ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಜ್ಯಸಭೆಯಲ್ಲಿ ಬಾಕಿ ಉಳಿದಿರುವ ನಳಂದ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2013ನ್ನು ಹಿಂಪಡೆಯುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
2009ರ ಅಕ್ಟೋಬರ್ ನಲ್ಲಿ ಥಾಯ್ ಲ್ಯಾಂಡ್ ನಲ್ಲಿ ನಡೆದ 4ನೇ ಪೂರ್ವ ಏಷ್ಯಾ ಶೃಂಗದ ಜಂಟಿ ಮಾಧ್ಯಮ ಹೇಳಿಕೆಯ ಆಧಾರದ ಮೇಲೆ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಇದು ತನ್ನ ಸ್ಥಾಪನೆಯನ್ನು ರಾಜ್ಯೇತರ, ಲಾಭರಹಿತ, ಜಾತ್ಯತೀತ ಮತ್ತು ಸ್ವ-ಆಡಳಿತದ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ರೂಪುಗೊಳ್ಳಲು ಬೆಂಬಲಿಸಿತು. ತದನಂತರ ನಳಂದ ವಿಶ್ವವಿದ್ಯಾಲಯ ಕಾಯಿದೆ 2010ನ್ನು ಸಂಸತ್ತು ಅನುಮೋದಿಸಿದ್ದು 2010ರ ನವೆಂಬರ್ 25ರಿಂದ ಜಾರಿಗೆ ಬಂದಿದೆ.
ನಳಂದ ವಿಶ್ವವಿದ್ಯಾಲಯ ಕಾಯಿದೆ 2010ರಲ್ಲಿನ ಕೆಲವು ಹಾಲಿ ನಿಬಂಧನೆಗಳಿಗೆ ತಿದ್ದುಪಡಿ ತರಲು ಮತ್ತು ಕೆಲವು ಹೊಸ ನಿಬಂಧನೆಗಳನ್ನು ಸೇರ್ಪಡೆ ಮಾಡಲು 2013ರ ಆಗಸ್ಟ್ 26ರಂದು ರಾಜ್ಯಸಭೆಯಲ್ಲಿ ನಳಂದ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ 2013ರನ್ನು ಮಂಡಿಸಲಾಗಿತ್ತು.
ನಳಂದ ವಿಶ್ವವಿದ್ಯಾಲಯ ಕಾಯಿದೆ 2010ರ ಸೆಕ್ಷನ್ 7ರ ಅಡಿಯಲ್ಲಿ ನಳಂದ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಸ್ಥಾಪನೆಯಾಗಿದ್ದು, ಘನತೆವೆತ್ತ ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ 21.11.2016ರಿಂದ ಜಾರಿಗೆ ಬಂದಿದೆ. ಪ್ರಸ್ತಾವಿತ ತಿದ್ದುಪಡಿಗಳೊಂದಿಗೆ ಮುಂದುವರಿಯುವುದಕ್ಕೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ತಿದ್ದುಪಡಿ ಮಸೂದೆ ನಳಂದ ವಿಶ್ವವಿದ್ಯಾಲಯದ ಪ್ರಸಕ್ತ ಆಡಳಿತ ಮಂಡಳಿಯಲ್ಲಿ ಚರ್ಚಿತವಾಗಬೇಕಾಗಿದೆ. ಜೊತೆಗೆ ಹಾಲಿ ಆಡಳಿತ ಮಂಡಳಿ ನಳಂದ ವಿಶ್ವವಿದ್ಯಾಲಯ ಕಾಯಿದೆ 2010ನ್ನು ಸಂಪೂರ್ಣವಾಗಿ ಪರಾಮರ್ಶಿಸಬೇಕಿದೆ ಮತ್ತು ಎಲ್ಲೆಲ್ಲಿ ಅಗತ್ಯವಿದೆಯೋ ಆ ತಿದ್ದುಪಡಿ/ಸೇರ್ಪಡೆಗೆ ಹೊಸದಾಗಿ ಸಲಹೆ ಮಾಡಬೇಕಿದೆ.
ವಿಶ್ವವಿದ್ಯಾಲಯದಲ್ಲಿ ಬೋಧನೆಯನ್ನು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರು 2014ರ ಸೆಪ್ಟೆಂಬರ್ ನಲ್ಲಿ ಉದ್ಘಾಟಿಸಿದ್ದರು. ಗೌರವಾನ್ವಿತ ಭಾರತದ ರಾಷ್ಟ್ರಪತಿಯವರು ವಿಶ್ವವಿದ್ಯಾಲಯಕ್ಕೆ ಸಂದರ್ಶಕರಾಗಿದ್ದು, ಡಾ. ವಿಜಯ್ ಭಟ್ಕರ್ ಕುಲಾಧಿಪತಿ ಮತ್ತು ಪ್ರೊಫೆಸರ್ ಸುನೈನಾ ಸಿಂಗ್ ಕುಲಪತಿ ಆಗಿದ್ದಾರೆ. ಪ್ರಸ್ತುತ ವಿಶ್ವವಿದ್ಯಾಲಯದ ಮೂರು ಶಾಲೆಗಳಲ್ಲಿ ಅಂದರೆ ಐತಿಹಾಸಿಕ ಅಧ್ಯಯನಗಳ ಶಾಲೆ, ಪರಿಸರ ಮತ್ತು ಪರಿಸರಶಾಸ್ತ್ರ ಅಧ್ಯಯನ ಶಾಲೆ ಹಾಗೂ ಬೌದ್ಧಮತ ಅಧ್ಯಯನ ಶಾಲೆಗಳಲ್ಲಿ 116 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 21 ರಾಷ್ಟ್ರಗಳ 35 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳೂ ಸೇರಿದ್ದಾರೆ.
*****
AKT/VBA