬಹುದು. ಪಾಕಿಸ್ತಾನಕ್ಕೆ ನೀರು ಹರಿದು ಹೋಗುತ್ತಲೇ ಇದೆ, ದೆಹಲಿಯಲ್ಲಿ ಸರ್ಕಾರಗಳು ಬಂದವು, ಹೋದವು. ಆ ಸರ್ಕಾರಗಳು ನಿದ್ರಿಸುತ್ತಿದ್ದವು, ನನ್ನ ರೈತರು ಅಳುತ್ತಲೇ ಇದ್ದರು.

ಸೋದರ ಸೋದರಿಯರೆ, ಪಂಜಾಬ್ ರೈತರಿಗೆ ನೀರು ಸಿಕ್ಕರೆ ಮಣ್ಣಿನಲ್ಲಿ ಚಿನ್ನ ಬೆಳೆದು ದೇಶದ ತಿಜೋರಿ ತುಂಬಿಸುತ್ತಾರೆ. ದೇಶದ ಹೊಟ್ಟೆ ತುಂಬುತ್ತದೆ. ಆ ರೈತರ ಬಗ್ಗೆ ಚಿಂತಿಸುವುದು, ಅವರ ಹಕ್ಕುಗಳನ್ನು ತಲುಪಿಸುವುದಕ್ಕಾಗಿ ದೆಹಲಿಯಲ್ಲಿ ಕುಳಿತಿರುವ ಈ ಭಾರತ ಸರ್ಕಾರವು ಸಹ ಶ್ರೀ ಬಾದಲ್ ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಲಿದೆ.

ಸೋದರ ಸೋದರಿಯರೆ, ಈ ದಿನ ನಾನು ರೈತರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ಪ್ರಧಾನ ಮಂತ್ರಿ
ಶ್ರೀ ಮೋದಿ ಅವರಿಗೆ ರಾಜಕೀಯ ಮಾಡಲು ಬರುವುದಿಲ್ಲ, ಚುನಾವಣೆ ಹತ್ತಿರದಲ್ಲಿದೆ, ರೈತರಿಗೆ ಇಂತಹ ಸಲಹೆ ನೀಡುತ್ತಿದ್ದಾರೆ ಎಂದು ಯಾರಾದರೂ ಹೇಳಬಹುದು.

ನನ್ನ ರೈತ ಸೋದರ ಸೋದರಿಯರೆ, ಚುನಾವಣೆಯ ಲೆಕ್ಕಾಚಾರದಿಂದ ಏನನ್ನಾದರೂ ಕೊಡು-ಕೊಳ್ಳುವುದನ್ನು ನಾನು ಮಾಡಬೇಕಿಲ್ಲ. ರೈತರಿಗೆ ಒಳಿತಾಗಬೇಕು ಎಂಬುದೇ ನನ್ನ ಲೆಕ್ಕಾಚಾರವಾಗಿದೆ. ನನ್ನ ರೈತ ಬಂಧುಗಳೆ, ಹೊಲಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಉಳಿಯುವ ಒಣಕಡ್ಡಿಗಳು, ತರಗಲೆಗಳನ್ನು ನಾವು ಸುಡುತ್ತಿದ್ದೆವು . ನಮಗೆ ಮೊದಲು ಹೀಗೆ ಮಾಡಬಾರದು ಎಂದು ಗೊತ್ತಿರಲಿಲ್ಲ. ಇವುಗಳಿಂದ ಜಮೀನು ಹಾಳಾಗುತ್ತದೆ, ಆದ್ದರಿಂದ ಸುಟ್ಟು ಬಿಡುವುದೇ ಸರಿ ಎಂದು ನಾವು ತಪ್ಪಾಗಿ ತಿಳಿದುಕೊಂಡಿದ್ದೆವು . ಕೆಲವೊಮ್ಮೆ ಅವಸರದಲ್ಲೂ ಈ ರೀತಿ ಸುಡುತ್ತಿದ್ದೆವು. ಆದರೆ ಫಸಲು ಕಟಾವು ಮಾಡಿದ ನಂತರ ಉಳಿದ ಕಸಕಡ್ಡಿ, ತರಗಲೆಗಳನ್ನು ಸುಡದೆ ಹಾಗೆಯೇ ಬಿಡಬೇಕು. ಇದು ನಮ್ಮ ಭೂಮಿತಾಯಿಗೆ ಒಳ್ಳೆಯ ಆರೋಗ್ಯ ನೀಡುತ್ತದೆ ಎಂದು ವಿಜ್ಞಾನವು ಇಂದು ಸಾಬೀತುಪಡಿಸಿದೆ. ಒಂದು ಸಲ ಯಂತ್ರ ತಿರುಗಿಸಿ, ಟ್ರ್ಯಾಕ್ಟರ್ ತಿರುಗಿಸಿ, ಜಮೀನಿನಲ್ಲಿ ಉಳುಮೆ ಮಾಡಿದರೆ ನಿಮ್ಮ ಹೊಲದ ಭೂತಾಯಿಗೆ ಉತ್ತಮ ಆರೋಗ್ಯ ಬರುತ್ತದೆ.

