Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2018 ಮಾರ್ಚ್ 12ರಂದು ಲಖ್ನೊದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣ.


ಇಲ್ಲಿ ಅಪಾರ ಪ್ರಮಾಣದಲ್ಲಿ ಸೇರಿರುವ ನನ್ನ ತಾಯಂದಿರೇ, ಸೋದರಿಯರೇ, ಸೋದರರೇ ಮತ್ತು ಯುವ ಸ್ನೇಹಿತರೇ..

 

ಬನಾರಸ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಮೊದಲು ಬನಾರಸ್ ಜನರಿಗೆ ಧನ್ಯವಾದ ಸಲ್ಲಿಸಲು ಮತ್ತು ಅಭಿನಂದನೆಯನ್ನು ಸಲ್ಲಿಸಲು ಬಯಸುತ್ತೇನೆ. ಬನಾರಸ್ ಅತ್ಯದ್ಭುತವಾದ ಕೆಲಸವನ್ನು ಮಾಡಿದೆ. ಫ್ರಾನ್ಸ್ ಅಧ್ಯಕ್ಷರನ್ನು ಅತ್ಯಂತ ಹಾರ್ದಿಕವಾಗಿ ಸ್ವಾಗತ ಮಾಡಿದ ನಂತರ ಫ್ರಾನ್ಸ್‌ನ ಜನರು ತಮ್ಮ ಅಧ್ಯಕ್ಷರನ್ನು ಬನಾರಸ್ ಬಗ್ಗೆ ಕೇಳಿ ತಿಳಿದುಕೊಂಡಿರಬೇಕು.

 

ನಾವು ವೇಗವಾಗಿ ಹೋಗಲು ಸಾಧ್ಯವಾಗಲೇ ಇಲ್ಲ. ರಸ್ತೆಯ ಮಧ್ಯದಲ್ಲೇ ನಮ್ಮ ಕಾರನ್ನು ನಿಲ್ಲಿಸಬೇಕಾಗುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಂದ ಸ್ವಾಗತವನ್ನು ಸ್ವೀಕರಿಸಲು ನಾವು ಮಧ್ಯೆಮಧ್ಯೆ ನಿಲ್ಲಬೇಕಾಗುತ್ತಿತ್ತು. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರ ಸಮೂಹವೇ ಸೇರಿತ್ತು. ಗಂಗಾ ಘಾಟ್ ಮತ್ತು ಬನಾರಸ್ ಪವಿತ್ರ ಭೂಮಿಯಲ್ಲಿ ಅತ್ಯದ್ಭುತವಾದ ವಾತಾವರಣವು ನಿರ್ಮಾಣವಾಗಿತ್ತು. ಭಾರತ ಮತ್ತು ಫ್ರಾನ್ಸ್ ದೇಶದ ನಡುವಿನ ಸ್ನೇಹ ಸಂಬಂಧವನ್ನು ಬನಾರಸ್ ಜನರ ಪ್ರೀತಿ ಮತ್ತು ಆಶೀರ್ವಾದ ಇನ್ನಷ್ಟು ಸದೃಢಗೊಳಿಸಿತು. ಇಷ್ಟಕ್ಕೇ ನಾನು ಬನಾರಸ್‌ನ ಜನರಿಗೆ ಧನ್ಯವಾದಗಳನ್ನು ಹೇಳಿ ಸುಮ್ಮನಾಗುವುದಿಲ್ಲ.

 

ನಾನು ಇವತ್ತು ವಿಂದ್ಯವಾಸಿನಿ ದೇವಿಯ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ಇಡೀ ವಿಶ್ವದಲ್ಲಿ ಸೌರ ಶಕ್ತಿಯ ಅಭಿಯಾನವನ್ನು ಮಾಡುವಲ್ಲಿ ಭಾರತವು ಅತ್ಯಂತ ವಿಶಾಲವಾದ ಪಾತ್ರವನ್ನು ವಹಿಸಿದೆ. ಸೌರ ಶಕ್ತಿ ಕ್ಷೇತ್ರದಲ್ಲಿ ಫ್ರಾನ್ಸ್ ಮತ್ತು ಭಾರತ ರಾಷ್ಟ್ರಗಳು ಮಹತ್ತರವಾದ ಕೆಲಸಗಳನ್ನು ಮಾಡುತ್ತಿವೆ. ಹಲವು ದೇಶದ ಗಣ್ಯರುಗಳು ನಿನ್ನೆ ದೆಹಲಿಗೆ ಬಂದಿದ್ದರು. ಅವರು ಸೌರ ಶಕ್ತಿಯ ಕ್ಷೇತ್ರದಲ್ಲಿ ಹಲವು ಮಹತ್ತರವಾದ ಅಭಿವೃದ್ಧಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಮಿರ್ಜಾಫುರ್‌ನಲ್ಲಿ ಸೌರ ವಿದ್ಯುತ್ ಘಟಕವನ್ನು ಆರಂಭಿಸಲು ನನಗೆ ಅವಕಾಶ ಸಿಕ್ಕಿದ್ದು ದೊಡ್ಡ ಅವಕಾಶ ಎಂದುಕೊಂಡಿದ್ದೇನೆ. ಭಾರತದಲ್ಲಿ ಮಹತ್ತರವಾದ ಬದಲಾವಣೆಯನ್ನು ಕೈಗೊಳ್ಳಲು ಈ ಅಭಿಯಾನವು ಸಹಕಾರಿಯಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಲು ನಾನು ಇಚ್ಚಿಸುತ್ತಿದ್ದೇನೆ. ಪ್ರತಿಯೊಂದು ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಮನೆಗಳಲ್ಲಿ ಅಡುಗೆ ಸ್ಟೌಗಳ ಅನಿವಾರ್ಯತೆಯೇ ಇರುವುದಿಲ್ಲ. ಯಾವುದೇ ಆರ್ಥಿಕ ಹೊರೆ ಇಲ್ಲದೇ ಅಥವಾ ಪರಿಸರದ ಹೊರೆಯಿಲ್ಲದಂತೆ ಆಹಾರವನ್ನು ಸಲೀಸಾಗಿ ಸಿದ್ಧಪಡಿಸಬಹುದಾಗಿದೆ. ಇದು ಶುದ್ಧ ಉರುವಲಿಗೆ ದೊಡ್ಡ ಅಭಿಯಾನವಾಗಿದೆ.

