Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಿಂದೂಸ್ತಾನ್ ಟೈಮ್ಸ್ ನ ನಾಯಕತ್ವ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ಹಿಂದೂಸ್ತಾನ್ ಟೈಮ್ಸ್ ನ ನಾಯಕತ್ವ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ


ಶೋಭನಾ ಭಾರತಿಯಾ ಅವರೆ,
ಉಪಸ್ಥಿತರಿರುವ ಎಲ್ಲ ಮಹಾನುಭಾವರೆ,
ಸೋದರ ಸೋದರಿಯರೆ,
 
ಮತ್ತೊಮ್ಮೆ ನಿಮ್ಮ ನಡುವೆ ಬರುವ ಅವಕಾಶ ನನಗೆ ಸಿಕ್ಕಿದೆ. ಬಹಳಷ್ಟು ಪರಿಚಿತ ಮುಖಗಳೂ ಕಾಣುತ್ತಿವೆ. ಮತ್ತೊಮ್ಮೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹಿಂದೂಸ್ತಾನ್ ಟೈಮ್ಸ್ ಗ್ರೂಪ್ ಮತ್ತು ಅದರ ಓದುಗರಿಗೆ ನಾನು ಬಹಳ ಆಭಾರಿಯಾಗಿದ್ದೇನೆ.
 
ಜೊತೆಗಾರರೆ, ಎರಡು ವರ್ಷಗಳ ಹಿಂದೆ ನಾನು ಈ ಸಮಾವೇಶದಲ್ಲಿ ಭಾಗವಹಿಸಿದ್ದೆ. “Towards a Brighter India” ಎಂಬುದು ಅಂದಿನ ವಿಷಯವಾಗಿತ್ತು. ಕೇವಲ ಎರಡು ವರ್ಷ, ಎರಡೇ ವರ್ಷಗಳಲ್ಲಿ ನಾವು ಇಂದು “The Irreversible Rise of India” ಎಂಬ ವಿಷಯವಾಗಿ ಮಾತನಾಡುತ್ತಿದ್ದೇವೆ. ಇದು ಕೇವಲ ವಿಷಯದ ಬದಲಾವಣೆಯಲ್ಲ. ಇದು ದೇಶದ ವಿಚಾರಧಾರೆಯಲ್ಲಿ ಆದ ಬದಲಾವಣೆ, ದೇಶದ ಆತ್ಮವಿಶ್ವಾಸದಲ್ಲಿ ಆದ ಬದಲಾವಣೆಯ ಸಂಕೇತವಾಗಿದೆ. 
 
ನಾವು ದೇಶವನ್ನು ಸಂಪೂರ್ಣವಾಗಿ ನೋಡುವುದಾದರೆ, ಅಸ್ತಿತ್ವದಲ್ಲಿರುವ ಒಂದು ಜೀವಂತ ವಸ್ತುವಿನಂತೆ ಭಾವಿಸುವುದಾದರೆ ಈಗ ನಮ್ಮ ದೇಶದಲ್ಲಿ ಕಾಣುತ್ತಿರುವ ಸಕಾರಾತ್ಮಕ ದೃಷ್ಟಿಕೋನವು ಮೊದಲೆಂದೂ ಇರಲೇ ಇಲ್ಲ. ದೇಶದ ಬಡವರು, ಯುವಜನರು, ಮಹಿಳೆಯರು, ಕೃಷಿಕರು, ಶೋಷಿತರು, ವಂಚಿತರು ತಮ್ಮ ಸಾಮರ್ಥ್ಯ, ತಮ್ಮ ಸಂಪನ್ಮೂಲಗಳು, ತಮ್ಮ ಕನಸುಗಳ ಬಗ್ಗೆ ಹಿಂದೆ ಇಷ್ಟೊಂದು ಭರವಸೆ ಇಟ್ಟುಕೊಂಡಿದ್ದು ನನಗೆ ನೆನಪಾಗುತ್ತಿಲ್ಲ.
ಈ ಭರವಸೆ ಈಗ ಬಂದಿದೆ. ನಾವು ನೂರಾ ಇಪ್ಪತ್ತೈದು ಕೋಟಿ ಭಾರತೀಯರು ಒಟ್ಟಾಗಿ ಇದಕ್ಕಾಗಿ ಹಗಲು-ರಾತ್ರಿಯನ್ನು ಒಂದೇ ಆಗಿಸಿದ್ದೇವೆ. ದೇಶವಾಸಿಗಳಿಗೆ ತಮ್ಮ ಮೇಲೆ ಭರವಸೆ, ದೇಶದ ಮೇಲೆ ಭರವಸೆ… ಯಾವುದೇ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಇದೇ ಮಂತ್ರವಾಗಿದೆ.
ಇಂದು ಗೀತಾ ಜಯಂತಿಯಾಗಿದೆ. ಭಗವದ್ಗೀತೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಲಾಗಿದೆ:
 
ಉದ್ಧರೇತ್ ಆತ್ಮನ್ ಆತ್ಮಾನಾಮ್ ನ ಆತ್ಮಾನಮ್ ಅವಸಾದಯೇತ್ ಆತ್ಮೇವ ಆತ್ಮನೋ ಬಂಧು ಆತ್ಮೇವ ರಿಪುರ್ ಆತ್ಮನಾ
ಸ್ವತಃ ನಿನ್ನನ್ನು ನೀನು ಮೇಲಕ್ಕೆತ್ತು, ನಕಾರಾತ್ಮಕ ವಿಚಾರಗಳನ್ನು ತಳ್ಳಿ ಹಾಕು, ನೀವೇ ನಿಮ್ಮ ಮಿತ್ರರು ಮತ್ತು ನೀವೇ ನಿಮ್ಮ ಶತ್ರು
ಆದ್ದರಿಂದ ಭಗವಾನ್ ಬುದ್ಧ ಸಹ ಈ ಮಾತನ್ನು ಹೇಳಿದ್ದರು-
‘ಅಪ್ಪ್ ದೀಪೊ  ಭವ್’ ಅಂದರೆ ನಿಮ್ಮ ಬೆಳಕು ನೀವೇ ಆಗಿ ಎಂದರ್ಥ.
 
ನೂರಾ ಇಪ್ಪತ್ತೈದು ಕೋಟಿ ಭಾರತೀಯರಲ್ಲಿ ಹೆಚ್ಚುತ್ತಿರುವ ಭರವಸೆ, ಈ ದೇಶದ ಪ್ರಗತಿಗೆ ಒಂದು ದೃಢವಾದ ಬುನಾದಿಯಾಗುತ್ತಿದೆ. ಇಲ್ಲಿ ಕುಳಿತ ಪ್ರತಿಯೊಬ್ಬ ವ್ಯಕ್ತಿಯಿಂದ ಹಿಡಿದು ಈ ಹೋಟೆಲ್ ನ ಹೊರಗೆ ಯಾರೋ ಆಟೊ ಓಡಿಸುತ್ತಿದ್ದಾರೆ, ಎಲ್ಲೋ ಸೈಕಲ್ ರಿಕ್ಷಾ ಎಳೆಯುತ್ತಾರೆ, ಯಾವುದೋ ಜಮೀನಿನಲ್ಲಿ ಹಾಳಾದ ಬದುಗಳನ್ನು ಸರಿಪಡಿಸುತ್ತಿದ್ದಾರೆ, ಎಲ್ಲೋ ಮಂಜಿನಲ್ಲಿ ರಾತ್ರಿಯಿಡೀ ಕಾವಲು ಕಾದ ನಂತರ ಈಗ ಯಾವುದೋ ಟೆಂಟ್ ನಲ್ಲಿ ಮಲಗಿದ್ದಾರೆ, ಆತ ತನ್ನ ಭಾಗದ ತಪಸ್ಸು ಮಾಡಿದ್ದಾರೆ. ಹೀಗೆ ಪ್ರತಿಯೊಬ್ಬ ಭಾರತೀಯನೂ ಮಾಡಿದ ತಪಸ್ಸಿನ ಫಲದಿಂದಲೇ ನಾವು “Towards a Brighter India”ದಿಂದ ಮುಂದೆ ಸಾಗಿ Irreversible Rise of India ಕುರಿತು ಮಾತನಾಡುತ್ತಿದ್ದೇವೆ.
 
