Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನ ಕೊಕ್ರಝಾರ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ

ಅಸ್ಸಾಂನ ಕೊಕ್ರಝಾರ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ


ಖುಳುಂಬ್ಯೆ ಕೊಕ್ರಝಾರ್!

ಸ್ನೇಹಿತರೆ,

ಪ್ರತೀಕೂಲ ಹವಾಮಾನದಿಂದಾಗಿ ನಾನು ಕೊಕ್ರಝಾರ್‌ಗೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಗುವಾಹತಿಯಿಂದ ಇಲ್ಲಿ ನಿಮ್ಮೊಂದಿಗೆ ಸಂವಹನ ನಡೆಸಲು ಸಾಧ್ಯವಾಯಿತು. ನಾನು ದೆಹಲಿಯಿಂದ ನಿಮ್ಮ ಬಳಿಗೆ ಬರಲು ಹೊರಟಿದ್ದೆ, ಆದರೆ ನಾನು ಗುವಾಹತಿಯಲ್ಲೇ ಇಳಿಯಬೇಕಾಯಿತು. ಈಗ ಗುವಾಹತಿಯಿಂದಲೇ ನಾನು ನಿಮ್ಮ ದರ್ಶನ ಪಡೆಯುತ್ತಿದ್ದೇನೆ, ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಅಸ್ಸಾಂ ಮುಖ್ಯಮಂತ್ರಿ, ಸಹೋದರ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿ ಸರ್ಬಾನಂದ ಸೋನೋವಾಲ್ ಜಿ, ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಹಗ್ರಾಮ ಮೊಹಿಲರಿ ಜಿ, ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಅಸ್ಸಾಂ ಸರ್ಕಾರದ ಸಚಿವರೆ, ಸಂಸದರೆ ಮತ್ತು ಶಾಸಕರೆ, ಬಿ.ಟಿ.ಸಿ.ಯ ಎಲ್ಲಾ ಪ್ರತಿನಿಧಿಗಳೆ, ಸಮಾಜದ ಎಲ್ಲಾ ಹಿರಿಯ ಸದಸ್ಯರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ಮೊದಲನೆಯದಾಗಿ ಬೋಡೋಫಾ ಉಪೇಂದ್ರನಾಥ ಬ್ರಹ್ಮ ಜಿ, ರೂಪನಾಥ ಬ್ರಹ್ಮ ಜಿ ಮತ್ತು ಈ ಪುಣ್ಯ ಭೂಮಿಯ ಮಹಾನ್ ವ್ಯಕ್ತಿಗಳಿಗೆ ನಾನು ಗೌರವದಿಂದ ನಮಸ್ಕರಿಸುತ್ತೇನೆ. ನಾನು ಎತ್ತ ನೋಡಿದರೂ ಎಲ್ಲೆಡೆ ಜನರೇ ಗೋಚರಿಸುತ್ತಿದ್ದಾರ, ತಾಯಂದಿರು ಮತ್ತು ಸಹೋದರಿಯರು ಸಹ ತಮ್ಮ ಆಶೀರ್ವಾದಗಳನ್ನು ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ನೀವು ಅಲ್ಲಿಗೆ ಅಪಾರ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮ ಈ ಪ್ರೀತಿ ನನ್ನ ಮೇಲಿನ ಸಾಲದಂತಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಮೂಲಕ ನಿಮಗೆ ಸೇವೆ ಸಲ್ಲಿಸುವ ಮೂಲಕ ಈ ಋಣ ತೀರಿಸುವುದು ಯಾವಾಗಲೂ ನನ್ನ ಪ್ರಯತ್ನವಾಗಿದೆ.

