Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉಷಾ ಶಾಲೆಯ ಸಿಂಥೆಟಿಕ್ ಟ್ರಾಕ್ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

dsc_4781


ಉಷಾ ಅಥ್ಲೆಟಿಕ್ಸ್ ಶಾಲೆಯ ಸಿಂಥೆಟಿಕ್ ಟ್ರಾಕ್ ಉದ್ಘಾಟನೆಯ ಸಂದರ್ಭದಲ್ಲಿ ಎಲ್ಲ ಕ್ರೀಡಾ ಪ್ರೇಮಿಗಳಿಗೂ ಅಭಿನಂದನೆಗಳು.

ಈ ಟ್ರಾಕ್ ಉಷಾ ಶಾಲೆಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ತರಬೇತಿ ಪಡೆಯುವವರಿಗೆ ಅತ್ಯಾಧುನಿಕ ಸೌಲಭ್ಯ ಒದಗಿಸುತ್ತದೆ. ನಮ್ಮವರೇ ಆದ ಪಯೋಲಿ ಎಕ್ಸ್ ಪ್ರೆಸ್ ‘ಉಡಾನ್ ಪುರಿ’ ಮತ್ತು ಭಾರತದ “ಚಿನ್ನದ ಹುಡುಗಿ’’ ಪಿ.ಟಿ. ಉಷಾ ಅವರು ಈ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿರುವುದನ್ನು ಸ್ಮರಿಸಲು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ. 

ಪಿ.ಟಿ. ಉಷಾ ಅವರು ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹೊಳೆಯುತ್ತಿರುವ ಜ್ಯೋತಿಯಾಗಿದ್ದಾರೆ.

ಅವರು ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ ಮತ್ತು ಒಲಿಂಪಿಕ್ ಫೈನಲ್ ತಲುಪಿ, ಕೊದಲೆಳೆಯ ಅಂತರದಲ್ಲಿ ಪದಕ ವಂಚಿತರಾಗಿದ್ದಾರೆ.

ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಅವರಂತೆ ಕೆಲವರು ಮಾತ್ರವೇ ದಾಖಲೆಗಳನ್ನು ಸಾಧಿಸಿದ್ದಾರೆ.

ಉಷಾ ಅವರೇ ದೇಶ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ಇನ್ನೂ ಉತ್ತಮ ಸಂಗತಿ ಏನೆಂದರೆ ಉಷಾ ಅವರು ಇಂದಿಗೂ ಕ್ರೀಡೆಯೊಂದಿಗೆ ತಮ್ಮ ನಂಟು ಮುಂದುವರಿಸಿದ್ದಾರೆ. ಅವರ ವೈಯಕ್ತಿಕ ಗಮನ ಹಾಗೂ ದೃಷ್ಟಿಕೋನ ಉತ್ತಮ ಫಲಿತಾಂಶ ತರಲಾರಂಭಿಸಿವೆ ಮತ್ತು ಅವರಿಂದ ತರಬೇತಿ ಪಡೆದವರು ಅಂದರೆ ಕುಮಾರಿ ತಿಂತು ಲುಕಾ ಮತ್ತು ಕುಮಾರಿ ಜಿಶ್ನಾ ಮ್ಯಾಥ್ಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ.

ಉಷಾ ಅವರಂತೆಯೇ ಉಷಾ ಶಾಲೆ ಸಹ ಎಲ್ಲ ಸರಳ ಮತ್ತು ಸೀಮಿತ ಸಂಪನ್ಮೂಲ ಬಳಸಿಕೊಂಡು ಉತ್ತಮವಾಗಿ ಬೆಳೆಯುತ್ತಿದೆ.

ಈ ಸಂದರ್ಭದಲ್ಲಿ ನಾನು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಸಿಪಿಡಬ್ಲ್ಯುಡಿಗೆ ಹಲವು ಎಡರು ತೊಡರುಗಳಿಂದ ಆದ ವಿಳಂಬದ ನಡುವೆಯೂ ಈ ಯೋಜನೆ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಎಂದೂ ಮಾಡದೇ ಇರುವುದಕ್ಕಿಂತ ತಡವಾಗಿ ಮಾಡುವುದು ಉತ್ತಮ ಅಲ್ಲವೆ. ನಮ್ಮ ಸರ್ಕಾರದ ಆದ್ಯತೆಯ ವಿಷಯಗಳಲ್ಲಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಅವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದೂ ಒಂದಾಗಿದೆ.

