ಪಿಎಂಇಂಡಿಯಾ
ನನ್ನ ಪ್ರಿಯ ದೇಶವಾಸಿಗಳೇ, ಎಲ್ಲರಿಗೂ ನಮಸ್ಕಾರ.
‘ಮನದ ಮಾತು’ ಗೆ ನಿಮಗೆ ಸ್ವಾಗತ, ಅಭಿನಂದನೆಗಳು. ‘ಮನದ ಮಾತು’ ದೇಶ ಮತ್ತು ದೇಶವಾಸಿಗಳ ಸಾಧನೆಗಳನ್ನು ಮುನ್ನೆಲೆಗೆ ತರುವ ಒಂದು ಸದೃಢ ವೇದಿಕೆ ಆಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ Global AI Impact Summit ನಲ್ಲಿ ಭಾರತವು ಇಂತಹದೇ ಒಂದು ಸಾಧನೆಯನ್ನು ಕಂಡಿದೆ. ಹಲವು ದೇಶಗಳ ನಾಯಕರು, ಉದ್ಯಮ ಕ್ಷೇತ್ರದ ದಿಗ್ಗಜರು, ನಾವೀನ್ಯಕಾರರು ಮತ್ತು ನವೋದ್ಯಮ ವಲಯಕ್ಕೆ ಸಂಬಂಧಿಸಿದವರು AI Impact Summit ಗಾಗಿ ಭಾರತ ಮಂಟಪದಲ್ಲಿ ಒಟ್ಟುಗೂಡಿದ್ದರು. ಮುಂಬರುವ ದಿನಗಳಲ್ಲಿ ಜಗತ್ತು AI ಶಕ್ತಿಯನ್ನು ಹೇಗೆ ಬಳಸಿಕೊಳ್ಳಲಿದೆ ಎಂಬ ದಿಕ್ಕಿನಲ್ಲಿ ಈ ಶೃಂಗಸಭೆ ಒಂದು ನಿರ್ಣಾಯಕಘಟ್ಟ ಎಂದೇ ಸಾಬೀತಾಗಿದೆ.
ಸ್ನೇಹಿತರೇ,
ಈ ಶೃಂಗಸಭೆಯಲ್ಲಿ ನನಗೆ ವಿಶ್ವ ನಾಯಕರು ಹಾಗೂ Tech CEOಗಳನ್ನು ಭೇಟಿಯಾಗುವ ಅಮೂಲ್ಯ ಅವಕಾಶ ಲಭಿಸಿತು. AI Summit ನ Exhibition ನಲ್ಲಿ ನಾನು ಜಗತ್ತಿನ ನಾಯಕರಿಗೆ ಸಾಕಷ್ಟು ವಿಷಯಗಳನ್ನು ಪರಿಚಯಿಸಿದೆ. ಇಲ್ಲಿ ನಾನು ಮುಖ್ಯವಾಗಿ ಎರಡು ವಿಷಯಗಳನ್ನು ಉಲ್ಲೇಖಿಸಲು ಬಯಸುತ್ತೇನೆ. ಶೃಂಗಸಭೆಯಲ್ಲಿ ಈ ಎರಡು ಉತ್ಪನ್ನಗಳು ವಿಶ್ವದಾದ್ಯಂತದ ನಾಯಕರ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ಮೊದಲ ಉತ್ಪನ್ನವು ‘ಅಮುಲ್‘ ಮಳಿಗೆಯಲ್ಲಿತ್ತು. ಅದರಲ್ಲಿ AI ಹೇಗೆ ಪ್ರಾಣಿಗಳ ಚಿಕಿತ್ಸೆಯಲ್ಲಿ ನಮಗೆ ಸಹಾಯ ಮಾಡುತ್ತಿದೆ ಮತ್ತು 24×7 AI ಸಹಾಯದ ಮೂಲಕ ರೈತರು ತಮ್ಮ ಹಾಲಿನಉತ್ಪನ್ನ ಹಾಗೂ ಪಶುಗಳ ಲೆಕ್ಕವನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿವರಿಸಲಾಗಿತ್ತು.
ಸ್ನೇಹಿತರೇ,
ಎರಡನೇ ಉತ್ಪನ್ನವು ನಮ್ಮ ಸಂಸ್ಕೃತಿಗೆ ಸಂಬಂಧಿಸಿದ್ದಾಗಿತ್ತು. ಹೇಗೆ AI ನ ಸಹಾಯದಿಂದ ನಾವು ನಮ್ಮ ಪ್ರಾಚೀನ ಗ್ರಂಥಗಳನ್ನು, ನಮ್ಮ ಪ್ರಾಚೀನ ಜ್ಞಾನವನ್ನು, ನಮ್ಮ ಹಸ್ತಪ್ರತಿಗಳನ್ನು (Manuscripts) ಸಂರಕ್ಷಿಸುತ್ತಿದ್ದೇವೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ರೂಪಾಂತರಿಸುತ್ತಿದ್ದೇವೆ ಎಂಬುದನ್ನು ನೋಡಿ ಇಡೀ ವಿಶ್ವದ ನಾಯಕರು ಆಶ್ಚರ್ಯಚಕಿತರಾದರು.
Exhibition ವೇಳೆ ಪ್ರದರ್ಶನಕ್ಕಾಗಿ ಸುಶ್ರುತ ಸಂಹಿತೆಯನ್ನು ಆಯ್ಕೆ ಮಾಡಲಾಗಿತ್ತು. ಮೊದಲ ಹಂತದಲ್ಲಿ ತಂತ್ರಜ್ಞಾನದ ಸಹಾಯದಿಂದ ನಾವು ಹಸ್ತಪ್ರತಿಗಳ ಚಿತ್ರದ ಗುಣಮಟ್ಟವನ್ನು ಹೇಗೆ ಸುಧಾರಿಸಿ ಅವುಗಳನ್ನು ಓದಲು ಯೋಗ್ಯವಾಗಿಸುತ್ತಿದ್ದೇವೆ ಎಂಬುದನ್ನು ತೋರಿಸಲಾಯಿತು. ಎರಡನೇ ಹಂತದಲ್ಲಿ ಈ ಚಿತ್ರವನ್ನು ಯಂತ್ರಕ್ಕೆ ಓದಲು ಸಾಧ್ಯವಾಗುವ ಬರವಣಿಗೆಯಾಗಿ ಪರಿವರ್ತಿಸಲಾಯಿತು. ಮುಂದಿನ ಹಂತದಲ್ಲಿ machine-readable text ಅನ್ನು ಒಂದು AI avatar ಓದಿತು. ನಂತರದ ಹಂತದಲ್ಲಿ ತಂತ್ರಜ್ಞಾನದ ಮೂಲಕ ಈ ಅಮೂಲ್ಯ ಭಾರತೀಯ ಜ್ಞಾನವನ್ನು ಭಾರತೀಯ ಭಾಷೆಗಳಿಗೆ ಹಾಗೂ ವಿದೇಶಿ ಭಾಷೆಗಳಿಗೆ ಹೇಗೆ ಅನುವಾದಿಸಬಹುದು ಎಂಬುದನ್ನೂ ಪ್ರದರ್ಶಿಸಲಾಯಿತು. ಭಾರತದ ಪ್ರಾಚೀನ ಜ್ಞಾನವನ್ನು ಆಧುನಿಕ avatar ಮೂಲಕ ತಿಳಿದುಕೊಳ್ಳುವ ವಿಷಯದಲ್ಲಿ ವಿಶ್ವದ ನಾಯಕರು ಬಹಳ ಆಸಕ್ತಿ ತೋರಿಸಿದರು.