ನನ್ನ ರೈತ ಸೋದರ ಸೋದರಿಯರೆ, ಭೂಮಿತಾಯಿಗೆ ಬಾಯಾರಿಕೆ ಆಗುವಂತೆಯೇ ಹಸಿವು ಸಹ ಆಗುತ್ತದೆ. ಭೂತಾಯಿಗೆ ಆಹಾರವೂ ಬೇಕು. ನಾವು ಈ ಫಸಲಿನ ಉಳಿಕೆಯನ್ನು ಆಹಾರವಾಗಿ ಕೊಟ್ಟರೆ ಭೂಮಿತಾಯಿ ನಮಗೆ ಅದಕ್ಕಿಂತ ಹತ್ತು ಪಟ್ಟು ಆಶೀರ್ವಾದ ಕೊಡುತ್ತಾಳೆ. ಸೋದರ ಸೋದರಿಯರೆ, ನಿಮ್ಮ ಹೊಲ ಕಸುವುನಿಂದ ನಳನಳಿಸುವುದು. ಆದ್ದರಿಂದ ಇನ್ನು ಮುಂದೆ ಇವುಗಳನ್ನು ಸುಡಬೇಡಿ, ಇವು ನಿಮ್ಮ ಐಶ್ವರ್ಯವಾಗಿದೆ. ಲಕ್ಷಾಂತರ, ಕೋಟ್ಯಾಂತರ ರೂಪಾಯಿಗಳ ಐಶ್ವರ್ಯವನ್ನು ಸುಡಬೇಡಿ. ನಾನು ಕೇವಲ ಪರಿಸರದ ಹೆಸರಿನಲ್ಲಿ ಮಾತನಾಡುವ ವ್ಯಕ್ತಿಯಲ್ಲ, ನಾನೇನಿದ್ದರೂ ನೇರವಾಗಿ ರೈತನ ಒಳಿತಿಗಾಗಿ ಮಾತನಾಡುತ್ತಿದ್ದೇನೆ. ಆದ್ದರಿಂದ ಪಂಜಾಬ್ ಆಗಲಿ, ಹರಿಯಾಣವಾಗಲಿ, ಪಶ್ಚಿಮ ಉತ್ತರ ಪ್ರದೇಶವಾಗಲಿ, ಉತ್ತರ ರಾಜಸ್ಥಾನವಾಗಲಿ, ನಾವು ಬೆಳೆಯ ಉಳಿಕೆಯನ್ನು ಸುಡಬಾರದು. ಈಗಂತೂ ವಿಜ್ಞಾನ ಮುಂದೆ ಸಾಗುತ್ತಿದ್ದು, ಈ ಬೇಡದ ಬೆಳೆ ಉಳಿಕೆಯಿಂದ ಇಥೆನಾಲ್ ತಯಾರಿಸುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತಿದೆ. ಭಾರತ ಸರ್ಕಾರವು ಈ ವಿಷಯವಾಗಿ ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ರೈತರಿಗೆ ಅದರ ಲಾಭ ದೊರಕುತ್ತದೆ ಅಂದರೆ ಬೆಳೆಯ ಉಳಿಕೆಯಿಂದಲೂ ಹಣ ಬರುತ್ತದೆ.