ವಾಸ್ತವವಾಗಿ, ಈ ಯೋಜನೆ ಮಂಜೂರಾಗಿದ್ದು 2011ರಲ್ಲಿ, ಆದರೆ, ಸಿಂಥಟಿಕ್ ಟ್ರಾಕ್ ಗೆ ಕಾಮಗಾರಿ ಆದೇಶ ದೊರಕಿದ್ದು 2015ರಲ್ಲಿ. ಈ ಟ್ರಾಕ್ ಸಂಪೂರ್ಣ PUR ಟ್ರಾಕ್ ಆಗಿದೆ. 

ಇದನ್ನು ಗಾಯಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುವಂತೆ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸ್ಪರ್ಧೆ ನೀಡುವ ರೀತಿ ವಿನ್ಯಾಸಗೊಳಿಸಲಾಗಿದೆ.

ಕ್ರೀಡೆಯು ಸಮಾಜದ ಮಾನವ ಸಂಪನ್ಮೂಲ ಅಭಿವೃದ್ಧಿಯೊಂದಿಗೆ ಆಪ್ತ ನಂಟು ಹೊಂದಿದೆ.

ಕ್ರೀಡೆ ದೇಹವನ್ನು ಆರೋಗ್ಯವಾಗಿಡುವುದರ ಜೊತೆಗೆ ನಮ್ಮ ವ್ಯಕ್ತಿತ್ವವನ್ನೂ ಪರಿವರ್ತಿಸುತ್ತದೆ, ಸಮಗ್ರ ಅಭಿವೃದ್ದಿ ತರುತ್ತದೆ ಎಂದು ನಾನು ಸದಾ ಅಭಿಪ್ರಾಯಪಡುತ್ತೇನೆ. ಇದು ಶಿಸ್ತು ಮತ್ತು ಕಠಿಣ ಶ್ರಮದ ತತ್ವವನ್ನು ಒಡಮೂಡಿಸುತ್ತದೆ.

ಇದು ನಮ್ಮ ಬದುಕಿಗೆ ಕಲಿಕೆಯನ್ನು ಒದಗಿಸುತ್ತದೆ, ಅದು ನಮ್ಮ ಚಿಂತನಾ ಪ್ರಕ್ರಿಯೆಯನ್ನು ಶ್ರೀಮಂತಗೊಳಿಸುತ್ತದೆ. ಕ್ರೀಡಾ ಕ್ಷೇತ್ರ ಒಬ್ಬ ಶ್ರೇಷ್ಠ ಶಿಕ್ಷಕನಂತೆ. ಕ್ರೀಡಾ ರಂಗದಲ್ಲಿ ಒಬ್ಬರು ಕಲಿಯುವ ಅತ್ಯುತ್ತಮ ವಿಷಯವೆಂದರೆ ಸಮಚಿತ್ತತೆ – ಗೆಲುವು ಮತ್ತು ಸೋಲು ಜೀವನದ ಒಂದು ಭಾಗ.

ನಾವು ವಿಜಯಕ್ಕೆ ಹಿಗ್ಗಬಾರದು, ಸೋಲಿಗೆ ಕುಗ್ಗಬಾರದು ಎಂಬುದನ್ನು ಕಲಿಯುತ್ತೇವೆ. ಒಂದು ಸೋಲೇ ಕೊನೆಯಲ್ಲ. ಅದು ಮತ್ತೆ ಯಶಸ್ವಿಯಾಗಿ ಹೊರಹೊಮ್ಮಲು ಮತ್ತು ಅಪೇಕ್ಷೆತ ಫಲಿತಾಂಶ ಪಡೆಯಲು ಆರಂಭ ಮಾತ್ರ.

ಕ್ರೀಡೆ ತಂಡದ ಕಾರ್ಯವನ್ನು ಹೆಚ್ಚಿಸುತ್ತದೆ. ಅದು ಮುಕ್ತತೆಯ ಸ್ಫೂರ್ತಿ ತಂದು, ನಮ್ಮಲ್ಲಿ ಇತರರನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ತರುತ್ತದೆ. ನಮ್ಮ ದೇಶದಲ್ಲಿನ ಯುವಜನರು ತಮ್ಮ ಬದುಕಿನಲ್ಲಿ ಕ್ರೀಡೆಯನ್ನು ಒಂದು ಅವಶ್ಯಕ ಭಾಗ ಎಂದು ಅಳವಡಿಸಿಕೊಳ್ಳಬೇಕು.