ಸ್ನೇಹಿತರೇ,
ಈ ಶೃಂಗಸಭೆಯಲ್ಲಿ ಜಗತ್ತಿಗೆ AI ಕ್ಷೇತ್ರದಲ್ಲಿ ಭಾರತದ ಅದ್ಭುತ ಸಾಮರ್ಥ್ಯಗಳನ್ನು ನೋಡುವ ಅವಕಾಶ ದೊರೆಯಿತು. ಇದೇ ಸಂದರ್ಭದಲ್ಲಿ ಭಾರತವು ಮೂರು ಸ್ವದೇಶಿ ನಿರ್ಮಿತ AI Model ಗಳನ್ನೂ ಬಿಡುಗಡೆ ಮಾಡಿತು. ಇದುವರೆಗಿನ ಶೃಂಗಸಭೆಗಳಲ್ಲಿ ಇದು ಅತಿ ದೊಡ್ಡ AI ಶೃಂಗಸಭೆ ಆಗಿತ್ತು. ಈ ಶೃಂಗಸಭೆ ಕುರಿತು ಯುವಜನರಲ್ಲಿ ಕಂಡ ಉತ್ಸಾಹ ನಿಜಕ್ಕೂ ಗಮನಾರ್ಹವಾಗಿತ್ತು. ಈ ಶೃಂಗಸಭೆಯನ್ನು ಯಶಸ್ವಿಗೊಳಿಸಿದ ಎಲ್ಲಾ ದೇಶವಾಸಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ನಾನು ಆಗಾಗ ಹೇಳುತ್ತಿರುತ್ತೇನೆ – ‘ಯಾರು ಆಡುತ್ತಾರೋ ಅವರು ಅರಳುತ್ತಾರೆ’ ಎಂದು. ಕ್ರೀಡೆ ನಮ್ಮಲ್ಲಿ ಒಗ್ಗಟ್ಟನ್ನು ಮೂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನೀವು T-20 world cup ಪಂದ್ಯಗಳನ್ನು ನೋಡುತ್ತಿರಬಹುದು. ಪಂದ್ಯ ನೋಡುತ್ತಿರುವಾಗ ನಮ್ಮ ಕಣ್ಣುಗಳು ಕೆಲವೊಮ್ಮೆ ಯಾರೋ ಒಬ್ಬ ಆಟಗಾರನ ಮೇಲಿರುತ್ತದೆ ಎಂಬುದು ಖಚಿತ. ಅವರು ಧರಿಸುವ ಜರ್ಸಿ ಮತ್ತೊಂದು ದೇಶದ್ದಾಗಿರಬಹುದು, ಆದರೆ ಹೆಸರು ಕೇಳಿದಾಗ “ಅರೇ, ಇವನು ನಮ್ಮ ದೇಶದವನೇ ಅಲ್ಲವೇ!” ಎಂದು ಅನಿಸುತ್ತದೆ. ಆಗ ಹೃದಯದ ಯಾವುದೋ ಒಂದು ಮೂಲೆಯಲ್ಲಿ ಸಣ್ಣದಾಗಿ ಸಂತೋಷ ಮೂಡುತ್ತದೆ. ಏಕೆಂದರೆ ಆ ಆಟಗಾರ ಭಾರತೀಯ ಮೂಲದವನಾಗಿರುತ್ತಾನೆ ಮತ್ತು ಅವನ ಕುಟುಂಬ ನೆಲೆಸಿರುವ ದೇಶಕ್ಕಾಗಿ ಅವನು ಆಡುತ್ತಿರುತ್ತಾನೆ. ಅವರು ತಮ್ಮ ತಮ್ಮ ದೇಶಗಳ ಜರ್ಸಿ ಧರಿಸಿ ಮೈದಾನಕ್ಕಿಳಿದು, ಮನಃಪೂರ್ವಕವಾಗಿ ಆ ದೇಶವನ್ನು ಪ್ರತಿನಿಧಿಸುತ್ತಾರೆ.
ಕೆನಡಾ ತಂಡದಲ್ಲಿ ಭಾರತೀಯ ಮೂಲದ ಅತಿ ಹೆಚ್ಚು ಆಟಗಾರರಿದ್ದಾರೆ. ತಂಡದ ನಾಯಕ ದಿಲ್ಪ್ರೀತ್ ಬಾಜ್ವಾ ಅವರು ಜನಿಸಿದ್ದು ಪಂಜಾಬ್ನ ಗುರುದಾಸಪುರದಲ್ಲಿ. ನವನೀತ್ ಧಾಲಿವಾಲ್ ಚಂಡೀಗಢದವರು. ಈ ಪಟ್ಟಿಯಲ್ಲಿ ಹರ್ಷ್ ಠಾಕರ್ ಮತ್ತು ಶ್ರೇಯಸ್ ಮೋವಾ ಅವರಂತಹ ಆಟಗಾರರೂ ಸೇರಿದ್ದಾರೆ, ಅವರು ಕೆನಡಾದ ಜೊತೆಗೆ ಭಾರತಕ್ಕೂ ಹೆಮ್ಮೆ ತರುತ್ತಿದ್ದಾರೆ. ಅಮೆರಿಕಾ ತಂಡದವು ಭಾರತದ ದೇಶೀಯ ಕ್ರಿಕೆಟ್ನ ಅನೇಕ ಆಟಗಾರರನ್ನು ಹೊಂದಿದೆ. ಅಮೆರಿಕನ್ ತಂಡದ ನಾಯಕ ಮೊನಾಂಕ್ ಪಟೇಲ್ ಗುಜರಾತ್ನ Under-16 ಮತ್ತು Under-18 ತಂಡಗಳಿಗೂ ಆಡಿದ್ದಾರೆ. ಮುಂಬೈನ ಸೌರಭ್, ಹರ್ಮೀತ್ ಸಿಂಗ್ ಮತ್ತು ದೆಹಲಿಯ ಮಿಲಿಂದ್ ಕುಮಾರ್, ಇವರೆಲ್ಲರೂ ಅಮೇರಿಕನ್ ತಂಡದ ಶಕ್ತಿಯಾಗಿದ್ದಾರೆ. Oman ತಂಡವು ಭಾರತದ ವಿವಿಧ ರಾಜ್ಯಗಳಲ್ಲಿ ಈ ಹಿಂದೆ ಆಡಿದ ಅನೇಕ ಆಟಗಾರರನ್ನು ಹೊಂದಿದೆ. ಜತಿಂದರ್ ಸಿಂಗ್, ವಿನಾಯಕ್ ಶುಕ್ಲಾ, ಕರಣ್, ಜಯ್, ಆಶೀಶ್ ಅವರಂತಹ ಆಟಗಾರರು Oman ಕ್ರಿಕೆಟ್ನ ಆಧಾರಸ್ತಂಭಗಳಾಗಿದ್ದಾರೆ. New Zealand, UAE ಮತ್ತು Italy ತಂಡಗಳಲ್ಲೂ ಭಾರತೀಯ ಮೂಲದ ಆಟಗಾರರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಹೀಗೆ ಎಷ್ಟೋ ಭಾರತೀಯ ಮೂಲದ ಆಟಗಾರರು ತಮ್ಮ ದೇಶದ ಗೌರವ ಹೆಚ್ಚಿಸುವ ಜೊತೆಗೆ ಅಲ್ಲಿನ ಯುವಕರಿಗೆ ಸ್ಫೂರ್ತಿಯಾಗುತ್ತಿದ್ದಾರೆ. ಭಾರತೀಯತೆಯ ವೈಶಿಷ್ಟ್ಯವೇ ಇದು. ಭಾರತೀಯರು ಎಲ್ಲಿಗೆ ಹೋದರೂ ತಮ್ಮ ಮಾತೃಭೂಮಿಯ ಬೇರುಗಳೊಂದಿಗೆ ಸದಾ ಬೆಸೆದಿರುತ್ತಾರೆ ಮತ್ತು ತಮ್ಮ ಕರ್ಮಭೂಮಿ ಅಂದರೆ ತಾವು ವಾಸಿಸುವ ದೇಶದ ಅಭಿವೃದ್ಧಿಗೂ ಹೆಗಲು ಕೊಡುತ್ತಾರೆ.