ಸ್ನೇಹಿತರೆ,

ಕೆಲವೇ ವಾರಗಳ ಹಿಂದೆ ನಾನು ಗುವಾಹತಿಯಲ್ಲಿದ್ದೆ, ಅಲ್ಲಿ ಬಾಗುರುಂಬ ದಹೌವಿನ ಭವ್ಯ ಆಚರಣೆಯಲ್ಲಿ ಶ್ರೀಮಂತ ಬೋಡೊ ಸಂಸ್ಕೃತಿಯ ಭಾಗವಾಗಲು ನನಗೆ ಅವಕಾಶ ಸಿಕ್ಕಿತು. ಬೋಡೊ ಸಮಾಜವು ತನ್ನ ಭಾಷೆ, ಸಂಸ್ಕೃತಿ ಮತ್ತು ಅದರ ಸಂಪ್ರದಾಯಗಳನ್ನು ಎಷ್ಟು ಚೆನ್ನಾಗಿ ಸಂರಕ್ಷಿಸಿ ಪೋಷಿಸಿದೆ ಎಂಬುದನ್ನು ನೋಡಲು ನನಗೆ ತುಂಬಾ ಹೆಮ್ಮೆಯಾಗುತ್ತದೆ. ಅದು ಬಾಥೌನ ಆಧ್ಯಾತ್ಮಿಕ ಸಂಪ್ರದಾಯವಾಗಲಿ ಅಥವಾ ಬೈಸಾ(ಕಿ)ಗು ಹಬ್ಬವಾಗಲಿ, ಇವೆಲ್ಲವೂ ಭಾರತದ ಸಾಂಸ್ಕೃತಿಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುತ್ತವೆ.

ಸ್ನೇಹಿತರೆ,

ಬಿಜೆಪಿ-ಎನ್‌ಡಿಎ ಡಬಲ್ ಎಂಜಿನ್ ಸರ್ಕಾರವು ಅಸ್ಸಾಂನ ಪರಂಪರೆಯ ಸಂರಕ್ಷಣೆ ಮತ್ತು ಅಸ್ಸಾಂನ ತ್ವರಿತ ಅಭಿವೃದ್ಧಿ ಎರಡಕ್ಕೂ ನಿರಂತರವಾಗಿ ಕೆಲಸ ಮಾಡುತ್ತಿದೆ. ಇಂದು ಈ ಕಾರ್ಯಕ್ರಮದಲ್ಲೇ, ಈ ಪ್ರದೇಶದ ಅಭಿವೃದ್ಧಿಗಾಗಿ 4,500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆದಿದೆ. ಇದರಲ್ಲಿ 1,100 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಬೋಡೋಲ್ಯಾಂಡ್‌ನ ರಸ್ತೆಗಳಿಗೆ ಖರ್ಚು ಮಾಡಲಾಗುವುದು. ಈ ಅಭಿಯಾನದ 3ನೇ ಹಂತವಾದ ಅಸ್ಸಾಂ ಮಾಲಾದಿಂದ, ಅಸ್ಸಾಂನ ರಸ್ತೆ ಸಂಪರ್ಕವು ಇನ್ನಷ್ಟು ಸಬಲೀಕರಣಗೊಳ್ಳಲಿದೆ.

ಸ್ನೇಹಿತರೆ,

ಸ್ವಲ್ಪ ಸಮಯದ ಹಿಂದೆ, ಕಾಮಾಕ್ಯ-ಚೆರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಗುವಾಹತಿ-ನ್ಯೂ ಜಲ್ಪೈಗುರಿ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವ ಅವಕಾಶ ನನಗೆ ಸಿಕ್ಕಿತು. ಈ ಎಲ್ಲಾ ಯೋಜನೆಗಳಿಂದ ನಿಮಗೆ ಅನೇಕ ಸೌಲಭ್ಯಗಳು ಸಿಗುವುದಲ್ಲದೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ಇದರ ಮೂಲಕ ರೈತರ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗಳನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಕಳೆದ ದಶಕಗಳಲ್ಲಿ ಕೊಕ್ರಝಾರ್ ಸೇರಿದಂತೆ ಈ ಇಡೀ ಪ್ರದೇಶವು ಬಹಳಷ್ಟು ಕಷ್ಟ ಅನುಭವಿಸಿದೆ ಮತ್ತು ಬಹಳಷ್ಟು ಕಳೆದುಕೊಂಡಿದೆ. ಈ ಬೆಟ್ಟಗಳಲ್ಲಿ ಬಾಂಬ್‌ಗಳು ಮತ್ತು ಬಂದೂಕುಗಳ ಪ್ರತಿಧ್ವನಿಗಳು ಮಾತ್ರ ಕೇಳಿಬರುತ್ತಿದ್ದ ಆ ಕಷ್ಟದ ಸಮಯಗಳನ್ನು ನಾವು ನೋಡಿದ್ದೇವೆ. ಆದರೆ ಇಂದು ಈ ಚಿತ್ರಣ ಬದಲಾಗುತ್ತಿದೆ. ಇಂದು ಈ ಬೆಟ್ಟಗಳು ‘ಖಾಮ್’ನ ನಿನಾದ ಮತ್ತು ‘ಸಿಫುಂಗ್’ನ ಮಧುರ ರಾಗಗಳೊಂದಿಗೆ ಪ್ರತಿಧ್ವನಿಸುತ್ತಿವೆ. ಇಂದು ಬೋಡೋಲ್ಯಾಂಡ್ ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗಿದೆ. ಇಂದು ಅಸ್ಸಾಂ ಶಾಂತಿ ಮತ್ತು ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯುತ್ತಿದೆ.