ಆದ್ದರಿಂದ ನನ್ನ ಸೋದರ ಸೋದರಿಯರೆ, ಇಂದಿನಿಂದಲೇ ನಮ್ಮ ಈ ಭೂತಾಯಿಯ ಈ ಆಹಾರವನ್ನು ಸುಡುವುದಿಲ್ಲ. ಇದು ಆಕೆಯ ಹಕ್ಕಾಗಿದೆ. ಇದನ್ನು ಭೂಮಿಯಲ್ಲಿ ಉಳುತ್ತೇನೆ, ಅದು ಭೂತಾಯಿಗೆ ಆಹಾರವಾಗುತ್ತದೆ, ತಾಯಿಯ ಹೊಟ್ಟೆಯೂ ತುಂಬುತ್ತದೆ, ಉತ್ತಮ ಫಸಲು ಸಹ ಸಿಗುತ್ತದೆ. ಇದು ನಮ್ಮ ದೇಶದ ಹೊಟ್ಟೆಯನ್ನು ತುಂಬಿಸುತ್ತದೆ ಎಂದು ಸಂಕಲ್ಪ ಮಾಡಿ. ಇದನ್ನು ನಿಮ್ಮಲ್ಲಿ ಮನವಿ ಮಾಡಿಕೊಳ್ಳಲು ಬಂದಿದ್ದೇನೆ.

ಸೋದರ ಸೋದರಿಯರೇ, ಭ್ರಷ್ಟಾಚಾರ ಮತ್ತು ಕಪ್ಪು ಹಣ ಈ ದೇಶದ ಮಧ್ಯಮ ವರ್ಗವನ್ನು ಲೂಟಿ ಮಾಡಿದೆ, ಶೋಷಣೆ ಮಾಡಿದೆ ಮತ್ತು ಬಡವರನ್ನು ಅವರ ಹಕ್ಕುಗಳಿಂದ ವಂಚಿಸಿದೆ ಎಂಬುದು ನಿಮಗೇ ಗೊತ್ತು. ನಾನು ಮಧ್ಯಮ ವರ್ಗದ ಮೇಲಾಗುತ್ತಿರುವ ಶೋಷಣೆಯನ್ನು ತಡೆಯಬೇಕಿದೆ, ಅವರು ಲೂಟಿಯಾಗುತ್ತಿರುವುದನ್ನು ನಿಲ್ಲಿಸಬೇಕಿದೆ ಮತ್ತು ಬಡವರಿಗೆ ಇರುವ ಹಕ್ಕುಗಳನ್ನು ಅವರಿಗೆ ಕೊಡಿಸಬೇಕಿದೆ. ಏನೇ ಕೆಲಸ ಆಗಬೇಕಾದರೂ ಅಷ್ಟೆ, ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದು ಹೋದರೆ ಶಾಲೆಯವರು ಚೆಕ್ ಮೂಲಕ ಇಷ್ಟು ತೆಗೆದುಕೊಳ್ಳುತ್ತೇವೆ, ನಗದು ರೂಪದಲ್ಲಿ ಇಷ್ಟು ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಜಮೀನು ಖರೀದಿಸಬೇಕೆಂದರೆ ನಗದು ಹಣ ಇಷ್ಟು ತೆಗೆದುಕೊಳ್ಳುತ್ತೇವೆ, ಚೆಕ್ ಮೂಲಕ ಇಷ್ಟು ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಆಸ್ಪತ್ರೆ ಸೇರಿದರೆ ನಗದು ಹಣ ಇಷ್ಟು ಕೊಡಿ, ಚೆಕ್ ಮೂಲಕ ಇಷ್ಟು ಕೊಡಿ ಎನ್ನುತ್ತಾರೆ. ಈ ಕಪ್ಪು ಹಣದ ವ್ಯವಹಾರ ದೇಶವನ್ನು ಗೆದ್ದಲಿನಂತೆ ತಿನ್ನುತ್ತಲೇ ಬಂದಿದೆ.