ನನ್ನ ಪ್ರಿಯ ದೇಶವಾಸಿಗಳೇ,
ಯಾವುದೇ ತಂದೆ–ತಾಯಿಗೆ ತಮ್ಮ ಮಗುವನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುಃಖ ಮತ್ತೊಂದಿರಲು ಸಾಧ್ಯವಿಲ್ಲ. ಪುಟ್ಟ ಮಗುವನ್ನು ಕಳೆದುಕೊಳ್ಳುವ ನೋವು ಇನ್ನೂ ಆಳವಾದದ್ದು. ಕೆಲವು ದಿನಗಳ ಹಿಂದಷ್ಟೇ ನಾವು ಕೇರಳದ ಆಲಿನ್ ಶೇರಿನ್ ಅಬ್ರಹಾಂ ಎಂಬ ಪುಟ್ಟ ಮಗುವನ್ನು ಕಳೆದುಕೊಂಡಿದ್ದೇವೆ. ಕೇವಲ 10 ತಿಂಗಳಲ್ಲೇ ಆ ಮಗು ಈ ಪ್ರಪಂಚವನ್ನು ಬಿಟ್ಟು ಹೋಗಬೇಕಾಯಿತು. ಮುಂದೆ ಬಾಳಿ ಬದುಕಬೇಕಿದ್ದ ಮಗುವಿನ ಜೀವನ ಇದ್ದಕ್ಕಿದ್ದಂತೆ ಅಂತ್ಯಗೊಂಡಿತು. ಎಷ್ಟೋ ಕನಸುಗಳು ಮತ್ತು ಖುಷಿಗಳು ಅರ್ಧಕ್ಕೇ ಉಳಿದವು. ಆ ಮಗುವಿನ ತಂದೆ ತಾಯಿಗೆ ಆಗುತ್ತಿರುವ ನೋವನ್ನು ಮಾತುಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ, ಇಂತಹ ಅಗಾಧವಾದ ದುಃಖದ ನಡುವೆಯೂ ಆಲಿನ್ ತಂದೆ ಅರುಣ್ ಅಬ್ರಹಾಂ ಮತ್ತು ತಾಯಿ ಶೇರಿನ್ ಒಂದು ಮಹತ್ವದ ನಿರ್ಧಾರ ಕೈಗೊಂಡರು. ಆ ನಿರ್ಧಾರ ದೇಶದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲೂ ಅವರ ಬಗ್ಗೆ ಅಪಾರ ಗೌರವ ಮೂಡಿಸಿದೆ. ಅವರು ಆಲಿನ್ ಅವರ ಅಂಗಾಂಗ ದಾನದ ನಿರ್ಧಾರ ಮಾಡಿದರು. ಈ ಒಂದು ನಿರ್ಧಾರವೇ ಅವರ ಚಿಂತನೆ ಎಷ್ಟು ಉದಾತ್ತವಾಗಿದೆ ಮತ್ತು ಅವರ ವ್ಯಕ್ತಿತ್ವ ಎಷ್ಟು ವಿಶಾಲವಾದುದು ಎಂಬುದನ್ನು ಸಾಬೀತುಪಡಿಸುತ್ತದೆ. ಒಂದೆಡೆ ತಮ್ಮ ಕಂದಮ್ಮನನ್ನು ಕಳೆದುಕೊಂಡ ಶೋಕ ಸಾಗರದಲ್ಲಿ ಮುಳುಗಿದ್ದರೂ, ಮತ್ತೊಂದೆಡೆ ಪರರಿಗೆ ನೆರವಾಗಬೇಕೆಂಬ ಉದಾತ್ತ ಭಾವನೆ ಅವರಲ್ಲಿ ತುಂಬಿತ್ತು. ಯಾವುದೇ ಕುಟುಂಬವೂ ತಮ್ಮಂತೆಯೇ ಇಂತಹ ಕಠಿಣ ದಿನವನ್ನು ನೋಡಬಾರದು ಎಂಬುದು ಅವರ ಆಶಯವಾಗಿತ್ತು. ಇಂದು ಆಲಿನ್ ಶೇರಿನ್ ಅಬ್ರಹಾಂ ನಮ್ಮೊಂದಿಗಿಲ್ಲ, ಆದರೆ ಆಕೆಯ ಹೆಸರು ದೇಶದ ಅತಿ ಕಿರಿಯ ವಯಸ್ಸಿನ ‘ಅಂಗಾಂಗ ದಾನಿ‘ಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಅಗತ್ಯವಿರುವವರಿಗೆ ಸಹಾಯವಾಗುತ್ತಿದೆ. ಅಷ್ಟೇ ಅಲ್ಲದೆ, ದೇಶದ ವೈದ್ಯಕೀಯ ಸಂಶೋಧನೆಗೂ ಹೆಚ್ಚಿನ ಬಲ ಸಿಗುತ್ತಿದೆ. ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಾಕಷ್ಟು ಅಸಾಧಾರಣ ಕೆಲಸ ಮಾಡುತ್ತಿದ್ದಾರೆ.
ಸ್ನೇಹಿತರೇ,
ಕೇರಳದ ಆಲಿನ್ನಂತೆಯೇ, ಅಂಗಾಂಗ ದಾನದ ಮೂಲಕ ಮತ್ತೊಬ್ಬರಿಗೆ ಮರುಜೀವ ನೀಡಿದವರು ಅದೆಷ್ಟೋ ಮಂದಿ ಇದ್ದಾರೆ. ಉದಾಹರಣೆಗೆ, ದೆಹಲಿಯ ಲಕ್ಷ್ಮಿ ದೇವಿ ಅವರನ್ನೇ ನೋಡಿ. ಅವರು ಕಳೆದ ವರ್ಷ ಕೇದಾರನಾಥ ಯಾತ್ರೆ ಕೈಗೊಂಡಿದ್ದರು. ಇದಕ್ಕಾಗಿ ಅವರು ಬರೋಬ್ಬರಿ 14 ಕಿಲೋಮೀಟರ್ ಚಾರಣ ಮಾಡಬೇಕಾಯಿತು. ಅಚ್ಚರಿಯ ವಿಷಯವೆಂದರೆ, ಅವರು ಈ ಸಾಹಸ ಮಾಡಿದ್ದು ‘ಹೃದಯ ಕಸಿ‘ ಶಸ್ತ್ರಚಿಕಿತ್ಸೆಯ ನಂತರ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಒಂದು ಕಾಲದಲ್ಲಿ ಅವರ ಹೃದಯ ಕೇವಲ ಶೇ. 15 ರಷ್ಟು ಮಾತ್ರ ಕೆಲಸ ಮಾಡುತ್ತಿತ್ತು. ಅಂತಹ ಕಠಿಣ ಸ್ಥಿತಿಯಲ್ಲಿ ಅವರಿಗೆ ಮೃತ ವ್ಯಕ್ತಿಯೊಬ್ಬರ ಹೃದಯದಾನದ ನೆರವು ಸಿಕ್ಕಿತು. ಅಲ್ಲಿಂದ ಅವರ ಜೀವನವೇ ಬದಲಾಯಿತು. ಇನ್ನು ಪಶ್ಚಿಮ ಬಂಗಾಳದ ಗೌರಂಗ್ ಬ್ಯಾನರ್ಜಿ ಅವರು ಎರಡು ಬಾರಿ ನಾಥೂ–ಲಾ ಗೆ ಹೋಗಿದ್ದಾರೆ. ಇದು ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿದೆ. ವಿಶೇಷವೆಂದರೆ, ಅವರು ಈ ಸಾಧನೆಯನ್ನು ಮಾಡಿದ್ದು ಶ್ವಾಸಕೋಶ ಕಸಿ ಮಾಡಿಸಿಕೊಂಡ ನಂತರ! ಹಾಗೆಯೇ ರಾಜಸ್ಥಾನದ ಸೀಕರ್ನ ರಾಮದೇವ್ ಸಿಂಗ್ ಅವರು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಬೇಕಾಗಿದ ಅನಿವಾರ್ಯತೆ ಇತ್ತು. ಆದರೂ ಅವರು ಇಂದು ಕ್ರೀಡಾ ಚಟುವಟಿಕೆಗಳಲ್ಲಿ ಅದ್ಭುತವಾಗಿ ತೊಡಗಿಸಿಕೊಂಡಿದ್ದಾರೆ.