 

ಭಾರತದಲ್ಲಿ ೨೫ ಕೋಟಿ ಕುಟುಂಬಗಳಿವೆ. ಹೀಗಾಗಿ ಬೃಹತ್ತಾದ ಮಾರುಕಟ್ಟೆ ಮತ್ತು ಅವಕಾಶಗಳು ನಮ್ಮನ್ನು ಸೆಳೆಯುತ್ತಿವೆ ಸ್ನೇಹಿತರೇ, ನಮ್ಮ ತಾಯಂದಿರು ಮತ್ತು ಸೋದರಿಯರು ಅಡುಗೆ ಮಾಡಲು ಐಐಟಿ ವ್ಯಾಸಂಗ ಮಾಡುವವರು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಮತ್ತು ಸಂಶೋಧಿಸುವ ನಿಟ್ಟಿನಲ್ಲಿ ಸ್ಪರ್ಧೆ ಮಾಡಲು ಮುಂದಾಗಬೇಕಿದೆ. ಇಂಧನದ ಯಾವುದೇ ಹೊರೆ ಇಲ್ಲದಂತೆ ನಮ್ಮ ತಾಯಂದಿರು ಮತ್ತು ಸೋದರಿಯರು ಸೂರ್ಯದೇವನ ಕೃಪೆಯಿಂದ ಅಡುಗೆಯನ್ನು ಸಮರ್ಪಕವಾಗಿ ಮಾಡಲು ಕೆಲಸ ಮಾಡಬಹುದಾಗಿದೆ. ಇದು ಬಡ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಮಾಡುವ ದೊಡ್ಡ ಪ್ರಮಾಣದ ಸೇವೆಯಾಗಿದೆ.

 

ಇದೆಲ್ಲಕ್ಕಿಂತಲೂ ಇಂದು ನನಗೆ ಕಾಶಿ ಮತ್ತು ಪಟ್ನಾಗೆ ಸಂಪರ್ಕ ಕಲ್ಪಿಸುವಂತಹ ಹೊಸ ರೈಲ್ವೆ ಸೇವೆಯನ್ನು ಆರಂಭಿಸುವ ಅವಕಾಶ ಸಿಕ್ಕಿದೆ. ಕಾಶಿಯಿಂದ ಪಾಟ್ನಾಗೆ ಅತಿವೇಗದ ರೈಲನ್ನು ಆರಂಭಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಕಾಶಿಯಿಂದ ಬೆಳಿಗ್ಗೆ ೬ ಗಂಟೆಗೆ ಹೊರಡುವ ರೈಲು ಬೆಳಿಗ್ಗೆ ೧೦ರಿಂದ ೧೦.೧೫ರ ಸುಮಾರಿಗೆ ಪಾಟ್ನಾವನ್ನು ತಲುಪಲಿದೆ. ಸಂಜೆ ೫ ಗಂಟೆಗೆ ಆರಂಭವಾಗಿ ರಾತ್ರಿ ೯ರಿಂದ ೯.೩೦ ಅಥವಾ ೧೦ಕ್ಕೆ ಮತ್ತೆ ಕಾಶಿಯನ್ನು ಈ ರೈಲು ಸೇರಿಕೊಳ್ಳಲಿದೆ. ಕಾಶಿಯಿಂದ ಪಾಟ್ನಾಗೆ ತೆರಳುವ ಜನಶತಾಬ್ದಿ ರೈಲಿಗೆ ಚಾಲನೆ ನೀಡುವ ಅದೃಷ್ಟ ನನಗೆ ಸಿಕ್ಕಿದೆ. ಈ ರೈಲು ಕಾಶಿ ಮತ್ತು ಪಾಟ್ನಾಗೆ ಅತ್ಯಂತ ಕಡಿಮೆ ಸಮಯದಲ್ಲಿ ಪ್ರಯಾಣಿಸುವ ಸೌಲಭ್ಯ ಒದಗಿಸುತ್ತಿದೆ. ನಾನು ಇದಕ್ಕಾಗಿ ರೈಲ್ವೆ ಸಚಿವರನ್ನು ಅಭಿನಂದಿಸುತ್ತೇನೆ. ಶ್ರೀ ಮನೋಜ್ ಸಿನ್ಹಾ ಅವರ ನಾಯಕತ್ವದಲ್ಲಿ ಜನರಿಗೆ ಸಾಕಷ್ಟು ಕೆಲಸ-ಕಾರ್ಯಗಳು ಆಗುತ್ತಿವೆ.