ನನಗೆ, ಕ್ರೀಡೆ ಈ ಕೆಳಗಿನ ಲಕ್ಷಣ ಒಳಗೊಂಡಿದೆ

ನಾನು ಸ್ಪೋರ್ಟ್ ಎಂಬ ಪದವನ್ನು ವಿಸ್ತರಿಸಿ ಹೇಳುತ್ತೇನೆ :

ಎಸ್ ಎಂದರೆ ಸ್ಕಿಲ್ (ಕೌಶಲ)

ಪಿ ಎಂದರೆ ಪರ್ ಸಿವರೆನ್ಸ್ (ಸತತ ಪ್ರಯತ್ನ)

ಓ ಎಂದರೆ ಆಪ್ಟಿಮಿಸಮ್ (ಆಶಾವಾದ)

ಆರ್ ಎಂದರೆ ರಿಸೈಲೆನ್ಸ್ (ಚೇತರಿಕೆ)

ಟಿ ಎಂದರೆ ಟೆನಾಸಿಟಿ (ಸೋಲಿನ ಬಳಿಕವೂ ದೃಢಚಿತ್ತ)

ಎಸ್ ಅಂದರೆ ಸ್ಟಾಮಿನಾ (ತ್ರಾಣ ಅಥವಾ ಶಕ್ತಿ)

ಕ್ರೀಡೆ ಕ್ರೀಡಾ ಮನೋಭಾವ ಮೂಡಿಸುತ್ತದೆ, ಅದು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಅವಶ್ಯಕವಾಗಿದೆ.

ಹೀಗಾಗಿಯೇ ನಾನು ಸದಾ ಹೇಳುವುದು – ಜೋ ಖೇಲೆ, ವೋ ಖಿಲೆ – ಯಾರು ಆಡುತ್ತಾರೋ, ಅವರು ಪ್ರಕಾಶಿಸುತ್ತಾರೆ.

ಅಂತರ ಸಂಪರ್ಕಿತ ಮತ್ತು ಅಂತರ ಅವಲಂಬಿತ ವಿಶ್ವದಲ್ಲಿ, ಮೃಧು ಶಕ್ತಿ ಮಹತ್ವವಾದ್ದು. ದೇಶದ ಆರ್ಥಿಕತೆ ಮತ್ತು ಸೇನಾ ಶಕ್ತಿಯೊಂದಿಗೆ, ದೇಶದ ಮೃದು ಶಕ್ತಿ ಅದರ ಕೇಂದ್ರೀಯ ಗುರುತಾಗಿ ಕಾಣುತ್ತದೆ. ಕ್ರೀಡೆ ಮೃದು ಶಕ್ತಿಯ ಮಹತ್ವದ ಭಾಗವಾಗಿದೆ.

ವಿವಿಧ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ವಿಶ್ವಾದ್ಯಂತ ಮನ್ನಣೆ ಮತ್ತು ಅಭಿಮಾನಿಗಳ ದಂಡೇ ಇರುವುದನ್ನು ಪ್ರಸ್ತಾಪಿಸಿದ ಅವರು, ದೇಶ ಕ್ರೀಡೆಯ ಮೂಲಕ ತನ್ನದೇ ಆದ ನೆಲೆ ಕಂಡುಕೊಳ್ಳಬಹುದು. ಯಾವುದೇ ಕ್ರೀಡೆಯ ಸಾಧಕರು, ಜಾಗತಿಕ ಸ್ಫೂರ್ತಿಯ ಮೂಲ. ಅವರ ಯಶಸ್ಸು ಮತ್ತು ಹೋರಾಟದಿಂದ ಯುವಜನರು ಪ್ರೇರೇಪಿತರಾಗುತ್ತಾರೆ. ಎಲ್ಲ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಸಂದರ್ಭದಲ್ಲಿ, ಅದು ಒಲಿಂಪಿಕ್ ಇರಲಿ ಅಥವಾ ವಿಶ್ವಕಪ್ ಇರಲಿ ಅಥವಾ ಇತರ ಯಾವುದೇ ಅಂಥ ವೇದಿಕೆ ಇರಲಿ, ಇಡೀ ವಿಶ್ವವೇ ಅದು ಚಿಕ್ಕದಿರಲಿ ಇಲ್ಲ ದೊಡ್ಡದಿರಲಿ ಅನ್ಯ ದೇಶದ ಸಾಧನೆಯ ಬಗ್ಗೆ ಸಂತೋಷ ಪಡುತ್ತದೆ.