ಸ್ನೇಹಿತರೇ,
ಇಂತಹ ಅಸಂಖ್ಯಾತ ಸ್ಪೂರ್ತಿದಾಯಕ ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಒಬ್ಬ ವ್ಯಕ್ತಿಯ ‘ಒಳ್ಳೆಯ ನಿರ್ಧಾರ‘ ಅಥವಾ ‘ನಿಸ್ವಾರ್ಥ ಹೆಜ್ಜೆ‘, ಅದೆಷ್ಟೋ ಜನರ ಬದುಕನ್ನೇ ಬದಲಿಸಬಲ್ಲದು ಎಂಬ ಸತ್ಯ ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಪುಣ್ಯದ ಕೆಲಸಗಳನ್ನು ಮಾಡಿದ ಪ್ರತಿಯೊಬ್ಬರನ್ನೂ ನಾನು ಹೃದಯಾಂತರಾಳದಿಂದ ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ,
‘ಆಜಾದಿ ಕಾ ಅಮೃತ್ ಮಹೋತ್ಸವ‘ದ ಸಂದರ್ಭದಲ್ಲಿ ನಾನು ಕೆಂಪುಕೋಟೆಯಲ್ಲಿ ‘ಪಂಚ ಪ್ರಾಣ‘ಗಳ ಕುರಿತು ಮಾತನಾಡಿದ್ದೆ. ಅವುಗಳಲ್ಲಿ ಒಂದು ‘ಗುಲಾಮಗಿರಿಯ ಮಾನಸಿಕತೆಯಿಂದ ಮುಕ್ತಿ‘ ಎಂಬುದು. ಇಂದು ನಮ್ಮ ದೇಶವು ಗುಲಾಮಗಿರಿಯನ್ನು ಮೆಟ್ಟಿ, ಭಾರತದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರಪತಿ ಭವನವು ಒಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ನಾಳೆ, ಅಂದರೆ ಫೆಬ್ರವರಿ 23 ರಂದು ರಾಷ್ಟ್ರಪತಿ ಭವನದಲ್ಲಿ ‘ರಾಜಾಜಿ ಉತ್ಸವ’ವನ್ನು ಆಚರಿಸಲಾಗುವುದು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ಕೇಂದ್ರ ಪ್ರಾಂಗಣದಲ್ಲಿ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆಗಿದ್ದರು. ಅಧಿಕಾರವನ್ನು ಕೇವಲ ಒಂದು ಪದವಿಯಂತೆ ನೋಡದೆ, ಸೇವೆಯಂತೆ ಭಾವಿಸಿದ ಮಹನೀಯರಲ್ಲಿ ಇವರೂ ಒಬ್ಬರು. ಸಾರ್ವಜನಿಕ ಜೀವನದಲ್ಲಿ ಅವರ ನಡವಳಿಕೆ, ಆತ್ಮಸಂಯಮ ಮತ್ತು ಸ್ವತಂತ್ರ ಚಿಂತನೆಗಳು ಇಂದಿಗೂ ನಮಗೆ ಪ್ರೇರಣೆಯಾಗಿವೆ. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರವೂ ಬ್ರಿಟಿಷ್ ಆಡಳಿತಗಾರರ ಪ್ರತಿಮೆಗಳು ರಾಷ್ಟ್ರಪತಿ ಭವನದಲ್ಲೇ ಉಳಿದುಕೊಂಡಿದ್ದವು, ಆದರೆ ನಮ್ಮ ದೇಶದ ಮಹಾನ್ ಪುತ್ರರಿಗೆ ಅಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟ್ಯೆನ್ಸ್ ಅವರ ಪ್ರತಿಮೆಯೂ ಅಲ್ಲಿ ಸ್ಥಾಪಿತವಾಗಿತ್ತು. ಈಗ ಆ ಪ್ರತಿಮೆಯ ಸ್ಥಾನದಲ್ಲಿ ರಾಜಾಜಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ‘ರಾಜಾಜಿ ಉತ್ಸವ‘ದ ಸಂದರ್ಭದಲ್ಲಿ ರಾಜಗೋಪಾಲಾಚಾರಿ ಅವರ ಕುರಿತಾದ Exhibition ಕೂಡ ಇರಲಿದ್ದು, ಫೆಬ್ರವರಿ 24 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ನೀವೆಲ್ಲರೂ ಸಮಯ ಮಾಡಿಕೊಂಡು ತಪ್ಪದೇ ಭೇಟಿ ನೀಡಬೇಕೆಂದು ವಿನಂತಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ,
‘ಮನದ ಮಾತು‘ ಕಾರ್ಯಕ್ರಮದಲ್ಲಿ ನಾನು ಈ ಹಿಂದೆ Digital Arrest ಕುರಿತು ನಿಮ್ಮೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ. ಅದಾದ ನಂತರ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಮತ್ತು ಡಿಜಿಟಲ್ ವಂಚನೆಗಳ ಬಗ್ಗೆ ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಆದರೆ, ಇಂದಿಗೂ ನಮ್ಮ ಸುತ್ತಮುತ್ತ ಅಕ್ಷಮ್ಯವಾದ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಮುಗ್ಧ ಜನರನ್ನು ಡಿಜಿಟಲ್ ಅರೆಸ್ಟ್ ಮತ್ತು ಹಣಕಾಸಿನ ವಂಚನೆಗೆ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಹಲವು ಬಾರಿ ಹಿರಿಯ ನಾಗರಿಕರ ಜೀವಮಾನದ ಉಳಿತಾಯದ ಹಣವನ್ನೇ ವಂಚಕರು ದೋಚಿರುವುದು ಬೆಳಕಿಗೆ ಬಂದಿದೆ. ಇನ್ನು ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕಕ್ಕಾಗಿ ಕೂಡಿಟ್ಟಿದ್ದ ಹಣವನ್ನೂ ವಂಚಕರು ದೋಚುತ್ತಿದ್ದಾರೆ. ಉದ್ಯಮಿಗಳಿಗೂ ಇಂತಹ ಮೋಸವಾಗಿರುವ ಸುದ್ದಿಗಳು ನಮಗೆ ಕೇಳಿಬರುತ್ತಿವೆ. ಯಾರೋ ಒಬ್ಬರು ಫೋನ್ ಮಾಡಿ – ‘ನಾನೊಬ್ಬ ಉನ್ನತ ಅಧಿಕಾರಿ ಮಾತನಾಡುತ್ತಿದ್ದೇನೆ, ನೀವು ನಿಮ್ಮ ಕೆಲವು ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕಿದೆ‘ ಎಂದು ಹೇಳುತ್ತಾರೆ. ಮುಗ್ಧ ಜನರು ಅವರ ಮಾತನ್ನು ನಂಬಿ ವಿವರಗಳನ್ನು ನೀಡಿಬಿಡುತ್ತಾರೆ. ಆದ್ದರಿಂದ, ನೀವು ಸಹ ಸದಾ ಜಾಗರೂಕರಾಗಿರುವುದು ಮತ್ತು ಎಚ್ಚರದಿಂದಿರುವುದು ಅತ್ಯಂತ ಅವಶ್ಯಕವಾಗಿದೆ.
ಸ್ನೇಹಿತರೇ,
ನಿಮಗೆಲ್ಲಾ KYC – ಅಂದರೆ ನಿಮ್ಮ ಗ್ರಾಹಕರನ್ನು ಅರಿಯಿರಿ ಪ್ರಕ್ರಿಯೆಯ ಬಗ್ಗೆ ತಿಳಿದಿರಲೇಬೇಕು. ಕೆಲವೊಮ್ಮೆ ನಿಮ್ಮ ಬ್ಯಾಂಕಿನಿಂದ ನಿಮ್ಮ KYC ಅನ್ನು ನವೀಕರಿಸಲು ಅಥವಾ ಮರು–KYC ಮಾಡಲು ಕೇಳುವ ಸಂದೇಶಗಳನ್ನು ನೀವು ಸ್ವೀಕರಿಸಿದಾಗ, ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತದೆ – ನಾನು ಈಗಾಗಲೇ KYC ಮಾಡಿದ್ದೇನೆ, ಹಾಗಾದರೆ ಇದು ಏಕೆ? ಇದಕ್ಕಾಗಿ ಚಿಂತೆ ಮಾಡಬೇಡಿರೆಂದು ನಾನು ನಿಮ್ಮಲ್ಲಿ ಹೇಳುತ್ತೇನೆ.; ಇದು ನಿಮ್ಮ ಹಣದ ಸುರಕ್ಷತೆಗಾಗಿದೆ. ಇತ್ತೀಚಿನ ದಿನಗಳಲ್ಲಿ ಪಿಂಚಣಿ, ಸಬ್ಸಿಡಿ, ವಿಮೆ, UPI ಯಿಂದ ಹಿಡಿದು ಎಲ್ಲವೂ ಬ್ಯಾಂಕ್ ಖಾತೆಗೆ ಸಂಪರ್ಕಗೊಂಡಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ನಿಮ್ಮ ಬ್ಯಾಂಕ್ ಖಾತೆ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ನಿಯತಕಾಲಿಕವಾಗಿ ಮರು–KYC ಅನ್ನು ನಿರ್ವಹಿಸುತ್ತವೆ. ಹೌದು,ಇಲ್ಲಿಯೂ ಸಹ, ನೀವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: ಅಪರಾಧಿಗಳು ನಕಲಿ ಕರೆಗಳನ್ನು ಮಾಡುತ್ತಾರೆ, SMS ಮತ್ತು ಅಂಶಗಳನ್ನು ಕಳುಹಿಸುತ್ತಾರೆ. ಆದ್ದರಿಂದ, ನಾವು ಜಾಗರೂಕರಾಗಿರಬೇಕು ಮತ್ತು ಅಂತಹ ವಂಚಕರಿಗೆ ಬಲಿಯಾಗಬಾರದು. KYC ಅಥವಾ ಮರು–KYC ಅನ್ನು ನಿಮ್ಮ ಬ್ಯಾಂಕ್ ಶಾಖೆ, ಅಧಿಕೃತ ಆನ್ವಯಿಕ ಮತ್ತು ಅಧಿಕೃತ ಮಾಧ್ಯಮದ ಮೂಲಕ ಮಾತ್ರ ಮಾಡಬೇಕು. OTP, ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಮತ್ತು ಮುಖ್ಯವಾಗಿ, ನಿಮ್ಮ ಪಾಸ್ವರ್ಡ್ ಅನ್ನು ಆಗಿಂದಾಗ್ಗೆ ಬದಲಾಯಿಸುತ್ತಿರಿ. ಪ್ರತಿ ಋತುವಿನೊಂದಿಗೆ ಆಹಾರ ಮತ್ತು ಬಟ್ಟೆ ಬದಲಾಗುವಂತೆಯೇ, ಪ್ರತಿ ಕೆಲವು ದಿನಗಳಿಗೊಮ್ಮೆ ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸುವುದನ್ನು ರೂಢಿಸಿಕೊಳ್ಳಿ.