 

ಕಾಶಿಯು ಈಗ ನನ್ನ ಎರಡನೇ ಮನೆ ಎನಿಸಿಕೊಂಡಿದೆ. ಕಾಶಿಯ ಧಾರ್ಮಿಕ ಗುರುತಿಸುವಿಕೆಯು ಹರ್ ಹರ್ ಮಹದೇವ್ ಜತೆ ಗುರುತಿಸಿಕೊಂಡಿದೆ. ಕೈಗಾರಿಕೆಯ ದೃಷ್ಟಿಯಿಂದ ನೋಡಿದರೆ ಅದು ಡಿಎಲ್‌ಡಬ್ಲ್ಯು ಜತೆ ಜೋಡಣೆಗೊಂಡಿದೆ. ಹೀಗಾಗಿ ಡಿಎಲ್‌ಡಬ್ಲ್ಯು ಅಭಿವೃದ್ಧಿ ಪಡಿಸಲು ಭಾರತೀಯ ಸರ್ಕಾರವು ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಡಿಎಲ್‌ಡಬ್ಲ್ಯು ಅಭಿವೃದ್ದಿ, ವಿಸ್ತರಣೆ  ಮತ್ತು ಆಧುನೀಕರಣವನ್ನು ಮಾಡುತ್ತಿದ್ದು ಇದು ಹೆಚ್ಚು ಹೆಚ್ಚು ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ.

 

ಇತ್ತೀಚೆಗಷ್ಟೆ ಹೋಳಿ ಹಬ್ಬವನ್ನು ಆಚರಿಸಿಕೊಳ್ಳಲಾಗಿದೆ. ೮೦೦ ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ಹೊಸ ಬಣ್ಣ, ಸುಗಂಧ ಮತ್ತು ಭರವಸೆಯನ್ನು ಈ ಹೋಳಿಯು ನೀಡಿದೆ. ಇಲ್ಲಿನ ಬಡ ಜನರಿಗೆ ನಿರ್ಮಿಸಿಕೊಟ್ಟಿರುವ ಮನೆಗಳ ಕೀಗಳನ್ನು ಅವರಿಗೆ ಒಟ್ಟಿಸಲು ನನಗೆ ಖುಷಿಯಾಗುತ್ತಿದೆ. ನಾನು ಅವರನ್ನು ಈ ಹಿಂದೆ ನೀವು ಎಲ್ಲಿ ವಾಸ ಮಾಡುತ್ತಿದ್ದಿರಿ? ಎಂದು ಕೇಳಿದೆ. ಕೆಲವರು ಕಚ್ಚಾ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ಕೆಲವರು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ಇನ್ನೂ ಕೆಲವರು  ಪ್ರತಿನಿತ್ಯವೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರ ಮಾಡುವಂತಹ ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದರು. ಇದು ಅವರ ಬದುಕಾಗಿತ್ತು. ಈ ಮನೆಯನ್ನು ಪಡೆದ ನಂತರ ಹೇಗನಿಸುತ್ತಿದೆ? ನಿಮಗೆ ಏನಾದರೂ ಕಳೆದುಕೊಂಡ ಅನುಭವ ಆಗುತ್ತಿದೆಯಾ? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಮಾಡಿದೆ. ಆನಂತರ ನಾನು ಅವರನ್ನು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೀರಾ ಎಂದು ಪ್ರಶ್ನೆ ಮಾಡಿದೆ. ಎಲ್ಲರೂ ನನ್ನ ಈ ಪ್ರಶ್ನೆಗಳನ್ನು ದೂರದಿಂದಲೇ ಆಲಿಸುತ್ತಿದ್ದರು. ಈಗ ನಿಮಗೆ ಒಳ್ಳೆಯ ಮನೆ ಸಿಕ್ಕಿದೆ. ಈಗಲಾದರೂ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹೊಣೆಯನ್ನು ಈಡೇರಿಸಿ ಎಂದು ಆಗ್ರಹ ಮಾಡಿದೆ.

 