ಜೊತೆಗಾರರೆ, 2014ರಲ್ಲಿ ದೇಶದ ಜನರು ಕೇವಲ ಸರ್ಕಾರ ಬದಲಿಸಲೆಂದು ವೋಟು ನೀಡಿರಲಿಲ್ಲ. 2014ರಲ್ಲಿ ಅವರು ವೋಟು ನೀಡಿದ್ದು ದೇಶ ಬದಲಿಸುವುದಕ್ಕಾಗಿ, ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕಾಗಿ, ಅದು ಶಾಶ್ವತವಾಗಿರಲಿ, ಮರಳಿ ಹಿಂದಕ್ಕೆ ಹೋಗದಂತಿರಲಿ ಎಂದು  ಮತ ನೀಡಿದ್ದರು. ಸ್ವಾತಂತ್ರ್ಯದ ನಂತರ ಇಷ್ಟು ವರ್ಷಗಳ ಬಳಿಕವೂ ನಮ್ಮ ವ್ಯವಸ್ಥೆ ದುರ್ಬಲವಾಗಿದ್ದು ನಮ್ಮ ದೇಶದ ಯಶಸ್ಸಿಗೆ ಅಡ್ಡಿಯಾಗುತ್ತಿತ್ತು.
ಅದು ಎಂತಹ ವ್ಯವಸ್ಥೆಯಾಗಿತ್ತೆಂದರೆ ದೇಶದ ಸಾಮರ್ಥ್ಯಗಳಿಗೆ ನ್ಯಾಯ ಒದಗಿಸುತ್ತಿರಲಿಲ್ಲ. ದೇಶದಲ್ಲಿ ಎಲ್ಲ ಕಡೆ ಒಬ್ಬರಲ್ಲಾ ಒಬ್ಬರು ಈ ವ್ಯವಸ್ಥೆಯೊಂದಿಗೆ ಹೋರಾಡಬೇಕಾಗಿತ್ತು. ಜನರು ವ್ಯವಸ್ಥೆಯೊಂದಿಗೆ ಈ ರೀತಿ ಹೋರಾಡುವುದನ್ನು ನಿಲ್ಲಿಸುವುದು, ಅವರ ಜೀವನದಲ್ಲಿ ಮತ್ತೆ ಹಿಂದಕ್ಕೆ ಹೋಗದಂತಹ ಬದಲಾವಣೆ ತರುವುದು, ಆರಾಮವಾಗಿ ಜೀವಿಸುವಂತೆ ಮಾಡುವುದು ನನ್ನ ಪ್ರಯತ್ನವಷ್ಟೇ ಅಲ್ಲ, ಬದ್ಧತೆಯೂ ಆಗಿದೆ.
 
ಸಣ್ಣ ಸಣ್ಣ ಸಂಗತಿಗಳಿಗೆ, ರೈಲು-ಬಸ್ಸು ಟಿಕೆಟ್ ಗಾಗಿ, ಅಡುಗೆ ಅನಿಲ ಸಂಪರ್ಕಕ್ಕಾಗಿ, ವಿದ್ಯುತ್ ಸಂಪರ್ಕಕ್ಕಾಗಿ, ಆಸ್ಪತ್ರೆಗೆ ದಾಖಲಾಗಲು, ಪಾಸ್ ಪೋರ್ಟ್ ಪಡೆಯಲು, ಆದಾಯ ತೆರಿಗೆ ರೀಫಂಡ್ ಪಡೆಯಲು ಅವರು ಕಷ್ಟ ಪಡಬಾರದು.
 
ಜೊತೆಗಾರರೆ, ಭ್ರಷ್ಟಾಚಾರ ಮುಕ್ತ, ನಾಗರಿಕ ಕೇಂದ್ರಿತ ಮತ್ತು ಅಭಿವೃದ್ಧಿ ಸ್ನೇಹಿ ಪರಿಸರ ವ್ಯವಸ್ಥೆ ಈ ಸರ್ಕಾರದ ಎಲ್ಲಕ್ಕಿಂತ ಪ್ರಮುಖ ಆದ್ಯತೆಯಾಗಿದೆ. ನೀತಿಗಳ ಮೇಲೆ ಆಧಾರಿತವಾದ, ತಂತ್ರಜ್ಞಾನ ಆಧಾರಿತ, ಪಾರದರ್ಶಕತೆಯ ಮೇಲೆ ಆಧಾರಿತವಾದ ಇಂತಹ ಒಂದು ಗಡಿಬಿಡಿ ಇಲ್ಲದ, ಸೋರಿಕೆ ಇಲ್ಲದ ಸಂದರ್ಭ ತೀರಾ ಕಡಿಮೆ ಇರುವಂತಿರಬೇಕು. 
 
ಜನಧನ್ ಯೋಜನೆಯ ಕುರಿತು ಮಾತನಾಡುವುದಾದರೆ ಇದು ಬಡವರ ಜೀವನದಲ್ಲಿ ತಂದಂತಹ ಬದಲಾವಣೆಯ ಕುರಿತು ಈ ಹಿಂದೆ ಯೋಚಿಸಲು ಸಹ ಸಾಧ್ಯವಾಗುತ್ತಿರಲಿಲ್ಲ. ಮೊದಲು ಬಡವರನ್ನು ಬ್ಯಾಂಕ್ ನ ಬಾಗಿಲಲ್ಲೇ ತಿರಸ್ಕಾರದಿಂದ ಓಡಿಸಲಾಗುತ್ತಿತ್ತು, ಅದೇ ಈಗ ಅವರ ಬಳಿ ತಮ್ಮದೇ ಬ್ಯಾಂಕ್ ಖಾತೆಯಿದೆ. ಜನಧನ್ ಖಾತೆಯನ್ನು ತೆರೆಯುತ್ತಿರುವ ಇವರಿಗೆ ರುಪೇ ಡೆಬಿಟ್ ಕಾರ್ಡ್ ಸಹ ನೀಡಲಾಗುತ್ತಿದೆ. ನಮ್ಮ ದೇಶದ ನೂರಾ ಇಪ್ಪತ್ತೈದು ಕೋಟಿ ಜನರಲ್ಲಿ ಇಂತಹ ಜನರ ಸಂಖ್ಯೆ 30 ಕೋಟಿಗಿಂತ ಅಧಿಕವಾಗಿದೆ.
 
ಬ್ಯಾಂಕಿಗೆ ಹೋಗಿ ಹಣ ಕಟ್ಟುತ್ತಿರುವ, ರುಪೇ ಡೆಬಿಟ್ ಕಾರ್ಡ್ ಬಳಸುತ್ತಿರುವ ಆ ಬಡವರ ಆತ್ಮವಿಶ್ವಾಸ ಹೇಗೆ ಹೆಚ್ಚಿದೆ ಎಂದು ಯೋಚಿಸಿ. ಈ ಆತ್ಮವಿಶ್ವಾಸ, ಈ ಉತ್ಸಾಹ ಈಗ ಶಾಶ್ವತವಾಗಿದ್ದು ಇದನ್ನು ಯಾರೂ ಬದಲಿಸಲು ಆಗುವುದಿಲ್ಲ.
 
ಇದೇ ರೀತಿ ಉಜ್ವಲ ಯೋಜನೆ ಇದೆ. ಹಳ್ಳಿಯಲ್ಲಿ ವಾಸಿಸುವ ಮೂರು ಕೋಟಿಗಿಂತ ಹೆಚ್ಚು ಮಹಿಳೆಯರ ಜೀವನವನ್ನು ಈ ಯೋಜನೆಯು ಸದಾಕಾಲಕ್ಕೆ ಬದಲಿಸಿದೆ. ಅವರಿಗೆ ಕೇವಲ ಉಚಿತ ಅಡುಗೆ ಅನಿಲ ಸಂಪರ್ಕ ದೊರೆತಿರುವುದಷ್ಟೇ ಅಲ್ಲ, ಅವರಿಗೆ ಸುರಕ್ಷೆಯೂ ಸಿಕ್ಕಿದೆ, ಆರೋಗ್ಯ ದೊರೆತಿದೆ, ಕುಟುಂಬದ ಜೊತೆ ಕಳೆಯಲು ಸಮಯ ಸಿಕ್ಕಿದೆ.
 
ಸ್ವಚ್ಛ ಭಾರತ್ ಮಿಷನ್ ನಿಂದ ಕೋಟ್ಯಂತರ ಮಹಿಳೆಯರ ಜೀವನದಲ್ಲಿ ಬಂದಂತಹ ಬದಲಾವಣೆಗಳ ಬಗ್ಗೆಯೂ ಯೋಚಿಸಿ. ಸರ್ಕಾರವು ಕೇವಲ ಶೌಚಾಲಯವನ್ನು ಕಟ್ಟಿಸಿಲ್ಲ, ಆ ಕೋಟ್ಯಂತರ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಸಾಯಂಕಾಲ ಆಗುವುದನ್ನೇ ಸಹನೆಯಿಂದ ಕಾಯಬೇಕಾದಂತಹ ಪರಿಸ್ಥಿತಿಯಿಂದ ಮುಕ್ತಿ ದೊರಕಿಸಿಕೊಟ್ಟಿದೆ.
 
ಕೆಲವು ಜನರು ಸ್ವಲ್ಪವೇ ಗಲೀಜಿನ ಫೋಟೊಗಳನ್ನು ತೆಗೆದು ಚರ್ಚೆ ಮಾಡುತ್ತಿರಬಹುದು, ಬರೆಯುತ್ತಿರಬಹುದು, ಟಿವಿಯಲ್ಲಿ ತೋರಿಸುತ್ತಿರಬಹುದು. ಆದರೆ ಈ ಅಭಿಯಾನವು ಯಾವ ರೀತಿಯಲ್ಲಿ ಮರಳಿ ಹಿಂದಕ್ಕೆ ಹೋಗಲಾಗದಂತಹ ಒಳ್ಳೆಯ ಬದಲಾವಣೆ ತಂದಿದೆ ಎಂದು ಜನರಿಗೆ ತಿಳಿದಿದೆ.
 