ಇದು ಕ್ರೀಡೆಯ ಒಗ್ಗೂಡಿಸುವ ಶಕ್ತಿ. ಕ್ರೀಡೆ ಮತ್ತು ಸಂಸ್ಕೃತಿಗೆ ಜನರೊಂದಿಗಿನ ನಂಟನ್ನು ಬಲಪಡಿಸುವ ಶಕ್ತಿ ಮತ್ತು ಸಾಮರ್ಥ್ಯ ಇದೆ. ಭಾರತದ ತವರಲ್ಲಿ, ಒಬ್ಬ ಆಟಗಾರ ಇಡೀ ದೇಶದ ಕಲ್ಪನೆಯನ್ನು ಸೆರೆಹಿಡಿಯುತ್ತಾನೆ. ಆತನ ಅಥವಾ ಆಕೆಯ ಪ್ರದರ್ಶನ ಏಕತೆಯ ಶಕ್ತಿಯಾಗಿ ಕೆಲಸ ಮಾಡುತ್ತದೆ- ಪ್ರತಿಯೊಬ್ಬರೂ ಆತ ಅಥವಾ ಆಕೆ ಕ್ರೀಡಾಂಗಣದಲ್ಲಿದ್ದಾಗ ಆತನ ಅಥವಾ ಆಕೆಗಾಗಿ ಪ್ರಾರ್ಥಿಸುತ್ತಾರೆ.

ಈ ಅಥ್ಲೀಟ್ ಗಳ ಜನಪ್ರಿಯತೆ ಅವರ ಕಾಲದಾಚೆಗೂ ಇರುತ್ತದೆ. ಹಲವು ವರ್ಷಗಳ ಕಾಲ ಇರುತ್ತದೆ, ಕ್ರೀಡೆ, ಜ್ಞಾನದ ಅನ್ವೇಷಣೆಯಂತೆ, ಇದು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿದೆ.

ಬಿಲ್ಲುಗಾರಿಕೆ, ಕತ್ತಿವರಸೆ, ಕುಸ್ತಿ, ಮಲ್ಲಕಂಬ, ದೋಣಿ ಸ್ಪರ್ಧೆಯಂಥ ಕ್ರೀಡಾ ಚಟುವಟಿಕೆಗಳು ಹಲವಾರು ಯುಗಗಳಿಂದ ಅಸ್ತಿತ್ವದಲ್ಲಿವೆ.

ಕೇರಳದಲ್ಲಿ, ಕ್ರೀಡೆ ಅಂದರೆ ಕುಟ್ಟಿಯುಂಕೋಲಮ್, ಕಲಾರಿ ಅತ್ಯಂತ ಜನಪ್ರಿಯವಾಗಿವೆ.

ಕೆಸರು ಗದ್ದೆಯ ಕಾಲ್ಚೆಂಡು ಎಷ್ಟು ಜನಪ್ರಿಯ ಎಂಬುದು ನನಗೆ ತಿಳಿದಿದೆ. ನಿಮ್ಮಲ್ಲಿ ಹಲವರಿಗೆ ಸಗೋಲ್ ಕಂಗಜೈ ಬಗ್ಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ, ಇದು ಮೂಲತಃ ಮಣಿಪುರದಿಂದ ಬಂದಿದ್ದು. ಇದು ಪೋಲೋ ಗಿಂತ ಪುರಾತನವಾದ್ದು ಮತ್ತು ಅದನ್ನು ಸಮಾಜದಾದ್ಯಂತ ಆಡಲಾಗುತ್ತದೆ.

ನಾವು ನಮ್ಮ ಸಾಂಪ್ರದಾಯಿಕ ಕ್ರೀಡೆಗಳು ತಮ್ಮ ಜನಪ್ರಿಯತೆ ಕಳೆದುಕೊಳ್ಳದಂತೆ ಖಾತ್ರಿ ಒದಗಿಸಬೇಕು. ದೇಶೀಯ ಕ್ರೀಡೆಗಳನ್ನು ಕೂಡ ಉತ್ತೇಜಿಸಬೇಕು, ಕಾರಣ ಅವು ನಮ್ಮ ಬುದುಕಿನ ಮಾರ್ಗದಿಂದಲೇ ಬಂದವುಗಳಾಗಿವೆ.