ಅತ್ಯಂತ ಕ್ರಾಂತಿಕಾರಿ ಸ್ವರೂಪದಲ್ಲಿ ವಸತಿ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ನಾನು ಶ್ರೀ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸುತ್ತೇನೆ. ಭಾರತ ಸರ್ಕಾರಕ್ಕೆ ಇದು ಹೊಸ ಯೋಜನೆಯೇನೂ ಅಲ್ಲ. ಈ ಹಿಂದಿನ ಸರ್ಕಾರವು ಇದ್ದ ಸಂದರ್ಭದಲ್ಲೂ ಈ ವಸತಿ ಯೋಜನೆಯು ಇತ್ತು. ಆ ಸಂದರ್ಭದಲ್ಲಿ ನಾನು ಕಾಶಿಗೆ ಭೇಟಿ ನೀಡಿದ್ದ ವೇಳೆ ಈ ಯೋಜನೆ ಅವರು ಒಂದು ಹೆಸರನ್ನೂ ಆಯ್ಕೆ ಮಾಡಿಲ್ಲ ಅಂತಾ ಹೇಳಿದ್ದೆ. ಆದರೆ ಶ್ರೀ ಯೋಗಿಜೀಯವರು ಫಲಾನುಭವಿಗಳ ಪಟ್ಟಿಯನ್ನು ಮಾಡಿದರು ಮತ್ತು ಭಾರತ ಸರ್ಕಾರಕ್ಕೆ ಈ ಪಟ್ಟಿಯನ್ನು ರವಾನೆ ಮಾಡಿದರು. ಆಗ ಭಾರತ ಸರ್ಕಾರವು ಅನುದಾನವನ್ನು ಹಂಚಿಕೆ ಮಾಡಿತು. ಕೇವಲ ಐದು ತಿಂಗಳುಗಳಲ್ಲಿ ೫ ಸಾವಿರ ಮನೆಗಳನ್ನು ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ಒದಗಿಸಿಕೊಡಲಾಗಿದೆ.  ಮುಂದಿನ ದಿನಗಳಲ್ಲಿ ೮ ಲಕ್ಷ ಕುಟುಂಬಗಳಿಗೆ ಸೂರು ಕಲ್ಪಿಸುವುದು ನಮ್ಮ ಕನಸಾಗಿದೆ. ಶ್ರೀ ಯೋಗಿಜಿ ಅವರ ನಾಯಕತ್ವದಲ್ಲಿ ನಿಗದಿತ ಅವಧಿಯಲ್ಲೇ ಈ ಕನಸನ್ನು ನನಸು ಮಾಡಿಕೊಳ್ಳುವುದು ಸಾಧ್ಯವಿದೆ.

 

ಇವತ್ತಿನ ಜಗತ್ತಿನಲ್ಲಿ ಮೂಲಸೌಕರ್ಯಗಳಿಲ್ಲದೇ ಅಭಿವೃದ್ಧಿ ಎನ್ನುವುದು ಅಸಾಧ್ಯದ ಮಾತು. ಸಂಪರ್ಕ ಎನ್ನುವುದು ಮಹತ್ತರವಾದುದು. ರೈಲುಗಳು ಮತ್ತು ರಸ್ತೆಗಳು ಅತ್ಯಂತ ಪ್ರಮುಖವಾಗಿವೆ. ಶಿವಪುರಿ ಮತ್ತು ಪುಲ್ವಾರಿಯಾ ನಡುವೆ ನಾಲ್ಕು ಪಥದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಎರಡು ರೈಲ್ವೆ ಕ್ರಾಸಿಂಗ್ ಮತ್ತು ಎರಡು ರೈಲ್ವೆ ಮೇಲು ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬನಾರಸ್‌ನಲ್ಲಿ ರೈಲ್ವೆ ನಿಲ್ದಾಣವನ್ನು ಆಧುನೀಕರಣ ಮಾಡಲಾಗುತ್ತಿದೆ.

 

ನಾನು ಇಂದು ತ್ಯಾಜ್ಯ ಉತ್ಸವವನ್ನು ಉದ್ಘಾಟನೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ಇಂದು ತ್ಯಾಜ್ಯ ಉತ್ಸವವನ್ನು ಮಾಡುತ್ತಿರುವುದಕ್ಕೂ ಕೆಲವರು ಅಚ್ಚರಿಪಡುತ್ತಿದ್ದಾರೆ. ಯಾರು ಮೋದಿಯನ್ನು ಇಷ್ಟಪಡುವುದಿಲ್ಲವೋ ಅವರು ತ್ಯಾಜ್ಯ ಉತ್ಸವವನ್ನು ವಿರೋಧಿಸುತ್ತಿದ್ದಾರೆ. ತ್ಯಾಜ್ಯದಿಂದಲೂ ಸಂಪತ್ತನ್ನು ರೂಪಿಸಬಹುದು. ತ್ಯಾಜ್ಯದಿಂದ ಅನುಕೂಲಕಾರಿ ವಸ್ತುಗಳನ್ನು ತಯಾರಿಕೆ ಮಾಡಬಹುದು ಮತ್ತು ಇದನ್ನು ಸಮೂಹ ಚಳವಳಿಯನ್ನಾಗಿಯೂ ರೂಪಿಸಬಹುದಾಗಿದೆ. ಇಂತಹ ತ್ಯಾಜ್ಯದ ಉತ್ಸವಗಳಿಗೆ ಪೋಷಕರು ಭೇಟಿ ನೀಡಬೇಕು. ಮಕ್ಕಳು ಇವುಗಳಿಂದ ತಯಾರು ಮಾಡಿ ಪ್ರದರ್ಶನ ಮಾಡಿರುವ ವಸ್ತುಗಳನ್ನು ವೀಕ್ಷಣೆ ಮಾಡಿ  ಬಾಟೆಲ್‌ಗಳು, ಬಿಸಾಕಿದ ಕಾಗದಗಳಿಂದ ಮಾಡಿರುವ ಉಪಯುಕ್ತ ವಸ್ತುಗಳನ್ನು ನೋಡಬೇಕು. ಮನೆಯ ಒಳಗೂ ಇಂತಹ ವಸ್ತುಗಳನ್ನು ಇಟ್ಟುಕೊಳ್ಳಬಹುದು ಎನ್ನುವುದನ್ನು ಜನರು ತಿಳಿದುಕೊಳ್ಳಲಿದ್ದಾರೆ. ಇಂತಹ ವಿಧಾನಗಳನ್ನು ಉತ್ತಮವಾದ ಉದ್ದೇಶಗಳಿಗೂ ನಾವು ಬಳಸಿಕೊಳ್ಳಬಹುದಾಗಿದೆ.