ಸೋದರ ಸೋದರಿಯರೆ, ಈ ಹಾಲ್ ನಲ್ಲಿ ಕುಳಿತ ಎಷ್ಟು ಜನರಿಗೆ ಇದು ಸಂಬಂಧಿಸಿದ್ದಿರಬಹುದು ಎಂದು ನನಗೆ ಗೊತ್ತಿಲ್ಲ. ಆದರೆ ನೀವು ಇಲ್ಲಿಂದ ಹೋದ ಬಳಿಕ ಪಾರ್ಕಿಂಗ್ ಟಿಪ್ಸ್ ಎಂದು ಎಷ್ಟು ಹಣ ಕೊಡುತ್ತೀರೊ ಅದಕ್ಕಿಂತಲೂ ಬಹಳ ಕಡಿಮೆ ಹಣದಲ್ಲಿ ಇಂದು ಬಡವರು ಜೀವ ವಿಮೆ ಮಾಡಿಸಲು ಆಗುತ್ತಿದೆ.
ಯೋಚಿಸಿ, ತಿಂಗಳಿಗೆ ಕೇವಲ ಒಂದು ರೂಪಾಯಿ ಹಣದಿಂದ ಅಪಘಾತ ವಿಮೆ ಮತ್ತು ಪ್ರತಿದಿನ 90 ಪೈಸೆ ಕಂತಿನಿಂದ ಜೀವ ವಿಮೆ ಸಾಧ್ಯವಾಗಿದೆ. ಪ್ರಸ್ತುತ ದೇಶದ 15 ಕೋಟಿಗಿಂತ ಹೆಚ್ಚು ಬಡವರು ಸರ್ಕಾರದ ಈ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ. ಈ ಯೋಜನೆಗಳ ಅಡಿಯಲ್ಲಿ ಬಡವರಿಗೆ ಸುಮಾರು 1800 ಕೋಟಿ ರೂಪಾಯಿಗಳನ್ನು ಹಕ್ಕುದಾರರಿಗೆ ಪಾವತಿಸಲಾಗಿದೆ. ಇಷ್ಟು ಹಣವನ್ನು ಯಾವುದೇ ಸರ್ಕಾರವು ನೀಡಿದ್ದರೆ ಅದನ್ನು ದೊಡ್ಡದಾಗಿ ಹೇಳಿಕೊಳ್ಳುತ್ತಿತ್ತೇನೊ.
ಈಗ ಬಡವರಿಗಾಗಿ ಇಷ್ಟೆಲ್ಲ ಕೆಲಸಗಳಾಗಿವೆ, ಹಿಂದೆ ಇದರತ್ತ ಗಮನ ಕೊಟ್ಟಿದ್ದರು ಎಂದು ನನಗೆ ಅನ್ನಿಸುವುದಿಲ್ಲ. ಇದು ಸಹ ಒಂದು ಸತ್ಯವಾಗಿದ್ದು ಇದನ್ನು ಒಪ್ಪಿಕೊಂಡು ನಡೆಯುತ್ತೇನೆ. ಮತ್ತೊಂದು ಉದಾಹರಣೆ ಎಲ್ ಇಡಿ ದೀಪಗಳದ್ದು. ಹಿಂದಿನ ಸರ್ಕಾರದ ಅವಧಿಯಲ್ಲಿ ಮುನ್ನೂರು, ಮುನ್ನೂರ ಐವತ್ತು ರೂಪಾಯಿಗೆ ಸಿಗುತ್ತಿದ್ದ ಎಲ್ ಇಡಿ ದೀಪಗಳು ಈಗ ಮಧ್ಯಮ ವರ್ಗದ ಕುಟುಂಬಗಳಿಗೆ ಸುಮಾರು 50 ರೂಪಾಯಿಗೇ ಸಿಗುತ್ತಿದೆ. ‘ಉಜಾಲಾ’ ಯೋಜನೆ ಪ್ರಾರಂಭವಾದ ಬಳಿಕ ದೇಶದಲ್ಲಿ ಇದುವರೆಗೆ ಸುಮಾರು 28 ಕೋಟಿ ಎಲ್ ಇಡಿ ದೀಪಗಳು ಮಾರಾಟವಾಗಿವೆ. ಈ ದೀಪಗಳಿಂದ ಜನರಿಗೆ ಒಟ್ಟಾರೆ ಸುಮಾರು 14 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಹಣ ಉಳಿತಾಯವಾಗಿದೆ.
 
ಉಳಿತಾಯವೆಂದರೆ ವಿದ್ಯುತ್ ಬಿಲ್ ಕಡಿಮೆಯಾದ ಮೇಲೆ ಸ್ವಲ್ಪ ಸಮಯದಲ್ಲೇ ಅದಕ್ಕೆ ಫುಲ್ ಸ್ಟಾಪ್ ಆಗುತ್ತದೆ ಎಂದಲ್ಲ. ಈ ಉಳಿತಾಯವು ನಿರಂತರವಾಗಿ ಆಗುತ್ತಲೇ ಇರುವಂತಹುದು. ಈ ಉಳಿತಾಯವೂ ಈಗ ಶಾಶ್ವತವಾಗಿದೆ.
 
ಸೋದರ ಸೋದರಿಯರೆ, ಹಿಂದಿನ ಸರ್ಕಾರಗಳಿಗೆ ಹೀಗೆ ಮಾಡುವುದಕ್ಕೆ ಏನಾದರೂ ಅಡಚಣೆ ಇತ್ತೊ, ಇಲ್ಲವೊ ನನಗೆ ತಿಳಿಯದು. ಆದರೆ ವ್ಯವಸ್ಥೆಯಲ್ಲಿ ಶಾಶ್ವತ ಬದಲಾವಣೆಗಳನ್ನು ತರಲು ನಿರ್ಧಾರ ತೆಗೆದುಕೊಳ್ಳುವುದಕ್ಕೆ, ದೇಶದ ಹಿತಕ್ಕಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಯಾವುದೇ ಅಡಚಣೆ ಇರುವುದಿಲ್ಲ ಎಂದಷ್ಟೇ ನನಗೆ ಗೊತ್ತು.
 
ದೇಶವನ್ನು ಜಾದೂ ಮಾಡುವ ಮೂಲಕ ಬದಲಿಸಲಾಗುವುದಿಲ್ಲ, ಅವರು ಹತಾಶೆ ಮತ್ತು ನಿರಾಶೆಯಲ್ಲಿ ಮುಳುಗಿದ್ದಾರೆ. ಈ ಅಪ್ರೋಚ್ ಏನೇ ಹೊಸತನ್ನು ಮಾಡದಂತೆ, ಆವಿಷ್ಕಾರ ಮಾಡದಂತೆ ನಮ್ಮನ್ನು ತಡೆಯುತ್ತದೆ.
 
ಇದು ನಮ್ಮನ್ನು ನಿರ್ಧಾರ ಕೈಗೊಳ್ಳದಂತೆ ತಡೆಯುತ್ತದೆ. ಆದ್ದರಿಂದ ನಮ್ಮ ಸರ್ಕಾರದ ಅಪ್ರೋಚ್ ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಯಾರಿಯಾಗೆ ಬೇವು ಲೇಪಿಸುವ ವಿಷಯವನ್ನೇ ತೆಗೆದುಕೊಳ್ಳಿ. ಹಿಂದಿನ ಸರ್ಕಾರದಲ್ಲಿ ಯಾರಿಯಾಗೆ ಶೇಕಡಾ 35 ಮಾತ್ರ ಬೇವು ಲೇಪಿಸಲಾಗುತ್ತಿತ್ತು. ಕೇವಲ ಶೇಕಡಾ 35ರಷ್ಟು ಬೇವು ಲೇಪಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಇಡೀ ವ್ಯವಸ್ಥೆಗೆ ಗೊತ್ತಿತ್ತು. ಯಾರಿಯಾ ಬೇರೆ ಕಡೆ ಸಾಗಿಸದಂತೆ ಮಾಡಲು, ಕಾರ್ಖಾನೆಗಳಿಂದ ಇನ್ನೆಲ್ಲಿಗೋ ಹೋಗದಂತೆ ತಡೆಯಲು ಅದಕ್ಕೆ ಶೇಕಡಾ ನೂರು ಬೇವು ಲೇಪಿಸಲೇ ಬೇಕು. ಆದರೆ ಈ ಹಿಂದೆ ಇಂತಹ ನಿರ್ಧಾರ ತೆಗೆದುಕೊಳ್ಳಲಿಲ್ಲ. ನಮ್ಮ ಸರ್ಕಾರವು ಯಾರಿಯಾಗೆ ಸಂಪೂರ್ಣವಾಗಿ ಬೇವು ಲೇಪಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿತು.
 
ಸೋದರ ಸೋದರಿಯರೆ, ಈ ನಿರ್ಧಾರದಿಂದ ಯಾರಿಯಾ ಬೇರೆಲ್ಲೋ ಸಾಗಾಟವಾಗುವುದು ತಪ್ಪಿರುವುದರ ಜೊತೆಗೆ ಅದರ ಸಾಮರ್ಥ್ಯವೂ ಹೆಚ್ಚಿದೆ. ಈಗ ರೈತರು ತಮ್ಮ ಜಮೀನಿಗೆ ಕಡಿಮೆ ಪ್ರಮಾಣದಲ್ಲಿ ಯಾರಿಯಾ ಬಳಸಿದರೆ ಸಾಕು. ಇದಿಷ್ಟೇ ಅಲ್ಲ, ಕಡಿಮೆ ಯಾರಿಯಾ ಬಳಸಿದ ನಂತರವೂ ಜಮೀನಿನಲ್ಲಿ ಹೆಚ್ಚು ಫಸಲು ಸಿಗುತ್ತಿದೆ.
 