ಆದ್ದರಿಂದ ಸೋದರ ಸೋದರಿಯರೇ, 500 ಮತ್ತು 1000 ರೂಪಾಯಿಯ ನೋಟುಗಳ ಮೇಲೆ ನಿರ್ಬಂಧ ಹೇರಿದೆವು. ಹೊಸ ನೋಟುಗಳು ನಿಧಾನವಾಗಿ ಬರಲಿವೆ . ದೇಶದ ಜನತೆ ಇಷ್ಟೊಂದು ತೊಂದರೆ ತೆಗೆದುಕೊಂಡಿದ್ದೀರಿ, ಕಷ್ಟಗಳನ್ನು ಸಹಿಸಿಕೊಂಡಿದ್ದೀರಿ. ಸೋದರ ಸೋದರಿಯರೆ, ಕೋಟಿ ಕೋಟಿ ಭಾರತೀಯರು ಕಷ್ಟ ಸಹಿಸಿಕೊಂಡಿದ್ದನ್ನು ನನ್ನ ಮಾತುಗಳಲ್ಲಿ ಹೇಳಲು ಪದಗಳೇ ಸಾಲದು. ನೀವು ಇಷ್ಟೆಲ್ಲ ಕಷ್ಟಗಳನ್ನು ಸಹಿಸಿಕೊಂಡರೂ ಈ ಒಂದು ಒಳ್ಳೆಯ ಕೆಲಸದಲ್ಲಿ ಜೊತೆಯಾಗಿ ನಿಂತಿದ್ದೀರಿ, ಪ್ರಾಮಾಣಿಕತೆಯ ಕೆಲಸದ ಜೊತೆ ನಿಂತಿದ್ದೀರಿ.

ಸೋದರ ಸೋದರಿಯರೆ, ಇದು ಕಷ್ಟಗಳ ದಾರಿಯೂ ಹೌದು ಮತ್ತು ಆ ದಾರಿಯಲ್ಲಿ ಸಾಗುತ್ತಿರುವ ನಾನು ನಿಮ್ಮ ಸಹಾಯ ಕೇಳಲು ಬಂದಿದ್ದೇನೆ. ನಿಮ್ಮ ಬಳಿ ಇರುವ ಮೊಬೈಲ್ ಫೋನ್ ಕೇವಲ ಮೊಬೈಲ್ ಫೋನ್ ಅಲ್ಲ. ನಿಮ್ಮ ಮೊಬೈಲ್ ಫೋನ್ ಅನ್ನು ನೀವು ಸ್ವತಃ ಬ್ಯಾಂಕ್ ಆಗಿ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್ ಫೋನ್ ಅನ್ನು ನೀವು ನಿಮ್ಮ ಹಣದ ಚೀಲದಂತೆಯೂ ಮಾಡಿಕೊಳ್ಳಬಹುದು. ಒಂದು ರೂಪಾಯಿ ನಗದು ಹಣ ನಿಮ್ಮಲ್ಲಿ ಇಲ್ಲದಿದ್ದರೂ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಹೇಗಿದೆಯೆಂದರೆ ನಿಮ್ಮ ಹಣ ಬ್ಯಾಂಕಿನಲ್ಲಿ ಜಮೆಯಾಗಿದ್ದರೆ ನೀವು ಮೊಬೈಲ್ ಫೋನ್ ಮೂಲಕ ಖರೀದಿ ಮಾಡಬಹುದು. ಮೊಬೈಲ್ ಫೋನ್ ನಿಂದ ಸಂದಾಯ ಮಾಡಬಹುದು. ಕೈಗಳಿಂದ ನೋಟನ್ನು ಮುಟ್ಟದೆಯೇ ನೀವು ನಿಮ್ಮೆಲ್ಲ ವ್ಯವಹಾರವನ್ನು ನಡೆಸಬಹುದು.