ಸ್ನೇಹಿತರೇ,
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಇಂತಹ ವಿಷಯಗಳ ಬಗ್ಗೆ ಆರ್ಥಿಕ ಸಾಕ್ಷರತಾ ಸಪ್ತಾಹ ಆಯೋಜಿಸಿತ್ತು. ಈ ಆರ್ಥಿಕ ಸಾಕ್ಷರತಾ ಅಭಿಯಾನವು ಈಗ ವರ್ಷವಿಡೀ ಮುಂದುವರಿಯುತ್ತದೆ. ಆದ್ದರಿಂದ, ದಯವಿಟ್ಟು ಭಾರತೀಯ ರಿಸರ್ವ್ ಬ್ಯಾಂಕಿನ ಸಂದೇಶವನ್ನು ಗಮನಿಸಿ ಮತ್ತು ನಿಮ್ಮ KYC ಅನ್ನು ನವೀಕರಿಸುತ್ತಿರಿ.
ನೆನಪಿಡಿ–
ಸರಿಯಾದ ಕೆವೈಸಿ, ಸಕಾಲದಲ್ಲಿ ರಿ–ಕೆವೈಸಿ, ಖಾತೆಯನ್ನು ಸುರಕ್ಷಿತವಾಗಿಸುತ್ತದೆ
ಸಶಕ್ತ ನಾಗರಿಕರಾಗಿ, ಏಕೆಂದರೆ ಸುರಕ್ಷಿತ ನಾಗರಿಕರಿಂದಲೇ ನಿರ್ಮಾಣವಾಗುತ್ತದೆ ಬಲಿಷ್ಠ ಮತ್ತು ಆತ್ಮನಿರ್ಭರ ಭಾರತ
ನನ್ನ ಪ್ರೀತಿಯ ದೇಶವಾಸಿಗಳೇ,
ನಮ್ಮ ರೈತ ಕೇವಲ ಅನ್ನದಾತ ಮಾತ್ರವಲ್ಲ. ಆತ ಭೂಮಿಯ ನಿಜವಾದ ರಕ್ಷಕ. ಮಣ್ಣನ್ನು ಹೇಗೆ ಚಿನ್ನವನ್ನಾಗಿ ಮಾಡಬೇಕೆಂಬುದನ್ನು ನಮ್ಮ ರೈತರಿಂದ ಕಲಿಯಬೇಕು ಮತ್ತು ನಮ್ಮ ರೈತರಂತೂ ಸಂಪ್ರದಾಯ ಹಾಗೂ ತಂತ್ರಜ್ಞಾನ ಎರಡನ್ನೂ ಒಟ್ಟಿಗೆ ಮುಂದುವರಿಸುತ್ತಿದ್ದಾರೆ. ನಮ್ಮ ರೈತರು ಈಗ ಕೇವಲ ಉತ್ಪಾದನೆಯ ಬಗ್ಗೆ ಮಾತ್ರವಲ್ಲದೆ, ಗುಣಮಟ್ಟ, ಮೌಲ್ಯವರ್ಧನೆ, ಮತ್ತು ಹೊಸ ಹೊಸ ಮಾರುಕಟ್ಟೆಗಳ ಬಗ್ಗೆ ಕೂಡಾ ಗಮನ ಹರಿಸುತ್ತಿದ್ದಾರೆ. ಒಡಿಶಾದ ಹಿರೋದ್ ಪಟೇಲ್ ಎಂಬ ಯುವ ರೈತನ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಸುಮಾರು ಎಂಟು ವರ್ಷಗಳ ಹಿಂದಿನವರೆಗೂ, ಅವರು ತಮ್ಮ ತಂದೆ ಶಿವಶಂಕರ್ ಪಟೇಲ್ ಅವರೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಕೊಂಡಿದ್ದರು, ಆದರೆ ಅವರು ಕೃಷಿಯನ್ನು ಹೊಸ ದೃಷ್ಟಿಕೋನದಿಂದ ನೋಡಲಾರಂಭಿಸಿದರು. ಅವರು ತಮ್ಮ ಹೊಲದಲ್ಲಿದ್ದ ಕೊಳದ ಮೇಲೆ ಬಲವಾದ ಜಾಲರಿಯ ರಚನೆಯನ್ನು ನಿರ್ಮಿಸಿದರು. ಅವರು ಅದರ ಮೇಲೆ ಬಳ್ಳಿ ತರಕಾರಿಗಳನ್ನು ಬೆಳೆದರು, ಕೊಳದ ಸುತ್ತಲೂ ಬಾಳೆಹಣ್ಣು, ಪೇರಲ ಮತ್ತು ತೆಂಗಿನ ಮರಗಳನ್ನು ನೆಟ್ಟರು ಮತ್ತು ಕೊಳದಲ್ಲಿ ಮೀನು ಸಾಕಣೆಯನ್ನು ಸಹ ಪ್ರಾರಂಭಿಸಿದರು. ಅಂದರೆ ಒಂದೇ ಸ್ಥಳದಲ್ಲಿ – ಸಾಂಪ್ರದಾಯಿಕ ಕೃಷಿಯೂ ನಡೆಯಬೇಕು, ತರಕಾರಿಗಳು, ಹಣ್ಣುಗಳನ್ನೂ ಬೆಳೆಯಬೇಕು ಮತ್ತು ಮೀನುಸಾಕಣೆಯೂ ಆಗಬೇಕು. ಇದರಿಂದ ಭೂಮಿಯ ಉತ್ತಮ ಬಳಕೆಯೂ ಆದಂತಾಯಿತು, ನೀರಿನ ಉಳಿತಾಯವೂ ಆಯಿತು, ಹಾಗೆಯೇ ಹೆಚ್ಚುವರಿ ಆದಾಯದ ಗಳಿಕೆಗೂ ಕಾರಣವಾಯಿತು. ಇಂದು ಇವರ ಮಾದರಿ ಕೃಷಿಯನ್ನು ನೋಡಲು ದೂರದೂರದಿಂದ ರೈತರು ಬರುತ್ತಾರೆ.
ಸ್ನೇಹಿತರೇ,
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಒಂದು ಗ್ರಾಮವಿದೆ, ಅಲ್ಲಿ ಒಂದೇ ಹೊಲದಲ್ಲಿ 570 ವಿಧದ ಭತ್ತದ ತಳಿಯನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಸ್ಥಳೀಯ ತಳಿಗಳೂ ಇವೆ, ಗಿಡಮೂಲಿಕೆ ಪ್ರಬೇಧಗಳೂ ಇವೆ ಮತ್ತು ಇತರೆ ರಾಜ್ಯಗಳಿಂದ ತಂದ ತಳಿಗಳ ಜಾತಿಯೂ ಇವೆ. ಇದು ಕೇವಲ ಕೃಷಿಯಲ್ಲ, ಬೀಜಗಳ ಪರಂಪರೆಯನ್ನು ಸಂರಕ್ಷಿಸುವ ಬೃಹತ್ ಅಭಿಯಾನವೂ ಆಗಿದೆ. ನಮ್ಮ ರೈತರ ಕಠಿಣ ಪರಿಶ್ರಮದ ಫಲಿತಾಂಶ ಅಂಕಿ ಅಂಶಗಳಲ್ಲೂ ಗೋಚರವಾಗುತ್ತಿದೆ. ಭಾರತ ಇಂದು ವಿಶ್ವದಲ್ಲೇ ಅತ್ಯಂತ ದೊಡ್ಡ ಭತ್ತ ಉತ್ಪಾದಕ ರಾಷ್ಟ್ರವಾಗಿದೆ. 15 ಕೋಟಿ ಟನ್ ಗಿಂತಲೂ ಅಧಿಕ ಭತ್ತದ ಉತ್ಪಾದನೆ ಎನ್ನುವುದು ಕಡಿಮೆ ಸಾಧನೆಯೇನಲ್ಲ. ನಾವು ನಮ್ಮ ಅಗತ್ಯತೆಗಳನ್ನೂ ಪೂರೈಸಿಕೊಳ್ಳುತ್ತಿದ್ದೇವೆ ಮತ್ತು ವಿಶ್ವದ food basket ಗೆ ಕೂಡಾ ಕೊಡುಗೆ ನೀಡುತ್ತಿದ್ದೇವೆ.