ಇದೇ ರೀತಿ ಈಗ ನಮ್ಮ ದೇಶದಲ್ಲಿ ಒಂದು ಡಿಜಿಟಲ್ ಪ್ಲ್ಯಾಟ್ ಫಾರ್ಮ್ ತಯಾರಿಸಲಾಗುತ್ತಿದೆ. ಇದರಿಂದ ರೈತರು ಯಾವುದೇ ಸ್ಥಳಕ್ಕೆ ಬೇಕಾದರೂ ಹೋಗಿ ತಮ್ಮ ಫಸಲನ್ನು ಮಾರಬಹುದು. ಇದರಿಂದ ನಮ್ಮ ದೇಶದ ವ್ಯವಸ್ಥೆಯಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿದೆ. e-Nam ಅಂದರೆ ಎಲೆಕ್ಟ್ರಾನಿಕ್ ಅಗ್ರಿಕಲ್ಚರ್ ಮಾರ್ಕೆಟ್ ನಿಂದ ಈಗ ದೇಶದ ನಾನ್ನೂರ ಐವತ್ತಕ್ಕಿಂತ ಹೆಚ್ಚು ಮಂಡಿಗಳಲ್ಲಿ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದಲ್ಲಿ ಈ ಪ್ಲ್ಯಾಟ್ ಫಾರ್ಮ್ ಕೃಷಿಕರಿಗೆ ತಮ್ಮ ಫಸಲಿಗೆ ಸೂಕ್ತ ಬೆಲೆ ದೊರಕಿಸಿಕೊಡುವುದರಲ್ಲಿ ಬಹಳ ನೆರವಾಗುತ್ತದೆ.
 
ಇತ್ತೀಚೆಗಷ್ಟೇ ಸರ್ಕಾರವು ದೇಶದ ಕೃಷಿ ವಲಯದಲ್ಲಿ ಸರಬರಾಜು ಸರಣಿ ಮತ್ತು ಸಂಗ್ರಹಣಾ ವ್ಯವಸ್ಥೆಯನ್ನು ಬಲಪಡಿಸಲು ‘ಪ್ರಧಾನ ಮಂತ್ರಿ ರೈತ ಸಂಪದ ಯೋಜನೆ’ಯನ್ನು ಆರಂಭಿಸಿದೆ. ಹೊಲ ಅಥವಾ ತೋಟದಲ್ಲಿ ಬೆಳೆದ ಧಾನ್ಯ ಅಥವಾ ಹಣ್ಣುಗಳು ಮಂಡಿಯನ್ನು ತಲಪುವುದಕ್ಕೆ ಮೊದಲೇ ಹಾಳಾಗುತ್ತಿದೆ, ಅದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಆಹಾರ ಸಂಸ್ಕರಣಾ ವಲಯಕ್ಕೂ ಒತ್ತು ನೀಡುತ್ತಿದೆ. ಇದರಿಂದ ರೈತರು ಹೊಲವನ್ನೂ ಒಂದು ಕೈಗಾರಿಕಾ ಯೂನಿಟ್ ಆಗಿಸಿ ಕೆಲಸ ಮಾಡಬಹುದು.
 
ಫುಡ್ ಪಾರ್ಕ್ ನಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನಕ್ಕಾಗಿ, ಹೊಸ ಗೋದಾಮುಗಳಿಗಾಗಿ, ಆಗ್ರೊ – ಪ್ರೊಸೆಸಿಂಗ್ ಗಾಗಿ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಸರ್ಕಾರವು ಆರು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ.
ಸೋದರ ಸೋದರಿಯರೆ, ಸಮಯದ ಜೊತೆಗೆ ಸಾವಯವ ಕೃಷಿ ಮತ್ತು ಸಾವಯವ ಉತ್ಪನ್ನಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಸಿಕ್ಕಿಂ ರಾಜ್ಯದಂತೆ ದೇಶದ ಇನ್ನೂ ಕೆಲವು ರಾಜ್ಯಗಳಿಗೆ ಶೇಕಡಾ 100ರಷ್ಟು ಸಾವಯವ ರಾಜ್ಯವನ್ನಾಗಿ ಪರಿವರ್ತಿಸುವ ಸಾಮರ್ಥ್ಯವಿದೆ. ವಿಶೇಷವಾಗಿ ನಮ್ಮ ಹಿಮಾಲಯದ ರಾಜ್ಯಗಳಲ್ಲಿ ಇದನ್ನು ಇನ್ನೂ ಹೆಚ್ಚಿಸಬಹುದು. ಇದಕ್ಕಾಗಿಯೂ ಸರ್ಕಾರವು 10 ಸಾವಿರ ಕ್ಲಸ್ಟರ್ ಗಳನ್ನು ಮಾಡಿ ಅವುಗಳಲ್ಲಿ ಸಾವಯವ ಕೃಷಿಯನ್ನು ಹೆಚ್ಚಿಸುವ ಯೋಜನೆಗಾಗಿ ಕೆಲಸ ನಡೆಯುತ್ತಿದೆ.
 
ಇತ್ತೀಚೆಗಷ್ಟೇ ನಾವು ಮತ್ತೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದೇವೆ. ಸೋದರ ಸೋದರಿಯರೆ, ಇದುವರೆಗೆ ನಮ್ಮ ದೇಶದ ಕಾನೂನಿನಲ್ಲಿ ಬಿದಿರನ್ನು ಮರ ಎಂದು ಪರಿಗಣಿಸಲಾಗುತ್ತಿತ್ತು. ಈ ಕಾರಣದಿಂದ ಬಿದಿರನ್ನು ಕಡಿಯಲು ರೈತರಿಗೆ ಬಹಳ ತೊಂದರೆಯಾಗುತ್ತಿತ್ತು. ಈಗ ಸರ್ಕಾರವು ಬಿದಿರನ್ನು ಮರದ ಪಟ್ಟಿಯಿಂದ ಹೊರಗೆ ತೆಗೆದಿದೆ.
 
ದೇಶದ ದೂರದೂರದ ಪ್ರದೇಶಗಳು ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಬಿದಿರಿನಿಂದ ಪೀಠೋಪಕರಣಗಳು, ಕರಕುಶಲ ಕೆಲಸಗಳಲ್ಲಿ ತೊಡಗಿರುವ ರೈತರಿಗೆ ಬಹಳ ಪ್ರಯೋಜನವಾಗುತ್ತದೆ. ಹಿಂದಿನ ಸರ್ಕಾರವು ಮಾಡಿದ ಒಂದು ಕಾನೂನಿನಲ್ಲಿ ಬಿದಿರನ್ನು ಮರವೆಂದು ಪರಿಗಣಿಸಲಾಗಿತ್ತು ಎಂದು ನಿಮಗೆ ತಿಳಿದು ಅಚ್ಚರಿಯಾಗಬಹುದು.
 