ಸ್ನೇಹಿತರೆ,

ಇಂದು, ಬಿ.ಟಿ.ಆರ್. ಪ್ರದೇಶದ 6 ಪ್ರಮುಖ ರಸ್ತೆ ಯೋಜನೆಗಳ ಶಿಲಾನ್ಯಾಸ ಸಮಾರಂಭ ಇಲ್ಲಿ ನಡೆದಿದೆ. ಅಲ್ಲದೆ, ಈ ಪ್ರದೇಶದ ರೈಲು ಸಂಪರ್ಕ ಬಲಪಡಿಸಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿ ನಿರ್ಮಿಸಲಾಗುವ ರೈಲ್ವೆ ಕಾರ್ಯಾಗಾರವು ಈ ಪ್ರದೇಶವನ್ನು ಸರಕು ಸಾಗಣೆಯ ದೊಡ್ಡ ಕೇಂದ್ರವನ್ನಾಗಿ ಮಾಡಲಿದೆ. ಭೂತಾನ್ ಅನ್ನು ಸಂಪರ್ಕಿಸುವ ರೈಲು ಮಾರ್ಗದ ಕೆಲಸವೂ ಇಲ್ಲಿ ನಡೆಯುತ್ತಿದೆ, ಅನೇಕ ನಿಲ್ದಾಣಗಳನ್ನು ಸಹ ಆಧುನಿಕಗೊಳಿಸಲಾಗುತ್ತಿದೆ. ಈಗ ವಂದೇ ಭಾರತ್ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಕೊಕ್ರಝಾರ್‌ನಲ್ಲಿ ನಿಲುಗಡೆ ಆಗುತ್ತವೆ. ಇದು ಬೋಡೋಲ್ಯಾಂಡ್‌ನ ಉತ್ತಮ ಸಂಪರ್ಕಕ್ಕೆ ಪುರಾವೆಯಾಗಿದೆ. ಇಂತಹ ಯೋಜನೆಗಳೊಂದಿಗೆ, ಕೊಕ್ರಝಾರ್ ಒಂದು ಬೃಹತ್ ವ್ಯಾಪಾರ ಕೇಂದ್ರವಾಗಲಿದೆ.

ಸ್ನೇಹಿತರೆ,

ಈ ಅಭಿವೃದ್ಧಿ ಕಾರ್ಯಗಳಿಗಾಗಿ ಹಗ್ರಾಮ ಮೊಹಿಲರಿ ಜಿ ಅವರ ತಂಡ ಮತ್ತು ಹೇಮಂತ ಜಿ ಅವರ ಇಡೀ ತಂಡವನ್ನು ನಾನು ತುಂಬಾ ಅಭಿನಂದಿಸುತ್ತೇನೆ.

ಸ್ನೇಹಿತರೆ,

ದಶಕಗಳಿಂದ ಬೋಡೋಲ್ಯಾಂಡ್‌ನ ಈ ಪ್ರದೇಶವು ಕಾಂಗ್ರೆಸ್‌ನ ದ್ರೋಹಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಬೋಡೋಲ್ಯಾಂಡ್‌ನ ಹಲವು ತಲೆಮಾರುಗಳನ್ನು ಬರೀ ಸುಳ್ಳಿನ ಕನಸುಗಳಲ್ಲಿ ಸಿಲುಕಿಸಿತು. ದೆಹಲಿಯಲ್ಲಿ ಕುಳಿತಿದ್ದ ಕಾಂಗ್ರೆಸ್ ಸರ್ಕಾರಗಳು ಕೇವಲ ಪ್ರದರ್ಶನಕ್ಕಾಗಿ ಕಾಗದದಲ್ಲಿ ಒಪ್ಪಂದಗಳನ್ನು ಮಾಡಿಕೊಂಡವು.