ಸ್ನೇಹಿತರೇ,
ಈ ಕೃಷಿ ಉತ್ಪನ್ನಗಳು ವಿಮಾನಗಳ ಮೂಲಕ ಕೂಡಾ ಸುಲಭವಾಗಿ ವಿದೇಶಗಳಿಗೆ ತಲುಪುತ್ತಿವೆ. ಕರ್ನಾಟಕದ ನಂಜನಗೂಡಿನ ಬಾಳೆಹಣ್ಣು, ಮೈಸೂರಿನ ವೀಳೆಯದೆಲೆ, ಮತ್ತು ಇಂಡಿ ನಿಂಬೇಹಣ್ಣುಗಳನ್ನು ಮಾಲ್ಡೀವ್ಸ್ ಗೆ ಕಳಿಸಲಾಗುತ್ತಿದೆ. ಈ ಉತ್ಪನ್ನ ತಮ್ಮ ರುಚಿ ಮತ್ತು ಗುಣಮಟ್ಟಕ್ಕಾಗಿ ಹೆಸರಾಗಿದ್ದು, ಇವುಗಳಿಗೆ ಜಿಐ ಟ್ಯಾಗ್ ಕೂಡಾ ದೊರೆತಿದೆ. ಇಂದಿನ ರೈತ ಗುಣಮಟ್ಟವನ್ನೂ ಬಯಸುತ್ತಾರೆ ಮತ್ತು ಪ್ರಮಾಣವೂ ಹೆಚ್ಚಾಗುತ್ತಿದೆ ಮತ್ತು ತಮ್ಮ ಗುರುತನ್ನೂ ಸ್ಥಾಪಿಸುತ್ತಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಕಳೆದ ವರ್ಷ, ಇದೇ ಸಮಯದಲ್ಲಿ ನಡೆದ ಮಹಾಕುಂಭಮೇಳದ ಅದ್ಭುತ ಚಿತ್ರಗಳು ನಿಮಗೆ ಖಂಡಿತಾ ನೆನಪಿರಬಹುದು. ಸಂಗಮದ ದಡದಲ್ಲಿ ಉಕ್ಕಿ ಹರಿಯುತ್ತಿದ್ದ ಜನಸಾಗರ, ಅಪಾರ ನಂಬಿಕೆಯ ಹರಿವು ಮತ್ತು ಪವಿತ್ರ ಸ್ನಾನದ ಆ ಧನ್ಯತೆಯ ಕ್ಷಣದಲ್ಲಿ, ಭಾರತ ತನ್ನ ಸನಾತನ ಚೈತನ್ಯದ ಸಾಕ್ಷಾತ್ಕಾರವಾದಂತೆ ಭಾಸವಾಯಿತು. ಸ್ನೇಹಿತರೇ, ಮಹಾ ಕುಂಭಮೇಳದ ಅದೇ ಹರಿವು, ಅದೇ ಮಾಘ ಮಾಸ, ಅದೇ ಭಕ್ತಿಯ ಧ್ವನಿ, ಉತ್ತರದಿಂದ ದಕ್ಷಿಣಕ್ಕೆ ಚಲಿಸುವಾಗ, ಹೊಸ ಗುರುತನ್ನು ಪಡೆಯುತ್ತದೆ.
ಸ್ನೇಹಿತರೇ,
ಕೇರಳದ ಮಣ್ಣಿನಲ್ಲಿ, ಭಾರತ್ಪುಳ ನದಿಯ ದಡದಲ್ಲಿರೋ ತಿರುನಾವಾಯದಲ್ಲಿ ಶತಮಾನಗಳಷ್ಟು ಹಳೆಯದಾದ ಒಂದು ಸಂಪ್ರದಾಯ ಇದೆ – ಅದೇ ‘ಮಾಮಂಗಂ’. ಇದನ್ನ ಬಹಳ ಜನ ‘ಮಹಾ ಮಾಘ ಮಹೋತ್ಸವ’ ಅಥವಾ ‘ಕೇರಳದ ಕುಂಭಮೇಳ’ ಅಂತಾನೂ ಕರೀತಾರೆ. ಮಾಘ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಆ ಕ್ಷಣವನ್ನ ಜೀವನದ ಮರೆಯಲಾಗದ ನೆನಪಾಗಿಸಿಕೊಳ್ಳೋದೇ ಈ ಹಬ್ಬದ ಜೀವಾಳ. ಕಾಲ ಕಳೆದಂತೆ ಈ ಸಂಪ್ರದಾಯ ಎಲ್ಲಿಯೋ ಮರೆಯಾಗಿ ಹೋಗಿತ್ತು. ಸುಮಾರು ಇನ್ನೂರೈವತ್ತು ವರ್ಷಗಳ ಕಾಲ ಈ ಹಬ್ಬ ಮೊದಲಿನ ಹಾಗೆ ಅದ್ದೂರಿಯಾಗಿ ನಡೆದೇ ಇರಲಿಲ್ಲ. ಆದ್ರೆ, ಇವತ್ತು ನಮ್ಮ ಪರಂಪರೆಯನ್ನ ಮತ್ತೆ ಗುರುತಿಸುತ್ತಿರೋ ನಮ್ಮ ದೇಶದಲ್ಲಿ ಇತಿಹಾಸ ಮತ್ತೆ ಹೊಸ ತಿರುವು ಪಡ್ಕೊಂಡಿದೆ. ಈ ಸಲ ಯಾವುದೇ ದೊಡ್ಡ ಪ್ರಚಾರ ಅಥವಾ ಘೋಷಣೆ ಇಲ್ಲದಿದ್ರೂ ಕೇರಳ ಕುಂಭಮೇಳ ತುಂಬಾ ಯಶಸ್ವಿಯಾಗಿ ನಡೀತು. ಜನ ಒಬ್ಬರಿಂದ ಒಬ್ಬರಿಗೆ ವಿಷಯ ತಿಳಿಸ್ತಾ ಹೋದ್ರು, ಒಬ್ಬರ ಕಿವಿಯಿಂದ ಇನ್ನೊಬ್ಬರ ಕಿವಿಗೆ ಸುದ್ದಿ ಹರಡ್ತು, ನೋಡನೋಡ್ತಿದ್ದ ಹಾಗೆಯೇ ಭಕ್ತರೆಲ್ಲಾ ತಿರುನಾವಾಯಕ್ಕೆ ತಂಡೋಪತಂಡವಾಗಿ ಬರೋಕೆ ಶುರು ಮಾಡಿದ್ರು.
ಸ್ನೇಹಿತರೇ,
ಮಹಾಕುಂಭ ಇರಲಿ ಅಥವಾ ಕೇರಳ ಕುಂಭ ಇರಲಿ, ಇದು ಬರಿ ನದಿಯಲ್ಲಿ ಸ್ನಾನ ಮಾಡೋ ಹಬ್ಬ ಮಾತ್ರ ಅಲ್ಲ. ಇದು ನಮ್ಮ ನೆನಪುಗಳನ್ನ ಬಡಿದೆಬ್ಬಿಸೋ ಹಬ್ಬ; ನಮ್ಮ ಸಂಸ್ಕೃತಿಯನ್ನ ಮತ್ತೊಮ್ಮೆ ಮೆಲುಕು ಹಾಕೋ ಒಂದು ಸುಂದರ ಸಂದರ್ಭ. ಉತ್ತರದಿಂದ ದಕ್ಷಿಣದವರೆಗೆ ನದಿಗಳು ಬೇರೆ ಬೇರೆ ಇರಬಹುದು, ಆ ನದಿ ದಡಗಳು ಬೇರೆ ಇರಬಹುದು, ಆದ್ರೆ ಜನರ ನಂಬಿಕೆ ಮತ್ತು ಭಕ್ತಿಯ ಸೆಲೆ ಮಾತ್ರ ಒಂದೇ – ಇದನ್ನೇ ನಿಜವಾದ ಭಾರತ ಅನ್ನೋದು.