ಹತ್ತು ಹನ್ನೆರಡು ವರ್ಷಗಳ ನಂತರ ಈ ವಿರೋಧಾಭಾಸ ಈಗ ದೂರವಾಗಿದೆ. ಜೊತೆಗಾರರೆ, ನಮ್ಮ ಸರ್ಕಾರದಲ್ಲಿ holistic approachನೊಂದಿಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ದೇಶದ ಅವಶ್ಯಕತೆಗಳನ್ನು ಅರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ರೀತಿಯ ತೀರ್ಮಾನಗಳನ್ನು ಮೊದಲು ತೆಗೆದುಕೊಳ್ಳುತ್ತಿರಲಿಲ್ಲ, ಆದ್ದರಿಂದ ದೇಶದ ಪ್ರತಿಯೊಬ್ಬ ವ್ಯಕ್ತಿ ಚಿಂತೆಯಲ್ಲಿ ಮುಳುಗಿದ್ದ. ದೇಶವು ಆಂತರಿಕ ಕೆಡುಕಗಳಿಂದ ಮುಕ್ತವಾಗಿರುವುದನ್ನು ನೋಡಲು ಬಯಸುತ್ತಿದ್ದ.
ಸೋದರ ಸೋದರಿಯರೆ, ನಮ್ಮಲ್ಲಿ ಹಿಂದೆ ಇದ್ದ ವ್ಯವಸ್ಥೆಯು ಭ್ರಷ್ಟಾಚಾರವನ್ನೇ ಶಿಷ್ಟಾಚಾರವಾಗಿ ಮಾಡಿಬಿಟ್ಟಿತ್ತು. ದೇಶದ ಪ್ರತಿಯೊಂದು ಕ್ಷೇತ್ರವನ್ನೂ ಕಪ್ಪು ಹಣವೇ ನಿಯಂತ್ರಿಸುತ್ತಿತ್ತು. 2014ರಲ್ಲಿ ದೇಶದ ನೂರಾ ಇಪ್ಪತ್ತೈದು ಕೋಟಿ ಜನರು ಈ ವ್ಯವಸ್ಥೆಯನ್ನು ಮಾರ್ಪಡಿಸಬೇಕೆಂದು ಮತ ನೀಡಿದ್ದರು. ದೇಶಕ್ಕೆ ತಗುಲಿರುವ ಎಲ್ಲ ಖಾಯಿಲೆಗಳಿಗೆ ಶಾಶ್ವತ ಚಿಕಿತ್ಸೆ ನೀಡಬೇಕೆಂದು ಅವರು ಮತ ನೀಡಿದ್ದರು, ನವಭಾರತದ ನಿರ್ಮಾಣಕ್ಕಾಗಿ ಅವರು ಮತ ನೀಡಿದ್ದರು.
ಅಮಾನ್ಯೀಕರಣದ ನಂತರ ದೇಶದಲ್ಲಿ ಯಾವ ರೀತಿ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ ಎನ್ನುವುದು ಸ್ವತಃ ನಿಮಗೂ ಅನುಭವಕ್ಕೆ ಬಂದಿರಬಹುದು. ಸ್ವಾತಂತ್ರ್ಯದ ನಂತರ ಭ್ರಷ್ಟಾಚಾರಿಗಳಿಗೆ ಕಪ್ಪು ಹಣ ಕೊಡುವುದು, ತೆಗೆದುಕೊಳ್ಳುವುದಕ್ಕೆ ಮೊದಲ ಬಾರಿಗೆ ಭಯವಾಗುತ್ತಿದೆ. ಅವರಿಗೆ ತಮ್ಮನ್ನು ಹಿಡಿಯುತ್ತಾರೆಂಬ ಭಯ ಬಂದಿದೆ. ಕಪ್ಪು ಹಣವು ಮೊದಲು ಪರ್ಯಾಯ ಆರ್ಥಿಕತೆಯಾಗಿತ್ತು, ಅದೇ ಅಮಾನ್ಯೀಕರಣದ ನಂತರ ಔಪಚಾರಿಕ ಆರ್ಥಿಕತೆಯಲ್ಲಿ ಬಂದಿದೆ.
 
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮರಳಿ ಬಂದ ಈ ಹಣವು ತನ್ನ ಜೊತೆಗೆ ರುಜುವಾತನ್ನೂ ತಂದಿದೆ ಎಂಬುದು ಸಹ ದೊಡ್ಡ ವಿಷಯವಾಗಿದೆ. ದೇಶಕ್ಕೆ ಸಿಕ್ಕಿರುವ ಅಂಕಿಅಂಶ ಯಾವುದೇ ಖಜಾನೆಗಿಂತ ಕಡಿಮೆಯೇನಲ್ಲ. ಈ ಡೇಟಾವನ್ನು ಜಾಲಾಡಿದಾಗ ನಮ್ಮ ದೇಶದಲ್ಲಿ ಒಂದೇ ವಿಳಾಸದಲ್ಲಿ ನಾನ್ನೂರು, ಐನೂರು ಕಂಪನಿಗಳು ನಡೆಯುತ್ತಿದ್ದವು ಮತ್ತು ಒಂದೇ ಕಂಪನಿಯು ಎರಡೆರಡು ಸಾವಿರ ಬ್ಯಾಂಕ್ ಖಾತೆಗಳನ್ನು ತೆರೆದಿತ್ತು ಎಂಬ ವಿಷಯ ಗೊತ್ತಾಗಿದೆ. ಇದೊಂದು ವಿಚಿತ್ರ ವಿರೋಧಾಭಾಸವಲ್ಲದೆ ಬೇರೇನು? ಒಂದು ಕಡೆ ಬಡವರಿಗೆ ಬ್ಯಾಂಕ್ ನಲ್ಲಿ ಒಂದೇ ಒಂದು ಅಕೌಂಟ್ ತೆರೆಯಲು ಕಷ್ಟವಾಗುತ್ತಿತ್ತು ಮತ್ತೊಂದೆಡೆ ಒಂದೇ ಕಂಪನಿ ಸುಲಭವಾಗಿ ಸಾವಿರಾರು ಅಕೌಂಟ್ ಗಳನ್ನು ತೆಗೆಯುತ್ತಿತ್ತು.
 
ಅಮಾನ್ಯೀಕರಣದ ಸಂದರ್ಭದಲ್ಲಿ ಈ ಖಾತೆಗಳಲ್ಲಿ ಸಹ ಅವ್ಯವಹಾರಗಳನ್ನು ನಡೆಸಿದ್ದವರು ಈಗ ಸಿಕ್ಕಿಬೀಳುತ್ತಿದ್ದಾರೆ. ಈಗ ಇಂತಹ ಸುಮಾರು ಎರಡೂ ಕಾಲು ಲಕ್ಷ ಕಂಪನಿಗಳ ನೋಂದಣಿ ರದ್ ಮಾಡಲಾಗಿದೆ. ಈ ಕಂಪನಿಗಳಲ್ಲಿ ಇದ್ದ ನಿರ್ದೇಶಕರ ಜವಾಬ್ದಾರಿ ಏನೆಂದರೆ ಈ ಕಂಪನಿಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕಾಗಿತ್ತು. ಈಗ ಈ ಜವಾಬ್ದಾರಿಯನ್ನು ಸಹ ಮತ್ತೆ ನಿಗದಿ ಮಾಡಲಾಗಿದೆ. ಅವರು ಈಗ ಬೇರೆ ಯಾವುದೇ ಕಂಪನಿಯಲ್ಲಿ ನಿರ್ದೇಶಕರಾಗದಂತೆ ತಡೆಯಲಾಗಿದೆ.
 
ಜೊತೆಗಾರರೆ, ನಮ್ಮ ದೇಶದಲ್ಲಿ ಆರೋಗ್ಯವಂತ ಮತ್ತು ಸ್ವಚ್ಛ ಕಾರ್ಪೊರೇಟ್ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಕ್ರಮವಾಗಿದೆ. ಜಿಎಸ್ ಟಿ ಜಾರಿಯಾಗಿದ್ದು ಸಹ ದೇಶದ ಆರ್ಥಿಕ ಸ್ವಚ್ಛತೆಗೆ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. 70 ವರ್ಷಗಳಲ್ಲಿ ಇದ್ದಂತಹ ವ್ಯವಸ್ಥೆಯಿಂದಾಗಿ ವ್ಯವಹಾರ ನಡೆಸುವಲ್ಲಿ ಕೆಲವು ದೌರ್ಬಲ್ಯಗಳಿದ್ದವು, ನಿರ್ವಾಹವಿಲ್ಲದೆ ಒಪ್ಪಿಕೊಳ್ಳಬೇಕಾಗಿತ್ತು. ಅವನ್ನು ಹಿಂದೆ ಬಿಟ್ಟು ದೇಶವು ಈಗ ಮುಂದೆ ಸಾಗಿದೆ. 
ಜಿಎಸ್ ಟಿಯಿಂದ ಸಹ ದೇಶದಲ್ಲಿ ಪಾರದರ್ಶಕತೆಯ ಒಂದು ಹೊಸ ಅಧ್ಯಾಯ ಶುರುವಾಗಿದೆ. ಹೆಚ್ಚು ಹೆಚ್ಚು ವ್ಯಾಪಾರಿಗಳು ಸಹ ಈ ಪ್ರಾಮಾಣಿಕ ವ್ಯವಸ್ಥೆಯೊಂದಿಗೆ ಸೇರುತ್ತಿದ್ದಾರೆ. ಜೊತೆಗಾರರೆ, ಇಂತಹುದೇ ಒಂದು ಹಿಂದಕ್ಕೆ ಹೋಗಲಾಗದ ಬದಲಾವಣೆಗೆ ಆಧಾರ್ ಸಂಖ್ಯೆಯಿಂದ ನೆರವು ಸಿಗುತ್ತಿದೆ. ಆಧಾರ್ ಇಂತಹ ಒಂದು ಶಕ್ತಿಯಾಗಿದ್ದು ಇದರಿಂದ ಸರ್ಕಾರವು ಬಡವರ ಹಕ್ಕುಗಳನ್ನು ಸುನಿಶ್ಚಿತಗೊಳಿಸಲು ಬಯಸುತ್ತದೆ.
 