ಸ್ನೇಹಿತರೆ,

ನೀವು ದೇಶ ಮತ್ತು ಅಸ್ಸಾಂ ಎರಡರಿಂದಲೂ ಕಾಂಗ್ರೆಸ್ ಅನ್ನು ಹೊರಹಾಕಿ ಬಿಜೆಪಿ-ಎನ್‌ಡಿಎಗೆ ಅವಕಾಶ ನೀಡಿದಾಗ, ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಪ್ರಾರಂಭಿಸಿದೆವು. ಕಾಂಗ್ರೆಸ್ ತನ್ನ ಸ್ವಾರ್ಥ ರಾಜಕೀಯಕ್ಕಾಗಿ ವಿವಿಧ ಸಮುದಾಯಗಳ ನಡುವೆ ಬಿರುಕುಗಳನ್ನು ಸೃಷ್ಟಿಸುತ್ತಿದ್ದ ಸ್ಥಳದಲ್ಲಿ, ಬಿಜೆಪಿ ಶಾಶ್ವತ ಶಾಂತಿಗಾಗಿ ಕೆಲಸ ಮಾಡಿತು. ಈ ಚಿಂತನೆಯೊಂದಿಗೆ, ಬೋಡೊ ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದದಲ್ಲಿ, ಮೊದಲ ಬಾರಿಗೆ ಎಲ್ಲಾ ಪ್ರಮುಖ ಸಂಘಟನೆಗಳು ಮತ್ತು ಗುಂಪುಗಳನ್ನು ಒಟ್ಟುಗೂಡಿಸಲಾಯಿತು.

ಸ್ನೇಹಿತರೆ,

ಕಾಂಗ್ರೆಸ್ ಬಗ್ಗೆ ಮತ್ತೊಂದು ಸತ್ಯವಿದೆ, ಕಾಂಗ್ರೆಸ್ ಸುಳ್ಳು ಭರವಸೆಗಳ ಅಂಗಡಿಯಾಗಿದೆ. ಒಂದು ಸುಳ್ಳು ಭರವಸೆಯೊಂದಿಗೆ, ಅದು 4 ಸೂಪರ್-ಸುಳ್ಳುಗಳನ್ನು ಉಡುಗೊರೆಯಾಗಿ ನೀಡುತ್ತದೆ. ಏಕೆಂದರೆ, ಆ ಭರವಸೆಗಳನ್ನು ಪೂರೈಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿರಲಿಲ್ಲ. ಮತ್ತೊಂದೆಡೆ, ಬಿಜೆಪಿ-ಎನ್‌ಡಿಎ ಮಾದರಿ ನಿಮ್ಮ ಮುಂದೆ ಇದೆ. ನಮ್ಮ ಡಬಲ್-ಎಂಜಿನ್ ಸರ್ಕಾರ ಏನೇ ಹೇಳಿದರೂ ಅದನ್ನು ನಿಜವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ, ಇದು ಇಂದಿನ ವಿಷಯವಲ್ಲ. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಜಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ದೆಹಲಿಯಲ್ಲಿದ್ದಾಗ, ಆಗಲೂ ನಾವು ಸತ್ಯ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಡಲಿಲ್ಲ. ಅದರ ಅಡಿ, ಆರನೇ ವೇಳಾಪಟ್ಟಿಯಲ್ಲಿ ಬಿಟಿಸಿ ರಚನೆಯಾಯಿತು, ಇದು ಬೋಡೋಲ್ಯಾಂಡ್‌ನ ಅಭಿವೃದ್ಧಿಗೆ ಬಲ ನೀಡಿತು. ಬೋಡೋಲ್ಯಾಂಡ್ ವಿಶ್ವವಿದ್ಯಾಲಯವನ್ನು ಇಲ್ಲಿ ನಿರ್ಮಿಸಲಾಯಿತು, ಕೇಂದ್ರೀಯ ತಂತ್ರಜ್ಞಾನ ಸಂಸ್ಥೆಯನ್ನು ನಿರ್ಮಿಸಲಾಯಿತು, ಎಂಜಿನಿಯರಿಂಗ್ ಕಾಲೇಜು ನಿರ್ಮಿಸಲಾಯಿತು, ಅಂತಹ ಅನೇಕ ಯೋಜನೆಗಳು ಇಲ್ಲಿಗೆ ಬಂದವು.