ಜನರು ಈ ಕ್ರೀಡೆಗಳನ್ನು ಸ್ವಾಭಾವಿಕವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಆಡುವವರ ವ್ಯಕ್ತಿತ್ವದ ಮೇಲೆ ಮತ್ತು ಬೆಳೆಯುವ ಮನಸ್ಸಿನ ಮೇಲೆ ಸ್ವಾಭಿಮಾನದ ಮೇಲೆ ದೊಡ್ಡ ಧನಾತ್ಮಕ ಪ್ರಭಾವ ಬೀರುತ್ತದೆ.

ಅವುಗಳ ಬೇರು ಬಲವಾಗುತ್ತದೆ. ಇಂದು ವಿಶ್ವ ಯೋಗದ ಬಗ್ಗೆ ನವೀಕೃತ ಆಸಕ್ತಿ ಹೊಂದಿದೆ. ಇಂದು ಯೋಗವನ್ನು ದೇಹವನ್ನು ದೃಢವಾಗಿಟ್ಟುಕೊಳ್ಳಲು, ಆರೋಗ್ಯದ ಉತ್ತಮಿಕೆಗಾಗಿ ಹಾಗೂ ಒತ್ತಡ ನಿವಾರಣೆಯ ಸಾಧನವಾಗಿ ನೋಡಲಾಗುತ್ತಿದೆ. ನಮ್ಮ ಅಥ್ಲೀಟ್ಸ್ ಗಳು ಕೂಡ ಯೋಗವನ್ನು ತಮ್ಮ ತರಬೇತಿಯ ಅವಿಭಾಗ್ಯ ಅಂಗವಾಗಿ ಪರಿಗಣಿಸಬೇಕು. ಅದರ ಅದ್ವಿತೀಯ ಫಲಿತಾಂಶ ಸದಾ ಕಾಣುತ್ತೀರಿ.

ಭಾರತ ಯೋಗದ ತವರಾಗಿ, ಯೋಗವನ್ನು ಜಗತ್ತಿನಾದ್ಯಂತ ಮತ್ತಷ್ಟು ಜನಪ್ರಿಯಗೊಳಿಸುವುದು ನಮ್ಮ ಜವಾಬ್ದಾರಿಯೂ ಆಗಿದೆ. ಯೋಗವನ್ನು ಜಪ್ರಿಯಗೊಳಿಸಿದ ರೀತಿಯಲ್ಲೇ ನಾವು ನಮ್ಮ ಸಾಂಪ್ರದಾಯಿಕ ಕ್ರೀಡೆಗಳನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಲು ಚಿಂತಿಸಬೇಕು.

ಇತ್ತೀಚಿನ ವರ್ಷಗಳಲ್ಲಿ, ಕಬಡ್ಡಿಯಂಥ ಆಟ ಹೇಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳ ಭಾಗ ಆಗಿದೆ ಎಂಬುದನ್ನು ನೀವು ನೋಡಿದ್ದೀರಿ. ಮತ್ತು ನಮ್ಮ ದೇಶದಲ್ಲೂ ದೊಡ್ಡ ಪ್ರಮಾಣದಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಸಾಂಸ್ಥಿಕವಾಗಿಯೂ ಈ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವ ದೊರಕುತ್ತಿದೆ ಮತ್ತು ಈ ಪಂದ್ಯವಾಳಿಗಳನ್ನು ವ್ಯಾಪಕವಾಗಿ ವೀಕ್ಷಿಸುತ್ತಾರೆ ಎಂದು ನಾನು ಕೇಳಿದ್ದೇನೆ. 

ಕಬಡ್ಡಿಯಂತೆಯೇ ನಾವು ದೇಶದ ಮೂಲೆ ಮೂಲೆಯಲ್ಲಿನ ಇತರ ಸ್ಥಳೀಯ ದೇಶೀಯ ಕ್ರೀಡೆಗಳನ್ನು ರಾಷ್ಟ್ರ ಮಟ್ಟಕ್ಕೆ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಇತರ ಕ್ರೀಡಾ ಕಾಯಗಳು ಮತ್ತು ಸಮಾಜದ ಪಾತ್ರವೂ ಪ್ರಮುಖವಾಗಿದೆ.