 

ನಾನು ಇಲ್ಲೊಂದು ಸಂಗೀತ ಕಾರ್ಯಕ್ರಮವನ್ನು ಆಲಿಸಿದೆ. ಅದು ಅತ್ಯಂತ ಮಹಾನ್ ಸಂಗೀತ ಕಾರ್ಯಕ್ರಮ. ಹಾಡನ್ನು ಹಾಡುವುದು ಮತ್ತು ಖಾಲಿ ಧಾರಕಗಳಿಂದ ಮಾಡಿದ ಸಂಗೀತ ಸಾಧನಗಳನ್ನು ನುಡಿಸುವುದು ಆರೋಗ್ಯಕರವಾದುದು. ಖಾಲಿ ಧಾರಕಗಳಿಂದ ಮಾಡಿದ ವಾಧ್ಯಗಳು ಅತ್ಯಂದ ಆಹ್ಲಾದಕರವಾದ ಸಂಗೀತವನ್ನು ಹೊರಸೂಸುತ್ತವೆ. ಇವತ್ತು ಏರ್ಪಡಿಸಿರುವ ಕಸದ ಉತ್ಸವದಲ್ಲಿ ಎಷ್ಟೋ ನಿರುಪಯೋಗಿ ಎಂದು ನಾವು ಬಿಸಾಡುವ ವಸ್ತುಗಳನ್ನೇ ಬಳಸಿ ಸದುಪಯೋಗಿ ವಸ್ತುಗಳನ್ನು ತಯಾರಿಕೆ ಮಾಡಲಾಗಿದೆ.

 

ವಾರಾಣಸಿಯು ಸ್ವಚ್ಛತೆಗೆ ಹೆಚ್ಚು ಮಹತ್ವವನ್ನು ನೀಡಿದೆ. ಇವತ್ತು ಜಗತ್ತಿನ ಎಲ್ಲಾ ಪ್ರವಾಸಿಗರನ್ನೂ ವಾರಾಣಾಸಿ ಕೈಬೀಸಿ ಕರೆಯುತ್ತಿದೆ. ಇವತ್ತು ವಾರಾಣಸಿ ಎಲ್ಲವೂ ಆಗಿದೆ. ಇದು ಶತಮಾನಗಳ ಹಿಂದೆಯೇ ಅಸ್ತಿತ್ವ ಕಂಡಿತ್ತು. ನಾವು ಇಂದು ಒಂದು ಅಂಶವನ್ನು ಹೆಚ್ಚು ಪಾಲಿಸಬೇಕು. ಅದೆಂದರೆ ವಾರಾಣಸಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.

 

ಇಂದು ಇಡೀ ವಿಶ್ವದ ಜನರು ವಾರಾಣಸಿಗೆ ಬರಲು ಹೆಚ್ಚು ಇಷ್ಟಪಡುತ್ತಿದ್ದಾರೆ. ಒಳಚರಂಡಿ ನೀರನ್ನು ಶುದ್ಧಿಕರಿಸುವ ಘಟಕವನ್ನು ಈಗಷ್ಟೇ ಆರಂಭಿಸಲಾಗಿದೆ. ೬೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಳಚರಂಡಿ ನೀರು ಶುದ್ಧಿಕರಣ ಘಟಕ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಬರುವ ಜನರಿಗೆ ಇದು ಎಷ್ಟರ ಮಟ್ಟಿಗೆ ಅನುಕೂಲಕಾರಿಯಾಗಿದೆ ಎನ್ನುವುದು ನಿಮಗೇ ಅರ್ಥವಾಗುತ್ತಿದೆ.

 

ನೀವು ಕಾಇ ಪಟ್ಟಣದಲ್ಲಿ ಣೇತಾಡುವ ತಂತಿಗಳನ್ನು ಕಾಣುತ್ತಿದ್ದಿರಿ. ನಾನು ಕಾಶಿ ನಗರವನ್ನು ಅಂತಹ ತಂತಿಗಳ(ವೈರ್)ಗುಚ್ಚದಿಂದ ಮುಕ್ತಮಾಡುವ ಪ್ರಯತ್ನವನ್ನು ಮಾಡಿದೆ. ಬನಾರಸ್‌ನಿಂದ ಇಡೀ ದೇಶದ ಉದ್ದಗಲಕ್ಕೆ ವೈರ್‌ಗಳನ್ನು ನೆಲದಡಿಯಲ್ಲಿ ಹೂತು ಹಾಕುವ ಕೆಲಸವನ್ನು ಆರಂಭಿಸಿದೆ. ಬನಾರಸ್‌ನಲ್ಲಿ ಈಕೆಲಸವು ಅತ್ಯಂತ ವೇಗವಾಗಿ ನಡೆಯುತ್ತಿದೆ.