ನಮ್ಮ ದೇಶದಲ್ಲಿ ಇರುವ ಒಟ್ಟು ಕುಟುಂಬ ಗಳ ನಾಲ್ಕು ಪಟ್ಟು ಮೊಬೈಲ್ ಫೋನ್ ಗಳಿವೆ. ಇಂದು ಮೊಬೈಲ್ ಬ್ಯಾಂಕಿಂಗ್ ಮೂಲಕ ವ್ಯವಹಾರ ನಡೆಸಬಹುದು. ಮುಂದೆ ಭವಿಷ್ಯದಲ್ಲಿ ಭ್ರಷ್ಟಾಚಾರಿಗಳು ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಬೇಕಿದೆ, ಕಪ್ಪು ಹಣ ಹೊಂದಿರುವವರು ತಲೆಯೆತ್ತದಂತೆ ಮಾಡಬೇಕಿದೆ ಎಂದಾದರೆ ನೀವು ನಿಮ್ಮ ಮೊಬೈಲ್ ಫೋನ್ ಅನ್ನೇ ಬ್ಯಾಂಕ್ ನ ಶಾಖೆ ಮಾಡಿಕೊಳ್ಳಿ ಎಂದು ನಾನು ಭಾರತೀಯರಲ್ಲಿ ಮನವಿ ಮಾಡುತ್ತಿದ್ದೇನೆ. ಮೊಬೈಲ್ ಫೋನ್ ನಲ್ಲಿ ಬ್ಯಾಂಕುಗಳ ಆ್ಯಪ್ ಗಳಿರುತ್ತವೆ, ಅದನ್ನು ಡೌನ್ ಲೋಡ್ ಮಾಡಿಕೊಳ್ಳಿ. ನಿಮ್ಮ ಭಾಗದಲ್ಲಿ ನಾಗರಿಕರಿಗೆ ಇದರ ತರಬೇತಿ ಕೊಡಿ ಎಂದು ನಾನು ಯುವಜನರಿಗೆ ಕರೆ ಕೊಡುತ್ತೇನೆ. ವಿಶ್ವವಿದ್ಯಾನಿಲಯಗಳಿಗೆ ಹೇಳುತ್ತೇನೆ, ರಾಜಕಾರಣಿಗಳಿಗೆ ಹೇಳುತ್ತೇನೆ. ಪ್ರತಿಯೊಬ್ಬರ ಮೊಬೈಲ್ ನಲ್ಲಿ ಆ್ಯಪ್ ಇದ್ದರೆ ಯಾವುದೇ ಅಂಗಡಿಗೆ ಹೋಗಿ 200 ರೂಪಾಯಿಯ ಸಾಮಾನು ಖರೀದಿಸಿ ಮೊಬೈಲ್ ಫೋನ್ ನಲ್ಲಿ ನಿಮ್ಮ ನಂಬರ್ ಹಾಕಿ. ಆ 200 ರೂಪಾಯಿ ಒಂದೇ ಸೆಕೆಂಡಿನಲ್ಲಿ ಅವರಿಗೆ ಹೋಗುತ್ತದೆ. ಅಂಗಡಿಯವರು ನಮ್ಮ 200 ರೂಪಾಯಿ ಬಂದಿದೆಯೆ ಎಂದು ಮೊಬೈಲ್ ಫೋನ್ ನಲ್ಲಿ ನೋಡಿಕೊಳ್ಳುತ್ತಾರೆ. ಅಲ್ಲಿಗೆ ನಿಮ್ಮ ಕೆಲಸ ಸಲೀಸಾಗಿ ಆಯಿತು.