ನಮ್ಮದು ವೈವಿಧ್ಯಮಯ ಸಂಸ್ಕೃತಿಯ ಶ್ರೀಮಂತ ರಾಷ್ಟ್ರ, 100ಕ್ಕೂ ಹೆಚ್ಚು ಭಾಷೆಗಳು ಮತ್ತು 1600ಕ್ಕೂ ಹೆಚ್ಚು ಉಪ ಭಾಷೆಗಳು, ವಿವಿಧ ಆಹಾರ ಪದ್ಧತಿ, ಉಡುಗೆ ತೊಡುಗೆ ಮತ್ತು ಹಬ್ಬಗಳು ನಮ್ಮಲ್ಲಿವೆ. ಕ್ರೀಡೆ ನಮ್ಮೆಲ್ಲರನ್ನೂ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಸ್ಪರ್ಧೆ, ತರಬೇತಿ, ಪಂದ್ಯಗಳಿಗಾಗಿ ನಿರಂತರ ಪ್ರಯಾಣ ಮತ್ತು ನಿರಂತರ ಸಂವಾದಗಳು ನಮಗೆ ದೇಶದ ಮತ್ತೊಂದು ವಲಯದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.

ಇದು ಏಕ ಭಾರತ, ಶ್ರೇಷ್ಠ ಭಾರತ ಭಾವನೆಯನ್ನು ಬಲಪಡಿಸುತ್ತದೆ ಮತ್ತು ರಾಷ್ಟ್ರೀಯ ಏಕತೆಗೆ ದೊಡ್ಡ ಕೊಡುಗೆ ನೀಡುತ್ತದೆ. 

ನಮ್ಮಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ, ಅವರಿಗೆ ಸೂಕ್ತ ಅವಕಾಶ ನೀಡಬೇಕು ಮತ್ತು ಆ ಪ್ರತಿಭೆಯ ಸದ್ಭಳಕೆಗೆ ಸ್ನೇಹಮಯ ವ್ಯವಸ್ಥೆ ಸೃಷ್ಟಿಸಬೇಕು. ನಾವು “ಖೇಲೋ ಇಂಡಿಯಾ’ಎಂಬ ಕಾರ್ಯಕ್ರಮ ಆರಂಭಿಸಿದ್ದೇವೆ. ಈ ಕಾರ್ಯಕ್ರಮದಡಿ, ಶಾಲಾ ಮತ್ತು ಕಾಲೇಜು ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.ಪ್ರತಿಭಾವಂತರನ್ನು ಗುರುತಿಸುವುದು ಮತ್ತು ಅವರಿಗೆ ಬೆಂಬಲ ನೀಡಿ ಅದನ್ನು ಬಳಸಿಕೊಳ್ಳುವತ್ತ ಗಮನಹರಿಸಲಾಗಿದೆ. ಖೇಲೋ  ಇಂಡಿಯಾ ಕ್ರೀಡಾ ಮೂಲಸೌಕರ್ಯಕ್ಕೂ ಬೆಂಬಲ ನೀಡುತ್ತದೆ. ದೇಶದ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ತಮ್ಮ ಸಾಧನೆಯಿಂದ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ನಾವು ನಮ್ಮ ಹೆಣ್ಣುಮಕ್ಕಳಿಗೆ ಉತ್ತೇಜನ ನೀಡಬೇಕು ಮತ್ತು ಅವರಿಗೆ ಕ್ರೀಡೆಯಲ್ಲಿ ತೊಡಗಲು ಅವಕಾಶನೀಡಬೇಕು. ಹೆಚ್ಚು ಹೆಮ್ಮೆಯ ವಿಷಯ ಎಂದರೆ, ಕಳೆದ ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಪಟುಗಳು ಹಿಂದೆಂದಿಗಿಂತಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಕ್ರೀಡಾ ಸಾಧನೆಯ ಆಚೆ ನೋಡಿದರೆ, ಈ ಪ್ಯಾರಾಲಿಂಪಿಕ್ಸ್ ಮತ್ತು ನಮ್ಮ ಅಥ್ಲೀಟ್ ಗಳ ಪ್ರದರ್ಶನ ದಿವ್ಯಾಂಗ ಸೋದರ ಮತ್ತು ಸೋದರಿಯರ ಬಗ್ಗೆ ನಮ್ಮ ಮನೋಭಾವವನ್ನೇ ಪರಿವರ್ತಿಸುತ್ತದೆ. ಭಾರತದ ಮನೆ ಮಾತಾಗಿರುವ ದೀಪಾ ಮಲಿಕ್ ಪದಕದಿಂದ ಪುರಸ್ಕೃತಳಾಗಿದ್ದನ್ನು ನಾನು ಮರೆಯಲು ಸಾಧ್ಯವೇ ಇಲ್ಲ.