ಅಗ್ಗದ ರೇಷನ್, ವಿದ್ಯಾರ್ಥಿ ವೇತನ, ಔಷಧಿಯ ಖರ್ಚು, ನಿವೃತ್ತಿ ವೇತನ, ಸರ್ಕಾರದಿಂದ ದೊರಕುವ ಸಬ್ಸಿಡಿಗಳನ್ನು ಬಡವರಿಗೆ ತಲುಪಿಸುವಲ್ಲಿ ಆಧಾರ್ ನ ಪಾತ್ರ ದೊಡ್ಡದು. ಆಧಾರ್ ನ ಜೊತೆಗೆ ಮೊಬೈಲ್ ಮತ್ತು ಜನಧನ್ ಖಾತೆಯ ಶಕ್ತಿಗಳು ಸೇರುವುದರಿಂದ ಇಂತಹ ಒಂದು ಒಳ್ಳೆಯ ವ್ಯವಸ್ಥೆ ನಿರ್ಮಾಣವಾಗಿದ್ದು ಇದರ ಕುರಿತು ಕೆಲವು ವರ್ಷಗಳ ಹಿಂದೆ ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಇದು ಹಿಂತಿರುಗಿ ಹೋಗಲಾರದ ಒಂದು ವ್ಯವಸ್ಥೆಯಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಆಧಾರ್ ನ ಸಹಾಯದಿಂದ ಕೋಟ್ಯಂತರ ನಕಲಿ ಹೆಸರುಗಳನ್ನು ವ್ಯವಸ್ಥೆಯಿಂದ ತೆಗೆಯಲಾಗಿದೆ. ಈಗಂತೂ ಬೇನಾಮಿ ಆಸ್ತಿಯ ವಿರುದ್ಧವೂ ಇದೊಂದು ದೊಡ್ಡ ಅಸ್ತ್ರವಾಗಿ ಪರಿಣಮಿಸುತ್ತಿದೆ.
 
ಸೋದರ ಸೋದರಿಯರೆ, ಈ ಸರ್ಕಾರದಲ್ಲಿ ಸರ್ಕಾರೀ ಖರೀದಿಯ ಹಳೆಯ ವಿಧಾನವನ್ನು ಸಹ ಸಂಪೂರ್ಣವಾಗಿ ಬದಲಿಸಲಾಗಿದೆ. GeM ಅಂದರೆ ಗವರ್ನಮೆಂಟ್ ಇ-ಮಾರ್ಕೆಟ್ ಪ್ಲೇಸ್ ಎಂಬ ಹೆಸರಿನಲ್ಲಿ ನಾವು ಒಂದು ಹೊಸ ವ್ಯವಸ್ಥೆಯನ್ನು ವಿಕಾಸಗೊಳಿಸಿದ್ದೇವೆ.
 
ಸರ್ಕಾರದಲ್ಲಿ ಈಗ ಇದರ ಮೂಲಕ ಟೆಂಡರ್ ಕರೆಯಲಾಗುತ್ತಿದೆ ಮತ್ತು ಸರ್ಕಾರವು ವಸ್ತುಗಳನ್ನು ಖರೀದಿ ಮಾಡುತ್ತಿದೆ. ಈಗ ಗುಡಿ ಕೈಗಾರಿಕೆಗಳನ್ನು ನಡೆಸುತ್ತಿರುವ, ಸಣ್ಣಪುಟ್ಟ ಕರಕುಶಲ ವಸ್ತುಗಳನ್ನು ತಯಾರಿಸುವವರು ಸಹ, ಗೃಹ ಉತ್ಪನ್ನಗಳನ್ನು ತಯಾರಿಸುವವರು ಸಹ GeMನ ಮೂಲಕ ಸರ್ಕಾರಕ್ಕೆ ತಮ್ಮ ವಸ್ತುಗಳನ್ನು ಮಾರಬಹುದಾಗಿದೆ.
 
ಸೋದರ ಸೋದರಿಯರೆ, ಕಪ್ಪು ಹಣ ಹುಟ್ಟು ಹಾಕುವುದು, ವ್ಯವಸ್ಥೆಯಲ್ಲಿ ಇರುವ ದೌರ್ಬಲ್ಯದಿಂದಾಗಿ ಭ್ರಷ್ಟಾಚಾರ ನಡೆಸುವ ಸಾಧ್ಯತೆ ಸಾಧ್ಯವಾದಷ್ಟು ಕಡಿಮೆ ಮಾಡುವಂತಹ ಒಂದು ವ್ಯವಸ್ಥೆಯತ್ತ ನಾವು ಸಾಗುತ್ತಿದ್ದೇವೆ.
 
ದೇಶದಲ್ಲಿ ಬಹುತೇಕ ಖರೀದಿ-ಮಾರಾಟದಲ್ಲಿ ಹಣ ಕೊಡುವುದಕ್ಕೆ, ತೆಗೆದುಕೊಳ್ಳುವುದಕ್ಕೆ ಒಂದು ತಾಂತ್ರಿಕ ಮತ್ತು ಡಿಜಿಟಲ್ ವಿಳಾಸ ನಿಗದಿಯಾದ ದಿನ ಬಂದಾಗ ವ್ಯವಸ್ಥಿತ ಭ್ರಷ್ಟಾಚಾರಕ್ಕೆ ಸಾಕಷ್ಟು ಕಡಿವಾಣ ಬೀಳುತ್ತದೆ. ಇದರಿಂದಾಗಿ ರಾಜಕೀಯವಾಗಿ ನಾನೆಷ್ಟು ಬೆಲೆ ತೆರಬೇಕಾಗುತ್ತದೆ ಎಂದು ನನಗೆ ಗೊತ್ತಿದ್ದರೂ ನಾನು ಅದಕ್ಕೆಲ್ಲ ತಯಾರಾಗಿದ್ದೇನೆ.
 
ಜೊತೆಗಾರರೆ, ಯೋಜನೆಗಳಲ್ಲಿ ವೇಗ ಬಂದಂತೆಲ್ಲ ದೇಶದಲ್ಲಿ ಪ್ರಗತಿ ಆಗುತ್ತದೆ. ಏನಾದರೂ ಬದಲಾವಣೆಗಳು ಬರಬಹುದೆಂದು ಸರ್ಕಾರದ ಎಲ್ಲ ಯೋಜನೆಗಳ ವೇಗ ಹೆಚ್ಚಿಸಲಾಗಿದೆ. ಸಾಧನಗಳು ಅವೇ, ಸಂಪನ್ಮೂಲಗಳೂ ಅವೇ, ಆದರೆ ವ್ಯವಸ್ಥೆಯಲ್ಲಿ ವೇಗ ಕಂಡು ಬಂದಿದೆ. ಏಕೆಂದರೆ ಸರ್ಕಾರವು ಅಧಿಕಾರಿಶಾಹಿಯಲ್ಲಿ ಸಹ ಒಂದು ಹೊಸ ಕಾರ್ಯ ವಿಧಾನವನ್ನು ಅಭಿವೃದ್ಧಿ ಪಡಿಸುತ್ತಿದೆ. ಅವರನ್ನು ಹೆಚ್ಚು ಜವಾಬ್ದಾರಿ ಉಳ್ಳವರಾಗಿ ಮಾಡಲಾಗುತ್ತಿದೆ.
•ಇದರ ಪರಿಣಾಮವಾಗಿ ಹಿಂದಿನ ಸರ್ಕಾರದಲ್ಲಿ ಪ್ರತಿದಿನ 11 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿತ್ತು. ಈಗ ಒಂದು ದಿನಕ್ಕೆ 22 ಕಿಲೋಮೀಟರ್ ಗಿಂತ ಹೆಚ್ಚು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ.
•ಹಿಂದಿನ ಸರ್ಕಾರವು ತನ್ನ ಆಡಳಿತಾವಧಿಯ ಕೊನೆಯ ಮೂರು ವರ್ಷಗಳಲ್ಲಿ ಹಳ್ಳಿಗಳಲ್ಲಿ 80 ಸಾವಿರ ಕಿಲೋ ಮೀಟರ್ ರಸ್ತೆ ನಿರ್ಮಿಸಿತ್ತು. ನಮ್ಮ ಸರ್ಕಾರವು ಕಳೆದ ಮೂರು ವರ್ಷಗಳಲ್ಲೇ ಒಂದು ಲಕ್ಷ ಇಪ್ಪತ್ತು ಸಾವಿರ ಕಿಲೋಮೀಟರ್ ರಸ್ತೆ ನಿರ್ಮಿಸಿದೆ.
•ಹಿಂದಿನ ಸರ್ಕಾರವು ಕೊನೆಯ ಮೂರು ವರ್ಷಗಳಲ್ಲಿ ಸುಮಾರು 1100 ಕಿಲೋಮೀಟರ್ ಹೊಸ ರೈಲು ಮಾರ್ಗವನ್ನು ನಿರ್ಮಿಸಿತ್ತು. ನಮ್ಮ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ 2100 ಕಿಲೋಮೀಟರ್ ಗಿಂತ ಹೆಚ್ಚು ನಿರ್ಮಿಸಿದೆ.
•ಹಿಂದಿನ ಸರ್ಕಾರವು ಕೊನೆಯ ಮೂರು ವರ್ಷಗಳಲ್ಲಿ 2500 ಕಿಲೋಮೀಟರ್ ರೈಲು ಮಾರ್ಗವನ್ನು ವಿದ್ಯುತ್ತೀಕರಣ ಮಾಡಿತ್ತು. ನಮ್ಮ ಸರ್ಕಾರವು ಮೂರು ವರ್ಷಗಳಲ್ಲಿ 4300 ಕಿಲೋಮೀಟರ್ ಗಿಂತ ಹೆಚ್ಚು ರೈಲು ಮಾರ್ಗವನ್ನು ವಿದ್ಯುತ್ತೀಕರಣ ಮಾಡಿದೆ.
•ಹಿಂದಿನ ಸರ್ಕಾರವು ಕಡೆಯ ಮೂರು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ನಲವತ್ತೊಂಭತ್ತು ಸಾವಿರ ಕೋಟಿ ಬಂಡವಾಳವನ್ನು ಖರ್ಚು ಮಾಡಿತ್ತು. ನಮ್ಮ ಸರ್ಕಾರವು ಮೂರು ವರ್ಷಗಳಲ್ಲಿ ಸುಮಾರು ಎರಡು ಲಕ್ಷ ಅರವತ್ನಾಲ್ಕು ಸಾವಿರ ಕೋಟಿ ರೂಪಾಯಿಯನ್ನು ಬಂಡವಾಳಕ್ಕಾಗಿ ವಿನಿಯೋಗಿಸಿದೆ.
•ಹಿಂದಿನ ಸರ್ಕಾರವು ಕೊನೆಯ ಮೂರು ವರ್ಷಗಳಲ್ಲಿ ಒಟ್ಟು 12 ಸಾವಿರ ಮೆಗಾ ವ್ಯಾಟ್ ನ ನವೀಕರಿಸಬಹುದಾದ ಇಂಧನದ ಹೊಸ ಸಾಮರ್ಥ್ಯವನ್ನು ಜೋಡಿಸಿತ್ತು. ನಮ್ಮ ಸರ್ಕಾರವು ಮೂರು ವರ್ಷಗಳಲ್ಲಿ 22 ಸಾವಿರ ಮೆಗಾ ವ್ಯಾಟ್ ಗಿಂತ ಅಧಿಕ ನವೀಕರಿಸಬಹುದಾದ ಇಂಧನದ ಹೊಸ ಸಾಮರ್ಥ್ಯವನ್ನು ಗ್ರಿಡ್ ಪವರ್ ನೊಂದಿಗೆ ಜೋಡಿಸಿದೆ.
•ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಹಡಗು ಉದ್ಯಮದಲ್ಲಿ ಪ್ರಗತಿಯ ಕುರಿತು ಹೇಳುವುದಾದರೆ ಮೊದಲು ಕಾರ್ಗೊ ಹ್ಯಾಂಡ್ ಲಿಂಗ್ ನ ಬೆಳವಣಿಗೆ ನಕಾರಾತ್ಮಕವಾಗಿತ್ತು. ಅದೇ ನಮ್ಮ ಸರ್ಕಾರವು ಮೂರು ವರ್ಷಗಳಲ್ಲಿ ಶೇಕಡಾ 11ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ.
 