ಸೋದರ ಸೋದರಿಯರೆ, ಜೇಬಿನಲ್ಲಿ ನೋಟಿನ ಕಂತೆಗಳನ್ನು ತುಂಬಿಕೊಂಡು ಹೋಗುವ, ಕಳ್ಳಕಾಕರಿಗೆ ಹೆದರುವ ಕಾಲ ಹೋಯಿತು. ಸೋದರ ಸೋದರಿಯರೆ, ಖೋಟಾ ನೋಟು, ಈ ಖೋಟಾ ನೋಟು ನಮ್ಮ ದೇಶದ ಯುವಕರನ್ನು ಆಹುತಿ ತೆಗೆದುಕೊಂಡಿದೆ. ನನ್ನ ದೇಶದ ಯುವಕರನ್ನು ಇದರಿಂದ ಪಾರು ಮಾಡಲು ಖೋಟಾ ನೋಟುಗಳನ್ನು ಸಮಾಪ್ತಿಗೊಳಿಸುವುದು ಈ ಕಾಲದ ಅಗತ್ಯವಾಗಿದೆ. ಆದ್ದರಿಂದ ನನ್ನ ಪ್ರೀತಿಯ ಸೋದರ ಸೋದರಿಯರೆ, ಈ ದೇಶವನ್ನು ಮಹಾನ್ ಆಗಿಸಲು ಆರಂಭಿಸಿರುವ ಅಭಿಯಾನಕ್ಕೆ ನೀವು ಸಂಪೂರ್ಣ ಬೆಂಬಲ ನೀಡಿ, ಈ ಅಭಿಯಾನದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಜೊತೆಯಾಗಿ ನಡೆಯಿರಿ ಎಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ, ಮನವಿ ಮಾಡಿಕೊಳ್ಳಲು ಬಂದಿದ್ದೇನೆ. ಇದರಲ್ಲಿ ಪ್ರತಿಯೊಬ್ಬರ ಸಹಾಯ ಬೇಕು ಮತ್ತು ನಮ್ಮ ಪಂಜಾಬ್ ಅನ್ನು ಮುಂದೆ ತನ್ನಿ.

ಶ್ರೀ ಬಾದಲ್ ಅವರಂತಹ ಒಬ್ಬ ಮಹಾನ್ ಮುಖಂಡ ಪಂಜಾಬ್ ಮಣ್ಣಿನಲ್ಲಿ ಜನಿಸಿರುವುದು ನಿಮ್ಮ ಅದೃಷ್ಟ. ಭಾರತದಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಮುಖ್ಯಮಂತ್ರಿ ಯಾರೆಂದರೆ ಶ್ರೀ ಬಾದಲ್ ಎನ್ನುವುದು ಈ ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ಇಷ್ಟು ದೀರ್ಘ ವರ್ಷಗಳವರೆಗೆ ಜನರು ಒಬ್ಬ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟಿದ್ದಾರೆ ಎನ್ನುವುದು ಎಷ್ಟು ದೊಡ್ಡ ತಪಸ್ಸಿನ ಮಾರ್ಗವಾಗಿದೆ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ.

ಬನ್ನಿ ,ಸೋದರ ಸೋದರಿಯರೆ, ಪಂಜಾಬ್ ಸೋದರ ಸೋದರಿಯರೆ, ಪಂಜಾಬ್ ನ ಉಜ್ವಲ ಭವಿಷ್ಯಕ್ಕಾಗಿ ದೆಹಲಿಯ ಭಾರತ ಸರ್ಕಾರವು ನಿಮ್ಮ ಜೊತೆಗಿದೆ. ತುಂಬು ಮನಸ್ಸಿನಿಂದ ನಿಮ್ಮ ಜೊತೆಗಿದೆ. ಒಟ್ಟಾಗಿ ಸಾಗಬೇಕಿದೆ, ನವ ಪಂಜಾಬ್ ನ ನಿರ್ಮಾಣವಾಗಬೇಕಿದೆ, ಬಲಶಾಲಿ ಪಂಜಾಬ್ ನಿರ್ಮಿಸಬೇಕಿದೆ. ಇಲ್ಲಿಯ ಯುವಜನರ ಜೀವನವನ್ನು ಬದಲಿಸುವಂತಹ ಪಂಜಾಬ್ ಅನ್ನು ನಿರ್ಮಿಸಬೇಕಿದೆ. ಈಗ ಎಐಐಎಂಎಸ್ ನಿಂದ ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ. ಇದು ಆರೋಗ್ಯವಂತ ಪಂಜಾಬ್ ನ ನಿರ್ಮಾಣದ ಹಾದಿಯಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆಯಾಗಲಿದೆ.

ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಬಹಳ ಬಹಳ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಶ್ರೀ ಬಾದಲ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.