ಸ್ನೇಹಿತರೇ,
ನಮ್ಮ ದೇಶದಲ್ಲಿ ಯಾರು ಸಮಾಜದ ಒಳಿತಿಗಾಗಿ ಕೆಲಸ ಮಾಡ್ತಾರೋ, ಯಾರು ತಮ್ಮ ಪ್ರತಿಯೊಂದು ಕೆಲಸದಲ್ಲೂ ಜನರಿಗೇ ಮೊದಲ ಆದ್ಯತೆ ನೀಡ್ತಾರೋ ಅಂಥವರು ಯಾವಾಗಲೂ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ. ಅಮ್ಮ ಜಯಲಲಿತಾ ಅವರು ಕೂಡ ಅಂಥದ್ದೇ ಒಬ್ಬ ಜನಪ್ರಿಯ ನಾಯಕಿಯಾಗಿದ್ದರು. ಫೆಬ್ರವರಿ 24 ಅವರ ಜನ್ಮದಿನದ ಸಂದರ್ಭ. ತಮಿಳುನಾಡಿನ ಜನರಿಗೆ ಅವರ ಮೇಲೆ ಎಷ್ಟೊಂದು ಗಾಢವಾದ ಪ್ರೀತಿ ಇತ್ತು ಅನ್ನೋದು ನಾನು ಆ ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲಾ ಇವತ್ತಿಗೂ ನನಗೆ ಕಾಣಿಸುತ್ತೆ. ಅಮ್ಮ ಜಯಲಲಿತಾ ಅವರ ಹೆಸರು ಎತ್ತಿದ್ರೆ ಸಾಕು, ತಮಿಳುನಾಡಿನ ಜನರ ಮುಖದಲ್ಲಿ ಒಂದು ರೀತಿಯ ಸಂಭ್ರಮ ಕಾಣುತ್ತೆ. ಅದರಲ್ಲೂ ನಮ್ಮ ಮಹಿಳೆಯರಿಗಂತೂ ಅವರ ಮೇಲೆ ಒಂದು ವಿಶೇಷವಾದ ಒಲವು. ಯಾಕಂದ್ರೆ, ಅವರು ಅಧಿಕಾರದಲ್ಲಿದ್ದಾಗ ತಾಯಿ-ತಂಗಿಯರಿಗಾಗಿ ಮತ್ತು ಹೆಣ್ಣುಮಕ್ಕಳಿಗಾಗಿ ತುಂಬಾ ಮೆಚ್ಚುವಂತಹ ಕೆಲಸಗಳನ್ನ ಮಾಡಿದ್ದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನ ಕಾಪಾಡೋದಕ್ಕೆ ಅವರು ತುಂಬಾ ಕಠಿಣ ಕ್ರಮಗಳನ್ನ ತಗೊಂಡಿದ್ರು. ಅವರಲ್ಲಿ ದೇಶಭಕ್ತಿ ತುಂಬಿ ತುಳುಕುತ್ತಿತ್ತು. ಅದರ ಜೊತೆಗೆ ಭಾರತದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅವರಿಗೆ ತುಂಬಾ ಹೆಮ್ಮೆ ಇತ್ತು. ಅಮ್ಮ ಜಯಲಲಿತಾ ಅವರ ಜೊತೆ ನಾನು ನಡೆಸಿದ ಪ್ರತಿಯೊಂದು ಭೇಟಿ ಮತ್ತು ಮಾತುಕತೆಗಳು ಇವತ್ತಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿವೆ. 2002 ಮತ್ತು 2012 ರಲ್ಲಿ ಗುಜರಾತ್ನಲ್ಲಿ ನಡೆದ ನನ್ನ ಎರಡು ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲೂ ಅವರು ಭಾಗವಹಿಸಿದ್ರು. ನಾವಿಬ್ಬರೂ ನಮ್ಮ ನಮ್ಮ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ, ‘ಉತ್ತಮ ಆಡಳಿತ’ದ (Good Governance) ಬಗ್ಗೆ ನಮ್ಮ ಮಧ್ಯೆ ಆಗಾಗ ಚರ್ಚೆಗಳು ನಡೀತಾ ಇತ್ತು. ಅವರ ಯೋಚನೆಗಳು ತುಂಬಾ ಸ್ಪಷ್ಟವಾಗಿದ್ದವು ಮತ್ತು ವಿಚಾರಗಳು ಅಷ್ಟೇ ಪಕ್ವವಾಗಿದ್ದವು; ಇದೇ ಅವರ ದೊಡ್ಡ ವಿಶೇಷತೆಯಾಗಿತ್ತು. ಹಲವು ವರ್ಷಗಳ ಹಿಂದೆ ಅವರು ಪೊಂಗಲ್ ಹಬ್ಬದ ಪವಿತ್ರ ಸಮಯದಲ್ಲಿ ಚೆನ್ನೈನಲ್ಲಿ ಮಧ್ಯಾಹ್ನದ ಊಟಕ್ಕೆ ನನ್ನನ್ನ ಪ್ರೀತಿಯಿಂದ ಕರೆದಿದ್ರು. ಸ್ನೇಹದಿಂದ ಕೂಡಿದ ಅವರ ಆ ನಡೆ ನನಗೆ ಯಾವತ್ತೂ ಮರೆಯೋದಕ್ಕೆ ಆಗಲ್ಲ. ಅವರಿಗೆ ನಾನು ಮತ್ತೊಮ್ಮೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸ್ತೀನಿ.
ಜಯಲಲಿತಾ ಅವರಗಳಕ್,
ಯೆನ್ ನೀನೈವಜನಲಿ–ಗಳ್,
ಸಮುದಾಯತ್ತಿರ್ಕ್ಕು,
ಅವರ ಅಟ್ರಿಯ ಸೇವೆ ಯೇಂಡ್ರುಂ ನೀನೈವಿಲ್ ಇರುಕ್ಕುಂ |
(ಜಯಲಲಿತಾ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಗಳು. ಸಮಾಜಕ್ಕಾಗಿ ಅವರು ಸಲ್ಲಿಸಿದ ಸೇವೆ ಯಾವತ್ತಿಗೂ ನಮ್ಮೆಲ್ಲರ ನೆನಪಿನಲ್ಲಿ ಅಚ್ಚಳಿಯದೇ ಇರುತ್ತದೆ!!!)
ನನ್ನ ಪ್ರೀತಿಯ ದೇಶವಾಸಿಗಳೇ,
ಈಗ ನಾನು ನನ್ನ ಪ್ರೀತಿಯ ಮತ್ತು ಚುರುಕಾದ ಪುಟ್ಟ ಮಕ್ಕಳ ಜೊತೆ ಮಾತಾಡ್ತೀನಿ. ಅದರಲ್ಲೂ ಈಗ ಪರೀಕ್ಷೆ ಬರೆಯುತ್ತಿರುವ ಮಕ್ಕಳ ಜೊತೆ ಮಾತುಕತೆ ನಡೆಸೋಣ. ಈ ತಿಂಗಳ ಆರಂಭದಲ್ಲಿ ನೀವು ‘ಪರೀಕ್ಷಾ ಪೇ ಚರ್ಚಾ‘ ಕಾರ್ಯಕ್ರಮವನ್ನ ನೋಡಿರ್ತೀರಾ ಅಂತ ಅನ್ಕೊಳ್ತೀನಿ, ಅದರಿಂದ ನಿಮಗೇನಾದ್ರೂ ಕಲಿಯೋದಕ್ಕೆ ಸಿಕ್ಕಿರುತ್ತೆ ಅಲ್ವಾ? ಆದ್ರೂ ನಾನು ಕೇಳ್ತೀನಿ, ಓದಿನ ಬಗ್ಗೆ ಜಾಸ್ತಿ ಟೆನ್ಷನ್ ತಗೊಳ್ತಾ ಇಲ್ಲ ತಾನೇ?
ನನ್ನ ಪ್ರೀತಿಯ ಮಕ್ಕಳೇ,
ನೀವು ‘ಎಕ್ಸಾಮ್ ವಾರಿಯರ್ಸ್‘ (ಪರೀಕ್ಷಾ ಯೋಧರು). ನೀವೆಲ್ಲರೂ ಪೂರ್ತಿ ಮನಸ್ಸಿಟ್ಟು ಪರೀಕ್ಷೆಗೆ ತಯಾರಿ ಮಾಡ್ತಿದ್ದೀರಾ ಅನ್ನೋ ನಂಬಿಕೆ ನನಗಿದೆ. ನೋಡಿ, ಇಂಥ ಸಮಯದಲ್ಲಿ ಮನಸ್ಸಿನಲ್ಲಿ ಸಣ್ಣಪುಟ್ಟ ಅನುಮಾನಗಳು ಬರೋದು ಸಹಜ. ಕೆಲವೊಮ್ಮೆ ‘ಎಲ್ಲಾ ನೆನಪಿರುತ್ತೋ ಇಲ್ವೋ‘ ಅಂತ ಅನ್ಸುತ್ತೆ, ಇನ್ನು ಕೆಲವೊಮ್ಮೆ ‘ಟೈಮ್ ಸಾಲಲ್ವೇನೋ‘ ಅನ್ನೋ ಭಯ ಶುರುವಾಗುತ್ತೆ. ಇದು ಪ್ರತಿಯೊಬ್ಬರಿಗೂ ಆಗೋದೆ, ನೀವು ಒಬ್ಬರೇ ಈ ರೀತಿ ಅನುಭವಿಸುತ್ತಿಲ್ಲ. ಒಂದು ವಿಷಯ ನೆನಪಿಡಿ, ನಿಮ್ಮ ಯೋಗ್ಯತೆ ಬರಿ ನಿಮ್ಮ ಮಾರ್ಕ್ಸ್ ಕಾರ್ಡ್ ನಿಂದ ನಿರ್ಧಾರ ಆಗಲ್ಲ. ಹಾಗಾಗಿ ನಿಮ್ಮ ಮೇಲೆ ನಿಮಗೇ ನಂಬಿಕೆ ಇರಲಿ. ಓದಿರೋದನ್ನ ಶ್ರದ್ಧೆಯಿಂದ ಬರೆಯಿರಿ. ಒಂದೊಮ್ಮೆ ಯಾವುದಾದ್ರೂ ಪ್ರಶ್ನೆಗೆ ಉತ್ತರ ಬರದಿದ್ದರೆ, ಆ ಒಂದು ಪ್ರಶ್ನೆಯ ಬಗ್ಗೆನೇ ಯೋಚನೆ ಮಾಡಿ ಬೇಸರ ಮಾಡ್ಕೋಬೇಡಿ. ಇನ್ನೊಂದು ಮುಖ್ಯ ವಿಷಯ ಅಂದ್ರೆ, ನಿಮ್ಮ ಪೋಷಕರು ಮತ್ತು ಶಿಕ್ಷಕರ ಜೊತೆ ಮಾತಾಡ್ತಾ ಇರಿ. ಅವರು ನಿಮ್ಮನ್ನ ನಿಮ್ಮ ನಂಬರ್ ನೋಡಿ ಅಳೆಯಲ್ಲ, ಬದಲಾಗಿ ನಿಮ್ಮ ಪ್ರಯತ್ನ ಮತ್ತು ಪರಿಶ್ರಮವನ್ನ ನೋಡಿ ಸಂತೋಷ ಪಡ್ತಾರೆ. ನೀವು ಪರೀಕ್ಷೆಯಲ್ಲೂ ಗೆಲ್ತೀರಾ ಮತ್ತು ಜೀವನದಲ್ಲೂ ಹೊಸ ಎತ್ತರಕ್ಕೆ ಏರ್ತೀರಾ ಅನ್ನೋ ಪೂರ್ಣ ಭರವಸೆ ನನಗಿದೆ.
