Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಈಡೇರಿಸುವುದು” ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

“ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಈಡೇರಿಸುವುದು” ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


“ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಪೂರೈಸುವುದು” ಎಂಬ ವಿಷಯ ಕುರಿತ  ಬಜೆಟ್ ನಂತರದ 4ನೇ ಸರಣಿಯ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಶಿಕ್ಷಣ, ಕೌಶಲ್ಯ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರಗಳು ಈ ಗುರಿಗಳನ್ನು ಸಾಧಿಸುವ ಪ್ರಾಥಮಿಕ ಸಾಧನಗಳಾಗಿವೆ ಎಂದು ಒತ್ತಿ ಹೇಳಿದ ಮೋದಿ, ಬಜೆಟ್ ಘೋಷಣೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಚರ್ಚಿಸಬೇಕು ಎಂದು ತಜ್ಞರು ಮತ್ತು ನೀತಿ ನಿರೂಪಕರನ್ನು ಸ್ವಾಗತಿಸಿದರು. “ಸಾರ್ವಜನಿಕ ಆಕಾಂಕ್ಷೆಗಳನ್ನು ಪೂರೈಸುವುದು ಕೇವಲ ಒಂದು ವಿಷಯವಲ್ಲ; ಇದು ಈ ಬಜೆಟ್ ಮತ್ತು ಈ ಸರ್ಕಾರದ ನಿರ್ಣಯದ ಪ್ರಮುಖ ಉದ್ದೇಶವಾಗಿದೆ” ಎಂದು ಮೋದಿ ಹೇಳಿದರು.

ತಡೆಗಟ್ಟುವ ಮತ್ತು ಸಮಗ್ರ ಆರೋಗ್ಯದ ದೃಷ್ಟಿಕೋನ, ಆರೋಗ್ಯ ಮೂಲಸೌಕರ್ಯಗಳ ತ್ವರಿತ ಬಲವರ್ಧನೆಗೆ ಒತ್ತು ನೀಡಿದ ಪ್ರಧಾನಮಂತ್ರಿ, ಯೋಗ ಮತ್ತು ಆಯುರ್ವೇದದ ಜಾಗತಿಕ ಜನಪ್ರಿಯತೆ ಗಳಿಸಿದೆ. ನೂರಾರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಮತ್ತು ಆರೋಗ್ಯ ಮಂದಿರಗಳ ಮೂಲಕ, ಆರೋಗ್ಯ ಸೇವೆಗಳಿಗೆ ಪ್ರವೇಶ ವಿಸ್ತರಿಸಲಾಗಿದೆ. ಉದಯೋನ್ಮುಖ ‘ಕೇರ್ ಎಕಾನಮಿ’ ಮತ್ತು ಜಾಗತಿಕವಾಗಿ ಆರೈಕೆದಾರರಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯುವಕರನ್ನು ಸಬಲೀಕರಣಗೊಳಿಸಲು ಹೊಸ ತರಬೇತಿ ಮಾದರಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ತಜ್ಞರನ್ನು ಒತ್ತಾಯಿಸಿದರು. “ದೇಶದಲ್ಲಿ ತರಬೇತಿ ಪರಿಸರ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ, ಈ ನಿಟ್ಟಿನಲ್ಲಿ ಹೊಸ ತರಬೇತಿ ಮಾದರಿಗಳು ಮತ್ತು ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಲಹೆಗಳನ್ನು ನೀಡುವಂತೆ ಈ ವೆಬಿನಾರ್‌ನಲ್ಲಿ ಉಪಸ್ಥಿತರಿರುವ ಆರೋಗ್ಯ ವಲಯದ ತಜ್ಞರನ್ನು ನಾನು ಕೋರುತ್ತೇನೆ” ಎಂದು ಮೋದಿ ಹೇಳಿದರು.