 

ಅದೇ ರೀತಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ಅವರು ಹೂಡಿಕೆ ಸಮಾವೇಶವನ್ನು ಆಯೋಜಿಸಿದ್ದರು. ಆ ಸಂದರ್ಭದಲ್ಲಿ ರಕ್ಷಣಾ ಕಾರಿಡಾರ್ ಯೋಜನೆಯನ್ನು ಘೋಷಣೆ ಮಾಡಿದ್ದೆ. ಈ ರಕ್ಷಣಾ ಸಲಕರಣೆಗಳ ತಯಾರಿಕಾ ಕಾರಿಡಾರ್ ಎರಡಿರಂದ ಎರಡೂವರೆ ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸಲಿದೆ. ಶ್ರೀ ಯೋಗಿ ಅವರ ಸರ್ಕಾರವ ಮತ್ತು ಭಾರತೀಯ ಸರ್ಕಾರವು ಈ ಯೋಜನೆಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ.

 

ರೈತರ ಹಿತದೃಷ್ಟಿಯಿಂದ ಶ್ರೀ ಯೋಗಿ ಆದಿತ್ಯನಾಥ್ ಅವರು ವಿಶೇಷ ಆಸಕ್ತಿಯನ್ನು ಕೈಗೊಂಡಿರುವುದಕ್ಕೆ ನಾನು ಅಭಿನಂದಿಸಲು ಬಯಸುತ್ತೇನೆ. ಈ ಹಿಂದೆ ಕನಿಷ್ಟ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಘೋಷಣೆ ಮಾಡಲಾಗುತ್ತಿತ್ತು. ಆದರೆ ಭತ್ತವನ್ನು ಉತ್ತರಪ್ರದೇಶದಲ್ಲಿ ಬೆಳೆಯುತ್ತಿರಲಿಲ್ಲ. ಯೋಗಿಯವರು ಪ್ರಯತ್ನದ ಫಲವಾಗಿ ಇಂದು ಭತ್ತದ ಖರೀದಿಯು ನಾಲ್ಕು ಪಟ್ಟು ಹೆಚ್ಚಳ ಕಂಡಿದೆ. ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ದರವನ್ನು ಪಡೆದುಕೊಳ್ಳುತ್ತಿದ್ದಾರೆ.

 

ಇದಿಷ್ಟೇ ಅಲ್ಲದೇ ಕಬ್ಬು ಬೆಳೆಗಾರರಿಗೆ ನೀಡುವ ಕಬ್ಬಿನ ಬಾಕಿಯನ್ನು ಅತ್ಯಂತ ತ್ವರಿತವಾಗಿ ಮತ್ತು ಗೊತ್ತಾದ ಪರಿಮಾಣದಲ್ಲಿ ನೀಡುವುದನ್ನು ಶೇಕಡಾ ೪೦ರಷ್ಟು ಹೆಚ್ಚಳ ಮಾಡಲಾಗಿದೆ. ಕಾಶಿಯ ಮೂಲಸೌಕರ್ಯವನ್ನು ವೃದ್ಧಿ ಮಾಡಲು ಈ ಕೆಲಸಗಳು ಎಷ್ಟು ಸಹಕಾರಿಯಾಗಿವೆ ಎನ್ನುವುದನ್ನು ನೀವೇ ಆಲೋಚನೆ ಮಾಡಿ. ಇಂದು ಕೃಷಿ, ವಿದ್ಯುತ್ ಮತ್ತು ರೈಲ್ವೆಯ ಹತ್ತಲವು ಯೋಜನೆ ಮತ್ತು ಕಾಮಗಾರಿಗಳನ್ನು ಉದ್ಘಾಟನೆ ಮಾಡುವ ಅದೃಷ್ಟ ನನಗೆ ಸಿಕ್ಕಿದೆ.

 

ನಾವೆಲ್ಲರೂ ಸೇರಿ ಕಾಶಿಯನ್ನು ಇನ್ನಷ್ಟು ಎತ್ತರದ ಮಟ್ಟಕ್ಕೆ ಕೊಂಡೊಯ್ಯಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಶಿ ಮತ್ತು ಪೂರ್ವ ಉತ್ತರ ಪ್ರದೇಶದ ಭಾಗಗಳಲ್ಲಿ ಹಲವಾರು ಯೋಜನೆಗಳನ್ನು ತಂದು ಅನುಷ್ಠಾನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ನಾಗರಿಕರಿಗೆ ಇನ್ನಷ್ಟು ಮಹತ್ತರವಾದ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಆಯುಷ್ಮಾನ್ ಭಾರತ್ ಅನ್ನುವ ಆರೋಗ್ಯ ವಿಮಾ ಕಾರ್ಯಕ್ರಮವನ್ನು ಭಾರತ ಸರ್ಕಾರದಿಂದ ಬಡ ಕುಟುಂಬಗಳ ಕಲ್ಯಾಣದ ದರಷ್ಟಿಯಿಂದ ಆರಂಭಿಸಲಾಗುತ್ತಿದೆ. ಒಂದು ಕುಟುಂಬದಲ್ಲಿ ಯಾವುದಾದರೂ ಒಬ್ಬ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ ಅವನ ಇಡೀ ಕುಟುಂಬವು ಅದರಿಂದ ಸಂಕಷ್ಟಕ್ಕೆ ಗುರಿಯಾಗುತ್ತದೆ. ಕುಟುಂಬದ ಉಳಿತಾಯದಲ್ಲಿ ತನ್ನ ಹದಗೆಟ್ಟ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕಷ್ಟಕರವಾದ ಸನ್ನಿವೇಶವನ್ನು ಕುಟುಂಬ ಎದುರಿಸುತ್ತಿರುತ್ತದೆ. ಆ ಕುಟುಂಬದ ಎಲ್ಲ ಕನಸುಗಳೂ ಮತ್ತು ಯೋಜನೆಗಳು ಇದರಿಂದ ಕಮರಿಹೋಗುತ್ತವೆ. ಆತನು/ಆಕೆಯು ಏನನ್ನಾದರೂ ಅಡವಿಡದೇ ಈ ಆಸೆಗಳನ್ನು, ಗುರಿಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇರುತ್ತದೆ. ಇಂತಹದ್ದರಿಂದ ನನ್ನ ದೇಶದ ಜನರು ಕಷ್ಟ ಪಡಬೇಕೇ..?