ಜೊತೆಗಾರರೆ, ಬುಡದವರೆಗೆ ತಲುಪಿ ವ್ಯವಸ್ಥೆಗಳನ್ನು ಸರಿಪಡಿಸದೆ ಹೋಗಿದ್ದರೆ ಈ ವೇಗ ಬರಲು ಸಾಧ್ಯವಾಗುತ್ತಿತ್ತೆ? ಸರ್ಕಾರವು ಈ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುತ್ತಿತ್ತೆ? ದೊಡ್ಡ ಮತ್ತು ಸ್ಥಾಯೀ ಪರಿವರ್ತನೆಗಾಗಿ ಸಂಪೂರ್ಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಈ ಬದಲಾವಣೆಗಳು ತಂದಿದ್ದರಿಂದಲೇ ದೇಶವು ಕೇವಲ ಮೂರು ವರ್ಷಗಳಲ್ಲಿ ಸುಲಲಿತವಾಗಿ ವ್ಯಾಪಾರ ನಡೆಸುವ ಶ್ರೇಯಾಂಕದಲ್ಲಿ 142ರಿಂದ 100ಕ್ಕೆ ತಲುಪಿದೆ.
ಸೋದರ ಸೋದರಿಯರೆ, 2014ರಲ್ಲಿ ನಮ್ಮ ಸರ್ಕಾರವು ರಚನೆಯಾದಾಗ ನಮಗೆ ಆಡಳಿತ ವ್ಯವಸ್ಥೆಯಲ್ಲಿ ಕಂಡು ಬಂದದ್ದೇನು ಎಂದು ನಿಮ್ಮೆಲ್ಲರಿಗೆ ಗೊತ್ತಿದೆ. ಅರ್ಥ ವ್ಯವಸ್ಥೆಯ ಪರಿಸ್ಥಿತಿ, ಆಡಳಿತದ ಪರಿಸ್ಥಿತಿ, ಖಜಾನೆಯ ಸ್ಥಿತಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಪರಿಸ್ಥಿತಿ ಎಲ್ಲವೂ ಹಾಳಾಗಿತ್ತು. ನೀವು ಬಹಳ ಕಡಿಮೆ ಪದಗಳಲ್ಲಿ ಹೆಡ್ ಲೈನ್ ನಲ್ಲಿ Policy Paralysis… ಎಂದು ಬರೆಯಬೇಕಾಗುತ್ತಿತ್ತು, ಹೇಳಬೇಕಾಗಿತ್ತು.
 
ನಮ್ಮ ದೇಶವನ್ನು Fragile Fiveನಲ್ಲಿ ಎಣಿಸಲಾಗುತ್ತಿತ್ತು. ಪ್ರಪಂಚದ ಎಲ್ಲ ದೇಶಗಳು ಅರ್ಥ ವ್ಯವಸ್ಥೆಯ ಸಂಕಟದಿಂದ ನಾವು ಮೇಲೆ ಬರುತ್ತೇವೆ, ಆದರೆ ಈ Fragile Five ತಾವೂ ಮುಳುಗುವುದರ ಜೊತೆ ನಮ್ಮನ್ನೂ ಮುಳುಗಿಸುತ್ತವೆ ಎಂದು ಯೋಚಿಸುತ್ತಿದ್ದವು.
 
ಇಂದು ಜಾಗತಿಕವಾಗಿ ಭಾರತ ಎಲ್ಲಿ ನಿಂತಿದೆ, ಯಾವ ಸ್ಥಿತಿಯಲ್ಲಿದೆ ಎಂದು ನೀವು ಚೆನ್ನಾಗಿ ಬಲ್ಲಿರಿ. ಪ್ರಪಂಚದ ಬಹುತೇಕ ಸಣ್ಣ ದೊಡ್ಡ ದೇಶಗಳು ಇಂದು ಭಾರತದ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಸಾಗಲು ಬಯಸುತ್ತಿವೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರಭಾವವು ನಿರಂತರವಾಗಿ ಹೆಚ್ಚುತ್ತಿದೆ. ಈಗಂತೂ ತಡೆದು ನಿಲ್ಲುವಂತಿಲ್ಲ, ಮುಂದೆ ಸಾಗಲೇಬೇಕಿದೆ.
 
ಜೊತೆಗಾರರೆ, ಒಂದು ರಾಷ್ಟ್ರವು ಆತ್ಮವಿಶ್ವಾಸದಿಂದ ಎದ್ದು ನಿಂತಾಗ Irreversible ಮತ್ತು Reversible ಎಂದು ಪರಿಗಣನೆಗೆ ಬರುವುದಿಲ್ಲ. ಒಂದು ರಾಷ್ಟ್ರವು ಆತ್ಮವಿಶ್ವಾಸದಿಂದ ತನ್ನ ಹೆಜ್ಜೆ ಮುಂದಿಟ್ಟಾಗ, ನಿರ್ಧಾರ ಕೈಗೊಂಡಾಗ ಇದು ಸಾಧ್ಯ. ಹಿಂದಿನ 70 ವರ್ಷಗಳಲ್ಲಿ ಇದು ಸಾಧ್ಯವಾಗಿರಲಿಲ್ಲ.
ಅಂತಾರಾಷ್ಟ್ರೀಯ ನ್ಯಾಯಾಲಯದ ಚುನಾವಣೆಯಲ್ಲಿ ಭಾರತದ ಯಶಸ್ಸು ಇಡೀ ವಿಶ್ವದ ಯೋಚನೆಯಲ್ಲಿ ಬಂದಿರುವ ಬದಲಾವಣೆಯ ಸಂಕೇತವಾಗಿದೆ. ಸೋದರ ಸೋದರಿಯರೆ, ಯೋಗಕ್ಕೆ ವಿಶ್ವ ಸಂಸ್ಥೆಯಲ್ಲಿ ಸರ್ವಸಮ್ಮತಿಯೊಂದಿಗೆ ಮಾನ್ಯತೆ ದೊರೆತಾಗ ಅದರ ಹಿಂತಿರುಗಲಾಗದ ಬೆಳವಣಿಗೆ ಕಾಣುತ್ತದೆ.
ಭಾರತದಲ್ಲಿ ಮೊದಲು ಅಂತಾರಾಷ್ಟ್ರೀಯ ಸೋಲಾರ್ ಅಲೈಯನ್ಸ್ ರಚಿತವಾದಾಗ ಅದರ ಹಿಂತಿರುಗಲಾಗದ ಬೆಳವಣಿಗೆ ಕಾಣುತ್ತದೆ.
 