ಸ್ನೇಹಿತರೇ,
ಈ ದಿನಗಳಲ್ಲಿ ರಂಜಾನ್ ಮಾಸ ನಡೀತಿದೆ. ಈ ಪವಿತ್ರ ತಿಂಗಳ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನ ತಿಳಿಸ್ತೀನಿ. ಇನ್ನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಕೂಡ ಬರ್ತಿದೆ. ಅಂದ್ರೆ ಬಣ್ಣ, ಗುಲಾಲ್ ಮತ್ತು ನಗು–ಸಂತೋಷದ ಸಮಯ ಹತ್ತಿರ ಬರ್ತಿದೆ ಅಂತಲೇ ಅರ್ಥ. ನೀವೆಲ್ಲರೂ ನಿಮ್ಮ ಕುಟುಂಬ ಮತ್ತು ಆತ್ಮೀಯರ ಜೊತೆ ಸಂಭ್ರಮದಿಂದ ಈ ಹಬ್ಬಗಳನ್ನ ಆಚರಿಸಿ. ಇದರ ಜೊತೆಗೆ, ಕೆಲವು ಮಂತ್ರಗಳನ್ನ ಯಾವಾಗಲೂ ನೆನಪಿಡಿ, ಉದಾಹರಣೆಗೆ ‘ವೋಕಲ್ ಫಾರ್ ಲೋಕಲ್‘ (Vocal for Local). ನಮ್ಮ ಹೋಳಿ ಹಬ್ಬದಲ್ಲಿ ಅಥವಾ ಬೇರೆ ಹಬ್ಬಗಳಲ್ಲಿ ವಿದೇಶಿ ವಸ್ತುಗಳು ತುಂಬಾ ಸೇರಿಕೊಂಡು ಬಿಟ್ಟಿವೆ. ಅವುಗಳನ್ನ ಹಬ್ಬಗಳಿಂದ ದೂರ ಇಡಿ, ಹೋಳಿಯಿಂದಲೂ ದೂರ ಇಡಿ ಮತ್ತು ಸ್ವದೇಶಿ ವಸ್ತುಗಳನ್ನೇ ಬಳಸಿ. ನೀವು ಸ್ವದೇಶಿ ವಸ್ತುಗಳನ್ನ ಖರೀದಿಸಿದಾಗ, ನಮ್ಮ ದೇಶವನ್ನ ‘ಆತ್ಮನಿರ್ಭರ‘ ಮಾಡುವ ಅಭಿಯಾನಕ್ಕೆ ಶಕ್ತಿ ತುಂಬಿದಂತಾಗುತ್ತೆ.
ಸ್ನೇಹಿತರೇ,
ಪ್ರತಿ ತಿಂಗಳು ‘ಮನ್ ಕಿ ಬಾತ್‘ ಕಾರ್ಯಕ್ರಮಕ್ಕಾಗಿ ನಿಮ್ಮಿಂದ ಸಾವಿರಾರು ಸಲಹೆಗಳು ಬರ್ತಾ ಇರುತ್ತವೆ. ನೀವು ಕಳಿಸೋ ಸಂದೇಶಗಳಿಂದ ದೇಶದ ಮೂಲೆ ಮೂಲೆಯಲ್ಲಿರೋ ಅದ್ಭುತ ಪ್ರತಿಭೆಗಳ ಬಗ್ಗೆ ನಮಗೆ ತಿಳಿಯುತ್ತೆ. ಸ್ವಾರ್ಥವನ್ನ ಬಿಟ್ಟು ಸಮಾಜಕ್ಕಾಗಿ ಏನಾದ್ರೂ ಮಾಡಬೇಕು ಅನ್ನೋ ಎಷ್ಟೋ ಸ್ಫೂರ್ತಿದಾಯಕ ಕಥೆಗಳು ನಿಮ್ಮ ಮೂಲಕ ದೇಶದ ಜನರಿಗೆ ತಲುಪುತ್ತಿವೆ. ನಿಮ್ಮ ಈ ಪ್ರಯತ್ನ ಹೀಗೆಯೇ ಮುಂದುವರಿಯಲಿ. ನಿಮ್ಮ ಸಂದೇಶಗಳಿಗಾಗಿ ನಾನು ಕಾಯ್ತಾ ಇರ್ತೀನಿ. ಮತ್ತೊಮ್ಮೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಬರಲಿರೋ ಹಬ್ಬಗಳ ಹಾರ್ದಿಕ ಶುಭಾಶಯಗಳು. ತುಂಬಾ ಧನ್ಯವಾದಗಳು. ನಮಸ್ಕಾರ.
*****
Sharing this month’s #MannKiBaat. Do listen! https://t.co/XbKxZCLo9s
— Narendra Modi (@narendramodi) February 22, 2026
At the India AI Impact Summit, world leaders were impressed by these AI breakthroughs... #MannKiBaat pic.twitter.com/Mrm5qoo0Ct
— PMO India (@PMOIndia) February 22, 2026
There are numerous players of Indian origin bringing pride to the countries they represent and this is clearly visible in the T20 World Cup. #MannKiBaat pic.twitter.com/Iu1Y2imsr2
— PMO India (@PMOIndia) February 22, 2026
Just days ago, 10-month-old Aalin Sherin Abraham from Kerala passed away. In the midst of that pain, her parents chose to donate her organs. Their decision has touched countless hearts and given hope to others. #MannKiBaat pic.twitter.com/nGeS2XhZp4
— PMO India (@PMOIndia) February 22, 2026
Tomorrow, 23rd of February, 'Rajaji Utsav' will be celebrated at Rashtrapati Bhavan. On this occasion, a statue of C. Rajagopalachari Ji will be unveiled. #MannKiBaat pic.twitter.com/tehikIxlX5
— PMO India (@PMOIndia) February 22, 2026
KYC is crucial for your bank account's safety. #MannKiBaat pic.twitter.com/Lb89EMywFW
— PMO India (@PMOIndia) February 22, 2026
It is gladdening to see farmers focusing not just on production but also on quality, value addition and new markets. #MannKiBaat pic.twitter.com/mP339dhYBc
— PMO India (@PMOIndia) February 22, 2026
In Kerala, the centuries-old Mamangam tradition, often called the Kerala Kumbh, has come alive again after nearly 250 years. #MannKiBaat pic.twitter.com/BrMUtTeOYe
— PMO India (@PMOIndia) February 22, 2026
Amma Jayalalithaa Ji lives on in the hearts of people across Tamil Nadu. #MannKiBaat pic.twitter.com/cy1Kj2iC9O
— PMO India (@PMOIndia) February 22, 2026
Don't let marksheet define you: PM @narendramodi's message to #ExamWarriors in #MannKiBaat pic.twitter.com/mbEKPH99Bf
— PMO India (@PMOIndia) February 22, 2026