 

ಸೋದರ/ಸೋದರಿಯರೇ, ಇದನ್ನು ನಾನು ಒಪ್ಪುವುದಿಲ್ಲ. ನಾವು ಒಂದು ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು ಇದರಲಿ ತಮ್ಮ ಆರೋಗ್ಯಕ್ಕೆ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಲಾಗದೆ ತೊಂದರೆಗೆ ಸಿಲುಕಿರುವ ಹತ್ತು ಕೋಟಿ ಬಡ ಕುಟುಂಬಗಳು ಅಥವಾ ಸರಿಸುಮಾರು ೫೦ ಕೋಟಿ ನಾಗರಿಕರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಆಯುಷ್ಮಾನ್ ಬಾರತ್ ಯೋಜನೆಯು ಅಡಿಯಲ್ಲಿ ಸರ್ಕಾರ ಮತ್ತು ವಿಮಾ ಕಂಪನಿಗಳು ಆ ಕುಟುಂಬದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಪ್ರತಿ ವರ್ಷಕ್ಕೆ ಕನಿಷ್ಠ ೫ ಲಕ್ಷ ರೂಪಾಯಿವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಿಕೊಡಲಿವೆ. ಇದರ ಜತೆಗೆ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದ ಬಡವರು  ಈ ಯೋಜನೆಯ ನೆರವಿನಿಂದ ಸಣ್ಣಸಣ್ಣ ಸಮಸ್ಯೆಗಳಿಗೂ ಆಸ್ಪತ್ರೆಗಳಿಗೆ ತೆರಳಲಿದ್ದಾರೆ. ತನ್ನ ಚಿಕಿತ್ಸೆಯ ವೆಚ್ಚವು ಮೋದಿ ಸಕಾರದಿಂದ ಭರಿಸಲ್ಪಡುತ್ತದೆ ಎನ್ನುವುದು ಆ ಕುಟುಂಬದ ಸದಸ್ಯರಿಗೆ ಗೊತ್ತಿರುತ್ತದೆ.

 

ಜನರು ನಮ್ಮ ಆಸ್ಪತ್ರೆಗಳಿಗೆ ಬರುವುದಿಲ್ಲ ಅಥವಾ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಿಲ್ಲ ಅನ್ನುವ ಕಾರಣಕ್ಕೆ ಖಾಸಗಿ ವ್ಯಕ್ತಿಗಳು ಸಣ್ಣ ಸಣ್ಣ ಪಟ್ಟಣಗಳಲ್ಲಿ ಆಸ್ಪತ್ರೆಗಳನ್ನೇ ತೆರೆಯುತ್ತಿರಲಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಖಾಸಗಿ ಆಸ್ಪತ್ರೆಗಳು ನಿರ್ಮಾಣಗೊಳ್ಳಲಿವೆ. ಆರೋಗ್ಯ ಸೇವೆಯನ್ನು ನೀಡುವ ಜನರು ಈಗ ಸೇವೆಯನ್ನು ನೀಡಲು ಸಜ್ಜಾಗಿದ್ದಾರೆ. ಆರೋಗ್ಯ ಸೇವೆಯ ಕ್ಷೇತ್ರದಲ್ಲೂ ಇದರಿಂದ ಉದ್ಯೋಗಗಳು ಸೃಷ್ಟಿಯಾಗಲಿವೆ ಮತ್ತು ನಾವು ದೇಶವನ್ನು ಆರೋಗ್ಯಕರವಾಗಿ ಇಡಲು ಸಾಧ್ಯವಿದೆ.

 

ಅಪೌಷ್ಠಿಕತೆ ಎನ್ನುವುದು ಇಂದು ನಮ್ಮ ದೇಶದ ದೊಡ್ಡ ಸಮಸ್ಯೆ ಎನಿಸಿಕೊಂಡಿದೆ. ನಾವು ಪೌಷ್ಠಿಕತೆಯನ್ನು ಒದಗಿಸುವ ಸಮರೋಪಾದಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೇಶದಲ್ಲಿರುವ ನಮ್ಮ ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ಎತ್ತರ ಮತ್ತು ತೂಕವನ್ನು ಹೊಂದುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ೯೦೦೦ ಕೋಟಿ ರೂಪಾಯಿಗಳನ್ನು ಬಳಕೆ ಮಾಡುತ್ತಿದ್ದೇವೆ. ನಮ್ಮ ದೇಶದ ಮಕ್ಕಳು ಆರೋಗ್ಯಕರವಾಗಿರಲು ಮತ್ತು ಅಪೌಷ್ಟಿಕ ಮುಕ್ತವಾಗಿರಲು ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು? ತರಬೇತಿ ನೀಡಲು ಯಾವ ರೀತಿಯ ವ್ಯವಸ್ಥೆಗಳು ಅಲ್ಲಿವೆ? ಇದೇ ವಿಚಾರದಲ್ಲಿ ತಾಯಂದಿರಿಗೆ ಯಾವ ರೀತಿ ತರಬೇತಿಯನ್ನು ನೀಡಬೇಕು?