ಆಕೆ ಹೇಳಿದ್ದರು – ‘ಈ ಪದಕದಿಂದ ನಾನು ವಾಸ್ತವವಾಗಿ ವೈಕಲ್ಯವನ್ನೇ ಸೋಲಿಸಿದ್ದೇನೆ’

ಇದು ಈ ನಿಟ್ಟಿನಲ್ಲಿ ಶ್ರೇಷ್ಠ ಸಂಕೇತವಾಗಿದೆ. ನಾವು ಕ್ರೀಡಾ ಸಮೂಹದ ಸೃಷ್ಟಿಗಾಗಿ ನಿರಂತರವಾಗಿ ಶ್ರಮಿಸಬೇಕಾಗಿದೆ.

ಹಿಂದಿನ ದಶಕಗಳಲ್ಲಿ ಕ್ರೀಡೆಯನ್ನು ತಮ್ಮ ಭವಿಷ್ಯದ ಬದುಕೆಂದು ಯಾರೂ ಪರಿಗಣಿಸುತ್ತಿರಲಿಲ್ಲ. ಈಗ ಈ ಚಿಂತನೆ ಬದಲಾಗುತ್ತಿದೆ. ಶೀಘ್ರವೇ ಕ್ರೀಡಾಂಗಣದಲ್ಲಿ ಇದರ ಫಲಿತಾಂಶವನ್ನು ನಾವು ಕಾಣಲಿದ್ದೇವೆ. ಬಲಿಷ್ಠವಾದ ಕ್ರೀಡಾ ಸಂಸ್ಕೃತಿ ದೇಶದ ಕ್ರೀಡಾ ಆರ್ಥಿಕತೆಯ ವೃದ್ದಿಗೆ ನೆರವಾಗುತ್ತದೆ.

ಪೂರ್ಣಪ್ರಮಾಣದ ಪರಿಸರ ವ್ಯವಸ್ಥೆಯನ್ನು ಒಳಗೊಂಡ ಕ್ರೀಡೆ ನಮ್ಮ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಬಲ್ಲುದಾಗಿದೆ.ಕ್ರೀಡಾ ಕೈಗಾರಿಕಾ ವಲಯ ವಿವಿಧ ಘಟಕಗಳಲ್ಲಿ ಅಂದರೆ, ವೃತ್ತಿಪರ ಲೀಗ್ ಗಳು, ಕ್ರೀಡಾ ಸಾಧನಗಳು ಮತ್ತು ಮೈದಾನಗಳು, ಕ್ರೀಡಾ ವಿಜ್ಞಾನ, ವೈದ್ಯಕೀಯ, ಬೆಂಬಲ ಸಿಬ್ಬಂದಿ, ಪೌಷ್ಟಿಕತೆ, ಕೌಶಲ ಅಭಿವೃದ್ಧಿ, ಕ್ರೀಡಾ ನಿರ್ವಹಣೆ, ಕ್ರೀಡಾ ಉಡುಪು ಇತ್ಯಾದಿ ಅವಕಾಶವನ್ನು ಒದಗಿಸಲಿದೆ.

ಕ್ರೀಡೆ ಬಹು ಶತಕೋಟಿ ಡಾಲರ್ ಗಳ ಜಾಗತಿಕ ಕೈಗಾರಿಕೆಯಾಗಿದ್ದು, ಭಾರಿ ಬೇಡಿಕೆಯನ್ನು ಹೊಂದಿದೆ. ಜಾಗತಿಕ ಕ್ರೀಡಾ ಕೈಗಾರಿಕೆಯನ್ನು 600 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.ಭಾರತದಲ್ಲಿ ಇಡೀ ಕ್ರೀಡಾ ವಲಯ 2 ಶತಕೋಟಿ ಅಮೆರಿಕನ್ ಡಾಲರ್ ಮಾತ್ರ.