ಆರೋಗ್ಯ ಸೇವೆಯಲ್ಲಿ ಡಿಜಿಟಲ್ ರೂಪಾಂತರ ಕುರಿತು ಮಾತನಾಡಿದ ಪ್ರಧಾನಮಂತ್ರಿ, ದೂರದ ಪ್ರದೇಶಗಳನ್ನು ತಲುಪುವಲ್ಲಿ ಟೆಲಿ ಮೆಡಿಸಿನ್ ಯಶಸ್ಸು ಕಂಡಿದೆ ಎಂದು ಅದರ ಬೆಳವಣಿಗೆ ಒಪ್ಪಿಕೊಂಡ ಪ್ರಧಾನಮಂತ್ರಿ, ಬಳಕೆದಾರರ ಅನುಭವವನ್ನು ಮತ್ತಷ್ಟು ಸರಳಗೊಳಿಸುವ ಮತ್ತು ಹೆಚ್ಚಿನ ಸಾರ್ವಜನಿಕ ಜಾಗೃತಿ ಮೂಡಿಸುವ ಅಗತ್ಯವಿದೆ. “ಟೆಲಿ-ಮೆಡಿಸಿನ್‌ನಲ್ಲಿ ಜಾಗೃತಿ ಮತ್ತು ಬಳಕೆಯ ಸುಲಭತೆ ಹೆಚ್ಚಿಸುವ ಅವಶ್ಯಕತೆಯಿದೆ ಎಂದು ನಾನು ನಂಬುತ್ತೇನೆ” ಎಂದು ಮೋದಿ ಪ್ರತಿಪಾದಿಸಿದರು.

ಭಾರತದ ಯುವಜನರ ವಿಕಸನಗೊಳ್ಳುತ್ತಿರುವ ಮನಸ್ಥಿತಿಯನ್ನು ದೇಶದ ದೊಡ್ಡ ಶಕ್ತಿ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. ಈ ಮನೋಭಾವಕ್ಕೆ ಹೊಂದಿಕೆಯಾಗುವ ಶಿಕ್ಷಣ ವ್ಯವಸ್ಥೆ ಅಗತ್ಯವಿದೆ. ದೇಶದಲ್ಲಿ ಶಿಕ್ಷಣವನ್ನು ಉದ್ಯೋಗ ಮತ್ತು ಉದ್ಯಮದೊಂದಿಗೆ ಜೋಡಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹೊಸ ಶಿಕ್ಷಣ ನೀತಿಯು ಮಾರುಕಟ್ಟೆ ಬೇಡಿಕೆಗಳು ಮತ್ತು ನೈಜ ಜಗತ್ತಿನ ಆರ್ಥಿಕತೆಯೊಂದಿಗೆ ವಿಶೇಷವಾಗಿ ಎಐ, ಆಯೋಮೇಷನ್ ಮತ್ತು ಡಿಜಿಟಲ್ ಆರ್ಥಿಕತೆಯಂತಹ ಕ್ಷೇತ್ರಗಳಲ್ಲಿ ಹೊಂದಿಕೆಯಾಗಬೇಕಾದ ಪಠ್ಯಕ್ರಮಕ್ಕೆ ಅಡಿಪಾಯ ಒದಗಿಸುತ್ತದೆ. “ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನೈಜ ಜಗತ್ತಿನ ಆರ್ಥಿಕತೆಯೊಂದಿಗೆ ಜೋಡಿಸುವ ಪ್ರಕ್ರಿಯೆಯನ್ನು ನಾವು ವೇಗಗೊಳಿಸಬೇಕಿದೆ” ಎಂದು ಶ್ರೀ ಮೋದಿ ಹೇಳಿದರು.

ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ನಡುವಿನ ಸಂಬಂಧವನ್ನು ಚರ್ಚಿಸಿದ  ಪ್ರಧಾನ ಮಂತ್ರಿ, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್(ಎವಿಜಿಸಿ) ವಲಯಕ್ಕೆ ಉತ್ತೇಜನ ನೀಡಲಾಗುತ್ತಿದೆ. ಭಾರತವು ನಾವೀನ್ಯತೆ-ಚಾಲಿತ ಆರ್ಥಿಕತೆಯತ್ತ ಸಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ನೈಜ ಜಗತ್ತಿನ ಮಾನ್ಯತೆ ಒದಗಿಸಲು ಶೈಕ್ಷಣಿಕ ಸಂಸ್ಥೆಗಳು ತಮ್ಮ ಕ್ಯಾಂಪಸ್‌ಗಳನ್ನು ಕೈಗಾರಿಕಾ ಸಹಯೋಗ ಮತ್ತು ಸಂಶೋಧನೆ-ಚಾಲಿತ ಕಲಿಕೆಯ ಕೇಂದ್ರಗಳಾಗಿ ಪರಿವರ್ತಿಸಬೇಕೆಂದು ಕರೆ ನೀಡಿದರು. “ಈ ವೆಬಿನಾರ್‌ನಲ್ಲಿ, ನಿಮ್ಮ ಕ್ಯಾಂಪಸ್‌ಗಳನ್ನು ಕೈಗಾರಿಕಾ ಸಹಯೋಗ ಮತ್ತು ಸಂಶೋಧನೆ-ಚಾಲಿತ ಕಲಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಬಗ್ಗೆ ಒಂದು ಚಿಂತನೆ ನಡೆಯಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ” ಎಂದರು.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(STEM) ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಸಂಖ್ಯೆಗೆ ಪ್ರಧಾನಮಂತ್ರಿ ಹೆಮ್ಮೆ ವ್ಯಕ್ತಪಡಿಸಿದರು. ಭವಿಷ್ಯದ ತಂತ್ರಜ್ಞಾನಗಳಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಯುವ ಸಂಶೋಧಕರು ಅಡೆತಡೆಗಳಿಲ್ಲದೆ ಹೊಸತನ ಮತ್ತು ಪ್ರಯೋಗ ಮಾಡಲು ಪ್ರೋತ್ಸಾಹಿಸುವ ದೃಢವಾದ ಸಂಶೋಧನಾ ಪರಿಸರ ವ್ಯವಸ್ಥೆಗೆ ಕರೆ ನೀಡಿದ ಶ್ರೀ ಮೋದಿ, “ಯುವ ಸಂಶೋಧಕರು ಹೊಸ ಆಲೋಚನೆಗಳನ್ನು ಪ್ರಯೋಗಿಸಲು ಮತ್ತು ಕೆಲಸ ಮಾಡಲು ಪೂರ್ಣ ಅವಕಾಶ ಪಡೆಯುವ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ನಾವು ರಚಿಸಬೇಕು” ಎಂದು ಒತ್ತು ನೀಡಿದರು.

ಕ್ರೀಡೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಆರೋಗ್ಯಕರ ಮತ್ತು ಶಿಸ್ತಿನ ಯುವ ಜನಸಂಖ್ಯೆಯು ರಾಷ್ಟ್ರೀಯ ಶಕ್ತಿಯ ಬೆನ್ನೆಲುಬಾಗಿದೆ. ‘ಖೇಲೋ ಇಂಡಿಯಾ’ದ ಪ್ರಭಾವ ಹೆಚ್ಚಾಗಿದೆ. ಸಣ್ಣ ಪಟ್ಟಣಗಳು ​​ಮತ್ತು ಪ್ರದೇಶಗಳಿಂದಲೂ ಪ್ರತಿಭೆಗಳನ್ನು ಗುರುತಿಸುವುದು, ಕ್ರೀಡಾ ಸಂಸ್ಥೆಗಳನ್ನು ವೃತ್ತಿಪರಗೊಳಿಸುವುದು ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಒಲಿಂಪಿಕ್ ಬಿಡ್‌ನಂತಹ ಮುಂಬರುವ ಕಾರ್ಯಕ್ರಮಗಳಿಗೆ ಸಿದ್ಧರಾಗಲು ಕ್ರೀಡಾಪಟುಗಳಿಗೆ ರಚನಾತ್ಮಕ ಆರ್ಥಿಕ ಬೆಂಬಲವನ್ನು ಸುಧಾರಿಸುವ ಅಗತ್ಯವಿದೆ. “ಇಂತಹ ಪರಿಸ್ಥಿತಿಯಲ್ಲಿ, ನಾವು ಇಂದು ಯುವ ಆಟಗಾರರನ್ನು ಗುರುತಿಸಬೇಕು ಮತ್ತು ಸಿದ್ಧಪಡಿಸಬೇಕು, ಆಗ ಮಾತ್ರ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತದ ಧ್ವಜ ಎತ್ತರಕ್ಕೆ ಹಾರುತ್ತದೆ” ಎಂದು  ಮೋದಿ ಹೇಳಿದರು.