 

ಈ ಎಲ್ಲಾ ಅಂಶಗಳನ್ನೂ ಪ್ರಧಾನ್ ಮಂತ್ರಿ ಪೋಷಣ್ ಮಿಷನ್ ಅಂದರೆ ಪಿಎಂಪಿಎಂ ಅಡಿಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಪೋಷಣ್ ಯೋಜನೆಯು ಬಡವರಲ್ಲಿ ಬಡವರಿಗಾಗಿ, ಮಧ್ಯಮವರ್ಗದ ಕುಟುಂಬಗಳ ೧೨-೧೪-೧೬ ವರ್ಷದ ಹೆಣ್ಣು ಮಕ್ಕಳಿಗೆ ಪೋಷಣ್ ಯೋಜನೆಯು ನೆರವಾಗಲಿದೆ. ೧೨-೧೪-೧೬ ವರ್ಷದ ಹೆಣ್ಣು ಮಕ್ಕಳು ಆರೋಗ್ಯಕರ ಮತ್ತು ಸಮರ್ಥವಾಗಿ ಇಲ್ಲದೇ ಹೋದರೆ ಅವರ ವಯಸ್ಸಿಗೆ ತಕ್ಕಂದೆ ದೈಹಿಕ ಬೆಳವಣಿಗೆಯೂ ಆಗುವುದಿಲ್ಲ. ಕೆಲವು ವರ್ಷಗಳ ನಂತರ ಆಕೆಯು ತಾಯಿಯಾದರೆ ಅವಳ ಮಕ್ಕಳೂ ಕೆಲವು ಆರೋಗ್ಯ ಸಮಸ್ಯೆಯೊಂದಿಗೇ ಜನಿಸುತ್ತವೆ. ಇಂತಹ ಮಕ್ಕಳನ್ನು ಲಾಲನೆ-ಪಾಲನೆ ಮಾಡುವಲ್ಲಿಯೇ ಈ ತಾಯಂದಿರ ಜೀವನ ಮುಗಿದುಹೋಗುತ್ತದೆ. ಇಂತಹ ಸಮಸ್ಯೆಗಳಿಂದ ಬಳಲದಂತೆ ಜನರನ್ನು ಪಾರು ಮಾಡುವ ಉದ್ದೇಶದಿಂದಲೇ ಪ್ರಧಾನ್ ಮಂತ್ರಿ ಪೋಷಣ್ ಯೋಜನೆಯನ್ನು ನಾವು ಜಾರಿಗೆ ತರುತ್ತಿದ್ದೇವೆ.

 

ಕಾಶಿ ಪಟ್ಟಣದ ನನ್ನ ಸೋದರ-ಸೋದರಿಯರೇ,

 

ಕಾಶಿಯು ಅಭಿವೃದ್ಧಿಯ ಎಲ್ಲ ಲಾಭಗಳನ್ನೂ ಪಡೆದುಕೊಂಡಿದೆ. ಗಂಗಾ ನದಿಯೊಂದಿಗೆ ನಂಟು ಹೊಂದಿದ ಎಲ್ಲಾ ಜನರೂ ಪ್ರಗತಿಯನ್ನು ಕಾಣುತ್ತಿದ್ದಾರೆ. ತಮ್ಮ ಭವಿಷ್ಯವನ್ನು ಅವರು ಈ ಯೋಜನೆಗಳಿಂದ ಕಾಣುತ್ತಿದ್ದಾರೆ.

 

ನಾನು ಮತ್ತೊಮ್ಮೆ ಶ್ರೀ ಯೋಗಿಜೀ ಅವರ ಸರ್ಕಾರಕ್ಕೆ ಶುಭ ಕೋರುತ್ತೇನೆ. ಏಕೆಂದರೆ ಅದು ಕೇಂದ್ರ ಸಕಾರದ ಯೋಜನೆಗಳನ್ನು ಸಮರ್ಪಕವಾಗಿ ವಿಸ್ತರಣೆ ಮಾಡುತ್ತಿದೆ. ಭಾರತದ ಯೋಜನೆಗಳನ್ನು ವಿಸ್ತಾರ ಮಾಡುತ್ತಿರುವುದಕ್ಕೆ ಅವರನ್ನು ಹಾರ್ದಿಕವಾದ ಧನ್ಯವಾದಗಳನ್ನೂ ಅರ್ಪಿಸುತ್ತೇನೆ. ನಮಗೆ ಇಷ್ಟೊಂದು ಭವ್ಯವಾದ ಸ್ವಾಗತವನ್ನು ನೀಡಿದ ಕಾಶಿ ಜನತೆಗೂ ನಾನು ನಮ್ಮ ನಮಸ್ಕಾರಗಳನ್ನು ತಿಳಿಸುತ್ತೇನೆ.

 

ಧನ್ಯವಾದಗಳು.