ಸ್ನೇಹಿತರೆ,

2020ರ ಒಪ್ಪಂದದ ಅಡಿ, ನಾವು ನೀಡಿದ ಯಾವುದೇ ಭರವಸೆಗಳನ್ನು ಒಂದರ ನಂತರ ಒಂದರಂತೆ ವೇಗವಾಗಿ,ನಿರಂತರ ಕಠಿಣ ಪರಿಶ್ರಮದ ಮೂಲಕ ಮಾಡಲಾಗುತ್ತಿದೆ. ಬೋಡೊ ಭಾಷೆಗೆ ಸಹಾಯಕ ಅಧಿಕೃತ ಭಾಷೆಯ ಸ್ಥಾನಮಾನ ನೀಡಲಾಗಿದೆ. ಬೋಡೋಲ್ಯಾಂಡ್‌ಗಾಗಿ 1,500 ಕೋಟಿ ರೂಪಾಯಿಗಳ ವಿಶೇಷ ಅಭಿವೃದ್ಧಿ ಪ್ಯಾಕೇಜ್ ನೀಡಲಾಗಿದೆ. ಇಂದು ಕೊಕ್ರಜಾರ್‌ನಲ್ಲಿ ವೈದ್ಯಕೀಯ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ ಮತ್ತು ತಮುಲ್ಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ. ಇಲ್ಲಿ ಹೊಸ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇಂದು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಅಸ್ಸಾಂನ ಸುಮಾರು 10 ಸಾವಿರ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಮೂಲಕ ಮುನ್ನಡೆಸಲಾಗುತ್ತಿದೆ. ಇಂದು ತಮ್ಮ ಪುತ್ರರು ಮನೆಗೆ ಮರಳಿದ್ದಾರೆ ಎಂದು ಆ ಎಲ್ಲಾ ತಾಯಂದಿರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಗಳೊಂದಿಗೆ ಸಮೃದ್ಧಿ ಜೀವನ ನಡೆಸುತ್ತಿದ್ದಾರೆ.

ಸ್ನೇಹಿತರೆ,

ನಮ್ಮ ಸರ್ಕಾರವು ಬೋಡೋ ಸಮಾಜದ ನಂಬಿಕೆ ಮತ್ತು ಸಂಪ್ರದಾಯಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಗುವಂತೆ ನೋಡಿಕೊಂಡಿದೆ. ಬೋಡೊ ಸಮಾಜದ ಸಾಂಪ್ರದಾಯಿಕ ನಂಬಿಕೆಯಾದ ಬಾಥೌಗೆ ಸಹ ಹೆಚ್ಚಿನ ಗೌರವ ನೀಡಲಾಗಿದೆ, ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ವಿಶೇಷ ಸಹಾಯ ನೀಡಲಾಗುತ್ತಿದೆ.