ಉದ್ಯೋಗಗಳನ್ನು ಹೆಚ್ಚಿಸಲು ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಾಮರ್ಥ್ಯ ಹೆಚ್ಚಿಸಬೇಕಿದೆ. ಸಾಂಪ್ರದಾಯಿಕ ತಾಣಗಳನ್ನು ಮೀರಿ ಹೊಸ ತಾಣಗಳನ್ನು ಅಭಿವೃದ್ಧಿಪಡಿಸುವುದರಿಂದ ನಗರದ ಬ್ರ್ಯಾಂಡಿಂಗ್ ಮತ್ತು ಒಟ್ಟಾರೆ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಕೌಶಲ್ಯ, ಸಂಪರ್ಕ ಮತ್ತು ಸಮುದಾಯದ ಭಾಗವಹಿಸುವಿಕೆ ಒಳಗೊಂಡ ಸಮಗ್ರ ವಿಧಾನದತ್ತ ಗಮನ ಹರಿಸಬೇಕು ಎಂದು ಮೋದಿ ಪಾಲುದಾರರನ್ನು ಒತ್ತಾಯಿಸಿದರು. “ಈಗ ನಾವು ದೇಶದಲ್ಲಿ ಪ್ರವಾಸಿ ತಾಣಗಳನ್ನು ಹೊಸದಾಗಿ ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿದ್ದೇವೆ” ಎಂದು ಹೇಳಿದರು.

“ತರಬೇತಿ ಪಡೆದ ಮಾರ್ಗದರ್ಶಿಗಳು, ಆತಿಥ್ಯ ಕೌಶಲ್ಯಗಳು, ಡಿಜಿಟಲ್ ಸಂಪರ್ಕ ಮತ್ತು ಸಮುದಾಯದ ಭಾಗವಹಿಸುವಿಕೆ ನಮ್ಮ ಪ್ರವಾಸೋದ್ಯಮ ಕ್ಷೇತ್ರದ ಆಧಾರಸ್ತಂಭಗಳಾಗುತ್ತಿವೆ”. ಇವುಗಳ ಜೊತೆಗೆ, ಸ್ವಚ್ಛತೆ ಮತ್ತು ಸುಸ್ಥಿರ ಅಭ್ಯಾಸಗಳು ಅತ್ಯಗತ್ಯ. ಜಾಗತಿಕ ತಾಣವಾಗಿ ಭಾರತದ ಸ್ಥಾನಮಾನ ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುವಾಗ ಪ್ರವಾಸೋದ್ಯಮ ಮತ್ತು ಸಂಬಂಧಿತ ಕ್ಷೇತ್ರಗಳ ಕುರಿತು ನಿಮ್ಮ ಸಲಹೆಗಳು ಬಹಳ ಮಹತ್ವದ್ದಾಗಿರುತ್ತವೆ.

ಸಮಾರೋಪ ಭಾಷಣದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರೀಯ ಪ್ರಗತಿಯನ್ನು ವೇಗಗೊಳಿಸಲು ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಹಭಾಗಿತ್ವ ಮಹತ್ವಪೂರ್ಣವಾಗಿದೆ ಎಂದು ಪ್ರಧಾನ ಮಂತ್ರಿ ಪ್ರಸ್ತಾಪಿಸಿದರು, ಈ ಚರ್ಚೆಗಳು ಭವಿಷ್ಯಕ್ಕೆ ಸದೃಢವಾದ ಮಾರ್ಗಸೂಚಿ ಒದಗಿಸುತ್ತವೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಗಟ್ಟಿಗೊಳಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಇಂತಹ ಪ್ರಯತ್ನಗಳಿಂದ, ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯ ಮತ್ತಷ್ಟು ಬಲಗೊಳ್ಳುತ್ತದೆ” ಎಂದು ಪ್ರಧಾನಮಂತ್ರಿ ತಿಳಿಸಿದರು.

 

*****