ಆದಾಗ್ಯೂ, ಭಾರತದಲ್ಲಿ ಕ್ರೀಡೆಗೆ ದೊಡ್ಡ ಸಾಮರ್ಥ್ಯವಿದೆ. ಭಾರತ ಕ್ರೀಡಾ ಪ್ರೇಮದ ರಾಷ್ಟ್ರ. ನಮ್ಮ ದೇಶದ ಯುವಕರು ಈಗ ನಡೆದಿರುವ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ನೋಡುವಂತೆಯೇ ಇಪಿಎಲ್ ಫುಟ್ಬಾಲ್ ಅತವಾ ಎನ್.ಬಿ.ಎಂ. ಬ್ಯಾಸ್ಕೆಟ್ ಬಾಲ್ ಮತ್ತು ಎಫ್.1 ರೇಸ್ ಸಹ ನೋಡುತ್ತಾರೆ. ಅವರು ನಾನು ಮೊದಲೇ ಹೇಳಿದಂತೆ ಕಬಡ್ಡಿಗೂ ಆಕರ್ಷಿತರಾಗಿದ್ದಾರೆ. ನಮ್ಮ ಕ್ರೀಡಾಂಗಣಗಳು ಮತ್ತು ಮೈದಾನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ರಜಾ ದಿನಗಳಲ್ಲಿ ಹೊರಗೆ ಹೋಗಿ ಆಟವಾಡುವಂತಿರಬೇಕು. ಶಾಲಾ ಕಾಲೇಜುಗಳ ಮೈದಾನಗಳು ಅಥವಾ ಆಧುನಿಕ ಸೌಲಭ್ಯವುಳ್ಳ ಜಿಲ್ಲಾ ಮೈದಾನಗಳು ಪೂರ್ಣ ಬಳಕೆಯಾಗಬೇಕು.

ನಾನು ನನ್ನ ಮಾತು ಮುಗಿಸುವ ಮುನ್ನ, ಕೇರಳ ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪ್ರಶಂಸಿಸಲೇಬೇಕು. ಭಾರತಕ್ಕಾಗಿ ಆಡಿದ ಪ್ರತಿಯೊಬ್ಬ ಆಟಗಾರರನ್ನೂ ನಾನು ಅಭಿನಂದಿಸುತ್ತೇನೆ.ಉತ್ಕೃಷ್ಟತೆಗಾಗಿ ಶ್ರಮಿಸುವ ಕ್ರೀಡಾ ಪಟುಗಳ ನಿಲುವನ್ನು ನಾನು ಗೌರವಿಸುತ್ತೇನೆ.

ಉಷಾ ಶಾಲೆಯ ಭವ್ಯ ಭವಿಷ್ಯಕ್ಕಾಗಿ ನಾನು ಶುಭ ಕೋರುತ್ತೇನೆ ಮತ್ತು ಈ ಹೊಸ ಸಿಂಥೆಟಿಕ್ ಟ್ರಾಕ್ ಹೊಸ ಎತ್ತರಕ್ಕೆ ಏರಲು ಅವರಿಗೆ ನೆರವಾಗಲಿ. ಮತ್ತು 2020ರ ಟೋಕಿಯೋ ಒಲಿಂಪಿಕ್ಸ್ ಸೇರಿದಂತೆ  ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿನ ನಮ್ಮ ಪಾಲ್ಗೊಳ್ಳುವಿಕೆಗೆ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ.

ನಾವು 2022ರಲ್ಲಿ ನಮ್ಮ ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಕ್ರೀಡೆಯಲ್ಲೂ  ಗುರಿ ನಿರ್ಧರಿಸಿಕೊಳ್ಳುವಂತೆ ಮತ್ತು ಅದನ್ನು ಸಾಕಾರಗೊಳಿಸಲು ಸಂಕಲ್ಪ ಮಾಡುವಂತೆ ನಾನು ಕ್ರೀಡಾ ಸಮುದಾಯಕ್ಕೆ ಮನವಿ ಮಾಡುತ್ತೇನೆ.

ಒಲಿಂಪಿಕ್ಸ್ ಮತ್ತು ವಿಶ್ವ ಸ್ಪರ್ಧೆಗಳಲ್ಲಿ ಉಷಾ ಶಾಲೆ ಟ್ರಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಹೆಚ್ಚಿನ ಚಾಂಪಿಯನ್ನರನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತ ಸರ್ಕಾರ, ಅಥ್ಲೆಟಿಕ್ಸ್ ನಲ್ಲಿ ಔನ್ನತ್ಯ ಸಾಧಿಸಲು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಎಲ್ಲ ಸಾಧ್ಯ ನೆರವನ್ನೂ ಒದಗಿಸುತ್ತದೆ.

ಧನ್ಯವಾದಗಳು

ತುಂಬಾ ತುಂಬಾ ಧನ್ಯವಾದಗಳು

***

AKT/SH/SK