ಸ್ನೇಹಿತರೆ,

ಕಾಂಗ್ರೆಸ್‌ನ ಮತ್ತೊಂದು ದೊಡ್ಡ ಪಾಪವಿದೆ, ಅದು ದೇಶ ಮತ್ತು ಅಸ್ಸಾಂನ ಭದ್ರತೆಗೆ ಬಹಳ ದೊಡ್ಡ ಬೆದರಿಕೆಯಾಗಿದೆ. ಇದು ರೋಟಿ, ಬೇಟಿ ಮತ್ತು ಮಾತಿ(ಅನ್ನ, ಮಗಳು ಮತ್ತು ಭೂಮಿ) ಮೂರರ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಕಾಂಗ್ರೆಸ್‌ನ ಕೈ ಯಾವಾಗಲೂ ನುಸುಳುಕೋರರ ಜೊತೆಗಿದೆ, ಅದು ಇಂದಿಗೂ ಇದೆ. ದಶಕಗಳಿಂದ ಕಾಂಗ್ರೆಸ್ ಇಲ್ಲಿನ ಮೂಲ ನಿವಾಸಿಗಳಿಗೆ ಭೂಮಿಯ ಕಾನೂನು ದಾಖಲೆಗಳನ್ನು ನೀಡಲಿಲ್ಲ. ಕಾಂಗ್ರೆಸ್ ಬುಡಕಟ್ಟು ಜನಾಂಗದವರಿಗೆ ಸೇರಿದ ಬಹಳಷ್ಟು ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸಿತು. ಧುಬ್ರಿ ಮತ್ತು ಗೋಲ್‌ಪಾರಾದಂತಹ ಜಿಲ್ಲೆಗಳಲ್ಲಿ ಪರಿಸ್ಥಿತಿ ತುಂಬಾ ಭಯಾನಕವಾಗಿತ್ತು. ಇದರಿಂದಾಗಿ, ಬೋಡೋಲ್ಯಾಂಡ್‌ನಲ್ಲಿ ಜನಸಂಖ್ಯಾ ಸಮತೋಲನವು ತೊಂದರೆಗೊಳಗಾಗುತ್ತಿತ್ತು. ಸಮಾಜದ ಮೇಲೆ ಬಿಕ್ಕಟ್ಟು ಬರಲು ಪ್ರಾರಂಭಿಸಿತು. ಹೇಮಂತ ಜಿ ನೇತೃತ್ವದಲ್ಲಿ ನುಸುಳುಕೋರರ ವಶದಿಂದ ಭೂಮಿಯನ್ನು ಮುಕ್ತಗೊಳಿಸಲು ಅಸ್ಸಾಂನಲ್ಲಿ ಬಹಳ ದೊಡ್ಡ ಅಭಿಯಾನ ನಡೆಯುತ್ತಿದೆ ಎಂಬುದರಿಂದ ನನಗೆ ತೃಪ್ತಿ ಇದೆ. ಇಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರವು ಅಸ್ಸಾಂನ ಮೂಲ ನಿವಾಸಿಗಳಿಗೆ ಭೂಮಿಯ ಕಾನೂನು ದಾಖಲೆಗಳನ್ನು ನೀಡಿದೆ. ಈ ಅಭಿಯಾನವನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಕ್ಕಾಗಿ ಬುಡಕಟ್ಟು ಸಮುದಾಯಕ್ಕೂ ನನ್ನ ಹೃದಯದಿಂದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಂದು ನಾನು ನಿಮ್ಮನ್ನು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಲು ಬಂದಿದ್ದೇನೆ. ದೇಶದಲ್ಲಿ ಈಗ ನುಸುಳುಕೋರರಿಗೆ ಸ್ಥಳವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿ. ಅಸ್ಸಾಂನಿಂದ ಹೊರಹೊಮ್ಮುವ ಈ ಸಂದೇಶವು ಇಡೀ ದೇಶದ ಧ್ವನಿಯಾಗುತ್ತದೆ.

ಸ್ನೇಹಿತರೆ,

ನಾವು ಅಸ್ಸಾಂನ ಅಭಿವೃದ್ಧಿಯ ವೇಗವನ್ನು ನಿರಂತರವಾಗಿ ಹೆಚ್ಚಿಸಬೇಕು. ಅಸ್ಸಾಂ ಜನರ ಆಶೀರ್ವಾದದೊಂದಿಗೆ, ಅಭಿವೃದ್ಧಿ ಹೊಂದಿದ ಅಸ್ಸಾಂನ ನಿರ್ಣಯವು ಖಂಡಿತವಾಗಿಯೂ ಸಾಕಾರಗೊಳ್ಳುತ್ತದೆ ಎಂಬುದು ನನಗೆ ತಿಳಿದಿದೆ. ಈ ನಂಬಿಕೆಯೊಂದಿಗೆ, ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ, ಅನೇಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು.

ನಮಸ್ಕಾರ.

 

*****