ಜೊತೆಗಾರರೆ, ನಮ್ಮ ಸರ್ಕಾರವು ವ್ಯವಹಾರವನ್ನು ಮಾನವೀಯತೆಯೊಂದಿಗೆ ಜೋಡಿಸಿದೆ, ಮಾನವೀಯ ಸಂವೇದನೆಗಳೊಂದಿಗೆ ಜೋಡಿಸಿದೆ. ನೇಪಾಳದಲ್ಲಿ ಭೂಕಂಪವಾದಾಗ ಎಲ್ಲಕ್ಕಿಂತ ಮೊದಲು ಭಾರತವು ರಕ್ಷಣೆ ಮತ್ತು ನೆರವಿನ ಕಾರ್ಯದಲ್ಲಿ ತೊಡಗುತ್ತದೆ. ಶ್ರೀಲಂಕಾದಲ್ಲಿ ಪ್ರವಾಹ ಬಂದಾಗ ಭಾರತದ ನೌಕಾಬಲವು ನೆರವಿಗಾಗಿ ತಕ್ಷಣವೇ ಎಲ್ಲರಿಗಿಂತ ಮೊದಲು ಧಾವಿಸುತ್ತದೆ. ಮಾಲ್ಡೀವ್ ನಲ್ಲಿ ನೀರಿಗೆ ಅಭಾವವಾದಾಗ ಭಾರತದಿಂದ ಹಡಗುಗಳಲ್ಲಿ ನೀರು ಹೊತ್ತು ಸಾಗಿಸಲಾಗುತ್ತದೆ. ಯಮನ್ ನಲ್ಲಿ ಸಂಕಟದ ಸ್ಥಿತಿ ಎದುರಾದಾಗ ಭಾರತವು ತನ್ನ ನಾಲ್ಕು ಸಾವಿರಕ್ಕಿಂತ ಹೆಚ್ಚು ನಾಗರಿಕರನ್ನು ಕಾಪಾಡುವುದರ ಜೊತೆಗೆ ಇತರ 48 ದೇಶಗಳ ಎರಡು ಸಾವಿರ ವ್ಯಕ್ತಿಗಳನ್ನು ಸಹ ಸುರಕ್ಷಿತವಾಗಿ ಹೊರಗೆ ತರುತ್ತದೆ. ಪ್ರಸ್ತುತ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಎದುರಿಗಿರುವವರ ಜೊತೆ ತಲೆಯೆತ್ತಿ ನಿಂತು ಮಾತನಾಡಲು ಸಾಧ್ಯವಾಗುತ್ತಿರುವುದು ಭಾರತದ ಕುರಿತು ಹೆಚ್ಚುತ್ತಿರುವ ಗೌರವ ಮತ್ತು ವಿಶ್ವಾಸದ ಪರಿಣಾಮವಾಗಿದೆ.
ವಿದೇಶದಲ್ಲಿ “ಈ ಸಲ ಕ್ಯಾಮರೂನ್ ಸರ್ಕಾರ” ಮತ್ತು “ಈ ಸಲ ಟ್ರಂಪ್ ಸರ್ಕಾರ” ಎಂಬ ಘೋಷಣೆಗಳನ್ನು ಮೊಳಗಿಸಿದ್ದು ಭಾರತೀಯರ ಸಾಮರ್ಥ್ಯದ ಸ್ವೀಕೃತಿಯಾಗಿದೆ. ಸೋದರ ಸೋದರಿಯರೆ, ಪ್ರತಿಯೊಂದು ಸಂಘಟನೆ, ಪ್ರತಿಯೊಂದು ಸಮಾಜ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯವನ್ನು ಅರಿತುಕೊಂಡು ತನ್ನ ಮಟ್ಟಿಗೆ ಬದಲಾವಣೆಯನ್ನು ಆರಂಭಿಸಿದಾಗಲೇ  ನವಭಾರತದ ಕನಸು ಪೂರ್ತಿಯಾಗುತ್ತದೆ. ನವಭಾರತದ ಈ ಕನಸು ಕೇವಲ ನನ್ನದಲ್ಲ, ನಿಮ್ಮದೂ ಆಗಿದೆ. ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಸ್ಥೆಯು ದೇಶದ ಅವಶ್ಯಕತೆಗಳನ್ನು ಅರಿಯುತ್ತಾ, ದೇಶದ ಮುಂದಿರುವ ಸವಾಲುಗಳನ್ನು ಅರಿಯುತ್ತಾ ತನ್ನ ಮಟ್ಟದಲ್ಲಿ ಏನಾದರೂ ಸಂಕಲ್ಪ ಮಾಡಬೇಕು.
 
2022ಕ್ಕೆ ದೇಶವು ಸ್ವಾತಂತ್ರ್ಯದ 75ನೇ ಹಬ್ಬವನ್ನು ಆಚರಿಸಿಕೊಳ್ಳುತ್ತದೆ. ಅಷ್ಟರಲ್ಲಿ ನಾವು ಈ ಸಂಕಲ್ಪಗಳನ್ನು ಪೂರ್ತಿಗೊಳಿಸಬೇಕಿದೆ. ನಾನು ಜನರಿಗೆ ಯಾವುದೇ ಸಲಹೆಗಳನ್ನು ನೀಡುವುದಿಲ್ಲ, ಬದಲಿಗೆ ನಮ್ಮೆಲ್ಲರ ನೆಚ್ಚಿನ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಒಂದು ಮಾತನ್ನು ನೆನಪಿಸಲು ಬಯಸುತ್ತೇನೆ.
 
“ನಮ್ಮಲ್ಲಿರುವ ಮಾಧ್ಯಮಗಳು ಇಷ್ಟೊಂದು ನಕಾರಾತ್ಮಕವಾಗಿವೆ ಏಕೆ? ಭಾರತದಲ್ಲಿ ನಾವು ನಮ್ಮದೇ ಸಾಮರ್ಥ್ಯಗಳು ಮತ್ತು ಲಭ್ಯತೆಗಳ ಕುರಿತು ಲಜ್ಜಿತರಾಗಿರುವುದೇಕೆ? ನಮ್ಮದು ಇಂತಹ ಮಹಾನ್ ದೇಶ, ನಮ್ಮಲ್ಲಿ ಯಶಸ್ಸಿನ ಇಷ್ಟೊಂದು ಅದ್ಭುತ ಕಥೆಗಳಿವೆ. ಆದರೂ ನಾವು ಅದನ್ನು ಸ್ವೀಕರಿಸುವುದಕ್ಕೆ ಒಪ್ಪುವುದಿಲ್ಲ. ಹೀಗೇಕೆ?” ಎಂದು ಅವರು ಹೇಳಿದ್ದರು. 
 
ಅವರು ಈ ಮಾತನ್ನು ಕೆಲವು ವರ್ಷಗಳ ಹಿಂದೆ ಹೇಳಿದ್ದರು. ನೀವು ವಿದ್ವತ್ ಜನರಿಗೆ ಇದು ಸರಿಯೆಂದು ಕಂಡು ಬಂದರೆ ಈ ವಿಷಯವಾಗಿ ನಿಮ್ಮ ಕಟ್ಟಡಗಳಲ್ಲಿ, ಸುದ್ದಿ ಕೊಠಡಿಗಳಲ್ಲಿ ಖಂಡಿತವಾಗಿ ಚರ್ಚೆ ಮಾಡಿ. ನೀವು ಏನೇ ಬದಲಾವಣೆ ತಂದರೂ ಹಿಂತಿರುಗಿ ಹೋಗಲಾರದ್ದು ಎಂದು ನನಗೆ ಭರವಸೆ ಇದೆ.
 ಈ ವೇದಿಕೆಯಿಂದ ನಾನು ಇಡೀ ದೇಶದ ಮಾಧ್ಯಮ ಲೋಕಕ್ಕೆ ನೀವು ಸಹ ಸಂಕಲ್ಪ ಮಾಡಿ, ಇತರರನ್ನೂ ಪ್ರೇರೇಪಿಸಿ ಎಂದು ಮನವಿ ಮಾಡುತ್ತಿದ್ದೇನೆ. ಸ್ವಚ್ಛ ಭಾರತ ಅಭಿಯಾನವನ್ನು ನಿಮ್ಮದೇ ಎಂದು ಭಾವಿಸಿ ಅದನ್ನು ಒಂದು ಜನಾಂದೋಲನವಾಗಿ ಪರಿವರ್ತಿಸುವಲ್ಲಿ ನೀವು ಸಕ್ರಿಯ ಪಾತ್ರವನ್ನು ವಹಿಸಿದಿರಿ, ಅದೇ ರೀತಿ ಸಂಕಲ್ಪದಿಂದ ಸಿದ್ಧಿಯ ಈ ಯಾತ್ರೆಯಲ್ಲಿ ಸಹ ಮುಂದೆ ಬಂದು ಜೊತೆಗೆ ಸಾಗಿ.
 
ಈ ಮಾತುಗಳ ಜೊತೆಗೆ ನಾನು ನನ್ನ ಮಾತು ಮುಗಿಸುತ್ತೇನೆ. ಮತ್ತೊಮ್ಮೆ ಹಿಂದೂಸ್ತಾನ್ ಟೈಮ್ಸ್ ಗ್ರೂಪ್ ಗೆ ಇದನ್ನು ಆಯೋಜಿಸಿದ್ದಕ್ಕಾಗಿ ಬಹಳ ಬಹಳ ಶುಭಾಶಯಗಳು.
 
ಬಹಳ ಬಹಳ ಧನ್ಯವಾದಗಳು.
ಜೈ ಹಿಂದ್